ಶುಕ್ರವಾರ, ಫೆಬ್ರವರಿ 10, 2017

Namma Sinikatana

"ನೋಡಿ! ಪ್ರಧಾನಿ ಭಾಷಣ ಮಾಡಿದ ಮೂರು ಗಂಟೆಯೊಳಗೆ ನಿಮ್ಮ ದುಡ್ಡೆಲ್ಲ ಕೇವಲ ಪೇಪರ್ ಆಗಿ ಬೆಲೆ ಕಳೆದುಕೊಂಡುಬಿಟ್ಟಿತು!" ಎನ್ನುತ್ತಾನೆ ಸಂಜಯ್ ಝಾ. ಆ ದುಡ್ಡಿಗೆ ಡಿಸೆಂಬರ್ 31ರವರೆಗೂ ಮೌಲ್ಯವಿದೆ ಎಂಬ ಸತ್ಯವನ್ನು ಬೇಕೆಂದೇ ಮರೆಮಾಚುತ್ತಾನೆ.

ಎಟಿಎಂನಲ್ಲಿ ದುಡ್ಡು ತೆಗೆಯಲೆಂದು ಸರತಿಯಲ್ಲಿ ನಿಂತು ಕುಸಿದುಬಿದ್ದು ಸತ್ತರು - ಎಂಬ ಸುದ್ದಿಯನ್ನು ವ್ಯಾಪಕವಾಗಿ ಹರಡಲಾಗುತ್ತದೆ. "ಪತ್ರಿಕೆ ಹೇಳಿರುವ ಜಾಗದಲ್ಲಿ ನಮ್ಮ ಬ್ಯಾಂಕಿನ ಬ್ರಾಂಚ್ ಆಗಲೀ ಎಟಿಎಂ ಆಗಲೀ ಇಲ್ಲ" ಎಂದು ಬ್ಯಾಂಕ್ ಸ್ಪಷ್ಟೀಕರಣ ಕೊಡುತ್ತದೆ.

ಬ್ಯಾಂಕ್ ಮುಂದೆ ನಿಂತ ಕ್ಯೂನಲ್ಲಿದ್ದವರು ಸತ್ತರೆಂದು ಯಾರೋ ಹುಯಿಲೆಬ್ಬಿಸುತ್ತಾರೆ. ಇಲ್ಲ, ಅದೊಂದು ಸಹಜ ಸಾವಾಗಿತ್ತು; ಸತ್ತವರು ಬ್ಯಾಂಕ್ ಕ್ಯೂನಲ್ಲಿ ನಿಂತವರಲ್ಲ ಎಂಬ ಸುದ್ದಿ ಆಮೇಲೆ ಬರುತ್ತದೆ.

"ಹಹ್ಹ! ನಿನ್ನೆಯಷ್ಟೇ ಚಲಾವಣೆಗೆ ಬಂದ ನೋಟಿನ ಖೋಟಾನೋಟು ನಮ್ಮಲ್ಲಿ ಸಿಕ್ಕಿದೆ" ಎಂದೊಬ್ಬ ಹುಚ್ಚೆದ್ದು ಕುಣಿಯುತ್ತಾನೆ. ಅದು ಖೋಟಾನೋಟಲ್ಲ; ಕಿಡಿಗೇಡಿಗಳು ತೆಗೆದ ನೋಟಿನ ಕಲರ್ ಝೆರಾಕ್ಸ್ ಎಂದು ನಂತರ ಪತ್ತೆಯಾಗುತ್ತದೆ.

ಹೆಂಗಸೊಬ್ಬರು ತನ್ನ ಜೀವಮಾನದ ಉಳಿತಾಯವನ್ನೆಲ್ಲ ಸಾವಿರ ರುಪಾಯಿಯ ನೋಟಿಗೆ ಪರಿವರ್ತಿಸಿ ಎರಡು ನೋಟು ಹಿಡಿದು ಬ್ಯಾಂಕಿಗೆ ಬರುತ್ತಿದ್ದರು; ಅಷ್ಟರಲ್ಲಿ ಸಾವಿರ ರುಪಾಯಿಯ ನೋಟು ಬೆಲೆ ಕಳೆದುಕೊಂಡದ್ದು ಕೇಳಿ ಕುಸಿದು ಬಿದ್ದು ತೀರಿಕೊಂಡರು - ಎಂದು ಪತ್ರಿಕೆಯೊಂದು ಬರೆಯುತ್ತದೆ. ನಂತರ ಆ ಇಡೀ ಸುದ್ದಿಯನ್ನು ಕೃತಕವಾಗಿ ಸೃಷ್ಟಿಸಲಾಗಿತ್ತೆಂಬುದು ಗೊತ್ತಾಗುತ್ತದೆ.

ಕ್ಯಾನ್ಸರ್ ಪೀಡಿತ ತಾಯಿಗೆ ಔಷಧಿ ತರಲೆಂದು ದುಡ್ಡು ತೆಗೆಯಲು ಹೋದರೆ ಮಗನಿಗೆ, ಬ್ಯಾಂಕಲ್ಲಿ ಸಿಕ್ಕಿದ್ದು ಎರಡು ಸಾವಿರ ರುಪಾಯಿ; ಅದೂ 1 ರುಪಾಯಿ ನಾಣ್ಯಗಳ ರೂಪದಲ್ಲಿ - ಎನ್ನುತ್ತದೆ ಮತ್ತೊಂದು ಪತ್ರಿಕಾ ಸುದ್ದಿ. "ನಾವು ಯಾರಿಗೂ ನಾಣ್ಯಗಳಲ್ಲಿ ದುಡ್ಡು ಕೊಡುತ್ತ ಕೂತಿಲ್ಲ" ಎಂದು ನಂತರ ಬ್ಯಾಂಕ್ ಮ್ಯಾನೇಜರ್ ಹೇಳಿಕೆ ಕೊಡುತ್ತಾರೆ.

ನೋಟಿನ ಬಣ್ಣ ಬಿಡುತ್ತದೆ ಎಂಬುದನ್ನು ಪ್ರೂವ್ ಮಾಡಲು ಕೆಲವರು ಅದನ್ನು ಉಜ್ಜಿ, ಜಜ್ಜಿ, ವಾಷಿಂಗ್ ಮೆಷಿನಲ್ಲಿ ಹಾಕಿ, ಕೊತಕೊತ ನೀರಲ್ಲಿ ಕುದಿಸಿ ಏನೆಲ್ಲ ಸರ್ಕಸ್ ಮಾಡುತ್ತಿದ್ದಾರೆ. ಲಿಪ್ ಸ್ಟಿಕ್ ಮರೆತುಬಂದರೆ ನೋಟಿಗೆ ಮುತ್ತಿಕ್ಕಬಹುದು ಎಂದು ನಟೀಮಣಿಯೊಬ್ಬರು ಹೇಳಿಕೆ ಕೊಡುತ್ತಾರೆ.
.
ಸೂಕ್ಷ್ಮವಾಗಿ ಗಮನಿಸಿ. ನಮ್ಮಲ್ಲಿ ನಿಜಕ್ಕೂ ನಡೆಯಬೇಕಿದ್ದ ಚರ್ಚೆ ಯಾವುದು? ಪ್ರಧಾನಿಗಳ ನಡೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಇಂಪ್ಲಿಮೆಂಟ್ ಮಾಡುವುದು ಹೇಗೆ? ಕಪ್ಪುಹಣದ ಚಲಾವಣೆ ಆಗದೇ ಇರುವಂತೆ ತಡೆಯುವುದು ಹೇಗೆ? ಹೇಗೂ ಒಂದು ಹೆಜ್ಜೆ ಇಟ್ಟಿದ್ದೇವೆ; ಮುಂದೆ ಹೇಗೆ ನಡೆದರೆ ದೇಶಕ್ಕೆ ಒಳ್ಳೆಯದು? ಪ್ರಧಾನಿಗಳ ನಿರ್ಣಯವನ್ನು ದೇಶದ ಕಟ್ಟಕಡೆಯ ವ್ಯಕ್ತಿಗೆ ಸರಿಯಾದ ರೀತಿಯಲ್ಲಿ ತಲುಪಿಸುವುದು ಹೇಗೆ? ದೇಶದ ಉತ್ಪನ್ನ ಹೆಚ್ಚುವಂತೆ, ಕಪ್ಪುಹಣ ಮತ್ತು ಖೋಟಾನೋಟಿನ ಹಾವಳಿ ನಿಲ್ಲುವಂತೆ ನಾವೆಲ್ಲ ಏನು ಮಾಡಬಹುದು? - ಈ ವಿಷಯಗಳ ಸುತ್ತ ನಮ್ಮ ದೇಶದಲ್ಲಿ ಡಿಬೇಟ್ ಆಗಬೇಕಿತ್ತು. ರಾಜಕೀಯ ಪಕ್ಷಗಳೆಲ್ಲ ಇಂಥ ಉನ್ನತ ಚಿಂತನೆಗಳನ್ನು ಇಟ್ಟುಕೊಂಡು ಕಾರ್ಯಪ್ರವೃತ್ತವಾಗಬೇಕಿತ್ತು. ಆದರೆ ಈಗ ಆಗಿರುವುದೇನು? ದೇಶದ ಕಪ್ಪುಹಣದ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಚರ್ಚೆ ಮಾಡುತ್ತಿರುವವರು ದೇಶದ ಜನಸಾಮಾನ್ಯ ಜನ! ಕೆಲಸಕ್ಕೆ ಬಾರದ ವಿಷಯಗಳನ್ನು ಚರ್ಚಿಸುತ್ತ ಕಾಲಹರಣ ಮಾಡುತ್ತಿರುವುದು ಮಾತ್ರ ಪ್ರತಿದಿನ ನಾವು ಕಟ್ಟುವ ತೆರಿಗೆಯಿಂದ ಲಕ್ಷಾಂತರ ರುಪಾಯಿಗಳನ್ನು ಸಂಬಳ, ಭತ್ಯೆ ಎಂದು ಪಡೆಯುತ್ತ ಮಜಾ ಮಾಡುತ್ತಿರುವ ರಾಜಕಾರಣಿಗಳು ಮತ್ತು ಅವರನ್ನು ಸಾಕಿಕೊಂಡಿರುವ ನಾಲಾಯಕ್ ರಾಜಕೀಯ ಪಕ್ಷಗಳು!

"ಇನ್ನಷ್ಟು ಕಾಲಾವಕಾಶ ಕೊಡಬೇಕಿತ್ತು" ಎನ್ನುತ್ತಾರೆ ನಮ್ಮ ಮುಖ್ಯಮಂತ್ರಿಗಳು! ಇವರಿಗಿಂತ ಬೀದಿ ಬದಿ ಬೆಂಡೇಕಾಯಿ ಮಾರುವವನ ಜ್ಞಾನ ಸ್ವಲ್ಪ ಉತ್ತಮವಾಗಿರುತ್ತದೆ ಎಂದು ಹೇಳಬಹುದು. ಒಬ್ಬ ಮೋದಿಯನ್ನು ಕೆಳಗಿಳಿಸಲು; ವಿಫಲಗೊಳಿಸಲು ನಮ್ಮ ರಾಜಕಾರಣಿಗಳು ಅದೆಂಥಾ ಮಟ್ಟಕ್ಕೆ ಇಳಿದಿದ್ದಾರಲ್ಲಾ ಎಂದು ಯೋಚಿಸಿದರೆ ನಿಜಕ್ಕೂ ಹೇಸಿಗೆಯಾಗುತ್ತದೆ. ನಾವೇ ಕಳಿಸಿದ ಮಂದಿಯಾದ್ದರಿಂದ ಈ ಪ್ರಜಾಪ್ರಭುತ್ವವೆನ್ನುವುದು ನಮ್ಮದೇ - ಅಂದರೆ, ದೇಶದ ಜನರ ಮನಸ್ಥಿತಿಯ ಪ್ರತಿಬಿಂಬವಂತೆ. ನಿಜಕ್ಕೂ ನಮ್ಮ ಜನರ ಮನಸ್ಥಿತಿಗಳು ಇಷ್ಟು ಕೊಳಕಾಗಿ ಕಿಲುಬೆದ್ದು ಹೋಗಿದೆಯಾ?! ಪ್ರಜಾಪ್ರಭುತ್ವ ಎಂಬ ವ್ಯವಸ್ಥೆ ಇಷ್ಟು ಬೇಗ ಫೇಲ್ಯೂರ್ ಆಯಿತಾ??

By Rohith Chakratirtha

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ