ತನು ತಂಬಿಲ ಎಂದರೆ ಏನು ಅನ್ನುವುದನ್ನು ತಿಳಿಯೋಣ..
ಪರಶುರಾಮ ದೇವರು ಸಮುದ್ರರಾಜನಿಂದ ತುಳುನಾಡನ್ನು ಪಡೆದುಕೊಂಡಾಗ ಅದು ಉಪಯೋಗಕ್ಕೆ ಬಾರದ ಬರಡು ಭೂಮಿಯಾಗಿತ್ತು. ಉಪ್ಪಿನ ಕೋಟೆಯಂತೆ ಇದ್ದ ಭೂಮಿಯನ್ನು ಸಮೃದ್ಧ ಭೂಮಿಯನ್ನಾಗಿಸಿ ಕೊಡಲು ಪರಶುರಾಮ ನಾಗ ರಾಜನನ್ನು ಬೇಡಿಕೊಳ್ಳುತ್ತಾನೆ. ಪರಶುರಾಮನ ಮೊರೆಯನ್ನು ಕೇಳಿದ ನಾಗಗಳು ತಮ್ಮ ದೇಹವನ್ನು ಪಣಕ್ಕೆ ಇಟ್ಟು ಉಪ್ಪಿನ ಕೋಟೆಯನ್ನು ಮೆಟ್ಟಿ ಪಾತಾಳದಿಂದ ಸಿಹಿನೀರು ತರುತ್ತವೆ. ಅಡಿಯಲ್ಲಿದ್ದ ಮೆಕ್ಕಲು ಮಣ್ಣನ್ನು ಬುಡಮೇಲು ಮಾಡುತ್ತವೆ.
ತುಳುನಾಡನ್ನು ಕಟ್ಟುವ ಕಾಯಕವನ್ನು ತಪಸ್ಸಾಗಿ ಸ್ವೀಕರಿಸಿದ ನಾಗಗಳು ಉಪ್ಪಿನ ಮೇಲೆ ಹರಿದಾಡಿದಾಗ ದೇಹಕ್ಕೆ ಗಾಯವಾಗುತ್ತದೆ. ಹೀಗೆ ಗಾಯವಾದ ಹಾವುಗಳಿಗೆ ತುಳುವರು ಉರಿಯ ಉಪಶಮನಕ್ಕೆ ಗೆಂದಾಲಿ ಎಲೆನೀರಲ್ಲಿ ಅಭಿಷೇಕ ಮಾಡುತ್ತಾರೆ ಗಾಯಕ್ಕೆ ಹರಶಿಣ ಹಚ್ಚಿ ಅದನ್ನು ತಿಲಕವಿಟ್ಟು ಭಕ್ತಿಯಿಂದ ಆರತಿ ಮಾಡುತ್ತಾರೆ. ನಾಗನನ್ನು ತಮ್ಮ ಕುಲದೆವರಾಗಿ ಸ್ವೀಕರಿಸುತ್ತಾರೆ. ನಾಗನಿಗೆ ತುಳುವರು ಮಾಡಿದ ಆರೈಕೆ ಮುಂದೆ ಆಚರಣೆಯಾಗುತ್ತದೆ. ಗಾಯವನ್ನು ಉಲ್ಬಣಗೊಳಿಸುವ ಗೋಮಯ ಮತ್ತು ಬಾಳೆದಿಂಡು ಇಂದಿಗೂ ನಾಗ ಸೇವೆಯಲ್ಲಿ ನಿಷಿದ್ಧ.
ತುಳುನಾಡಿನ ಸೃಷ್ಟಿಕರ್ತ ಪರಶುರಾಮನೆ ಆದರೂ ಅದಕ್ಕೆ ಫಲವತ್ತತೆಯನ್ನು ತುಂಬಿದ್ದು ನಾಗಗಳು. ಹೀಗಾಗಿ ನಾವು ನಾಗಗಳಿಂದ ನಮ್ಮ ನಾಡನ್ನು ಪಡೆದು ಕೊಂಡವರಾಗಿದ್ದೇವೆ. ನಾಗ ನೆಲೆಯ ಭೂಮಿಯು ನಮ್ಮದ್ದು ಆಗಿದ್ದರಿಂದ ನಾಗರ ಹಾವು ನಮಗೆ ಕಣ್ಣಿಗೆ ಕಾಣುವ ದೇವರು ಅನ್ನುವ ಅಭಿಮಾನ. ವಿಶೇಷವಾಗಿ ತುಳುನಾಡಿನಲ್ಲಿ ಮುಕ್ಕೋಟಿ ದೇವತೆಗಳಿಂದ ಏನನ್ನು ಪಡೆಯಬಹುದೋ ಅದನ್ನು ನಾಗದೆವರನ್ ಪಡೆಯಬಹುದು ಅನ್ನುತ್ತವೆ ತುಳು ಜಾನಪದ ಕಥೆಗಳು. ಯಾಕೆಂದರೆ ನಾಗ ಸಂಪತ್ತು ಅನ್ನುವ ನಿಧಿಯ ಒಡೆಯ. ಉತ್ತಮವಾದ ಸ್ವಾಸ್ಥ್ಯವನ್ನು ನೀಡುವ ಆರೋಗ್ಯ ಪ್ರದಾಯಕ. ಸಂತಾನವನ್ನು ಕರುಣಿಸುವವ ಅಲ್ಲದೆ ಜಲ ಸಂಪತ್ತಿನ ಅಧಿಪತಿ. ಇಂತಹ ಮಹಿಮೆಯುಳ್ಳ ನಾಗದೇವರು ಪರಶುರಾಮ ಸೃಷ್ಟಿಯ, ಬೇಡಿದ್ದನ್ನು ನೀಡುವ ಕಾಮಧೇನು ಅನ್ನುವುದರಲ್ಲಿ ಎರಡು ಮಾತಿಲ್ಲ .
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ