ಭಾನುವಾರ, ಫೆಬ್ರವರಿ 4, 2018

*ಭಗವಾನ್*

*|| ಶ್ರೀಮನ್ಮೂಲರಾಮೋ ವಿಜಯತೇ ||*
*|| ಶ್ರೀಗುರುರಾಜೋ ವಿಜಯತೇ ||*

ಪರಮಾತ್ಮನ ಮಹಾವಿಭೂತಿಯನ್ನು *ಭಗವಾನ್* ಎಂಬ ಶಬ್ದದಿಂದ ಕರೆಯುತ್ತಾರೆ.

ಭಗವಾನ್ ಶಬ್ದದಲ್ಲಿ *ಭ* ಕಾರಕ್ಕೆ ಎಲ್ಲರನ್ನೂ ಪಾಲನ ಪೋಷಣ ಮಾಡುವವ ಎಂದರ್ಥ. *ಗ* ಕಾರಕ್ಕೆ ಸ್ಠಿತಿಕರ್ತಾ,ನಾಶಕರ್ತಾ,ಮೋಕ್ಷವನ್ನು ಕೊಡುವವ ಎಂದರ್ಥವಿದೆ.

*ಐಶ್ವರ್ಯಸ್ಯ ಸಮಗ್ರಸ್ಯ ಧರ್ಮಸ್ಯ ಯಶಸಃ ಶ್ರೀಯಃ*
*ಜ್ಞಾನ ವೈರಾಗ್ಯಯೋಶ್ಚೈವ ಷಣ್ಣಾಂಭಗ ಇತೀರಣಾ |*
ಪೂರ್ಣವಾದ ಐಶ್ವರ್ಯ,ಧರ್ಮ,ಯಶಸ್ಸು,ಶ್ರೀ,ಜ್ಞಾನ,ವೈರಾಗ್ಯ ಈ ಆರರ ಗಣಕ್ಕೆ *ಭಗ* ಎಂದು ಹೆಸರು.
*ವಸತಿ ಅಸ್ಮಿನ್ ಸರ್ವಂ* ಅಥವಾ *ವಸತಿ ಸರ್ವೇಷು* ಅಂದರೆ ಈ ಪರಮಾತ್ಮನು ಸರ್ವರಲ್ಲಿಯೂ ಸರ್ವತ್ರಾಪಿ ವಾಸಿಸಿದ್ದಾನೆ.ಸರ್ವವೂ ಅವನನ್ನು ಆಧರಿಸಿಕೊಂಡಿದೆ.(ಸರ್ವವೂ ಅವನ ಅಧಿನ) ಎಂದೂ  *ವ* ಶಬ್ವವು ತಿಳಿಸುತ್ತದೆ.ಹೀಗೆ ಭಗವತ್ ಶಬ್ದವು ಸರ್ವ ಕರ್ತನೂ ಜ್ಞಾನಾನಂದಾದಿಷಡ್ಗುಣೈಶ್ವರ್ಯ ಸಂಪನ್ನನೂ ಸರ್ವತ್ರ ವ್ಯಾಪ್ತನೂ ಆದ ಆ ಪರಮಾತ್ಮನನ್ನು ಬೋಧಿಸುತ್ತದೆ.
ಪರಬ್ರಹ್ಮ ಬೋಧಕವಾದ ಈ ಭಗವಾನ್ ಶಬ್ದವು ವಾಸುದೇವನ ಹೊರತು ಬೇರಾರನ್ನೂ ಬೋಧಿಸಲಾರದು.ಪೂಜ್ಯವಸ್ತುವನ್ನು ಹೇಳುವ ಪರಿಭಾಷೆಯುಳ್ಳ ಈ  ಶಬ್ದವು ಮುಖ್ಯವಾಗಿ ಭಗವದ್ವಾಚಕ. ಬೇರೆಡೆ ಅವನ ಭಕ್ತಾದಿಗಳಲ್ಲಿ ಅವನ ಭೃತ್ಯರಾದ ದೇವತಾದಿಗಳಲ್ಲಿಯೂ ಪ್ರಯೋಗಿಸಿದರೂ ಅದು ಗೌಣ.ಕೇವಲ ಪೂಜ್ಯರು ದೊಡ್ಡವರು ಎಂದು ಮಾತ್ರ ಅರ್ಥ ಕೊಡುವದು. ಇತರತ್ರ ಇದು ಔಪಚಾರಿಕ ಎಂದು ತಿಳಿಯಬೇಕು.ನಿಜವಾದ *ಭಗವಾನ್*ಎಂದರೆ
*ಉತ್ಪತ್ತಿಂ ಪ್ರಳಯಂ ಚೈವ ಭೂತಾನಾಮಾಗತಿಂ ತಥಾ |*
*ವೇತ್ತಿ ವಿದ್ಯಾಮವಿದ್ಯಾಂ ಚ ಸ ವಾಚ್ಯೋ ಭಗವಾನಿತಿ ||*
ಜಗತ್ತಿನ ಸೃಷ್ಟಿ ಸಂಹಾರ,ಎಲ್ಲ ಪ್ರಾಣಿಗಳ ಜನ್ಮ ಜನ್ಮಾಂತರಗಳ ಆಗ ತಿಸ್ಠಿತಿಗತಿಗಳನ್ನೂ ವಿದ್ಯಾ ಅವಿದ್ಯಾಗಳನ್ನು ತಿಳಿದು ಸರ್ವನಿಯಮನ ಮಾಡುವವನೇ *ಭಗವಾನ್* ಎಂದು ಕರೆಯಲ್ಪಡುತ್ತಾನೆ.ಪೂರ್ಣಜ್ಞಾನ,ಪೂರ್ಣೈಶ್ವರ್ಯ,ಪೂರ್ಣಶಕ್ತಿ ಪೂರ್ಣತೇಜಸ್ಸು,ದೋಷರಾಹಿತ್ಯ ಮುಂತಾದ ಗುಣಗಳು ಭಗವಾನ್ ಶಬ್ದದಿಂದ ಹೇಳಲ್ಪಡುತ್ತವೆ.ಈ ಎಲ್ಲ ಗುಣಗಳೂ ಸರ್ವಭೂತವಾಚಕನಾದ ಆ ವಾಸುದೇವನ ಹೊರತು ಬೇರೊಬ್ಬರಲ್ಲಿ ಬರುವುದು ಸಾಧ್ಯವಿಲ್ಲದ್ದರಿಂದ ಅವನೇ ನಿಜವಾದ *ಭಗವಾನ್* ಆಗಿರುತ್ತಾನೆ.
*ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ |*
*ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ||*
- *_ಈಶಾವಾಸ್ಯೋಪನಿಷದ್_*

ಹಿಂದೆ ಖಾಂಡಿಕ್ಯ ಜನಕನು ಪ್ರಶ್ನೆ ಮಾಡಿದಾಗ ಕೇಶಿಧ್ವಜನು ವಾಸುದೇವ ಶಬ್ದದ ಅರ್ಥವನ್ನು ಈ ರೀತಿಯಾಗಿ ತಿಳಿಸಿದ್ದ :

*ಭೂತೇಷುವ ಸತೇ ಸೋಂತರ್ವಸಂತ್ಯತ್ರ ಚ ತಾನಿ ಯತ್ |*
*ಧಾತಾ ವಿಧಾತಾ ಜಗತಾಂ ವಾಸುದೇವ ಸ್ತತಃ ಪ್ರಭುಃ ||*
ಯಾವನು ಸರ್ವಪ್ರಾಣಿಗಳಲ್ಲಿಯೂ ವಾಸವಾಗಿದ್ದಾನೋ,ಯಾವನಲ್ಲಿ ಎಲ್ಲ ಪ್ರಾಣಿಗಳೂ ಇರುತ್ತವೆಯೋ(ವಾಸವಾಗಿವೆಯೋ),ಯಾವನು ಈ ಜಗತ್ತಿನ ಸೃಷ್ಟಿ ಸ್ಥಿತ್ಯಾದಿ ಕರ್ತನಾಗಿದ್ದಾನೋ,ಯಾವನು ಸರ್ವನಿಯಾಮಕನು ಆಗಿದ್ದಾನೋ ಅವನೇ ವಾಸುದೇವ.ಅವನು ಸರ್ವ ಪ್ರಕೃತಿ ವಿಕಾರ ಪ್ರಾಕೃತಿಕ ಗುಣದೋಷಗಳಿಂದ ಅತ್ಯಂತ ದೂರನಾಗಿದ್ದಾನೆ.
ಯಾವ ಆವರಣ ನಿಯಮ ನಿಬಂಧನೆಗಳಿಗೂ ಅವನು ಒಳಗಾಗುವುದಿಲ್ಲ.ಸಕಲ ಕಲ್ಯಾಣ ಗುಣಪರಿಪೂರ್ಣನಾದ ಅವನು ತನ್ನ ಶಕ್ತಿಯ ಲವಲೇಶದಿಂದಲೇ ಜಗದಂಡ ಮಂಡಲವನ್ನೇಲ್ಲ ಸರ್ವತ್ರ ವ್ಯಾಪಿಸಿಕೊಂಡು ತನ್ನ ಇಚ್ಛೆಯಿಂದಲೇ ಅನೇಕ ರೂಪ ದೇಹಾದಿಗಳನ್ನು ಸ್ವೀಕರಿಸಿ ಪ್ರಪಂಚದಲ್ಲಿ ಕಲ್ಯಾಣವನ್ನುಂಟು ಮಾಡುತ್ತಾನೆ.ಇಂಥ ಸರ್ವಗುಣ ಪರಿಪೂರ್ಣನೂ ಪರಮಾತ್ಮನೂ ವ್ಯಕ್ತಾವ್ಯಕ್ತಸ್ವರೂಪನೂ ಸರ್ವೇಶ್ವರನೂ,ಸರ್ವಜ್ಞಾನಿಯೂ,ಸರ್ವಸಮರ್ಥನೂ ಆದ ಆ ಪರಮೇಶ್ವರನನ್ನೂ ಯಥಾಶಕ್ತಿ ತಿಳಿಸಿಕೊಡುವ ವಿದ್ಯೆಯೇ *ಪರವಿದ್ಯೆ*.ಉಳಿದವೆಲ್ಲವೂ ಅಪರವಿದ್ಯೆ.

*|| ನಾಹಂ ಕರ್ತಾ ಹರಿಃ ಕರ್ತಾ ||*
*|| ಗುರವಂತರ್ಗತ ಶ್ರೀಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು ||*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ