ಭಾನುವಾರ, ಫೆಬ್ರವರಿ 4, 2018

ಹೊಯ್ಸಳರಕಾಲದಲ್ಲಿ ಬ್ರಾಹ್ಮಣರ ವರಮಾನ ಯಾವರೀತಿ ಇತ್ತು?

ಹೊಯ್ಸಳರಕಾಲದಲ್ಲಿ ಬ್ರಾಹ್ಮಣರ ವರಮಾನ ಯಾವರೀತಿ ಇತ್ತು? ಇವತ್ತಿನ ದಿನದಲ್ಲಿ ಲೆಕ್ಕ ಹಾಕಿದರೆ ಅವರಿಗೆ ಬರುತ್ತಿದ್ದ ಸಂಭಾವನೆ ಎಷ್ಟು ಇತ್ತು ? ಅಷ್ಟೇ ವರಮಾನ ಬಂದರೆ ಇಂದು ಅವತ್ತಿನಂತೆ ನೆಮ್ಮದಿಯ ಜೀವನ ಮಾಡಲು ಸಾಧ್ಯವಾ?
ಈ ಮೇಲಿನ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಕಷ್ಟವೇನಲ್ಲ. ಈ ವಿಷಯಗಳು ನಮ್ಮ ಗಮನಕ್ಕೆ ಬರದಂತೆ ಮಾಡಲಾಗಿದೆ ಅಷ್ಟೇ. ಮಂಡ್ಯ ಜಿಲ್ಲೆಯ ಪ್ರಸಿದ್ಧ ಹೊಯ್ಸಳರ ದೇವಸ್ಥಾನ ಇರುವುದು "ಸೋಮನಾಥಪುರ" ದಲ್ಲಿ. ಇಲ್ಲಿ ಹೊಯ್ಸಳ ದೊರೆಗಳು ಈ ದೇವಸ್ಥಾನದ ಬಗ್ಗೆ ಸಂಪೂರ್ಣ ವಿವರ ಶಾಸನದಲ್ಲಿ ದಾಖಲಿಸಿದ್ದಾರೆ. ಇದರಲ್ಲಿ ಬ್ರಾಹ್ಮಣರ ಬಗ್ಗೆ ಹೇಳಿರುವ ವಿಷಯ ಬಹಳಷ್ಟು ಸ್ವಾರಸ್ಯಕರವಾಗಿ ಇದೆ. ಇದರಲ್ಲಿ ದೇವಸ್ಥಾನಕ್ಕೆ ಬರಬೇಕಾದ ವಾರ್ಷಿಕ ವರಮಾನ (ದೇವಸ್ಥಾನಕ್ಕೆ ಕೊಟ್ಟ ಭೂಮಿ ಉಪಯೋಗಿಸುವ ರೈತರು ಸಂದಾಯ ಮಾಡುತ್ತಿದ್ದರು). ಈ ವರಮಾನದಿಂದ ಎಲ್ಲಾ ದೇವಸ್ಥಾನದ ಪರಿಚಾರಕರಿಗೂ ಕೊಡಬೇಕಾದ ವರಮಾನದ ಪಟ್ಟಿ ಮಾಡಿ ಶಾಸನದಲ್ಲಿ ದಾಖಲಿಸಿದ್ದಾರೆ. ಇದರಿಂದ ಅಲ್ಲಿದ್ದ ಬ್ರಾಹ್ಮಣರಿಗೆ, ತಮ್ಮ ಜೀವನವನ್ನು ನಡೆಸುವುದಕ್ಕೆ ಎಷ್ಟು ವರಮಾನ ಬರುತ್ತಿತ್ತು ಅನ್ನುವುದು ತಿಳಿಯುತ್ತದೆ. ಇದಲ್ಲದೆ ಬ್ರಾಹ್ಮಣರು ಮತ್ತು ಉಳಿದ ಕೆಲಸದವರಿಗೂ ವರಮಾನದಲ್ಲಿ ಬಹಳ ಅಂತರ ಇತ್ತೇ? ಬ್ರಾಹ್ಮಣರು ಬೇರೆ ಯವರನ್ನು ತುಳಿಯುತ್ತಿದ್ದರು ಅನ್ನುವ ಆಪಾದನೆಯನ್ನು ತೂಕ ಮಾಡಿ ನೋಡಬಹುದು.
೧) ಸೋಮನಾಥಪುರದಲ್ಲಿ ಶೈವ ಮತ್ತು ವೈಷ್ಣವ ಪಂಥ ಎರಡಕ್ಕೂ ಅವಕಾಶ ಮಾಡಿಕೊಡಲಾಗಿತ್ತು. ಈ ಎರಡೂ ದೇವಸ್ಥಾನಗಳಿಗೆ ಬ್ರಾಹ್ಮಣರನ್ನು ನೇಮಿಸಿ ಅವರಿಗೆ ಬೇರೆ ಬೇರೆಯ ಅಗ್ರಹಾರಾ ಕೂಡ ಮಾಡಿಕೊಡಲಾಗಿತ್ತು.
೨) ವೈಷ್ಣವ ಸಮುದಾಯದ ದೇವಸ್ಥಾನಗಳಿಗೆ ಮತ್ತು ಅದರಲ್ಲಿ ಕೆಲಸ ಮಾಡುವ ಬ್ರಾಹ್ಮಣರಿಗೆ ಶೈವ ಪಂಥದ ಬ್ರಾಹ್ಮಣರಿಗಿಂತ ಹೆಚ್ಚು ವರಮಾನ ಕೊಡಲಾಗುತ್ತಿತ್ತು. ಇದು ಹೊಯ್ಸಳ ರಾಜರ ವೈಷ್ಣವ ಪಂಥದ ಕಡೆ ವಾಲುವಿಕೆಯನ್ನ ತೋರಿಸುತ್ತದೆ. ಬ್ರಾಹ್ಮಣರಲ್ಲೇ ಇವತ್ತಿನ ಒಳಜಗಳ ಇರಲು ಈ ಬೇಧ ಮಾಡಿದ್ದೆ ಕಾರಣ ಇರಬಹುದು. ಈ ವೈಷ್ಣವ ದೇವಸ್ಥಾನಕ್ಕೆ ಹೆಚ್ಚಿನ ಅನುದಾನ ಕೊಡಲು, ಶಿವ (ನಿರ್ಮೋಹಿ), ವಿಷ್ಣು ಅಲಂಕಾರಪ್ರಿಯ ಅನ್ನುವುದೂ ಕಾರಣ ಇರಬಹುದು. ವಿಷ್ಣು ದೇವಸ್ಥಾನದಲ್ಲಿ ಅಲಂಕಾರ ಸಾಮಗ್ರಿಗಳು ಹೆಚ್ಚು ಬೇಕಾಗಿರುವುದರಿಂದ ಅಥವಾ ಕೆಲಸ ಜಾಸ್ತಿ (ಉತ್ಸವ, ಹರಿಕಥೆ ಈ ರೀತಿ) ಅಂತ ಇರಬಹುದು. ಅಥವಾ ವೈಷ್ಣವ ಧರ್ಮ ಪ್ರಚಾರ ಮಾಡಲು ಅವರಿಗೆ ಪ್ರೋತ್ಸಹಿಸಲು ಇರಬಹುದು. ಕನ್ನಡದ ದೊರೆಗಳಿಗೆ ಶಿವ ಪಂಥದ ತಮಿಳು ರಾಜರಿಂದ ಅಭದ್ರತೆ ಇತ್ತು. ಚಾಲುಕ್ಯರು ಮತ್ತು ಹೊಯ್ಸಳರು - ಪಲ್ಲವರು, ಚೋಳರು , ಚೇರರು ಈ ರೀತಿ ಶಿವ ಪಂಥದ ದೊರೆಗಳೊಂದಿಗೆ ಕಾದಿದ್ದೆ ಹೆಚ್ಚು. ಈ ದಕ್ಷಿಣದ ದೊರೆಗಳಿಂದ ಅಂತರ ಕಾಯ್ದುಕೊಳ್ಳಲು ಕನ್ನಡದ ದೊರೆಗಳು ವೈಷ್ಣವ ಪಂಥವನ್ನು ಪ್ರೋತ್ಸಹಿಸಿ, ಸಾರ್ವಜನಿಕರನ್ನೂ ವೈಷ್ಣವ ಪಂಥಕ್ಕೆ ಬರುವಂತೆ ಮನವೊಲಿಸಲು ಬಹಳಷ್ಟು ಪ್ರಯತ್ನಿಸಿದ್ದಾರೆ. ಈ ರಾಜಕೀಯ ಕಾರಣಗಳಿಂದ, ವೈಷ್ಣವರಿಗೆ ಸಂಭಾವನೆ ಹೆಚ್ಚು.
೩) ದೇವಸ್ಥಾನದ ಬ್ರಾಹ್ಮಣ ಅರ್ಚಕರಲ್ಲೇ ಬೇರೆ ಬೇರೆ ಸ್ಥರದ ಜನ ಇದ್ದರು. ಅವರಿಗೆ ಬೇರೆ ಬೇರೆ ಆದಾಯದ ಮಿತಿ ಹಾಕಲಾಗಿತ್ತು.
ಈ ಎಲ್ಲಾ ಅಂಶಗಳನ್ನು ಗಣನೆಗೆ ತಂದುಕೊಂಡು, ಒಂದು "ಸರಾಸರಿ" ಮಾಡಿದರೆ, ಒಬ್ಬ ಬ್ರಾಹ್ಮಣನಿಗೆ ತನ್ನ ಉದರ ಪೋಷಣೆ ಮಾಡಲು ಈ ಕೆಳಗಿನ ಸೌಕರ್ಯ ಸಿಗುತ್ತಿತ್ತು. ಇದನ್ನ ನೀವು ಬೇರೆ ಬೇರೆ ಸ್ತರದ ಜನರಿಗೆ ಹೀಗೆ ಲೆಕ್ಕಾಚಾರ ಹಾಕಬಹುದು
ಅ) ಇರಲು ಬಾಡಿಗೆ ಸುಂಕ, ಯಾವುದೂ ಇಲ್ಲದ ಅಗ್ರಹಾರದ ಮನೆ. ಮನೆ ರಿಪೇರಿ ಮಾತ್ರ ಜವಾಬ್ಧಾರಿ. ಮನೆ ದೇವಸ್ಥಾನದ ಸುಪರ್ಧಿಗೆ ಸೇರುತ್ತದೆ. ಬಾಡಿಗೆ ಹಣ ಅಂದರೆ ಇವತ್ತಿನ ಕಾಲದ ಲೆಕ್ಕ ೫೦೦೦- ಮಾಹೆಗೆ - ವಾರ್ಷಿಕ - ೬೦,೦೦೦ ರೂ
ಆ) ಅಕ್ಕಿ, ಬೇಳೆ, ಮೆಣಸಿನಕಾಯಿ, ತೆಂಗಿನ ಕಾಯಿ, ಎಣ್ಣೆ, ಹಾಲು, ತುಪ್ಪ - ದೇವಸ್ಥಾನದ ಉಗ್ರಾಣದಿಂದ ಕೊಡಲ್ಪಡುತ್ತಿತ್ತು- ಇದರ ಅಂದಾಜು ಮೊತ್ತ ವಾರ್ಷಿಕ ಸುಮಾರು - ೬೦,೦೦೦ ರೂ
ಇ) ಇನ್ನು ವರಮಾನ ಅಂತ ೧೨ ಗದ್ಯಾಣ (ಚಿನ್ನದ ನಾಣ್ಯ. ಹೊಯ್ಸಲರಕಾಲದಲ್ಲಿ ಇದಕ್ಕೆ ಗದ್ಯಾಣ ಅನ್ನುತ್ತಿದ್ದರು, ವಿಜಯನಗರ ಕಾಲದಲ್ಲಿ ಇದನ್ನು ವರಾಹ ಅನ್ನುತ್ತಿದ್ದರು). ತಿಂಗಳಿಗೆ ಒಂದರಂತೆ . ಒಂದು ಗದ್ಯಾಣ ಸುಮಾರು ೪ಗ್ರಾ ತೂಕ ಇರುತ್ತಿತ್ತು. ವರ್ಷಕ್ಕೆ ಸುಮಾರು ೫೦ಗ್ರಾಮ್ ಚಿನ್ನದ ಸಂಬಳ ಬರುತ್ತಿತ್ತು - ಇದರ ಬೆಲೆ - ೧,೫೦,೦೦೦ ರೂ (ಗ್ರಾಮ್ - ೩೦೦೦ರೂ  ಅಂತ ಲೆಕ್ಕ ಹಾಕಿದಾಗ)
ಇದಿಷ್ಟು ಗ್ಯಾರಂಟೀ ವರಮಾನ. ಇದಲ್ಲದೆ ಬ್ರಾಹ್ಮಣರ ಪಾಂಡಿತ್ಯದ ಮೇಲೆ ಅವರಿಗೆ ಭೂಮಿ ಕೊಡಲಾಗುತ್ತಿತ್ತು. ಇದರ ವರಮಾನ "ಬೋನಸ್".
ಈ ) ನಿವೃತ್ತಿ ಭತ್ಯೆ  ಯಾರಿಗೂ ಇರುತ್ತಿರಲಿಲ್ಲ. ಕೊಡುವ ಸವಲತ್ತು ಇಡೀ ಕುಟುಂಬವನ್ನು ಪರಿಗಣಿಸಿ  ಕೊಡಲಾಗುತ್ತಿತ್ತು (ವಟುವಿಗೆ ಕೂಡ ದೇವಸ್ಥಾನದ ಕಾರ್ಯದಲ್ಲಿ ತೊಡಗಿದಾಗ ಹಣ ಕೊಡಲಾಗುತ್ತಿತ್ತು, ಆದರೆ ಬೇರೆ ಸೌಕರ್ಯ ಇರುತ್ತಿರಲಿಲ್ಲ. ಗುರುಗಳ ಮನೆಯೇ ಆಶ್ರಯ ತಾಣ. ವಟುವಿಗೆ ಬರುತ್ತಿದ್ದ ಹಣದಲ್ಲಿ ವಿದ್ಯಾಭ್ಯಾಸದ ಗುರುಕಾಣಿಕೆ ಸಲ್ಲಿಸಬಹುದಾಗಿತ್ತು. ಇದು ಇವತ್ತಿನ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸರಕಾರ ಕೊಡುವ ಶಿಷ್ಯ ವೇತನದಂತೆ). ಗೃಹಸ್ಥರು ವಯೋವೃದ್ಧರನ್ನು ಸಾಕುವ ಹೊಣೆಗಾರಿಕೆ ಇರುತ್ತಿದ್ದರಿಂದ, ವಯೋವೃದ್ಧರಿಗೆ ಪ್ರತ್ಯೇಕ ನಿವೃತ್ತಿ ವೇತನ ಅಂತ ಇರುತ್ತಿರಲಿಲ್ಲ. ಕೊಟ್ಟರೂ, ಅಶಕ್ತತೆಯಿಂದ ಬಳಸಲು ಸಮಸ್ಯೆ ಇರುವುದರಿಂದ ಇದನ್ನು ಈ ರೀತಿ ಮಾಡಿರಬಹುದು.
ಒಬ್ಬ ಬ್ರಾಹ್ಮಣನ ಗ್ಯಾರಂಟೀ ವರಮಾನ - ವಾರ್ಷಿಕ ೨,೭೦,೦೦೦ ರೂ (ಇಂದಿನ ಬೆಲೆಯಲ್ಲಿ). ಇದು ಸೋಮನಾಥಪುರದಂಥ ಒಂದು ಪಟ್ಟಣದಲ್ಲಿ. ಇವರಿಗೆ ಮಕ್ಕಳ ಶಿಕ್ಷಣ ಮತ್ತು ಇಂದಿನ ಆಧುನೀಕತೆಯ ಖರ್ಚು ಇರಲಿಲ್ಲ. ಇವತ್ತಿನ ಆಧುನೀಕತೆಯ ಖರ್ಚಿನ ಬಾಬತ್ತು ಅಂತ ಮೇಲಿನ ವರಮಾನವನ್ನು ದುಪ್ಪಟ್ಟು ಮಾಡಿದರೆ....ಅವರ ವರಮಾನ ಸುಮಾರು ೫,೦೦,೦೦೦ ರೂ ಆಗುತ್ತದೆ.
ಇಷ್ಟು ವರಮಾನ ಇಂದು ಕರ್ನಾಟಕದ ಪಟ್ಟಣ ಪ್ರದೇಶಗಳಲ್ಲಿ ಪಡೆದರೆ (ಸುಮಾರು ೪೦,೦೦೦ ರೂ ತಿಂಗಳಿಗೆ ) ಹಿಂದಿನ ಕಾಲದ ಪೂರ್ವಿಕರಂತೆ ನೆಮ್ಮದಿಯ ಜೀವನ ಬ್ರಾಹ್ಮಣರು ಮಾಡಬಹುದು. ಇದು ತೆರಿಗೆ ಮುಕ್ತಿಯ ಹಣ. 35% ತೆರಿಗೆ ಸೇರಿದರೆ, ವರಮಾನ ತಿಂಗಳಿಗೆ ಸುಮಾರು ೫೩,೦೦೦ ರೂ ಆಗುತ್ತದೆ.
ಬರೀ ಬ್ರಾಹ್ಮಣರು ಮಾತ್ರ ಅಲ್ಲ, ದೇವಸ್ಥಾನದ ಕಾವಲುಗಾರನಿಗೂ ಇದೆ ರೀತಿ ವರಮಾನ ಬರುತಿತ್ತು. ಆದ್ದರಿಂದ, ಇಷ್ಟು ವರಮಾನ ಒಬ್ಬ ಬ್ರಾಹ್ಮಣ "ಉಪಾಧ್ಯಾಯನಿಗೂ" ಬರುತ್ತಿತ್ತು ಎಂದು ಅಂದಾಜಿಸಬಹುದು. ಇಲ್ಲದಿದ್ದರೆ ಯಾರೂ ಉಪಾಧ್ಯಾಯ ವೃತ್ತಿ ಕೈಗೊಳುತ್ತಿರಲಿಲ್ಲ.  ಆದ್ದರಿಂದ ಅವರು ನಿರ್ವಂಚನೆಯಿಂದ  "ಉತ್ತಮ ಗುಣಮಟ್ಟದ" ಶಿಕ್ಷಣವನ್ನು ಧಾರೆ ಎರೆಯುತ್ತಿದ್ದರು. ಇವತ್ತು??
ಕರ್ನಾಟಕ ಸುಭಿಕ್ಷ ರಾಜ್ಯ. ಇರುವ ಸಂಪತ್ತು ಎಲ್ಲಾ ಜನರಿಗೂ ಸರಿಯಾಗಿ ವಿತರಣೆ ನಡೆಯಬೇಕಷ್ಟೆ .  ಇದು ಹೊಯ್ಸಳರ ಕಾಲಾದಲ್ಲಿ ನಡೆಯುತ್ತಿತ್ತು ಅನ್ನುವುದು ಮನದಟ್ಟಾಗುತ್ತ್ತದೆ. ಇದೆಲ್ಲ ನೋಡಿದರೆ, ಪ್ರಜಾಪ್ರಭುತ್ವದಿಂದ ಮುಂಚೆ ಇದ್ದಂಥ ವ್ಯವಸ್ಥೆ ಹಾಳಾಗಿ ಜನರ ಜೀವನ ನೀಚವಾಗಿದೆಯಾ ಅನ್ನುವ ಪ್ರಶ್ನೆ ಉದ್ಭವಿಸುತ್ತದೆ.
ಹೊಯ್ಸಳರರ ಆದಾಯದ ಮಿತಿಯಲ್ಲಿ  ಒಂದು "ಸೂತ್ರ" ಇದೆ. ಈ ಸೂತ್ರವೇ ಒಂದು "ಆರ್ಥಿಕ ನೀತಿ" . ಈ "ಆರ್ಥಿಕ ನೀತಿಯನ್ನ" ವಿದೇಶಿದಲ್ಲಿ ಓದುಬಂದವರು ಎಂದು ಮಣೆ ಹಾಕಿ ಅವರಿಂದ  ತಿರುಚಿ, ಬದಲಾಯಿಸಿರುವುದೇ ಜನರ ಸಮಸ್ಯೆಗೆ ಮೂಲ ಕಾರಣ.
ಹೊಯ್ಸಳರ ಕಾಲದಲ್ಲಿ, ವಸತಿಗೆ ಎಷ್ಟು ಖರ್ಚಾಗುತ್ತಿತ್ತೋ, ಅಷ್ಟೇ  ದವಸ-ಧಾನ್ಯಕ್ಕೆ, ಖರ್ಚು. ಉಳಿಕೆ ಖರ್ಚಿಗೆ ಗದ್ಯಾಣದ ಆದಾಯ (ಇದರ ಇರಡೂವರೆ ಪಟ್ಟು ಇತ್ತು). ಈ ಎರಡೂವರೆ ಪಟ್ಟಿನಲ್ಲಿ ಹಣ ಖರ್ಚು ಮಾಡಿದರೇ "ಐಭೋಗ", ಉಳಿಸಿದರೆ "ಐಶ್ವರ್ಯ".  ಈಗ ವಸತಿ, ದವಸ-ಧಾನ್ಯಕ್ಕೆ,  ಶಿಕ್ಷಣ ಮತ್ತು ಅರೋಗ್ಯ ಸೇರ್ಪಡೆ ಯಾಗಿವೆ (ಈ ನಾಲ್ಕೂ ಮೂಲ ಖರ್ಚು - ಅವೂ ಅಷ್ಟೇ ಪ್ರಮಾದಲ್ಲಿ ಇರಬೇಕು. ಆದರೆ ಇಲ್ಲ ). ಉಳಿಕೆ ಖರ್ಚಿನಲ್ಲಿ ಐಷಾರಾಮಿ ಜೀವನದ ಪರಿಕರಗಳು ದುಪ್ಪಟ್ಟಾಗಿವೆ (ಸಾರಿಗೆಯೇ ಮೊದಲುಗೊಂಡ). ಹೀಗಾಗಿ ಉಳಿಸುವ ಜನರ ಸಾಮರ್ಥ್ಯ ಕಡಿಮೆ ಆಗಿದೆ. ಆದ್ದರಿಂದ, ನಮ್ಮ ಹಿರಿಯರ ಜೀವನಕ್ಕಿಂತ ಅಧೋಗತಿಗೆ ಹೋಗುತ್ತಿದ್ದೇವೆ.
ದೇವಸ್ಥಾನದ ಆದಾಯ ಗಮನಿಸಿ (ಚಿತ್ರದಲ್ಲಿ ಕೊಟ್ಟಿದೆ - ಇದು ಬರೀ ದೇಣಿಗೆ ಭೂಮಿ ಇಂದ ಬಂದದ್ದು ). ವಾರ್ಷಿಕ  ೩೦೦೦ ಗದ್ಯಾಣ. ಅಂದರೆ ೧೨೦೦೦ ಗ್ರಾಂ ಚಿನ್ನ. ಇದರ ಮೌಲ್ಯ ೩೬,೦೦೦,೦೦೦ ಅಂದರೆ ೩.೬ ಕೋಟಿ ರೂಪಾಯಿ. ಇಷ್ಟು ವರಮಾನ ನಮ್ಮ ಸೋಮನಾಥಪುರದ ಒಂದು ದೇವಸ್ಥಾನಕ್ಕೆ ವಾರ್ಷಿಕವಾಗಿ ಬರುತ್ತಿತ್ತು. ಇವತ್ತು ೧೦೦೦ ರೂ ದೇವಸ್ಥಾನಕ್ಕೆ ಕೊಟ್ಟು, ಮನೆ ಮಂದಿಯೆಲ್ಲ, ಗರ್ಭ ಗುಡಿಯಲ್ಲಿ ಕೂತು, ೩ ತಾಸು ಜನರಿಗೆ ದೇವರೇ ಕಾಣದಿರುವಂತೆ ಮಾಡುತ್ತಾರೆ. ಒಂದು ೫೦೦ ರೂ, ಟ್ಯೂಬ್ ಲೈಟ್ ಕೊಟ್ಟು ಅದರ ಅರ್ಧ ಬೆಳಕು ಕಾಣದಂತೆ ಅಕ್ಷರ ಕೆತ್ತಿಸಿರುತ್ತಾರೆ. ವಾರ್ಷಿಕ ೩.೬ ಕೋಟಿ ಆದಾಯ ಬರುವಂಥ ಭೂಮಿ ಕೊಟ್ಟ ಪುಣ್ಯಾತ್ಮ ಯಾರು ಅಂತ ಸೋಮನಾಥಪುರದ ಮಂದಿಗೆ ಇಂದು ಗೊತ್ತಿರುವುದಿಲ್ಲ. ಈ ರೀತಿ ಜನ ಅಸಡ್ಡೆ ಮಾಡಿದ್ದರಿಂದಲೇ ಕೋಟ್ಯಂತರ ಬೆಲೆ ಬಾಳುವ ದೇವಸ್ಥಾನದ ಭೂಮಿ ಇಂದು ಪರರ ಪಾಲಾಗಿದೆ. ದೇವಸ್ಥಾನ ಹಾಳು ಕೊಂಪೆಯಂತೆ ಬಿದ್ದಿದೆ.
ಕರ್ನಾಟಕದಲ್ಲಿ, ಮೈಸೂರು ಮಹಾರಾಜರ ಆಡಳಿತ ಇದ್ದಿದ್ದರಿಂದ, ಬ್ರಿಟಿಷರು ದೇವಸ್ಥಾನದ ಭೂಮಿ ಹಾಗೂ ಜನರ ಆದಾಯ ಕೀಳುವುದಕ್ಕೆ ಸಾಧ್ಯ ಆಗಿರಲಿಲ್ಲ . ಬ್ರಿಟಿಷರಿಗೆ ಕಪ್ಪಾ ಕೊಡಬೇಕಾಗಿದ್ದರಿಂದ, ಎಲ್ಲ ಜನಗಳ ಮೇಲೂ ತೆರಿಗೆ ಹೊರೆ ಜಾಸ್ತಿ ಬೀಳುತಿತ್ತು. ಆದರೆ, ಆ ತೆರಿಗೆ ಎಲ್ಲರ ಮೇಲೂ ಅವರ ಆದಾಯಕ್ಕೆ ತಕ್ಕಂತೆ ಸಮಾನವಾಗಿ ಬೀಳುತಿದ್ದರಿಂದ, ಜನರಲ್ಲಿ ಬೇಧ ಭಾವ ಬರದೇ ಅದರ ಪ್ರಭಾವವೂ ಅಷ್ಟಾಗಿ ಗೋಚರವಾಗಿ ಕಾಣುತ್ತಿರಲಿಲ್ಲ. ಜನರ ಆದಾಯಕ್ಕೆ ಯಾವುದೇ ತೊಂದರೆ ಬಂದಿರಲಿಲ್ಲ ಹಾಗೂ ಸಾರ್ವಜನಿಕ ಭ್ರಷ್ಟಾಚಾರ ಇರಲಿಲ್ಲ. ಹೊಯ್ಸಳರ ಕಾಲದ ಸಮೃದ್ಧ ಜೀವನ ಭಾರತ ಸ್ವತಂತ್ರ ಸಂಗ್ರಾಮದ ವರೆಗೂ ಕರ್ನಾಟಕದಲ್ಲಿ ಬಹಳ ಮಟ್ಟಿಗೆ  ಇತ್ತು. ಆದ್ಧರಿಂದಲೇ ಭಾರತದ ಬೇರೆ ಭಾಗಗಳಿಗೆ ಹೋಲಿಸಿದರೆ ಕರ್ನಾಟಕ ಈಗಲೂ ಸಮೃದ್ದವಾಗಿರುವಂತೆ ಕಾಣುತ್ತದೆ.
ಈ ವ್ಯವಸ್ಥೆಯನ್ನ ಪ್ರಜಾಪ್ರಭುವತ್ವ ಸರ್ಕಾರ "ಉಳುವವನಿಗೆ ಭೂಮಿ" ಅನ್ನುವ ಹೆಸರಿನಲ್ಲಿ ಹಾಗೂ ದೇವಸ್ಥಾನಗಳನ್ನು ಮುಜರಾಯೀ ಇಲಾಖೆಯ ಸುಪರ್ದಿಗೆ ಪಡೆಯುವುದರಿಂದ ಗಧಾ ಪ್ರಹಾರ ಮಾಡಿತು. ಈ ರೀತಿ ಮಾಡಿದ್ದರಿಂದಾಗಿ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ಸಾಮಾಜಿಕ ಸೌಲಭ್ಯಕ್ಕಾಗಿ ಸರ್ಕಾರವನ್ನೇ ಅವಲಂಬಿಸುವಂತೆ ಮಾಡಲಾಯಿತು. ಈ ರೀತಿ ಮಾಡಿ ಜನರ ಆದಾಯದ ಮೂಲದಲ್ಲೇ ಕಡಿತ ಮಾಡಲಾಯಿತು. ಈಗ ಸಮಸ್ಯೆಗಳಿಗೆ ಪರಿಹಾರ ಕೊಡಲಾಗದೆ, ಎಲ್ಲದಕ್ಕೋ ಸರ್ಕಾರವನ್ನು ಏಕೆ ಅವಲಂಬಿಸಿತ್ತೀರಾ, ನಿಮ್ಮ ಊರಿನ ಉದ್ದಾರ ನೀವೇ ಯಾಕೆ ಮಾಡಬಾರದು ಅನ್ನುವ ಪ್ರಶ್ನೆ ಕೇಳಲಾಗುತ್ತಿದೆ.
ಮುಂಚೆ ಅದನ್ನೇ ಮಾಡುತ್ತಿದ್ದದ್ದು. ತುಂಬಾ ಕಷ್ಟ ಅಂದರೆ ಮಾತ್ರ ಜನ ರಾಜರ ಬಳಿ ಸಹಾಯಕ್ಕೆ ಮೊರೆ ಇಡುತ್ತಿದ್ದದ್ದು. ಅದೂ ಒಂದೋ ಎರಡು ವರ್ಷ "ಬರಕ್ಕಾಗಿ" "ಕರ" ಮನ್ನಾ ಮಾಡಲು ಯಾಚಿಸುತ್ತಿದ್ದದ್ದು . ಸಹಾಯದ ಹಣ ಕೊಡಿ ಅಂತ ಅಲ್ಲ. ಇಂದಿನಂತೆ ರೇಷನ್ ಆಗಲಿ ಅಥವಾ ಕಡಿಮೆ ದುಡ್ಡಿನ ಸರ್ಕಾರದ ಊಟವಾಗಲಿ ಜನ ಯಾವತ್ತೂ ಕೇಳಿರಲಿಲ್ಲ. ಅನ್ನ ಛತ್ರ ದಾರಿಹೋಕರಿಗೆ ಮಾತ್ರ ಇದದ್ದು. ಜನ ಭಿಕ್ಷುಕರಂತೆ ತಮ್ಮ ಊರಿನದೇ ಅನ್ನ ಛತ್ರದಲ್ಲಿ ಉಣ್ಣಲಿಕ್ಕೆ ಬರುತ್ತಿರಲಿಲ್ಲ. ಈಗ ಸರ್ಕಾರದ ಕ್ಯಾಂಟೀನ್ ಮುಂದೆ ಸಾಲುಗಟ್ಟುವುದು ಸರ್ಕಾರದ "ಹೆಮ್ಮೆಯ ವಿಷಯವೋ" ಅಥವಾ "ಅಧ:ಪತನದ ಸೂಚಕವೋ"?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ