ಮಂಗಳವಾರ, ಮಾರ್ಚ್ 31, 2015

ಧರ್ಮದ ಮೂಲ ಯಾವುದು?


ವಿಶ್ವದಲ್ಲೇ ಭಾರತ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಅದಕ್ಕೆ ಕಾರಣ ಭಾರತ ಮಣ್ಣಿನಲ್ಲಿರುವ ಗುಣ . ಭಾರತವನ್ನು ಪುಣ್ಯಭೂಮಿ, ಕರ್ಮಭೂಮಿ ಎಂದರು ಕರೆಯುತ್ತಾರೆ. ಕರ್ಮ ಎಂದರೆ ನಾವು ಮಾಡುವ ಕ್ರಿಯೆ  ಅಥವಾ ಕೆಲಸ. ಕೆಲಸ ಎಂದ ಕೂಡಲೇ ಉದ್ಯೋಗ - ಅದೂ ಸಂಪಾದನೆ ಗಾಗಿ ಮಾಡುವ ಉದ್ಯೋಗ ಎಂದೆಲ್ಲಾ ತಪ್ಪಾಗಿ ತಿಳಿದು ಅರ್ಥ ಕಲ್ಪಿಸಿಕೊಂಡು ಬಿಡುವುದು ಸಾಮಾನ್ಯ.  ಕರ್ಮ ಎಂದರೆ ಬದುಕನ್ನು ನಾವು ಅನುಭವಿಸುವ ರೀತಿ.   ಈ ರೀತಿಯಾಗಿ ನಾವು ಮಾಡುವ ಕರ್ಮ ಯಾವ ರೀತಿಯಲ್ಲಿರಬೇಕು? ನಾವು ಮಾಡಿದ ಕರ್ಮಕ್ಕೆ ಅರ್ಥ ಬರುವುದು ಹೇಗೆ?  ಮಾನವರೆಂದು ನಾವು ಗುರುತಿಸಿಕೊಳ್ಳ ಬೇಕಾದರೆ ಯಾವ ಕರ್ಮವನ್ನು ನಾವು ಮಾಡಬೇಕು ಎಂಬುದೇ ಮುಖ್ಯ ಅರ್ಥ.ನಾವು ಮಾಡುವ ಕರ್ಮ ಧರ್ಮಾಧಾರಿತ ವಾಗಿಯೇ ಇರಬೇಕು.   ಹಾಗಿದ್ದರೆ ಮಾತ್ರ ಸಮಾಜದಲ್ಲಿ ನ್ಯಾಯ ಧರ್ಮ ಸುಖ ಶಾಂತಿ ನೆಮ್ಮದಿ ನೆಲಸುವುದು ಸಾದ್ಯ. 

ಇಂದಿನ ಸಮಾಜದಲ್ಲಿ ನಾವು ಕಾಣುವ ಅಸಂಗತಗಳಿಗೆಲ್ಲ ನಾವು ಧರ್ಮರಹಿತ ಕರ್ಮವೇ ಮೂಲ ಕಾರಣ. ಒಬ್ಬ ರಾಜಕಾರಣಿ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಾನೆ. ಒಬ್ಬ ಗೃಹಸ್ಥ ಮನೆಯಲ್ಲಿ ನೆಮ್ಮದಿ ಯಿಲ್ಲದೆ ಹಲವಾರು ಸಮಸ್ಯೆಗಳಿಂದ ನಲುಗಿ  ಹೋಗಿರುತ್ತಾನೆ. ಎಳೆ ವಯಸ್ಸಿನ ಮಕ್ಕಳು  ಮಾಡಬಾರದ್ದನ್ನು ಮಾಡಿ ತಮ್ಮ ಜೀವನವನ್ನೇ ಹಾಳು ಮಾಡುತ್ತಿದ್ದಾರೆ.  ಇದಕ್ಕೆಲ್ಲಾ ಕಾರಣ  ಮಾನವನಾಗಿ ಹುಟ್ಟಿದ ಮೇಲೆ ಮಾವನನಿಗೆ ಸರಿ ಹೊಂದುವ ರೀತಿಯಲ್ಲಿ ಬಾಳ್ವ ಮಾಡದೇ ಇರುವುದು.  ಜೀವನದಲ್ಲಿ ಪ್ರತಿಯೊಂದಕ್ಕೂ ಒಂದು ಚೌಕಟ್ಟು ಇದೆ. ಅದನ್ನು ಮೀರಿದರೆ. ಸಮಸ್ಯೆಗಳ ಸೃಷ್ಟಿ.ನಾವು ನಮ್ಮನ್ನು ಅರ್ಥ ಮಾಡಿಕೊಳ್ಳದೇ ಪ್ರತಿಯೊಂದನ್ನೂ ತಮ್ಮ ಮೂಗಿನ ನೇರಕ್ಕೆ ಅರ್ಥ ಮಾಡಿಕೊಂಡಿರುವುದೇ ಕಾರಣ.

ಇದು ನಮ್ಮ ಧರ್ಮ, ಇದು ನಿಮ್ಮ ಧರ್ಮ ಎಂದು ಹೇಳಿಕೊಂಡು ಜಗಳವಾಡುತ್ತೇವೆ, ನಿಂದಿಸುತ್ತೇವೆ  ಮನುಷ್ಯರಿಗೆ ಬೇರೆ  ಬೇರೆ ಧರ್ಮವೇ ಇಲ್ಲ. ಎಲ್ಲರಿಗೂ ಇರುವುದು ಒಂದೇ ಧರ್ಮ ಅದು “ಮಾನವ ಧರ್ಮ”.  ಆದರೆ ಧರ್ಮವನ್ನು ನಂಬಿಕೆ ಮತ್ತು ಪ್ರದೇಶದ ಅನುಗುಣವಾಗಿ ಗುರುತಿಸುವುದಕ್ಕೇ ಮಾತ್ರ ಧರ್ಮಕ್ಕೆ ಒಂದು ಹೆಸರು.  ಅಷ್ಟೇ? ಭಾರತದಲ್ಲಿರುವ ಧರ್ಮ ಸನಾತನ ಧರ್ಮ ಅಷ್ಟೇ.  ಆದರೆ  ಅವರವರು ಮಾಡುವ ದೇವತಾ ಆರಾಧನೆ ಮತ್ತು ಆದೇವರ  ಹೆಸರಿನಲ್ಲಿ  ನಡೆಯುವ ಆಚರಣೆ ಹಬ್ಬ ಹರಿದಿನಗಳ ಮೂಲಕ ನಾವು ನಡೆಸುವ ಧಾರ್ಮಿಕ ವಿಧಿಗಳು ಬೇರೆ ಬೇರೆ ಯಾಗಿರುವುದರಿಂದ ನಮಗೆ ಧರ್ಮ ಬೇರೆ ಬೇರೆ ಎಂದು ಅನಿಸುತ್ತದೆ.  ಆದರೆ ಅವು ಒಂದು ಮತಾಚರಣೆ? ಅದರಲ್ಲಿ ನಮ್ಮ ಮತಾಚರಣೆಯೇ ಹೆಚ್ಚು  ನಿಮ್ಮ ಮತಾಚರಣೆಯೇ ಸರಿಯಿಲ್ಲ.  ನಿಮ್ಮಲ್ಲಿ ಮೇಲು ಕೀಲು ಎಂಬುದೆಲ್ಲ ಇದೆ. ಎಂದೆಲ್ಲಾ ಹೇಳಿ  ಕಥೆ ಕಟ್ಟುವುದು ಮನುಷ್ಯನ ಬುದ್ದಿಯ ಒಂದು ಚತುರತೆಯೇ ವಿನಹಃ  ಯಾವಾಗ ಬೇಕಾದರೂ ಸುಳ್ಳು ಆಗಬಹುದು.

ಮಾವನ ಧರ್ಮ ಎಂದರೇನು?  ಪ್ರಾಣಿಗಳಲ್ಲಿ ಒಂದಾಗಿಯೇ ಇದ್ದ  ಮಾವನವನೂ ತನ್ನ ಬುದ್ಧಿ ಶಕ್ತಿಯಿಂದ ತನ್ನನ್ನು ತಾನು ಒಂದು ಚೌಕಟ್ಟಿಗೆ ಬಂದಿಸಲು ಪ್ರಾರಂಭಿಸಿದನೋ ಆವಾಗಲೇ ಮಾನವ ಧರ್ಮದ ಉದಯವಾಯಿತು.   ಪ್ರಾಣಿಗಳು ಗುಂಪು ಗುಂಪಾಗಿ ವಾಸಿಸುವುದು ಸಹಜ.  ಹಾಗೆ ವಾಸಿಸುವಾಗ ಅವುಗಳಲ್ಲಿ ಕೆಲವು ಪ್ರಾಣಿಗಳು ತನ್ನ ಜೀವನದಲ್ಲಿ ಒಂದು ಹೆಣ್ಣನ್ನು  ಅಥವಾ ಒಂದು ಗಂಡನ್ನು ಆಯ್ಕೆ ಮಾಡಿಕೊಂಡು ಅವುಗಳ ಜೊತೆಯೇ ಸಂಸಾರ ಮಾಡುವುದೋ.  ಅಥವಾ ಗುಂಪಿನಲ್ಲಿರುವಾಗ ತಮ್ಮ ಜೊತೆ ಇದ್ದ  ಯಾವುದಾದರೊಂದು ಜೊತೆಗಾರ ಸತ್ತಾಗ ಅದನ್ನು ಹಾಗೆಯೇ ಬಿಡದೇ ಹೂಳಲು ಅಥವಾ ಸುಡಲು ಯಾವಾಗ ಕಲಿಯಿತೋ ಆವಾಗ ಮಾನವನ ಧರ್ಮವೊಂದು ಉಗಮವಾಯಿತು.  ಹಾಗೆಯೇ ಪ್ರಕೃತಿಯಲ್ಲಿ ಬಿರುಗಾಳಿ, ಸಿಡಿಲು, ಮಿಂಚು ಈ ಮೊದಲಾದ ಆಶ್ಚರ್ಯ ಕರವಾದ ಘಟನೆಗಳಿಂದ ಭಯಬೀತರಾಗಿ ಅದನ್ನು ಒಂದು ಶಕ್ತಿ ಎಂದು ನಂಬಿ  ಆ ಮೂಲಕ ದೇವರ ಅಸ್ತಿತ್ವಕ್ಕೆ ಕಾರಣವಾಯಿತು.   ಇವೆಲ್ಲವೂ ಧರ್ಮದ ಉಗಮಕ್ಕೆ ಕಾರಣವಾಯಿತು. ಹಾಗಾಗಿ ಧರ್ಮ ಸ್ಥಾಪಕನೆಂದು ಯಾರೂ ಇಲ್ಲ.  ಏನಾದರೂ ಇದ್ದರೆ  ಮಾನವಧರ್ಮದಲ್ಲಿ ಮತ ಸ್ಥಾಪಕರಿರಬಹುದು ಅಷ್ಟೇ?

ಈ ಅರ್ಥದಲ್ಲಿ  ಧರ್ಮ ಎಂದರೆ ''ಯಾವುದೇ ಒಂದು ವಸ್ತುವನ್ನು ಗುರುತಿಸುವ ಮಾನದಂಡ'' ಎಂದು ಅರ್ಥ ಮಾಡಿಕೊಳ್ಳ ಬಹುದು.  ಮಹಾಭಾರದಲ್ಲಿ ಭೀಷ್ಮ ಅದನ್ನೇ ಇನ್ನೊಂದು ರೀತಿಯಲ್ಲಿ ಹೇಳಿದ್ದಾರೆ ಧರ್ಮ ಎಂದರೆ ಧರಿಸುವಂತಹದು’ ಎಂದು ಹಾಗಾದರೆ ಮಾನವ ಎಂದು ಗುರುತಿಸುವುದಕ್ಕೆ ಕಾರಣವಾದ ಮತ್ತು ಪ್ರಾಣಿಗಳಿಂದ  ವರ್ಗೀಕರಣಗೊಳ್ಳಲಿಕ್ಕೆ ಕಾರಣವಾದ  ಅಂಶಗಳೇ ಮಾನವ ಧರ್ಮ ಅದು ಅವನ ಗುರುತು. 

ಇದೇ ಸರಿಯಾದ ಕ್ರಮ : ಯಾಕೆಂದರೆ ಪ್ರಾಣಿಗಳಲ್ಲಿಯೂ ಪ್ರಕ್ಷಿಗಳಲ್ಲಿಯೂ ನಾನಾ ವರ್ಗ ಬೇಧಗಳಿವೆ. ಆದರೆ ಅವುಗಳನ್ನು ಗುರುತಿಸುವುದು ಅವುಗಳ ಗುಣ ಧರ್ಮಗಳಿಂದ.  ನಾಯಿ, ನರಿ, ತೋಳ ನೋಡಲು ಸಾಮಾನ್ಯವಾಗಿ ಒಂದೇ ರೀತಿ ಇದ್ದರೂ ಅವುಗಳ ಗುಣ ಧರ್ಮಗಳು ಬೇರೆ.  ಅದೇ ರೀತಿ ವಿಶ್ವದಲ್ಲಿ ಕಂಡು ಬರುವವೈವಿದ್ಯಮಯ ಗಳನ್ನು ಗುರುತಿಸುವುದು ಅವುಗಳ ಗುಣಧರ್ಮಗಳಿಂದಲೇ.  ಹಾಗಾಗಿ ಧರ್ಮ ಎನ್ನುವುದು ಮನುಷ್ಯನಿಂದ ಉಗಮವಾಯಿತು ಎಂದು ಹೇಳುವುದು ಸಾದ್ಯವಿಲ್ಲ.

ವಿಶ್ವಕ್ಕೆ ಒಂದು ಧರ್ಮ ಇದೆ. ಭೂಮಿಯ ಗುಣ ಧರ್ಮ ಬೇರೆ  ಚಂದ್ರನ ಗುಣಧರ್ಮ ಬೇರೆ,  ಹಾಗೇ ವಿಶ್ವದ ಎಲ್ಲ ಆಕಾಶ ಕಾಯಗಳ ಗುಣಧರ್ಮಗಳು,  ಭೂಮಿಯ ಮೇಲೆ ಇರುವ ಮರಗಿಡಗಳ ಗುಣಧರ್ಮಗಳು ಬೇರೆ ಬೇರೆಯೇ?  ವಿಶ್ವವೆಲ್ಲವೂ ಅಣುಮಯ. ಅಣಗುಳು  ವೈವಿದ್ಯಮಯ ಸಂಯೋಜನೆಯಿಂದ ವಿಶ್ವದ ಬೇರೆ ಬೇರೆ ಸ್ಥಿರ ಚರ ವಸ್ತುಗಳು ನಿರ್ಮಾಣವಾದವು . ನಮಗೆ ತಿಳಿದಿರುವಹಾಗೆ ಆಮ್ಲಜನಕ ಮತ್ತು ಜಲನಕ ಸೇರಿ ನೀರು ಆಗಿದೆ. ಆಮ್ಲಜನಕದ ಅಣು ಮತ್ತು ಜಲನಕದ ಅಣುಗಳು ಸಂಯೋಜನೆಗೊಂಡ ನಿಷ್ಪತ್ತಿಯ ಪ್ರಮಾಣವೇ ನೀರಿನ ಸೃಷ್ಟಿಗೆ ಕಾರಣ. ಅದೇ ಬೇರೆ ನಿಷ್ಪತ್ತಿಯಲ್ಲಿ ಏನದರೂ  ಒಂದು ಸೂಜಿ ಮೊನೆಯಷ್ಟು ಬದಲಾದರೂ ಬೇರೆ ವಸ್ತುವಿನ ಸೃಷ್ಟಿಯಾಗುತ್ತಿತ್ತು.   ಆಮ್ಲಜನಕ  ಮತ್ತು ಜಲನಕದ ಗುಣ ಲಕ್ಷಣಗಳು ಬೇರೆ ಬೇರೆ  ಅದರ ಅಣು ರಚನೆಯೂ ಬೇರೆ ಬೇರೆಯೇ  ಹಾಗೆ ಅವುಗಳೆರಡು ಸೇರಿ ನೀರು ಉತ್ಪತ್ತಿಯಾಗಿ ಅದರ ರಚನೇಯೇ ಬೇರೆ.  ಅಂದರೆ ವಿಶ್ವದಲ್ಲಿ ಇರುವ (ಮಾನವ ಸಹಿತ) ಎಲ್ಲಾ ಪ್ರಾಣಿ, ಪಕ್ಷಿ, ಸಸ್ಯ, ಗಾಳಿ ಗೆಳೆಲ್ಲವೂ ಅಣುಗಳಿಂದ ರಚಿಸಲ್ಪಟ್ಟಿವೆ.

ಅಣುವಿನಲ್ಲಿರುವ ನ್ಯೂಟ್ರಾನ್, ಪ್ರೊಟಾನ್ ಮತ್ತು ಅವುಗಳನ್ನು ಪರಿಭ್ರಮಣಗೊಳ್ಳುತ್ತಿರುವ ಎಲೆಕ್ಟ್ರಾನ್ ಗಳ ಸಂಖ್ಯೆ ಇವುಗಳಲ್ಲಿ ಆಗಿರುವು ವ್ಯತ್ಯಾಸದಿಂದ ಬೇರೆ ಬೇರೆ ಗುಣ ಧರ್ಮದ ವಸ್ತುಗಳ ನಿರ್ಮಾಣಗೊಂಡಿರುವುದು.    ಒಂದು ಅಣುವಿನಲ್ಲಿರುವ ಎಲೆಕ್‌ಟ್ರಾನ್ ಅವುಗಳ ಆವರ್ತನ ಕಾಲ ಹಾಗೆ ನ್ಯೂಟ್ರನ್  ಸುತ್ತ ಪರಿಭ್ರಮಣ ಕಾಲ ಇವುಗಳಿಂದ  ಅವು ಹೊರಡಿಸುವ ತರಂಗ ಇವೆ‌ಲ್ಲವೂ ಬೇರೆ ಬೇರೆ ಅಣಗಳಲ್ಲಿ ಬೇರೆ ಬೇರೆಯಗಿರುವುದರಿಂದಲೇ ಅವುಗಳನ್ನು ಬೇರೆ ಬೇರೆಯಾಗಿ ಗುರುತಿಸುತ್ತೇವೆ.   “ಇಲ್ಲಿಯೂ ಧರ್ಮ ಎನ್ನುವುದು ಧರಿಸಿರುವಂತಹದ್ದು” ಹಾಗಾಗಿ  ನಾವು ಬೇರೆ  ಬೇರೆ ಸ್ವರೂಪವನ್ನು ಗುರುತಿಸುವುದು ಸಾಧ್ಯವಾಯಿತು. ಅಂದರೆ ಧರ್ಮದ ಮೂಲ ವಿಶ್ವದ ಮೂಲದಲ್ಲಿ ಅಡಗಿದೆ. ಪ್ರತಿ ಆಣು ಅಣುವಿನಲ್ಲಿಯೂ ಅಡಗಿದೆ. ಧರ್ಮವನ್ನು ಯಾರೂ  ಸ್ಥಾಪನೆ ಮಾಡಲು ಆಗುವುದಿಲ್ಲ.  ಧರ್ಮ ಎಂದರೆ ''ಒಂದು ವಸ್ತುವನ್ನು ಗುರುತಿಸುವ ಮಾನದಂಡ'' ಎಂದು ಅರ್ಥ 

ಓದುಗರಲ್ಲಿ ವಿನಂತಿ : ಇದು ಸಂಪೂರ್ಣ ಆಧ್ಯಾತ್ಮಿಕ ವಿಚಾರ - ದೇವರನ್ನು ಹೇಗೆ ತೋರಿಸಲು ಸಾಧ್ಯವಿಲ್ಲವೋ, ಹಾಗೆಯೇ ಆಧ್ಯಾತ್ಮಿಕ ವಿಚಾರವಾದುದರಿಂದ ಬರವಣಿಗೆಯಲ್ಲಿ ಸರಿಯಾಗಿ ಅರ್ಥವಾಗುವಂತೆ ಇಳಿಸಲು ಸಾಧ್ಯವಾಗುತ್ತಿಲ್ಲ. ದೇವರನ್ನು ಕಾಣಲು ನಾವು ಕಣ್ಣು ಮುಚ್ಚಿ ಆತ್ಮದಲ್ಲಿ ಕಂಡುಕೊಳ್ಳುವಂತೆ, ಈ ಲೇಖನದ  ಒಳ ಸತ್ಯವನ್ನು ಅರ್ಥ ಮಾಡಿಕೊಂಡರೆ  ಅದೇ ಒಂದು ನನ್ನ ಭಾಗ್ಯ.

ಮಂಗಳವಾರ, ಮಾರ್ಚ್ 24, 2015

ಶಿಕ್ಷಣ ವ್ಯವಸ್ಥೆಯೇ ಅರ್ಥವನ್ನು ಕಳೆದುಕೊಳ್ಳುತ್ತಿದೆ.......?

ಇಂದಿನ ದಿನಗಳಲ್ಲಿ ಶಿಕ್ಷಣ ಎನ್ನುವುದು ಕೇವಲ ಮನುಷ್ಯನಿಗೆ ಹಣ ಸಂಪಾದನೆಗೆ ಬೇಕಾದ ಒಂದು ವ್ಯವಸ್ಥೆಯಾಗಿದೆ..  ಅಲ್ಲದೆ ವಿದ್ಯೆಯು ಮಾರಾಟಕ್ಕೆ ಸಿಗುವ ಸೊತ್ತು ಆಗಿದೆ.  ಮಕ್ಕಳ ಪೋಷಕರು ಮಕ್ಕಳ ವಿದ್ಯೆಗೆ ತೊಡಗಿಸುವ ಹಣ ಒಂದು ಬಂಡವಾಳ.  ಶಿಕ್ಷಣದಲ್ಲಿ  ಉತ್ತಮ ಗುಣಮಟ್ಟದ ಶಿಕ್ಷಣ ಎಂದೆಲ್ಲಾ ವರ್ಗಿಕರಣ ವಾಗಿದೆ. ಪೋಷಕರು ನಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದರೆ ಮುಂದೆ ಭವಿಷ್ಯ ಚೆನ್ನಾಗಿರುತ್ತದೆ..... ಹೀಗೆಲ್ಲಾ ಆಲೋಚನೆ ನಿರಂತರ ನಮ್ಮ ಸಮಾಜದಲ್ಲಿ ನಡೆಯುತ್ತಿದೆ.

ನಿಜವಾಗಿ ಶಿಕ್ಷಣ ಎನ್ನುವುದು ವ್ಯಕ್ತಿಯೋರ್ವನ  ವ್ಯಕ್ತಿತ್ವ ನಿರ್ಮಾಣ ಮಾಡುವುದಕ್ಕೆ ಪೂರಕವಾಗಿರಬೇಕು.  ''ವಿದ್ಯೆ ಇಲ್ಲದವನು ಪಶುವಿಗೆ ಸಮಾನ`` ಎಂಬುದು ನಮ್ಮ ಹಿರಿಯರು ಹೇಳಿದ ಮಾತು. ವಿದ್ಯೆಯಿಂದ ಮನುಷ್ಯನಲ್ಲಿರುವ ಮೃಗತ್ವ ನಾಶವಾಗಿ ಮಾನವತ್ವ ಬೆಳೆಯುತ್ತದೆ ಎಂಬ ಸತ್ಯ ಈ ಮಾತಿನಲ್ಲಿ ಅಡಗಿದೆ.   ಈ ಅರ್ಥವನ್ನು ಗಮನಿಸಿ ವಿಮರ್ಶಿಸುವುದಾದರೆ  ಶಿಕ್ಷಣ ಎನ್ನುವುದು ಪುಸ್ತಕದ ಬದನೆಕಾಯಿ ಅಲ್ಲ. ಪುಸ್ತಕದಲ್ಲಿ ಬರೆದಿರುವುದುನ್ನು ಓದಿ ತಿಳಿದು ಬರೆಯುವುದು  ಪರೀಕ್ಷೆಗಾಗಿಯೇ ಬಾಯಿ ಪಾಠ ಮಾಡಿ ಇಲ್ಲವೇ ಕಾಪಿ ಹೊಡೆದು ಬರೆದರೆ  ಅಥವಾ  ಪರೀಕ್ಷೆ ಪಾಸು ಮಾಡಿದರೆ,  ಅದಕ್ಕಾಗಿ ಬಿಹಾರದಲ್ಲಿ ನಡೆದ ಘಟನೆಯಂತೆ ಹೇಗಾದರೂ ಮಾಡಿ ಪಾಸ್ ಮಾಡಿದರೆ ಸಾಕು.  ಅವನು ವಿದ್ಯಾವಂತ ಅಥವಾ  educated ಎಂದು ಅನಿಸುವುದು ಸಾಧ್ಯ ಎಂಬ ನಂಬಿಕೆ ಬೆಳೆದಿರುವುದೇ ಇಂದಿನ ಎಲ್ಲಾ ಅವ್ಯವಸ್ಥೆಗೆ ಸಾಕ್ಷಿ.

ಬಿಹಾರದಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷೆಗೆ ಬರೆಯುತ್ತಿದ್ದವರಿಗೆ ಉತ್ತರಗಳನ್ನು  ಹೇಳಿಕೊಡುತ್ತಿದ್ದ ಅದಕ್ಕಾಗಿ ನಡೆಸಿದ ಕಸರತ್ತು  (ಪತ್ರಿಕೆಗಳಲ್ಲಿ ಪ್ರಕಟವಾದ ಚಿತ್ರ) ಮತ್ತು  ಲಾಲು ಪ್ರಸಾದ್ ಯಾದವ್ ಹೇಳಿದ ಮಾತು ' ನಮ್ಮ ಸರಕಾರ ಇದ್ದಿದ್ದರೆ ಪುಸ್ತಕಗಳನ್ನೇ ಕೊಟ್ಟು ಬಿಡುತ್ತಿದ್ದೆ''  ಎಂಬ ಮಾತು ನಮ್ಮ ಶಿಕ್ಷಣ ಮೌಲ್ಯವೇ ಕುಸಿದಿದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. 

ಶಿಕ್ಷಣ ಎಂದರೆ ಏನು?  ಬೆಳೆಯುವ ಹಂತದಲ್ಲಿರುವ ಮಗು ತನ್ನನ್ನು ತಾನು ಅರಿತುಕೊಳ್ಳಲು ಪೂರಕವಾಗಿ ಮಾಡುವ ವ್ಯವಸ್ಥೆಯೇ ಶಿಕ್ಷಣ.  ಶಿಕ್ಷಣವನ್ನು ಕೊಡುತ್ತೇವೆ....  ಎಂದರೆ ಕೊಡುವುದು  ಯಾರಿಗೆ?  ಮನುಷ್ಯನನ್ನು ಪ್ರಾಣಿಗಳಿಂದ ವರ್ಗೀಕರಿಸಲ್ಪಟ್ಟಿ  ಗುರುತಿಸಿಕೊಂಡಿರುವುದಕ್ಕೆ ಸಾಧ್ಯವಾದದ್ದು ಶಿಕ್ಷಣದಿಂದ.  ಪ್ರಾಣಿಗಳು ತನ್ನ ಬದುಕನ್ನು ಒಂದು ಸೀಮಿತವಾದ ಅರ್ಥದಲ್ಲಿ ಅನುಭವಿಸುತ್ತದೆ. ಅದಕ್ಕೆ ಇತಿಮಿತಿಗಳಿರ ಬಹುದು.  ಅವುಗಳ ಬದುಕಿನ ಮೇಲೆ ಕಾಲದ ಪ್ರಭಾವ ವಿರಬಹುದು.  ನೋವಾದಾಗ ದುಃಖ, ಸಂತೋಷವಾದಾಗ ಆ ಭಾವನೆಯನ್ನು ಪ್ರಕಟಗೊಳಿಸಲು ತಿಳಿದಿರ ಬಹುದು.  ಆದರೆ ಅದು ತನ್ನನ್ನು ತಾನು ನಾನು ಯಾರು? ಎಂದು ಪ್ರಶ್ನಿಸು ಮಟ್ಟದಲ್ಲಿ ಬುದ್ದಿಯುನ್ನು ಬೆಳೆಸಿಕೊಂಡಿರುವುದಿಲ್ಲ. ಹಾಗಾಗಿ ಬದುಕಿಗೆ ಒಂದು  ಲಿಮಿಟ್ ಇದೆ. ಆದರೆ ಅದೇ ಪ್ರಾಣಿ ರೂಪದ ಮನುಷ್ಯ ತನ್ನನ್ನು ತಾನು ಅರಿಯಲು ಮೊದಲು  ಆಶ್ಚರ್ಯದಿಂದ ಹಾಕಿದ  ಪ್ರಶ್ನೇಯೇ ''ನಾನು ಯಾರು?`` ಇದನ್ನು ಅರಿತುಕೊಳ್ಳಲು ತೊಡಗಿದ ಪ್ರಕ್ರಿಯೆ ಶಿಕ್ಷಣ.  

ಮನುಷ್ಯ ಬದುಕಿದಾಗ ಇರುವ ಚಲನೆ ಸುಖ ಸಂತೋಷದ ಅನುಭವ ಸತ್ತಾಗ ಇರುವುದಿಲ್ಲ.  ಆಗ ಶರೀರ ಒಂದು ನಿರುಪಯುಕ್ತ  ವಸ್ತು  ಹಾಗಾಗಿ ಅದನ್ನು ಸುಡುವುದೋ ಹೂಳುವುದೋ ಮಾಡುತ್ತಾರೆ.  ಶರೀರದಲ್ಲಿ  ಬದುಕಿದಾಗ ಇದ್ದ ಶಕ್ತಿ, ಚೇತನ, ಸತ್ತಾಗ ಇಲ್ಲದಿರುವ ಒಂದು ಶಕ್ತಿ ಶರೀರದಲ್ಲಿ ಇದೆ ಎಂಬ ಸತ್ಯವು ಬುದ್ಧಿಯಲ್ಲಿ ಚಿಂತನೆಯನ್ನು ಹುಟ್ಟು ಹಾಕಿದಾಗ ......  ಈ ಸತ್ಯದ ಬೆನ್ನ ಹಿಂದೆ ಬಿದ್ದ ಚಿಂತನೆಯೇ  ಅವನಲ್ಲಿ ನಿರಂತರವಾಗಿ ನಡೆದ ಮಂಥನವೇ ಮನುಷ್ಯನ ಆತ್ಮ ಜ್ಞಾನವನ್ನು,  ಬುದ್ದಿ ಬಲವನ್ನು ಉಪಯೋಗಿಸಿ ತರ್ಕ ಬದ್ಧವಾಗಿಯೇ ಅರಿಯುವ ಪ್ರಯತ್ನದಿಂದ ಉಂಟಾದ ಪ್ರತಿಯೊಂದು ವಿಚಾರಗಳು   ಹಾಗೂ ವ್ಯಕ್ತಿತ್ವ ನಿರ್ಮಾಣದ  ಪ್ರಕ್ರಿಯೆಗೆ  ಪೂರಕವಾದ ಸಾಮಗ್ರಿಯೇ ಶಿಕ್ಷಣದ ವಸ್ತುವಾಗಿ ಬೆಳೆಯಿತು. ಇದುವೇ  ಜ್ಞಾನ ರಾಶಿ.

ಅದನ್ನು ಎಳೆಯ ಮಕ್ಕಳಿಗೆ  ಎಷ್ಟು ಬೇಕು ಅಷ್ಟನ್ನು ನಾವು  ತಿಳಿಸಿಕೊಡುವ ಒಂದು ವ್ಯವಸ್ಥೆಯನ್ನು ಮಾತ್ರ ಶಿಕ್ಷಣ ಎಂದು ಕರೆಯಬಹುದು.  ಇದನ್ನು  ಸರಿಯಾಗಿ ಅರ್ಥ ಮಾಡಿ ಈ ತಳಹದಿಯಲ್ಲಿಯೇ ಶಿಕ್ಷಣ ವ್ಯವಸ್ಥೆಯನ್ನು ರೂಪುಗೊಳಿಸಿದರೆ  ಭ್ರಷ್ಟಾಚಾರ,  ಅತ್ಯಾಚಾರ, ಮೋಸ, ಹಣದ ವ್ಯಾಮೋಹ, ಸುಳ್ಳು,  ಜಾತಿ ಡೊಂಬರಾಟ,  ಸಮಾಜದಲ್ಲಿ ಬೇರು ಬಿಟ್ಟಿರುವ ನಾನಾ ಪಿಡುಗು ಎಲ್ಲವೂ ಮಾಯವಾಗುವುದು  ಖಂಡಿತ ಸಾಧ್ಯ.

ಇವತ್ತು  ಮಹಿಳಾ ಸಬಲೀಕರಣದ ವಾದ ಬೆಳೆದಿದೆ. ಹಣ್ಣು ಮಕ್ಕಳು ಗಂಡು ಮಕ್ಕಳಿಗಿಂತಲೂ ಹೆಚ್ಚು ವಿದ್ಯಾವಂತರಾಗುತ್ತಿದ್ದಾರೆ. ನಾವು ಗಂಡು ಮಕ್ಕಳಿಗಿಂತಲೂ ಕಡಿಮೆ ಏನಲ್ಲ ಎಂದು ಹೇಳುವಷ್ಟು ಮುಂದಿವರಿದೆ ಸತ್ಯ.  ಆದರೆ ಹೆಣ್ಣು ಮಕ್ಕಳಿಗೆ ಸಿಗಬೇಕಾದ ಮರ್ಯಾದೆ ಸಿಗುತ್ತಿದೆಯೇ,  ಅವರನ್ನು ರಕ್ಷಿಸಲು ನೂರಾರು ಕಾನೂನುಗಳನ್ನು ಸರಕಾರ ಮಾಡಬಹುದು.  ಪೋಲೀಸ್ ವ್ಯವಸ್ಥೆಯನ್ನು ಅದಕ್ಕಾಗಿ ಬಳಸಬಹುದು  ಆದು ಒಂದು ವ್ಯವಸ್ಥೆ.  ಈ ವ್ಯವಸ್ಥೆಗಳು ಸಮಾಜ ಕುಟಂಬಗಳು ತನ್ನೊಡಲಲ್ಲೇ ಸೇರಿಸಿಕೊಂಡು ಅದನ್ನು ಪ್ರೀತಿ ವಿಶ್ವಾಸ ಗೌರವ ನೆಲಯಲ್ಲಿ ನಡೆಸಿಕೊಂಡು ಬಂದಿದೆ.  ಈ ವ್ಯವಸ್ಥೆಯ ತಳಹದಿ ಶಿಕ್ಷಣದಿಂದ ದೊರಕಿರುವುದಾದರೆ.  ಸರಕಾರವೊಂದು ಮಾಡುವ ಕಾನೂನು ಕಟ್ಟಲೆ ವ್ಯವಸ್ಥೆಗಳೆಲ್ಲವೂ  ಧರ್ಪದಿಂದ ಆಧಿಕಾರದ ಬಲದಿಂದ ರೂಪಿತಗೊಂಡಿರುವುದು ಅದಕ್ಕೆ ಬೆನ್ನುಲುಬಾಗಿ ನಿಂತಿರುವುದು ಈಗ ನಾವು ಕಲಿತುಕೊಂಡಿರುವ ಶಿಕ್ಷಣದಿಂದ ದೊರೆತ ಜ್ಞಾನದ ಬಲದಿಂದ ಉಂಟಾಗಿರುವುದು.  ರಾಜಕಾರಣಿಗಳು ಕೋರ್ಟುಗಳು ನಮ್ಮ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿತು  ಅದಕ್ಕಾಗಿ ದಪ್ಪ ದಪ್ಪ ಪುಸ್ತಕವನ್ನು ಓದಿ,  ಅದ್ಯಯನ ಮಾಡಿ  ಕೋರ್ಟಿನಲ್ಲಿ ತರ್ಕವನ್ನು ಮಂಡಿಸಿ  ಸಾಕ್ಷಿ ಆಧಾರಗಳನ್ನು ಒದಗಿಸಿ ನ್ಯಾಯ ತೀರ್ಮಾನ ಮಾಡಿ ಶಿಕ್ಷೆ ವಿಧಿಸುವುದು  ನಮ್ಮ  ಶಿಕ್ಷಣ ವ್ಯವಸ್ಥೆಯಿಂದ ಸಾಧ್ಯವಾಯಿತು.  ಆದರೆ ನಿಜವಾದ ಶಿಕ್ಷಣದಿಂದ ಸಮಾಜದಲ್ಲಿ ಎಲ್ಲಾ ರೀತಿಯ ನೋವು, ಅತ್ಯಾಚಾರ, ಭ್ರಷ್ಟಾಚಾರ, ಮೋಸ, ಈ ಮೊದಲಾದ ಮಾವನೀಯ ಮೌಲ್ಯಗಳಿಗೆ ವಿರುದ್ಧವಾದ ಅಸಂಗತಗಳನ್ನು ನಾಶಮಾಡಿ ಮಾನವೀಯತೆಯನ್ನು ಬೆಳೆಸುವುದೇ ನಿಜವಾದ  ಶಿಕ್ಷಣ.

ಈ ಸತ್ಯಗಳನ್ನು ಮುಂದಿರಿಸಿಕೊಂಡು ಬಿಹಾರದ ಘಟನೆ ಮತ್ತು ಲಾಲು ಪ್ರಸಾದ ಯಾದವರಂತಹ ರಾಜಕಾರಣಿಗಳು ನಮ್ಮ ದೇಶವನ್ನು ಯಾವ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ ಹಿಂದೆ ಮುಂದೆ ಬಗ್ಗೆ ಯಾವ ಚಿಂತನೆಯೂ ಇಲ್ಲದೇ ಸಮಾಜವನ್ನು ಮಾರ್ಗದರ್ಶನ ಮಾಡುತ್ತಿದ್ದಾರೆ ಎನ್ನವುದು ಗಮನಿಸಬೇಕಾದ ಅಂಶ. ''ಯಥಾ ರಾಜ ತಥಾ ಪ್ರಜಾ''.

ಭಾನುವಾರ, ಮಾರ್ಚ್ 22, 2015

 ಪಿಕಲಾಟಕ್ಕೆ ಬಿದ್ದ ಮುಖ್ಯಮಂತ್ರಿ :

ಡಿ. ಕೆ. ರವಿ ಸಂಶಯಾತ್ಮಕ ಸಾವಿನ ತನಿಖೆ ಸಿ ಬಿ.ಐ ಒಪ್ಪಿಸ ಬೇಕಾಗಿಲ್ಲ  ಯಾಕೆ ?

ಭ್ರಷ್ಟಾಚಾರ ಸಮಾಜಕ್ಕೆ ಬಡಿದ ಒಂದು ಕಳಂಕ. ಅದರ ಕರಾಳ ಮುಖವೇ  ಡಿ. ಕೆ. ರವಿ ಎಂಬ ದಕ್ಷ ಅಧಿಕಾರಿಯ ಸಂಶಯಾಸ್ಪದ ಮರಣ.  ಭ್ರಷ್ಟಾಚಾರದ ವಿರೋಧಿಯಾದ  ರವಿಯವರು  ದಕ್ಷ, ಹಾಗೂ ಪ್ರಾಮಾಣಿಕ ಎಂಬುದರಲ್ಲಿ ಅವರ ಮರಣಾನಂತರ ಅವರ ಮರಣಕ್ಕೆ ಕಾರಣ ರಾದವರನ್ನು ಹಿಡಿದು ಶಿಕ್ಷಸಿ ಎಂಬ ಬೇಡಿಕೆಗೆ ಪಕ್ಷ ಬೇದ ಮರೆತು  ಜಾತಿ ಮತ ಮರೆತು ಸಿಗುತ್ತಿರುವ  ಬೆಂಬಲ.

ನಮ್ಮ ಆಡಳಿತವೆಂಬ ಯಂತ್ರವೇ  ಭ್ರಷ್ಠಾಚಾರದ ಬೆನ್ನೆಲುಬಾಗಿರುವಾಗ  ಭ್ರಷ್ಟಾಚಾರವನ್ನು ನಿರ್ಮೂಲನೆ  ಮಾಡುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕಾಗಿ ಹೋರಾಟ ಮಾಡುವವರ ಪರಿಸ್ಥಿತಿಯೂ ಅಷ್ಟು ಸುರಕ್ಷಿತವಾಗಿಲ್ಲ.   ದಕ್ಷ ಪ್ರಾಮಾಣಿಕ ನಾಗಿಯೇ ನಾನು ಬದುಕುತ್ತೇನೆ ಎಂದರೆ ಯಾವಾಗಲೂ  ಕಷ್ಟ ತಪ್ಪಿದಲ್ಲ.
ಪ್ರಾಥಮಿಕ ವರದಿಯ ಪ್ರಕಾರ ರವಿಯವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಎಂಥವರು ಆತ್ಮಹತ್ಯೆ ಮಾಡುತ್ತಾರೆ. ಸಾಮಾನ್ಯವಾಗಿ ಪುಕ್ಕಲು ಸ್ವಭಾದವರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುವುದು  ಸಾದ್ಯ. ಯಾವುದೇ ಸಮಸ್ಯೆಗೆ ಪರಿಹಾರವೇ ಇಲ್ಲವೇನೋ ಎಂದಾಗ ಆ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆ ಮಾಡಿಕೊಳ್ಳುವವರಿದ್ದಾರೆ. ಎರಡನೆಯದಾಗಿ ನೋಡುವುದಾದರೆ ಮಾಡ ಬಾರದ ತಪ್ಪನ್ನು ಮಾಡಿ ಆ ತಪ್ಪಿನಿಂದ ಆದ ತೊಂದರೆ ಕಷ್ಟಗಳಿಂದ ತಪ್ಪಿಸಿಕೊಳ್ಳು ಆಗದಾಗ  ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.  ಮನುಷ್ಯ ಎಂದ ಮೇಲೆ  ತಪ್ಪು ಆಗುವುದು ಸಹಜ. ತನ್ನಿಂದ ತಪ್ಪು ಆಗಿದೆ ಎಂದು ಅರಿವಾಗುವುದು  ಎಂದರೆ ಆತ್ಮಸಾಕ್ಷಿ ದೇಹವನ್ನು ಕೇಳುತ್ತದೆ ನೀನು ಮಾಡಿದ್ದು ಸರಿಯಾ? ಎಂದು  ಅಂದರೆ ಮನುಷ್ಯ ಪ್ರಜ್ಞೆ ಇರುವವನು ಯಾವತ್ತೂ ಆತ್ಮಹತ್ಯೆ ಮಾಡುವುದೇ ಇಲ್ಲ.  ಈ ಕಾರಣವನ್ನು ಮುಂದಿಟ್ಟುಕೊಂಡರೆ ರವಿ ಒಬ್ಬ ದಕ್ಷ  ಅಧಿಕಾರಿ ಸಮಾಜ ಕಂಟಕ ಭ್ರಷ್ಟಾಚಾರ ಮಾಡುವವರಿಗೆ ಸಿಂಹ ಸ್ವಪ್ನವಾಗಿದ್ದರು. ಅಲ್ಲದೆ ಅವರು  ತನ್ನ  ಅಧಿಕಾರದ  ಯಾವುದೇ ಹುದ್ದೆಯಲ್ಲಿಯೂ ಅವರು ಭ್ರಷ್ಟರನ್ನು ಸೆದೆ ಬಡೆಯುವುದೆ ಮೂಲ ಮಂತ್ರವಾಗಿಸಿಕೊಂಡಿದ್ದರು.  ಅಲ್ಲದೆ ನೂರಾರು ಭ್ರಷ್ಟರ ವಿರುದ್ಧ ಚಾಟಿ ಬೀಸಿದ್ದರು. ಹೀಗಾಗಿ ಕೆಲವು ಸಂದರ್ಭಗಳಲ್ಲಿ ನಿಷ್ಠುರವಾಗಿ ನಡೆದೇ ನಡೆದುಕೊಳ್ಳುವ ಪರಿಸ್ತಿತಿಯಿಂದಾಗಿ  ಭ್ರಷ್ಟರ ಕೆಂಗಣ್ಣಿಗೆ ಗುರಿಯಾಗಿರುವುದರಲ್ಲಿ ಸಂಶಯವಿಲ್ಲ, ಈ ಎಲ್ಲ ಅಂಶಗಳನ್ನು ಗಮನ ವಿರಿಸಿಕೊಂಡು ಯೋಚಿಸುವುದಾದರೆ  ಇದು ಆತ್ಮಹತ್ಯೆಯಲ್ಲ. ಒಂದು ಪಿತೂರಿ ಎಂದೇ ಹೇಳುವುದು. ಸಾಧ್ಯ.

ಭ್ರಷ್ಟಾಚಾರವು ಹುಟ್ಟಿ ಬೆಳೆದುದೇ ರಾಜಕೀಯದಲ್ಲಿ.   ಸ್ವಾತಂತ್ತ್ಯದ ನಂತರಕ್ಕೆ  ಅಧಿಕಾರ ಬಂದ ನಮ್ಮ ಸರಕಾರಗಳಲ್ಲಿ  ಆಧಿಕಾರ ಮತ್ತು ಅದರಿಂದ ಸಿಗುವ ಸುಖ: ಸಂಪತ್ತು  ಸವಲತ್ತುಗಳು  ತಲೆ ಗೇರಿದ ಪಿತ್ತದಿಂದ ಸಮಾಜ ಸಂಸ್ಕೃತಿ, ಸಂಸ್ಕಾರಗಳನ್ನು ಭದ್ರವಾಗಿ ಹೂತು ಅಧಿಕಾರ ಪರಂಪರೆಯೇ ಸ್ಥಾಪಿಸಿಕೊಂಡಿತು. ಆಧಿಕಾರ ಇದಲ್ಲಿ ಭಟ್ಟಂಗಿಗಳು, ಚೇಲಾಗಳು ,  ಪರಾಕು ಹೇಳುವವರು ಹೀಗೆ ಅಧಿಕಾರಗಳ ವರ್ಗಗಳು ಹುಟ್ಟಿಕೊಂಡು ಅಧಿಕಾರದ ಸುತ್ತಲೂ ಬೇಲಿಯನ್ನು ಹಾಕಿ ತಮ್ಮ ಅಧೀನ ಗೊಳಿಸಿಕೊಂಡವು.  ಹೀಗಾಗಿ ರಾಜಕೀಯದಲ್ಲಿ  ಇದ್ದು ತಾವು  ಐಷಾರಮಿ ಜೀವನ ಮಾಡಲು ಸಾಧ್ಯವೆನ್ನುವ ವರ್ಗ ತನ್ನ ಆಧಿಕಾರವನ್ನು ಉಳಿಸಿಕೊಳ್ಳಲು ಈ  ಅಧಿಕಾರಕ್ಕೆ ಸಂಬಂಧಿಸಿದ ಪರಿವಾರಗಳನ್ನು ಸಾಕಲೇ ಬೇಕಾಯಿತು.   ಹಾಗಾಗಿ  ಅಧಿಕಾರದಲ್ಲಿರುವಾಗ ತನ್ನ ಪರಿವಾರ ಏನು ಹೇಳುತ್ತದೆ ಅವರ ಬೇಕು ಬೇಡಗಳೇನು ಎಂಬುದನ್ನು ಪೂರೈಸಲು ಅಧಿಕಾರದ ಚೌಕಟ್ಟನ್ನು ಮುರಿದು ಅಡ್ಡದಾರಿಯಲ್ಲಿ  ಸಾಗಬೇಕಾಗಿ ಬಂದಾಗ  ಅಧಿಕಾರದಲ್ಲಿರುವವರಿಗೂ ಪಿಕಲಾಟ ( ಇದಕ್ಕೆ ಉದಾಹರಣೆ ಹಿಂದಿನ ಬಿ.ಜೆ.ಪಿ. ಸರಕಾರ)  ಭ್ರಷ್ಟರ ವಿರುದ್ಧ   ದ್ವನಿ ಎತ್ತುವವರಿಗೂ ಅಪಾಯ ತಪ್ಪಿದಲ್ಲ.
ಇಂತದ ಸಂದರ್ಭದಲ್ಲಿ ತನ್ನ ಆಧಿಕಾರಕ್ಕೆ ಒಳಪಟ್ಟಿರುವವವರಿಂದ  ನ್ಯಾಯ ಸಿಗುವುದೆಂಬ ಭರವಸೆ ಇಡುವಂತಿಲ್ಲ. ಹಾಗಾಗಿ ಸಿ.ಬಿ.ಐ. ತನಿಕೆಯೇ ಆಗ;ಲಿ ಎಂದು ಎಲ್ಲರೂ ಬಯಸುವುದು.

ಡಿ. ಕೆ. ರವಿಯವರು ಮರಣ ಹೊಂದಿದರು ಎನ್ನುವುದಕ್ಕಿಂತಲೂ  ಒಬ್ಬ ಸಿಪಾಯಿ ಜೀವ ಹಂಗು ತೊರೆದು ದೇಶಕ್ಕೆ ಹುತಾತ್ಮರಾಗು ವಂತೆ ಹುತಾತ್ಮರಾದರು ಎಂದು ಹೇಳಿ ಗೌರವಿಸುವುದೇ ಸರಿ.  ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ಸ್  ಹಾಗೂ ಸಿದ್ದರಾಮಯ್ಯನವರ ನಡವಳಿಕೆಯೂ ಈ ದಿಸೆಯಲ್ಲಿ ಸಂಶಯಾಸ್ಸದವಾಗಿಯೇ ಕಾಣುತ್ತದೆ.  ಅವರು ಯಾರನ್ನೋ ರಕ್ಷಣೆ ಮಾಡುವ ಸಲುವಾಗಿ  ಹೆಚ್ಚಿನ ಗಮನ ಹರಿಸಿ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. 

ಒಬ್ಬ ಪ್ರಾಮಾಣಿಕ ವ್ಯಕ್ತಿ ಅಪರಂಜಿಗೆ ಸಮ. ಅಂತಹ ವ್ಯಕ್ತಿಯ ಮೇಲೆ ಆದ ಅನ್ಯಾಯವನ್ನು  ಯಾರೂ ಸಹಿಸುವುದಿಲ್ಲ ಸಹಿಸಲೂ ಬಾರದು. ಅವರ ಸಾವಿಗೆ ಕಾರಣ ಏನು? ಸಾವಿಗೆ ಕಾರಣರಾದವರನ್ನು ಶಿಕ್ಷಿಸದೇ  ಬಿಡಬಾರದು.  ಸಿ. ಬಿ. ಐ. ತನಿಕೆ ಕಾರ್ಯ ವಿಳಂಬವಿಲ್ಲದೆ ಸಾಗುವಂತೆ ಸಹಕರಿಸಿ   ಸತ್ಯವನ್ನು ಬಯಲಿಗೆಳೆಯುವುದು ಅಧಿಕಾರ ಸೂತ್ರ ಹಿಡಿದವರ ಮೊದಲ ಕರ್ತವ್ಯ  ಎಂಬುದನ್ನು ನೆನಪಿಸಕೊಳ್ಳ ಬೇಕಾದ ಅಗತ್ಯವಿದೆ,

ಗುರುವಾರ, ಮಾರ್ಚ್ 5, 2015

ಮನು಼ಷ್ಯ ಮತ್ತು ಶರೀರ

ಮಾನವನ ಶತ್ರು   ನಾನು.......?

ನಾನು ಒಬ್ಬ ರಾಜಕಾರಣಿ, ನಾನು ಒಬ್ಬ ಶಿಕ್ಷಕ, ನಾನು ಒಬ್ಬ ಪಂಡಿತ,  ನಾನು ಒಬ್ಬ ಕಲಾವಿದ, ನಾನು ಒಬ್ಬ ಸಭ್ಯ ಗೃಹಸ್ಥ, ನಾನೊಬ್ಬ ಧನಿಕ ಹೀಗೆ ನಾ ನಾ ಕಾರಣಗಳಿಂದ ಮನುಷ್ಯನಲ್ಲಿ  'ಅಹಂ` ತುಂಬಿಕೊಂಡಿರುತ್ತದೆ.  ಈ ಅಹಂಕಾರ ಸರ್ವತ್ರ.  ಯಾರನ್ನೂ ಬಿಟ್ಟಿರುವುದಿಲ್ಲ.  'ನಾನು' ಎಂದು ತನ್ನನ್ನು ಪ್ರತಿನಿಧಿಸಿಕೊಳ್ಳುತ್ತಿರುವ ವ್ಯಕ್ತಿತ್ವವು ಆ ವ್ಯಕ್ತಿಯ ಭೌತ ಶರೀರಕ್ಕೆ ಸಂಬಂಧಪಟ್ಟದ್ದು.

ಅಂದುಕೊಳ್ಳುವಾಗ ಪ್ರಪಂಚದಲ್ಲಿ ನನ್ನಂತೆ ಯಾರೂ ಇಲ್ಲ ಎಂಬ ಭಾವನೆ ಇಂಥವರಲ್ಲಿ ಬೆಳೆದಿದ್ದು ಅವರ ಮಾತು ನಡವಳಿಕೆಗಳಲ್ಲಿ ಪ್ರಕಟಗೊಳ್ಳುತ್ತಿರುತ್ತದೆ. ಹಾಗಾಗಿ ಇವರನ್ನು ಅಹಂಕಾರಿ ಎಂದು ತಿಳಿದವರು ಗುರುತಿಸುತ್ತಾರೆ.  ಈ ರೀತಿಯ ಸ್ವಭಾವದವರಿಗೆ ಯಾವಾಗಲೂ ತನ್ನ ಸುಖಕ್ಕೆ  ಬೇಕಾದುದನ್ನು ಹೊಂದುವ ಅವರಸರದಲ್ಲಿ ಇವರು ಬೇರೆಯವರಿಗೆ ಕೆಡುಕಾಗುತ್ತದೋ ಏನೋ ಎಂಬ ಚಿಂತೆಯನ್ನು ಮಾಡದೆ, ಏನೆಲ್ಲಾ ಬೇಕು ಅದನ್ನೆಲ್ಲಾ ಮಾಡುತ್ತಲೇ ಇರುತ್ತಾರೆ, ಇವರಿಗೆ  ತನ್ನ  ತಂದೆ - ತಾಯಿ, ಅಣ್ಣ ತಮ್ಮ ಅಕ್ಕ ತಂಗಿ, ಬಂದು ಬಳಗ ಸ್ನೇಹಿತರು ಈ ಮೊದಲಾದ ಸಂಬಂಧಗಳಿಗೆ ಯಾವ ಬೆಲೆಯೂ ಕೊಡುವವರಲ್ಲ. ಯಾಕೆಂದರೆ ಇವರು ಎಲ್ಲ ಚಂತನೆಗಳಲ್ಲಿ ಸ್ವಾರ್ಥ ತುಂಬಿಕೊಂಡಿರುತ್ತದೆ. ಇವೆಲ್ಲಕ್ಕೂ ಕಾರಣ ಅಹಂಕಾರ.

ಈ ರೀತಿ ಅಹಂಕಾರ ಬೆಳೆಯಲು  ಅವರಲ್ಲಿರುವ ಅಜ್ಞಾನವೇ ಕಾರಣ. ತಾನು ಏನೇ ಸಾಧನೆ ಮಾಡಿರಬಹುದು ಎಲ್ಲರಿಗಿಂತಲೂ ಶ್ರೇಷ್ಟವಾದ ವಿದ್ವತ್ ಅವರಲ್ಲಿ ಇರಬಹುದು. ಅವರು ಸಂಪಾದಿಸಿದ ಐಶ್ವರ್ಯ ಅವರಲ್ಲಿ ಇರಬಹುದು, ಅವರಲ್ಲಿ ಕಲಾವಿದನ ಪ್ರತಿಭೆ ಇರಬಹುದು. ಆದರೆ ಅವನಲ್ಲಿರ ಬೇಕಾದ ಮಾನವನೆನಿಸಲು ಇರಬೇಕಾದ ಆತ್ಮಜ್ಞಾನ ಇಲ್ಲದೇ ಇದ್ದರೆ  ಏನೂ ಪ್ರಯೋಜನವಿಲ್ಲ.

ಮನುಷ್ಯನೆಂದರೆ  ಯಾರು? ಆತ್ಮ ಎಂದರೆ ಏನು?  ನಾವು ವಿಶ್ವದಲ್ಲಿ ಒಂದು ಪ್ರಾಣಿ (ಪ್ರಾಣವುಳ್ಳದೆಲ್ಲ ಪ್ರಾಣಿ)  ಆದರೆ ಪ್ರಾಣಿಗಳಲ್ಲಿ ವಿಶೇಷ ವಾಗಿ ವರ್ಗೀಕರಿಸಲ್ಪಟ್ಟ ಪ್ರಾಣಿ. ಅದಕ್ಕೆ ಕಾರಣ ಇದೆ.  ಪ್ರಾಣಿಗಳಿಗೆಲ್ಲ ಇರುವಂತೆ ಮನುಷ್ಯನಿಗೂ ಹಸಿವು, ಬಾಯಾರಿಕೆ ನಿದ್ರೆ ಮೈಥುನ ಎಲ್ಲವೂ ಇದೆ. ಆದರೆ ಪ್ರಾಣಿಗಳಂತೆ ಮನುಷ್ಯ ಯಾವಾಗ ಬೇಕೆಂದರೂ, ಆಥವಾ ಸಿಕ್ಕಿದ್ದನ್ನು ತಿನ್ನವುದಿಲ್ಲ  ಖುಷಿ ಬಂದಹಾಗೆ ಬದುಕುವುದಿಲ್ಲ.  ಅವನ ಬದುಕು ನಿಯಂತ್ರಕ್ಕೆ ಒಳಪಟ್ಟಿರುತ್ತದೆ.  ಒಂದು ರೀತಿ ನೀತಿ, ಆಚಾರ ವಿಚಾರ,  ನಂಭಿಕೆ ಈ ಎಲ್ಲವನ್ನೂ ಒಳಗೊಂಡು ಒಂದು ನಿಯಂತ್ರಣವನ್ನು ಹೊಂದಿರುವ ಬದುಕು ಮಾನವನದು. ಈ ನಿಯಂತ್ರಣವನ್ನು ತೊರೆದು ಬದುಕನ್ನು ಅನುಭವಿಸುವುದಕ್ಕೂ  ಇವರಿಗೆ ಆಗುವುದೇ ಇಲ್ಲ.  ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮ್ಮನ್ನು ನಿಯಂತ್ರಣಕ್ಕೆ ಒಳಪಡಿಸುವುದು  ಮತ್ತು ಒಳಪಡಿಸಿದ್ದು  ಯಾರು?  ಸಾಮಾನ್ಯವಾದ ಉತ್ತರ ನಮ್ಮ ಧರ್ಮದಿಂದ ಒಳಗೊಂಡ ಆಚಾರ ವಿಚಾರ.  ಒಂದು ವಸ್ತುವಿನ್ನು ಗುರುತಿಸಲ್ಪಡುವುದು ಅದರ ಧರ್ಮದಿಂದ.   ಅದು ಮನುಷ್ಯನಿಗೂ ಅನ್ವಯಿಸುತ್ತದೆ, ಇತರ ಪ್ರಾಣಿ, ಪಕ್ಷಿಗಳಿಗೂ ಅನ್ವಯಿಸುತ್ತದೆ.  ಸೂರ್ಯ ಚಂದ್ರರಿಗೂ ಅನ್ವಯಿಸುತ್ತೆ ಒಟ್ಟಿನಲ್ಲಿ ಹೇಳುವುದಾದರೆ ಅಣುಗಳನ್ನೂ ಗುರುತಿಸುವುದು ಅದರ ಧರ್ಮದಿಂದಲೇ.   ಆಂತಹ ಒಂದು ಗುಣ ಮನುಷ್ಯನನ್ನೂ ಪ್ರಾಣಿಗಳಿಂದ ವರ್ಗೀಕರಿಸಿ ಮಾನವ ಎಂದು ಹೇಳಿಕೊಳ್ಳಲು ಕಾರಣವಾಯಿತು.  ಅದಕ್ಕೆ ಕಾರಣ  ಜೀವಿಗಳಲ್ಲಿ ಶರೀರ ಮತ್ತು ಅದರಲ್ಲಿರುವ ಜೀವ

ಅದೇ ಧರ್ಮ ಆಚರಣೆಯನ್ನು ಒಪ್ಪಿಕೊಂಡಿದ್ದರೂ ಕೆಲವು ಸಂದರ್ಭದಲ್ಲಿ ಆಧರ್ಮದಲ್ಲಿ ಇಲ್ಲದೇ ಇರುವುದನ್ನು  ಆಚರಿಸುವುದೂ ಇದೆ, ಯಾವುದೇ ಧರ್ಮದಲ್ಲಿ ಹಿಂಸೆಯನ್ನು ಬೋಧಿಸುವುದೇ ಇಲ್ಲ. ಒಂದು ವೇಳೆ ಬೋಧಿಸಿದರೆ ಅದು ಅಧರ್ಮ.  ಹೀಗೆ ಒಬ್ಬ ವ್ಯಕ್ತಿ ತನ್ನ ಅನುಕೂಲಕ್ಕೆ ಏನು ಬೇಕು ಅದನ್ನೆಲ್ಲಾ ಆಚರಿಸುವುವಾಗ ನ್ಯಾಯ ನೀತಿ ಸತ್ಯ ಧರ್ಮ  ಆಚಾರ ವಿಚಾರ ಎಲ್ಲವನ್ನೂ ಗಾಳಿಗೆ ತೂರುವುದೂ ಇದೆ. ಇದಕ್ಕೆ ಕಾರಣ ಅಹಂಕಾರ ಅಂದರೆ ಶರೀರವೇ ಪ್ರಧಾನವೆಂಬ ನಂಬಿಕೆಯಿಂದ ಬದುಕುವ ಮನುಷ್ಯ,

ಆದರೆ ನಿಜವಾದ ಮನುಷ್ಯನ ಸ್ವರೂಪ ಅದಲ್ಲ.  ಶರೀರದಿಂದ ಪ್ರಾಣಿಯಾಗಿರುವ ಜೀವಿಯಲ್ಲಿರುವ ಪ್ರಾಣ, ಅಥವಾ ಜೀವ ಅಥವಾ ಆತ್ಮದಲ್ಲಿ ಇರುವ ಸತ್ಯ ಧರ್ಮವೇ ಅವನ ನಿಜವಾದ ಸ್ವರೂಪ. ಅಂತವನಲ್ಲಿ ನಾನು ಎಂಬುದು ಇರುವುದೇ ಇಲ್ಲ.  ಶರೀರ ನಾನು ಎನ್ನಲು ಅದರಲ್ಲಿರುವ  ಜೀವದ ಸಹಾಯ ಬೇಕಾಯಿತು.  ಜೀವ ಇಲ್ಲದೇ ಇದ್ದರೆ  ಆ ಶರೀರ ನಾನು ಎನ್ನುವುದು ಸಾಧ್ವವೇ ಇಲ್ಲ.  ಆದುದರಿಂದ ನಾನು ಎನ್ನುವುದು ಮನುಷ್ಯನೊಂದಿಗೆ ಹುಟ್ಟಿ ಮನುಷ್ಯನೊಂದಿಗೆ ಸಾಯುತ್ತದೆ. ಅದು ಕೇವಲ ಶರೀರ ದ್ಯೋಕವಾದ ಶಬ್ದ.  ಆದರೆ ಅದೇ ಶರೀರ ನಾನು ಮತ್ತು ಪ್ರಾಣ ಸೇರಿಯೇ ಈ ಶರೀರದ ಅಸ್ತಿತ್ವವನ್ನು ಅರಿತುಕೊಂಡಾಗ ಅವನ ಇಡೀ ಬದುಕೇ  ನಿಯಮ ಬದ್ಧವಾಗಿರುತ್ತದೆ.

ಈ ನಾವು ಅನ್ನುವ ಶಬ್ಧದ ವಿಸ್ತಾರವನ್ನೂ ನೋಡಿ. ನಾವು  ಅಂದಕೂಡಲೇ ತಂದೆ ತಾಯಿ ಅಜ್ಜ ಅಜ್ಜಿ ಹೀಗೆ ಹರಿದು ಬಂದ ಪರಂಪರೆಯನ್ನೇ ಬೆಸೆಯುವುದರೊಂದಿಗೆ ಮಕ್ಕಳು ಮರಿಗಳೊಂದಿಗೆ ನಿರಂತರವಾಗಿ ಹರಿಯುತ್ತದೆ. ಸಂಬಂಧಗಳನ್ನು ಬೆಳೆಸುತ್ತದೆ.  ನಾವು ಎಂದಾಗ ಇವರು ನಮ್ಮ ತಂದೆ - ತಾಯಿ ಇವರಿಂದಾಗಿ ನಾನು ಈ ಲೋಕಕ್ಕೆ ಬರುವುದು ಸಾಧ್ಯವಾಯಿತು ಎಂಬ ಅರಿವಿನಿಂದ ಕೃತಜ್ಞತೆ, ಗೌರವ, ಪ್ರೀತಿ. ವಿಶ್ವಾಸ  ಭಾವನೆಯಿಂದ ಸಂಬಂಧಗಳು ಇನ್ನಷ್ಟು ಗಟ್ಟಿಯಾಯಿತು.  ಅಣ್ಣ ತಮ್ಮ ತಂಗಿ ಅಕ್ಕ ಎಂಬ ಭಾವನೆಗಳಲ್ಲಿ ಪ್ರೀತಿ ವಿಶ್ವಾಸ ಗೌರವಗಳು ಉಂಟಾಗಿ ತಪ್ಪು ಹಾಗೂ ಕೆಡುಕನ್ನು ಮಾಡುವುದು ಸಾಧ್ಯವೇ ಇಲ್ಲದೆ ಬದುಕು ಹಸನಾಗುವುದು.  ಈ ಸಂಬಂಧವೂ ನೆರೆ ಕರೆಯಲ್ಲೂ  ಪರಸ್ತ್ರೀಯರಲ್ಲಿಯೂ ಬೆಳೆದು ತಪ್ಪು ಮಾಡಬೇಕಾದರೆ  ನೂರಾರು ಸಲ ಯೋಚಿಸುವಂತಾಗುವುದು. ಒಂದು ವೇಳೆ ತಪ್ಪು ಮಾಡಿದರೂ  ಒಳಗಿನ ಮನುಷ್ಯನ ಪ್ರಶ್ನೆಗಳಿಗೆ ಉತ್ತರ ಕೊಡಲಾರದೇ  ಸಹಿಸಲಾರದ ನೋವು ಅನುಭವಿಸುವುದು ಮತ್ತು ಈ ಮೂಲಕ ತನ್ನನ್ನು ತಾನು ತಿದ್ದಿಕೊಂಡು ಬದುಕುವುದೂ ಸಾದ್ಯ. ಇದು ನಿಜವಾದ ಮನುಷ್ಯನ ಲಕ್ಷಣ. ಬದುಕಿನ ಸಿದ್ದಾಂತ.

ಭಾನುವಾರ, ಮಾರ್ಚ್ 1, 2015

ಮಾತೃಭಾಷೆ ಮನುಷ್ಯನ ಉಸಿರು.......

ಮಾತೃಭಾಷೆ ಮನುಷ್ಯನ ಉಸಿರು

ವಿಶ್ವದಾದ್ಯಂತ ಸುಮಾರು ೬೦೦೦ ಬಾಷೆಗಳಿವೆ. ವಿಶ್ವದಾದ್ಯಂತ ವಿವಿಧ ಸಮುದಾಯಗ ಬಹುಭಾಷಾ ವೈಶಿಷ್ಟ್ಯವನ್ನು ಉಳಿಸುವ ಹಾಗೂ ಬೆಳೆಸುವ ಉದ್ದೇಶದಿಂದ ವಿಶ್ವದ ಎಲ್ಲಾ ಭಾಷೆಗಳನ್ನು ಸಂರಕ್ಷಿಸುವ ಸಲುವಾಗಿ ಫೆಬ್ರವರಿ ೨೧ ರಂದು ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ,  ವಿಶ್ವಸಂಸ್ಥೆ ಹಾಗೂ ಯುನೆಸ್ಕೋ ಜೊತೆಯಾಗಿ ವಿಶ್ವಜ ಜನರೆಲ್ಲಾ ಮಾತೃಭಾಷೆದಿನವನ್ನಾಗಿ ಆಚರಿಸುವಂತೆ ೧೯೯೯ ರಲ್ಲಿಯೇ ಕರೆನೀಡಿತ್ತು,. ಅಲ್ಲದೆ ವಿಶ್ವಸಂಸ್ಥೆಯು ೨೦೦೮ನೇ ವರ್ಷವನ್ನು  'ವಿಶ್ವ ಭಾಷೆಗಳ ವರ್ಷ` ಎಂದೂ ಘೋಷಿಸಿತ್ತು.

ಮನುಷ್ಯನ ಹುಟ್ಟು ಎಷ್ಟು ಸಹಜವೋ ಮಾತೃಭಾಷೆಯೂ ಅಷ್ಟೇ ಸಹಜ.  ಮಾತೃಭಾಷೆ ಎಂದರೆ ನಾವು ಓದುವ - ಬರಿಯುವ - ಹಾಗೂ ಉದ್ಯೋಗಕ್ಕಾಗಿ - ಸಂಪಾದನೆಗಾಗಿ ಕಲಿಯುವ ಭಾಷೆ ಎಂಬ ಭ್ರಮೆ ಇದೆ.ಹಾಗಾಗಿ ನಾವು ಕನ್ನಡ ಮಾತೃ ಭಾಷೆಯಾದರೂ ಕಲಿಯುವುದು ಮಾತ್ರ ಇಂಗ್ಲಿಷ್ ಭಾಷೆಯಲ್ಲಿಯೇ.  ನಮ್ಮ ವಿದ್ಯಾಭ್ಯಾಸ ಇಂಗ್ಲಿಷಿನಲ್ಲಿಯೇ ಆದರೆ ಉತ್ತಮ ಉದ್ಯೋಗ ಸಿಗುವುದು. ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನ ದೊರಕುವುದು ಎಂಬ ಚಿಂತನೆ ಹಾಗು ನಂಬಿಕೆ ಬೆಳೆಯುತ್ತಿದೆ. ಹಾಗಾಗಿ ನಾವು ಮಾತೃಭಾಷೆಯನ್ನು ಉಪೇಕ್ಷೇ ಮಾಡುತ್ತೇವೆ.   ಕೆಲವರಿಗೆ ನಮ್ಮನ್ನು ನಾವು ಗುರುತಿಸಿಕೊಳ್ಳಲು ಇಂಗ್ಲಿಷ್ ಭಾಷೆಯೇ ನಮ್ಮ ವಿದ್ಯೆ ಹಾಗು ಬುದ್ಧಿವಂತಿಕೆಯ ಲಕ್ಷಣ ಎಂಬ ನಂಬಿಕೆಯಿಂದ  ಮಾತೃಭಾಷೆಯನ್ನು ಅಷ್ಟಾಗಿ ಬಳಸುವುದಿಲ್ಲ.  ಆದರೆ ಮಾತೃ ಭಾಷೆಯೇ ನಿಜವಾಗಿಯೂ ಅರ್ಥವಾಗುವ ಭಾಷೆ.
ಭಾಷೆ ಎಂದರೆ ಹೃದಯದಲ್ಲಿರುವ ಸ್ಪಂಧನ. ಅದು ತಾಯಿ ಮತ್ತು ಮಗುವಿನ ಬಂಧನ.  ಹಾಗಾಗಿ ಮಾತೃಭಾಷೆ ಎಂದರೆ ನಾವು ಮಾತುಗಳನ್ನು ಶಬ್ದಗಳ ರೂಪದಲ್ಲಿ  ವ್ಯಕ್ತಗೊಳಿಸುವದರೊಂದಿಗೆ ಅದು ಹೃದಯದಲ್ಲಿನ ಸ್ಫಂಧನವನ್ನು ನೇರವಾಗಿ ಅದೇ ಭಾಷೆ ಮಾತನಾಡುವ ವ್ಯಕ್ತಿಯೊಂದಗೆ ಬೆಸೆದುಕೊಳ್ಳುತ್ತದೆ. ಮಾತೃಭಾಷೆ ಎಂದರೆ ಹುಟ್ಟಿನಿಂದ ಪರಂಪರೆಯಲ್ಲಿ ಬಂದ ಭಾಷೆ.  ಹುಟ್ಟಿಸಿದ ತಂದೆ - ತಾಯಿಯನ್ನು ಹೇಗೆ ಬದಲಾಯಿಸುವುದಾಗಲೀ ಅವರ ಜೊತೆಗಿನ ನೈಜ  ಸಂಬಂಧವನ್ನು ಹೇಗೆ ಅಲ್ಲಗೆಳೆಯಲು ಸಾಧ್ಯವಿಲ್ಲವೋ ಹಾಗೆ ಮಾತೃ ಭಾಷೆಯನ್ನೂ ತೊರೆಯುವುದಾಗಲೀ ಬದಲಾಯಿಸುವುದಾಗಲೀ ಇನ್ನೊಂದನ್ನು ಸ್ವೀಕರಿಸುವುದಾಗಲೇ ಅಥವಾ ಮೇಲ್ಮಟ್ಟದ ಭಾಷೆ,, ಕೀಳ್ಮಟ್ಟದ ಭಾಷೆ ಎಂದಾಗಲಿ ಇಲ್ಲ.  ಮಾತೃ ಭಾಷೆ  ಮನುಷ್ಯನ ಹೃದಯದ ಭಾಷೆ.  ತಾಯಿ ತಂದೆಯಿಂದ  ಹರಿದು ಬರುವ ಭಾವನಾತ್ಮಕ ಸಂವಹನವೇ ಆ ವ್ಯಕ್ತಿಯ ಮಾತೃಭಾಷೆ. 
ಭಾಷೆ ಎಂದರೆ ಜೀವಿಯೊಂದು ಪ್ರಕಟಿಸವು ಅದರ ಭಾವನೆ. ಅದು ಆ ಜೀವಿಗೆ ಅನುಗುಣವಾಗಿಯೇ ಇರುತ್ತದೆ.  ನನಗೆ ನೀರು ಬೇಕು ಎಂದು  ಶಬ್ದಗಳಲ್ಲಿ ಹೇಳುವುದು ಹಾಗೂ ಸಂಜ್ಞೆಯಲ್ಲಿ ಹೇಳಿದಾಗ ಅವನ ಹೃದಯದ ಭಾವನೆಯಾದ  ಬಾಯಾರಿಕೆ ಎಂಬ ಭಾವನೆ ಪ್ರಕಟವಾಗುವುದು. ಹಾಗಾಗಿ ಇಲ್ಲಿ  ಭಾಷೆಯ ಅರ್ಥ ''ಬಾಯಾರಿಕೆ ತಣಿಸಲು ನೀರು ಬೇಕು`` ಅದು  ಕೇಳುಗನಿಗೆ ಅರ್ಥವಾಗುವ ಭಾಷೆಯಲ್ಲಿಯೇ  ಇರಬೇಕು.  ಕೇಳುಗನ ಭಷೆ ಬೇರೆಯಾಗಿ ಅವನಿಗೆ ಬಾಯಾರಿದವ ಹೇಳುವ ಮಾತು ಅರ್ಥವಾಗದಿದ್ದರೆ,  ಅವನು ಅದನ್ನು ಪ್ರಕಟಿಸುವುದು ಸಂಜ್ಞೆಯ ಮೂಲಕವೇ. ಹಾಗಾಗಿ ಭಾಷೆ ಎನ್ನುವುದು  ಭಾವನೆಗಳ  ಪ್ರಕಟವೇ ಹೊರತು ಶಬ್ದ  ಯಾವುದು ಭಾಷೆ ಯಾವುದು ಮುಖ್ಯವಲ್ಲ. 

ಹಾಗಾಗಿ ಆರ್ಥವಾಗದ  ಭಾಷೆಯನ್ನು ಅರ್ಥ ಮಾಡಿಸಿಕೊಂಡು  ಸಂವಹಿಸುವ ರೀತಿಯೇ ಮಾತೃಭಾಷೆಯನ್ನು ಉಪೇಕ್ಷಿಸಿ ಇತರ ಭಾಷೆಯನ್ನು ಬಳಸಿ ಸಂವಹಿಸುವುದು.  ಈ  ಕ್ರಿಯೆಯಲ್ಲಿ ಹೇಳಿದ ಅಥವಾ ಕೇಳಿದ ಯಾಂತ್ರಿಕವಾಗಿಯೇ ಕೆಲಸ ಮಾಡುತ್ತದೆ ವಿನಹಃ ಹೃದಯುವನ್ನು ತಲುಪುದಿಲ್ಲ.  ಹಾಗಾಗಿಯೇ ತಂದೆ - ತಾಯಿ - ಮಕ್ಕಳು - ಅಣ್ಣ - ತಂಗಿ - ಬಂದು ಬಳಗ ಎಲ್ಲವೂ  ಯಾಂತ್ರಿಕವಾಗಿಯೇ ಇರುತ್ತದೆಯೇ ವಿನಹ: ಜೀವನದ ಮೂಲ ತತ್ವವಾದ ಪ್ರೀತಿ, ವಿಶ್ವಾಸ, ನಂಬಿಕೆಗಳ ತಳಹದಿಯೇ ಮರೆಯಾಗಿ ಜೀವನದಲ್ಲಿ  ಕೊಡು - ಕೊಳ್ಳು ಎನ್ನುವ ಭಾಚನೆ ಬೆಳೆಯುತ್ತದೆ.  ಈಗಿನ ದಿನಗಳಲ್ಲಿ ಕಾಣುವ ಎಲ್ಲಾ ಅನರ್ಥಕ್ಕೆ ಇದೇ ಮೂಲ ಕಾರಣ.  ಎಲ್ಲದರಲ್ಲೂ ಲೆಕ್ಕಾಚಾರ ತಲೆ ಎತ್ತಿ ಹೃದಯಾತ್ಮಕ ಸಂಬಂಧವೇ ಉಳಿಯದೇ ಜೀವನವೇ ಶೂನ್ಯ ಎಂಬ ಭಾವನೆಯೇ  ಮನುಷ್ಯನಲ್ಲಿ ಬೆಳೆಯುತ್ತದೆ.

ಪ್ರಕೃತಿಯಲ್ಲಿ ಸಹಜವಾಗಿ ಇರುವ ಒಳ್ಳೆಯದು ಕೆಟ್ಟದುಗಳ ನಡುವೆ ಬದುಕುವ  ಮನುಷ್ಯ ತಾನು ಕೆಟ್ಟದನ್ನು ಮಾಡುವಾಗ ಅವನ ಹೃದಯದಲ್ಲಿ ತಂದೆ ತಾಯಿ ಬಂದು ಬಳಗದವರೊಂದಿಗೆ ಭಾವನಾತ್ಮಕ ಸಂಬಂಧ  ಬೆಳೆಸಿಕೊಂಡಿದ್ದರೆ  ಅವನಲ್ಲಿ ಕೆಲವು ಕ್ಷಣವಾದರೂ ನಾನು ಈ ತಪ್ಪು ಕೆಲಸಮಾಡಿದರೆ ನನ್ನ ಪ್ರೀತಿಯ ತಂದೆ - ತಾಯಿಗೆ - ಬಂದು ಬಳಗಕ್ಕೆ ಹೇಗೆ ಮುಖ ತೋರಿಸಲಿ ಎಂಬ ಭಾವನೆಯು ಅವನನ್ನು ಎಚ್ಚರಿಸುತ್ತದೆ. ಹಾಗಾಗಿ ಮಾತೃಭಾಷೆಯೇ  ಅವನ ಹೃದಯದಲ್ಲಿ ಬೆಸೆದು ಕೊಂಡಿದ್ದರೆ ಯಾವಾಗಲೂ ಅವನ  ಭಾವನೆಯನ್ನು ನಿಯಂತ್ರಿಸುತ್ತದೆ.

ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ನೀಡಬೇಕು ಎಂಬುದೂ  ಚರ್ಚೆಗೆ ಒಳಪಡುವ ವಿಷಯವೇ ಅಲ್ಲ.  ಕೋರ್ಟುಗಳೇ ಆಗಲೀ ಯಾವುದೇ ಸರಕಾರವೇ ಅಗಲಿ ಅದನ್ನು ಪ್ರಶ್ನಿಸುವದೂ ಅರ್ಥವಿಲ್ಲದ ಮಾತು.  ನಮ್ಮಲ್ಲಿ ಇಂದು ಇಂಗ್ಲಿಷ್  ಮಾದ್ಯಮದ ಶಾಲೆಗಳಿವೆ.  ಇಂಗ್ಲಿಷ್ ಮಾದ್ಯಮದ ಶಾಲೆಗಳನ್ನು ತೆರೆಯಲು ಅನುಮತಿ ನೀಡುವ ಬಗ್ಗೆ ಹಲವಾರು ತಕರಾರುಗಳ ನಡುವೆಯೂ  ಕೆಲವರು ನ್ಯಾಯಾಲದ ಕಟ್ಟೆ ಹತ್ತಿದವರೂ  ಇದ್ದಾರೆ.  ಇವೆರಲ್ಲೂ   ಜನರಿಗೆ ಒಳ್ಳೆಯದು ಮಾಡುವ  ಹೆಸರಿನಲ್ಲಿ ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿರುವುದು ಎಲ್ಲರಿಗೂ ತಿಳಿದಿರುವ  ಸತ್ಯ.  ಸ್ವಾತಂತ್ರೈ ಬಂದು ೬೮ ವರ್ಷಗಳಾದರೂ ನಮ್ಮ ಮಕ್ಕಳು ಮಾತೃ ಭಾಷಯಲ್ಲಿಯೇ ಓದಲಿ ಎಂದು ಹೇಳುವ  ಯಾವ ಸರಕಾರವೂ ಇಲ್ಲ.  ಹಾಗೆಂದು ಇಂಗ್ಲಿಷ್ ಆಗಲಿ ಇನ್ನಿತರ ಭಾಷೆಯನ್ನು ನಾವು ಓದಲೇ ಬಾರದು ಎಂದು ಅಲ್ಲ.  ಪ್ರಾಥಮಿಕ ಹಂತದಲ್ಲಿ  (೭ನೇ ತರಗತಿಯ ವರೆಗೆ) ಕನ್ನಡದಲ್ಲಿಯೇ ಓದಲಿ.  ಈ ಹಂತದಲ್ಲಿ  ಭಾಷೆಯನ್ನೇ ಅದರ ವ್ಯಾಕರಣಕ್ಕೇ ಒತ್ತು ಕೊಟ್ಟು ಕಲಿಯಲಿ.  ಆಮೇಲಿನ ವಿದ್ಯೆ ಪ್ರತಿಯೊಬ್ಬನೂ ಅವನ ಆಯ್ಕೆಯಂತೆ ಓದುವುದು ಉತ್ತಮ.  ಇದರಿಂದಾಗಿ ಕನ್ನಡವೂ ಸರಿಯಾಗಿ ಬರುವುದು.  ಇಲ್ಲವಾದರೆ ಅತ್ತ  ಕನ್ನಡವೂ ಸರಿಯಾಗಿ ಬರದೆ ಇತ್ತು ಇಂಗ್ಲಿಷೂ ಸರಿಯಾಗಿ ಬರದೇ ಮನುಷ್ಯನ ಬದುಕೇ ಅತಂತ್ರವಾಗುವುದು.