ಮಂಗಳವಾರ, ಮಾರ್ಚ್ 24, 2015

ಶಿಕ್ಷಣ ವ್ಯವಸ್ಥೆಯೇ ಅರ್ಥವನ್ನು ಕಳೆದುಕೊಳ್ಳುತ್ತಿದೆ.......?

ಇಂದಿನ ದಿನಗಳಲ್ಲಿ ಶಿಕ್ಷಣ ಎನ್ನುವುದು ಕೇವಲ ಮನುಷ್ಯನಿಗೆ ಹಣ ಸಂಪಾದನೆಗೆ ಬೇಕಾದ ಒಂದು ವ್ಯವಸ್ಥೆಯಾಗಿದೆ..  ಅಲ್ಲದೆ ವಿದ್ಯೆಯು ಮಾರಾಟಕ್ಕೆ ಸಿಗುವ ಸೊತ್ತು ಆಗಿದೆ.  ಮಕ್ಕಳ ಪೋಷಕರು ಮಕ್ಕಳ ವಿದ್ಯೆಗೆ ತೊಡಗಿಸುವ ಹಣ ಒಂದು ಬಂಡವಾಳ.  ಶಿಕ್ಷಣದಲ್ಲಿ  ಉತ್ತಮ ಗುಣಮಟ್ಟದ ಶಿಕ್ಷಣ ಎಂದೆಲ್ಲಾ ವರ್ಗಿಕರಣ ವಾಗಿದೆ. ಪೋಷಕರು ನಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದರೆ ಮುಂದೆ ಭವಿಷ್ಯ ಚೆನ್ನಾಗಿರುತ್ತದೆ..... ಹೀಗೆಲ್ಲಾ ಆಲೋಚನೆ ನಿರಂತರ ನಮ್ಮ ಸಮಾಜದಲ್ಲಿ ನಡೆಯುತ್ತಿದೆ.

ನಿಜವಾಗಿ ಶಿಕ್ಷಣ ಎನ್ನುವುದು ವ್ಯಕ್ತಿಯೋರ್ವನ  ವ್ಯಕ್ತಿತ್ವ ನಿರ್ಮಾಣ ಮಾಡುವುದಕ್ಕೆ ಪೂರಕವಾಗಿರಬೇಕು.  ''ವಿದ್ಯೆ ಇಲ್ಲದವನು ಪಶುವಿಗೆ ಸಮಾನ`` ಎಂಬುದು ನಮ್ಮ ಹಿರಿಯರು ಹೇಳಿದ ಮಾತು. ವಿದ್ಯೆಯಿಂದ ಮನುಷ್ಯನಲ್ಲಿರುವ ಮೃಗತ್ವ ನಾಶವಾಗಿ ಮಾನವತ್ವ ಬೆಳೆಯುತ್ತದೆ ಎಂಬ ಸತ್ಯ ಈ ಮಾತಿನಲ್ಲಿ ಅಡಗಿದೆ.   ಈ ಅರ್ಥವನ್ನು ಗಮನಿಸಿ ವಿಮರ್ಶಿಸುವುದಾದರೆ  ಶಿಕ್ಷಣ ಎನ್ನುವುದು ಪುಸ್ತಕದ ಬದನೆಕಾಯಿ ಅಲ್ಲ. ಪುಸ್ತಕದಲ್ಲಿ ಬರೆದಿರುವುದುನ್ನು ಓದಿ ತಿಳಿದು ಬರೆಯುವುದು  ಪರೀಕ್ಷೆಗಾಗಿಯೇ ಬಾಯಿ ಪಾಠ ಮಾಡಿ ಇಲ್ಲವೇ ಕಾಪಿ ಹೊಡೆದು ಬರೆದರೆ  ಅಥವಾ  ಪರೀಕ್ಷೆ ಪಾಸು ಮಾಡಿದರೆ,  ಅದಕ್ಕಾಗಿ ಬಿಹಾರದಲ್ಲಿ ನಡೆದ ಘಟನೆಯಂತೆ ಹೇಗಾದರೂ ಮಾಡಿ ಪಾಸ್ ಮಾಡಿದರೆ ಸಾಕು.  ಅವನು ವಿದ್ಯಾವಂತ ಅಥವಾ  educated ಎಂದು ಅನಿಸುವುದು ಸಾಧ್ಯ ಎಂಬ ನಂಬಿಕೆ ಬೆಳೆದಿರುವುದೇ ಇಂದಿನ ಎಲ್ಲಾ ಅವ್ಯವಸ್ಥೆಗೆ ಸಾಕ್ಷಿ.

ಬಿಹಾರದಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷೆಗೆ ಬರೆಯುತ್ತಿದ್ದವರಿಗೆ ಉತ್ತರಗಳನ್ನು  ಹೇಳಿಕೊಡುತ್ತಿದ್ದ ಅದಕ್ಕಾಗಿ ನಡೆಸಿದ ಕಸರತ್ತು  (ಪತ್ರಿಕೆಗಳಲ್ಲಿ ಪ್ರಕಟವಾದ ಚಿತ್ರ) ಮತ್ತು  ಲಾಲು ಪ್ರಸಾದ್ ಯಾದವ್ ಹೇಳಿದ ಮಾತು ' ನಮ್ಮ ಸರಕಾರ ಇದ್ದಿದ್ದರೆ ಪುಸ್ತಕಗಳನ್ನೇ ಕೊಟ್ಟು ಬಿಡುತ್ತಿದ್ದೆ''  ಎಂಬ ಮಾತು ನಮ್ಮ ಶಿಕ್ಷಣ ಮೌಲ್ಯವೇ ಕುಸಿದಿದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. 

ಶಿಕ್ಷಣ ಎಂದರೆ ಏನು?  ಬೆಳೆಯುವ ಹಂತದಲ್ಲಿರುವ ಮಗು ತನ್ನನ್ನು ತಾನು ಅರಿತುಕೊಳ್ಳಲು ಪೂರಕವಾಗಿ ಮಾಡುವ ವ್ಯವಸ್ಥೆಯೇ ಶಿಕ್ಷಣ.  ಶಿಕ್ಷಣವನ್ನು ಕೊಡುತ್ತೇವೆ....  ಎಂದರೆ ಕೊಡುವುದು  ಯಾರಿಗೆ?  ಮನುಷ್ಯನನ್ನು ಪ್ರಾಣಿಗಳಿಂದ ವರ್ಗೀಕರಿಸಲ್ಪಟ್ಟಿ  ಗುರುತಿಸಿಕೊಂಡಿರುವುದಕ್ಕೆ ಸಾಧ್ಯವಾದದ್ದು ಶಿಕ್ಷಣದಿಂದ.  ಪ್ರಾಣಿಗಳು ತನ್ನ ಬದುಕನ್ನು ಒಂದು ಸೀಮಿತವಾದ ಅರ್ಥದಲ್ಲಿ ಅನುಭವಿಸುತ್ತದೆ. ಅದಕ್ಕೆ ಇತಿಮಿತಿಗಳಿರ ಬಹುದು.  ಅವುಗಳ ಬದುಕಿನ ಮೇಲೆ ಕಾಲದ ಪ್ರಭಾವ ವಿರಬಹುದು.  ನೋವಾದಾಗ ದುಃಖ, ಸಂತೋಷವಾದಾಗ ಆ ಭಾವನೆಯನ್ನು ಪ್ರಕಟಗೊಳಿಸಲು ತಿಳಿದಿರ ಬಹುದು.  ಆದರೆ ಅದು ತನ್ನನ್ನು ತಾನು ನಾನು ಯಾರು? ಎಂದು ಪ್ರಶ್ನಿಸು ಮಟ್ಟದಲ್ಲಿ ಬುದ್ದಿಯುನ್ನು ಬೆಳೆಸಿಕೊಂಡಿರುವುದಿಲ್ಲ. ಹಾಗಾಗಿ ಬದುಕಿಗೆ ಒಂದು  ಲಿಮಿಟ್ ಇದೆ. ಆದರೆ ಅದೇ ಪ್ರಾಣಿ ರೂಪದ ಮನುಷ್ಯ ತನ್ನನ್ನು ತಾನು ಅರಿಯಲು ಮೊದಲು  ಆಶ್ಚರ್ಯದಿಂದ ಹಾಕಿದ  ಪ್ರಶ್ನೇಯೇ ''ನಾನು ಯಾರು?`` ಇದನ್ನು ಅರಿತುಕೊಳ್ಳಲು ತೊಡಗಿದ ಪ್ರಕ್ರಿಯೆ ಶಿಕ್ಷಣ.  

ಮನುಷ್ಯ ಬದುಕಿದಾಗ ಇರುವ ಚಲನೆ ಸುಖ ಸಂತೋಷದ ಅನುಭವ ಸತ್ತಾಗ ಇರುವುದಿಲ್ಲ.  ಆಗ ಶರೀರ ಒಂದು ನಿರುಪಯುಕ್ತ  ವಸ್ತು  ಹಾಗಾಗಿ ಅದನ್ನು ಸುಡುವುದೋ ಹೂಳುವುದೋ ಮಾಡುತ್ತಾರೆ.  ಶರೀರದಲ್ಲಿ  ಬದುಕಿದಾಗ ಇದ್ದ ಶಕ್ತಿ, ಚೇತನ, ಸತ್ತಾಗ ಇಲ್ಲದಿರುವ ಒಂದು ಶಕ್ತಿ ಶರೀರದಲ್ಲಿ ಇದೆ ಎಂಬ ಸತ್ಯವು ಬುದ್ಧಿಯಲ್ಲಿ ಚಿಂತನೆಯನ್ನು ಹುಟ್ಟು ಹಾಕಿದಾಗ ......  ಈ ಸತ್ಯದ ಬೆನ್ನ ಹಿಂದೆ ಬಿದ್ದ ಚಿಂತನೆಯೇ  ಅವನಲ್ಲಿ ನಿರಂತರವಾಗಿ ನಡೆದ ಮಂಥನವೇ ಮನುಷ್ಯನ ಆತ್ಮ ಜ್ಞಾನವನ್ನು,  ಬುದ್ದಿ ಬಲವನ್ನು ಉಪಯೋಗಿಸಿ ತರ್ಕ ಬದ್ಧವಾಗಿಯೇ ಅರಿಯುವ ಪ್ರಯತ್ನದಿಂದ ಉಂಟಾದ ಪ್ರತಿಯೊಂದು ವಿಚಾರಗಳು   ಹಾಗೂ ವ್ಯಕ್ತಿತ್ವ ನಿರ್ಮಾಣದ  ಪ್ರಕ್ರಿಯೆಗೆ  ಪೂರಕವಾದ ಸಾಮಗ್ರಿಯೇ ಶಿಕ್ಷಣದ ವಸ್ತುವಾಗಿ ಬೆಳೆಯಿತು. ಇದುವೇ  ಜ್ಞಾನ ರಾಶಿ.

ಅದನ್ನು ಎಳೆಯ ಮಕ್ಕಳಿಗೆ  ಎಷ್ಟು ಬೇಕು ಅಷ್ಟನ್ನು ನಾವು  ತಿಳಿಸಿಕೊಡುವ ಒಂದು ವ್ಯವಸ್ಥೆಯನ್ನು ಮಾತ್ರ ಶಿಕ್ಷಣ ಎಂದು ಕರೆಯಬಹುದು.  ಇದನ್ನು  ಸರಿಯಾಗಿ ಅರ್ಥ ಮಾಡಿ ಈ ತಳಹದಿಯಲ್ಲಿಯೇ ಶಿಕ್ಷಣ ವ್ಯವಸ್ಥೆಯನ್ನು ರೂಪುಗೊಳಿಸಿದರೆ  ಭ್ರಷ್ಟಾಚಾರ,  ಅತ್ಯಾಚಾರ, ಮೋಸ, ಹಣದ ವ್ಯಾಮೋಹ, ಸುಳ್ಳು,  ಜಾತಿ ಡೊಂಬರಾಟ,  ಸಮಾಜದಲ್ಲಿ ಬೇರು ಬಿಟ್ಟಿರುವ ನಾನಾ ಪಿಡುಗು ಎಲ್ಲವೂ ಮಾಯವಾಗುವುದು  ಖಂಡಿತ ಸಾಧ್ಯ.

ಇವತ್ತು  ಮಹಿಳಾ ಸಬಲೀಕರಣದ ವಾದ ಬೆಳೆದಿದೆ. ಹಣ್ಣು ಮಕ್ಕಳು ಗಂಡು ಮಕ್ಕಳಿಗಿಂತಲೂ ಹೆಚ್ಚು ವಿದ್ಯಾವಂತರಾಗುತ್ತಿದ್ದಾರೆ. ನಾವು ಗಂಡು ಮಕ್ಕಳಿಗಿಂತಲೂ ಕಡಿಮೆ ಏನಲ್ಲ ಎಂದು ಹೇಳುವಷ್ಟು ಮುಂದಿವರಿದೆ ಸತ್ಯ.  ಆದರೆ ಹೆಣ್ಣು ಮಕ್ಕಳಿಗೆ ಸಿಗಬೇಕಾದ ಮರ್ಯಾದೆ ಸಿಗುತ್ತಿದೆಯೇ,  ಅವರನ್ನು ರಕ್ಷಿಸಲು ನೂರಾರು ಕಾನೂನುಗಳನ್ನು ಸರಕಾರ ಮಾಡಬಹುದು.  ಪೋಲೀಸ್ ವ್ಯವಸ್ಥೆಯನ್ನು ಅದಕ್ಕಾಗಿ ಬಳಸಬಹುದು  ಆದು ಒಂದು ವ್ಯವಸ್ಥೆ.  ಈ ವ್ಯವಸ್ಥೆಗಳು ಸಮಾಜ ಕುಟಂಬಗಳು ತನ್ನೊಡಲಲ್ಲೇ ಸೇರಿಸಿಕೊಂಡು ಅದನ್ನು ಪ್ರೀತಿ ವಿಶ್ವಾಸ ಗೌರವ ನೆಲಯಲ್ಲಿ ನಡೆಸಿಕೊಂಡು ಬಂದಿದೆ.  ಈ ವ್ಯವಸ್ಥೆಯ ತಳಹದಿ ಶಿಕ್ಷಣದಿಂದ ದೊರಕಿರುವುದಾದರೆ.  ಸರಕಾರವೊಂದು ಮಾಡುವ ಕಾನೂನು ಕಟ್ಟಲೆ ವ್ಯವಸ್ಥೆಗಳೆಲ್ಲವೂ  ಧರ್ಪದಿಂದ ಆಧಿಕಾರದ ಬಲದಿಂದ ರೂಪಿತಗೊಂಡಿರುವುದು ಅದಕ್ಕೆ ಬೆನ್ನುಲುಬಾಗಿ ನಿಂತಿರುವುದು ಈಗ ನಾವು ಕಲಿತುಕೊಂಡಿರುವ ಶಿಕ್ಷಣದಿಂದ ದೊರೆತ ಜ್ಞಾನದ ಬಲದಿಂದ ಉಂಟಾಗಿರುವುದು.  ರಾಜಕಾರಣಿಗಳು ಕೋರ್ಟುಗಳು ನಮ್ಮ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿತು  ಅದಕ್ಕಾಗಿ ದಪ್ಪ ದಪ್ಪ ಪುಸ್ತಕವನ್ನು ಓದಿ,  ಅದ್ಯಯನ ಮಾಡಿ  ಕೋರ್ಟಿನಲ್ಲಿ ತರ್ಕವನ್ನು ಮಂಡಿಸಿ  ಸಾಕ್ಷಿ ಆಧಾರಗಳನ್ನು ಒದಗಿಸಿ ನ್ಯಾಯ ತೀರ್ಮಾನ ಮಾಡಿ ಶಿಕ್ಷೆ ವಿಧಿಸುವುದು  ನಮ್ಮ  ಶಿಕ್ಷಣ ವ್ಯವಸ್ಥೆಯಿಂದ ಸಾಧ್ಯವಾಯಿತು.  ಆದರೆ ನಿಜವಾದ ಶಿಕ್ಷಣದಿಂದ ಸಮಾಜದಲ್ಲಿ ಎಲ್ಲಾ ರೀತಿಯ ನೋವು, ಅತ್ಯಾಚಾರ, ಭ್ರಷ್ಟಾಚಾರ, ಮೋಸ, ಈ ಮೊದಲಾದ ಮಾವನೀಯ ಮೌಲ್ಯಗಳಿಗೆ ವಿರುದ್ಧವಾದ ಅಸಂಗತಗಳನ್ನು ನಾಶಮಾಡಿ ಮಾನವೀಯತೆಯನ್ನು ಬೆಳೆಸುವುದೇ ನಿಜವಾದ  ಶಿಕ್ಷಣ.

ಈ ಸತ್ಯಗಳನ್ನು ಮುಂದಿರಿಸಿಕೊಂಡು ಬಿಹಾರದ ಘಟನೆ ಮತ್ತು ಲಾಲು ಪ್ರಸಾದ ಯಾದವರಂತಹ ರಾಜಕಾರಣಿಗಳು ನಮ್ಮ ದೇಶವನ್ನು ಯಾವ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ ಹಿಂದೆ ಮುಂದೆ ಬಗ್ಗೆ ಯಾವ ಚಿಂತನೆಯೂ ಇಲ್ಲದೇ ಸಮಾಜವನ್ನು ಮಾರ್ಗದರ್ಶನ ಮಾಡುತ್ತಿದ್ದಾರೆ ಎನ್ನವುದು ಗಮನಿಸಬೇಕಾದ ಅಂಶ. ''ಯಥಾ ರಾಜ ತಥಾ ಪ್ರಜಾ''.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ