ಭಾನುವಾರ, ಜೂನ್ 25, 2017

ಚಾತುರ್ಮಾಸ್ಯದಲ್ಲಿ ವ್ರತರೂಪವಾಗಿ ವರ್ಜಿಸಬೇಕಾದ ವಸ್ತುಗಳು,

ಚಾತುರ್ಮಾಸ್ಯದಲ್ಲಿ  ವ್ರತರೂಪವಾಗಿ ವರ್ಜಿಸಬೇಕಾದ  ವಸ್ತುಗಳು, 
ಚಾತುರ್ಮಾಸ ಪ್ರಾರಂಭ  ಈ ನಾಲ್ಕು ತಿಂಗಳುಗಳಲ್ಲಿ ಪಾಲಿಸಬೇಕಾದ ವ್ರತಗಳು.
ಚಾತುರ್ಮಾಸವು ಆಷಾಡ ಶುಕ್ಲ ಏಕಾದಶೀಯಿಂದ ಆರಂಭವಾಗುತ್ತದೆ ಮತ್ತು ಕಾರ್ತಿಕ ಶುಕ್ಲ ಏಕಾದಶೀ ಅಥವಾ ಪೌರ್ಣಮೆಯಂದು ಸಮಾಪನಗೊಳ್ಳುತ್ತದೆ. ಆಷಾಢ ಶುಕ್ಲ ಏಕಾದಶೀಯಂದು ದೇವದೇವೋತ್ತಮನಾದ ಶ್ರೀಹರಿಯು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿ ತೊಡಗುವುದರ ಪ್ರತೀಕವಾಗಿ ಹರಿಶಯನೋತ್ಸವ ಅಥವಾ ವಿಷ್ಣುಶಯನೋತ್ಸವವನ್ನು ಆಚರಿಸಲಾಗುತ್ತದೆ
ಎಲ್ಲ ಸ್ತ್ರೀಪುರುಷರು, ನಾಲ್ಕೂ ವರ್ಣದವರೂ (ಬ್ರಾಹ್ಮಣ-ಕ್ಷತ್ರೀಯ-ವೈಶ್ಯ-ಶೂದ್ರ), ನಾಲ್ಕೂ ಆಶ್ರಮದವರೂ (ಬ್ರಹ್ಮಚರ್ಯ-ಗ್ರಹಸ್ಥ-ವಾನಪ್ರಸ್ಥ-ಸನ್ಯಾಸ), ಎಲ್ಲ ಪ್ರಕಾರದ ಸನ್ಯಾಸಿಗಳು (ಕುಟೀಚರ-ಬಹೂದ-ಹಂಸ-ಪರಮಹಂಸ), ಇನ್ನಿತರ ಅನ್ಯ ವ್ರತಗಳನ್ನು ಮಾಡುತ್ತಿರುವವರು, ಎಲ್ಲರೂ ನಿತ್ಯವಾದ  ಈ ಚಾತುರ್ಮಾಸ್ಯ ವ್ರತವನ್ನು ಅವಶ್ಯವಾಗಿ ಆಚರಿಸಲೇಬೇಕು,
ನಾಲ್ಕು ಮಾಸಗಳು – ನಾಲ್ಕು ವ್ರತಗಳು
ಪ್ರಥಮೇ ಮಾಸಿ ಕರ್ತವ್ಯಂ ನಿತ್ಯಂ ಶಾಕವ್ರತಂ ಶುಭಮ್ |
ದ್ವಿತೀಯೇ ಮಾಸಿ ಕರ್ತವ್ಯಂ ದಧಿವ್ರತಮನುತ್ತಮಮ್ ||
ಪಯೋವ್ರತಂ ತೃತೀಯೇ ತು ಚತುರ್ಥೇ ತು ನಿಶಾಮಯ |
ದ್ವಿದಲಂ ಬಹುಬೀಜಂ ಚ ವರ್ಜಯೇತ್`ಶುದ್ಧಿಮಿಚ್ಛತಾ ||
ನಿತ್ಯಾನ್ಯೇತಾನಿ ವಿಪ್ರೇಂದ್ರ ವ್ರತಾನ್ಯಾಹುರ್ಮನೀಷಿಣಃ || (ಸ್ಕಂದಪುರಾಣ)
ಮೊದಲನೇ ಮಾಸದಲ್ಲಿ ಶಾಕವ್ರತ, ಎರಡನೇ ಮಾಸದಲ್ಲಿ ದಧಿವ್ರತ, ಮೂರನೇಯ ಮಾಸದಲ್ಲಿ ಕ್ಷೀರವ್ರತ ಮತ್ತು ಕೊನೆಯ ನಾಲ್ಕನೇಯ ಮಾಸದಲ್ಲಿ ದ್ವಿದಲವ್ರತ, ನಿತ್ಯವಾದ ಈ ವ್ರತಗಳನ್ನು ಪಾಲಿಸಬೇಕು.
ಚಾತುರ್ಮಾಸಕ್ಕೆ ಮಾಸಗಳ ಗಣನೆ ಶುಕ್ಲ ಏಕಾದಶೀಯಿಂದ ಮುಂದಿನ ಶುಕ್ಲ ಏಕಾದಶೀಯ ವರೆಗೆ. ಈ ವ್ರತಗಳನ್ನು ಆಚರಿಸುವುದೆಂದರೆ ಆಯಾ ಮಾಸಗಳಲ್ಲಿ ಅನುಕ್ರಮವಾಗಿ ಆಯಾ ವಸ್ತುಗಳನ್ನು ಸಂಕಲ್ಪಪೂರ್ವಕ ತ್ಯಾಗಮಾಡಬೇಕು.
ಶಾಕವ್ರತ – (ಆಷಾಢ ಶುಕ್ಲೈಕಾದಶೀಯಿಂದ ಶ್ರಾವಣ ಶುಕ್ಲೈಕಾದಶೀ) ಈ ವ್ರತದಲ್ಲಿ ಶಾಕಗಳನ್ನು ಎಂದರೆ ಎಲ್ಲ ರೀತಿಯ ತರಕಾರಿಗಳನ್ನು ಆಹಾರವಾಗಿ ಸ್ವೀಕರಿಸಬಾರದು. ಬೇರುಗಳು, ಎಲೆ, ಮೊಳಕೆ, ತುದಿ (ಮುಂಭಾಗ), ಹಣ್ಣುಗಳು, ದಂಟು, ತೊಗಟೆ, ಚಿಗುರು, ಹೂವು, ಸಿಪ್ಪೆ ಇವುಗಳನ್ನು ಶಾಕ ಎಂದು ಕರೆಯಲಾಗುತ್ತದೆ – ಇವುಗಳು ಈ ವ್ರತದಲ್ಲಿ ಅಸ್ವೀಕಾರ್ಯಗಳಾಗಿವೆ. ಎಂದರೆ ಎಲ್ಲ ಎಲೆ-ಕೋಸು ತರಕಾರಿಗಳು, ಮಸಾಲೆ ಪದಾರ್ಥಗಳು, ಹಣ್ಣುಗಳು, ಬೇರುಗಳು ಆಹಾರ ಪದಾರ್ಥವಾಗಿ ಈ ಮಾಸದಲ್ಲಿ ಸ್ವೀಕರಿಸಬಾರದು.
ಅಗಸೆ, ತುಳಸಿ, ನೆಲ್ಲಿ, ಮಾವುಗಳು ಶಾಕಗಳಾಗಿದ್ದರೂ ವರ್ಜ್ಯವಲ್ಲ. ಅಂತೆಯೇ ತೆಂಗಿನಕಾಯಿ, ಖರ್ಜೂರ, ಒಣಶುಂಠಿ, ಮೆಣಸುಗಳನ್ನು ಸಹ ಆಹಾರದಲ್ಲಿ ಬಳಸಬಹುದು.
ದಧಿವ್ರತ – (ಶ್ರಾವಣ ಶುಕ್ಲೈಕಾದಶೀಯಿಂದ ಭಾದ್ರಪದ ಶುಕ್ಲೈಕಾದಶೀ) ಈ ವ್ರತದಲ್ಲಿ ಒಂದು ತಿಂಗಳುಗಳ ಕಾಲ ಮೊಸರನ್ನು ತ್ಯಾಗಮಾಡಬೇಕು. ಮಜ್ಜಿಗೆಯು ಗ್ರಾಹ್ಯವಾಗಿದೆ.
ಕ್ಷೀರವ್ರತ – (ಭಾದ್ರಪದ ಶುಕ್ಲೈಕಾದಶೀಯಿಂದ ಆಶ್ವೀನ ಶುಕ್ಲೈಕಾದಶೀ) ಈ ವ್ರತದಲ್ಲಿ ಒಂದು ತಿಂಗಳುಗಳ ಕಾಲ ಹಾಲನ್ನು ತ್ಯಾಗಮಾಡಬೇಕು.
ದ್ವಿದಳವ್ರತ – (ಆಶ್ವೀನ ಶುಕ್ಲೈಕಾದಶೀಯಿಂದ ಕಾರ್ತಿಕ ಶುಕ್ಲೈಕಾದಶೀ) ಈ ವ್ರತದಲ್ಲಿ ಎಲ್ಲ ರೀತಿಯ ದ್ವಿದಳಧಾನ್ಯಗಳನ್ನು ತ್ಯಾಗಮಾಡಬೇಕು. ತೊಗರೆ, ಹುರುಳಿ, ಕಡಲೆ, ಅವರೆ, ಉದ್ದು ಮೊದಲಾದ ಒಡೆದಾಗ ಎರಡಾಗಿ ಭಾಗವಾಗುವ ಧಾನ್ಯಗಳು ದ್ವಿದಳ ಧಾನ್ಯಗಳಾಗಿವೆ.
ಮೇಲ್ಕಂಡ ಈ ವ್ರತಗಳು ಕಡ್ಡಾಯ-ನಿತ್ಯ ವ್ರತಗಳಾಗಿವೆ. ಈ ಮೇಲಿನ ವ್ರತಗಳಲ್ಲದೇ ಇನ್ನೂ ಅನೇಕ ಐಚ್ಛಿಕ ವ್ರತಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಚಾತುರ್ಮಾಸದಲ್ಲಿ ಬರುವ ನಾಲ್ಕು ಮಾಸಗಳಾದ ಶ್ರಾವಣ, ಭಾದ್ರಪದ, ಅಶ್ವಯುಜ ಮತ್ತು ಕಾರ್ತಿಕ ಮಾಸಗಳಿಗೆ ಕ್ರಮವಾಗಿ ಪರಮಾತ್ಮನ ಶ್ರೀಧರ, ಹೃಷೀಕೇಶ, ಪದ್ಮನಾಭ ಮತ್ತು ದಾಮೋದರ ಈ ರೂಪಗಳು ಅಭಿಮಾನಿಗಳಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ