ಭಾನುವಾರ, ಜೂನ್ 25, 2017

ನುಗ್ಗೆಹಳ್ಳಿಯ ಶ್ರೀ. ಲಕ್ಷ್ಮೀನರಸಿಂಹ ದೇವಾಲಯ

ನುಗ್ಗೆಹಳ್ಳಿಯ ಶ್ರೀ. ಲಕ್ಷ್ಮೀನರಸಿಂಹ ದೇವಾಲಯ
ಹೊಯ್ಸಳರ ಕಾಲದ ಅದ್ಭುತ ಕಲಾಶ್ರೀಮಂತಿಕೆಯ ಪುರಾತನ ಮಂದಿರ
*ಟಿ.ಎಂ. ಸತೀಶ್
ನುಗ್ಗೆಹಳ್ಳಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ಹಾಗೂ ಹಿರೇಸಾವೆ ಬಳಿ ಇರುವ ಒಂದು ಪುಟ್ಟ ಪಟ್ಟಣ. ಈ ಊರಿನಲ್ಲಿ ಹೊಯ್ಸಳರ ಕಾಲದ ಭವ್ಯ ದೇವಾಲಯಗಳಿವೆ. ಈ ಪೈಕಿ ಶ್ರೀ. ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ಪ್ರಮುಖವಾದದ್ದು.
ಸುಮಾರು 14-15ನೇ ಶತಮಾನದಲ್ಲಿ ಈ ಊರಿಗೆ ನುಗ್ಗೆಹಳ್ಳಿ ಎಂಬ ಹೆಸರು ಬಂತು ಎಂದು ತಿಳಿದುಬರುತ್ತದೆ. ಅಂದಿನ ಪಾಳೆಯಗಾರರು ಶತ್ರು ಸೈನ್ಯದ ಮೇಲೆ ತಮ್ಮ ಪಡೆಯನ್ನು ನುಗ್ಗಿಸಲು ಇಲ್ಲಿ ಸೈನ್ಯವನ್ನು ಒಟ್ಟುಗೂಡಿಸುತ್ತಿದ್ದರಂತೆ. ಒಮ್ಮೆಲೇ ಸೈನಿಕರು ದಾಳಿ ಮಾಡಲು ನುಗ್ಗುತ್ತಿದ್ದ ಊರು ನುಗ್ಗೆಹಳ್ಳಿಯಾಯಿತು ಎಂಬ ಹೆಸರು ಪಡೆಯಿತು ಎಂದು ಇತಿಹಾಸಕಾರರು ಹೇಳುತ್ತಾರೆ.
ಇಲ್ಲಿ 14ನೇ ಶತಮಾನದಲ್ಲಿ ಅಂದರೆ ವಿಜಯನಗರದ ಅರಸರ ಕಾಲದಲ್ಲಿ ಈ ಊರಿಗೆ ನುಗ್ಗೆ ಹಳ್ಳಿ ಎಂಬ ಹೆಸರು ಬಂತಾದರೂ, ಅದಕ್ಕೂ ಮೊದಲೇ ಇಲ್ಲಿ ಊರಿತ್ತು, ದೇವಾಲಯವಿತ್ತು ಎಂದು ತಿಳಿದುಬರುತ್ತದೆ. ಇಲ್ಲಿ ಚೋಳರ ಕಾಲದಲ್ಲಿಯೇ ಜಯಗೊಂಡೇಶ್ವರ ದೇವಾಲಯ ನಿರ್ಮಾಣವಾಗಿತ್ತೆಂದೂ, ಇದಕ್ಕೆ ಹೊಯ್ಸಳರ ದೊರೆ ವಿಷ್ಣುವರ್ಧನ 1121ರಲ್ಲಿ ದತ್ತಿ ನೀಡಿದ್ದನೆಂದು ಶಾಸನ ಸಾರುತ್ತದೆ.
ದೇವಾಲಯದಲ್ಲಿರುವ ಫಲಕದಲ್ಲಿ ಸೋಮೇಶ್ವರ ಹೊಯ್ಸಳನ ಕಾಲದಲ್ಲಿ ಬೊಮ್ಮಣ್ಣ ದಂಡನಾಯಕ ತನ್ನ ಗುರುಗಳಾದ ಪುಂಡರೀಕಾಕ್ಷ ಸೋಮಯಾಜಿ ಅವರೊಂದಿಗೆ ಇಲ್ಲಿಗೆ ಭೇಟಿ ನೀಡಿದ್ದನ್ನೆಂದೂ, ಆತ ತನ್ನ ಗುರುಗಳಾದ ಪುಂಡರೀಕಾಕ್ಷ ಸೋಮಯಾಜಿಗಳ ಆದೇಶದಂತೆ ಇಲ್ಲಿ ದೇವಾಲಯ ಕಟ್ಟಿಸಿ, ವಿಜಯ ಸೋಮನಾಥಪುರ ಎಂದು ಹೆಸರಿಟ್ಟು ಅಗ್ರಹಾರ ಮಾಡಿದನೆಂಬ ಉಲ್ಲೇಖವಿದೆ.
ಬೊಮ್ಮಣ್ಣ ದಂಡನಾಯಕ 1168ರಲ್ಲಿ ಅಂದರೆ ಪ್ರಭವ ಸಂವತ್ಸರ ಚೈತ್ರ ಮಾಸದ ಬುಧವಾರ ಶುಕ್ಲ ಪಂಚಮಿಯಂದು ತ್ರಿಕೂಟಾಚಲ ಅಂದರೆ ಮೂರು ಗರ್ಭಗೃಹ ಮೂರು ಗೋಪುರದ ದೇಗುಲವನ್ನು ಲಕ್ಷ್ಮೀನರಸಿಂಹ, ವೇಣುಗೋಪಾಲ ಮತ್ತು ಕೇಶವ ದೇವರಿಗಾಗಿ ಕಟ್ಟಿಸಿ, ದೇವತಾ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾನೆ. ವಾಸ್ತವವಾಗಿ ಈ ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ಕೇಶವನ ಮೂರ್ತಿಯಿದ್ದರೂ,  ದೇವಾಲಯ ಲಕ್ಷ್ಮೀನರಸಿಂಹ ದೇವಾಲಯ ಎಂದೇ ಖ್ಯಾತವಾಗಿದೆ.  ದೇವಾಲಯದ ಪಶ್ಚಿಮ ಭಾಗದಲ್ಲಿ ಋಷಭ ಎಂಬ ಮುನಿ ತಪಸ್ಸು ಮಾಡಿ  ಲಕ್ಷ್ಮೀನರಸಿಂಹನ ಒಲಿಸಿಕೊಂಡಿದ್ದ ಕಾರಣ ಇದು ಲಕ್ಷ್ಮೀನರಸಿಂಹ ದೇವಾಲಯ ಎಂದೇ ಖ್ಯಾತವಾಗಿದೆ ಎನ್ನುತ್ತಾರೆ ಕೆಲವರು. ಸೋಮನಾಥಪುರದ ಸುಂದರ ದೇವಾಲಯಗಳ ನಿರ್ಮಾಣಕ್ಕೂ ಮೊದಲೇ ಇಲ್ಲಿ ದೇವಾಲಯ ನಿರ್ಮಾಣವಾಗಿತ್ತು ಎಂದು ತಿಳಿದುಬರುತ್ತದೆ. ಜಾವಗಲ್ ಲಕ್ಷ್ಮೀನರಸಿಂಹ ದೇವಾಲಯ ಹೊಸ ಹೊಳಲು ಲಕ್ಷ್ಮೀನಾರಾಯಣ ದೇವಾಲಯಗಳ ರೀತಿಯಲ್ಲೇ ಈ ದೇವಾಲಯವೂ ಇದೆ.  
ಪ್ರಧಾನಗರ್ಭಗೃಹದಲ್ಲಿ 3 ಅಡಿ ಎತ್ತರದ ಗರುಡ ಪೀಠದ ಮೇಲೆ ಶಂಖ, ಚಕ್ರ, ಗದಾ, ಪದ್ಮ ಧಾರಿಯಾದ ಕೇಶವನ ಮೂರ್ತಿಯಿದ್ದರೆ, ಬಲಭಾಗದಲ್ಲಿರುವ ಗರ್ಭಗೃಹದಲ್ಲಿ ತೊಡೆಯ ಮೇಲೆ ಲಕ್ಷ್ಮಿಯನ್ನು ಕೂರಿಸಿಕೊಂಡಿರುವ ನರಸಿಂಹಸ್ವಾಮಿಯ ವಿಗ್ರಹವಿದೆ. ಅದರ ಎದುರು ಇರುವ ಮತ್ತೊಂದು ಗರ್ಭಗೃಹದಲ್ಲಿ ಕೊಳಲನ್ನು ಊದುತ್ತಿರುವ ಗೋಪಾಲಕೃಷ್ಣ ಸ್ವಾಮಿಯ ಗುಡಿ ಇದೆ. ಮೂರೂ ಗರ್ಭಗೃಹಕ್ಕೆ ಸೇರಿದಂತೆ ನವರಂಗವಿದೆ.
ದೇವಾಲಯ ಸಂಪೂರ್ಣ ಹೊಯ್ಸಳ ಶೈಲಿಯಲ್ಲಿದೆ. ದ್ವಾರಬಂಧದ ಮೇಲೆ ಮೂರು ಗಾರೆ ಗಚ್ಚಿನ ಗೋಪುರ ಇದೆ. ಸುತ್ತಲೂ ಕೋಟೆಯಂಥ ಆವರಣವಿದೆ. ವಿಶಾಲ ಪ್ರದೇಶದ ಮಧ್ಯೆ ದೇವಾಲಯವಿದೆ. ಮುಖಮಂಟಪದ ಛಾವಣಿಯಲ್ಲಿ ಅಷ್ಟದಿಕ್ಪಾಲಕರ ಕೆತ್ತನೆ ಇದೆ. ಒಳ ಪ್ರವೇಶಿಸಿದರೆ ಹಿಂಭಾಗದಲ್ಲಿ ನಾಲ್ಕು ಅಡಿ ಎತ್ತರದ ನಕ್ಷತ್ರಾಕಾರದ ಜಗಲಿಯ ಮೇಲೆ ಇರುವ ಭವ್ಯ ಕೆತ್ತನೆಯ ಸುಂದರ ದೇವಾಲಯ ಕಾಣುತ್ತದೆ. ಪ್ರವೇಶದಲ್ಲಿನ ಆನೆಯ ಕೆತ್ತನೆ ಸುಂದರವಾಗಿದೆ. ಮುಂಭಾಗದಲ್ಲಿ ಆನಂತರ ವಿಸ್ತರಣೆ ಆಗಿರುವುದು ಗೋಚರಿಸುತ್ತದೆ. ಹಿಂಬದಿಯಲ್ಲಿ ಸುಂದರ ಗೋಪುರ ಹಾಗೂ ಬಳಪದ ಕಲ್ಲಿನಿಂದ ನಿರ್ಮಿಸಿರುವ ದೇವಾಲಯದ ಭಿತ್ತಿಗಳಲ್ಲಿ ಪುರಾಣದ ಕಥಾನಕಗಳ ಸುಂದರ ಸೂಕ್ಷ್ಮ ಕೆತ್ತನೆಗಳಿವೆ.
ಪಟ್ಟಿಕೆಗಳಲ್ಲಿ ಮಕರ, ಬಂಡಿಗಳು, ಯುದ್ಧ ಪುರಾಣ ಇತ್ಯಾದಿ ಪ್ರಸಂಗಗಳು, ಲತಾ ಸುರುಳಿಗಳು, ಆನೆ ಹಾಗೂ ಕುದುರೆ ಸವಾರರ ಪಟ್ಟಿಕೆಗಳಿವೆ. ಪಟ್ಟಿಕೆಗಳ ಮೇಲ್ಭಾಗದಲ್ಲಿ ಮೂರು ಅಡಿ ಎತ್ತರದ ಸೂಕ್ಷ್ಮ ಕೆತ್ತನೆಯ ದೇವಾನು ದೇವತೆಗಳ, ಭಾಗವತ ಪ್ರಸಂಗಗಳ ಕೆತ್ತನೆ ಇದೆ. ಇದರಲ್ಲಿ ಬ್ರಹ್ಮ, ರತಿ ಮನ್ಮಥ, ನಾರಾಯಣ, ನರಸಿಂಹ, ನಾಟ್ಯ ಗಣಪತಿ, ಮದನಿಕೆಯರು, ಕಾಳಿಂಗ ಮರ್ದನ, ಪೂತನಿ ಸಂಹಾರ, ಶಕಟಾಸುರ ವಧೆ, ಬೆಣ್ಣೆ ಕಳ್ಳತನ, ಗೋಪಾಲಕರೊಂದಿಗೆ ಆಟವಾಡುತ್ತಿರುವುದೇ ಮೊದಲಾದ ಸುಂದರ ಶಿಲ್ಪಗಳಿವೆ. ಲಕ್ಷ್ಮೀ ನಾರಾಯಣರು ಉಯ್ಯಾಲೆಯಲ್ಲಿ ಕುಳಿತಿರುವ ಶಿಲ್ಪವಂತೂ ಅತ್ಯಂತ ಮನೋಹರವಾಗಿದೆ. ಆದರೆ ಕೆಲವು ಶಿಲ್ಪಗಳನ್ನು ಕಲ್ಲಿನಿಂದ ಜಜ್ಜಿ ವಿರೂಪಗೊಳಿಸಿರುವುದನ್ನು ನೋಡಿದಾಗ ವೇದನೆಯಾಗುತ್ತದೆ. ನುಗ್ಗೇಹಳ್ಳಿಯಲ್ಲಿ ಭೂ ವರಹನಾಥ ಸ್ವಾಮಿ, ಸದಾಶಿವ ದೇವಾಲಯಗಳೂ ಇದ್ದು, ನೋಡಲೇಬೇಕಾದ ಸ್ಥಳವಾಗಿದೆ.
ಹೋಗುವುದು ಹೇಗೆ: ನುಗ್ಗೆಹಳ್ಳಿಗೆ ಹೋಗಲು ಹೆಚ್ಚಿನ ಬಸ್ ಸೌಕರ್ಯ ಇಲ್ಲದ ಕಾರಣ, ಸ್ವಂತ ವಾಹನ ಬಳಕೆ ಉತ್ತಮ. ಚನ್ನರಾಯಪಟ್ಟಣದಿಂದ 18 ಹಾಗೂ ಬೆಂಗಳೂರಿನಿಂದ 139 ಕಿ.ಮೀ. ದೂರದಲ್ಲಿದೆ. ಬೆಂಗಳೂರು ಮಂಗಳೂರು ರಸ್ತೆಯಲ್ಲಿ ಹಿರೇಸಾವೆ ದಾಟಿದ ತರುವಾಯ ಸ್ವಲ್ಪ ದೂರ ಸಾಗಿ ಬಲಕ್ಕೆ ತಿರುಗಿದರೆ ನುಗ್ಗೆಹಳ್ಳಿಗೆ ಹೋಗಬಹುದು. ಹಿರೇಸಾವೆಯಿಂದ ನುಗ್ಗೆ ಹಳ್ಳಿಗೆ 16 ಕಿ.ಮೀ. ಮಾತ್ರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ