ಸೋಮವಾರ, ಜೂನ್ 19, 2017

ಪರಾಶರ ಭವಿಷ್ಯ..!!

ಪರಾಶರ ಭವಿಷ್ಯ..!!

ಪ್ರದೀಪ ಹೆಗಡೆ ಪುರಾಣ & ಚರಿತ್ರೆಯ ಸತ್ಯ ಸಂಗತಿ,
Recent Posts 6/4/2016 8:32:00 AM View Count 12178 Return
ಪರಾಶರ ಭವಿಷ್ಯ..!!
ವಿಷ್ಣುಪುರಾಣದಲ್ಲಿ ಮೈತ್ರೇಯರು ಪರಾಶರಮುನಿಗಳಲ್ಲಿ ಕಲಿಯುಗದ ಸ್ವರೂಪವೇನೆಂದು ಕೇಳುತ್ತಾರೆ.ಆಗ ಪರಾಶರಮುನಿಗಳು ಕಲಿಯುಗದ ಸ್ವರೂಪವನ್ನು ಸಂಕ್ಷೇಪವಾಗಿ ವರ್ಣಿಸುತ್ತಾರೆ.ಅಂದು ಪರಾಶರಮುನಿಗಳು ವರ್ಣಿಸಿದ ಕಲಿಯುಗದ ಸ್ವರೂಪವಿಂದು ಅಕ್ಷರಶಃ ಸತ್ಯವಾಗುತ್ತಿದೆ.ಪರಾಶರಮುನಿಗಳು ಮೈತ್ರೇಯರಿಗೆ ಕಲಿಯುಗದ ಸ್ವರೂಪವನ್ನು ಹೀಗೆ ವಿವರಿಸುತ್ತಾರೆ.

ಮೈತ್ರೇಯರೇ..ಕಲಿಯುಗದಲ್ಲಿ ಮನುಷ್ಯರ ಪ್ರವೃತ್ತಿ ವರ್ಣಾಶ್ರಮಧರ್ಮಗಳ ಆಚಾರಕ್ಕನುಗುಣವಾಗಿರುವುದಿಲ್ಲ.ವೇದೋ
ಕ್ತವಾದಂತಹ ಧರ್ಮವನ್ನು ಪರಿಪಾಲಿಸಬೇಕೆಂಬ ಹಂಬಲ ಜನರಲ್ಲಿರುವುದಿಲ್ಲ.ಕಲಿಯುಗದಲ್ಲಿ ಧರ್ಮವ್ಯವಸ್ಥೆಯಿಂದ ವಿವಾಹಗಳು ನಡೆಯುವುದಿಲ್ಲ.ಗುರುಶಿಷ್ಯರ ಮಧುರ ಸಂಬಂಧ,ಗುರುಕುಲ ಪದ್ಧತಿಯೂ ಇರುವುದಿಲ್ಲ.ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆಯಿರುವುದಿಲ್ಲ.ಅಗ್ನಿಪೂಜೆ,ದೇವತಾಪೂಜೆ ಮುಂತಾದ ವಿಧಾನಗಳು ಕ್ಷೀಣಿಸುತ್ತವೆ.ಯಾವಕುಲದಲ್ಲೇ ಹುಟ್ಟಿರಲಿ,ಬಲಿಷ್ಟನಾದವನು ಸರ್ವನಿಯಾಮಕನಾಗಿರುತ್ತಾನೆ.ಯಾವ ಕುಲದಲ್ಲೇ ಹುಟ್ಟಿರಲಿ ಧನಿಕನಾದವನು ಕನ್ಯೆಗೆ ವರನಾಗಲು ಯೋಗ್ಯನಾಗುತ್ತಾನೆ.ವೇದ-ಶಾಸ್ತ್ರಜ್ಞಾನವಿಲ್ಲದ ಬ್ರಾಹ್ಮಣ ಯಾವುದೋ ಒಂದು ಕುತ್ಸಿತ ಮಾರ್ಗದಲ್ಲಿ “ದೀಕ್ಷಿತ” “ವಿದ್ವಾಂಸ” ಎನಿಸಿಕೊಳ್ಳುತ್ತಾನೆ.ಆತನ ಬಾಯಿಂದ ಬರುವ ಅಪದ್ಧ ಮಾತೂ ಶಾಸ್ತ್ರವಾಕ್ಯವಾಗಿಬಿಡುತ್ತದೆ.ಜನರು ಯಾರನ್ನು ಗೌರವಿಸುತ್ತಾರೋ ಅವರೇ ದೇವರಾಗಿಬಿಡುತ್ತಾರೆ..!!ತಮಗೆ ತೋರಿದಂತೇ ಮಾಡುವ ಕಾರ್ಯವೇ ತಪಸ್ಸಾಗಿಬಿಡುತ್ತದೆ.ಮನಸ್ಸಿಗೆ ಕಂಡಂತೇ ಮಾಡುವ ಕ್ರಿಯೆಯೂ ಧರ್ಮವೆನಿಸಿಬಿಡುತ್ತದೆ.

ಸ್ವಲ್ಪ ಸಂಪತ್ತಿದ್ದರೆ ಸಾಕು,ಧನಮದ ತಲೆಗೇರುತ್ತದೆ.ಕಲಿಯುಗದಲ್ಲಿ ಸುವರ್ಣಮಣಿ,ರತ್ನವಸ್ತ್ರಗಳನ್ನು ಬಿಟ್ಟು ಸ್ತ್ರೀಯರು ತಮ್ಮ ಕೇಶಗಳಿಂದಲೇ ತಮ್ಮನ್ನು ಸಿಂಗರಿಸಿಕೊಳ್ಳುತ್ತಾರೆ.ಪತಿಯು ಧನಹೀನನಾದರೆ ಆತನನ್ನು ತ್ಯಜಿಸಿಬಿಡುತ್ತಾರೆ.ಹಣವಿರುವವನಷ್ಟೇ ಕಲಿಯುಗದಲ್ಲಿ ಸ್ತ್ರೀಗೆ ಪತಿಯಾಗಲು ಅರ್ಹನಾಗುತ್ತಾನೆ.ಹೆಚ್ಚುಹಣವನ್ನು ಖರ್ಚುಮಾಡುವ ವ್ಯಕ್ತಿ ಪಾಪಿಯಾಗಿದ್ದರೂ ಜನರಿಗೆ ನಾಯಕನಾಗುತ್ತಾನೆ.ಕಲಿಯುಗದಲ್ಲಿ ಕೂಡಿಟ್ಟ ಸಂಪತ್ತು ಗೃಹನಿರ್ಮಾಣದಲ್ಲಿ ಸಮಾಪ್ತಿಯಾಗುತ್ತದೆ.ಬುದ್ಧಿಯು ಸಂಪತ್ತಿನ ಸಂಗ್ರಹದಲ್ಲೇ ನಾಶವಾಗುತ್ತದೆ.ದಾನ-ಧರ್ಮಗಳಿಗೆ ಸಂಪತ್ತನ್ನು ಕೊಡದೇ ಮನುಷ್ಯರು ಆತ್ಮಭೋಗಕ್ಕಾಗಿ ಸಂಪತ್ತನ್ನು ವ್ಯಯಿಸುತ್ತಾರೆ.ಸ್ತ್ರೀಯರು ಅತಿಯಾದ ಸ್ವೇಚ್ಛೆಯನ್ನು ಬಯಸುತ್ತಾರೆ,ಸದಾ ಸುಖಲಾಲಸೆಯುಳ್ಳವರಾಗುತ್ತಾರೆ.ಪುರುಷರಿಗೆ ಅನ್ಯಾಯದ ಧನಸಂಪಾದನೆಯಲ್ಲೇ ಅಮಿತವಾದ ಆಸಕ್ತಿಯಿರುತ್ತದೆ.

ಕಲಿಯುಗದಲ್ಲಿ ಮಿತ್ರರು ಬೇಡಿಕೊಂಡರೂ ಅವರ ಸಹಾಯಕ್ಕಾಗಿ ಬಿಡಿಕಾಸನ್ನೂ ಜನರು ನೀಡಲಾರರು.”ಮನುಷ್ಯರಾದ ನಾವೆಲ್ಲರೂ ಸಮಾನರು” ಎಂಬ ಬುದ್ಧಿ ಹುಟ್ಟಿ ನಿಜವಾದ ವಿಪ್ರರಿಗೆ,ಶಾಸ್ತ್ರಜ್ಞಾನಿಗಳಿಗೆ ಗೌರವ ಸಿಗುವುದಿಲ್ಲ.ಹಾಲುಕೊಡುವ ನಿಮಿತ್ತದಿಂದಷ್ಟೇ ಗೋವುಗಳನ್ನು ಪ್ರೀತಿಯಿಂದ ಕಾಣಲಾಗುತ್ತದೆ.ಕಲಿಯುಗದಲ್ಲಿ ಸದಾ ಅನಾವೃಷ್ಟಿಯ ಭಯವಿರುತ್ತದೆ.ಧಾನ್ಯಗಳ ಅಭಾವವುಂಟಾಗಿ ಹಸಿವಿನಿಂದ ಕಂಗೆಟ್ಟ ಪ್ರಜೆಗಳು ಮಳೆಗಾಗಿ ಆಕಾಶವನ್ನೇ ದಿಟ್ಟಿಸುತ್ತಿರುತ್ತಾರೆ.ಅನಾವೃಷ್ಟಿ,ಅತಿವೃಷ್ಟಿಗಳ ಬಾಧೆಯನ್ನು ತಡೆಯಲಾರದೇ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.ಕಲಿಯುಗದಲ್ಲಿ ದುರ್ಭಿಕ್ಷ (ಬರಗಾಲ) ಕಾಡುತ್ತದೆ.ಜನರು ಕ್ಲೇಶದಲ್ಲಿ ತೊಳಲುತ್ತಾರೆ.ನಿಜವಾದ ಸೌಖ್ಯ,ಆನಂದ ಸಿಗದೇ ಪರಿತಪಿಸುತ್ತಾರೆ.

ಕಲಿಯುಗದಲ್ಲಿ ಜನರು ಸ್ನಾನ ಮಾಡದೇ ಊಟಮಾಡುತ್ತಾರೆ.ಪಿತೃಗಳಿಗೆ ಪಿಂಡೋದಕ ಕ್ರಿಯೆಗಳನ್ನು ನಿಲ್ಲಿಸುತ್ತಾರೆ.ಸ್ತ್ರೀಯರು ಕಂಡಕಂಡ ಆಹಾರವನ್ನು ವಿಫುಲವಾಗಿ ಸೇವಿಸುತ್ತಾರೆ.ಗುರುಹಿರಿಯರ,ಪತಿಯ ಮಾತನ್ನು ಅನಾದರದಿಂದ ಕಾಣುತ್ತಾರೆ.ತಮ್ಮ ಪೋಷಣೆಯಲ್ಲಿ ನಿರತರೂ,ಶಾರೀರಿಕ,ಮಾನಸಿಕ ಶೌಚದಿಂದ ವರ್ಜಿತರೂ,ಕ್ಷುದ್ರಸ್ವಭಾವದವರೂ ಆಗುತ್ತಾರೆ.ಕಲಿಯುಗದಲ್ಲಿ ಸ್ತ್ರೀಯರು ನಿಷ್ಟುರವಾಗಿ ಮಾತಾಡುವವರಾಗುತ್ತಾರೆ.ಅತಿಯಾದ ಸುಳ್ಳುಗಳನ್ನು ಹೇಳುತ್ತಾರೆ.ದುಶ್ಶೀಲರೂ,ದುರ್ಜನರನ್ನು ಬಯಸತಕ್ಕವರೂ,ಗಂಡಸರ ವಿಷಯದಲ್ಲಿ ಕೆಟ್ಟದಾಗಿ ನಡೆದುಕೊಳ್ಳುವವರಾಗುತ್ತಾರೆ.

ವಟುಗಳು ಸಂಧ್ಯಾವಂದನಾದಿ ಕಾರ್ಯಗಳನ್ನು ನಿಲ್ಲಿಸುತ್ತಾರೆ.ವೈದಿಕವ್ರತಗಳನ್ನಾಚರಿಸದೇ ವೇದಾಧ್ಯಯನ ಮಾಡುತ್ತಾರೆ.ಗೃಹಸ್ಥರು ವೈಶ್ವದೇವಾದಿಹವನಗಳನ್ನು ಮಾಡುವುದಿಲ್ಲ.ಸತ್ಪಾತ್ರರಿಗೆ ದಾನವನ್ನು ನೀಡುವುದಿಲ್ಲ.ಸನ್ಯಾಸಿಗಳು ತಮ್ಮ ಮಿತ್ರರು,ಬಂಧುಗಳು ಇತ್ಯಾದಿ ಸ್ನೇಹಸಂಬಂಧಕ್ಕೆ ಕಟ್ಟುಬೀಳುತ್ತಾರೆ.ಕಲಿಯುಗದಲ್ಲಿ ರಾಜ್ಯವನ್ನಾಳುವವರು ಸಮರ್ಥರಾಗಿರುವುದಿಲ್ಲ.ಪ್ರಜಾರಕ್ಷಕರಾಗದೇ ಭಕ್ಷಕರಾಗುತ್ತಾರೆ.ಕೇವಲ ಶುಲ್ಕವನ್ನು ವಿಧಿಸಿ ಧನವನ್ನು ಪ್ರಜೆಗಳಿಂದ ಕಿತ್ತುಕೊಳ್ಳುತ್ತಾರೆ.ಪ್ರಜೆಗಳ ಸಂಪತ್ತನ್ನು ಅಪಹರಿಸುವ ಯತ್ನದಲ್ಲೇ ನಿರತರಾಗಿರುತ್ತಾರೆ.ಸಂಪತ್ತಿರುವವನು ಅಧಿಕಾರ ಪಡೆಯುತ್ತಾನೆ.ದುರ್ಬಲನು ಕೇವಲ ಆತನ ಸೇವಕನಾಗುತ್ತಾನೆ.ವೈಶ್ಯರು ತಮ್ಮ ವೃತ್ತಿಯನ್ನು ಬಿಟ್ಟು ಶೂದ್ರವೃತ್ತಿಯನ್ನನುಸರಿಸುತ್ತಾರೆ.ಶೂದ್ರರು ಸಂನ್ಯಾಸಧರ್ಮವನ್ನವಲಂಬಿಸುತ್ತಾರೆ.ಅಧಮರು ಪ್ರವ್ರಾಜಕ ಚಿಹ್ನೆಯನ್ನು ಧರಿಸುತ್ತಾರೆ.ವರ್ಣಾಶ್ರಮ ವ್ಯವಸ್ಥೆ ನಶಿಸುತ್ತಾ ಹೋದಂತೇ ಸಮಾಜವೇ ಅಯೋಮಯವಾಗುತ್ತದೆ.ನೀಚರಿಗೆ ಬಿರುದು-ಸನ್ಮಾನಗಳು ಸಿಕ್ಕಿ ಅವರು ಪಾಖಂಡವಾದದಲ್ಲಿ (ನಾಸ್ತಿಕವಾದ) ನಿರತರಾಗುತ್ತಾರೆ.ಬರಗಾಲ,ತೆರಿಗೆಗಳಿಂದ ಪೀಡಿತರಾದ ಜನರು ಗೋಧಿ,ಅಕ್ಕಿ,ಜವೆಗೋಧಿ ಮೊದಲಾದ ಧಾನ್ಯಗಳಿಂದ ಸಂಪದ್ಭರಿತವಾದಂತಹ ದೇಶಗಳಿಗೆ ವಲಸೆ ಹೋಗುತ್ತಾರೆ.

ವೇದಮಾರ್ಗವು ಲುಪ್ತವಾಗಿ ಪಾಖಂಡತನವೇ ಹೆಚ್ಚಾಗಿ ಸರ್ವತ್ರ ಅಧರ್ಮವು ಅಧಿಕವಾಗುತ್ತದೆ.ಅದರ ಪರಿಣಾಮ ಜನರ ಆಯಸ್ಸು ಅಲ್ಪವಾಗುತ್ತದೆ.ಬಾಲ್ಯದಲ್ಲಿಯೇ ಸಾವು-ನೋವುಗಳು ಸಂಭವಿಸುತ್ತವೆ.ಹನ್ನೆರಡನೇ ವರ್ಷದಿಂದಲೇ ತಲೆಗೂದಲು ಬೆಳ್ಳಗಾಗಲು ಶುರುವಾಗುತ್ತದೆ.ಆಯಸ್ಸು ಅಲ್ಪವಾಗುತ್ತಾ ಹೋಗುತ್ತದೆ.ಕಲಿಯುಗದಲ್ಲಿ ಜನರ ಪ್ರಜ್ಞಾಶಕ್ತಿ ಮಂದವಾಗುತ್ತದೆ.ಜನರು ಅರ್ಥವಿಲ್ಲದ ಚಿಹ್ನೆಗಳನ್ನು ಶರೀರದಲ್ಲಿ ಧರಿಸುತ್ತಾರೆ.(ಬಹುಶಃ ಟ್ಯಾಟೂ ಆಗಿರಬಹುದು...!!!)ಜನರ ಅಂತಃಕರಣ ನಾಶವಾಗುತ್ತದೆ.
ಮೈತ್ರೇಯರೇ..ಹೇಗೆ ಧರ್ಮವು ನಶಿಸುತ್ತಾ ಹೋಗುವುದೋ ಆಗ ಕಲಿಯುಗ ವೃದ್ಧಿಯಾಗುತ್ತಿದೆಯೆಂದು ತಿಳಿಯಬೇಕು.ಹೇಗೆ ಪಾಖಂಡವಾದಿಗಳ ಸಂಖ್ಯೆ (ಬಹುಶಃ ವಿಚಾರವಾದಿಗಳು,ಪ್ರಗತಿಪರರು,ಬುದ್ಧಿಜೀವಿಗಳಿರಬೇಕು..!!) ಅಧಿಕವಾಗುತ್ತದೆಯೋ ಆಗ ಕಲಿಯ ಪ್ರಭಾವ ಹೆಚ್ಚುತ್ತಿದೆಯೆಂದು ಅನುಮಾನಿಸಬೇಕು.ವೇದಮಾರ್ಗವನ್ನು ಅನುಸರಿಸುವ ಸಜ್ಜನರು ಕ್ಷೀಣಿಸುತ್ತಾ ಹೋದಂತೇ ಕಲಿಯು ವೃದ್ಧಿಗೊಳ್ಳುತ್ತಿದ್ದಾನೆಂದು ಅರಿಯಬೇಕು.ಧರ್ಮಾತ್ಮರಾದಂತಹ ಜನರು ಪ್ರಾರಂಭಿಸಿದ ಸತ್ಕಾರ್ಯಗಳು ನಿಷ್ಫಲಗೊಳ್ಳುತ್ತಿದ್ದಂತೇ ಆಗ ಕಲಿಯು ಪ್ರಾಧಾನ್ಯವನ್ನು ಗಳಿಸುತ್ತಿದ್ದಾನೆಂದು ಚಿಂತಿಸಬೇಕು.ಯಜ್ಞಗಳಿಗೆ ಅಧೀಶ್ವರನಾದಂತಹ ವಿಷ್ಣುವನ್ನು ಜನರು ಯಜ್ಞಗಳಿಂದ ಯಾವಾಗ ಆರಾಧಿಸುವುದಿಲ್ಲವೋ ಆಗ ಕಲಿಯು ಬಲಿಷ್ಟನಾಗುತ್ತಿದ್ದಾನೆಂದು ಗ್ರಹಿಸಬೇಕು.ಯಾವಾಗ ವೇದವಾದಗಳಲ್ಲಿ ಅನಾಸಕ್ತಿ ಮೂಡಿ,ಪಾಖಂಡವಾದಗಳಲ್ಲಿ ಆಸಕ್ತಿ ಬೆಳೆಯುವುದೋ ಆಗ ಕಲಿಯುಗವು ಬೆಳೆಯುತ್ತಿದೆಯೆಂದು ವಿವೇಕಿಗಳು ಅರಿತುಕೊಳ್ಳಬೇಕು.

ಮೈತ್ರೇಯರೇ..ಪಾಖಂಡವಾದಕ್ಕೆ ವಶರಾದ ಜನರು ಕಲಿಯುಗದಲ್ಲಿ ಜಗದೀಶ್ವರನಾದ,ಸರ್ವನಿಯಾಮಕನಾದ ಮಹಾವಿಷ್ಣುವನ್ನು ಪೂಜಿಸುವುದಿಲ್ಲ.ದೇವರಿಗೆ,ವೇದಗಳಿಗೆ,ವೇದಜ್ಞಾನಿ ಬ್ರಾಹ್ಮಣರಿಗೆ ಮಹತ್ವವನ್ನು,ಗೌರವವನ್ನು ನೀಡುವುದಿಲ್ಲ.ಕಲಿಯುಗವು ವರ್ಧಿಸಿದಾಗ ಮೋಡವು ಅತ್ಯಲ್ಪವಾದ ಮಳೆಯನ್ನು ಸುರಿಸುತ್ತವೆ.ಸಸ್ಯಗಳಿಂದ ದೊರೆಯುವ ಫಸಲು ಅಲ್ಪವಾಗುತ್ತದೆ.ಫಸಲಿನಲ್ಲಿರುವ ಶಕ್ತಿಯೂ ಇಳಿಮುಖವಾಗುತ್ತದೆ.ವರ್ಣಗಳೆಲ್ಲ ವಿಶೇಷವಾಗಿ ಶೂದ್ರಮಯವಾಗಿರುತ್ತದೆ.ಮೇಕೆಯ ಹಾಲಿನ ಉಪಯೋಗ ಅಧಿಕವಾಗುತ್ತದೆ.ಅತ್ತೆಮಾವಂದಿರೇ ಪುರುಷರಿಗೆ ಗುರುಗಳಾಗುತ್ತಾರೆ..!!ಪುರುಷರು ಶ್ವಶುರನಿಗೆ ವಶರಾಗುತ್ತಾರೆ.ತಂದೆ-ತಾಯಿಯರನ್ನು ತಿರಸ್ಕರಿಸುತ್ತಾರೆ.ಬುದ್ಧಿಹೀನರಾದ ಜನರು ವಾಚಿಕ-ಮಾನಸಿಕ-ಶಾರೀರಿಕ ದೋಷಗಳಿಗೆ ವಶರಾಗಿ ಅನುದಿನವೂ ಪಾಪಕರ್ಮಗಳನ್ನಾಚರಿಸುತ್ತಾರೆ.ನಿಃಸತ್ವರೂ,ಶೌಚಹೀನರೂ,ನಿರ್ಲಜ್ಜರೂ ಆದ ಕಲಿಯುಗದ ಜನತೆಗೆ ಎಲ್ಲ ದುಃಖಗಳೂ ಬಂದೊದಗುತ್ತವೆ.ಲೋಕವು ವೇದಾಧ್ಯಯನರಹಿತವಾದರೂ,ಯಜ್ಞಾದಿಕರ್ಮಗಳು ವರ್ಜಿತವಾದರೂ,ಧರ್ಮವು ಕ್ಷೀಣವಾಗಿ ಎಲ್ಲೋ ಒಂದು ಕಡೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುತ್ತದೆ.

ಆದರೆ ಕಲಿಯುಗಕ್ಕೆ ಒಂದು ವಿಶೇಷವಾದ ಗುಣವಿದೆ.ಕೃತಯುಗದಲ್ಲಿ ಮಹತ್ತರವಾದ ಪ್ರಯತ್ನದಿಂದ ಲಭಿಸುತ್ತಿದ್ದ ಪುಣ್ಯ,ಕಲಿಯುಗದಲ್ಲಿ ಅಲ್ಪಪ್ರಯತ್ನದಿಂದಲೇ ಲಭಿಸುತ್ತದೆ.ಇದೊಂದೇ ಕಲಿಯುಗದ ವಿಶೇಷಗುಣ.

ಸಹಸ್ರಾರು ವರ್ಷಗಳ ಹಿಂದೆಯೇ ಪರಾಶರಮುನಿಗಳು ನುಡಿದ ಭವಿಷ್ಯವಿಂದು ನಿಜವಾಗುತ್ತಿದೆ.ವೇದ-ಶಾಸ್ತ್ರ-ಪುರಾಣಗಳು ಸುಳ್ಳೆಂದು ವಾದಿಸಿ,ಅಜ್ಞಾನದ ಕತ್ತಲೆಯಲ್ಲೇ ಮುಳುಗಿರುವ ಕಲಿಯುಗದ ಪಾಖಂಡವಾದಿಗಳು ಕಣ್ತೆರೆದು ಇಂತಹ ವಿಷಯಗಳನ್ನು ಅಧ್ಯಯನ ಮಾಡಬೇಕಿದೆ.

“ಸರ್ವೇ ಭವಂತು ಸುಖಿನಃ”
About the Author

ಶ್ರಮದಿಂದ ಗಳಿಸಿದ್ದು ಸಂಸ್ಕೃತ ಸ್ನಾತಕೋತ್ತರ ಪದವಿ.
ಮಾಡುತ್ತಿರುವುದು ಸಂಸ್ಕೃತ ಹಾಗೂ ಸಂಸ್ಕೃತಿಯ ಪ್ರಸಾರದ ಕಾಯಕ.
ಮಹತ್ವ ನೀಡಿದ್ದು "ಪ್ರಜ್ವಾಲಿತೋ ಜ್ಞಾನಮಯಃ ಪ್ರದೀಪಃ"ಎಂಬ ಮಾತಿಗೆ.
ಅಜ್ಞಾನದ ಅಂಧಕಾರ ದೂರವಾಗಿ ಜ್ಞಾನದೀಪ ಬೆಳಗುತ್ತಿರಲೆಂಬುದೇ ಆಶಯ.
ಬದುಕಿಗೆ ನಾಲ್ಕು ಒಳ್ಳೆಮಾತು.ಇಷ್ಟವಾದರೆ ಸ್ವೀಕರಿಸಿ. Email: pradeepkasage@gmail.com

ಸನಾತನ ಧರ್ಮದ ಆಚಾರ-ವಿಚಾರಗಳ ಚಿಂತನೆ , ಗೋಹತ್ಯೆಯ ವಿರೋಧ , ಸಂಸ್ಕೃತ ಭಾಷೆಯ ಸಂರಕ್ಷಣೆ , ಸ್ತ್ರೀ ಶಕ್ತಿ ಬಲವರ್ಧನೆ , ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳ ಅನಾವರಣ , ನಮ್ಮ ದೇಶ , ನಾಡು , ನುಡಿಯ ಬಗ್ಗೆ ಜಾಗೃತಿ.. ಭಾರತಮಾತೆಯ ಕೀರ್ತಿಯನ್ನು ಉತ್ತುಂಗಕ್ಕೇರಿಸಲು ಜೊತೆಯಾಗೋಣ ಬನ್ನಿ...
Join hands with leading Social Awareness Portal and Reach large number of viewers! Sign up with us to advertise your brand/product. Contact us NOW!
ನಮ್ಮ ಈ ನಿಸ್ವಾರ್ಥ ಸೇವೆಗೆ ನಿಮ್ಮ ನೆರವನ್ನು ಬಯಸುತ್ತಿದ್ದೇವೆ. ಸಲಹೆ, ಸೂಚನೆ ಜಾಹೀರಾತುಗಳಿಗೆ ನಮ್ಮನ್ನು ಸಂಪರ್ಕಿಸಿ.
Email: wefightforrights@gmail.com
Mobile: +91 94 83 872488
ವಂದೇ ಮಾತರಂ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ