ಹಿಂದು – ಒಂದು ವೇದೋಕ್ತ ಶಬ್ದ
ಹಿಂಕೃಣ್ವತೀ ವಸುಪತ್ನೀ ವಸೂನಾಂ ವತ್ಸಮಿಚ್ಛಂತೀ ಮನಸಾಭ್ಯಾಗಾತ್ |
ದುಹಾಮಶ್ವಿಭ್ಯಾಂ ಪಯೋ ಅಘ್ನ್ಯೇಯಂ ಸಾ ವರ್ಧತಾಂ ಮಹತೇ ಸೌಭಗಾಯ
|| ಋಗ್ವೇದ ೧-೧೬೪-೨೭ ||
ಒಟ್ಟು ಮಂತ್ರದ ಸಾರಾಂಶ ರೂಪೀ ಸೂತ್ರವೇ ಆದ್ಯಕ್ಷರ ಸಂಯೋಗದಿಂದ ಉಂಟಾಗುವ “ಹಿಂದು” ಎಂಬ ಶಬ್ದ. ಹಿಂಕೃಣ್ವತೀ ಎಂದರೆ ಪ್ರಕೃತಿಯ ಒಂದು ವಿಶಿಷ್ಟ ತರಂಗ ವ್ಯವಸ್ಥೆಯ ಸದಾಕಾಲ ವ್ಯಕ್ತವಾಗುವ ಘೋಷ. ಹಿಂಕಾರದ ಆ ಘೋಷ ಅಥವಾ ಗಾನವನ್ನು ವಿಸ್ತಾರವಾಗಿ ಸಾಮವೇದವು ತೋರಿಸಿಕೊಡುತ್ತದೆ. ವಿಶೇಷವಾಗಿ ಗಾಯತ್ರ ಸಾಮದ ಪ್ರಕೃತಿ ಗಾನದಲ್ಲೇ ಹಿಂಕಾರ ಹಿಂಜಲ್ಪಟ್ಟು ವಿಸ್ತರಿಸಲ್ಪಟ್ಟಿದೆ. ಇನ್ನು ಹಲವಾರು ಕಡೆ ಹಿಂಕಾರದ ಮಹತ್ವ ಹೇಳಲ್ಪಟ್ಟಿದೆ. ವೇದವು ನಾದ ರೂಪದಲ್ಲಿದೆ. ಭೂಮ್ಯಂತರ್ಗತ ವೇದ ತರಂಗವು ಹಿಂಕಾರ ರೂಪದಲ್ಲಿ ವ್ಯಕ್ತವಾದಾಗ ಅದು ಒಂದು ವಿಶೇಷ, ವಿಶಿಷ್ಟ ವಿಚಾರಪ್ರದ ಭಾಗದಲ್ಲಿ ವ್ಯಕ್ತಿಯನ್ನು ಕೊಂಡೊಯ್ಯುತ್ತದೆ. ಆ ಶಕ್ತಿಯೇ ಪತ್ನಿ ಎನ್ನಿಸಿಕೊಳ್ಳುತ್ತದೆ. ಈ ಮೂಲಪ್ರಕೃತಿಯನ್ನಾಧರಿಸಿದ ಜೈವಿಕವೆಲ್ಲವೂ ಗಿಡಮರ ಸಹಿತವಾದದ್ದು ವಸು. ಅವೆಲ್ಲವನ್ನೂ ಉತ್ತಮ ವಿಚಾರಧಾರೆಯೊಂದಿಗೆ ಕೊಂಡೊಯ್ಯುವ ಶಕ್ತಿಯೇ ಪತ್ನಿ. ಹಾಗಾಗಿ ಹಿಂಕಾರವು ವಸುಪತ್ನೀಯಾಗಿ ಪ್ರವರ್ಧಮಾನಕ್ಕೆ ಬರುತ್ತದೆ. ವತ್ಸಮಿಚ್ಛಂತೀ ಎಂದರೆ ಪುನರುತ್ಪಾದನೆ ಸಹಿತವಾದಂತಹಾ ಸಾರ್ವತ್ರಿಕ ನಿತ್ಯ ನಿರಂತರ ಬೆಳವಣಿಗೆ. ಅದನ್ನೇ ವತ್ಸ ಎಂದದ್ದು. ಅದೊಂದು ವಿಶೇಷ ತರಂಗಾಧಾರಿತ ಪ್ರಕೃತಿ ವ್ಯವಸ್ಥೆ. ಅದು ವಸೂನಾಂ ಅಂದರೆ ಮೂಲಪ್ರಕೃತಿಯನ್ನಾಧರಿಸಿದ ಜೈವಿಕವೆಲ್ಲವೂ ಮನಸಾಭ್ಯಾಗಾತ್ – ಮನಸ್ಸಿನ ಮುಖೇನವೇ ಅಭಿವ್ಯಕ್ತ ರೂಪದಲ್ಲಿ ಭಾವನೆಗಳಿಂದಲೇ ರತವಾಗುತ್ತದೆ, ಹಾಗಾಗಿ ಭಾರತವಾಗುತ್ತದೆ.
ದುಹಾಮಶ್ವಿಭ್ಯಾಂ ಪಯೋ ಅಘ್ನ್ಯೇಯಂ – ಹಾಹಾಕಾರವನ್ನು ಲುಪ್ತಗೊಳಿಸುವ ಶಕ್ತಿಯುಳ್ಳ ಹಾಲು ಆಯಾಯ ಜೀವಿಗಳಿಗೆ ಅದರದರ ನಿಯಮದಂತೆ ಪ್ರಥಮ ಆಹಾರವಾಗಿ ಒದಗುತ್ತದೆ. ಅಂದರೆ ಓಷದೀ ರೂಪದಲ್ಲಿ ತಾಯಿ+ಹಾಲು ಎಂಬ ದ್ವಿಸೂತ್ರವು ಪೋಷಕವಾಗಿ ಒದಗಣೆಯಾಗುತ್ತದೆ. ಅಂತಹಾ ವ್ಯವಸ್ಥೆಯಲ್ಲಿ ಸಪ್ತಮಾತೃಕಾ ಚಿಂತನೆ ಇದೆ. ಅದರಲ್ಲಿ ಜನ್ಮಕೊಟ್ಟ ತಾಯಿ, ಗೋವೂ ಇತ್ಯಾದಿ ಬರುತ್ತದೆ. ಅವೆಲ್ಲವೂ ಗೌರವಾನ್ವಿತವಾಗಿ, ಪೂಜನೀಯವಾಗಿ, ವಧಾರ್ಹವಲ್ಲದಂತೆ ರಕ್ಷಿಸಲ್ಪಡುವ ವ್ಯವಸ್ಥೆ ಇರುತ್ತದೆ. ಸಾ ವರ್ಧತಾಂ ಮಹತೇ ಸೌಭಗಾಯ – ವೇದವು ಉಂಟುಮಾಡಿದ ಸಂವಹನ ತರಂಗವು ಅಗಾಧ, ಜೀವಜಗತ್ತಿನ ಜೀವಕೋಟಿಗಳ ಸ್ಥಿರತೆ, ಬದ್ಧತೆಯನ್ನೊಳಗೊಂಡ ಧೈವೀಕ ವ್ಯವಸ್ಥೆಯನ್ನು ಕಾಪಾಡುವ ದೇಹಾಂತರ್ಗತ ತರಂಗಗಳ ಮೂಲವೇದ ತರಂಗವು ಒಳ್ಳೆಯ ದಾರಿ ಅಥವಾ ಮಾರ್ಗವನ್ನೇ ತೋರುತ್ತದೆ. ಜೀವ ಜಗತ್ತಿನ ಸತ್ವವೇ ವೇದ. ಅಂತಹಾ ವೇದಾಧಾರಿತವಾಗಿ ಸಮೀಕೃತವಾಗಿರುವ ಗುಂಪೇ ಹಿಂ+ದು ಎಂದು ಉತ್ಕೀಲಿಸಲ್ಪಟ್ಟ ಸಮುಚ್ಛಯ ವ್ಯವಸ್ಥೆ. ಇದು ವೇದಗಳ ಸ್ವರ ಸಹಿತವಾಗಿ ಅರ್ಥೈಸುವ ವಿವಿಧ ವಿಧಾನಗಳಿಂದ ಬ್ರಾಹ್ಮೀ ಭಾಷೆಯಲ್ಲಿ ನೀಡಿರುವ ಒಂದು ವಿಧಾನದ ಭಾವಾರ್ಥವಾಗಿದೆ.
ಹಿಂದು ಎಂದರೆ ಏನೆಂದು ಆ ಮಂತ್ರ ವಿವರಿಸಿದೆ. ಅಂತಹಾ ಗುಂಪಿನ ಜನರು ಇರುವ ಸ್ಥಾನವನ್ನು ಹಿಂದೂಸ್ಥಾನ ಎಂದು ಕರೆದಿರುವುದು ಅಪಭ್ರಂಶವಲ್ಲ, ಅದು ಸಾಧು. ಮೆಕಾಲೆ ಶಿಕ್ಷಣ ಬಂದ ಮೇಲೆ ವೇದವನ್ನು ಅಧ್ಯಯನ ಮಾಡುವ ಪದ್ಧತಿಯೇ ಮರೆತು ಹೋಗಿದೆ. ವೇದವು ಸಂಸ್ಕೃತದಲ್ಲಿ ಇಲ್ಲ, ಅದು ಬ್ರಾಹ್ಮಿ ಭಾಷೆಯಲ್ಲಿದೆ. ಇನ್ನು ಅರ್ಥೈಸುವ ವಿಧಾನದಲ್ಲಿ ಗಣಕ ಗುಣಕದ ಹಲವಾರು ಸೂತ್ರಗಳಿವೆ. ಬರೆ ಬ್ರಿಟೀಷ್ ಮಿಷನರಿಗಳ ಕ್ರೈಸ್ತ ಸಂಶೋಧಕರು ಬರೆದು ತಿದ್ದಿ ತೀಡಿರುವ ಶಬ್ದಕೋಶ ಹಿಡಿದು ಇಂದಿನ ವಿದ್ವಾಂಸರು ಸೋಲುತ್ತಿದ್ದಾರೆ. 3500 ವರ್ಷಗಳಿಗೂ ಹಿಂದಿನಿಂದ ರಚನೆ ಆಗುತ್ತಾ ಬಂದ ಸರ್ವಭಾಷಾಮಯಿಭಾಷಾ ಸಿರಿಭೂವಲಯ ಎಂಬ ಕನ್ನಡದ ಲಭ್ಯ ಅತೀ ಪುರಾತನ ಅಂಕಕಾವ್ಯವೂ ಇದೇ ರೀತಿಯ ಅಕ್ಷರ ಸಂಯೋಜನೆಯನ್ನು ಅಂಕಾಕ್ಷರ ಗಣಿತ ವಿಧಾನದಲ್ಲಿ ತೋರಿಸಿದೆ. ಜಯಾಖ್ಯಾನ ಸಂಹಿತೆಯ ಮೂಲ ಭಗವದ್ಗೀತೆಯ ಶ್ಲೋಕಗಳು ಇದೇ ಕ್ರಮದಲ್ಲಿ ಇವೆ. ಲಗತ್ತಿಸಿರುವ ಉದಾಹರಣೆ ಗಮನಿಸಬಹುದು.
ಹಿಂಕೃಣ್ವತೀ ಎಂದೂ ಹಿಙ್ಕೃಣ್ವತೀ ಎಂದೂ ಬರೆಯುತ್ತಾರೆ. ಅಲ್ಲಿ ವಿಶೇಷ ಅನುನಾಸಿಕದ ಸಂಯೋಜನೆ ಇದೆ. ಈಗ ಅದು ಬಳಕೆಯಲ್ಲಿಲ್ಲ. ಬ್ರಾಹ್ಮಿ ಭಾಷೆಯಲ್ಲಿ ಅಂದಾಜು ೨೪ ಅನುಸಾಸಿಕಗಳಿವೆ. ಮಂತ್ರದ ಪ್ರಕಾರ ಹಿಂ ಅಥವಾ ಹಿಙ್ ಎಂದು ಇದ್ದದ್ದು ಸೂತ್ರವಾಗುವಾಗ ಹಿಂದು, ಹಿಙ್ದು, ಅಥವಾ ಹಿನ್ದು ಎಂದಾಗಬಹುದು. ಬರೆಯುವುದಕ್ಕೆ ಏನೇ ಬರೆದುಕೊಂಡರೂ ಮೂಲದಲ್ಲಿರುವುದು ಹಿಕಾರದ ಮುಂದೆ ಇರುವ ಒಂದು ವಿಶೇಷ ಅನುನಾಸಿಕ. ಅದರ ಅನುಸಂಧಾನದಿಂದ ದುಹಾಮಿಚ್ಛಂತೀ… ಸಂಯೋಜಿಸಲ್ಪಡುತ್ತದೆ. ಅದು ವಿಶೇಷ ಒಕ್ಕೂಟವಾದ ಹಿಂದು. ಇದು ಶ್ರೌತ.
ಇಲ್ಲಿ ಈಗಿನ ಅಧುನಿಕ ವ್ಯಾಕರಣ ನಿಯಮಗಳು ಅನ್ವಯವಾಗುವುದಿಲ್ಲ. ವೇದವು ವ್ಯಾಕರಣದಿಂದ ಆದದ್ದಲ್ಲ. ವೇದ ಉದಯಿಸಿದ್ದು ಆದಿ ನಾದದ ಮೂಲದಿಂದ. ಜ್ಞಾನವೇ ವೇದ ತರಂಗಗಳು. ಅವು ನಾದತರಂಗದಲಿ ಮೇಳೈಸಿತು. ಆ ನಾದವೇ ವೇದ ಎಂದೆಂದು ಸಾರುತ ಮಾನವನು ಎದ್ದನು ಊರ್ಧ್ವಗತಿಗಾಗಿ. ವಾದದೊಳು ಹುಟ್ಟಿದವು ಉಪನಿಷತ್, ಪುರಾಣಾದಿಗಳು; ವೇದದೊಳಗಣ ವಿಚಾರ ಚರ್ಚಿಸಿ ಸಾಂಖ್ಯದಾದಿಯಾಗಿ ನಿರುಕ್ತ, ಜ್ಯೋತಿಷ, ವ್ಯಾಕರಣಗಳು ಉದಿಸೆ; “ಮೀಮಾಂಸಕವಾದವು”.
|| ಜೈ ಹಿಂದ್ ||
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ