ಮಂಗಳವಾರ, ಏಪ್ರಿಲ್ 17, 2018

ಇನ್ನೆಲ್ಲಿ ಬೆಂಕಿ ಹತ್ತಿಸ್ತಾರೋ ನೋಡ್ಬೇಕು!!

 ಹಿಂದೊಮ್ಮೆ ಜಿಗ್ನೇಶ್ ಮೇವಾನಿ, ಸಿದ್ದರಾಮಯ್ಯನವರ ಆಣತಿಯ ಮೇರೆಗೆ ಉಡುಪಿ ಮಠಕ್ಕೆ ಮುತ್ತಿಗೆ ಹಾಕುವ ಬೆದರಿಕೆ ಹಾಕಿದ್ದು ನೆನಪಿದೆಯಾ? ಅವತ್ತು ಯುವಾಬ್ರಿಗೇಡ್ ಕನಕ ನಡೆಯಿಂದ ಅವರಿಗೆ ಪ್ರತ್ಯುತ್ತರ ಕೊಟ್ಟಿತ್ತು. ನಾವು ಬರಿ ಕಾರ್ಯಕ್ರಮ ಮಾಡಿ ಸುಮ್ಮನಾಗಿರಲಿಲ್ಲ. ದಲಿತ ಹೆಣ್ಣುಮಕ್ಕಳನ್ನು ಸ್ವಾವಲಂಬಿಯಾಗಿಸುವಲ್ಲಿ ಶ್ರಮವಹಿಸುತ್ತಿದ್ದೇವೆಂದು ಪೇಜಾವರ ಶ್ರೀಗಳ ಎದುರಲ್ಲಿಯೇ ಮಾತು ಕೊಟ್ಟಿದ್ದೆವು. ಅದಕ್ಕೆ ಸಹಕಾರ ನೀಡುವುದಾಗಿ ಅವರೂ ವೇದಿಕೆಯ ಮೇಲೆಯೇ ಭರವಸೆ ಕೊಟ್ಟಿದ್ದರು.
ನಾವು ನುಡಿದಂತೆಯೇ ನಡೆದಿದ್ದೇವೆ. ಕನಕ ನಡೆಯಾಗಿ ಮೂರ್ನಾಲ್ಕು ತಿಂಗಳಲ್ಲಿಯೇ ಬೆಳಗಾವಿಯ ಕಲ್ಲೋಳಿಯಲ್ಲಿ ನಿವೇದಿತಾ ಸೇವಾ ಕೇಂದ್ರ ಶುರು ಮಾಡಿ ಸ್ಥಳೀಯ ಹೆಣ್ಣುಮಕ್ಕಳಿಗೆ ಹೊಲಿಗೆ ತರಬೇತಿ ಕೊಡಿಸಿ ಅವರಿಂದ ಕೈಚೀಲ ಮಾಡಿಸಿ ಮಾರುಕಟ್ಟೆಗೆ ತಲುಪಿಸಲಾರಂಭಿಸಿದೆವು. ಬೆಂಗಳೂರಿನ ಭಾರತಿ ಅಕ್ಕ ಈ ದಿಸೆಯಲ್ಲಿ ಮಾಡಿದ ಸಹಕಾರ ಅಷ್ಟಿಷ್ಟಲ್ಲ. ಸ್ವಾವಲಂಬಿಯಾದ ಈ ಹೆಣ್ಣುಮಕ್ಕಳು ಸ್ವಾಭಿಮಾನಿಗಳಾಗಿ ಅನೇಕ ಜಾತ್ರೆ, ವಸ್ತು ಪ್ರದರ್ಶನಗಳಲ್ಲಿ ತಮ್ಮ Stall ತೆರೆದು ಸೇವಾ ಕೇಂದ್ರದ ಪರಿಚಯ ಮಾಡಿಕೊಡಲಾರಂಭಿಸಿದರು.
ಇತ್ತೀಚೆಗೆ ಈ ಕೇಂದ್ರದ ಮೂಲಕ ಕುರ್ತಾ, ಶರ್ಟುಗಳನ್ನು ಹೊಲಿದು ಹೊಸ brand ರೂಪಿಸಬೇಕೆಂದು ನಿರ್ಧರಿಸಿದಾಗ ಅದಕ್ಕೆ ಬೇಕಾದ ಯಂತ್ರಗಳನ್ನು ಕೊಳ್ಳಲು ಹಣ ನೀಡಿದವರು ಪೇಜಾವರ ಶ್ರೀಗಳು. ಅವರು ಅಕ್ಷರಶಃ ದೇವರು. ವೇದಿಕೆಯ ಮೇಲೆ‌ ನೀಡಿದ್ದ ವಾಗ್ದಾನವನ್ನು ಪರ್ಯಾಯದ ಗಡಿಬಿಡಿಯಲ್ಲೂ ನೆನಪಿಸಿಕೊಂಡು ಕರೆ ಮಾಡಿ‌ ತನ್ನಿಂದ ಸಹಾಯ ಸ್ವೀಕರಿಸಿರೆಂದಿದ್ದರು. ಕೊಡುತ್ತೇನೆಂದದ್ದು ಅವರ ಕಚೇರಿಯಿಂದ ಸೂಕ್ತ ಸಮಯದಲ್ಲಿ ಬರದೆ ಹೋದಾಗ ಇತ್ತ ನಾವೂ ಚಡಪಡಿಸುತ್ತಿದ್ದೆವು. ಆ ವೇಳೆಗೆ ಶ್ರೀಗಳಿಗೆ ಅಪಘಾತವಾಗಿ ಹಾಸಿಗೆ ಹಿಡಿದಿದ್ದರು. ಅವರನ್ನು ಆ‌ ಹೊತ್ತಲ್ಲಿ ಕೇಳುವುದಾಗದೆಂದು ನಾವು ‌ಸುಮ್ಮನಾಗಿಬಿಟ್ಟೆವು. ಅಚ್ಚರಿಯೇನು ಗೊತ್ತೇ? ಅಂತಹ ಸಂದರ್ಭದಲ್ಲೂ ಅವರೇ ನೆನಪಿಸಿಕೊಂಡು, ಕರೆ ಮಾಡಿ ಒಂದು ಲಕ್ಷದ 89 ಸಾವಿರ ರೂಪಾಯಿಯ ಚೆಕ್ಕನ್ನು ನಮಗೆ ಕಳಿಸಿಕೊಟ್ಟರು. ನಮ್ಮೆಲ್ಲ ಸಾಹಸವನ್ನೂ ಕೇಳಿ ಯಂತ್ರ ಕೊಡಬೇಕಾದ ಅಂಗಡಿಯವರು ಸಾಕಷ್ಟು ಬೆಲೆ‌ ಕಡಿಮೆ ಮಾಡಿ ನಮ್ಮ ಕೇಂದ್ರಕ್ಕೆ ಇನ್ನೊಂದು ಯಂತ್ರ ಹೆಚ್ಚಿಗೆ ಸಿಗುವಂತೆ ನೋಡಿಕೊಂಡರು.
ಓಹ್! ಇಂದು ಕೇಂದ್ರವನ್ನು ಕಂಡಾಗ ಖುಷಿಯೆನಿಸುತ್ತದೆ. ಉಡುಪಿಯ ವೇದಿಕೆಯ ಮೇಲೆ ಬಾಯ್ಬಡಕೊಂಡವರೆಲ್ಲ ಸರ್ಕಾರದ‌ ಸವಲತ್ತುಗಳಿಗೆ ನಾಲಿಗೆ ಚಾಚಿ‌ ಹಾಯಾಗಿದ್ದಾರೆ. ಆದರೆ ಯುವಾಬ್ರಿಗೇಡ್ ಅಂದು ಮಾಡಿದ ಸಂಕಲ್ಪದಿಂದಾಗಿ ಒಂದಷ್ಟು ದಲಿತ ಹೆಣ್ಣುಮಕ್ಕಳು ನೆಮ್ಮದಿಯ ಬದುಕು ಸವೆಸುತ್ತಿದ್ದಾರೆ.
ಅಂದಹಾಗೆ ಸಿದ್ದರಾಮಯ್ಯನವರು ಮತ್ತೊಮ್ಮೆ‌ ಜಿಗ್ನೇಶ್ ಮೇವಾನಿಯನ್ನು  ರಾಜ್ಯಕ್ಕೆ ಕರೆಸುತ್ತಿದ್ದಾರಂತೆ!!
ಇನ್ನೆಲ್ಲಿ ಬೆಂಕಿ ಹತ್ತಿಸ್ತಾರೋ ನೋಡ್ಬೇಕು!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ