ಭಾನುವಾರ, ಏಪ್ರಿಲ್ 5, 2015

ಗರೀಬಿ ಹಟಾವೋ ಎಂದು ಹೇಳಿ - ಮಾಡಿದ್ದು ಬಡವರ ಸೃಷ್ಟಿ

ಭಾರತದ ರಾಜಕಾರಣದಲ್ಲಿ ದೊಡ್ಡದಾಗಿ ಕೇಳಿ ಬರುತ್ತಿದ್ದುದು  'ಬಡವರು` ಎಂಬ ಪ್ರಬಲ ವಿಚಾರ. ಯಾವುದೇ ಒಂದು ಯೋಚನೆ  ಯೋಚನೆ ರಾಜಕೀಯ  ಪಕ್ಷಗಳಲ್ಲಿನಡೆಯುತ್ತಿದ್ದರೆ ಅದರ ಮೂಲದಲ್ಲಿ 'ಬಡವ` ಎಂಬುದೆ ಆಗಿರುತ್ತದೆ,. ಚುನಾವಣೆಗಳು ಬಂದಾಗ ಈ ಚಟುವಟಿಕೆಗಳಿಗೆ ಚುರುಕು ಬರುತ್ತದೆ. ದೇಶಕ್ಕೆ  ಸ್ವಾತಂತ್ರ ಬಂದು ಅರವತ್ತೇಳು ವರ್ಷ ಕಳೆದಿದೆ. ಆದರೆ ದೇಶ ಇನ್ನೂ ಹೇಳುತ್ತಿದೆ ನಮ್ಮದ ಬಡರಾಷ್ಟ್ರ ಎಂದು. ಆದರೆ ನಮ್ಮವರ ಹಣ ಸ್ವಿಸ್ ಬ್ಯಾಂಕ್ ಗಳಲ್ಲಿ ಇರುವ ಒಂದು ಅಂದಾಜು ೭೦,೦೦,೦೦೦ ಕೋಟಿ.  ಹಾಗೆಯೇ ೩,೬೫೨ಕೋಟಿ ವಾರಿಸುದಾರರಿಲ್ಲದೆ ಬಿದ್ದಿರುವ ಹಣ ಇದೆ.  ಒಂದು ಕಡೆಯಲ್ಲಿ ಊಟಕ್ಕೆ, ಜೀವನಕ್ಕೆ ಹೋರಾಟ ಮಾಡಬೇಕಾದ ಪರಿಸ್ತಿತಿಯಲ್ಲಿ ಬದುಕುತ್ತಿರುವ ಜನ. ಇನ್ನೊಂದು ಕಡೆಯಲ್ಲಿ ಹಣವನ್ನು  ಗೋಣಿ ಚೀಲಗಳಲ್ಲಿ ತುಂಬಿ  ಗೋಡನ್ ಗಳಲ್ಲಿ ಇರಿಸಿಕೊಂಡಿರುವ  ನಮ್ಮ ಜನ.   ಹಣಚಲಾವಣೆಯಲ್ಲಿದ್ದರೆ ಮಾತ್ರ ಬೆಲೆ.  ಇಲ್ಲದಿದ್ದರೆ ಅದು ಕೇವಲ ಕಾಗದ ಚೂರು. 

ಒಂದು ಕಡೆಯಿಂದ ಭಾರತದ ಜನ ಜೀವನಕ್ಕೆ ಹರಸಾಹಸ ಪಡುವ ಪರಿಸ್ಥಿತಿಯಲ್ಲಿರುವಂತಹ ಪರಿಸ್ತಿತಿ ಇದ್ದರೆ . ಇನ್ನು ಕೆಲವರು ಭಾರತದ ಆರ್ಥಿಕ ಸಂಪತ್ತನ್ನು ಕೊಳ್ಳೆ ಹೊಡೆದು ಅಲ್ಲಿ ಇಲ್ಲಿ ಶೇಖರಿಸಿ ಇಟ್ಟಿರುವುದು ನೋಡಿದರೆ ನಮ್ಮ ದೇಶದ ಆಡಳಿತಾತ್ಮಕ ವ್ಯವಸ್ಥೆ ಹೇಗಿತ್ತು ಎಂಬುದಕ್ಕೆ ಸಾಕ್ಷಿ.  ಸರಕಾರಿ ನೌಕರರಿಗೆ,  ಬ್ಯಾಂಕ್ ಗಳಲ್ಲಿ ಇರುವವರಿಗೆ, ಐಟಿ ೦- ಬಿಟಿ ಕಂಪೆನಿಗಳಲ್ಲಿ ದುಡಿಯುತ್ತಿರುವವರಿಗೆ ಯಾವುದೇ ತೊಂದರೆ ಇಲ್ಲ. ಅವರು ಜೀವನ ಸಾಗಿಸುವದರೊಂದಿಗೆ  ತಮ್ಮದೇ ಆದ ಸ್ವಂತ ಮನೆ ಕಾರು ಈ ಮೊದಲಾದ ಸವಲತ್ತುಗಳನ್ನು ಹೊಂದಿಕೊಳ್ಳಲು  ಬೇಕಾದ ಆದಾಯವಿದೆ. ಆದರೆ ಕಷ್ಟ ಏನೆಂದರೆ  ಖಾಸಗೀ ಸಂಸ್ಥೆಗಳಲ್ಲಿ ದುಡಿಯುವ ಗಾರ್‍ಮೆಂಟ್ ಗಳಲ್ಲಿ ನೌಕರಿ ಮಾಡುವ  ಮುದ್ರಣಾಲಯಗಳಲ್ಲಿ ದುಡಿಯುವ, ಗ್ಯಾರೇಜುಗಳಲ್ಲಿ, ಈ ಮೊದಲಾದ ಅಸಂಘಟಿತ ಕಾರ್ಮಿಕರ ಪರಿಸ್ಥಿತಿಯೂ ಯಾವ ರೀತಿಯಲ್ಲಿಯೂ ಚೆನ್ನಾಗಿಲ್ಲ.  ಅದರಲ್ಲೂ ಕಟ್ಟಡ ಕೂಲಿ ಕಾರ್ಮಿರು ''ಇಷ್ಟು ಕೊಟ್ಟರೆ ಬರುತ್ತೇನೆ ಇಲ್ಲದಿದ್ದರೆ ಇಲ್ಲ'' ಎಂಬ ನೀತಿಯಿಂದಾಗಿ ಆರ್ಥಿಕವಾಗಿ ದುರ್ಬಲರೂ ಅಲ್ಲ - ಸಬಲರೂ ಅಲ್ಲ ಎಂದು ಹೇಳಬಹುದಾದರೂ ಅವರ ಜೀವನದಲ್ಲಿ  ಒಂದು ನಿಗದಿತ ವಯಸ್ಸಿನ ನಂತರ ಅವರ ಸ್ತಿತಿಯೂ  ಅತ್ಯಂತ  ಹೀನಾಯವಾಗುವ ಪರಿಸ್ಥಿತಿ ಇದೆ.

ಅಂದರೆ ನಾವು ಹೇಳಿರುವುದು ಸಮತಾ ವಾದ - ಸಮಾಜ ವಾದ.  ಆದರೆ ಆಗಿರುವುದು  ಅಸಮಾನತೆಯ ಅಂತರ ನಂಬಲಿಕ್ಕೆ ಸಾಧ್ಯವಿಲ್ಲದಷ್ಟೂ  ಹೆಚ್ಛಾಗಿದೆ. ಲೋಕಾಯುಕ್ತ ದಾಳಿಗೆ ಒಳಗಾಗಿ ಅನಧಿಕೃತ ಕೋಟ್ಯಾಂತರ ಹಣ ಸಂಗ್ರಹಿಸಿರುವವರನ್ನು ಹಿಡಿದು ಹಾಕಿರುವುದೂ   ಕೂಡಾ 'ನಾನು' ಬದುಕ ಬೇಕು. ನಾನು ಹಣ ಸಂಪಾದಿಸಬೇಕು. ನಾನು ಸುಖವಾಗಿರಬೇಕು ಎಂಬ ಭ್ರಮೆಯಲ್ಲಿ ದೇಶವನ್ನು ಕೊಳ್ಳೆ ಹೊಡೆದಿರುವ ಅರ್ಥವೇ ಬಡತನವನ್ನು ಹಂಚಿರುವುದು ಅಥವಾ ಬಡವರನ್ನು ಸೃಷ್ಟಿಸಿರುವುದು. ಈ ಧನಾಧಿಪತಿಗಳ ಕೊಡುಗೆಯೇ? 

ನಮ್ಮಲ್ಲಿ ಬಡವ ಎಂದರೆ ಯಾರು?  ಎಷ್ಟು ಹಣ ಇದ್ದರೆ ಅವನು ಶ್ರೀಮಂತ ? ಎಂದು ನಿರ್ಧಾರ ತೆಗೆದುಕೊಳ್ಳುವುದು  ಸಾಧ್ಯವಿಲ್ಲ.  ಮನುಷ್ಯನಿಗೆ ಎಲ್ಲಿಯ ವರೆಗೆ ತೃಪ್ತಿ ಇರುವುದಿಲ್ಲವೋ ಅಲ್ಲಿಯ ವರೆಗೆ ಅವನಿಗೆ ಹಣ ಸಂಗ್ರಹಿಸುವ ಹುಚ್ಚು ಇರುತ್ತದೆ ಮತ್ತು ಅಲ್ಲಿಯ ವರೆಗೆ ಅವನು ಬಡವನೇ? 

ಈ ಎಲ್ಲಾ ಆಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸುವುದಾದರೆ. ನಾವು ಪಾಲಿಸಿಕೊಂಡು ಬಂದಿರುವ ಆರ್ಥಿಕ ನೀತಿಯಿಂದಾಗಿಯೆ ದೇಶದಲ್ಲಿ ಬಡವರ ಸರಕಾರ ಎಂದು ಹೇಳಿ ಬಡವರನ್ನೇ ಸೃಷ್ಟಿಸಿದ ಮಹಾನ್ ರಾಜಕೀಯ ನಮ್ಮದು.  ದುಡಿಯುವ ದುಡಿಯತ್ತಲೇ ಇರುತ್ತಾನೆ ಅದೂ ಅವನ ಉಸಿರಿರುವ ವರೆಗೆ - "ಹಿಂದೂ ಫಿಲೋಸಫಿಯ ಪ್ರಕಾರ ಅದು ಅವನ ಕರ್ಮ" ಎಂದು ಹೇಳುವುದಾದರೆ.  ನಮ್ಮನ್ನಲ್ಲಾ ನಿಯಂತ್ರಿಸುವ ಸರಕಾರ ಯಾಕೆ? ಸಂವಿದಾನ ಏಕೆ?  ನಾನು ಸಂಪಾದಿಸುತ್ತೇನೆ ಅದು ನನ್ನಿಂದ ಸಾಧ್ಯ ... ನಿನ್ನಿಂದ ಸಾಧ್ಯವಾದರೆ ನೀನೂ ಸಂಪಾದಿಸು ಎಂದು ವಾದವನ್ನು ಆವಾಗಾವಾಗ ನಾವು ಸಮಾಜದಲ್ಲಿ  ಕೇಳುತ್ತೇವೆ.  ಆದರೆ ಸಂಪಾದನೆ ಎಂಬುದು ಪ್ರಾಮಾಣಿಕ ವಾಗಿರಬೇಕು. ಇಲ್ಲವಾದರೆ ಅದು ಲೂಟಿ, ಕೊಳ್ಳೆ ಹೊಡೆದಂತೆ...

ಈಗಿನ ಮೋದಿ ಸರಕಾರ ಹೇಳಿಕೊಳ್ಳುವಂತೆ - ನಾವು ಗಣಿ  ಹರಾಜಿನಲ್ಲಿ ಮತ್ತು ಜಿ ತರಂಗ ಹರಾಜಿನಲ್ಲಿ ಖಜಾನೆ ತುಂಬಿಸಿದ್ದೇವೆ... ಎಂಬ ಸತ್ಯವನ್ನು ಮುಂದಿರುವಾಗ ಹಿಂದಿನ ಕಾಂಗ್ರೆಸ್ ಸರಕಾರ ಎಡವಿರುವುದು ಮತ್ತು ಆವರ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸುಳ್ಳೇನಲ್ಲ.  ಈ ಹಗರಣದಲ್ಲಿ ಅಲ್ಲಿ ಇಲ್ಲಿ  ಹಸ್ತಾಂತರ ಗೊಂಡ ಹಣವೆಲ್ಲವೂ ಏನಾಯಿತು? ಅಲ್ಲದೆ ಬಡತನ ಸೃಷ್ಟಿಗೆ ನೀಡಿದ ಕೊಡುಗೆಯಲ್ಲವೇ?

ಇದೆಲ್ಲಾ ಇಲ್ಲಿಯವರೆಗೆ ನಡೆದು ಬಂದಿರುವುದು. ಆದರೆ ಇನ್ನು ಮುಂದಾದರೂ ಇದನ್ನು ಸರಿಮಾಡುವುದು ಸಾಧ್ಯವಿಲ್ಲ ಎಂದೇನಲ್ಲ.   ಭಾರತದ ಪ್ರತಿಯೊಬ್ಬ ಪ್ರಜೆಯನ್ನೂ  ಆಧಾಯ ತೆರಿಗೆ ವ್ಯಾಪತಿಗೆ ತರಲೇಬೇಕು. ಅವನ ಪ್ರತಿಯೊಂದು ವ್ಯವಹಾರ, ಬ್ಯಾಂಕ್ ಖಾತೆಯಿಂದಲೇ ನಡೆಯಲೇ ಬೇಕು  ಅದೆಲ್ಲವೂ  ಸ್ವಯಂಚಾಲಿತ ತತ್ರಾಂಶಗಳನ್ನು ರಚಿಸಿ ಅವುಗಳ ಮೂಲಕ  ಪ್ರತಿಯೊಬ್ಬನ ಆದಾಯ ನಿಗದಿಗೊಳಿಸುವುದು ಅತೀ ಮುಖ್ಯ.  ಈ ರೀತಿಯಾಗಿ ನಡೆಯದ ಯಾವುದೇ ವ್ಯವಹಾರವು ಅಥವಾ ಅವನು ಸಂಗ್ರಹಿಸದ  ಸ್ಥಿರ ಚರ ಸೊತ್ತುಗಳು ಒಂದು ನಿಗದಿತ ಪ್ರಮಾಣದ ನಂತರ ಅವನದೇ ಅಲ್ಲ ಎನ್ನುವ ರೀತಿಯಲ್ಲಿ  ಕಾನೂನುಗಳನ್ನು ರಚಿಸುವುದು ಅತಿ ಅಗತ್ಯ.  ಎಲ್ಲದಕ್ಕಿಂತಲೂ ಅಗತ್ಯವಾಗಿ ಆಗಬೇಕಾದುದು ೬೦ ವರ್ಷಗಳಿಗೂ ಹೆಚ್ಚು ವರ್ಷ ದುಡಿದು  ಹೆಂಡತಿ ಮಕ್ಕಳ ವಿದ್ಯಾಭ್ಯಾಸ ಮದುವೆ ಎಂದೆಲ್ಲಾ ಖರ್ಚು ಮಾಡಿರುವ ಪರಿಸ್ಥಿತಿಯಲ್ಲಿ ಇನ್ನೂ ದುಡಿದು ತನ್ನನ್ನು ತಾನು ಸಾಕಿ ಕೊಳ್ಳ ಬೇಕಾದ ಪರಿಸ್ಥಿತಿಯಲ್ಲಿ ಇರುವ ಎಷ್ಟೂ ಬಡವರಿಗೆ ಸರಕಾರ ತಿಂಗಳಿಗೆ ಜೀವನಕ್ಕೆ ಸಾಕಾಗುವಷ್ಟು ಧನವನ್ನು  ಪಿಂಚಣಿ ರೂಪದಲ್ಲಿ ಕೊಡುವಂತಾಗ ಬೇಕು. ಅದೂ  ಅವನ ಸಂಪೂರ್ಣ ಆದಾಯವನ್ನು  ತೂಗಿ ಅಳೆದು. ಅವನು ನಿಜವಾಗಿಯೂ ಜೀವನದಲ್ಲಿ ದುಃಸ್ತಿತಿಯಲ್ಲಿ ಇದ್ದಾನೆ ಎಂದಾದರೆ  ಖಂಡಿತಾ ಆಗಲೇ ಬೇಕಾದ ಕೆಲಸ ಎಂಬುದು  ನಮ್ಮ ಸರಕಾರಗಳು ಮನಗಾಣಲೇ ಬೇಕು.

ಮಂಗಳವಾರ, ಮಾರ್ಚ್ 31, 2015

ಧರ್ಮದ ಮೂಲ ಯಾವುದು?


ವಿಶ್ವದಲ್ಲೇ ಭಾರತ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಅದಕ್ಕೆ ಕಾರಣ ಭಾರತ ಮಣ್ಣಿನಲ್ಲಿರುವ ಗುಣ . ಭಾರತವನ್ನು ಪುಣ್ಯಭೂಮಿ, ಕರ್ಮಭೂಮಿ ಎಂದರು ಕರೆಯುತ್ತಾರೆ. ಕರ್ಮ ಎಂದರೆ ನಾವು ಮಾಡುವ ಕ್ರಿಯೆ  ಅಥವಾ ಕೆಲಸ. ಕೆಲಸ ಎಂದ ಕೂಡಲೇ ಉದ್ಯೋಗ - ಅದೂ ಸಂಪಾದನೆ ಗಾಗಿ ಮಾಡುವ ಉದ್ಯೋಗ ಎಂದೆಲ್ಲಾ ತಪ್ಪಾಗಿ ತಿಳಿದು ಅರ್ಥ ಕಲ್ಪಿಸಿಕೊಂಡು ಬಿಡುವುದು ಸಾಮಾನ್ಯ.  ಕರ್ಮ ಎಂದರೆ ಬದುಕನ್ನು ನಾವು ಅನುಭವಿಸುವ ರೀತಿ.   ಈ ರೀತಿಯಾಗಿ ನಾವು ಮಾಡುವ ಕರ್ಮ ಯಾವ ರೀತಿಯಲ್ಲಿರಬೇಕು? ನಾವು ಮಾಡಿದ ಕರ್ಮಕ್ಕೆ ಅರ್ಥ ಬರುವುದು ಹೇಗೆ?  ಮಾನವರೆಂದು ನಾವು ಗುರುತಿಸಿಕೊಳ್ಳ ಬೇಕಾದರೆ ಯಾವ ಕರ್ಮವನ್ನು ನಾವು ಮಾಡಬೇಕು ಎಂಬುದೇ ಮುಖ್ಯ ಅರ್ಥ.ನಾವು ಮಾಡುವ ಕರ್ಮ ಧರ್ಮಾಧಾರಿತ ವಾಗಿಯೇ ಇರಬೇಕು.   ಹಾಗಿದ್ದರೆ ಮಾತ್ರ ಸಮಾಜದಲ್ಲಿ ನ್ಯಾಯ ಧರ್ಮ ಸುಖ ಶಾಂತಿ ನೆಮ್ಮದಿ ನೆಲಸುವುದು ಸಾದ್ಯ. 

ಇಂದಿನ ಸಮಾಜದಲ್ಲಿ ನಾವು ಕಾಣುವ ಅಸಂಗತಗಳಿಗೆಲ್ಲ ನಾವು ಧರ್ಮರಹಿತ ಕರ್ಮವೇ ಮೂಲ ಕಾರಣ. ಒಬ್ಬ ರಾಜಕಾರಣಿ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಾನೆ. ಒಬ್ಬ ಗೃಹಸ್ಥ ಮನೆಯಲ್ಲಿ ನೆಮ್ಮದಿ ಯಿಲ್ಲದೆ ಹಲವಾರು ಸಮಸ್ಯೆಗಳಿಂದ ನಲುಗಿ  ಹೋಗಿರುತ್ತಾನೆ. ಎಳೆ ವಯಸ್ಸಿನ ಮಕ್ಕಳು  ಮಾಡಬಾರದ್ದನ್ನು ಮಾಡಿ ತಮ್ಮ ಜೀವನವನ್ನೇ ಹಾಳು ಮಾಡುತ್ತಿದ್ದಾರೆ.  ಇದಕ್ಕೆಲ್ಲಾ ಕಾರಣ  ಮಾನವನಾಗಿ ಹುಟ್ಟಿದ ಮೇಲೆ ಮಾವನನಿಗೆ ಸರಿ ಹೊಂದುವ ರೀತಿಯಲ್ಲಿ ಬಾಳ್ವ ಮಾಡದೇ ಇರುವುದು.  ಜೀವನದಲ್ಲಿ ಪ್ರತಿಯೊಂದಕ್ಕೂ ಒಂದು ಚೌಕಟ್ಟು ಇದೆ. ಅದನ್ನು ಮೀರಿದರೆ. ಸಮಸ್ಯೆಗಳ ಸೃಷ್ಟಿ.ನಾವು ನಮ್ಮನ್ನು ಅರ್ಥ ಮಾಡಿಕೊಳ್ಳದೇ ಪ್ರತಿಯೊಂದನ್ನೂ ತಮ್ಮ ಮೂಗಿನ ನೇರಕ್ಕೆ ಅರ್ಥ ಮಾಡಿಕೊಂಡಿರುವುದೇ ಕಾರಣ.

ಇದು ನಮ್ಮ ಧರ್ಮ, ಇದು ನಿಮ್ಮ ಧರ್ಮ ಎಂದು ಹೇಳಿಕೊಂಡು ಜಗಳವಾಡುತ್ತೇವೆ, ನಿಂದಿಸುತ್ತೇವೆ  ಮನುಷ್ಯರಿಗೆ ಬೇರೆ  ಬೇರೆ ಧರ್ಮವೇ ಇಲ್ಲ. ಎಲ್ಲರಿಗೂ ಇರುವುದು ಒಂದೇ ಧರ್ಮ ಅದು “ಮಾನವ ಧರ್ಮ”.  ಆದರೆ ಧರ್ಮವನ್ನು ನಂಬಿಕೆ ಮತ್ತು ಪ್ರದೇಶದ ಅನುಗುಣವಾಗಿ ಗುರುತಿಸುವುದಕ್ಕೇ ಮಾತ್ರ ಧರ್ಮಕ್ಕೆ ಒಂದು ಹೆಸರು.  ಅಷ್ಟೇ? ಭಾರತದಲ್ಲಿರುವ ಧರ್ಮ ಸನಾತನ ಧರ್ಮ ಅಷ್ಟೇ.  ಆದರೆ  ಅವರವರು ಮಾಡುವ ದೇವತಾ ಆರಾಧನೆ ಮತ್ತು ಆದೇವರ  ಹೆಸರಿನಲ್ಲಿ  ನಡೆಯುವ ಆಚರಣೆ ಹಬ್ಬ ಹರಿದಿನಗಳ ಮೂಲಕ ನಾವು ನಡೆಸುವ ಧಾರ್ಮಿಕ ವಿಧಿಗಳು ಬೇರೆ ಬೇರೆ ಯಾಗಿರುವುದರಿಂದ ನಮಗೆ ಧರ್ಮ ಬೇರೆ ಬೇರೆ ಎಂದು ಅನಿಸುತ್ತದೆ.  ಆದರೆ ಅವು ಒಂದು ಮತಾಚರಣೆ? ಅದರಲ್ಲಿ ನಮ್ಮ ಮತಾಚರಣೆಯೇ ಹೆಚ್ಚು  ನಿಮ್ಮ ಮತಾಚರಣೆಯೇ ಸರಿಯಿಲ್ಲ.  ನಿಮ್ಮಲ್ಲಿ ಮೇಲು ಕೀಲು ಎಂಬುದೆಲ್ಲ ಇದೆ. ಎಂದೆಲ್ಲಾ ಹೇಳಿ  ಕಥೆ ಕಟ್ಟುವುದು ಮನುಷ್ಯನ ಬುದ್ದಿಯ ಒಂದು ಚತುರತೆಯೇ ವಿನಹಃ  ಯಾವಾಗ ಬೇಕಾದರೂ ಸುಳ್ಳು ಆಗಬಹುದು.

ಮಾವನ ಧರ್ಮ ಎಂದರೇನು?  ಪ್ರಾಣಿಗಳಲ್ಲಿ ಒಂದಾಗಿಯೇ ಇದ್ದ  ಮಾವನವನೂ ತನ್ನ ಬುದ್ಧಿ ಶಕ್ತಿಯಿಂದ ತನ್ನನ್ನು ತಾನು ಒಂದು ಚೌಕಟ್ಟಿಗೆ ಬಂದಿಸಲು ಪ್ರಾರಂಭಿಸಿದನೋ ಆವಾಗಲೇ ಮಾನವ ಧರ್ಮದ ಉದಯವಾಯಿತು.   ಪ್ರಾಣಿಗಳು ಗುಂಪು ಗುಂಪಾಗಿ ವಾಸಿಸುವುದು ಸಹಜ.  ಹಾಗೆ ವಾಸಿಸುವಾಗ ಅವುಗಳಲ್ಲಿ ಕೆಲವು ಪ್ರಾಣಿಗಳು ತನ್ನ ಜೀವನದಲ್ಲಿ ಒಂದು ಹೆಣ್ಣನ್ನು  ಅಥವಾ ಒಂದು ಗಂಡನ್ನು ಆಯ್ಕೆ ಮಾಡಿಕೊಂಡು ಅವುಗಳ ಜೊತೆಯೇ ಸಂಸಾರ ಮಾಡುವುದೋ.  ಅಥವಾ ಗುಂಪಿನಲ್ಲಿರುವಾಗ ತಮ್ಮ ಜೊತೆ ಇದ್ದ  ಯಾವುದಾದರೊಂದು ಜೊತೆಗಾರ ಸತ್ತಾಗ ಅದನ್ನು ಹಾಗೆಯೇ ಬಿಡದೇ ಹೂಳಲು ಅಥವಾ ಸುಡಲು ಯಾವಾಗ ಕಲಿಯಿತೋ ಆವಾಗ ಮಾನವನ ಧರ್ಮವೊಂದು ಉಗಮವಾಯಿತು.  ಹಾಗೆಯೇ ಪ್ರಕೃತಿಯಲ್ಲಿ ಬಿರುಗಾಳಿ, ಸಿಡಿಲು, ಮಿಂಚು ಈ ಮೊದಲಾದ ಆಶ್ಚರ್ಯ ಕರವಾದ ಘಟನೆಗಳಿಂದ ಭಯಬೀತರಾಗಿ ಅದನ್ನು ಒಂದು ಶಕ್ತಿ ಎಂದು ನಂಬಿ  ಆ ಮೂಲಕ ದೇವರ ಅಸ್ತಿತ್ವಕ್ಕೆ ಕಾರಣವಾಯಿತು.   ಇವೆಲ್ಲವೂ ಧರ್ಮದ ಉಗಮಕ್ಕೆ ಕಾರಣವಾಯಿತು. ಹಾಗಾಗಿ ಧರ್ಮ ಸ್ಥಾಪಕನೆಂದು ಯಾರೂ ಇಲ್ಲ.  ಏನಾದರೂ ಇದ್ದರೆ  ಮಾನವಧರ್ಮದಲ್ಲಿ ಮತ ಸ್ಥಾಪಕರಿರಬಹುದು ಅಷ್ಟೇ?

ಈ ಅರ್ಥದಲ್ಲಿ  ಧರ್ಮ ಎಂದರೆ ''ಯಾವುದೇ ಒಂದು ವಸ್ತುವನ್ನು ಗುರುತಿಸುವ ಮಾನದಂಡ'' ಎಂದು ಅರ್ಥ ಮಾಡಿಕೊಳ್ಳ ಬಹುದು.  ಮಹಾಭಾರದಲ್ಲಿ ಭೀಷ್ಮ ಅದನ್ನೇ ಇನ್ನೊಂದು ರೀತಿಯಲ್ಲಿ ಹೇಳಿದ್ದಾರೆ ಧರ್ಮ ಎಂದರೆ ಧರಿಸುವಂತಹದು’ ಎಂದು ಹಾಗಾದರೆ ಮಾನವ ಎಂದು ಗುರುತಿಸುವುದಕ್ಕೆ ಕಾರಣವಾದ ಮತ್ತು ಪ್ರಾಣಿಗಳಿಂದ  ವರ್ಗೀಕರಣಗೊಳ್ಳಲಿಕ್ಕೆ ಕಾರಣವಾದ  ಅಂಶಗಳೇ ಮಾನವ ಧರ್ಮ ಅದು ಅವನ ಗುರುತು. 

ಇದೇ ಸರಿಯಾದ ಕ್ರಮ : ಯಾಕೆಂದರೆ ಪ್ರಾಣಿಗಳಲ್ಲಿಯೂ ಪ್ರಕ್ಷಿಗಳಲ್ಲಿಯೂ ನಾನಾ ವರ್ಗ ಬೇಧಗಳಿವೆ. ಆದರೆ ಅವುಗಳನ್ನು ಗುರುತಿಸುವುದು ಅವುಗಳ ಗುಣ ಧರ್ಮಗಳಿಂದ.  ನಾಯಿ, ನರಿ, ತೋಳ ನೋಡಲು ಸಾಮಾನ್ಯವಾಗಿ ಒಂದೇ ರೀತಿ ಇದ್ದರೂ ಅವುಗಳ ಗುಣ ಧರ್ಮಗಳು ಬೇರೆ.  ಅದೇ ರೀತಿ ವಿಶ್ವದಲ್ಲಿ ಕಂಡು ಬರುವವೈವಿದ್ಯಮಯ ಗಳನ್ನು ಗುರುತಿಸುವುದು ಅವುಗಳ ಗುಣಧರ್ಮಗಳಿಂದಲೇ.  ಹಾಗಾಗಿ ಧರ್ಮ ಎನ್ನುವುದು ಮನುಷ್ಯನಿಂದ ಉಗಮವಾಯಿತು ಎಂದು ಹೇಳುವುದು ಸಾದ್ಯವಿಲ್ಲ.

ವಿಶ್ವಕ್ಕೆ ಒಂದು ಧರ್ಮ ಇದೆ. ಭೂಮಿಯ ಗುಣ ಧರ್ಮ ಬೇರೆ  ಚಂದ್ರನ ಗುಣಧರ್ಮ ಬೇರೆ,  ಹಾಗೇ ವಿಶ್ವದ ಎಲ್ಲ ಆಕಾಶ ಕಾಯಗಳ ಗುಣಧರ್ಮಗಳು,  ಭೂಮಿಯ ಮೇಲೆ ಇರುವ ಮರಗಿಡಗಳ ಗುಣಧರ್ಮಗಳು ಬೇರೆ ಬೇರೆಯೇ?  ವಿಶ್ವವೆಲ್ಲವೂ ಅಣುಮಯ. ಅಣಗುಳು  ವೈವಿದ್ಯಮಯ ಸಂಯೋಜನೆಯಿಂದ ವಿಶ್ವದ ಬೇರೆ ಬೇರೆ ಸ್ಥಿರ ಚರ ವಸ್ತುಗಳು ನಿರ್ಮಾಣವಾದವು . ನಮಗೆ ತಿಳಿದಿರುವಹಾಗೆ ಆಮ್ಲಜನಕ ಮತ್ತು ಜಲನಕ ಸೇರಿ ನೀರು ಆಗಿದೆ. ಆಮ್ಲಜನಕದ ಅಣು ಮತ್ತು ಜಲನಕದ ಅಣುಗಳು ಸಂಯೋಜನೆಗೊಂಡ ನಿಷ್ಪತ್ತಿಯ ಪ್ರಮಾಣವೇ ನೀರಿನ ಸೃಷ್ಟಿಗೆ ಕಾರಣ. ಅದೇ ಬೇರೆ ನಿಷ್ಪತ್ತಿಯಲ್ಲಿ ಏನದರೂ  ಒಂದು ಸೂಜಿ ಮೊನೆಯಷ್ಟು ಬದಲಾದರೂ ಬೇರೆ ವಸ್ತುವಿನ ಸೃಷ್ಟಿಯಾಗುತ್ತಿತ್ತು.   ಆಮ್ಲಜನಕ  ಮತ್ತು ಜಲನಕದ ಗುಣ ಲಕ್ಷಣಗಳು ಬೇರೆ ಬೇರೆ  ಅದರ ಅಣು ರಚನೆಯೂ ಬೇರೆ ಬೇರೆಯೇ  ಹಾಗೆ ಅವುಗಳೆರಡು ಸೇರಿ ನೀರು ಉತ್ಪತ್ತಿಯಾಗಿ ಅದರ ರಚನೇಯೇ ಬೇರೆ.  ಅಂದರೆ ವಿಶ್ವದಲ್ಲಿ ಇರುವ (ಮಾನವ ಸಹಿತ) ಎಲ್ಲಾ ಪ್ರಾಣಿ, ಪಕ್ಷಿ, ಸಸ್ಯ, ಗಾಳಿ ಗೆಳೆಲ್ಲವೂ ಅಣುಗಳಿಂದ ರಚಿಸಲ್ಪಟ್ಟಿವೆ.

ಅಣುವಿನಲ್ಲಿರುವ ನ್ಯೂಟ್ರಾನ್, ಪ್ರೊಟಾನ್ ಮತ್ತು ಅವುಗಳನ್ನು ಪರಿಭ್ರಮಣಗೊಳ್ಳುತ್ತಿರುವ ಎಲೆಕ್ಟ್ರಾನ್ ಗಳ ಸಂಖ್ಯೆ ಇವುಗಳಲ್ಲಿ ಆಗಿರುವು ವ್ಯತ್ಯಾಸದಿಂದ ಬೇರೆ ಬೇರೆ ಗುಣ ಧರ್ಮದ ವಸ್ತುಗಳ ನಿರ್ಮಾಣಗೊಂಡಿರುವುದು.    ಒಂದು ಅಣುವಿನಲ್ಲಿರುವ ಎಲೆಕ್‌ಟ್ರಾನ್ ಅವುಗಳ ಆವರ್ತನ ಕಾಲ ಹಾಗೆ ನ್ಯೂಟ್ರನ್  ಸುತ್ತ ಪರಿಭ್ರಮಣ ಕಾಲ ಇವುಗಳಿಂದ  ಅವು ಹೊರಡಿಸುವ ತರಂಗ ಇವೆ‌ಲ್ಲವೂ ಬೇರೆ ಬೇರೆ ಅಣಗಳಲ್ಲಿ ಬೇರೆ ಬೇರೆಯಗಿರುವುದರಿಂದಲೇ ಅವುಗಳನ್ನು ಬೇರೆ ಬೇರೆಯಾಗಿ ಗುರುತಿಸುತ್ತೇವೆ.   “ಇಲ್ಲಿಯೂ ಧರ್ಮ ಎನ್ನುವುದು ಧರಿಸಿರುವಂತಹದ್ದು” ಹಾಗಾಗಿ  ನಾವು ಬೇರೆ  ಬೇರೆ ಸ್ವರೂಪವನ್ನು ಗುರುತಿಸುವುದು ಸಾಧ್ಯವಾಯಿತು. ಅಂದರೆ ಧರ್ಮದ ಮೂಲ ವಿಶ್ವದ ಮೂಲದಲ್ಲಿ ಅಡಗಿದೆ. ಪ್ರತಿ ಆಣು ಅಣುವಿನಲ್ಲಿಯೂ ಅಡಗಿದೆ. ಧರ್ಮವನ್ನು ಯಾರೂ  ಸ್ಥಾಪನೆ ಮಾಡಲು ಆಗುವುದಿಲ್ಲ.  ಧರ್ಮ ಎಂದರೆ ''ಒಂದು ವಸ್ತುವನ್ನು ಗುರುತಿಸುವ ಮಾನದಂಡ'' ಎಂದು ಅರ್ಥ 

ಓದುಗರಲ್ಲಿ ವಿನಂತಿ : ಇದು ಸಂಪೂರ್ಣ ಆಧ್ಯಾತ್ಮಿಕ ವಿಚಾರ - ದೇವರನ್ನು ಹೇಗೆ ತೋರಿಸಲು ಸಾಧ್ಯವಿಲ್ಲವೋ, ಹಾಗೆಯೇ ಆಧ್ಯಾತ್ಮಿಕ ವಿಚಾರವಾದುದರಿಂದ ಬರವಣಿಗೆಯಲ್ಲಿ ಸರಿಯಾಗಿ ಅರ್ಥವಾಗುವಂತೆ ಇಳಿಸಲು ಸಾಧ್ಯವಾಗುತ್ತಿಲ್ಲ. ದೇವರನ್ನು ಕಾಣಲು ನಾವು ಕಣ್ಣು ಮುಚ್ಚಿ ಆತ್ಮದಲ್ಲಿ ಕಂಡುಕೊಳ್ಳುವಂತೆ, ಈ ಲೇಖನದ  ಒಳ ಸತ್ಯವನ್ನು ಅರ್ಥ ಮಾಡಿಕೊಂಡರೆ  ಅದೇ ಒಂದು ನನ್ನ ಭಾಗ್ಯ.

ಮಂಗಳವಾರ, ಮಾರ್ಚ್ 24, 2015

ಶಿಕ್ಷಣ ವ್ಯವಸ್ಥೆಯೇ ಅರ್ಥವನ್ನು ಕಳೆದುಕೊಳ್ಳುತ್ತಿದೆ.......?

ಇಂದಿನ ದಿನಗಳಲ್ಲಿ ಶಿಕ್ಷಣ ಎನ್ನುವುದು ಕೇವಲ ಮನುಷ್ಯನಿಗೆ ಹಣ ಸಂಪಾದನೆಗೆ ಬೇಕಾದ ಒಂದು ವ್ಯವಸ್ಥೆಯಾಗಿದೆ..  ಅಲ್ಲದೆ ವಿದ್ಯೆಯು ಮಾರಾಟಕ್ಕೆ ಸಿಗುವ ಸೊತ್ತು ಆಗಿದೆ.  ಮಕ್ಕಳ ಪೋಷಕರು ಮಕ್ಕಳ ವಿದ್ಯೆಗೆ ತೊಡಗಿಸುವ ಹಣ ಒಂದು ಬಂಡವಾಳ.  ಶಿಕ್ಷಣದಲ್ಲಿ  ಉತ್ತಮ ಗುಣಮಟ್ಟದ ಶಿಕ್ಷಣ ಎಂದೆಲ್ಲಾ ವರ್ಗಿಕರಣ ವಾಗಿದೆ. ಪೋಷಕರು ನಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದರೆ ಮುಂದೆ ಭವಿಷ್ಯ ಚೆನ್ನಾಗಿರುತ್ತದೆ..... ಹೀಗೆಲ್ಲಾ ಆಲೋಚನೆ ನಿರಂತರ ನಮ್ಮ ಸಮಾಜದಲ್ಲಿ ನಡೆಯುತ್ತಿದೆ.

ನಿಜವಾಗಿ ಶಿಕ್ಷಣ ಎನ್ನುವುದು ವ್ಯಕ್ತಿಯೋರ್ವನ  ವ್ಯಕ್ತಿತ್ವ ನಿರ್ಮಾಣ ಮಾಡುವುದಕ್ಕೆ ಪೂರಕವಾಗಿರಬೇಕು.  ''ವಿದ್ಯೆ ಇಲ್ಲದವನು ಪಶುವಿಗೆ ಸಮಾನ`` ಎಂಬುದು ನಮ್ಮ ಹಿರಿಯರು ಹೇಳಿದ ಮಾತು. ವಿದ್ಯೆಯಿಂದ ಮನುಷ್ಯನಲ್ಲಿರುವ ಮೃಗತ್ವ ನಾಶವಾಗಿ ಮಾನವತ್ವ ಬೆಳೆಯುತ್ತದೆ ಎಂಬ ಸತ್ಯ ಈ ಮಾತಿನಲ್ಲಿ ಅಡಗಿದೆ.   ಈ ಅರ್ಥವನ್ನು ಗಮನಿಸಿ ವಿಮರ್ಶಿಸುವುದಾದರೆ  ಶಿಕ್ಷಣ ಎನ್ನುವುದು ಪುಸ್ತಕದ ಬದನೆಕಾಯಿ ಅಲ್ಲ. ಪುಸ್ತಕದಲ್ಲಿ ಬರೆದಿರುವುದುನ್ನು ಓದಿ ತಿಳಿದು ಬರೆಯುವುದು  ಪರೀಕ್ಷೆಗಾಗಿಯೇ ಬಾಯಿ ಪಾಠ ಮಾಡಿ ಇಲ್ಲವೇ ಕಾಪಿ ಹೊಡೆದು ಬರೆದರೆ  ಅಥವಾ  ಪರೀಕ್ಷೆ ಪಾಸು ಮಾಡಿದರೆ,  ಅದಕ್ಕಾಗಿ ಬಿಹಾರದಲ್ಲಿ ನಡೆದ ಘಟನೆಯಂತೆ ಹೇಗಾದರೂ ಮಾಡಿ ಪಾಸ್ ಮಾಡಿದರೆ ಸಾಕು.  ಅವನು ವಿದ್ಯಾವಂತ ಅಥವಾ  educated ಎಂದು ಅನಿಸುವುದು ಸಾಧ್ಯ ಎಂಬ ನಂಬಿಕೆ ಬೆಳೆದಿರುವುದೇ ಇಂದಿನ ಎಲ್ಲಾ ಅವ್ಯವಸ್ಥೆಗೆ ಸಾಕ್ಷಿ.

ಬಿಹಾರದಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷೆಗೆ ಬರೆಯುತ್ತಿದ್ದವರಿಗೆ ಉತ್ತರಗಳನ್ನು  ಹೇಳಿಕೊಡುತ್ತಿದ್ದ ಅದಕ್ಕಾಗಿ ನಡೆಸಿದ ಕಸರತ್ತು  (ಪತ್ರಿಕೆಗಳಲ್ಲಿ ಪ್ರಕಟವಾದ ಚಿತ್ರ) ಮತ್ತು  ಲಾಲು ಪ್ರಸಾದ್ ಯಾದವ್ ಹೇಳಿದ ಮಾತು ' ನಮ್ಮ ಸರಕಾರ ಇದ್ದಿದ್ದರೆ ಪುಸ್ತಕಗಳನ್ನೇ ಕೊಟ್ಟು ಬಿಡುತ್ತಿದ್ದೆ''  ಎಂಬ ಮಾತು ನಮ್ಮ ಶಿಕ್ಷಣ ಮೌಲ್ಯವೇ ಕುಸಿದಿದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. 

ಶಿಕ್ಷಣ ಎಂದರೆ ಏನು?  ಬೆಳೆಯುವ ಹಂತದಲ್ಲಿರುವ ಮಗು ತನ್ನನ್ನು ತಾನು ಅರಿತುಕೊಳ್ಳಲು ಪೂರಕವಾಗಿ ಮಾಡುವ ವ್ಯವಸ್ಥೆಯೇ ಶಿಕ್ಷಣ.  ಶಿಕ್ಷಣವನ್ನು ಕೊಡುತ್ತೇವೆ....  ಎಂದರೆ ಕೊಡುವುದು  ಯಾರಿಗೆ?  ಮನುಷ್ಯನನ್ನು ಪ್ರಾಣಿಗಳಿಂದ ವರ್ಗೀಕರಿಸಲ್ಪಟ್ಟಿ  ಗುರುತಿಸಿಕೊಂಡಿರುವುದಕ್ಕೆ ಸಾಧ್ಯವಾದದ್ದು ಶಿಕ್ಷಣದಿಂದ.  ಪ್ರಾಣಿಗಳು ತನ್ನ ಬದುಕನ್ನು ಒಂದು ಸೀಮಿತವಾದ ಅರ್ಥದಲ್ಲಿ ಅನುಭವಿಸುತ್ತದೆ. ಅದಕ್ಕೆ ಇತಿಮಿತಿಗಳಿರ ಬಹುದು.  ಅವುಗಳ ಬದುಕಿನ ಮೇಲೆ ಕಾಲದ ಪ್ರಭಾವ ವಿರಬಹುದು.  ನೋವಾದಾಗ ದುಃಖ, ಸಂತೋಷವಾದಾಗ ಆ ಭಾವನೆಯನ್ನು ಪ್ರಕಟಗೊಳಿಸಲು ತಿಳಿದಿರ ಬಹುದು.  ಆದರೆ ಅದು ತನ್ನನ್ನು ತಾನು ನಾನು ಯಾರು? ಎಂದು ಪ್ರಶ್ನಿಸು ಮಟ್ಟದಲ್ಲಿ ಬುದ್ದಿಯುನ್ನು ಬೆಳೆಸಿಕೊಂಡಿರುವುದಿಲ್ಲ. ಹಾಗಾಗಿ ಬದುಕಿಗೆ ಒಂದು  ಲಿಮಿಟ್ ಇದೆ. ಆದರೆ ಅದೇ ಪ್ರಾಣಿ ರೂಪದ ಮನುಷ್ಯ ತನ್ನನ್ನು ತಾನು ಅರಿಯಲು ಮೊದಲು  ಆಶ್ಚರ್ಯದಿಂದ ಹಾಕಿದ  ಪ್ರಶ್ನೇಯೇ ''ನಾನು ಯಾರು?`` ಇದನ್ನು ಅರಿತುಕೊಳ್ಳಲು ತೊಡಗಿದ ಪ್ರಕ್ರಿಯೆ ಶಿಕ್ಷಣ.  

ಮನುಷ್ಯ ಬದುಕಿದಾಗ ಇರುವ ಚಲನೆ ಸುಖ ಸಂತೋಷದ ಅನುಭವ ಸತ್ತಾಗ ಇರುವುದಿಲ್ಲ.  ಆಗ ಶರೀರ ಒಂದು ನಿರುಪಯುಕ್ತ  ವಸ್ತು  ಹಾಗಾಗಿ ಅದನ್ನು ಸುಡುವುದೋ ಹೂಳುವುದೋ ಮಾಡುತ್ತಾರೆ.  ಶರೀರದಲ್ಲಿ  ಬದುಕಿದಾಗ ಇದ್ದ ಶಕ್ತಿ, ಚೇತನ, ಸತ್ತಾಗ ಇಲ್ಲದಿರುವ ಒಂದು ಶಕ್ತಿ ಶರೀರದಲ್ಲಿ ಇದೆ ಎಂಬ ಸತ್ಯವು ಬುದ್ಧಿಯಲ್ಲಿ ಚಿಂತನೆಯನ್ನು ಹುಟ್ಟು ಹಾಕಿದಾಗ ......  ಈ ಸತ್ಯದ ಬೆನ್ನ ಹಿಂದೆ ಬಿದ್ದ ಚಿಂತನೆಯೇ  ಅವನಲ್ಲಿ ನಿರಂತರವಾಗಿ ನಡೆದ ಮಂಥನವೇ ಮನುಷ್ಯನ ಆತ್ಮ ಜ್ಞಾನವನ್ನು,  ಬುದ್ದಿ ಬಲವನ್ನು ಉಪಯೋಗಿಸಿ ತರ್ಕ ಬದ್ಧವಾಗಿಯೇ ಅರಿಯುವ ಪ್ರಯತ್ನದಿಂದ ಉಂಟಾದ ಪ್ರತಿಯೊಂದು ವಿಚಾರಗಳು   ಹಾಗೂ ವ್ಯಕ್ತಿತ್ವ ನಿರ್ಮಾಣದ  ಪ್ರಕ್ರಿಯೆಗೆ  ಪೂರಕವಾದ ಸಾಮಗ್ರಿಯೇ ಶಿಕ್ಷಣದ ವಸ್ತುವಾಗಿ ಬೆಳೆಯಿತು. ಇದುವೇ  ಜ್ಞಾನ ರಾಶಿ.

ಅದನ್ನು ಎಳೆಯ ಮಕ್ಕಳಿಗೆ  ಎಷ್ಟು ಬೇಕು ಅಷ್ಟನ್ನು ನಾವು  ತಿಳಿಸಿಕೊಡುವ ಒಂದು ವ್ಯವಸ್ಥೆಯನ್ನು ಮಾತ್ರ ಶಿಕ್ಷಣ ಎಂದು ಕರೆಯಬಹುದು.  ಇದನ್ನು  ಸರಿಯಾಗಿ ಅರ್ಥ ಮಾಡಿ ಈ ತಳಹದಿಯಲ್ಲಿಯೇ ಶಿಕ್ಷಣ ವ್ಯವಸ್ಥೆಯನ್ನು ರೂಪುಗೊಳಿಸಿದರೆ  ಭ್ರಷ್ಟಾಚಾರ,  ಅತ್ಯಾಚಾರ, ಮೋಸ, ಹಣದ ವ್ಯಾಮೋಹ, ಸುಳ್ಳು,  ಜಾತಿ ಡೊಂಬರಾಟ,  ಸಮಾಜದಲ್ಲಿ ಬೇರು ಬಿಟ್ಟಿರುವ ನಾನಾ ಪಿಡುಗು ಎಲ್ಲವೂ ಮಾಯವಾಗುವುದು  ಖಂಡಿತ ಸಾಧ್ಯ.

ಇವತ್ತು  ಮಹಿಳಾ ಸಬಲೀಕರಣದ ವಾದ ಬೆಳೆದಿದೆ. ಹಣ್ಣು ಮಕ್ಕಳು ಗಂಡು ಮಕ್ಕಳಿಗಿಂತಲೂ ಹೆಚ್ಚು ವಿದ್ಯಾವಂತರಾಗುತ್ತಿದ್ದಾರೆ. ನಾವು ಗಂಡು ಮಕ್ಕಳಿಗಿಂತಲೂ ಕಡಿಮೆ ಏನಲ್ಲ ಎಂದು ಹೇಳುವಷ್ಟು ಮುಂದಿವರಿದೆ ಸತ್ಯ.  ಆದರೆ ಹೆಣ್ಣು ಮಕ್ಕಳಿಗೆ ಸಿಗಬೇಕಾದ ಮರ್ಯಾದೆ ಸಿಗುತ್ತಿದೆಯೇ,  ಅವರನ್ನು ರಕ್ಷಿಸಲು ನೂರಾರು ಕಾನೂನುಗಳನ್ನು ಸರಕಾರ ಮಾಡಬಹುದು.  ಪೋಲೀಸ್ ವ್ಯವಸ್ಥೆಯನ್ನು ಅದಕ್ಕಾಗಿ ಬಳಸಬಹುದು  ಆದು ಒಂದು ವ್ಯವಸ್ಥೆ.  ಈ ವ್ಯವಸ್ಥೆಗಳು ಸಮಾಜ ಕುಟಂಬಗಳು ತನ್ನೊಡಲಲ್ಲೇ ಸೇರಿಸಿಕೊಂಡು ಅದನ್ನು ಪ್ರೀತಿ ವಿಶ್ವಾಸ ಗೌರವ ನೆಲಯಲ್ಲಿ ನಡೆಸಿಕೊಂಡು ಬಂದಿದೆ.  ಈ ವ್ಯವಸ್ಥೆಯ ತಳಹದಿ ಶಿಕ್ಷಣದಿಂದ ದೊರಕಿರುವುದಾದರೆ.  ಸರಕಾರವೊಂದು ಮಾಡುವ ಕಾನೂನು ಕಟ್ಟಲೆ ವ್ಯವಸ್ಥೆಗಳೆಲ್ಲವೂ  ಧರ್ಪದಿಂದ ಆಧಿಕಾರದ ಬಲದಿಂದ ರೂಪಿತಗೊಂಡಿರುವುದು ಅದಕ್ಕೆ ಬೆನ್ನುಲುಬಾಗಿ ನಿಂತಿರುವುದು ಈಗ ನಾವು ಕಲಿತುಕೊಂಡಿರುವ ಶಿಕ್ಷಣದಿಂದ ದೊರೆತ ಜ್ಞಾನದ ಬಲದಿಂದ ಉಂಟಾಗಿರುವುದು.  ರಾಜಕಾರಣಿಗಳು ಕೋರ್ಟುಗಳು ನಮ್ಮ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿತು  ಅದಕ್ಕಾಗಿ ದಪ್ಪ ದಪ್ಪ ಪುಸ್ತಕವನ್ನು ಓದಿ,  ಅದ್ಯಯನ ಮಾಡಿ  ಕೋರ್ಟಿನಲ್ಲಿ ತರ್ಕವನ್ನು ಮಂಡಿಸಿ  ಸಾಕ್ಷಿ ಆಧಾರಗಳನ್ನು ಒದಗಿಸಿ ನ್ಯಾಯ ತೀರ್ಮಾನ ಮಾಡಿ ಶಿಕ್ಷೆ ವಿಧಿಸುವುದು  ನಮ್ಮ  ಶಿಕ್ಷಣ ವ್ಯವಸ್ಥೆಯಿಂದ ಸಾಧ್ಯವಾಯಿತು.  ಆದರೆ ನಿಜವಾದ ಶಿಕ್ಷಣದಿಂದ ಸಮಾಜದಲ್ಲಿ ಎಲ್ಲಾ ರೀತಿಯ ನೋವು, ಅತ್ಯಾಚಾರ, ಭ್ರಷ್ಟಾಚಾರ, ಮೋಸ, ಈ ಮೊದಲಾದ ಮಾವನೀಯ ಮೌಲ್ಯಗಳಿಗೆ ವಿರುದ್ಧವಾದ ಅಸಂಗತಗಳನ್ನು ನಾಶಮಾಡಿ ಮಾನವೀಯತೆಯನ್ನು ಬೆಳೆಸುವುದೇ ನಿಜವಾದ  ಶಿಕ್ಷಣ.

ಈ ಸತ್ಯಗಳನ್ನು ಮುಂದಿರಿಸಿಕೊಂಡು ಬಿಹಾರದ ಘಟನೆ ಮತ್ತು ಲಾಲು ಪ್ರಸಾದ ಯಾದವರಂತಹ ರಾಜಕಾರಣಿಗಳು ನಮ್ಮ ದೇಶವನ್ನು ಯಾವ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ ಹಿಂದೆ ಮುಂದೆ ಬಗ್ಗೆ ಯಾವ ಚಿಂತನೆಯೂ ಇಲ್ಲದೇ ಸಮಾಜವನ್ನು ಮಾರ್ಗದರ್ಶನ ಮಾಡುತ್ತಿದ್ದಾರೆ ಎನ್ನವುದು ಗಮನಿಸಬೇಕಾದ ಅಂಶ. ''ಯಥಾ ರಾಜ ತಥಾ ಪ್ರಜಾ''.

ಭಾನುವಾರ, ಮಾರ್ಚ್ 22, 2015

 ಪಿಕಲಾಟಕ್ಕೆ ಬಿದ್ದ ಮುಖ್ಯಮಂತ್ರಿ :

ಡಿ. ಕೆ. ರವಿ ಸಂಶಯಾತ್ಮಕ ಸಾವಿನ ತನಿಖೆ ಸಿ ಬಿ.ಐ ಒಪ್ಪಿಸ ಬೇಕಾಗಿಲ್ಲ  ಯಾಕೆ ?

ಭ್ರಷ್ಟಾಚಾರ ಸಮಾಜಕ್ಕೆ ಬಡಿದ ಒಂದು ಕಳಂಕ. ಅದರ ಕರಾಳ ಮುಖವೇ  ಡಿ. ಕೆ. ರವಿ ಎಂಬ ದಕ್ಷ ಅಧಿಕಾರಿಯ ಸಂಶಯಾಸ್ಪದ ಮರಣ.  ಭ್ರಷ್ಟಾಚಾರದ ವಿರೋಧಿಯಾದ  ರವಿಯವರು  ದಕ್ಷ, ಹಾಗೂ ಪ್ರಾಮಾಣಿಕ ಎಂಬುದರಲ್ಲಿ ಅವರ ಮರಣಾನಂತರ ಅವರ ಮರಣಕ್ಕೆ ಕಾರಣ ರಾದವರನ್ನು ಹಿಡಿದು ಶಿಕ್ಷಸಿ ಎಂಬ ಬೇಡಿಕೆಗೆ ಪಕ್ಷ ಬೇದ ಮರೆತು  ಜಾತಿ ಮತ ಮರೆತು ಸಿಗುತ್ತಿರುವ  ಬೆಂಬಲ.

ನಮ್ಮ ಆಡಳಿತವೆಂಬ ಯಂತ್ರವೇ  ಭ್ರಷ್ಠಾಚಾರದ ಬೆನ್ನೆಲುಬಾಗಿರುವಾಗ  ಭ್ರಷ್ಟಾಚಾರವನ್ನು ನಿರ್ಮೂಲನೆ  ಮಾಡುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕಾಗಿ ಹೋರಾಟ ಮಾಡುವವರ ಪರಿಸ್ಥಿತಿಯೂ ಅಷ್ಟು ಸುರಕ್ಷಿತವಾಗಿಲ್ಲ.   ದಕ್ಷ ಪ್ರಾಮಾಣಿಕ ನಾಗಿಯೇ ನಾನು ಬದುಕುತ್ತೇನೆ ಎಂದರೆ ಯಾವಾಗಲೂ  ಕಷ್ಟ ತಪ್ಪಿದಲ್ಲ.
ಪ್ರಾಥಮಿಕ ವರದಿಯ ಪ್ರಕಾರ ರವಿಯವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಎಂಥವರು ಆತ್ಮಹತ್ಯೆ ಮಾಡುತ್ತಾರೆ. ಸಾಮಾನ್ಯವಾಗಿ ಪುಕ್ಕಲು ಸ್ವಭಾದವರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುವುದು  ಸಾದ್ಯ. ಯಾವುದೇ ಸಮಸ್ಯೆಗೆ ಪರಿಹಾರವೇ ಇಲ್ಲವೇನೋ ಎಂದಾಗ ಆ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆ ಮಾಡಿಕೊಳ್ಳುವವರಿದ್ದಾರೆ. ಎರಡನೆಯದಾಗಿ ನೋಡುವುದಾದರೆ ಮಾಡ ಬಾರದ ತಪ್ಪನ್ನು ಮಾಡಿ ಆ ತಪ್ಪಿನಿಂದ ಆದ ತೊಂದರೆ ಕಷ್ಟಗಳಿಂದ ತಪ್ಪಿಸಿಕೊಳ್ಳು ಆಗದಾಗ  ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.  ಮನುಷ್ಯ ಎಂದ ಮೇಲೆ  ತಪ್ಪು ಆಗುವುದು ಸಹಜ. ತನ್ನಿಂದ ತಪ್ಪು ಆಗಿದೆ ಎಂದು ಅರಿವಾಗುವುದು  ಎಂದರೆ ಆತ್ಮಸಾಕ್ಷಿ ದೇಹವನ್ನು ಕೇಳುತ್ತದೆ ನೀನು ಮಾಡಿದ್ದು ಸರಿಯಾ? ಎಂದು  ಅಂದರೆ ಮನುಷ್ಯ ಪ್ರಜ್ಞೆ ಇರುವವನು ಯಾವತ್ತೂ ಆತ್ಮಹತ್ಯೆ ಮಾಡುವುದೇ ಇಲ್ಲ.  ಈ ಕಾರಣವನ್ನು ಮುಂದಿಟ್ಟುಕೊಂಡರೆ ರವಿ ಒಬ್ಬ ದಕ್ಷ  ಅಧಿಕಾರಿ ಸಮಾಜ ಕಂಟಕ ಭ್ರಷ್ಟಾಚಾರ ಮಾಡುವವರಿಗೆ ಸಿಂಹ ಸ್ವಪ್ನವಾಗಿದ್ದರು. ಅಲ್ಲದೆ ಅವರು  ತನ್ನ  ಅಧಿಕಾರದ  ಯಾವುದೇ ಹುದ್ದೆಯಲ್ಲಿಯೂ ಅವರು ಭ್ರಷ್ಟರನ್ನು ಸೆದೆ ಬಡೆಯುವುದೆ ಮೂಲ ಮಂತ್ರವಾಗಿಸಿಕೊಂಡಿದ್ದರು.  ಅಲ್ಲದೆ ನೂರಾರು ಭ್ರಷ್ಟರ ವಿರುದ್ಧ ಚಾಟಿ ಬೀಸಿದ್ದರು. ಹೀಗಾಗಿ ಕೆಲವು ಸಂದರ್ಭಗಳಲ್ಲಿ ನಿಷ್ಠುರವಾಗಿ ನಡೆದೇ ನಡೆದುಕೊಳ್ಳುವ ಪರಿಸ್ತಿತಿಯಿಂದಾಗಿ  ಭ್ರಷ್ಟರ ಕೆಂಗಣ್ಣಿಗೆ ಗುರಿಯಾಗಿರುವುದರಲ್ಲಿ ಸಂಶಯವಿಲ್ಲ, ಈ ಎಲ್ಲ ಅಂಶಗಳನ್ನು ಗಮನ ವಿರಿಸಿಕೊಂಡು ಯೋಚಿಸುವುದಾದರೆ  ಇದು ಆತ್ಮಹತ್ಯೆಯಲ್ಲ. ಒಂದು ಪಿತೂರಿ ಎಂದೇ ಹೇಳುವುದು. ಸಾಧ್ಯ.

ಭ್ರಷ್ಟಾಚಾರವು ಹುಟ್ಟಿ ಬೆಳೆದುದೇ ರಾಜಕೀಯದಲ್ಲಿ.   ಸ್ವಾತಂತ್ತ್ಯದ ನಂತರಕ್ಕೆ  ಅಧಿಕಾರ ಬಂದ ನಮ್ಮ ಸರಕಾರಗಳಲ್ಲಿ  ಆಧಿಕಾರ ಮತ್ತು ಅದರಿಂದ ಸಿಗುವ ಸುಖ: ಸಂಪತ್ತು  ಸವಲತ್ತುಗಳು  ತಲೆ ಗೇರಿದ ಪಿತ್ತದಿಂದ ಸಮಾಜ ಸಂಸ್ಕೃತಿ, ಸಂಸ್ಕಾರಗಳನ್ನು ಭದ್ರವಾಗಿ ಹೂತು ಅಧಿಕಾರ ಪರಂಪರೆಯೇ ಸ್ಥಾಪಿಸಿಕೊಂಡಿತು. ಆಧಿಕಾರ ಇದಲ್ಲಿ ಭಟ್ಟಂಗಿಗಳು, ಚೇಲಾಗಳು ,  ಪರಾಕು ಹೇಳುವವರು ಹೀಗೆ ಅಧಿಕಾರಗಳ ವರ್ಗಗಳು ಹುಟ್ಟಿಕೊಂಡು ಅಧಿಕಾರದ ಸುತ್ತಲೂ ಬೇಲಿಯನ್ನು ಹಾಕಿ ತಮ್ಮ ಅಧೀನ ಗೊಳಿಸಿಕೊಂಡವು.  ಹೀಗಾಗಿ ರಾಜಕೀಯದಲ್ಲಿ  ಇದ್ದು ತಾವು  ಐಷಾರಮಿ ಜೀವನ ಮಾಡಲು ಸಾಧ್ಯವೆನ್ನುವ ವರ್ಗ ತನ್ನ ಆಧಿಕಾರವನ್ನು ಉಳಿಸಿಕೊಳ್ಳಲು ಈ  ಅಧಿಕಾರಕ್ಕೆ ಸಂಬಂಧಿಸಿದ ಪರಿವಾರಗಳನ್ನು ಸಾಕಲೇ ಬೇಕಾಯಿತು.   ಹಾಗಾಗಿ  ಅಧಿಕಾರದಲ್ಲಿರುವಾಗ ತನ್ನ ಪರಿವಾರ ಏನು ಹೇಳುತ್ತದೆ ಅವರ ಬೇಕು ಬೇಡಗಳೇನು ಎಂಬುದನ್ನು ಪೂರೈಸಲು ಅಧಿಕಾರದ ಚೌಕಟ್ಟನ್ನು ಮುರಿದು ಅಡ್ಡದಾರಿಯಲ್ಲಿ  ಸಾಗಬೇಕಾಗಿ ಬಂದಾಗ  ಅಧಿಕಾರದಲ್ಲಿರುವವರಿಗೂ ಪಿಕಲಾಟ ( ಇದಕ್ಕೆ ಉದಾಹರಣೆ ಹಿಂದಿನ ಬಿ.ಜೆ.ಪಿ. ಸರಕಾರ)  ಭ್ರಷ್ಟರ ವಿರುದ್ಧ   ದ್ವನಿ ಎತ್ತುವವರಿಗೂ ಅಪಾಯ ತಪ್ಪಿದಲ್ಲ.
ಇಂತದ ಸಂದರ್ಭದಲ್ಲಿ ತನ್ನ ಆಧಿಕಾರಕ್ಕೆ ಒಳಪಟ್ಟಿರುವವವರಿಂದ  ನ್ಯಾಯ ಸಿಗುವುದೆಂಬ ಭರವಸೆ ಇಡುವಂತಿಲ್ಲ. ಹಾಗಾಗಿ ಸಿ.ಬಿ.ಐ. ತನಿಕೆಯೇ ಆಗ;ಲಿ ಎಂದು ಎಲ್ಲರೂ ಬಯಸುವುದು.

ಡಿ. ಕೆ. ರವಿಯವರು ಮರಣ ಹೊಂದಿದರು ಎನ್ನುವುದಕ್ಕಿಂತಲೂ  ಒಬ್ಬ ಸಿಪಾಯಿ ಜೀವ ಹಂಗು ತೊರೆದು ದೇಶಕ್ಕೆ ಹುತಾತ್ಮರಾಗು ವಂತೆ ಹುತಾತ್ಮರಾದರು ಎಂದು ಹೇಳಿ ಗೌರವಿಸುವುದೇ ಸರಿ.  ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ಸ್  ಹಾಗೂ ಸಿದ್ದರಾಮಯ್ಯನವರ ನಡವಳಿಕೆಯೂ ಈ ದಿಸೆಯಲ್ಲಿ ಸಂಶಯಾಸ್ಸದವಾಗಿಯೇ ಕಾಣುತ್ತದೆ.  ಅವರು ಯಾರನ್ನೋ ರಕ್ಷಣೆ ಮಾಡುವ ಸಲುವಾಗಿ  ಹೆಚ್ಚಿನ ಗಮನ ಹರಿಸಿ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. 

ಒಬ್ಬ ಪ್ರಾಮಾಣಿಕ ವ್ಯಕ್ತಿ ಅಪರಂಜಿಗೆ ಸಮ. ಅಂತಹ ವ್ಯಕ್ತಿಯ ಮೇಲೆ ಆದ ಅನ್ಯಾಯವನ್ನು  ಯಾರೂ ಸಹಿಸುವುದಿಲ್ಲ ಸಹಿಸಲೂ ಬಾರದು. ಅವರ ಸಾವಿಗೆ ಕಾರಣ ಏನು? ಸಾವಿಗೆ ಕಾರಣರಾದವರನ್ನು ಶಿಕ್ಷಿಸದೇ  ಬಿಡಬಾರದು.  ಸಿ. ಬಿ. ಐ. ತನಿಕೆ ಕಾರ್ಯ ವಿಳಂಬವಿಲ್ಲದೆ ಸಾಗುವಂತೆ ಸಹಕರಿಸಿ   ಸತ್ಯವನ್ನು ಬಯಲಿಗೆಳೆಯುವುದು ಅಧಿಕಾರ ಸೂತ್ರ ಹಿಡಿದವರ ಮೊದಲ ಕರ್ತವ್ಯ  ಎಂಬುದನ್ನು ನೆನಪಿಸಕೊಳ್ಳ ಬೇಕಾದ ಅಗತ್ಯವಿದೆ,

ಗುರುವಾರ, ಮಾರ್ಚ್ 5, 2015

ಮನು಼ಷ್ಯ ಮತ್ತು ಶರೀರ

ಮಾನವನ ಶತ್ರು   ನಾನು.......?

ನಾನು ಒಬ್ಬ ರಾಜಕಾರಣಿ, ನಾನು ಒಬ್ಬ ಶಿಕ್ಷಕ, ನಾನು ಒಬ್ಬ ಪಂಡಿತ,  ನಾನು ಒಬ್ಬ ಕಲಾವಿದ, ನಾನು ಒಬ್ಬ ಸಭ್ಯ ಗೃಹಸ್ಥ, ನಾನೊಬ್ಬ ಧನಿಕ ಹೀಗೆ ನಾ ನಾ ಕಾರಣಗಳಿಂದ ಮನುಷ್ಯನಲ್ಲಿ  'ಅಹಂ` ತುಂಬಿಕೊಂಡಿರುತ್ತದೆ.  ಈ ಅಹಂಕಾರ ಸರ್ವತ್ರ.  ಯಾರನ್ನೂ ಬಿಟ್ಟಿರುವುದಿಲ್ಲ.  'ನಾನು' ಎಂದು ತನ್ನನ್ನು ಪ್ರತಿನಿಧಿಸಿಕೊಳ್ಳುತ್ತಿರುವ ವ್ಯಕ್ತಿತ್ವವು ಆ ವ್ಯಕ್ತಿಯ ಭೌತ ಶರೀರಕ್ಕೆ ಸಂಬಂಧಪಟ್ಟದ್ದು.

ಅಂದುಕೊಳ್ಳುವಾಗ ಪ್ರಪಂಚದಲ್ಲಿ ನನ್ನಂತೆ ಯಾರೂ ಇಲ್ಲ ಎಂಬ ಭಾವನೆ ಇಂಥವರಲ್ಲಿ ಬೆಳೆದಿದ್ದು ಅವರ ಮಾತು ನಡವಳಿಕೆಗಳಲ್ಲಿ ಪ್ರಕಟಗೊಳ್ಳುತ್ತಿರುತ್ತದೆ. ಹಾಗಾಗಿ ಇವರನ್ನು ಅಹಂಕಾರಿ ಎಂದು ತಿಳಿದವರು ಗುರುತಿಸುತ್ತಾರೆ.  ಈ ರೀತಿಯ ಸ್ವಭಾವದವರಿಗೆ ಯಾವಾಗಲೂ ತನ್ನ ಸುಖಕ್ಕೆ  ಬೇಕಾದುದನ್ನು ಹೊಂದುವ ಅವರಸರದಲ್ಲಿ ಇವರು ಬೇರೆಯವರಿಗೆ ಕೆಡುಕಾಗುತ್ತದೋ ಏನೋ ಎಂಬ ಚಿಂತೆಯನ್ನು ಮಾಡದೆ, ಏನೆಲ್ಲಾ ಬೇಕು ಅದನ್ನೆಲ್ಲಾ ಮಾಡುತ್ತಲೇ ಇರುತ್ತಾರೆ, ಇವರಿಗೆ  ತನ್ನ  ತಂದೆ - ತಾಯಿ, ಅಣ್ಣ ತಮ್ಮ ಅಕ್ಕ ತಂಗಿ, ಬಂದು ಬಳಗ ಸ್ನೇಹಿತರು ಈ ಮೊದಲಾದ ಸಂಬಂಧಗಳಿಗೆ ಯಾವ ಬೆಲೆಯೂ ಕೊಡುವವರಲ್ಲ. ಯಾಕೆಂದರೆ ಇವರು ಎಲ್ಲ ಚಂತನೆಗಳಲ್ಲಿ ಸ್ವಾರ್ಥ ತುಂಬಿಕೊಂಡಿರುತ್ತದೆ. ಇವೆಲ್ಲಕ್ಕೂ ಕಾರಣ ಅಹಂಕಾರ.

ಈ ರೀತಿ ಅಹಂಕಾರ ಬೆಳೆಯಲು  ಅವರಲ್ಲಿರುವ ಅಜ್ಞಾನವೇ ಕಾರಣ. ತಾನು ಏನೇ ಸಾಧನೆ ಮಾಡಿರಬಹುದು ಎಲ್ಲರಿಗಿಂತಲೂ ಶ್ರೇಷ್ಟವಾದ ವಿದ್ವತ್ ಅವರಲ್ಲಿ ಇರಬಹುದು. ಅವರು ಸಂಪಾದಿಸಿದ ಐಶ್ವರ್ಯ ಅವರಲ್ಲಿ ಇರಬಹುದು, ಅವರಲ್ಲಿ ಕಲಾವಿದನ ಪ್ರತಿಭೆ ಇರಬಹುದು. ಆದರೆ ಅವನಲ್ಲಿರ ಬೇಕಾದ ಮಾನವನೆನಿಸಲು ಇರಬೇಕಾದ ಆತ್ಮಜ್ಞಾನ ಇಲ್ಲದೇ ಇದ್ದರೆ  ಏನೂ ಪ್ರಯೋಜನವಿಲ್ಲ.

ಮನುಷ್ಯನೆಂದರೆ  ಯಾರು? ಆತ್ಮ ಎಂದರೆ ಏನು?  ನಾವು ವಿಶ್ವದಲ್ಲಿ ಒಂದು ಪ್ರಾಣಿ (ಪ್ರಾಣವುಳ್ಳದೆಲ್ಲ ಪ್ರಾಣಿ)  ಆದರೆ ಪ್ರಾಣಿಗಳಲ್ಲಿ ವಿಶೇಷ ವಾಗಿ ವರ್ಗೀಕರಿಸಲ್ಪಟ್ಟ ಪ್ರಾಣಿ. ಅದಕ್ಕೆ ಕಾರಣ ಇದೆ.  ಪ್ರಾಣಿಗಳಿಗೆಲ್ಲ ಇರುವಂತೆ ಮನುಷ್ಯನಿಗೂ ಹಸಿವು, ಬಾಯಾರಿಕೆ ನಿದ್ರೆ ಮೈಥುನ ಎಲ್ಲವೂ ಇದೆ. ಆದರೆ ಪ್ರಾಣಿಗಳಂತೆ ಮನುಷ್ಯ ಯಾವಾಗ ಬೇಕೆಂದರೂ, ಆಥವಾ ಸಿಕ್ಕಿದ್ದನ್ನು ತಿನ್ನವುದಿಲ್ಲ  ಖುಷಿ ಬಂದಹಾಗೆ ಬದುಕುವುದಿಲ್ಲ.  ಅವನ ಬದುಕು ನಿಯಂತ್ರಕ್ಕೆ ಒಳಪಟ್ಟಿರುತ್ತದೆ.  ಒಂದು ರೀತಿ ನೀತಿ, ಆಚಾರ ವಿಚಾರ,  ನಂಭಿಕೆ ಈ ಎಲ್ಲವನ್ನೂ ಒಳಗೊಂಡು ಒಂದು ನಿಯಂತ್ರಣವನ್ನು ಹೊಂದಿರುವ ಬದುಕು ಮಾನವನದು. ಈ ನಿಯಂತ್ರಣವನ್ನು ತೊರೆದು ಬದುಕನ್ನು ಅನುಭವಿಸುವುದಕ್ಕೂ  ಇವರಿಗೆ ಆಗುವುದೇ ಇಲ್ಲ.  ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮ್ಮನ್ನು ನಿಯಂತ್ರಣಕ್ಕೆ ಒಳಪಡಿಸುವುದು  ಮತ್ತು ಒಳಪಡಿಸಿದ್ದು  ಯಾರು?  ಸಾಮಾನ್ಯವಾದ ಉತ್ತರ ನಮ್ಮ ಧರ್ಮದಿಂದ ಒಳಗೊಂಡ ಆಚಾರ ವಿಚಾರ.  ಒಂದು ವಸ್ತುವಿನ್ನು ಗುರುತಿಸಲ್ಪಡುವುದು ಅದರ ಧರ್ಮದಿಂದ.   ಅದು ಮನುಷ್ಯನಿಗೂ ಅನ್ವಯಿಸುತ್ತದೆ, ಇತರ ಪ್ರಾಣಿ, ಪಕ್ಷಿಗಳಿಗೂ ಅನ್ವಯಿಸುತ್ತದೆ.  ಸೂರ್ಯ ಚಂದ್ರರಿಗೂ ಅನ್ವಯಿಸುತ್ತೆ ಒಟ್ಟಿನಲ್ಲಿ ಹೇಳುವುದಾದರೆ ಅಣುಗಳನ್ನೂ ಗುರುತಿಸುವುದು ಅದರ ಧರ್ಮದಿಂದಲೇ.   ಆಂತಹ ಒಂದು ಗುಣ ಮನುಷ್ಯನನ್ನೂ ಪ್ರಾಣಿಗಳಿಂದ ವರ್ಗೀಕರಿಸಿ ಮಾನವ ಎಂದು ಹೇಳಿಕೊಳ್ಳಲು ಕಾರಣವಾಯಿತು.  ಅದಕ್ಕೆ ಕಾರಣ  ಜೀವಿಗಳಲ್ಲಿ ಶರೀರ ಮತ್ತು ಅದರಲ್ಲಿರುವ ಜೀವ

ಅದೇ ಧರ್ಮ ಆಚರಣೆಯನ್ನು ಒಪ್ಪಿಕೊಂಡಿದ್ದರೂ ಕೆಲವು ಸಂದರ್ಭದಲ್ಲಿ ಆಧರ್ಮದಲ್ಲಿ ಇಲ್ಲದೇ ಇರುವುದನ್ನು  ಆಚರಿಸುವುದೂ ಇದೆ, ಯಾವುದೇ ಧರ್ಮದಲ್ಲಿ ಹಿಂಸೆಯನ್ನು ಬೋಧಿಸುವುದೇ ಇಲ್ಲ. ಒಂದು ವೇಳೆ ಬೋಧಿಸಿದರೆ ಅದು ಅಧರ್ಮ.  ಹೀಗೆ ಒಬ್ಬ ವ್ಯಕ್ತಿ ತನ್ನ ಅನುಕೂಲಕ್ಕೆ ಏನು ಬೇಕು ಅದನ್ನೆಲ್ಲಾ ಆಚರಿಸುವುವಾಗ ನ್ಯಾಯ ನೀತಿ ಸತ್ಯ ಧರ್ಮ  ಆಚಾರ ವಿಚಾರ ಎಲ್ಲವನ್ನೂ ಗಾಳಿಗೆ ತೂರುವುದೂ ಇದೆ. ಇದಕ್ಕೆ ಕಾರಣ ಅಹಂಕಾರ ಅಂದರೆ ಶರೀರವೇ ಪ್ರಧಾನವೆಂಬ ನಂಬಿಕೆಯಿಂದ ಬದುಕುವ ಮನುಷ್ಯ,

ಆದರೆ ನಿಜವಾದ ಮನುಷ್ಯನ ಸ್ವರೂಪ ಅದಲ್ಲ.  ಶರೀರದಿಂದ ಪ್ರಾಣಿಯಾಗಿರುವ ಜೀವಿಯಲ್ಲಿರುವ ಪ್ರಾಣ, ಅಥವಾ ಜೀವ ಅಥವಾ ಆತ್ಮದಲ್ಲಿ ಇರುವ ಸತ್ಯ ಧರ್ಮವೇ ಅವನ ನಿಜವಾದ ಸ್ವರೂಪ. ಅಂತವನಲ್ಲಿ ನಾನು ಎಂಬುದು ಇರುವುದೇ ಇಲ್ಲ.  ಶರೀರ ನಾನು ಎನ್ನಲು ಅದರಲ್ಲಿರುವ  ಜೀವದ ಸಹಾಯ ಬೇಕಾಯಿತು.  ಜೀವ ಇಲ್ಲದೇ ಇದ್ದರೆ  ಆ ಶರೀರ ನಾನು ಎನ್ನುವುದು ಸಾಧ್ವವೇ ಇಲ್ಲ.  ಆದುದರಿಂದ ನಾನು ಎನ್ನುವುದು ಮನುಷ್ಯನೊಂದಿಗೆ ಹುಟ್ಟಿ ಮನುಷ್ಯನೊಂದಿಗೆ ಸಾಯುತ್ತದೆ. ಅದು ಕೇವಲ ಶರೀರ ದ್ಯೋಕವಾದ ಶಬ್ದ.  ಆದರೆ ಅದೇ ಶರೀರ ನಾನು ಮತ್ತು ಪ್ರಾಣ ಸೇರಿಯೇ ಈ ಶರೀರದ ಅಸ್ತಿತ್ವವನ್ನು ಅರಿತುಕೊಂಡಾಗ ಅವನ ಇಡೀ ಬದುಕೇ  ನಿಯಮ ಬದ್ಧವಾಗಿರುತ್ತದೆ.

ಈ ನಾವು ಅನ್ನುವ ಶಬ್ಧದ ವಿಸ್ತಾರವನ್ನೂ ನೋಡಿ. ನಾವು  ಅಂದಕೂಡಲೇ ತಂದೆ ತಾಯಿ ಅಜ್ಜ ಅಜ್ಜಿ ಹೀಗೆ ಹರಿದು ಬಂದ ಪರಂಪರೆಯನ್ನೇ ಬೆಸೆಯುವುದರೊಂದಿಗೆ ಮಕ್ಕಳು ಮರಿಗಳೊಂದಿಗೆ ನಿರಂತರವಾಗಿ ಹರಿಯುತ್ತದೆ. ಸಂಬಂಧಗಳನ್ನು ಬೆಳೆಸುತ್ತದೆ.  ನಾವು ಎಂದಾಗ ಇವರು ನಮ್ಮ ತಂದೆ - ತಾಯಿ ಇವರಿಂದಾಗಿ ನಾನು ಈ ಲೋಕಕ್ಕೆ ಬರುವುದು ಸಾಧ್ಯವಾಯಿತು ಎಂಬ ಅರಿವಿನಿಂದ ಕೃತಜ್ಞತೆ, ಗೌರವ, ಪ್ರೀತಿ. ವಿಶ್ವಾಸ  ಭಾವನೆಯಿಂದ ಸಂಬಂಧಗಳು ಇನ್ನಷ್ಟು ಗಟ್ಟಿಯಾಯಿತು.  ಅಣ್ಣ ತಮ್ಮ ತಂಗಿ ಅಕ್ಕ ಎಂಬ ಭಾವನೆಗಳಲ್ಲಿ ಪ್ರೀತಿ ವಿಶ್ವಾಸ ಗೌರವಗಳು ಉಂಟಾಗಿ ತಪ್ಪು ಹಾಗೂ ಕೆಡುಕನ್ನು ಮಾಡುವುದು ಸಾಧ್ಯವೇ ಇಲ್ಲದೆ ಬದುಕು ಹಸನಾಗುವುದು.  ಈ ಸಂಬಂಧವೂ ನೆರೆ ಕರೆಯಲ್ಲೂ  ಪರಸ್ತ್ರೀಯರಲ್ಲಿಯೂ ಬೆಳೆದು ತಪ್ಪು ಮಾಡಬೇಕಾದರೆ  ನೂರಾರು ಸಲ ಯೋಚಿಸುವಂತಾಗುವುದು. ಒಂದು ವೇಳೆ ತಪ್ಪು ಮಾಡಿದರೂ  ಒಳಗಿನ ಮನುಷ್ಯನ ಪ್ರಶ್ನೆಗಳಿಗೆ ಉತ್ತರ ಕೊಡಲಾರದೇ  ಸಹಿಸಲಾರದ ನೋವು ಅನುಭವಿಸುವುದು ಮತ್ತು ಈ ಮೂಲಕ ತನ್ನನ್ನು ತಾನು ತಿದ್ದಿಕೊಂಡು ಬದುಕುವುದೂ ಸಾದ್ಯ. ಇದು ನಿಜವಾದ ಮನುಷ್ಯನ ಲಕ್ಷಣ. ಬದುಕಿನ ಸಿದ್ದಾಂತ.

ಭಾನುವಾರ, ಮಾರ್ಚ್ 1, 2015

ಮಾತೃಭಾಷೆ ಮನುಷ್ಯನ ಉಸಿರು.......

ಮಾತೃಭಾಷೆ ಮನುಷ್ಯನ ಉಸಿರು

ವಿಶ್ವದಾದ್ಯಂತ ಸುಮಾರು ೬೦೦೦ ಬಾಷೆಗಳಿವೆ. ವಿಶ್ವದಾದ್ಯಂತ ವಿವಿಧ ಸಮುದಾಯಗ ಬಹುಭಾಷಾ ವೈಶಿಷ್ಟ್ಯವನ್ನು ಉಳಿಸುವ ಹಾಗೂ ಬೆಳೆಸುವ ಉದ್ದೇಶದಿಂದ ವಿಶ್ವದ ಎಲ್ಲಾ ಭಾಷೆಗಳನ್ನು ಸಂರಕ್ಷಿಸುವ ಸಲುವಾಗಿ ಫೆಬ್ರವರಿ ೨೧ ರಂದು ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ,  ವಿಶ್ವಸಂಸ್ಥೆ ಹಾಗೂ ಯುನೆಸ್ಕೋ ಜೊತೆಯಾಗಿ ವಿಶ್ವಜ ಜನರೆಲ್ಲಾ ಮಾತೃಭಾಷೆದಿನವನ್ನಾಗಿ ಆಚರಿಸುವಂತೆ ೧೯೯೯ ರಲ್ಲಿಯೇ ಕರೆನೀಡಿತ್ತು,. ಅಲ್ಲದೆ ವಿಶ್ವಸಂಸ್ಥೆಯು ೨೦೦೮ನೇ ವರ್ಷವನ್ನು  'ವಿಶ್ವ ಭಾಷೆಗಳ ವರ್ಷ` ಎಂದೂ ಘೋಷಿಸಿತ್ತು.

ಮನುಷ್ಯನ ಹುಟ್ಟು ಎಷ್ಟು ಸಹಜವೋ ಮಾತೃಭಾಷೆಯೂ ಅಷ್ಟೇ ಸಹಜ.  ಮಾತೃಭಾಷೆ ಎಂದರೆ ನಾವು ಓದುವ - ಬರಿಯುವ - ಹಾಗೂ ಉದ್ಯೋಗಕ್ಕಾಗಿ - ಸಂಪಾದನೆಗಾಗಿ ಕಲಿಯುವ ಭಾಷೆ ಎಂಬ ಭ್ರಮೆ ಇದೆ.ಹಾಗಾಗಿ ನಾವು ಕನ್ನಡ ಮಾತೃ ಭಾಷೆಯಾದರೂ ಕಲಿಯುವುದು ಮಾತ್ರ ಇಂಗ್ಲಿಷ್ ಭಾಷೆಯಲ್ಲಿಯೇ.  ನಮ್ಮ ವಿದ್ಯಾಭ್ಯಾಸ ಇಂಗ್ಲಿಷಿನಲ್ಲಿಯೇ ಆದರೆ ಉತ್ತಮ ಉದ್ಯೋಗ ಸಿಗುವುದು. ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನ ದೊರಕುವುದು ಎಂಬ ಚಿಂತನೆ ಹಾಗು ನಂಬಿಕೆ ಬೆಳೆಯುತ್ತಿದೆ. ಹಾಗಾಗಿ ನಾವು ಮಾತೃಭಾಷೆಯನ್ನು ಉಪೇಕ್ಷೇ ಮಾಡುತ್ತೇವೆ.   ಕೆಲವರಿಗೆ ನಮ್ಮನ್ನು ನಾವು ಗುರುತಿಸಿಕೊಳ್ಳಲು ಇಂಗ್ಲಿಷ್ ಭಾಷೆಯೇ ನಮ್ಮ ವಿದ್ಯೆ ಹಾಗು ಬುದ್ಧಿವಂತಿಕೆಯ ಲಕ್ಷಣ ಎಂಬ ನಂಬಿಕೆಯಿಂದ  ಮಾತೃಭಾಷೆಯನ್ನು ಅಷ್ಟಾಗಿ ಬಳಸುವುದಿಲ್ಲ.  ಆದರೆ ಮಾತೃ ಭಾಷೆಯೇ ನಿಜವಾಗಿಯೂ ಅರ್ಥವಾಗುವ ಭಾಷೆ.
ಭಾಷೆ ಎಂದರೆ ಹೃದಯದಲ್ಲಿರುವ ಸ್ಪಂಧನ. ಅದು ತಾಯಿ ಮತ್ತು ಮಗುವಿನ ಬಂಧನ.  ಹಾಗಾಗಿ ಮಾತೃಭಾಷೆ ಎಂದರೆ ನಾವು ಮಾತುಗಳನ್ನು ಶಬ್ದಗಳ ರೂಪದಲ್ಲಿ  ವ್ಯಕ್ತಗೊಳಿಸುವದರೊಂದಿಗೆ ಅದು ಹೃದಯದಲ್ಲಿನ ಸ್ಫಂಧನವನ್ನು ನೇರವಾಗಿ ಅದೇ ಭಾಷೆ ಮಾತನಾಡುವ ವ್ಯಕ್ತಿಯೊಂದಗೆ ಬೆಸೆದುಕೊಳ್ಳುತ್ತದೆ. ಮಾತೃಭಾಷೆ ಎಂದರೆ ಹುಟ್ಟಿನಿಂದ ಪರಂಪರೆಯಲ್ಲಿ ಬಂದ ಭಾಷೆ.  ಹುಟ್ಟಿಸಿದ ತಂದೆ - ತಾಯಿಯನ್ನು ಹೇಗೆ ಬದಲಾಯಿಸುವುದಾಗಲೀ ಅವರ ಜೊತೆಗಿನ ನೈಜ  ಸಂಬಂಧವನ್ನು ಹೇಗೆ ಅಲ್ಲಗೆಳೆಯಲು ಸಾಧ್ಯವಿಲ್ಲವೋ ಹಾಗೆ ಮಾತೃ ಭಾಷೆಯನ್ನೂ ತೊರೆಯುವುದಾಗಲೀ ಬದಲಾಯಿಸುವುದಾಗಲೀ ಇನ್ನೊಂದನ್ನು ಸ್ವೀಕರಿಸುವುದಾಗಲೇ ಅಥವಾ ಮೇಲ್ಮಟ್ಟದ ಭಾಷೆ,, ಕೀಳ್ಮಟ್ಟದ ಭಾಷೆ ಎಂದಾಗಲಿ ಇಲ್ಲ.  ಮಾತೃ ಭಾಷೆ  ಮನುಷ್ಯನ ಹೃದಯದ ಭಾಷೆ.  ತಾಯಿ ತಂದೆಯಿಂದ  ಹರಿದು ಬರುವ ಭಾವನಾತ್ಮಕ ಸಂವಹನವೇ ಆ ವ್ಯಕ್ತಿಯ ಮಾತೃಭಾಷೆ. 
ಭಾಷೆ ಎಂದರೆ ಜೀವಿಯೊಂದು ಪ್ರಕಟಿಸವು ಅದರ ಭಾವನೆ. ಅದು ಆ ಜೀವಿಗೆ ಅನುಗುಣವಾಗಿಯೇ ಇರುತ್ತದೆ.  ನನಗೆ ನೀರು ಬೇಕು ಎಂದು  ಶಬ್ದಗಳಲ್ಲಿ ಹೇಳುವುದು ಹಾಗೂ ಸಂಜ್ಞೆಯಲ್ಲಿ ಹೇಳಿದಾಗ ಅವನ ಹೃದಯದ ಭಾವನೆಯಾದ  ಬಾಯಾರಿಕೆ ಎಂಬ ಭಾವನೆ ಪ್ರಕಟವಾಗುವುದು. ಹಾಗಾಗಿ ಇಲ್ಲಿ  ಭಾಷೆಯ ಅರ್ಥ ''ಬಾಯಾರಿಕೆ ತಣಿಸಲು ನೀರು ಬೇಕು`` ಅದು  ಕೇಳುಗನಿಗೆ ಅರ್ಥವಾಗುವ ಭಾಷೆಯಲ್ಲಿಯೇ  ಇರಬೇಕು.  ಕೇಳುಗನ ಭಷೆ ಬೇರೆಯಾಗಿ ಅವನಿಗೆ ಬಾಯಾರಿದವ ಹೇಳುವ ಮಾತು ಅರ್ಥವಾಗದಿದ್ದರೆ,  ಅವನು ಅದನ್ನು ಪ್ರಕಟಿಸುವುದು ಸಂಜ್ಞೆಯ ಮೂಲಕವೇ. ಹಾಗಾಗಿ ಭಾಷೆ ಎನ್ನುವುದು  ಭಾವನೆಗಳ  ಪ್ರಕಟವೇ ಹೊರತು ಶಬ್ದ  ಯಾವುದು ಭಾಷೆ ಯಾವುದು ಮುಖ್ಯವಲ್ಲ. 

ಹಾಗಾಗಿ ಆರ್ಥವಾಗದ  ಭಾಷೆಯನ್ನು ಅರ್ಥ ಮಾಡಿಸಿಕೊಂಡು  ಸಂವಹಿಸುವ ರೀತಿಯೇ ಮಾತೃಭಾಷೆಯನ್ನು ಉಪೇಕ್ಷಿಸಿ ಇತರ ಭಾಷೆಯನ್ನು ಬಳಸಿ ಸಂವಹಿಸುವುದು.  ಈ  ಕ್ರಿಯೆಯಲ್ಲಿ ಹೇಳಿದ ಅಥವಾ ಕೇಳಿದ ಯಾಂತ್ರಿಕವಾಗಿಯೇ ಕೆಲಸ ಮಾಡುತ್ತದೆ ವಿನಹಃ ಹೃದಯುವನ್ನು ತಲುಪುದಿಲ್ಲ.  ಹಾಗಾಗಿಯೇ ತಂದೆ - ತಾಯಿ - ಮಕ್ಕಳು - ಅಣ್ಣ - ತಂಗಿ - ಬಂದು ಬಳಗ ಎಲ್ಲವೂ  ಯಾಂತ್ರಿಕವಾಗಿಯೇ ಇರುತ್ತದೆಯೇ ವಿನಹ: ಜೀವನದ ಮೂಲ ತತ್ವವಾದ ಪ್ರೀತಿ, ವಿಶ್ವಾಸ, ನಂಬಿಕೆಗಳ ತಳಹದಿಯೇ ಮರೆಯಾಗಿ ಜೀವನದಲ್ಲಿ  ಕೊಡು - ಕೊಳ್ಳು ಎನ್ನುವ ಭಾಚನೆ ಬೆಳೆಯುತ್ತದೆ.  ಈಗಿನ ದಿನಗಳಲ್ಲಿ ಕಾಣುವ ಎಲ್ಲಾ ಅನರ್ಥಕ್ಕೆ ಇದೇ ಮೂಲ ಕಾರಣ.  ಎಲ್ಲದರಲ್ಲೂ ಲೆಕ್ಕಾಚಾರ ತಲೆ ಎತ್ತಿ ಹೃದಯಾತ್ಮಕ ಸಂಬಂಧವೇ ಉಳಿಯದೇ ಜೀವನವೇ ಶೂನ್ಯ ಎಂಬ ಭಾವನೆಯೇ  ಮನುಷ್ಯನಲ್ಲಿ ಬೆಳೆಯುತ್ತದೆ.

ಪ್ರಕೃತಿಯಲ್ಲಿ ಸಹಜವಾಗಿ ಇರುವ ಒಳ್ಳೆಯದು ಕೆಟ್ಟದುಗಳ ನಡುವೆ ಬದುಕುವ  ಮನುಷ್ಯ ತಾನು ಕೆಟ್ಟದನ್ನು ಮಾಡುವಾಗ ಅವನ ಹೃದಯದಲ್ಲಿ ತಂದೆ ತಾಯಿ ಬಂದು ಬಳಗದವರೊಂದಿಗೆ ಭಾವನಾತ್ಮಕ ಸಂಬಂಧ  ಬೆಳೆಸಿಕೊಂಡಿದ್ದರೆ  ಅವನಲ್ಲಿ ಕೆಲವು ಕ್ಷಣವಾದರೂ ನಾನು ಈ ತಪ್ಪು ಕೆಲಸಮಾಡಿದರೆ ನನ್ನ ಪ್ರೀತಿಯ ತಂದೆ - ತಾಯಿಗೆ - ಬಂದು ಬಳಗಕ್ಕೆ ಹೇಗೆ ಮುಖ ತೋರಿಸಲಿ ಎಂಬ ಭಾವನೆಯು ಅವನನ್ನು ಎಚ್ಚರಿಸುತ್ತದೆ. ಹಾಗಾಗಿ ಮಾತೃಭಾಷೆಯೇ  ಅವನ ಹೃದಯದಲ್ಲಿ ಬೆಸೆದು ಕೊಂಡಿದ್ದರೆ ಯಾವಾಗಲೂ ಅವನ  ಭಾವನೆಯನ್ನು ನಿಯಂತ್ರಿಸುತ್ತದೆ.

ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ನೀಡಬೇಕು ಎಂಬುದೂ  ಚರ್ಚೆಗೆ ಒಳಪಡುವ ವಿಷಯವೇ ಅಲ್ಲ.  ಕೋರ್ಟುಗಳೇ ಆಗಲೀ ಯಾವುದೇ ಸರಕಾರವೇ ಅಗಲಿ ಅದನ್ನು ಪ್ರಶ್ನಿಸುವದೂ ಅರ್ಥವಿಲ್ಲದ ಮಾತು.  ನಮ್ಮಲ್ಲಿ ಇಂದು ಇಂಗ್ಲಿಷ್  ಮಾದ್ಯಮದ ಶಾಲೆಗಳಿವೆ.  ಇಂಗ್ಲಿಷ್ ಮಾದ್ಯಮದ ಶಾಲೆಗಳನ್ನು ತೆರೆಯಲು ಅನುಮತಿ ನೀಡುವ ಬಗ್ಗೆ ಹಲವಾರು ತಕರಾರುಗಳ ನಡುವೆಯೂ  ಕೆಲವರು ನ್ಯಾಯಾಲದ ಕಟ್ಟೆ ಹತ್ತಿದವರೂ  ಇದ್ದಾರೆ.  ಇವೆರಲ್ಲೂ   ಜನರಿಗೆ ಒಳ್ಳೆಯದು ಮಾಡುವ  ಹೆಸರಿನಲ್ಲಿ ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿರುವುದು ಎಲ್ಲರಿಗೂ ತಿಳಿದಿರುವ  ಸತ್ಯ.  ಸ್ವಾತಂತ್ರೈ ಬಂದು ೬೮ ವರ್ಷಗಳಾದರೂ ನಮ್ಮ ಮಕ್ಕಳು ಮಾತೃ ಭಾಷಯಲ್ಲಿಯೇ ಓದಲಿ ಎಂದು ಹೇಳುವ  ಯಾವ ಸರಕಾರವೂ ಇಲ್ಲ.  ಹಾಗೆಂದು ಇಂಗ್ಲಿಷ್ ಆಗಲಿ ಇನ್ನಿತರ ಭಾಷೆಯನ್ನು ನಾವು ಓದಲೇ ಬಾರದು ಎಂದು ಅಲ್ಲ.  ಪ್ರಾಥಮಿಕ ಹಂತದಲ್ಲಿ  (೭ನೇ ತರಗತಿಯ ವರೆಗೆ) ಕನ್ನಡದಲ್ಲಿಯೇ ಓದಲಿ.  ಈ ಹಂತದಲ್ಲಿ  ಭಾಷೆಯನ್ನೇ ಅದರ ವ್ಯಾಕರಣಕ್ಕೇ ಒತ್ತು ಕೊಟ್ಟು ಕಲಿಯಲಿ.  ಆಮೇಲಿನ ವಿದ್ಯೆ ಪ್ರತಿಯೊಬ್ಬನೂ ಅವನ ಆಯ್ಕೆಯಂತೆ ಓದುವುದು ಉತ್ತಮ.  ಇದರಿಂದಾಗಿ ಕನ್ನಡವೂ ಸರಿಯಾಗಿ ಬರುವುದು.  ಇಲ್ಲವಾದರೆ ಅತ್ತ  ಕನ್ನಡವೂ ಸರಿಯಾಗಿ ಬರದೆ ಇತ್ತು ಇಂಗ್ಲಿಷೂ ಸರಿಯಾಗಿ ಬರದೇ ಮನುಷ್ಯನ ಬದುಕೇ ಅತಂತ್ರವಾಗುವುದು.



ಬುಧವಾರ, ಫೆಬ್ರವರಿ 18, 2015

ಭಗವದ್ಗೀತೆ ಮತ್ತು  ಅಹಂಕಾರಿಗಳು  

ಭಗವದ್ಗೀತೆಯದು  ಸೂಕ್ಷ್ಮ ಶರೀರ - ಅಹಂಕಾರಿಗಳದು ಸ್ಥೂಲ ಶರೀರ

ಭಗವದ್ಗೀತೆಯ ವಿರುದ್ಧ ಹೇಳಿಕೆ ನೀಡಿರುವ  ಅಥವಾ ಭಗವದ್ಗೀತೆಯನ್ನು ತೆಗಳುವುದು ಎಂದರೆ ತಮ್ಮನ್ನು ತಾವು ತೆಗಳುವುದ ಎಂದು ಅರ್ಥ.  ಯಾಕೆಂದರೆ ಭಗವದ್ಗೀತೆ ಸೃಷ್ಟಿಯಾದಾಗ ಅಥವಾ ಅದನ್ನು ಬರೆದಾಗ  ಅದು ಜಾತೀ ಆಧಾರದಿಂದ ವಾಗಲೀ ಧರ್ಮ ಆಧಾರದಿಂದವಾಗಲೀ ಉಂಟಾಗಲಿಲ್ಲ. ಯಾಕೆಂದರೆ ಆಗ ಈಗಿನ ಹಾಗ ಧಾರ್ಮಿಕ ಚಳುವಳಿಗಳೇ ಇರಲಿಲ್ಲ. ಆದರೆ ಈಗಿನ ವಾಸ್ತವದಲ್ಲಿ ಕೆಲವರಿಗೆ ತಮ್ಮನ್ನು ಒಬ್ಬ ಹೋರಾಟಗಾರನಾಗಿ ಗುರುತಿಸಿಕೊಂಡು ಬೆಳೆಯುವುದಕ್ಕೆ ಒಂದು ವೇದಿಕೆ  ಅಷ್ಟೇ. ಒಬ್ಬರು ತೆಗಳುವುದು... ಇನ್ನೊಬ್ಬರು ಕೆರಳುವುದು ಯಾವ ತಳಹದಿಯ ಧರ್ಮ ?

ನಂಬಿಕೆಯೇ ಮನುಷ್ಯನ ಜೀವನದ ತಳಹದಿ.   ಆದರೂ ಕೆಲವರು ಅಲ್ಲ ಎಂದು ವಾದ ಮಾಡುವವರೂ ಇದ್ದಾರೆ?  ನಂಬಿಕೆ ಇಲ್ಲದಿದ್ದರೆ ಮನುಷ್ಯನ ಅಸ್ಥಿತ್ವವೇ ಇರುವುದಿಲ್ಲ. ಇದಕ್ಕೆ ಉದಾಹರಣೆ ತನ್ನ ತಂದೆಯನ್ನು ಪ್ರತಿಯೊಬ್ಬನೂ ಗುರುತಿಸುವುದು ತಾಯಿಯಿಂದ ಮಾತ್ರ ಸಾದ್ಯ. ಇದು ಕಣ್ಣಿಗೆ ಕಾಣದ ಸತ್ಯ.  ಆದರೆ ತಾಯಿಯನ್ನು ಪ್ರತಿಯೊಬ್ಬರೂ ನಂಬುವಂತೆ ಹಾಗೆಯೇ ತಾಯಿ ಹೇಳಿದ್ದನ್ನೂ ನಂಬುತ್ತೇವೆ.  ಆದುದರಿಂದ ಸತ್ಯ ಎನ್ನುವುದು ಎಷ್ಟು ವಾಸ್ತವೋ ಅಷ್ಟೇ ಕಣ್ಣಿಗೆ ಕಾಣವುದಿಲ್ಲ.  ಈ ಸತ್ಯದ ಮುಂದೆಯೂ ಯಾರಾದರೂ ವ್ಯತಿರಿಕ್ತವಾಗಿ ವಾದ ಮಾಡುತ್ತಾರೆಂದರೆ ಅದು ಅವನಲ್ಲಿ ಇರುವ  ಆಹಂಕಾರವೇ ಕಾರಣ.   ಆಹಂಕಾರ ಇದ್ದವ ಸತ್ಯವನ್ನು ನಂಬುವುದಿಲ್ಲ. ಹಾಗೂ ಅವನು ಕಣ್ಣಿಗೆ ಕಂಡದ್ದನ್ನು ಮಾತ್ರ ಸತ್ಯವೆಂದು ನಂಬುತ್ತಾನೆ.  ಆಹಂಕಾರ ಎಂದರೆ ಶರೀರವೇ ಪ್ರಧಾನವಾಗಿ  ಇರುವ ನಂಬಿಕೆ.  ಅಹಂ ಎಂಬ ಮಮಕಾರ , ಪ್ರೀತಿ. ಇವರೆಲ್ಲ ಶರೀರವನ್ನೇ ಮನುಷ್ಯ ಎಂದು ನಂಬಿಕೊಂಡು ಬದುಕನ್ನು ನಡೆಸುತ್ತಿರುತ್ತಾರೆ.  ಇವರಿಗೆ ಶರೀರದ ಅಸ್ತಿತ್ವಕ್ಕೆ ಕಾರಣವೇನು ಎಂಬ ನಂಬಿಕೆಯೇ ಇವರಿಗೆ ಇರುವುದಿಲ್ಲ. ಕೇವಲ “ನಾನು”

ಮನುಷ್ಯನ ಶರೀರದ ಅಸ್ತಿತ್ವಕ್ಕೆ  ಬೇಕಾಗುವ ಪ್ರಾಣವೇ ಮನುಷ್ಯನ ಅಸ್ತಿತ್ವ ಎಂಬ ಸತ್ಯವನ್ನು ಎಲ್ಲಿಯ ವರೆಗೆ ತಿಳಿಯುವುದಿಲ್ಲವೋ ಅಲ್ಲಿಯವರೆಗೆ ಇಂಥವರಿಗೆ ಭಗವದ್ಗೀತೆಯಾಗಲಿ ದೇವರಾಗಲೀ ಜಾತಿಯಾಗಲಿ, ಧರ್ಮವಾಗಲಿ ಅರ್ಥವಾಗುವುದೇ ಇಲ್ಲ.   ಇಂಥವರು ಸಮಾಜದಲ್ಲೇ ಬ್ರಹ್ಮನ ಹಾಗೆ ನಾನೇ ಬ್ರಹ್ಮ ಎಂದು ತಿಳಿದು ಬ್ರಹ್ಮಸೃಷ್ಟಿಯನ್ನೇ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ನಿಜವಾಗಿಯೂ ಇದೊಂದು ಅಲಕ್ಷಿಸಬೇಕಾದ ವಿಚಾರ. 

ಪ್ರತಿಯೊಬ್ಬ ಮನುಷ್ಯ ಅವನು ಹೇಳಿದ್ದನ್ನು ಕೇಳಿ ತಾನು ಬದುಕನ್ನು ರೂಪಿಸಿಕೊಳ್ಲುವುದಕ್ಕಿಂತಲೂ, ತನ್ನ ಬದುಕು  ಹೇಗಿರ ಬೇಕು ಎಂದು ತೀರ್ಮಾನ ಮಾಡುವ ಹಕ್ಕು ಪ್ರತಿಯೊಬ್ಬನಿಗಿದೆ, ಅದಕ್ಕೆ ಯಾವುದೇ ಧರ್ಮವಾಗಲಿ ಆಚಾರವಾಗಲಿ ವಿಚಾರವಾಗಲಿ ಅಡ್ಡಿ ಬರುವುದಿಲ್ಲ.  ಉದಾಹರಣೆಗೆ : ಮನುಷ್ಯನಾದವ (ಶರೀರದಿಂದಲ್ಲ - ಆತ್ಮದಿಂದ) ಹೆಣ್ಣು ಮಕ್ಕಳನ್ನು ಗೌರವಿಸುತ್ತಾನೆ, ಪ್ರೀತಿಸುತ್ತಾನೆ  ಅವನ ಪಾಲಿಗೆ ಅವಳು ದೇವತೆ , ಮನೆಬೆಳಗುವ ಸೊಸೆ,  ತಂದೆ ತಾಯಿಗೆ ಪ್ರೀತಿಯ ಮಗಳು. ಹಾಗೆ  ಹುಟ್ಟಿದ ಮನೆಯನ್ನು ತೊರೆದು ಸೇರಿದ ಮನೆಯಲ್ಲಿ ಒಂದಾಗಿ ಬಾಳುತ್ತಾಳೆ. ಇಷ್ಟು ಸಾಕು ಅವಳ ಬದುಕಿನ್ನು ಅರಿತು ಅವಳನ್ನು ಗೌರವಿಸಲು. ಆದರೆ ನಾವು ಹಾಗೆ ಮಾಡುತ್ತೇವೆಯೇ?  ಹೆಣ್ಣನ್ನು ಬೋಗಿಸುವ ವಸ್ತು ಎಂದು ತಿಳದು ಅವಳಿಗೆ ಹಿಂಸೆ ಕೊಡುತ್ತೇವೆ,  ಮದುವೆಯಾದ ಗಂಡು ಅವಳನ್ನು ತನ್ನ ಅಡಿಯಾಳಾಗಿ ಮಾಡವು ಪ್ರಯತ್ನದಲ್ಲಿ ಒತ್ತಡ, ಹಿಂದೆ ಎಲ್ಲವನ್ನೂ ಬಳಸುತ್ತಾನೆ. ಇದು ಅಹಂ ಕಾರದಿಂದ ಉಂಟಾದದ್ದು - ಮನುಷ್ಯ ಎಂದು ಹೇಳುವವನ ಕೃತ್ಯವಲ್ಲ.  ಈಗ ನಾವೇ ಆಲೋಚನೆ ಮಾಡವ ರೀತಿ ಹೇಗಿದೆ? ಯಾರೋ ಮಾಡೋ ತಪ್ಪಿಗೆ ಯಾರನ್ನೋ ಬೈಯುವ ತೆಗೆಳುವ ದಿಕ್ಕರಿಸುವ  ನಿಂದಿಸುವ ಎಲ್ಲವನ್ನೂ ಮಾಡುವ  ಅರ್ಥವೇನು? ಅಲ್ಪ ವಿದ್ಯಾ  ಮಹಾ ಗರ್ವಿ ಎಂದು. ಅವನಿಗೆ ಎಲ್ಲವೂ ಗೊತ್ತಿದೆ. ಆದರೆ ಅದರ ಅರ್ಥವೇ ಗೊತ್ತಿಲ್ಲ. ಹೀಗಾಗಿ ವಿರುದ್ಧ ದಿಕ್ಕಿನಲ್ಲಿಯೇ ಮಾತಾಡುತ್ತಾನೆ.

ಈಗ ಭಗವದ್ಗೀತೆಯಲ್ಲಿನ ವಿಚಾರವಾಗಿ ಸಂಕ್ಷಿಪ್ತವಾಗಿ ಹೇಳುವುದಾದರೆ...  (ಅರ್ಥವಾಗುವವರಿಗೆ ಮಾತ್ರ) ಮನುಷ್ಯನ ಬದುಕಿನಲ್ಲಿ ಎಲ್ಲವೂ ಇದೆ. ಅವನ ಸುತ್ತಮುತ್ತಲೂ ಆಸ್ತಿ, ಅಂತಸ್ತು, ಬಂದು ಬಳಗ, ರಾಜ್ಯ  ಎಲ್ಲವೂ  ಇದೆ.  ಅದರೆ ಬದುಕು ಎಂದಾಗ ಅದು ಧರ್ಮ ಮತ್ತು ಕರ್ಮ ಬದ್ದವಾಗಿರಲೇ ಬೇಕು ಎಂಬ ಸೂಕ್ಷ್ಮವನ್ನು ಅರ್ಥವಾಗಿ ಹೇಳಿರುವ ಒಂದು ಗ್ರಂಥ ಭಗವದ್ಗೀತೆ.  ಕೆಲವು ಸಮಯದಲ್ಲಿ ಗೊಂದಲಗಳು ನಮ್ಮ ಬದುಕಿನಲ್ಲೂ ಬರುತ್ತದೆ.  ಆ ಸಮಯದಲ್ಲಿ ನಾವು ಮಾಡುವ ಕರ್ಮ ಯಾವ ಆಧಾರದ ಮೇಲೆ ಇರಬೇಕು  ಮತ್ತು ಪೂರ್ವದಲ್ಲಿ ಮನುಷ್ಯ ಎಂದರೆ ಏನು?  ಅವನ ಅಸ್ತಿತ್ವವೇನು  ಈ ಮೊದಲಾದ ಕಣ್ಣೀಗೆ ಕಾಣದ ಸತ್ಯವನ್ನು ನಮಗೆ  ಭಗವದ್ಗೀತೆ ಹೇಳಿಕೊಡುತ್ತದೆ.   ಇದರಲ್ಲಿ ಟೀಕೆಗೆ ಒಳಗಾಗುವುದೇನಿದೆ? 

ಯಾವುದೇ ಒಂದು ಕ್ರಿಯೆ  ಅಥವಾ ಒಂದು ಕರ್ಮ ಜರುಗಿದಾಗ  ಅದಕ್ಕೆ ಒಂದು ಪ್ರತಿಕ್ರಿಯೆ ಇರುತ್ತದೆ.  ಹೀಗಿ ಉಂಟಾಗುವ ಪ್ರತಿಪಲ ದಿಂದ ನಮ್ಮಗೆ ಕರ್ಮಭಾದೆ ನಮ್ಮ ನಾಶಕ್ಕೆ ಕಾರಣವಾಗದಿರಲಿ ಎಂಬುದು ಭಗವದ್ಗೀತೆಯ ಉದ್ದೇಶ.  ನೀರಿಗೆ ಸಣ್ಣ ಕಲ್ಲು ಹಾಕಿದಾಗ ಅದು ಅಲೆಯನ್ನು ಸೃಷ್ಟಿಸುತ್ತದೆ. ಏನೂ ತೊಂದರೆ ಯಾವುದಿಲ್ಲ.  ಆ ಕರ್ಮದಿಂದ ಯಾವ ಬಾದೆಯೂ ಉಂಟಾಗುವುದಿಲ್ಲ. ಆದರೆ ಒಂದು ದೊಡ್ಡ ಕಲ್ಲನ್ನು  ಹಾಕಿದಾಗ ನೀರು ಅಲೆ ಅಲೆಯಾಗಿ ದಡಕ್ಕೆ ಅಪ್ಪಳಿಸಿ ನಾ ನಾ ವಿಧದ ಸಂಕಷ್ಟವನ್ನು ಉಂಟುಮಾಡುತ್ತದೆ. ಹಾಗೇ  ಹಾಕಿದವನ ಮೇಲೆ ಸಿಡಿದು ಅವನನ್ನು ತೊಂದರೆಗೆ ಒಳಪಡಿಸುತ್ತದೆ. ಈ ರೀತಿ ಯಾವುದೇ ಕರ್ಮವೂ ಆಗಿರಲಿ ಅದರಿಂದ ತನಗೆ, ಕುಟುಂಬಕ್ಕೆ,  ಸಮಾಜಕ್ಕೆ,  ರಾಜ್ಯಕ್ಕೆ, ವಿಶ್ವಕ್ಕೆ ಯಾವುದೇ ತೊಂದರೆಯಾಗದಿರಲಿ ಮತ್ತು ಸಮಾಜಕ್ಕೆ ತೊಂದರೆ ಉಂಟು ಮಾಡುವ ಮತ್ತು ನಂಬಿಕೆಗೆ ವಿರುದ್ಧವಾಗಿ ನಡೆಯುವ  ವ್ಯಕ್ತಿ ಸಮಾಜಕ್ಕೆ ಕಂಟಕನಾಗಿರುವುದರಿಂದ ಅವನನ್ನೂ ನಿಗ್ರಹಿಸುವುದು ಕ್ಷತ್ರಿಯನಾದ ನಿನ್ನ ಕರ್ತವ್ಯ ಎಂಬುದನ್ನು ಮೂಲವಾಗಿ ಇಟ್ಟುಕೊಂಡು ಸಮಾಜಕ್ಕೆ ಒಂದು ಸಂದೇಶವನ್ನು ಕೊಟ್ಟಿರುವುದೇ ವಿನಹಃ  ಯಾರದೇ ಮನೆ ಹಾಳು ಮಾಡುವ ಮತ್ತು ಯಾರನ್ನೂ ನೋಯಿಸುವ ಯಾವ ವಿಚಾರವೂ ಅದರಲ್ಲಿ ಅಡಗಿಲ್ಲ. 

ತಿಳಿದರವರು ಮಾತನಾಡುವುದೇ ಇಲ್ಲ. ನನಗೆಲ್ಲವೂ ತಿಳಿದಿದೆ ಎಂದು ಹೇಳುವವರಿಗೆ ಅರ್ಥ ಮಾಡಿಸುವುದು ಸಾಧ್ಯವಿಲ್ಲ. ಅವನು ಅಹಂಕಾರಿ. ನನ್ನಗಿನ್ನೂ ಏನು ತಿಳಿದಿಲ್ಲ. ತಿಳಿಯಬೇಕಾದ್ದು ಇನ್ನಷ್ಟೂ ಇದೆ  ಎಂದುಕೊಳ್ಳುವವನೇ ಶ್ರೇಷ್ಟ. 

ಶನಿವಾರ, ಫೆಬ್ರವರಿ 14, 2015

ಮತಾಂತರದ ಗೀಳು......  ಮತ್ತು  ಗೋಳು........

ಕೆಲವರು ಮತಾಂತರ ಮಾಡಿ ನಮ್ಮ ಧರ್ಮವನ್ನು ಬೆಳೆಸಬೇಕು ಎಂದು, ಆ ಮೂಲಕ ತಾನು ದೇವರ ಕೆಲಸ ಮಾಡುತ್ತಿದ್ದೇನೆ ತನ್ನ ಧರ್ಮವನ್ನು ಉದ್ದಾರ ಮಾಡಡುತ್ತಿದ್ದೇನೆ ಎಂದು ತಿಳಿದು ಮತಾಂತರ ನಡೆಯುವುತ್ತದೆ.  ನಮ್ಮ ದೇಶದಲ್ಲಿ ಸುಮಾರು ೨೦೦೦ ವರ್ಷಗಳಿಂದಲೂ ಈ ಕೆಲಸವು ನಿರಂತರವಾಗಿ ನಡೆಯುತ್ತಲೇ ಬಂದಿದೆ. ಕೆಲವರಿಗೆ ಮತಾಂತರ ಮಾಡುವುದು ಒಂದು ಗೀಳು. ಕೆಲವವರಿಗೆ ಮತಾಂತರ ವಾಗುವುದು ಒಂದು ಗೋಳು. ಇದರಿಂದ ಯಾರೂ ಯಾವ ಸಾಧನೆಯನ್ನೂ  ಮಾಡಿದಂತಾಗುವುದಿಲ್ಲ.  

ಮತ ಎಂಬುದು ಧರ್ಮವಲ್ಲ. ಮತ ಬೇರೆ ಧರ್ಮ ಬೇರೆ  ಧರ್ಮದಲ್ಲಿ ಹಲವು ಮತಗಳು ಇರುತ್ತವೆ.  ಕೆಲವರು ನಾವು ಹಿಂದಗಳಲ್ಲ ನಮ್ಮದು ಧರ್ಮವೇ ಬೇರೆ.. ಎಂದು ವಾದ ಮಾಡುತ್ತಾರೆ.  ಆದರೆ ಧರ್ಮವು ಮನುಷ್ಯನ ಉಗಮದೊಂದಿಗೆ ಆತ್ಮದಲ್ಲಿ ಹುಟ್ಟಿಕೊಂಡದ್ದು.  ಧರ್ಮದಲ್ಲಿ - ಧರ್ಮ ಮತ್ತು ಅಧರ್ಮ ಎಂದು ಇದೆ. ಆದರೆ ಮತದಲ್ಲಿ ಮತ ಮತ್ತು ಅಮತ ಎಂದು ಇಲ್ಲ.  ಮತಗಳಲ್ಲಿ ಶ್ರೇಷ್ಠ ಎಂದೂ ಇಲ್ಲ.  ಹಾಗೇನಾದರೂ ಹೇಳುವುದಾದರೆ ಅವರಿಗೆ ಧರ್ಮ ಮತ್ತು ಮತದ ಬಗ್ಗೆ ತಿಳುವಳಿಕೆ ಇಲ್ಲವೆಂದೇ ಅರ್ಥ. ಮತದ ಆಚರಣೆ ಅವನ ಆತ್ಮಸಾಕ್ಷಿಗೆ ಅನುಗುಣವಾಗಿ  ಅವನು ಆಚರಿಸುವ ರೀತಿ ನೀತಿ ಅವನಿಗೆ ಸೇರಿದ್ದು.  ಹಾಗಾಗಿ ನೀನು ಈ ಮತವನ್ನು ಆಚರಿಸು ಎಂದು ಹೇಳುವುದು ಅಂದರೆ ಮತ ಪ್ರಚಾರ ಮಾಡುವುದೇ, ಇರಲಿ ಮತಾಂತರ ಮಾಡುವುದೇ ಇರಲಿ  ಅದು ಧರ್ಮ ವಿರೋಧಿ. ಇನ್ನು ಧರ್ಮ ಮತ್ತು ಮತ ಆಚರಣೆಯೂ ಕೇವಲ ಆತ್ಮಸಂಸ್ಕಾರಕ್ಕೇ ಹೊರತು ಅದು ಬದುಕಿನಲ್ಲಿ ಆಸ್ತಿ ಅಂತಸ್ತುಗಳಿಗೂ ಯಾವುದೇ ಸಂಬಂಧವಿಲ್ಲವೇ ಇಲ್ಲ.  ಒಂದು ವೇಳೆ ಹಾಗೇನಾದರೂ ಮತಾಂತರ ಮಾಡುವಾಗ ಹೇಳಿದ್ದರೆ ಅದು ಆ ಮತದಲ್ಲಿರುವ ನ್ಯೂನತೆಯೇ ಹೊರತು ಅರ್ಹತೆಯಾಗುವುದಿಲ್ಲ. 

ಧರ್ಮ ಎಂದರೆ ಸಂಕ್ಷಿಪ್ತವಾಗಿ ಹೇಳುವುದಾದರೆ ಸೂಕ್ಷ್ಮಜೀವಿಯಾದ ಆತ್ಮ ಮನುಷ್ಯನನ್ನು ಎಚ್ಚರಿಸುವ ಒಂದು ತಾತ್ವಿಕ ವಿದಾನ ಅಥವಾ  ಶಕ್ತಿ.  ಮನುಷ್ಯನಲ್ಲಿ ಸ್ಥೂಲರೂಪ ಮತ್ತು ಸೂಕ್ಷ್ಮರೂಪ ಎಂಬುದು ಇದೆ. ನಾವು ಸತ್ತಾಗ ಸೂಕ್ಷ್ಮರೂಪ ನಮ್ಮನ್ನು ಬಿಟ್ಟು ಹೋಗಿರುತ್ತದೆ.  ಆಗ ನಾವು ಹೆಣವಾಗಿ ನಮ್ಮನ್ನು ಮಣ್ಣಿಗೋ ಬೆಂಕಿಗೋ ಒಪ್ಪಿಸುತ್ತಾರೆ. ಆತ್ಮ ನಮ್ಮ ಶರೀರದಲ್ಲಿದ್ದಷ್ಟು ದಿನವೂ ನಮ್ಮ ಶರೀರದಲ್ಲಿ ವಾಸನಾ ಪ್ರಭಾವದಿಂದಾಗಿ ಆಸೆ, ಬಯಕೆಗಳು ಉಂಟಾಗುತ್ತಿತು ಈ ಬೇಕು ಬೇಡಗಳು ಉಂಟಾಗುವುದು  ಮನಸ್ಸಿನಲ್ಲಿ,  ಮನಸ್ಸು ಎಂಬುದು ಶರೀರದಲ್ಲಿ ಇರುವ ಒಟ್ಟು ಜೀವಕೋಶ ಗಳಲ್ಲಿರುವ ಅಣುಗಳು ಹೊರಡಿಸುವ ತರಂಗಳ ಒಟ್ಟು ಮೊತ್ತ. ಹಾಗಾಗಿ ಪ್ರತಿಯೊಬ್ಬನಲ್ಲೂ ಅವನವನ ಮನಸ್ಸಿಗೆ ಅನುಗುಣವಾಗಿ ಕಾಮ ಕ್ರೋಧಗಳು ಲೋಭ ಮೋಹ ಮದ ಮತ್ಸರಗಳು ಬೇರೆ ಬೇರೆ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ ಶರೀರ ಯಾವಾಗಲೂ ಮನಸ್ಸಿನ ಅಡಿಯಾಳಾಗಿ ಬೇಕು ಬೇಡಗಳ ವಿವೇಚನೆ ಇಲ್ಲದೆ ಕಾರ್ಯ ನಿರತವಾಗಿ ಧರ್ಮ ಅಧರ್ಮಗಳ ವಿವೇಚನೆ ಇಲ್ಲದೆ ಕ್ರಿಯಾಶೀಲವಾಗುವ ಸಂದರ್ಭದಲ್ಲಿ ಅವನ್ನು ನಿಯಂತ್ರಿಸುವ ಬುದ್ಧಿ ಧರ್ಮ -  ಅಧರ್ಮದ ವಿವೇಚನೆಗೆ ತೊಡಗಿ ಶರೀರಕ್ಕೆ ನಿಯಂತ್ರಣ ವನ್ನು ತರುತ್ತದೆ ಅದುವೇ ನಿಜವಾದ ಅರ್ಥದಲ್ಲಿ ಧರ್ಮ.  ಈ ಧರ್ಮ ಎಂಬ ತತ್ವವು ವಿಶ್ವದ ಪ್ರತಿಯೊಂದು ಅಣುಗಳಲ್ಲಿಯೂ ಇರುವುದರಿಂದ ನಾವು ದೇವರನ್ನು ಅಣು ರೇಣು ತೃಣ ಕಾಷ್ಟಗಳಲ್ಲಿಯೂ ಇರುತ್ತಾನೆ ಎಂದು ಹೇಳುತ್ತೇವೆ. ...... ಇದು ಧರ್ಮದ ಅಸ್ತಿತ್ವದ ಒಂದು ಸ್ವರೂಪವಷ್ಟೇ ಇದನ್ನು ಇನ್ನೂ ಮೂಲದಲ್ಲೂ ಕಾಣವುದು ಸಾಧ್ಯ. ಹೀಗೆ ಧರ್ಮದ ಮೂಲ ಅದರ ಉಗಮವನ್ನು ಹುಡುಕುತ್ತಾ ಹೋಗಲೂ ಬಹುದು..... ಅದಕ್ಕೆ ಆತ್ಮಜ್ಞಾನ ಇರಲೇ ಬೇಕು.....

ಈರೀತಿಯಿಂದಾಗಿ ಧರ್ಮ ಮತ್ತು ಮತಗಳನ್ನು ಸರಿಯಾಗಿ ಅರಿಯದೆ, ತಮ್ಮ ತಮ್ಮ ಅರಾಧ್ಯ ಮೂರ್ತಿ ಮತ ಸ್ಥಾಪಕರನ್ನೂ ಅರಿಯದೇ ಈಗಿನವರು ಹುಟ್ಟಿಸುವ ದಾಂದಲೇಯೇ ಮತಾಂತರ.  ಅರ್ಥ ಇಲ್ಲದ ಬದುಕು....  ಅರ್ಥ ಇಲ್ಲದ ಕಾನೂನು...  ಅರ್ಥ ಇಲ್ಲದೆ ಆಚರಣೆ.....ಕಲಿಕಾಲದ ಮಹಿಮೆ ಎಂದೇ ಹೇಳಬೇಕಲ್ಲದೆ ಬೇರೆ ಏನನ್ನೂ ಹೇಳಲು ಸಾಧ್ಯವಿಲ್ಲ. ಹಾಗಿದ್ದೂ ಹೇಳುವುದು ನಮ್ಮ ಧರ್ಮವೇ ಶ್ರೇಷ್ಟ? ಮಾಡುವುದು ಮಾತ್ರ ಅನಾಚಾರ....  "ಯಾವಾಗ ಮನುಷ್ಯ ಅಂತರಂಗವನ್ನು ಅರಿಯುವುದಿಲ್ಲವೋ ಅಲ್ಲಿಯವರೆಗೆ ಅಧರ್ಮವು ನಡೆಯುತ್ತಲೇ ಇರುತ್ತದೆ"  ಹಾಗಾಗಿ ತಿಳಿದವರು ಮಾತನಾಡುವುದೇ ಇಲ್ಲ.  ತಿಳಿಯದವರು ಬೊಬ್ಬೆ ಹೊಡೆಯುವುದು ಜೋರಾಗಿ ಕೇಳುತ್ತಿರುತ್ತದೆ


ಗುರುವಾರ, ಫೆಬ್ರವರಿ 12, 2015

ಭಾರತದಲ್ಲಿ  ಧಾರ್ಮಿಕ ಸಹಿಷ್ಣುತೆ........

ಭಾರತದಲ್ಲಿ  ಧಾರ್ಮಿಕ ಸಹಿಷ್ಣುತೆ ವಿಚಾರದಲ್ಲಿ ಅಮೇರಿಕಾ ಅಧ್ಯಕ್ಷರಾದ ಬರಾಕೋ ಓಬಾಮ ಅವರು  ನುಡಿದಿರುವ ಮಾತುಗಳು  ''ಭಾರತದಲ್ಲಿ ನಡೆಯುತ್ತಿರುವ ಧಾರ್ಮಿಕ ಅಸಹಿಷ್ಣುತೆ ಕೃತ್ಯಗಳನ್ನು ನೋಡಿದ್ದಿದ್ದರೆ ರಾಷ್ಟ್ರಪಿತ  ಮಹಾತ್ಮಾ ಗಾಂಧಿ ಅವರು  ಆಘಾತ ಗೊಳ್ಳುತ್ತಿದ್ದರು'' ಬೇರೆ ಬೇರೆ ಮನೋಭಾವದವರು ಅವರಿಗೆ  ಬೇಕಾದಂತೆ ಅರ್ಥೈಸಿ ಹೇಳಿಕೆ ನೀಡಿರುವುದು ಒಂದು ರಾಜಕೀಯ ಬಣ್ಣ ಪಡೆದ ವಿಚಾರ.  ಆದರೆ ಬರಾಕೋ ಓಬಾಮ ಯಾವ ಅರ್ಥದಲ್ಲಿ ಹೇಳಿದರು ಎಂಬುದನ್ನು ಊಹಿಸಿವುದಕ್ಕಿಂತಲೂ ನಮ್ಮಲ್ಲಿರುವ ಸತ್ಯವನ್ನು ಅವರಿಗೆ ಮನಗಾಣಿಸುವುದ ಮುಖ್ಯ.  ಗಾಂಧೀಜಿಯವರು  ಧಾರ್ಮಿಕ ವಿಚಾರವನ್ನು ಯಾವತ್ತೂ ಹೆಚ್ಚಾಗಿ ಪ್ರಸ್ತಾಪಿಸಲೇ ಇಲ್ಲ. ಅವರು ವಿಚಾರದಲ್ಲಿ ನಿನ್ನ ಒಂದು ಕೆನ್ನೆಗೆ ಹೊಡೆದರು ಎಂದಾದರೆ ಇನ್ನೊಂದು ಕೆನ್ನೆಯನ್ನು ಕೊಡು ಎಂಬುದು.  ಅಂದರೆ ಅವರು ನೋವನ್ನು ಅನುಭವಿಸಿದರೂ ಚಿಂತಿಲ್ಲ ಸತ್ಯಕ್ಕೆ ಹೋರಾಡು ಎಂಬ ನೀತಿ ನಮಗೆ ಉಡುಗೊರೆಯಾಗಿ ಕೊಟ್ಟರು. ಹಾಗಾಗಿಯೇ ಭಾರತ ವಿಭಜನೆಯ ಸಂದರ್ಭದಲ್ಲಿ ಕಠಿಣ ನಿಲುವನ್ನು ತಾಳಲಾರದೆ  ಸಮಸ್ಯೆಗೆ ಕಾರಣವಾಗಿ ಹೋಯಿತು.

ಅದೇನೇ ಇರಲಿ. ಭಾರತದಲ್ಲಿ ಧಾರ್ಮಿಕ ಸಹಿಷ್ಣತೆ ಇಲ್ಲ ಎಂದು ಹೇಳಿದವರಾರು?  ಭಾರತದಲ್ಲಿ ಹಾಗೂ ಭಾರತೀಯರಲ್ಲಿ ಇರುವಷ್ಟು ಧಾರ್ಮಿಕ ಸಹಿಷ್ಣುತೆ ಬೇರೆ ಯಾವ ದೇಶದಲ್ಲೂ ಯಾವ ಧಾರ್ಮಿಕ ನೀತಿಯಲ್ಲೂ  ಕಾಣುವುದಿಲ್ಲ.  ನಮ್ಮ ಸಂಸ್ಕೃತಿಯಲ್ಲಿ ತಿಳಿದೋ ತಿಳಿಯದೆಯೋ ವಿದ್ಯಾವಂತನೋ ಅವಿದ್ಯಾವಂತನೋ ಪ್ರತಿಯೊಬ್ಬನಲ್ಲಿಯೂ ಅಂತರಂಗದಲ್ಲಿ ಮನುಷ್ಯತ್ವವಿದೆ.  ಹಾಗೆಂದು  ಕ್ರೌರ್ಯವಿಲ್ಲವೆಂದಲ್ಲ. ಅದಕ್ಕಿಂತಲೂ ಮೀರಿ ನಾವು ಶರೀರದಿಂದ ಮನುಷ್ಯ ಅನಿಸುದಕ್ಕಿಂತಲೂ ಆತ್ಮದಿಂದ ಮನುಷ್ಯ ಅನಿಸಿಕೊಳ್ಳುತ್ತೇವೆ. ಹಾಗಿ ನಮಗೆ ಭಾವನಾತ್ಮ ಸಂಬಂದ ಕುಟುಂಬದಲ್ಲಿ ಸಮಾಜದಲ್ಲಿ ಪರಿಸರದಲ್ಲಿ  ನಂಬುಗೆಯಲ್ಲಿ ದೇಶದಲ್ಲಿ ವಿಶ್ವದಲ್ಲಿ ಬೆಳೆಸಿಕೊಂಡಿರುತ್ತೇವೆ.  ಇಲ್ಲಿನ  ಒಂದು ಕುಗ್ರಾಮದ ಒಂದು  ಅಜ್ಜಿ ತನಗೆ ಬೇಕಾದ ನೀರನ್ನು ಬಹಳ ಕಷ್ಟದಿಂದ ದೂರದಿಂದ ಹೊತ್ತು ಬರುತ್ತಿದ್ದರೂ ದಾರಿಹೋಕನೊಬ್ಬ ಬಾಯಾರಿದ್ದಾನೆಂದರೆ ಆ ನೀರನ್ನೇ ಕೊಟ್ಟು ಸಂತೋಷ ಪಡುವಷ್ಟು ಧಾರ್ಮಿಕ  ಸಹಿಷ್ಣುತೆ ನಮ್ಮಲ್ಲಿ ಇದೆ.  ನಮ್ಮ ಪುರಾಣಗಳಲ್ಲಿ ಹೇಳುವುದೇ ''ಸರ್ವಜನ ಸುಖಿನೋ ಭವಂತು'' ಎಂದು.

ನಮ್ಮಲ್ಲಿ ಧಾರ್ಮಿಕ ಸಹಿಷ್ಣುತೆ ಇಲ್ಲ ಎಂದು ನಿಮಗೆ ಅನಿಸಿದರೆ. ಅಥವಾ ನಮ್ಮಲ್ಲಿ ಮತೀಯ ಗಲಭೆಗಳು ನಡೆದಿರುವುದು  ಧಾರ್ಮಿಕ ಅಸಹಿಷ್ಣುತೆ ಎಂದು ನಿಮಗೆ ಅನಿಸಿದರೆ ಅದಕ್ಕೆ ನಮ್ಮ ಸನಾತನ ಧರ್ಮ ಹೊಣೆಯಲ್ಲ. ನಮ್ಮಲ್ಲಿ ಎಷ್ಟೋ ಹಳ್ಳಿ ಗಳಲ್ಲಿ ವಿವಿಧ ಜನಾಂಗದ ಜನ ಒಂದಾಗಿ ಆತ್ಮೀಯವಾಗಿ ಬದುಕುತ್ತಿದ್ದಾರೆ. ಅವರಲ್ಲಿ ಯಾವ ಭೇದಭಾವವೇ ಇಲ್ಲ. ನಮ್ಮ ಮನೆಯ ಹತ್ತಿರವೂ ಹಲವಾರು ಮುಸಲ್ಮಾನ ಮನೆಗಳು ಇವೆ ನಾನು ಕಂಡ ಹಾಗೆ ಸುಮಾರು ೬೦ ವರ್ಷಗಳಿಂದಲೂ ನಾವು ಅನ್ಯೋನ್ಯವಾಗಿದ್ದೇವೆ.

ನಮ್ಮಲ್ಲಿನ ರಾಜಕೀಯ ಆಟದಲ್ಲಿ ಧಾರ್ಮಿಕವೂ ಒಂದು ಕಾಯಿ. ಹಾಗಾಗಿ ಇಷ್ಟೆಲ್ಲ ರಾಮಾಯಣವಾಗುತ್ತಿದೆ.  ರಾಜಕೀಯ ಎಂದರೆ ಏನು ಅರಸನಾದವ ಯಾವತ್ತು ಸೋಲು ಬಯಸುವುದಿಲ್ಲ. ಹಾಗೆ ರಾಜಕೀಯದಲ್ಲಿ ಸೋಲು ಬಯಸುವುದಿಲ್ಲ.  ಹಾಗಾಗಿ ತಾನು ಜನನಾಯಕ ಎಂದು ಗುರುತಿಸಿಕೊಳ್ಳ ಬೇಕಾದರೆ ಏನೆಲ್ಲ ಕಸರತ್ತು ಮಾಡಬೇಕೋ ಅದರಲ್ಲಿ ಧರ್ಮವೂ ಒಂದು.

ಈ ವಿದ್ಯೆಯನ್ನು ನಮಗೆ ಕಲಿಸಿದವರು ನಮ್ಮನ್ನು ೨೦೦ ವರ್ಷ ಆಳಿದ  ಬ್ರಿಟಿಷರು.  ಅವರೂ ಒಮ್ಮಲೇ ಏನು ಆಧಿಕಾರಕ್ಕೆ ಬರಲಿಲ್ಲಿ. ವ್ಯಪಾರಕ್ಕೆ ಅಂತ ಬಂದರು. ಬಂದವರೇ ಇಲ್ಲಿನ ರಾಜರು ಪಾಳೆಗಾರರ ಮುಂದೆ ಕೈಕಟ್ಟಿಕೊಂಡು ನಿಂತು ತಮ್ಮ ವ್ಯಪಾರವನ್ನು ಹೇಗೆ ಮುಂದುವರಿಸುವುದು ಎಂದು ಮಗ್ನರಾದಾಗ ಅವರಿಗೆ ತಿಳಿಯಿತು  ಭಾರತೀಯರು ಇತರನ್ನು ಬೇಗ ನಂಬುತ್ತಾರೆ, ಒಂದು ಬಾರಿ ನಂಬಿದರೆ ಅಮೇಲೆ ತಮ್ಮನೇ ಅಂತ ಸೇರಿಸಿಕೊಳ್ಳುತ್ತಾರೆ ಅಂತ.  ಹಾಗಾಗಿ ಇಲ್ಲಿನ ದೊರೆಗಳಿಗೆ ಆತ್ಮೀಯವಾಗಿ ಬೆಳೆದರು. ಇದು ಒಂದು ರೀತಿಯಲ್ಲಿ ಧಾರ್ಮಿಕ ಸಹಿಷ್ಣುತೆಯೇ.  ಕ್ರಮೇಣ ನಂಬಿಕೆಯ ಆಧಾರದ ಮೇಲೆ ಅವರಿಗೆ ಪದವಿ ಅಧಿಕಾರ ಎಲ್ಲವೂ ಸಿಗುವಾಗ ಎಲ್ಲವನ್ನೂ ತಮ್ಮದಾಗಿಸುವುದು ಹೇಗೆ ಅದೂ ಕಾನೂನು ಬದ್ದ ಎಂಬ ಚಿಂತನೆಗಳಿಂದ  ನಮ್ಮ ದೇಶದ ದೊರೆಗಳನ್ನು ಬುಟ್ಟಿಯಲ್ಲಿ  ಹಾಕಿಕೊಂಡೋ  ಮಾತುಗಳಿಗೆ ಕಟಿ ಬದ್ದರಾಗಿಯೋ ಅಧಿಕಾರವನ್ನೂ ಪಡೆದುಕೊಂಡರು. ದೊರಗಳು ಧರ್ಮ ಸಂಕಟಕ್ಕೆ ಕಟ್ಟು ಬಿದ್ದು  ಬೇಸರ ಹೊಂದಿದ್ದರೂ ಅಧಿಕಾರ ಕಳೆದುಕೊಂಡರು.  ಬ್ರಿಷರಿಗೆ ಆಧಿಕಾರ ಸಿಕ್ಕಿದ ಮೇಲೆ ಅವರು ಅದನ್ನು ವಿಸ್ತರಿಸಿ ಇಡಿ ಭಾರತದಲ್ಲಿ ವ್ಯಾಪಸಿಕೊಂಡರು.  ಹಾಗೆ ಅವರು ಅಧಿಕಾರ ಹಿಡಿದ ಮೇಲೆ ಅವರಿಗೆ ಪೂಜೆ ಪುನಸ್ಕಾರ ಗಳಿಗೆ ಚರ್ಚುಗಳ ಸ್ಥಾಪನೆಯೂ ಆಯಿತು. ಅದರೊಂದಿಗೆ ಅವರ ಧಾರ್ಮಿಕ ಗುರುಗಳು ಬಂದರು.  ಇವರು ಚರ್ಚಿಗೆ ಹೋಗುವಾಗ ತನ್ನ ನೆರೆಕರೆಯವರನ್ನೂ ಕರೆದುಕೊಂಡು ಹೋದರು ( ಇದೂ ಭಾರತೀಯರಲ್ಲಿ ಇರುವ ಧಾರ್ಮಿಕ ಸಹಿಷ್ಟುತೆಯೇ) ಇಲ್ಲದಿದ್ದರೆ ಇದು ನಮ್ಮ ಧರ್ಮ ಅಲ್ಲ ನಾವೇಕೆ ಹೋಗಬೇಕು ಎಂದು ವಿರೋಧಿಸುತ್ತಿದ್ದರಲ್ಲವೇ?  ಹೀಗೆ ಹೋದವರು ನಿಧಾನವಾಗಿ ಅವರೊಂದಿಗೆ ಗುರುತಿಸಿಕೊಂಡು  ಅವರ ಮತವನ್ನೇ ಅವಲಂಬಿಸಿದರು.  ನಮ್ಮಲ್ಲಿ ಒಬ್ಬ ಮತಾಂತರ ಹೊಂದಿದರೆ ಮನೆಯಲ್ಲಿ ಹಿರಿಯರು ಬುದ್ಧಿ ಹೇಳುತ್ತಾರೆ, ಗಲಾಟೆ ಮಾಡುತ್ತಾರೆ, ಕೊನೆಗೆ ಹೇಳಿಯೂ ಕೇಳದಿದ್ದರೆ "ಹೇಳಿದ ಮಾತು ಕೇಳುವುದಿಲ್ಲ ಅವನ ಕರ್ಮ ಅವನು ಅನುಭವಿಸುತ್ತಾನೆ" ಎಂದು ಹೇಳಿಕೊಂಡು ಕೂತರೇ ವಿನಃ  ಇವನ ದಾರಿ ತಪ್ಪಿಸಿದವರ ವಿರುದ್ಧ ಹಿಡಿಶಾಪ ಹಾಕಿದರೇ ವಿನಃ ಪ್ರತಿಭಟಿಸಲಿಲ್ಲ. ಇದಕ್ಕಿಂತ ದೊಡ್ಡ ಧಾರ್ಮಿಕ ಸಹಿಷ್ಣತೆ ಬೇರೆ  ಬೇಕಾ? ಹೀಗೆ ಭಾರತದಲ್ಲಿ  ಕ್ರಿಶ್ಚಿಯನ್ ಸಂಖ್ಯೆ  ಬೆಳೆಯಿತು. ಇಲ್ಲಿರುವ ಕ್ರಿಶ್ಚಿಯನರೆಲ್ಲ  ಹಿಂದುಗಳೇ ಆದರೆ ಕ್ರಿಶ್ಚಿಯನ್ ಮತಾವಲಂಬಿಗಳು.  ಅವರು ದೇವರನ್ನು ಕಾಣುವ ರೀತಿ ಕ್ರಿಶ್ಚಿಯನ್ ಧರ್ಮದ ಮೂಲಕ ಅಷ್ಟೇ . ಈ ತತ್ವಕ್ಕಿಂತ ಬೇರೆ ಆದರ್ಶ ಬೇರೆ ಯಾವ ಧರ್ಮದಲ್ಲಿ ಇದೆ ಹೇಳಿ.

ಇನ್ನು ನಮ್ಮಲ್ಲಿ ಮುಸ್ಲಿಂರೂ ಇದ್ದಾರೆ. ಅದೂ  ಭಾರತದ ಮೂಲ ಧರ್ಮ ಅಲ್ಲ.  ಅವರೂ ಇಲ್ಲಿಗೆ ಬಂದವರು . ಬಹುಶಃ ಘಜನಿ ಮಹಮ್ಮದನೊಂದಿಗೆ ಬಂದ ಧರ್ಮ.  ಅವನೂ ಬ್ರಿಟಿಷರ ಹಾಗೆ ಮತ ಧರ್ಮ ಪ್ರಚಾರಕ್ಕೆ ಬಂದವರಲ್ಲ. ಅವನು ಅರಸ. ಅವನ ನೀತಿ ಸಾಮ್ರಾಜ್ಯ ವಿಸ್ತರಣೆ. ಅದು ಅವನ ಧರ್ಮ. ಆದುದರಿಂದ ನಮ್ಮ ಮೇಲೆ ಆಕ್ರಮಣ ಮಾಡಿದ ನಾವು ಸೋತೆವು ಅಥವಾ ನಮ್ಮನ್ನು ಸೋಲಿಸಿದ ಆಧಿಕಾರಕ್ಕೆ ಬಂದ. ಬಂದಮೇಲೆ ಅವನ ಆಧಿಕಾರ ಇರುವಾಗ ಅವನ ಧರ್ಮವೂ ಬರಬೇಕಲ್ಲ. ಹಾಗೆ ಅದೂ ಬಂತು.ಅವರ ಧರ್ಮ ಪ್ರಚಾರಕರೂ ಬಂದರು.  ಬಂದ ಮೇಲೆ ಅವರಿಗೆ ನಮಾಜು ಮಾಡಲು ಮಸೀದಿ ಬೇಕಾಯಿತು ಅದನ್ನೂ ಕಟ್ಟಿಕೊಂಡ. ಅದನ್ನು ಕಟ್ಟಿಕೊಳ್ಳ ಬೇಡ ಎಂದು ನಾವು ಕೇಳಿದರೆ ಅವನ ಆಚಾರಕ್ಕೆ ಅಡ್ಡಿ ಮಾಡಿದ ಪಾಪ ನಮಗೆ ಸುತ್ತಿಕೊಳ್ಳುತ್ತದೆ ಎಂಬ ನಮಗೆ (ನಮಗೆ ಫಾಪ ಬೀತಿ ಸ್ವಲ್ಪ ಜಾಸ್ತಿ) ಅವರಿಗೆ  ಅದೆಲ್ಲ ಇಲ್ಲ.  ಹಾಗಾಗಿ ನಮ್ಮ ಹೆಣ್ಣು ಮಕ್ಕಳನ್ನು ಎಳೆದುಕೊಂಡು ಅನುಭವಿಸಿದರು. ಅವರಿಗೆ ಸಂತಾನಗಳಾಯಿತು.  ನಮಗೆ ಪಾಪ ಭೀತಿ. ಅವನ ಬಲತ್ಕಾರಕ್ಕೆ ಒಳಗಾದ ಹೆಣ್ಣು ಮಗಳು ನಮಗೆ ಜಾತಿ ಕೆಟ್ಟವಳು ಆದಳು.  ಅವಳನ್ನು ನಮ್ಮೊಂದಿಗೆ  ಸೇರಿಸಕೊಂಡರೆ ಎಲ್ಲಿ ನಮ್ಮ ಬಂದುಬಳಗ ಎಲ್ಲಾ ನಮ್ಮನ್ನು ದೂರ ಮಾಡುತ್ತರೋ ತು... ಛಿ... ಎಂದು  ಉಗಿಯುತ್ತಾರೋ ಎಂಬ ಭಯ.  ಹೀಗೆ ಆಗಿ  ನಮ್ಮಲ್ಲಿಗೆ ಬಂದ ಮುಸ್ಲಿಂ ಗಳು ಕೆಲವರಾದರೂ ಅವರ ಸಂತಾನವೂ ಬೆಳೆಯಿತು. ಅದೂ ಅಲ್ಲದೆ ಈಗಲೂ ಅವರಿಗೆ ಎಷ್ಷು ಬೇಕಾದರೂ ಮಕ್ಕಳು ಹುಟ್ಟಿಸುವ ಆಧಿಕಾರ ನಮ್ಮ ಸರಕಾರ ಕೊಟ್ಟಿದೆ. ಅದರೆ ನಮಗೆ ಎರಡೆ? ಇದೆಲ್ಲವೂ  ನಮ್ಮ ಧಾರ್ಮಿಕ ಸಹಿಷ್ಣತೆಯ ಪರವಾದ ವಿಚಾರವಲ್ಲವೆ.

ಆದರೆ ಮುಸ್ಲೀಂ ಅರಸರು ಬಂದು  ಅವರು ನಮ್ಮ ಹೆಣ್ಣುಗಳನ್ನು ಹೊಂದಿ ಅದರಿಂದ ಸಂತತಿ ಬೆಳೆಸಿದರೂ ನಾವು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಅವರು ನಮ್ಮ ಪೂಜಾಸ್ಥಳದ ಮೇಲೆ ದಾಳಿ ಮಾಡಿ ನಮ್ಮ ನಂಬುಗೆಗಳನ್ನು  ದ್ವಂಸ ಮಾಡಿದರಲ್ಲ ನೋಡಿ ಆವಾಗ ನಮಗೆ ಉರಿ ಹತ್ತಿಕೊಂಡದ್ದು.  ನಮ್ಮ ರಾಮಾಯಣ  ಮಹಾಭಾರತ ಕಾದಲ್ಲಿಯೂ ಇದೇ ನಡೆದದ್ದು. ಅದುದರಿಂದ ಕೆಲವು  ಅರಸರು ಅವರ ಮೇಲೆ ತಿರುಗಿ ಬಿದ್ದದ್ದನ್ನು ಒಪ್ಪಿಕೊಳ್ಳುತ್ತೇವೆ.  ಈಗಲೂ ಹಾಗೆ ಘಟನೆಗಳು ನಡೆಯತ್ತಲೇ ಇರುತ್ತದೆ.  ಅದು ರಾಜಕೀಯದ ಬಣ್ಣ ದಿಂದ ನಡೆಯ ಬಾರದು. ಮತ್ತು ರಾಜಕೀಯದವರು ಆ ವಿಷಯವನ್ನು ಮಾತನಾಡಲೇ ಬಾರದು. ಮಾತನಾಡಿದಗಲೇ ಅದೊಂದು ಭೂತವಾಗಿ ಕಾಡುವುದು.  ಅದು ಮನುಷ್ಯನ  ನಂಬುಗೆಯನ್ನು ಕಾಪಾಡುವ ಹೋರಾಟ.  ನಮ್ಮಲ್ಲಿ ಒಂದು ಕ್ರಮ ಇದೆ. ಬೇರೆಯವರ  ನಂಬುಗೆಗೆ ನಾವು ಅಡ್ಡಿ ಬರುವುದಿಲ್ಲ. ನಮ್ಮ ಹಾಗೆ ನೀವೂ ಮನುಷ್ಯರೂ ನೀವು ನಿಮ್ಮ ಇಚ್ಛೆಯಹಾಗೆ ಬದುಕಬಹುದು ನಮ್ಮಲ್ಲಿರುವ ಧಾರ್ಮಿಕ ಸಹಿಷ್ಣುತೆಯೇ ಹೌದಾಅಲ್ಲವಾ.... ನೀವೇ ಹೇಳಿ?

ಇನ್ನು ನಮ್ಮಲ್ಲಿ ಮತಾಂತರ ಎಂಬುದೇ ಇಲ್ಲ. ಈಗಿನವರು ಬೊಬ್ಬೆಹೊಡೆಯುತ್ತಾರೆ ಹೊಡೆಯಲಿ ಬಿಡಿ. ಅದು ಒಂದು ರಾಜಕೀಯ. ನಮ್ಮಲ್ಲಿ ಮತಾಂತರ ಎಂಬ ಶಬ್ದವನ್ನು ಬಿತ್ತಿದವರು ಕ್ರಿಶ್ಚಿಯನ್ ಮತ್ತು  ಮುಸ್ಲಿಂರು.  ಮತ - ಧರ್ಮ ಎಂದರೆ ನಮ್ಮ ಆತ್ಮ ಸಂಸ್ಕಾರಕ್ಕೇ ಬೇಕಾದ ಒಂದು ಆಚರಣೆ ಅಷ್ಟೇ. ಅದು ಯಾವ ರೀತಿ ಆದರೆ ಏನು? ಪುರಂದರದಾಸರು ಹೇಳಿದ್ದಾರೆ "ಮಾನವ ಜನ್ಮ ದೊಡ್ಡದು" ಎಂದು ಅಂದರೆ  ಅದನ್ನು ನಾನಾ ರೀತಿಯಲ್ಲಿ ಅರ್ಥ ಮಾಡಿಕೊಳ್ಳ ಬಹುದು. ಸುಖವನ್ನೇ ಗುರಿಯಾಗಿಟ್ಟವ ಮಾನವ ರಾಗಿ ಸುಖ ಪಡುವುದೇ ನಮ್ಮ ಗುರಿ ಎಂಭುದಕ್ಕೆ ಮಾವನ ಜನ್ಮ ದೊಡ್ಡದು ಎಂದು ಹೇಳಿಕೊಳ್ಳ ಬಹುದು. ಯುವಕ ಯುವತಿಯರು ಲೈಂಗಿಕ ಜೀವನದಲ್ಲಿ ಕಾಣವು ಸುಖವನ್ನೇ ಗುರುಸತಿಸಿಕೊಂಡು ಮಾನವ ಜನ್ಮವೇ ದೊಡ್ಡದು ಎಂದು ಹೇಳ ಬಹುದು.  ಆದರೆ ಅವರು ಹೇಳಿದ ಅರ್ಥ. ಮನುಷ್ಯನಿಗೆ ಜ್ಞಾನ ವಿದೆ. ಆದುದರಿಂದ ತನ್ನನ್ನು ತಾನು ಅರ್ಥಮಾಡಿಕೊಂಡು ನಾನು ಅಂದರೆ ಶರೀರವೇ ಅಥವಾ ಕಣ್ಣಿಗೆ ಕಾಣದ ಸೂಕ್ಷ್ಮ ಶರೀರ ವೆನಿಸುವ ಪ್ರಾಣವೇ ಎಂಬ ಸತ್ಯವನ್ನು ತಿಳಿದು  ಧರ್ಮ ಆಚರಣೆಯಿಂದ ಮೋಕ್ಷವನ್ನು ಹೊಂದುವುದು ಸಾಧ್ಯವೆಂಬ ಅರ್ಥದಲ್ಲಿ ಹೇಳಿದರು.

ಹಾಗಾಗಿ ಧರ್ಮ ಎಂದರೆ ಮೋಕ್ಷಕ್ಕೆ ಹೋಗುವ ಧಾರಿ. ಅದಕ್ಕೆ ಕ್ರಿಶ್ಚಿಯನ್ ಧರ್ಮ ಆದರೇನು ಮುಸ್ಲಿಂ ಧರ್ಮ ಆದರೇನು? ಹಿಂದೂ ಧರ್ಮ ಅದರೇನು? ಎಂಬುದೇ ಸತ್ಯ.ಹಾಗಾಗಿ ನಮಲ್ಲಿ ಆಚರಣೆಯನ್ನು ಅನುಸರಿಸಿ ಹೇಳುವುದಾದರೆ ಬೌದ್ಧ. ಜೈನ ಮೊದಲಾದ ಧರ್ಮಗಳು ಇಲ್ಲಿ ಹುಟ್ಟಿ ಬೆಳೆದಿವೆ ಅದರ ಅನುಯಾಯಿಗಳು ಇದ್ದಾರೆ ಇದು ಕ್ರಿಶ್ಚಿಯನ್ ಮುಸ್ಲಿಂ ಧರ್ಮ ಭಾರತಕ್ಕ ಬರುವುದಕ್ಕೂ ಮೊದಲು ನಡೆದದ್ದು.  ಈ ಸಂದರ್ಭದಲ್ಲಿ ಸಾವಿರಾರು ಜನ ಆ ದಾರಿಯನ್ನು ಹಿಡಿದಿದ್ದಾರೆ. ಆದರೆ ಅವರನ್ನು ನಾವು ಎಂದಿಗೂ ದೂರ ಮಾಡಲಿಲ್ಲ. ಮತಾಂತರ ಎಂದು ಅನಿಸಲೇ ಇಲ್ಲ.  ಯಾಕೆಂದರೆ ಅವನ ದಾರಿ ಅವನಿಗೆ. ಒಟ್ಟಿನಲ್ಲಿ ಅವನಿಗೆ ಅಲ್ಲಿ ಒಳ್ಳೆಯದಾಗುವುದಾದರೆ ಆಗಲಿ ಎಂಬ ನಂಬಿಕೆ ನಮ್ಮದು. ಹೀಗೆ  ನಮ್ಮ ದೇಶ ಹಾಗೂ ಜನರ ನರ ನಾಡಿಗಳಲ್ಲಿ ಧಾರ್ಮಿಕ ಸಹಿಷ್ಣತೆ ತುಂಬಿದೆ. ಅದುವೇ ನಮ್ಮ ಉಸಿರು. ಅದುವೇ ನಮ್ಮ ನಂಬಿಕೆ.

ಆದರೂ ನಮಲ್ಲಿ ಅಲ್ಲಲ್ಲಿ  ಧರ್ಮ ನಂಬಿಕೆ ವಿಚಾರದಲ್ಲಿ ನಿತ್ಯವೂ ದೊಂಬಿ ಎಬ್ಬಿಸುವವರು ಇದ್ದಾರೆ.  ಇಲ್ಲ ಎಂದು ನಾವು ಹೇಳುವುದಿಲ್ಲ.  ಪ್ರಪಂಚವೇ ಹಾಗೆ ಒಳ್ಳೆಯದು  ಕೆಟ್ಟದ್ದೂ ಎರಡೂ ಇರಲೇ ಬೇಕು. ಒಂದು ಇದ್ದು ಇನ್ನೊಂದು ಇರದಿದ್ದರೆ   ಒಳ್ಳೆಯದು ಕೆಟ್ಟದು ಎಂದು ಯಾವುದನ್ನೂ ಗುರುತಿಸಲು ಆಗುವುದಿಲ್ಲ.   ಭಾರತದಲ್ಲಿ ಧಾರ್ಮಿಕ ಸಹಿಷ್ಣತೆ ಇಲ್ಲ ಎನ್ನುವುದೇ ಶುದ್ಧ ಸುಳ್ಳು ಮತ್ತು ನಮ್ಮ ರಾಜಕಾರಣಿಗಳಂತೆ ನಿಮ್ಮದೂ ಒಂದು ರಾಜಕಾರಣದ ಹೇಳಿಕೆಯೇ?

ಜಾತಿ ಜನಗಣತಿಯಿಂದ  ಆಗುವ ಸಾಧನೆ ಏನು?

ಜಾತೀಯ ಜನಗಣತಿ ಎಂಬುದೇ ಜಾತ್ಯಾತೀತ ಎಂಬ ನಂಬುಗೆಯ ಮೇಲೆ ಸ್ಥಾಪಿತವಾದ ಪ್ರಜಾಪ್ರಭುತ್ವದ ಒಂದು ಅಣಕು.  ಜಾತಿ ಎಂಬುದೇ ಒಂದು ಬದುಕು.  ಈ ಬದುಕು ಪ್ರತಿಯೊಬ್ಬನಿಗೆ ಅವನದೇ  ಆದ ರೀತಿಯಲ್ಲಿ ಆಚರಿಸುವ ಹಕ್ಕು ಸ್ವಾತಂತ್ರ ಎಲ್ಲವೂ ಇದೆ.  ಜಾತ್ಯಾತೀತ  ಅರ್ಥ ಆಡಳಿತವು ಜಾತೀ ಆಧಾರವಾಗಲೀ ಅಥವಾ ನಮ್ಮ ದೇಶ ಈ ಜಾತೀ ಅಥವಾ ಧರ್ಮಕ್ಕೆ ಸಂಬಂಧಿಸಿದುದು ಎಂದು ಅರ್ಥೈಸುವಂತಿಲ್ಲ ಎಂಬುದೇ ಸತ್ಯ. ನಮ್ಮಲ್ಲಿ ಪ್ರತಿ ಜಾತಿ ಮತ ಪಂಥ ಆಚಾರ ವಿಚಾರಗಳಿಗೆ, ಅವನವನ ನಂಬಿಕೆಗಳಿಗೆ ಅವನವನು  ಬದ್ಧನಾಗ ಬದುಕಲು ಬಹುದು. ಹಾಗಾಗಿ ಅವನನ್ನು ಸರಕಾರ ಜಾತೀ ಆಧಾರವಾಗಿಯೇ ಗುರುತಿಸುವುದು ಸಂಪೂರ್ಣ ಸಂವಿಧಾನ ವಿರೋಧಿ ನೀತಿ. ಆದರೆ ಹಲವಾರು ಧುರೀಣರು ಜಾತೀ ಜನಗಣಿತಿಯನ್ನು ಬೆಂಬಲಿಸುತ್ತಾರೆ. ಯಾಕೆಂದರೆ ಆ ಮೂಲಕ ತಮ್ಮ ಜಾತಿಯ ಸ್ಥಿತಿಗತಿಯನ್ನು ತಿಳಿದು ಅವರನ್ನು  ಮೇಲಕ್ಕೆ ಎತ್ತುಲು ಯೋಜನೆಗಳನ್ನು ರೂಪಿಸುವುದು ಸಾಧ್ಯವೆಂದು ಅವರ ನಂಬಿಕೆ. ಆದರೆ ಒಬ್ಬನ ಸ್ಥಿತಿ ಗತಿ ಎನ್ನುವುದು ಅವನವನ ಶ್ರಮ ಹಾಗೂ ಅವನ ಬೌದ್ಧಿಕ ಮಟ್ಟದ್ದಾಗಿರುತ್ತದೆಯೇ ವಿನಹಃ ಅದು ಒದಗಿಸುವಂಥದಲ್ಲ.  ಆದುದರಿಂದ ವಿದ್ಯೆಯೇ ಮನುಷ್ಯನ ಅಭಿವೃದ್ಧಿಗೆ ಪ್ರೇರಣಾ ಶಕ್ತಿ.  ಸರಕಾರವೇ ಆಗಲಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ  ಜಾತಿಯನ್ನು ನಮೂದಿಸುವುದು ಮತ್ತು ಗುರುತಿಸುವುದು ಸರಿಯಾದ ವ್ಯವಸ್ಥೆ ಅಲ್ಲ. ನಮಗೆ ಬೇಕಾಗಿರುವುದು ಏಕ ರೂಪ ಕಾನೂನು.  ನ್ಯಾಯಾಲವು ಹೇಳಿದೆ  ಈಗ ಸರಕಾರಗಳು ನೀಡುವ  ಜಾತೀ ಸವಲತ್ತುಗಳು ಇನ್ನೆಷ್ಟು ದಿನ ಮುಂದುವರಿಸಬೇಕು ? ಎಂಬ ಅರ್ಥದಲ್ಲಿ ಹೇಳಿರುವುದ ಸತ್ಯವಾದರೂ.  ಜಾತೀ ಗಣತಿಯ ಮೂಲಕ ಸತ್ಯ ಹೊರಬರುವುದೆಂಬ ವಿಶ್ವಾಸವಿದೆಯೇ.   ಪ್ರತಿ ಜಾತಿಯಲ್ಲಿ ನೂರಾರು ಒಳ ಪಂಗಡಗಳಿವೆ. ಅವುಗಳು ಈಗಾಗಲೇ ತಮ್ಮ ಜಾತೀ ಜನರನ್ನು ಈ ರೀತಿಯಾಗಿಯೇ ನಮೂದಿಸಿ ಎಂದು  ಫರ್ಮಾನು ಹೊರಡಿಸುವುದು ನೋಡಿದರೆ. ಜಾತೀ ಜನಗಣತಿಯ ಮೂಲ ಉದ್ದೇಶವೇ ಮೂಲೆ ಸೇರುವುದರಲ್ಲಿ ಸಂಶಯವಿಲ್ಲ.

ಇನ್ನು ಆರ್ಥಿಕವಾಗಿ ಹಿಂದುಳಿದವರು ಎಂದು ಗುರುತಿಸುವುದಾದರೂ ಬಡವರು ಯಾರು ಶ್ರೀಮಂತರು ಯಾರು ಅದಕ್ಕೆ ಮಾನದಂಡ  ಯಾವುದು?  ಎಂದು ನಿರ್ದಿಷ್ಟವಾದ ವಿಚಾರ ಗಳಿಲ್ಲದೆ ಗೊಂದಲವಿದೆ.

ಸವಲತ್ತಿಗಾಗಿಯೇ ಜಾತಿ ಸೃಷ್ಟಿಯಾಗುವ ಅವಕಾಶವೂ ಇದೆ. ಲಾಭಕ್ಕಾಗಿ  ಜಾತಿ ಬದಲಾಯಿಸಿದವರೂ ಇದ್ದಾರೆ.  ತಾನು ಬಡವ ಎಂದು ಹೇಳಿಕೊಳ್ಳುವ  ವ್ಯಕ್ತಿ ತನ್ನ ಆದಾಯವನ್ನು ಗುರುತಿಸುವ ಅಥವಾ ಆದಾಯದ ನಿರ್ಧಾರ ಮಾಡುವ ಯಾವುದಾದರೂ ನಿರ್ಧಿಷ್ಠ ವಿಚಾರ ಇದೆಯೇ?  ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡುವವರೂ ಇಂದಿನ ದಿನಗಳಲ್ಲಿ ೪೦೦ - ೫೦೦ ಸಂಪಾದನೆ ಮಾಡುತ್ತಾರೆ?  ನೊಂದಾಯಿಸುವುದು ಕೂಲಿ ಎಂದು.  ಆದರೆ ಅವನು ಕೂಲಿ ಕೆಲಸ ಮಾಡುವುದಾದರೂ ಎರಡು - ಮೂರು ನಿವೇಶನಗಳನ್ನು ಹೊಂದಿ ಅವರಿಗೆ ಬಾಡಿಗೆ ಬರುವಂಥವರೂ ಇದ್ದಾರೆ. ಆದರೂ ಅವರು ಆರ್ಥಿಕ ಹಿಂದುಳಿದವರು, ಯಾಕೆಂದರೆ ಅವರು ಉದ್ಯೋಗ ಕೂಲಿ.  ಅದೇ ವಾಸಕ್ಕೆ ಒಂದು ಮನೆ ಹೊಂದಿ  ಅಲ್ಲಿ ವಾಸಿಸುವ  ಸಂಸಾರ  ಯಾವುದೋ  ಪ್ಯಾಕ್ಟರಿಯಲ್ಲಿ ಕೆಲಸ ಮಾಡಿ ಬರುವ ಸಂಬಳದಲ್ಲಿ ದುಬಾರಿ ಸಂಚಾರಿ ವ್ಯವಸ್ಥೆಯಲ್ಲಿ ಓಡಾಡಿ, ಮಕ್ಕಳ ವಿದ್ಯಾಭ್ಯಾಸ  ಮಾಡಿಸಿ ಕೊಂಡು ಹೊಟ್ಟೆ ಹೊರೆಯುವುದರೊಂದಿಗೆ ಕುಟುಂಬದಲ್ಲಿನ ಆಗು ಹೋಗುಗಳಿಗೆ ಸ್ಪಂದಿಸಿಕೊಂಡು,  ಕಾಯಿಲೆ ಕಸಾಲೆಗಳಿಗೆ ಖರ್ಚು ವೆಚ್ಚ ಮಾಡಿಕೊಂಡು ಬದುಕುವನು ಅನುಭವಿಸುವ ನರಕ ಯಾತನೆ ಯಾವುದೇ  ಗಣತಿಯಿಂದ ಗುರುತಿಸುವುದು ಸಾದ್ಯವೇ ? ಯಾಕೆಂದರೆ ಅವನು ಒಂದು ಕಂಪನಿಯಲ್ಲಿ ಕೆಲಸಕ್ಕೆ  ಹೋಗುವುದೇ ಒಂದು ಕಾರಣ.

ಹೀಗಿರುವಾಗ ಯಾವುದು ಸತ್ಯ ಯಾವುದು ಸು‌ಳ್ಳು ಎಂದು ತಿಳಿಯಲು ಈಗಿನ ಈ ವ್ಯವಸ್ಥೆಗಳಿಂದ ಖಂಡಿತ ಸಾಧ್ಯವಿಲ್ಲ.  ಕೇವಲ ಒಂದು ರಾಜಕಾರಣವೇ ಹೊರತು ಉಪಯೋಗವಿಲ್ಲದ ಕೆಲಸ.  ಭಾರತೀಯ ಪ್ರತಿ ಯೊಬ್ಬ ಪ್ರಜೆಯೂ ತನ್ನ ಸಂಪೂರ್ಣ ವಿವರವನ್ನು ಸರಕಾರವೇ ಒಂದು ನಿರ್ಧಿಷ್ಟವಾದ ರೀತಿಯಲ್ಲಿ  ಕಂಪ್ಯೂಟರೈಸ್‌ ಡ್ ರೀತಿಯಲ್ಲಿ ನಮೂದಿಸಿದಲ್ಲಿ ಮಾತ್ರ ಎಲ್ಲವನ್ನೂ ಸರಿಮಾಡುವುದು ಸಾಧ್ಯ ಉದ್ದೇಶವು ನೆರವೇರುವುದ ಸಾಧ್ಯ.  ಇಲ್ಲವಾದರೆ ಸಮಯ ಹಣ ಎಲ್ಲವೂ ವ್ಯರ್ಥ

ಬುಧವಾರ, ಫೆಬ್ರವರಿ 11, 2015

ಆಪ್ಆದ್ಮಿ ಪಕ್ಷದ  ಪ್ರಚಂಡ ಬಹುಮತ !!!

ನಮ್ಮದೇಶದ ರಾಜಕಾರಣಿಗಳಿಗೆ ಒಂದು ಸಂದೇಶವಿದೆ.

ದೇಶದಲ್ಲಿ  ಕಾಂಗ್ರೆಸ್ಸ ಪಕ್ಷ ಹಾಗೂ ಅದರ ಅರ್ಥವಿಲ್ಲದ ಆಡಳಿತದ  ವಿರುದ್ದ ಹಾಗೂ ಬಿ.ಜೆ.ಪಿಗೆ ಒಂದು ಪ್ರಬಲ ಪ್ರತಿಪಕ್ಷವಾಗಿ ಬೆಳೆಯ ಬಹುದಾದ ಯೋಗ್ಯತೆಯನ್ನು ಬೆಳೆಸಿಕೊಳ್ಲ ಬುದಾದ ಒಂದು ಬೆಳವಣಿಗೆ ಈ ಸಂಧರ್ಬದಲ್ಲಿ ಕಾಣಬಹುದು. ಆಪ್ಆದ್ಮಿ ಪಕ್ಷ ಮೊದಲ ಬಾರಿಗೆ ಆಡಳಿತದಲ್ಲಿದ್ದರೂ ಆಡಳಿತದ ಅನುಭವ ವಿಲ್ಲದೆಯೋ ಸರಕಾರದ ವಿರುದ್ಧ ಸರಕಾರವೆ ಪ್ರತಿಭಟನೆಗಿಳಿದುದು ಒಂದು ದುರಂತ. ಈ ಬಾರಿ ಆ ರೀತಿಯಲ್ಲಿ ಅದು ಯಾವುದೆ ಕಾರ್ಯವನ್ನು ರೂಪಿಸದೇ ಸಂವಿಧಾನಾತ್ಮಕ ಮತ್ತು ತನ್ನ ಅಧಿಕಾರ ಬಲದಿಂದ ಸಮಯ ಸಂದರ್ಭಗಳಲ್ಲಿ ಪರಿಣತರಿಂದ ಸಲಹೆ ಪಡೆದು ಆಡಳಿತವನ್ನು ನಡೆಸುವ ಅಗತ್ಯವಿದೆ.

ಅಧಿಕಾರ ಇದ್ದಲ್ಲಿ ಭ್ರಷ್ಟಚಾರ ವಿದೆ. ಅದನ್ನು ಒಂದೇ ಏಟಿಗೆ ಕೊನೆಗೊಳಿಸುವುದು ಸಾಧ್ಯವಿಲ್ಲ ಎಂಬುದು ಸತ್ಯ. ಆದರೆ ಭ್ರಷ್ಟಾಚಾರಕ್ಕೆ ಕಾರಣವಾಗುವ ಸಂವಿಧಾನದ ಸಡಿಲು ನೀತಿಗಳನ್ನು ಗಮನದಲ್ಲಿರಿಸಿಕೊಂಡು ತನ್ನ ಕಾರ್ಯ ತಂತ್ರವನ್ನು ರೂಪಿಸಲಿ.  ಬಡವರಿಗಾಗಿಯೇ ಹುಟ್ಟಿದ  ಪಕ್ಷವಾದ ಆಪ್ ಆದ್ಮಿ ಬಡವರಿಗಾಗಿ  ಉಚಿತ ನೀರು, ಉಚಿತ ವಿದ್ಯುತ್ ಈ ಮೊದಲಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತರದಿರುವುದೇ ಉತ್ತಮ.  ಉಚಿತ ವಾದ ಯಾವುದೇ ಸವಲತ್ತು ಮನುಷ್ಯನನ್ನು ಸೋಮಾರಿಯನ್ನಾಗಿಯೇ ಮಾಡುತ್ತದೆ.

ಹೊಸ ಅನನುಭವಿಗಳ ಪಕ್ಷ ಆಪ್ಆದ್ಮಿ.  ಆದರೆ ಉತ್ಸಾಹ ಭರಪೂರ ಚಿಲುಮೆಯೇ ಅವರ ಹೋರಾಟದ ಆಡಳಿತದ ಪ್ರಮುಖ ಅಂಗ.  ಇವುಗಳೊಂದಿಗೆ  ತಾರತಮ್ಯವಿಲ್ಲದ ರಚನಾತ್ಮಕ ಕೆಲಸಗಳಿಂದ ದೇಶದ ಜನರ ಮನವನ್ನು ಗೆದ್ದು ದೇಶದಲ್ಲಿ   ಉತ್ತಮ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಲಿ .  ದೇಶದಲ್ಲಿ ಸ್ವಾರ್ಥ ರಾಜಕಾರಣದ ಪರವಾಗಿ ಕ್ರಿಯಾಶೀಲವಾಗಿ  ಅಲ್ಲಲ್ಲಿ ನಾಯಿ ಕೊಡೆಯಂತೆ ಹುಟ್ಟು ಸಾವುಗಳ ನಡುವೆ ಬದುಕುತ್ತಿರುವ ಇತರ ಪಕ್ಷಗಳೆಲ್ಲವೂ  ತಮ್ಮನ್ನು ತಾವು ವಿಮರ್ಶಿಸಿಕೊಳ್ಳವ ಅಗತ್ಯವೂ ಇದೆ.