ಮಂಗಳವಾರ, ನವೆಂಬರ್ 28, 2017

ಒಂದು ದಿನದ ಆಹಾರದ

ಯುವಕ ಯುವತಿಯರ ಆಹಾರ
'ಯುವಕಸ್ತಾವತ್ ಯುವತೀಸಕ್ತಃ'- ಯುವಕನ ಆಸಕ್ತಿ ಯುವತಿಯಲ್ಲಿ! ಯುವಕರಿಗೆ ಆಹಾರದ ವಿಷಯದಲ್ಲಿ ವಿಶೇಷ ಆಸಕ್ತಿಯಿರುವುದಿಲ್ಲ. ಹೋಟೆಲುಗಳು, ರಸ್ತೆಯ ಪಕ್ಕದ ಪಾನೀಪೂರಿ ಇತ್ಯಾದಿಗಳಲ್ಲಿ ಗಮನ ಹೆಚ್ಚು. ಕಾರಣ ಸ್ನೇಹಿತೆಯರೊಂದಿಗೆ ಸ್ವಚ್ಚಂದವಾಗಿ ತಿನ್ನಬಹುದಲ್ಲ. ಆದರೆ ಯುವತಿಯರೂ ಆ ರೀತಿಯೇ ತಿಂದರೂ ಸಹ ದಿನಕ್ಕೊಮ್ಮೆ ವಾರ್ ಡ್ರೋಬ್ ನ ಕನ್ನಡಿ ನೋಡಿಕೊಂಡು ದಪ್ಪಗಾದೆನೆಂದು ಕೊರಗುತ್ತಾರೆ! ಡಯಟ್ ಮಾಡಲು ಅನೇಕ ಸ್ತ್ರೀಯರ ಮ್ಯಾಗಝೀನ್ ಗಳು ಸಹಾಯಕ್ಕೆ ಬರುತ್ತವೆ.
ಮೊದಲ ಒಂದು ವಾರ ಡಯಟ್
ಮುಂದಿನ ವಾರ ಪೂರ್ಣ ಹೋಟೆಲ್ ವಿಸಿಟ್
ಹೀಗೆ ಮಾನಸಿಕವಾಗಿ ನರಳುವವರು ಕೆಲವರು. ನಿಜವಾಗಿ ಆಹಾರ ಬಿಟ್ಟು ನರಳುವವರು ಕೆಲವರು. ಈಚೆಗೆ 'ಫಿಗರ್' ಬಗ್ಗೆ ಕಾಳಜಿಯ ಹೆಣ್ಣುಮಕ್ಕಳು ಹೆಚ್ಚುತ್ತಿದ್ದಾರೆ. ಅವರು ಅನ್ನವೇ ತಮ್ಮ ಸಕಲ ದುಃಖಕ್ಕೂ ಕಾರಣವೆಂದು ಅನ್ನವನ್ನು ದ್ವೇಷಿಸಿ ತೃಪ್ತರಾಗುತ್ತಿದ್ದಾರೆ. ಆದರೆ ಅವರ ತೂಕವೇನು ಕಡಿಮೆಯಾಗುತ್ತಿಲ್ಲ. ಯುವಕರು ಈ ಬಗ್ಗೆ ಚಿಂತಿಸುವುದೇ ಇಲ್ಲ. ನಲವತ್ತರ ಮೇಲೆ ಹೊಟ್ಟೆ ಗಣಪನ ಹೊಟ್ಟೆಯೊಂದಿಗೆ ಸ್ಪರ್ಧಿಸಿ ಗೆದ್ದಮೇಲೆ ಡಾಕ್ಟರರ ಸಲಹೆಯಂತೆ ಡಯಟ್ ಮಾಡಲು ಒಲ್ಲದ ಮನಸ್ಸಿನಿಂದ ಪ್ರಾರಂಭ. ಇಬ್ಬರೂ ವೈಜ್ನಾನಿಕವಾಗಿ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಅವರವರ ಎತ್ತರಿಕ್ಕಿರಬೇಕಾದ ತೂಕದ ಚಾರ್ಟ್, ಕ್ಯಾಲೋರಿ, ಡಯಟ್ ಯಾವುದೂ ಅವರ ಸಹಾಯಕ್ಕೆ ಬರುತ್ತಿಲ್ಲ. ಅದಕ್ಕೆಲ್ಲಾ ಅವರು ತಿನ್ನುತ್ತಿರುವ ಸತ್ತ ಆಹಾರ(ಜಂಕ್ ಫುಡ್) ಕಾರಣ. ರಸ್ತೆಯ ಬದಿಯ ಆಹಾರ ಸೇವಿಸುವುದು ಆರೋಗ್ಯಕರವೇ? ಅವರಿಗೆ ಅದು ಗೊತ್ತಿಲ್ಲವೇ? ಎಲ್ಲವೂ ಗೊತ್ತಿದೆ. ಆದರೆ ಅನುಷ್ಠಾನದಲ್ಲಿಲ್ಲ. ಹೋಟೆಲ್ಗಳು, ಪಾನೀಪುರಿ ಅಂಗಡಿಗಳು, ನಾರ್ತ್ ಇಂಡಿಯನ್, ಚೈನೀ, ಬೇಕರಿಗಳು ಇತ್ಯಾದಿ ಹೊಸ ತರಹೆಯ ನಾನಾ ನಮೂನೆಯ ಆಕರ್ಷಣೀಯವಾದ ಆಹಾರದ ತಾಣಗಳು ಇಂದು ಹೆಚ್ಚು ಹೆಚ್ಚು ಯುವಕ ಯುವತಿಯರನ್ನು ತನ್ನತ್ತ ಆಕರ್ಷಿಸಿಕೊಳ್ಳುತ್ತಿದೆ.
ಮುಖ್ಯವಾದ ವಿಷಯ, ವ್ಯಾಯಾಮ ಹಾಗೂ ಸರಿಯಾದ ಆಹಾರವನ್ನು ಅವರು ಅಳವಡಿಸಿಕೊಳ್ಳಬೇಕು. ಯುವಕ ಯುವತಿಯರ ವಿಷಯದಲ್ಲಿ ಸರಿಯಾದ ಮೊದಲ ಆದ್ಯತೆಯ ಆಹಾರವೆಂದರೆ ಹಲ್ಲಿಗೆ ವ್ಯಾಯಾಮವನ್ನು ಒದಗಿಸುವ(ಚ್ಯೂಯಿಂಗ್ ಗಮ್ ಅಲ್ಲ) ಆಹಾರವೇ, ಮಿಕ್ಕ ಆಹಾರಗಳೆಲ್ಲವೂ ದ್ವಿತೀಯ ದರ್ಜೆಯ ಆಹಾರ. ಇಡ್ಲಿ, ದೋಸೆ, ಬಿಳಿಯ ಬ್ರೆಡ್ ಇತ್ಯಾದಿಗಳಿಗೆಲ್ಲಾ ಹಲ್ಲಿನ ಅವಶ್ಯಕತೆ ಇದೆಯೇ? ಇವಕ್ಕೇ ಈಗ ಪ್ರಥಮ ಸ್ಥಾನ. ಅದಕ್ಕೇ ಬೇಗ ಹಲ್ಲುಗಳನ್ನು ಕಳೆದುಕೊಳ್ಳುವಿಕೆ. ಮೇಲಿನ ಆಹಾರವನ್ನು ಹಲ್ಲು ಹೋದ ಮೇಲೆ ತಿನ್ನುವಿರಂತೆ. ಆದರೆ, ಮೊಳಕೇಕಾಳುಗಳನ್ನು ಅಗಿದು ತಿನ್ನುವ, ಸೀಬೆ, ಸೇಬು ಇತ್ಯಾದಿಗಳನ್ನು ಕಚ್ಚಿ ತಿನ್ನುವ, ಚಪಾತಿಯನ್ನು ಅಗಿಯುವ, ಕಬ್ಬನ್ನು ಸಿಗಿಯುವ ಆನಂದ, ಇದನ್ನೆಲ್ಲಾ ಯಾವಾಗ ಅನುಭವಿಸುತ್ತೀರಿ?
ಇದಕ್ಕೆಲ್ಲಾ ವೇಳೆಯಿಲ್ಲ! ಹಾಗಾದರೆ ವೇಳೆಯನ್ನು ಹೇಗೆ ಉಪಯೋಗಿಸುತ್ತೀರಿ? "ಓದಿಗೆ, ಆಟಕ್ಕೆ" "ಏನು ಆಟ ಆಡುತ್ತೀರ?" "ಇಲ್ಲ, ಟಿ.ವಿ.ಯಲ್ಲಿ ಕ್ರಿಕೆಟ್ ನೋಡುತ್ತೇವೆ." ಸಾರ್ಥಕವಾಯಿತು!! ಆಟ ಆಡಲಿಕ್ಕೋ ಅಥವ ಬರೀ ನೋಡಲಿಕ್ಕೋ? ಇಂತಹ ಆಟ, ಅಂತಹ ಊಟದ ನಮ್ಮ ಭವ್ಯ ಭಾರತದ ಮುಂದಿನ ಪ್ರಜೆಗಳನ್ನು ನೆನೆಸಿಕೊಂಡರೆ ಭಯವಾಗುತ್ತದೆ!!
ಮೊದಲ ಸ್ಥಾನ ಮೊಳಕೆಯ ಕಾಳುಗಳು, ಕ್ಯಾರಟ್, ಬೀಟ್ ರೂಟ್ ಇತ್ಯಾದಿ ಹಸಿಯ ತರಕಾರಿಗಳು, ಸೇಬು, ಸೀಬೆ, ಹಲಸು ಇತ್ಯಾದಿ ಹಣ್ಣುಗಳು, ಕಬ್ಬು. ಬೇಯಿಸಿದ ಆಹಾರಕ್ಕೆ ಎರಡನೆಯ ಸ್ಥಾನ. ಅದರಲ್ಲೂ ಚಪಾತಿ, ರೊತ್ತಿ ಇತ್ಯಾದಿಗಳು ಮುಖ್ಯ. ಮೆತ್ತಗಿರುವ ಆಹಾರ ಹಲ್ಲು ಬಾರದ ಮಕ್ಕಳಿಗೂ ಅದಕ್ಕಿಂತ ಹೆಚ್ಚಾಗಿ ಮಿದುಕರಿಗೇ ಇರಲಿ ಬಿಡಿ! ಯುವಕರು ಹಲ್ಲಿಗೆ ಕೆಲಸ ಕೊಡದೆ ಆಹಾರ ಸೇವಿಸುವುದು ಮಹಾಪರಾಧ. ಹುಡುಗರಾಗಿದ್ದಾಗ ಮಾಡಿದ ತಪ್ಪಿನಿಂದ ಹಲ್ಲುಗಳು ಆಗಲೇ ಸಾಕಷ್ಟು ಹಾಳಾಗಿರುತ್ತವೆ.
ಈಗಲೂ ಮೃದುವಾದ ಆಹಾರ ಸೇವಿಸಿ ಬೇಗ ಹಲ್ಲುಗಳ ಗೋರಿಯನ್ನು ತೋಡುವುದೇ! ಅಗಿಯುವುದರ ಆನಂದ ಅಗಿದೇ ಅನುಭವಿಸಬೇಕು. ಬರೀ ಬರೆದು ಏನು ಪ್ರಯೋಜನ? ಯುವಕ, ಯುವತಿಯರು ದಪ್ಪ, ಸಣ್ಣ ಇತ್ಯಾದಿಗಳ ಬಗ್ಗೆ ವೃಥಾ ಚಿಂತಿಸದೆ ಹಲ್ಲನ್ನು ಉಪಯೋಗಿಸಿ ಹೆಚ್ಚು ನೈಸರ್ಗಿಕ ಆಹಾರವನ್ನು ಸೇವಿಸಿದರೆ ತನ್ನ ತಂದೆ, ತಾಯಿಯರಿಂದ ಪಡೆದ ಜೀನ್ ಗೆ ಅನುಗುಣವಾಗಿ ತೂಕ, ಎತ್ತರ ಎಲ್ಲವೂ ಸಹಜವಾಗಿ ಬರುತ್ತದೆ. ವಂಶವಾಹಿನಿಯಲ್ಲಿ ಬಾರದಿರುವುದನ್ನು ಯಾವ ಸಾಧನದಿಂದಲೂ ಸಾಧಿಸಲು ಸಾಧ್ಯವಿಲ್ಲ. ಉತ್ತಮ ಆಹಾರ, ಉತ್ತಮ ವ್ಯಾಯಾಮ ನೀವು ಮಾಡಬೇಕಾದ ಜೀವವಿಮೆ. ಇದರ ಬಗ್ಗೆ ಚಿಂತಿಸಿ.
ಒಂದು ದಿನದ ಆಹಾರದ ಮಾದರಿ :
ಬೆಳಿಗ್ಗೆ : ೦೫-೦೦ ಒಂದು ಚೊಂಬು ನೀರು, (ನಂತರ ವ್ಯಾಯಾಮ, ಯೋಗಾಸನ, ಈಜು, ಓಟ, ಆಟ ಇತ್ಯಾದಿ)
೦೭-೦೦ ಬಿಸಿ ನೀರು + ಬೆಲ್ಲ + ನಿಂಬೆಹಣ್ಣು
೦೯-೦೦ ರೊಟ್ಟಿ, ಚಪಾತಿ(ಸೂಖ) ಇತ್ಯಾದಿ ೪೦% + ತರಕಾರಿಗಳ ಸಲಾಡ್ ೬೦%
ಮಧ್ಯಾನ್ಹ ೧೨-೦೦ ಹಿಟ್ಟು + ಬೇಯಿಸಿದ ತರಕಾರಿ + ಮಜ್ಜಿಗೆ + ಒಂದು ಹಸಿಯ ಕ್ಯಾರಟ್(ಈರುಳ್ಳಿ) ಕಡಿದು ತಿನ್ನಬೇಕು.
ಸಂಜೆ ೦೫-೦೦ ಬಾಳೆಯ ಹಣ್ಣು + ಋತುಮಾನದ ಹಣ್ಣು(ಬೇಕಿದ್ದಲ್ಲಿ).
ಆಟ-ಬೆವರು ಬೀಳುವಂತೆ)
ರಾತ್ರಿ ೦೮-೦೦ ಮೊಳಕೆಯ ಗೋಧಿ ೨ ಹಿಡಿ + ಬೆಂಡ ಖರ್ಜೂರ + ತೆಂಗಿನಕಾಯಿ + ೧ ಲೋಟ ಹಾಲು + ಹಣ್ಣುಗಳು, ಅಥವಾ ಮೊಳಕೆಯ ಹೆಸರುಕಾಳು(ಮೆಂಥ್ಯ, ಬಟಾಣಿ, ಕಡ್ಲೆ) + ತೆಂಗಿನ ತುರಿ + ತರಕಾರಿಯ ಸಲಾಡ್ = ಮಜ್ಜಿಗೆ.
ಸಮತೋಲನ ಆಹಾರ
ಸಮತೋಲನ ಆಹಾರ(ಬ್ಯಾಲನ್ಸಡ್ ಡಯಟ್)
ಇಂದು ಯಾರೇ ಡಾಕ್ಟರರ ಹತ್ತಿರ ಹೋದರೂ ಒಂದು ಪದ ಉಪಯೋಗಿಸುತ್ತಾರೆ. 'ನೀವು ಸಮತೋಲನ ಆಹಾರ ತೆಗೆದುಕೊಳ್ಳುತ್ತಿಲ'. ಯಾವುದೇ ಡಯಟೀಷಿಯನ್ ಬಳಿ ಹೋದರೂ ಇದೇ ಮಾತು.
ಈ ಸಮತೋಲನ ಆಹಾರವೆಂದರೇನು? ಆಹಾರದಲ್ಲಿ ಆರೂ ಘಟಕಗಳೂ ಇರಬೇಕು. ಅದೂ ಪ್ರಮಾಣಬದ್ಧವಾಗಿರಬೇಕು. ಒಂದೇ ಒಂದು ಘಟಕವನ್ನು ಹೊಟ್ಟೆಯ ತುಂಬಾ ತಿಂದರೂ ಪ್ರಯೋಜನವಿಲ್ಲ.
ಯಾವ ಯಾವ ಗುಂಪಿನ ಆಹಾರ ಎಷ್ಟೆಷ್ಟು?
ಒಂದು ದಿನದ ಒಬ್ಬನ ಆಹಾರ :
೧. ಏಕದಳ ಧಾನ್ಯಗಳು ೪೬೦ ಗ್ರಾಂ
೨. ಬೇಳೆಗಳು ೪೦ ಗ್ರಾಂ
೩. ಹಸಿ ತರಕಾರಿಗಳು ೪೦ ಗ್ರಾಂ
೪. ಇತರೆ ತರಕಾರಿಗಳು ೪೦ ಗ್ರಾಂ
೫. ಗೆಡ್ಡೆ, ಗೆಣಸುಗಳು ೫೦ ಗ್ರಾಂ
೬. ಹಣ್ಣುಗಳು ೩೦ ಗ್ರಾಂ
೭. ಹಾಲು ೧೫೦ ಗ್ರಾಂ
೮. ಕೊಬ್ಬು ೪೦ ಗ್ರಾಂ
೯. ಬೆಲ್ಲ ೩೦ ಗ್ರಾಂ
ಈ ಸಮತೋಲನ ಆಹಾರವೂ ಸಹ ಎಲ್ಲರಿಗೂ, ಯಾವಾಗಲೂ ಸಮತೋಲನವಾಗುವುದಿಲ್ಲ.
೧) ಮಕ್ಕಳ ಬೆಳೆಯುವ ವಯಸ್ಸಿನಲ್ಲಿ: ಬೆಳವಣಿಗೆಗಾಗಿ ಹೆಚ್ಚು ಪ್ರೊಟೀನ್ ಯುಕ್ತ ಆಹಾರ ಬೇಕಾಗುತ್ತದೆ. ಮೂಳೆಗಳ ಬೆಳವಣಿಗೆಗೆ ಹೆಚ್ಚು ಕ್ಯಾಲ್ಷಿಯ್ಂ ಮತ್ತು ರಂಜಕ, ವಿಟಮಿನ್ 'ಎ' ಕಣ್ಣುಗಳ ಆರೋಗ್ಯಕ್ಕಾಗಿ, ವಿಟಮಿನ್ 'ಸಿ' ಶರೀರದ ರಕ್ಷಣೆಗಾಗಿ, ಹಾಗೂ ವಿಟಮಿನ್ 'ಡಿ' ಬೆಳವಣಿಗೆಗಾಗಿ, ಈ ವಿಷಯಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಆಹಾರ ಕೊಡಬೇಕಾಗುತ್ತದೆ.
೨. ಶ್ರಮ ಜೀವಿಗಳಿಗೆ : ಇವರಿಗೆ ಹೆಚ್ಚು ಕಾರ್ಬೋಹೈಡ್ರ್‍ಏಟ್ ಮತ್ತು ಕೊಬ್ಬಿರುವ ಆಹಾರ ಕೊಡಬೇಕು.
೩. ಬಸುರಿಯರಿಗೆ : ಹೆಚ್ಚು ಪ್ರೊಟೀನ್ ಯುಕ್ತ ಆಹಾರ ಬೇಕು. ಜತೆಗೆ ಕಬ್ಬಿಣ, ಕ್ಯಾಲ್ಷಿಯಂ,ಮತ್ತು ರಂಜಕ, ಅಲ್ಲದೆ ಎಲ್ಲಾ ವಿಟಮಿನ್ ಗಳೂ ಹೆಚ್ಚು ಹೆಚ್ಚು ಬೇಕು. ಬಾಣಂತಿಗೂ ಇಂತಹ ಆಹಾರದ ಅವಶ್ಯಕತೆ ಇದೆ.
೪. ಕಾಯಿಲೆಯಿಂದ ಗುಣಮುಖರಾಗುತ್ತಿರುವ ವ್ಯಕ್ತಿಗೆ : ಹೆಚ್ಚು ಪ್ರೊಟೀನ್ ಬೇಕು. ಹೆಚ್ಚು ವಿಟಮಿನ್, ಖನಿಜಗಳು ಅವಶ್ಯಕ. ಜತೆಗೆ ಸುಲಭವಾಗಿ ಜೀರ್ಣವಾಗುವ ಆಹಾರವಿರಬೇಕು.
೫. ವೃದ್ಧಾಪ್ಯದಲ್ಲಿ : ಕಾರ್ಬೋಹೈಡ್ರ್‍ಏಟ್, ಪ್ರೋಟೀನ್ ಗಳಿಗಿಂತ ಹೆಚ್ಚು ವಿಟಮಿನ್, ಲವಣಗಳು, ಕಿಣ್ವಗಳಿರುವ ಆಹಾರ ಮುಖ್ಯ. ಜತೆಗೆ ಸುಲಭವಾಗಿ ಜೀರ್ಣವಾಗುವಂತಿರುವುದು ಅವಶ್ಯಕ.
ಹೀಗೆ ಪ್ರತಿಯೊಬ್ಬರೂ ಅವರವರ ಅವಶ್ಯಕತೆಯನ್ನು ಅನುಸರಿಸಿ ಆಹಾರದ ಆರೂ ಘಟಕಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ ತರಕಾರಿಗಳನ್ನು ತಾಜಾ ಆಗಿ ಉಪಯೋಗಿಸಬೇಕು. ವೇಳೆ ಕಳೆದಂತೆ ಜೀವಸತ್ವಗಳು ನಾಶವಾಗುತ್ತವೆ. ಆಗತಾನೆ ಕಿತ್ತ ೧೦೦ ಗ್ರಾಂ ಆಲೂಗೆಡ್ಡೆಯಲ್ಲಿ ೩೦ ಮಿ.ಗ್ರಾಂ 'ಸಿ' ಜೀವಸತ್ವವಿದೆ. ಒಂದು ತಿಂಗಳು ಹಳತಾದರೆ ೨೦ ಮಿ.ಗ್ರಾಂ ಗೆ ಇಳಿಯುತ್ತದೆ. ಆರು ತಿಂಗಳು ಕಳೆದರೆ ೧೦ ಮಿ.ಗ್ರಾಂ.
ಸೊಪ್ಪು, ಹಸಿರು ತರಕಾರಿಗಳಲ್ಲಿ ಇದು ಇನ್ನು ಬೇಗ. ತರಕಾರಿಗಳನ್ನು ಹೆಚ್ಚು ಹೊತ್ತು ನೀರಿನಲ್ಲಿ ನೆನೆಸಿಡಬಾರದು. ನೀರಿನಲ್ಲಿ ಕರಗುವ ಜೀವಸತ್ವಗಳಾದ 'ಬಿ' ಮತ್ತು 'ಸಿ' ನೀರಿನಲ್ಲಿ ಕರಗಿಹೋಗುತ್ತವೆ. ತರಕಾರಿಗಳನ್ನು ಸಣ್ಣ, ಸಣ್ಣದಾಗಿ ಕತ್ತರಿಸುವುದರಿಂದ ೨೦ ರಿಂದ ೭೦ ಶತಾಂಶ ಜೀವಸತ್ವಗಳು ನಾಶವಾಗುತ್ತವೆ.
ತರಕಾರಿಗಳನ್ನು ಬೇಯಿಸಿದ ನೀರನ್ನು ಹೊರಕ್ಕೆ ಚೆಲ್ಲದೇ 'ಸೂಪ್'ನಂತೆ ಕುಡಿಯಬೇಕು. ಪದೇ,ಪದೇ ಬೇಯಿಸಿ ಉಪಯೋಗಿಸುವುದರಿಂದ ವಿಟಮಿನ್ ನಾಶ. ಅಕ್ಕಿಯನ್ನು ಹೆಚ್ಚು ಪಾಲೀಶ್ ಮಾಡಿದಷ್ಟೂ ಜೀವಸತ್ವಗಳ ನಾಶ.
ಪೋಷಕಾಂಶಗಳು : ಪಾಲೀಶ್ ಆಗದ ಅಕ್ಕಿ ಪಾಲೀಶ್ ಆದ ಅಕ್ಕಿ (೧೦೦ ಗ್ರಾಂ ನಲ್ಲಿ ಮಿ.ಗ್ರಾಂ ಮಿ.ಗ್ರಾಂ
ಕ್ಯಾಲ್ಸಿಯಂ ೧೦.೦೦ ೧೦.೦೦
ಕಬ್ಬಿಣ ೩.೨೦ ೩.೧೦
ಥಯಾಮಿನ್ ೦.೨೧ ೦.೦೬
ರಿಬೋಫ್ಲೇವಿನ್ ೦.೧೬ ೦.೦೬
ನಯಾಸಿನ್ ೩.೯೦ ೧.೯೦
ನಾರು ೦.೬೦ ೦.೨೦
ಥಯಾಮಿನ್, ನಯಾಸಿನ್ ಮುಂತಾದವು ಬಹಳಷ್ಟು ನಾಶವಾಗುತ್ತದೆ. ಗೋಧಿಯ ಹಿಟ್ಟಿನಲ್ಲಿ ಹೊಟ್ಟು ತೆಗೆಯುವುದರಿಂದ ಪೋಷಕಾಂಶಗಳು ನಾಶವಾಗುತ್ತವೆ.
ಪೋಷಕಾಂಶಗಳು ಗೋಧಿಯ ಹಿಟ್ಟು ಮೈದಾ ಹಿಟ್ಟು
(೧೦೦ ಗ್ರಾಂ ನಲ್ಲಿ) ಮಿ.ಗ್ರಾಂ ಮಿ. ಗ್ರಾಂ
ಕ್ಯಾಲ್ಸಿಯಂ ೪೧.೦೦ ೨೩.೦೦
ಕಬ್ಬಿಣ ೦.೪೯ ೦.೧೨
ರಂಜಕ ೩೫೫.೦೦ ೧೨೧.೦೦
ನಯಾಸಿನ್ ೪.೩೦ ೨.೪೦
ರಿಬೋಫ್ಲೇವಿನ್ ೦.೧೭ ೦.೦೭
ಥಯಾಮಿನ್ ೦.೪೯ ೦.೧೨
ನಾರಿನ ಅಂಶ ೧.೯೦ ೦.೩೦
ಕರಿಯುವುದು ಹಾಗೂ ಎಣ್ಣೆಯಲ್ಲಿ ಹುರಿಯುವುದು : ಇದರಿಂದ ೪೦% 'ಸಿ', ೭೦% 'ಇ' ಜೀವಸತ್ವಗಳು ನಾಶವಾಗುತ್ತವೆ. ಹೆಚ್ಚಿದ ಹಣ್ಣುಗಳು, ತುರಿದ ತರಕಾರಿಗಳನ್ನು ಹೆಚ್ಚು ವೇಳೆ ಗಾಳಿಯಲ್ಲಿ ಬಿಡಬಾರದು.
ಜೀರ್ಣಕ್ರಿಯೆ
ಗುರುಗಳು : ಬೆಳಗಿನ ತಿಂಡಿ ಏನು?
ಒಂದನೇ ವಿದ್ಯಾರ್ಥಿ : ಚಪಾತಿ, ಸಾಗು
ಎರಡನೇ ವಿದ್ಯಾರ್ಥಿ : ಪೂರಿ, ಪಲ್ಯ
ಮೂರನೇ ವಿದ್ಯಾರ್ಥಿ : ಇಡ್ಲಿ, ಸಾಂಬಾರ್
ನಾಲ್ಕನೇ ವಿದ್ಯಾರ್ಥಿ : ಹಣ್ಣುಗಳು
ಗುರುಗಳು : ಹೀಗೆ, ಬೇರೆ ಬೇರೆ ತಿಂಡಿಗಳನ್ನು ತಿಂದಿದ್ದೀರಿ. ಇವೆಲ್ಲಾ ಹೇಗೆ ರಕ್ತಗತವಾಗುತ್ತವೆ?
ವಿದ್ಯಾರ್ಥಿಗಳು (ಒಟ್ಟಿಗೆ): ನಮಗೆ ಗೊತ್ತಿಲ್ಲಾ ಸಾರ್, ನೀವೇ ತಿಳಿಸಿ.
ಗುರುಗಳು : ಜೀರ್ಣಕ್ರಿಯೆ ನಿಸರ್ಗದ ಒಂದು ಚಮತ್ಕಾರ. ನಾವು ತಿನ್ನುವ ಆಹಾರ ಬಾಯಿಯಿಂದ ಗುದದ್ವಾರದವರೆವಿಗೂ ಪಯಣಿಸುತ್ತದೆ. ಇದರ ಒಟ್ಟು ಉದ್ದ ಮೂವತ್ತಮೂರು ಅಡಿ. ಅನೇಕ ಅಂಗಗಳು ಈ ಕ್ರಿಯಯಲ್ಲಿ ಭಾಗವಹಿಸುತ್ತವೆ. ಆ ಅಂಗಗಳೇ ಅವುಗಳ ಕತೆಯನ್ನು ಹೇಳುತ್ತವೆ, ಕೇಳೋಣ.
ಬಾಯಿ : ಮೂಗು, ಆಹಾರದ ವಾಸನೆಯನ್ನು ಗ್ರಹಿಸುತ್ತದೆ. ಕಣ್ಣು ಬಣ್ಣವನ್ನು ನೋಡುತ್ತದೆ. ಆಗ ನನ್ನಲ್ಲಿ ನೀರು ದ್ರವಿಸಲು ಪ್ರಾರಂಭವಾಗುತ್ತದೆ. ಅದು ಬರಿಯ ನೀರಲ್ಲ, ಅದನ್ನು ಜೊಲ್ಲು ಎಂದು ಕರೆಯುತ್ತಾರೆ. ದಿನಕ್ಕೆ ಸುಮಾರು ಎರಡು ಲೀಟರಿನಷ್ಟು ಜೊಲ್ಲು ತಯಾರಾಗುತ್ತದೆ. ಜೀರ್ಣಕ್ರಿಯೆ ಹೊಟ್ಟೆಯಲ್ಲಿ ಪ್ರಾರಂಭವಾಗುವುದೆಂದು ಬಹಳ ಜನರ ನಂಬಿಕೆ. ಇಲ್ಲ, ಅದು ಪ್ರಾರಂಭವಾಗುವುದು ನನ್ನಿಂದ. ಜೀರ್ಣಕ್ರಿಯೆಯಲ್ಲಿ ಎರಡು ವಿಧ. ೧) ಯಾಂತ್ರಿಕ ಕ್ರಿಯೆ ೨) ರಾಸಾಯಿನಿಕ ಕ್ರಿಯೆ
ಯಾಂತ್ರಿಕ ಕ್ರಿಯೆಯು ಆಹಾರವನ್ನು ನುರಿಸಿ ನುಣ್ಣಗೆ ಮಾಡುವುದು. ಇದು ಜೀರ್ಣಕ್ರಿಯೆಯ ಮೊದಲ ಹಂತ. ಇದನ್ನು ನನ್ನಲ್ಲಿರುವ ಹಲ್ಲುಗಳು ಮಾಡುವುವು.
ಹಲ್ಲುಗಳು : ಮಕ್ಕಳೇ, ನಿಮಗೆ ನಮ್ಮ ಮೇಲಿರುವಷ್ಟು ಕೋಪ ಬಹುಶಃ ಯಾವ ಅಂಗದ ಮೇಲೂ ಇಲ್ಲವೆಂದು ಕಾಣುತ್ತದೆ. ನೀವು ಚಿಕ್ಕವರಾದಾಗಿನಿಂದಲೂ ಹಲ್ಲುಜ್ಜಿಕೊಳ್ಳುವುದು ಬೇಸರದ ಕೆಲಸ. ನೀವು ಉಪಾಧ್ಯಾಯರಿಂದ ಬೈಸಿಕೊಳ್ಳುವುದೂ ಸಹ ನಮ್ಮಿಂದಲೇ. "ಲೋ! ಏಕೋ ಹಲ್ಲು ಕಿಸಿಯುತ್ತಿ." ಒಟ್ಟಿನಲ್ಲಿ ನಮ್ಮ ಬಗ್ಗೆ ನಿಮಗೆ ಆಸಕ್ತಿ ಕಡಿಮೆ. ನಿಮಗೆ ನಾವು ಜ್ನಾಪಕ ಬರುವುದು ನೀವು ಸೀಬೇಕಾಯಿಯನ್ನು ನೋಡಿದಾಗ ಮಾತ್ರ. ಮುಂದೆ ಯುವಕ, ಯುವತಿಯರಾದ ಮೇಲೆ ನಮ್ಮ ಬಗ್ಗೆ ಕರುಣೆ ಬರುತ್ತದೆ. ಅಷ್ಟರಲ್ಲಿ ಅಚಾತುರ್ಯ ನಡೆದುಹೋಗಿರುತ್ತದೆ. ಹೃದಯ ಮುಂತಾದ ಅಂಗಗಳು ನಿಮ್ಮ ಸಹಾಯವನ್ನು ಹೆಚ್ಚು ಬಯಸುವುದಿಲ್ಲ. ಆದರೆ ನಾವು ಹಾಗಲ್ಲ. ನಮ್ಮ ಇರುವಿಕೆಗೆ ನಿಮ್ಮ ಸಹಾಯ ಅಗತ್ಯ. ನಿಮ್ಮ ಸಹಾಯಕ್ಕಾಗಿಯೇ ನಾವು ಇದ್ದೇವೆ. ನಾವು ಬಹಳ ಮಾನಧನರು. ನಮ್ಮನ್ನು ನಿರ್ಲಕ್ಷಿಸಿದರೆ ನಾವು ಬೇಗ ಜಾಗ ಖಾಲಿ ಮಾಡುತ್ತೇವೆ! ನೀವು ಇನ್ನೂ ಚಿಕ್ಕವರಿದ್ದಾಗ ಹಾಲುಹಲ್ಲುಗಳೆಂಬ ಇಪ್ಪತ್ತು ಹಲ್ಲುಗಳ ಒಂದು ಜೋಡಣೆಯಿತ್ತು. ಅದು ಬಿದ್ದು ಶಾಶ್ವತ ಹಲ್ಲುಗಳಾದ ನಾವು ಹುಟ್ಟಿದೆವು. ಕಡೆಯದಾಗಿ ಬರುವವು ಕಡೆಯ ಎರಡು ದವಡೆಯ ಹಲ್ಲುಗಳು. ಅವಕ್ಕೆ "ಬುದ್ಧಿವಂತ ಹಲ್ಲು' ಗಳೆಂದು ಹೆಸರು (ವಿಸ್ಡಮ್ ಟೀತ್). ಆ ವಯಸ್ಸಿಗೆ ನಿಮಗೆ ಬುದ್ಧಿ ಬಂದಿದೆ ಎಂದು ಅರ್ಥ. ನಿಮಗೆ ಬುದ್ಧಿ ಬಂದಿಲ್ಲದಿದ್ದರೆ ಅದು ನಮ್ಮ ತಪ್ಪಲ್ಲ! ಒಟ್ಟು ನಾವು ಮೂವತ್ತೆರಡು ಹಲ್ಲುಗಳು. ಕೆಳಗಿನ ಸಾಲಿನಲ್ಲಿ ಹದಿನಾರು, ಮೇಲಿನ ಸಾಲಿನಲ್ಲಿ ಹದಿನಾರು. ಬಾಚಿ ಹಲ್ಲುಗಳು, ಕೋರೆಹಲ್ಲು, ದವಡೆಹಲ್ಲುಗಳು, ಮುಂತಾಗಿ ನಮ್ಮ ನಮ್ಮ ಕೆಲಸಗಳನ್ನು ಅನುಸರಿಸಿ ನಮಗೆ ಹೆಸರುಗಳನ್ನು ಇಟ್ಟಿದ್ದಾರೆ. ಆಹಾರವನ್ನು ಹರಿಯಲು, ಕಡಿಯಲು, ಸಿಗಿಯಲು, ಅರೆಯಲು ಬೇರೆ ಬೇರೆ ಹಲ್ಲುಗಳೇ ಅವಶ್ಯ. ಕೋರೆಯ ಹಲ್ಲಿಗೆ 'ಕಣ್ಣು ಹಲ್ಲು' (ಐ ಟೀತ್) ಎಂದೂ ಕರೆಯುತ್ತಾರೆ. ಅದು ಕಣ್ಣಿನವರೆಗೂ ಹೋಗಿದೆಯೆಂದು ಹಿಂದಿನವರು ನಂಬಿದ್ದರು. ಅದು ತುಂಬಾ ಆಳಕ್ಕೆ ಇಳಿದಿದೆಯೆಂಬುದು ನಿಜವೇ. ನಾವು ಕ್ಯಾಲ್ಸಿಯಂ ಫಾಸ್ಫೇಟ್ ನಿಂದ ತಯಾರಾಗಿದ್ದೇವೆ. ಆದ್ದರಿಂದಲೇ ಕ್ಯಾಲಿಯಂ ಮತ್ತು ರಂಜಕಯುಕ್ತವಾದ ಆಹಾರವನ್ನು ನೀವು ಹೆಚ್ಚಿಗೆ ಸೇವಿಸಬೇಕು. ಅವುಗಳು ಯಾವುದರಲ್ಲಿರುತ್ತವೆನ್ನುವುದನ್ನು ಆಗಲೇ ಹೇಳಿಯಾಗಿದೆ. ನಮ್ಮ ಮೇಲಿರುವ ಮೊದಲನೆಯ ಪರೆ ಎನಾಮಲ್, ಅದರ ಹಿಂದಿರುವುದೇ ಡೆಂಟೈನ್. ಇದು ಪೂರ್ತಿ ಮೂಳೆಯಿಂದಲೇ ಆಗಿದೆ. ಈ ಡೆಂಟೈನ್ ನ ಹಿಂದೆ ಮೃದುವಾದ ಭಾಗವಿದೆ. ಅಲ್ಲಿ ನರಗಳು, ರಕ್ತನಾಳಗಳು ಎಲ್ಲವೂ ಇವೆ. ನೀವು ದಿನಕ್ಕೆ ಎರಡು ಸಲ ಬೇಕಾಬಿಟ್ಟಿಯಾಗಿ ಉಜ್ಜಿ ಬಹಳ ಶುಚಿಯಾಗಿಟ್ಟುಕೊಂಡಿರುವೆವು ಎಂದು ಭಾವಿಸಿದ್ದೀರಿ. ಬಾಯಿ, ಅಣುಗಳ ಅಕ್ಷಯಸಾಗರ. ಉಳಿದ ಆಹಾರದ ಕಣಗಳ ಮೇಲೆ ಬ್ಯಾಕ್ಟೀರಿಯಾಗಳ ಧಾಳಿಯಿಂದ ಒಂದು ಪೊರೆಯುಂಟಾಗುತ್ತದೆ. ಅದನ್ನು ಫ್ಲೇಕ್ ಎನ್ನುತ್ತಾರೆ. ಇದು ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾಗಿರುತ್ತದೆ. ಇದರಲ್ಲಿ ಆಹಾರದ ಕಣಗಳು ಕೊಳೆತು ಆಮ್ಲತೆಯುಂಟಾಗುತ್ತದೆ. ಈ ಆಮ್ಲ ಎನಾಮಲ್ ಅನ್ನು ಕರಗಿಸುತ್ತದೆ. ಇದು ಸಿಹಿ ಬಾಯಿಗೂ ಕಾರಣವಾಗುತ್ತದೆ. ಅಂದರೆ ತಿಂದ ಸಿಹಿ ಪದಾರ್ಥಗಳ ಕಣಗಳು ಬಾಯಿಯಲ್ಲಿ ಉಳಿದರೆ ಅದು ಬಾಯಿಯಲ್ಲಿಯ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳಿಗೆ ಧಾಳಿ ಮಾಡಲು ಅನುಕೂಲವಾಗುತ್ತದೆ. ಕಣ್ಣಿಗೆ ಕಾಣದ ಫ್ಲೇಕ್(ಪ್ಲೇಕ್) ಜೊಲ್ಲಿನಲ್ಲಿರುವ ಲವಣಗಳನ್ನು ತೆಗೆದುಕೊಂಡು ಬಹಳ ಗಟ್ಟಿಯಾದ 'ಟಾರ್ ಟಾರ್' ಎಂಬ ವಸ್ತುವನ್ನು ತಯಾರಿಸಿ ಸಂದುಗಳಲ್ಲಿ ಕಟ್ಟುವಂತೆ ಮಾಡುತ್ತದೆ. ನೀವು ಮಧ್ಯವಯಸ್ಕರ ಹಲ್ಲಿನಲ್ಲಿ ಕರಿಯಬಣ್ಣದ ಈ ಟಾರ್ ಟಾರ್ ಕಟ್ಟಿರುವ ಹಲ್ಲುಗಳನ್ನು ನೋಡಿರಬಹುದು. ಇದು ನಮ್ಮ ಅಡಿಪಾಯವಾದ ವಸಡನ್ನು ನಮ್ಮಿಂದ ಬೇರ್ಪಡಿಸಿಬಿಡುತ್ತದೆ.
ನಾವು ನಿಮ್ಮ ಶರೀರವೆಂಬ ಮನೆಯ ಕಾಂಪೌಂಡಿನ ಗೇಟಿನಂತೆ. ನಿಮ್ಮ ಶರೀರದ ಆರೋಗ್ಯ, ನಿಮ್ಮ ಸೌಂದರ್ಯ ಎಲ್ಲವೂ ನಮ್ಮನ್ನು ಅವಲಂಬಿಸಿವೆ. ನಾವು 'ಉಪಯೋಗಿಸು, ಇಲ್ಲದಿದ್ದರೆ ಕಳೆದುಕೋ' (ಯೂಸ್ ಆರ್ ಲೂಸ್) ಎಂಬ ತತ್ವಕ್ಕೆ ಬದ್ಧರು. ನೀವು ನಮ್ಮನ್ನು ಉಪಯೋಗಿಸದಿದ್ದರೆ ಕಳೆದುಕೊಳ್ಳುತ್ತೀರಿ. ನಮ್ಮನ್ನು ಕಳೆದುಕೊಂಡರೆ ಗೇಟಿಲ್ಲದ ಮನೆಯಂತೆ, ಯಾವುದೇ ದನವಾದರೂ ನುಗ್ಗೀತು ಎಚ್ಚರಿಕೆ!
ನಿಮ್ಮ ರಕ್ತನಾಳಗಳು
ನಿಮ್ಮ ರಕ್ತನಾಳಗಳನ್ನು ಶುಧ್ಹವಾಗಿಟ್ಟುಕೊಳ್ಳಿ. ಅಂದರೆ ನಿಮ್ಮ ದೊಡ್ಡ ಕರುಳನ್ನು ಶುದ್ಧವಾಗಿಟ್ಟುಕೊಂಡರೆ ನಿಮ್ಮ ರಕ್ತನಾಳಗಳೂ ಸಹಾ ಶುದ್ಧವಾಗಿರುತ್ತದೆ. ಇದಕ್ಕಾಗಿ ನೀವುಗಳು ಹೊಟ್ಟಿನಿಂದ ಕೂಡಿದ ಕೆಂಪು ಅಕ್ಕಿ, ಹೊಟ್ಟಿನಿಂದ ಕೂಡಿದ ಎಲ್ಲ ತರಹದ ಧಾನ್ಯಗಳು, ಸಿಪ್ಪೆ ಸಮೇತವಾಗಿ ತಿನ್ನುವಂಥ ಹಣ್ಣುಗಳು ಮತ್ತು ಸಿಪ್ಪೆ ಸಮೇತವಾಗಿ ತಿನ್ನುವ ತರಕಾರಿಗಳನ್ನು ಊಟಮಾಡಿ. ಎಲ್ಲ ಹಣ್ಣುಗಳಲ್ಲಿರುವ ಸಿಪ್ಪೆಯಲ್ಲಿ ಹೇರಳವಾಗಿ ನಾರಿನ ಅಂಶ ಇರುತ್ತದೆ. ಕೆಲವು ತರಕಾರಿಗಳಲ್ಲಿ ಹೇರಳವಾದ ನಾರಿನ ಅಂಶವು ಇರುತ್ತದೆ. ಈ ತರಹದ ಊಟವನ್ನು ಮಾಡುವುದರಿಂದ ದೊಡ್ಡ ಕರುಳು ಶುದ್ಧವಾಗಿರುತ್ತದೆ. ಆಗ ನಿಮ್ಮ ರಕ್ತನಾಳಗಳೂ ಸಹಾ ಶುದ್ಧವಾಗಿರುತ್ತದೆ. ನಿಮ್ಮ ಹತ್ತಿರಕ್ಕೆ ಯಾವುದೇ ತರಹದ ರೋಗಗಳು ಹತ್ತಿರ ಸುಳಿಯಲಾರವು. ದೇಹ ಮತ್ತು ಮನಸ್ಸು ಸಹಾ ಶುದ್ಧವಾಗಿರುತ್ತದೆ, ಚಟುವಟಿಕೆಯಿಂದ ಕೂಡಿರುತ್ತದೆ ಮತ್ತು ಆನಂದಮಯವಾಗಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ