ಭಾನುವಾರ, ಜನವರಿ 28, 2018

ಮನುಸ್ಮೃತಿ : ಪ್ರಗತಿಪರ ಮತ್ತು ಬುದ್ಧಿಜೀವಿಗಳ ಅನ್ನದಾತ

ಮನುಸ್ಮೃತಿ : ಪ್ರಗತಿಪರ ಮತ್ತು ಬುದ್ಧಿಜೀವಿಗಳ ಅನ್ನದಾತ
ಮನು ಸ್ಮೃತಿಒಂದು ವೇಳೆ “ಬೆಳಗಾನ ಎದ್ದು ನಾ ಯಾರ್ಯಾರ ನೆನೆಯಲಿ” ಎನ್ನುವ ಪ್ರಶ್ನೆ ನಮ್ಮ ಪ್ರಗತಿಪರ ಮಿತ್ರರರನ್ನು ಒಮ್ಮೆ ಕಾಡಿದರೆ ಅವರು ಯಾರನ್ನು ನೆನಯಬಹುದು…?
“ಮನುಸ್ಮೃತಿ!”
ಹೌದು! ಅವರು ನೆನೆಯಬೇಕಿರುವುದು ಮನುಸ್ಮೃತಿಯನ್ನು.ಯಾಕೆಂದರೆ ಬಹಳಷ್ಟು ಪ್ರಗತಿಪರರು ತಮ್ಮ ದಿನನಿತ್ಯದ ಭಾಷಣಗಳಲ್ಲಿ,ಬರಹಗಳಲ್ಲಿ ಕಡ್ಡಾಯವೇನೋ ಎಂಬಂತೆ ಬಳಸಿಯೇ ಬಳಸುವ ಪದಗಳಲ್ಲಿ “ಮನು, ಮನುವಾದಿ, ಮನುಸ್ಮೃತಿ, ಮನುವಾದಿ ಸಂವಿಧಾನ” ಇತ್ಯಾದಿಗಳು ಬಂದೇ ಬರುತ್ತವೆ (ಸಿನೆಮಾಕ್ಕೊಬ್ಬ “ಹೀರೋ/ವಿಲನ್”ಅನಿವಾರ್ಯವೆಂಬಂತೆ) ಆ ಪದಗಳನ್ನು ಬಳಸಿ ಬಳಸಿಯೇ ಹೆಸರು,ಹಣ,ಪ್ರಶಸ್ತಿ ಪಡೆದುಕೊಂಡವರ ಪಾಲಿಗೆ “ಮನುಸ್ಮೃತಿ” ಅನ್ನದಾತನೇ ಸರಿ.ಮನುಸ್ಮೃತಿಯ ಅತಿ ದೊಡ್ಡ ಫಲಾನುಭವಿಗಳು ಇವರೇ.
ಮನುವಾದಿ ಸಂವಿಧಾನ,ಮನುಸ್ಮೃತಿಯೇ ಹಿಂದೂಗಳ ಕಾನೂನು ಗ್ರಂಥ ಅಂತೆಲ್ಲ ಈ ಪ್ರಗತಿಪರರು ಮಾತನಾಡುವಾಗ ನನ್ನಂತ ಜನ ಸಾಮಾನ್ಯರಿಗೆ ಯಾರೀತ “ಮನು”?,”ಮನುಸ್ಮೃತಿ” ಎಂದರೇನು? ಎನ್ನುವ ಪ್ರಶ್ನೆಗಳೇಳುತ್ತವೆ.ಈ ಪ್ರಶ್ನೆಗಳು ನಮ್ಮಲ್ಲಿ ಯಾಕೆ ಮೂಡುತ್ತವೆಯೆಂದರೆ,ನನ್ನ ದಿನನಿತ್ಯದ ಜೀವನದಲ್ಲಿ,ನನ್ನ ಅನುಭವ,ಆಚರಣೆಗಳಲ್ಲಿ ನಾನೆಂದಿಗೂ ಈ ಮನುವನ್ನೋ, ಮನುಸ್ಮೃತಿಯನ್ನೋ ಮುಖಾಮುಖಿಯಾಗಿಲ್ಲ.ಹಳ್ಳಿಗಳಲ್ಲಿ ನಡೆಯುತಿದ್ದ/ನಡೆಯುತ್ತಿರುವ ನ್ಯಾಯ ಪಂಚಾಯಿತಿಗಳನ್ನು ನಾನು ನೋಡಿದ್ದೇನೆ ಅಲ್ಲಿ ಎಲ್ಲೂ ಮನುಸ್ಮೃತಿಯ ಆಧಾರದ ಮೇಲೆ ತೀರ್ಮಾನಗಳನ್ನು ನೀಡಿದ್ದನ್ನು ಕಂಡಿಲ್ಲ. ನಿಜವಾಗಿಯೂ “ಮನುಸ್ಮೃತಿ” ಅನ್ನುವುದೊಂದಿದೆ ಎನ್ನುವುದು ನನಗೆ ತಿಳಿದಿದ್ದೇ ಬುದ್ಧಿಜೀವಿಗಳ ಮಾತುಗಳನ್ನು ಕೇಳಲು (ಅದು ನನ್ನ ೨೦ನೇ ವಯಸ್ಸಿನ ನಂತರ) ಆರಂಭಿಸಿದ ಮೇಲೆಯೇ ಹೊರತು,ಅದಕ್ಕೂ ಮೊದಲು ನನ್ನ “ಹಿಂದೂ ಸಂಪ್ರದಾಯ”ಕ್ಕೊಂದು “ಕಾನೂನು ಗ್ರಂಥ”ವಿದೆ ಎನ್ನುವುದೇ ನನಗೆ ಗೊತ್ತಿರಲಿಲ್ಲ.ನಮಗೇ ಪರಕೀಯವಾಗಿರುವ ಈ “ಮನು ಮತ್ತು ಮನುಸ್ಮೃತಿ” ಅದೇಗೆ “ಹಿಂದೂ ಕಾನೂನು ಗ್ರಂಥ”ವಾಗುತ್ತದೆ? ಈ ವಾದಗಳು ಹುಟ್ಟಿಕೊಂಡಿದ್ದು ಹೇಗೆ ಅಂತ ನೋಡಲಿಕ್ಕೆ ಹೊರಟರೆ ನಾವು ಹೋಗಿ ನಿಲ್ಲುವುದು ಬ್ರಿಟಿಷರ ಬಳಿ.
ವ್ಯಾಪಾರಕ್ಕೆಂದು ಇಲ್ಲಿಗೆ ಬಂದು ನಮ್ಮ ನೆಲವನ್ನೇ ಕಬಳಿಸಿ ಇಲ್ಲಿ ಕುಳಿತ ಬ್ರಿಟಿಷರಿಗೆ ಇಲ್ಲಿನ ಅಗಾಧ ಸಾಮಾಜಿಕ,ಸಾಂಸ್ಕೃತಿಕ ವೈವಿಧ್ಯಮಯ ಸಮಾಜದ ತಲೆಬುಡ ಅರ್ಥವಾಗಲಿಲ್ಲ.ಇಲ್ಲಿ ಅವರ ಆಳ್ವಿಕೆ ಜಾರಿಗೆ ತರಲಿಕ್ಕಾಗಿ ಅವರಿಗೆ ಅವರ ದೇಶದಲ್ಲಿರುವಂತದ್ದೇ ಒಂದು ವ್ಯವಸ್ಥೆ ಬೇಕು ಎಂದುಕೊಂಡು ಯುರೋಪಿಯನ್ ಸಾಮಾಜಿಕ ವ್ಯವಸ್ಥೆಯನ್ನೇ ನಮ್ಮ ಸಮಾಜಕ್ಕೂ ಸಮೀಕರಿಸಿದರು.ಅವರಿಗೆ ಇಲ್ಲಿ ಮುಖ್ಯವಾಗಿ ತಲೆನೋವು ತರುತಿದ್ದ ವಿಷಯಗಳಲ್ಲಿ “ವ್ಯಾಜ್ಯದ ತೀರ್ಮಾನಗಳು” ಪ್ರಮುಖವಾಗಿದ್ದವು.
ಕೋರ್ಟುಗಳಲ್ಲಿ ಬ್ರಿಟಿಷ್ ನ್ಯಾಯಾಧೀಶರಿಗೆ ಪಂಡಿತರು ಸಹಾಯಕರಾಗಿ ನಿಯೋಜಿತರಾಗಿದ್ದರು.ಈ ಪಂಡಿತರು ನಮ್ಮ ಸಮಾಜದ ಬಹುತ್ವಕ್ಕೆ ತಕ್ಕಂತೆ ಒಂದೇ ವಿಷಯಗಳ ಮೇಲೆ ಭಿನ್ನ ವ್ಯಾಖ್ಯಾನ,ಅಭಿಪ್ರಾಯಗಳನ್ನು ನೀಡುವುದನ್ನು ನೋಡಿದ ಬ್ರಿಟಿಷರು ಈ ಪಂಡಿತರನ್ನು ಬಿಟ್ಟು ತಾವೇ ತಮ್ಮ ರಿಲಿಜನ್ನ್ ಗ್ರಂಥಗಳ ಆಧಾರದ ಮೇಲೆ ನಡೆಯುವ ಯುರೋಪ್ ಸಮಾಜದಂತೆಯೇ ಇಲ್ಲಿಯೂ ಒಂದು ಕಾನೂನು ಗ್ರಂಥವಿರಲೇಬೇಕು ಎಂದು ಹುಡುಕಲು ಹೊರಟವರಿಗೆ ಹಲವು ಸ್ಮೃತಿಗಳು ಸಿಕ್ಕಿದವು.
ಆದರೆ,ಅವರಿಗೆ ಪ್ರಿಯವೆನಿಸಿದ್ದು “ಮನುಸ್ಮೃತಿ” (ಯಾಕೆ ಮನುಸ್ಮೃತಿಯೇ ಪ್ರಿಯವಾಯಿತು? ಬಹುಷಃ ಅದರೊಳಗೆ “ಹಿಂದೂ ರಿಲಿಜನ್ (?)” ಎಂಬುದು ಎಷ್ಟು ಘನಘೋರ ಎಂದು ತೋರಿಸಲಿಕ್ಕೆ ಬ್ರಿಟಿಷರಿಗೆ ಬೇಕಾದಷ್ಟು ಸಾಲುಗಳು ಕಾಣಿಸಿದ್ದರಿಂದ ಇದ್ದಿರಬಹುದು).ವಿಲಿಯಂ ಜೋನ್ಸ್ ಮನುಸ್ಮೃತಿಯನ್ನು ಅನುವಾದಿಸಿದ ನಂತರ ಬ್ರಿಟಿಷರು “ಮನುಸ್ಮೃತಿ”ಯೇ “ಹಿಂದೂಗಳ ಕಾನೂನು ಗ್ರಂಥ” ಎಂದು ದೊಡ್ಡ ದನಿಯಲ್ಲಿ ಪ್ರಚಾರ ಮಾಡಲಿಕ್ಕೆ ಶುರುಮಾಡಿದರು.ಅದರ ಜೊತೆಗೆ ಅದರೊಳಗಿನ ಕೆಲವು ವಾಕ್ಯಗಳನ್ನು ಉಲ್ಲೇಖಿಸಿ,ಇಂತ ಗ್ರಂಥದ ಆಧಾರದ ಮೇಲೆ ನಿಂತಿರುವ ಸಮಾಜ ಭ್ರಷ್ಟವಾಗಿದೆ,ಸ್ತ್ರೀ ವಿರೋಧಿಯಾಗಿದೆ ಎನ್ನಲಾರಂಭಿಸಿದರು.ಬ್ರಿಟಿಷರಿಂದ ಶಿಕ್ಷಣ ಪಡೆದ ಇಲ್ಲಿನ ಜನರೂ ಬ್ರಿಟಿಷರ ಈ ತಪ್ಪು ಅನಿಸಿಕೆಗಳನ್ನು ನಿಜವೆಂದು ನಂಬಿಕೊಂಡರು.ಹಾಗಾಗಿಯೇ ಇವತ್ತಿಗೂ ಪ್ರಗತಿಪರರು ಮಾತಿಗೊಮ್ಮೆ “ಮನುವಾದಿ,ಮನುಸಂವಿಧಾನ,ಮನುಸ್ಮೃತಿ” ಎನ್ನುವುದು.
“ಮನುಸ್ಮೃತಿ”ಯನ್ನು “ಹಿಂದೂಗಳ ಕಾನೂನು ಗ್ರಂಥ” ಎಂದು ಮನುಸ್ಮೃತಿಯನ್ನು ವಿರೋಧಿಸುವವರಿಗೂ ಮತ್ತು ಮನುಸ್ಮೃತಿಯ ಪರವಾಗಿ ವಾದಿಸುವವರಿಗೂ ಒಂದಿಷ್ಟು ಪ್ರಶ್ನೆಗಳಿವೆ.
೧.ಮನುವಿನ ಜೀವಿತಾವಧಿಯ ಕಾಲಘಟ್ಟ ಮತ್ತು ಮನುಸ್ಮೃತಿ ರಚನೆಯಾದ ಕಾಲಮಾನವೇನು?
೨.ಬ್ರಿಟಿಷರು ಬರುವವರೆಗೂ ರಾಜಕೀಯವಾಗಿ ಎಂದಿಗೂ ಒಂದಾಗಿದ್ದಿರದ (ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಇವತ್ತಿಗೂ ವೈವಿಧ್ಯತೆ ಇದ್ದೇ ಇದೆ ಎನ್ನುವುದನ್ನೂ ಒಪ್ಪುತ್ತೀರಿ ಎಂದುಕೊಳ್ಳುತ್ತಾ) ಈ ದೇಶದಲ್ಲಿ ಯಾರ ಆಳ್ವಿಕೆಯ ಕಾಲದಲ್ಲಿ ಮನುಸ್ಮೃತಿಯನ್ನು ಜಾರಿಗೆ ತರಲಾಯಿತು?
೩.ಬ್ರಿಟಿಷರು ಬರುವ ಮೊದಲಿಗೆ ಆ ರೀತಿಯ ಕಾನೂನು ಇಲ್ಲಿ ಪಾಲನೆಯಾಗುತ್ತಿತ್ತು ಅನ್ನುವುದಾದರೆ,ಆಗಿನ ಕಾಲದ ಪಂಡಿತರಿಗೇಕೆ ಈ ಬಗ್ಗೆ ಏಕೆ ಗೊತ್ತಾಗಲಿಲ್ಲ? ಮತ್ತು ಬ್ರಿಟಿಷರಿಗೇಕೆ ನಮಗಾಗಿ ಒಂದು ಕಾನೂನು ಗ್ರಂಥವನ್ನು ಹುಡುಕುವ ಸ್ಥಿತಿ ಬಂತು?
೪.ಮನುಸ್ಮೃತಿ ಎನ್ನುವುದು ಇಡೀ ಭಾರತದಾದ್ಯಂತ ಕಾನೂನಿನ ರೂಪದಲ್ಲಿ ಜಾರಿಯಲ್ಲಿತ್ತು ಎನ್ನುವುದಾದರೆ, ಸಂಸ್ಕೃತ ಕಲಿತ ಯಾವ ಶೂದ್ರನ ಕಿವಿಗೆ ಸೀಸ ಸುರಿಯಲಾಗಿತ್ತು ಅಥವಾ ಅದರಲ್ಲಿ ಉಲ್ಲೇಖಿಸಿರುವ ಇನ್ನಿತರ ಯಾವ ಶಿಕ್ಷೆಗಳನ್ನು ಯಾರ ಮೇಲೆ ಜಾರಿತೆ ತರಲಾಗಿತ್ತು? ಈ ಬಗ್ಗೆ ಸಾಕ್ಷ್ಯಗಳು,ಪುರಾವೆಗಳು ಕನಿಷ್ಟ ಉಲ್ಲೇಖಗಳು ಎಲ್ಲಾದರೂ ಇವೆಯೇ?
೫.ಈಗೀನ ನಮ್ಮ ನ್ಯಾಯಾಲಯಗಳಂತೆ ಅಥವಾ ಬ್ರಿಟಿಷ್ ನ್ಯಾಯಾಲಯಗಳಂತೆ ನಮ್ಮ ಸಮಾಜದಲ್ಲಿ ಆಗಲೂ ಕೇಂದ್ರಿಕೃತ (ದೆಹಲಿಯೋ ಮತ್ತಿನ್ಯಾವುದೋ ದೊಡ್ಡ ನಗರ ಅಂದುಕೊಳ್ಳೋಣ)ನ್ಯಾಯದಾನವಾಗುತಿತ್ತೇ ಅಥವಾ ಗ್ರಾಮೀಣ ಮಟ್ಟದಲ್ಲಿಯೋ ಅಥವಾ ಆಯಾ ಪಂಗಡಗಳಲ್ಲಿ ಇವೆಲ್ಲ ತೀರ್ಮಾನಗಳಾಗುತಿದ್ದವೇ? (ಉದಾ: ಜಿಲ್ಲಾ ಕೋರ್ಟ್,ಹೈಕೋರ್ಟ್,ಸುಪ್ರೀಂ ಕೋರ್ಟ್ ಇತ್ಯಾದಿ).ಆಗುತಿದ್ದರೆ,ಅದು ಜಾರಿಯಾಗುತ್ತಿದೆಯೋ ಇಲ್ಲವೋ ಎಂದು ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದವರು ಯಾರು?
೬.ಸಂಸ್ಕೃತ ಕೇವಲ ಬ್ರಾಹ್ಮಣರ ಸ್ವತ್ತು ಎನ್ನುವ ಮತ್ತು ಮನುಸ್ಮೃತಿಯೇ ನಮ್ಮ ಕಾನೂನುಗ್ರಂಥ ಎನ್ನುವ ವಾದವನ್ನು ಒಪ್ಪಿಕೊಂಡು ಮುನ್ನಡೆಯುವುದಾದರೇ, ಮುಂದಿನ ಪ್ರಶ್ನೆ : ಈ ದೇಶದ ಎಲ್ಲಾ ಜಾತಿಗಳ/ಪಂಗಡಗಳ ನ್ಯಾಯ ತೀರ್ಮಾನಿಕೆಯಲ್ಲಿ ಬ್ರಾಹ್ಮಣರು ಪಾತ್ರ ವಹಿಸುತಿದ್ದರೇ? ಇಲ್ಲವೆಂದಾದರೆ, ಸಂಸ್ಕೃತದಲ್ಲಿದ್ದ ಮನುಸ್ಮೃತಿಯು ಭಾರತದ ಇತರ ಜಾತಿಯ ಜನರಿಗೆ ಹೇಗೆ ಅರ್ಥವಾಗುತಿತ್ತು ಮತ್ತು ಅವರೇಗೆ ಅದರಲ್ಲಿ ಬರೆದಿರುವಂತ ಶಿಕ್ಷೆ,ನ್ಯಾಯ ತೀರ್ಮಾನಗಳನ್ನು ಜಾರಿಗೆ ತರುತಿದ್ದರು?
ಪ್ರಶ್ನೆಗಳೂ ಇನ್ನೂ ಒಂದಿಷ್ಟಿವೆ.ಮೊದಲು ಇಷ್ಟಕ್ಕೆ ಉತ್ತರ ಸಿಕ್ಕರೆ,ಆ ನಂತರ ನಮ್ಮ ಸಮಾಜದಲ್ಲಿ ಸ್ಮೃತಿಗಳ ಸ್ಥಾನ,ಮಹತ್ವ,ನ್ಯಾಯ ತೀರ್ಮಾನ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲು ಅನುಕೂಲವಾದೀತು.
ಒಂದು ವೇಳೆ ಮೇಲಿನ ಪ್ರಶ್ನೆಗಳಿಗೆ ಸಾಕ್ಷ್ಯ,ಪುರಾವೆಗಳು,ಉತ್ತರಗಳು ಇಲ್ಲವೆಂದಾದರೇ ಮನುಸ್ಮೃತಿಯ ಕುರಿತು ಈಗ ಇರುವ ವಾದಗಳೇ ಮಹತ್ವ ಕಳೆದುಕೊಳ್ಳುತ್ತವೆ ಮತ್ತು ಅವು ಕೇವಲ ಬ್ರಿಟಿಷರು ಸೃಷ್ಟಿಸಿ ಹೋಗಿರುವ ಸುಳ್ಳಿನ ಸರಮಾಲೆಯ ಮೇಲಿನ ಬೌದ್ಧಿಕತೆಯಾಗುತ್ತದಷ್ಟೆ.
ಯಾಕೆಂದರೆ, ಜಾರಿಯಲ್ಲೇ ಇರದಿದ್ದ “ಗ್ರಂಥ”ವೊಂದರಿಂದ ಯಾರಿಗೆ ತೊಂದರೆಯಾದೀತು? ಮನುವೇನೋ ಮನುಸ್ಮೃತಿಯನ್ನು ಬರೆದ ಸರಿ.ಅದನ್ನು ಯಾರಾದರೊಬ್ಬರು ಜಾರಿಗೆ ತರದೇ ಅದರಿಂದ ಸಮಸ್ಯೆಯಾಗಿದ್ದು ಯಾರಿಗೆ? ಅದು ಒಂದು ವೇಳೆ ಜಾರಿಯಲ್ಲಿ ಇದ್ದಿರಬಹುದಾದರೆ,ಅದೊಂದು ಸೀಮಿತ ಪ್ರದೇಶಕ್ಕೋ,ಪಂಗಡಕ್ಕೋ ಇದ್ದಿರಬಹುದೇ ಹೊರತು ಇಡಿ ಭಾರತದಾದ್ಯಂತ ಇರಲಿಕ್ಕೆ ಸಾಧ್ಯವೇ?, ಉದಾಹರಣೆಗೆ ; ಶಂಕರಾಚಾರ್ಯರು ಹಿಂದೂ ಧರ್ಮದ ಪುನರುತ್ಥಾನ ಮಾಡಿದರು, ಬೌದ್ಧ ಧರ್ಮವನ್ನು ಇಲ್ಲಿಂದ ಕಾಲ್ಕೀಳುವಂತೆ ಮಾಡಿದರು ಎನ್ನುವ ಭ್ರಮೆಯೊಂದಿದೆಯಲ್ಲವೇ?,ಹಾಗಿದ್ದರೆ, ಇವತ್ತಿಗೆ ಭಾರತಾದಾದ್ಯಂತ ಇರುವ “ಬ್ರಾಹ್ಮಣ”ರಲ್ಲಿ ಎಷ್ಟು ಜನ “ಅದ್ವೈತ ಮತ/ಶಂಕರರ” ಅನುಯಾಯಿಗಳಿದ್ದಾರೆ? ಅದು ಬಿಡಿ. ನಮ್ಮ “ಮಧ್ವಾಚಾರ್ಯ”ರ ಉಡುಪಿಯಲ್ಲಿ ಇರುವವರೆಲ್ಲ “ಮಾಧ್ವ”ರೇ? ಅಲ್ಲಿ “ಸ್ಮಾರ್ತ”ರಿಲ್ಲವೇ?. ಇನ್ನೂ ರಾಮಾನುಜಾಚಾರ್ಯರ ಅನುಯಾಯಿಗಳೆಷ್ಟು ಜನ? ಅಥವಾ ಈ “ದ್ವೈತ/ಅದ್ವೈತ/ವಿಶಿಷ್ಟಾದ್ವೈತ” ಮತಕ್ಕೇ ಸೇರದ ಬ್ರಾಹ್ಮಣ ಪಂಗಡಗಳೆಷ್ಟಿವೆ ಭಾರತದಲ್ಲಿ? ಭಾರತದ ವೈವಿಧ್ಯತೆಯ ಅಗಾಧತೆಯ ಮಟ್ಟವೇ ಅಂತದ್ದು.ಇಂತ ವೈವಿಧ್ಯಮಯ ದೇಶದಲ್ಲಿ ಒಂದೇ ಕಾನೂನು ಗ್ರಂಥವಿದ್ದಿರಲಿಕ್ಕೆ ಎಂದಾದರೂ ಸಾಧ್ಯವೇ? ಶಂಕರ,ಮಾಧ್ವ,ರಾಮಾನುಜ,ಬುದ್ಧ (ಹಾಗೇ ಇನ್ನಿತರ ಭಕ್ತಿಪಂಥ ಮತ್ತು ಅನುಭಾವಿಗಳು) ರಂತವರೇ ಈ ನೆಲದ ವೈವಿಧ್ಯತೆಯ ಅಗಾಧತೆಯಲ್ಲಿ ವ್ಯಾಪಿಸಿರಲಿಲ್ಲವಾದರೇ,ಅದೇಗೆ “ಮನುಸ್ಮೃತಿ”ಯೊಂದೇ ಇಡೀ ಭಾರತವನ್ನೂ ಮತ್ತು ಹಿಂದೂಗಳನ್ನೂ ವ್ಯಾಪಿಸಿಕೊಂಡಿತ್ತು
ಸಾಮಾನ್ಯ ಜನರ ಭಾಷೆಯಲ್ಲಿ ಹೇಳುವುದಾದರೆ,ಇದೊಂದು ರೀತಿ ವಿದ್ಯಾರ್ಥಿಯೊಬ್ಬ ಯಾವುದೋ “ದೊಡ್ಡ ಪುಸ್ತಕ”ವನ್ನು ಸಲ್ಪವೂ ಓದಿಕೊಳ್ಳದೇ,’ತಲೆದಿಂಬು’ ಮಾಡಿಕೊಂಡು ಗಡದ್ದಾಗಿ ಮಲಗಿ,ಮರುದಿನ ಪರೀಕ್ಷೆಯಲ್ಲಿ Rank ಪಡೆದಂತೆ ಕನಸು ಕಟ್ಟಿಕೊಳ್ಳುವಂತೆ ಅನ್ನಿಸುತ್ತದೆಯಷ್ಟೇ. (ಈ ರೀತಿಯ ಚಮತ್ಕಾರಿ ಪುಸ್ತಕ ಸಿಕ್ಕರೆ ನಮ್ಮ ವಿದ್ಯಾರ್ಥಿ ಮಿತ್ರರು ಬಿಟ್ಟಾರೆಯೇ!)
ಒಂದು ವಿಷಯ ಸ್ಪಷ್ಟಪಡಿಸುತ್ತ ಲೇಖನ ಮುಗಿಸುತ್ತೇನೆ ; ಮನುಸ್ಮೃತಿಯಿಂದ ಹೆಕ್ಕಿ ಹೇಳಲಾಗುವ ಸಾಲುಗಳನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ.ಸಾಲುಗಳನ್ನು ಬಿಡಿ, ಮೊದಲೇ ಹೇಳಿದಂತೆ ಈ “ಮನುಸ್ಮೃತಿ”ಯೋ ಅಥವಾ ಇನ್ನೊಂದು ಸ್ಮೃತಿಯೋ ಅದ್ಯಾವುದೂ ನನ್ನ ದೈನಂದಿನ ಮತ್ತು ಇದುವರೆಗಿನ ಜೀವನದಲ್ಲಿ ಮುಖಾಮುಖಿಯಾಗಿಲ್ಲ.ಹಾಗಾಗಿ ಅದರ ಮೇಲೆ ನನಗೇನು ವಿಶೇಷ ಮಮಕಾರವೂ ಇಲ್ಲ,ಪ್ರೀತಿಯೂ ಇಲ್ಲ.ಆದ ಕಾರಣ,ಮನುಸ್ಮೃತಿಯಲ್ಲಿ ಬರೆದಿರುವುದು ಸರಿಯೋ/ತಪ್ಪೋ ಅದನ್ನು ನೀವು ಒಪ್ಪುತ್ತೀರೇ ಎನ್ನುವಂತ ಪ್ರಶ್ನೆಗಳು ಈ ಲೇಖನಕ್ಕೆ ಸರಿಹೊಂದುವುದಿಲ್ಲ.ಹಾಗಾಗಿ ಅಂತ ಪ್ರಶ್ನೆಗಳನ್ನು ಬಿಟ್ಟು ಮೇಲೆ ಪಟ್ಟಿಮಾಡಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡೋಣ ಹಾಗೆಯೇ ನಿಮ್ಮಲ್ಲೇ ಇನ್ನೊಂದಿಷ್ಟು ಪ್ರಶ್ನೆಗಳನ್ನು ಅದನ್ನೂ ಸೇರಿಸಿ.ಲೇಖನದಲ್ಲಿ ಕೇಳಿರುವ ಪ್ರಶ್ನೆಗಳು ಸರಿಯೆನಿಸಿದರೆ,ಇನ್ನುಮುಂದೆ “ಮನುಸ್ಮೃತಿ”ಯ ಬಗ್ಗೆ ಭಾಷಣಬಿಗಿಯುವ ಮಂದಿಯ ಮುಂದೆ ಇದೇ ಪ್ರಶ್ನೆಗಳನ್ನು ಕೇಳಿ.
ಪ್ರಶ್ನೆಗಳು ಮನುಸ್ಮೃತಿಯನ್ನು “ಹಿಂದೂಗಳ ಕಾನೂನು ಗ್ರಂಥ” ಎಂದು ಮನುಸ್ಮೃತಿಯನ್ನು ವಿರೋಧಿಸುವವರಿಗೂ ಮತ್ತು ಮನುಸ್ಮೃತಿಯ ಪರವಾಗಿ ವಾದಿಸುವ ಈ ರಾಜ್ಯದ ಪ್ರಗತಿಪರರು,ಬುದ್ಧಿಜೀವಿಗಳು ಮತ್ತು ಪಂಡಿತರಿಗೆ.ಉತ್ತರ ಸಿಗಬಲ್ಲದೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ