ಭಾನುವಾರ, ಜನವರಿ 28, 2018

ಶ್ರೀ ವೆಂಕಟೇಶ ರಹಸ್ಯ

ಶ್ರೀ ವೆಂಕಟೇಶ ರಹಸ್ಯ*🕉
ಸಹಸ್ರಾರ ಚಕ್ರದಮೇಲೆ ನಿಂತು ಅಮೃತವನ್ನು ಸುರಿಸುವವನು
ಈ ಆದಿಶೇಷನನ್ನು ಯೋಗಿಗಳು ನಮ್ಮ ಬೆನ್ನುಮೂಳೆಗೆ ಸಮೀಕರಿಸುವುದುಂಟು. ನಮ್ಮ ದೇಹದ ಭಾರವನ್ನೆಲ್ಲವನ್ನೂ ಸಹಿಸಿ ಆಧಾರ ಭೂತವಾಗಿದ್ದುಕೊಂಡು, ನಮ್ಮ ಭಾರವನ್ನು ವಹಿಸಿರುವ ಈ ಬೆನ್ನುಮೂಳೆಯಲ್ಲಿ ಆರು ಚಕ್ರಗಳ ಕೇಂದ್ರ ಸ್ಥಾನಗಳಿವೆ. ಮೂಲಾಧಾರ (ಗುದ ಪ್ರದೇಶ), ಸ್ವಾಧಿಷ್ಠಾನ (ಗುಹ್ಯೇಂದ್ರಿಯ ಸ್ಥಾನ), ಮಣಿಪುರ (ಹೊಕ್ಕಳಿನ ಪ್ರದೇಶ) ಅನಾಹತ (ಎದೆಯ ಪ್ರದೇಶ), ವಿಶುದ್ಧ (ಕಂಠ ಸ್ಥಾನ), ಆಜ್ಞಾ (ಎರಡು ಹುಬ್ಬುಗಳು ಕೂಡುವ ಸ್ಥಳ), ಮತ್ತು ಸಹಸ್ರಾರ (ನಡು ನೆತ್ತಿಯ ಸ್ಥಳ). ತಪಸ್ಸಿನಿಂದಲೂ, ದೀರ್ಘ ಕಾಲದ ಸಾಧನೆಯಿಂದಲೂ ಯೋಗಿ ತನ್ನಲ್ಲಿರುವ ಈ ಚಕ್ರಗಳ ದರ್ಶನ, ಅನುಭವ ಮುಂತಾದ್ದನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾನೆ. ಸಾಧಕರ ಪರಿಭಾಷೆಯಲ್ಲಿ ನಡುನೆತ್ತಿಯ ಮೇಲಿರುವ ಸೂಕ್ಷ್ಮವಾದ ಪ್ರದೇಶವೇ ಬ್ರಹ್ಮರಂಧ್ರ. ಈ ಬ್ರಹ್ಮರಂಧ್ರದಿಂದಲೇ ಆತ್ಮನ ಪ್ರವೇಶ ಶರೀರದೊಳಗಾಗುವುದು. ಶರೀರದ ಅವಸಾನ ಕಾಲದಲ್ಲಿ ಯೋಗಿಗಳು ತಮ್ಮ ಪ್ರಾಣ ಶಕ್ತಿಯನ್ನು ಊರ್ಧಮುಖವಾಗಿಸಿ ಬ್ರಹ್ಮರಂಧ್ರದಿಂದ ಹೊರಹೋಗುತ್ತಾರೆ.
ಸಾಮಾನ್ಯ ಜೀವರು ತಮ್ಮ ತಮ್ಮ ಪ್ರಾರಭ್ಧ ಕರ್ಮಕ್ಕನುಗುಣವಾಗಿ ಇತರ ಶಕ್ತಿ ಕೇಂದ್ರಗಳಿಂದ ಪ್ರಾಣೋತ್ಕ್ರಮಣ ಮಾಡುತ್ತಾರೆ. ಸಹಸ್ರಾರ ಚಕ್ರವೇ ಆದಿಶೇಷನ ಫಣಾ ಮಂಡಲ ಸ್ಥಾನ. ಇದರ ಮೇಲೆ ನಿವಾಸಿಸುವವನೇ ಶ್ರೀ ವೇಂಕಟೇಶ. ಇಲ್ಲಿ ಒಂದು ಅಂಶವನ್ನು ನಾವು ಗಮನಿಸಬೇಕು. ಪರಮಾತ್ಮನ ಶೇಷಶಯನಕ್ಕೂ (ಶೇಷನ ಮೇಲೆ ಮಲಗುವುದಕ್ಕೂ) ಶೇಷ ಫಣಸ್ಯೋಪರಿ ನಿವಾಸಕ್ಕೂ ವ್ಯತ್ಯಾಸವಿದೆ. ಮಹಾವಿಷ್ಣು ತತ್ವವು ಆದಿಶೇಷನ ಮೇಲೆ ಮಲಗುತ್ತದೆ. ವೇಂಕಟೇಶ ತತ್ವವು ಶೇಷನ ಹೆೆಡೆಯ ಮೇಲೆ ನಿಲ್ಲುತ್ತದೆ. ಆದರೆ ಇದು ಕಾಳಿಯ ಮರ್ಧನದ ಹಾಗಲ್ಲ. ಅಲ್ಲಿ ಆದದ್ದು ಕಾಳಿಯನೆಂಬ ದುಷ್ಟ ಸರ್ಪದ ದಮನ. ಇಲ್ಲಿ ನಡೆಯುತ್ತಿರುವುದು ಮಹಾ ಭಕ್ತನೂ, ಭಾಗವತೋತ್ತಮನೂ, ಅನಂತ ಪ್ರಕೃತಿ ಮಂಡಲಗಳು ತನ್ನಲ್ಲಿ ಲಯವಾದಾಗ ಯಾವ ತತ್ವ ತನ್ನಲ್ಲಿ ಲಯವಾಗದೆ ಶೇಷವಾಗಿ ಉಳಿದುಕೊಂಡು ತನ್ನ ಸೇವೆಗಾಗಿ ನಿಲ್ಲುವುದೋ ಅಂತಹ ತತ್ವಕ್ಕೂ ಉತ್ತಮವಾದ ಸ್ಥಾನವಾದ ಹೆಡೆಯ ಮೇಲೆ ನಿಂತು ಭಕ್ತರನ್ನು ಅಮೃತಮಯರನ್ನಾಗಿಸುವುದು. ತಮ್ಮ ಅಮೃತ ಶಕ್ತಿಯ, ತಮ್ಮ ಅಮೃತತ್ವದ ನಿಜ ಸ್ವರೂಪದ ಆತ್ಮಾನುಭವವನ್ನು ಮಾಡಿಕೊಡುವುದು. ಅದಕ್ಕಾಗಿಯೇ ವೇಂಕಟೇಶನ್ನು ಮಹಾನುಭಾವರು ಸುಧಾ ಸ್ವರೂಪನೆಂದೂ, ಅಮೃತೇಶನೆಂದೂ, ಸುಧಾದಾತನೆಂದೂ ಕರೆದಿರುವುದು. ಅವನು ಅಮೃತ ಪ್ರದಾತ. ಎಂತಹ ಅಮೃತ! ನಾನು ಯಾರು? ಎಂಬ ಬ್ರಹ್ಮಜ್ಞಾನವೆಂಬ ಅಮೃತವನ್ನು ಕೊಟ್ಟು ಧನ್ಯನಾಗಿಸುವವನು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ