ಮಾನವನ ಊಟವೆಂಬುದು ಪ್ರಾಣಿಗಳಂತೆ ಹಸಿವಾದಾಗ ಅಥವಾ ಆಹಾರ ಸಿಕ್ಕಿದಾಗ ಹೊಟ್ಟೆತುಂಬಿಸಿಕೊಳ್ಳುವ ಪ್ರಕ್ರಿಯೆಯಲ್ಲ. ಅದಕ್ಕೊಂದು ಸುಂದರ ರೂಪುರೇಷೆಯಿದೆ. ಅದರಲ್ಲಿ ಶುಚಿತ್ವ, ರುಚಿತ್ವ, ಸಂತೃಪ್ತಿಗಳನ್ನು ನೀಡುವ ಪರಿಕಲ್ಪನೆಯಿದೆ. ‘ನ ಅನ್ನಾತ್ ಪರಂ ಬ್ರಹ್ಮ’ ಎಂಬ ಉಕ್ತಿಯೊಂದಿದೆ.*
*ಅನ್ನಕ್ಕಿಂತ ಮಿಗಿಲಾದ ದೇವರಿಲ್ಲ*.
ನಾವು ಸೇವಿಸುವ ಆಹಾರವನ್ನು ಸಾತ್ವಿಕ, ರಾಜಸಿಕ ಮತ್ತು ತಾಮಸಿಕವೆಂದು ಗುರುತಿಸಿ ಅಂತಹ ಆಹಾರಗಳ ಸೇವನೆಯಿಂದ ಮೈಮನಸ್ಸುಗಳ ಮೇಲಾಗುವ ಪರಿಣಾಮವನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ. ಯಜನ-ಯಾಜನ, ವೇದಗಳ ಅಧ್ಯಯನ-ಅಧ್ಯಾಪನಗಳಲ್ಲಿ ತೊಡಗಿಸಿಕೊಂಡಿರುವ ಬ್ರಾಹ್ಮಣ ಸಮುದಾಯ ಸಹಜವಾಗಿಯೇ ಸಾತ್ವಿಕವಾದ ಶಾಖಾಹಾರವನ್ನು ಒಪ್ಪಿಕೊಂಡಿತು. ನಮ್ಮ ಭೋಜನ ವಿಧಿಯು ದೇಹಶಕ್ತಿ ಮಾತ್ರವಲ್ಲದೆ ಪ್ರಾಣಶಕ್ತಿ ಮತ್ತು ಆತ್ಮಶಕ್ತಿಯನ್ನು ಗಳಿಸಿಕೊಳ್ಳುವ ಒಂದು ಯಜ್ಞ. ಆಯುರ್ವೇದದ ನಿರ್ದೇಶನದಂತೆ ಅದಕ್ಕೊಂದು ಕಾಲನಿಯತಿ, ನಿಯಮಗಳ ವೈಜ್ಞಾನಿಕ ರೂಪರೇಷೆಗಳ ಆಂತರಿಕ ಸೌಂದರ್ಯ ಮತ್ತು ಅದನ್ನು ಸ್ವೀಕರಿಸುವಲ್ಲಿ ವ್ಯವಸ್ಥಿತವಾಗಿ ರೂಪುಗೊಂಡ ಒಂದು ಬಾಹ್ಯ ಸೌಂದರ್ಯವೂ ಇದೆ.
*ಭೋಜನವೆಂಬುದು ಒಂದು ಯಜ್ಞರೂಪ :*
ನಮ್ಮ ವೈದಿಕ ಚಿಂತನೆಯಲ್ಲಿ ಬ್ರಹ್ಮಾಂಡದಿಂದ ಪಿಂಡಾಂಡದವರೆಗೆ ಯಜನ ಕ್ರಿಯೆಯ ಪರಿಕಲ್ಪನೆಯಿದೆ. ಯಜ್ಞವೆಂಬುದು ಕೇವಲ ಅಗ್ನಿಕುಂಡದಲ್ಲಿ ಗೈಯ್ಯುವ ಹವಿರ್ಭರಣಕ್ಕೆ ಮಾತ್ರ ಸೀಮಿತವಲ್ಲ. ನಮ್ಮ ದೇಹದಲ್ಲಿ ಅಂತರ್ಗತವಾಗಿರುವ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನಗಳೆಂಬ ಪಂಚಪ್ರಾಣಗಳಿಗೆ ಶಕ್ತಿಯನ್ನು ತುಂಬಲು, ಯಾಗಕುಂಡದಲ್ಲಿ ಮಾಡುವ ಯಜ್ಞದಂತೆ ಭೋಜನವೂ ಒಂದು ಯಜ್ಞವಾಗಿದೆ. ಈ ಕಾರಣದಿಂದಲೇ ಅದು ‘ಪ್ರಾಣಾಗ್ನಿಹೋತ್ರ’ವೆಂದು ಕರೆಯಲ್ಪಡುತ್ತದೆ. ಈ ಪ್ರಾಣಾಗ್ನಿಹೋತ್ರವೆಂಬ ಯಜ್ಞಕ್ಕೆ ಜಠರವೇ ಅಗ್ನಿಕುಂಡ, ನಾವು ಸೇವಿಸುವ ಆಹಾರವೇ ಹವಿಸ್ಸು, ಆಹಾರವನ್ನು ಅರಗಿಸಿಕೊಳ್ಳುವ ಶಕ್ತಿಯೇ ಅಗ್ನಿ. ಈ ಅಗ್ನಿ ನಾವು ಸೇವಿಸುವ ಆಹಾರವನ್ನು ಪಚನಗೈದು ಶರೀರಕ್ಕೆ ಶಕ್ತಿಯನ್ನು, ತೇಜಸ್ಸನ್ನು ಒದಗಿಸುವುದರಿಂದ ಅದು ‘ಪಾಚಕಾಗ್ನಿ’ . ಈ ಪಾಚಕಾಗ್ನಿಯು ಜಠರಾಗ್ನಿ, ಉದರಾಗ್ನಿ, ಕೋಷ್ಠಾಗ್ನಿ ಮುಂತಾದ ಪ್ರಾಸಂಗಿಕ ನಾಮಧೇಯಗಳಿಂದ ಕರೆಯಲ್ಪಟ್ಟರೂ ಅದು ಗೀತೆಯಲ್ಲಿ (ಅಧ್ಯಾಯ ೧೫ / ಶ್ಲೋಕ೧೪) ವಿವರಿಸಿದಂತೆ ‘ಅಹಂ ವೈಶ್ವಾನರೊ ಭುಂಕ್ತ್ವಾ ಪ್ರಾಣಿನಾಂ ದೇಹಮಾಶ್ರಿತಃ | ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ‘ ಎನ್ನುವ ವೈಶ್ವಾನರನೆಂದು ಕರೆಯಲ್ಪಡುತ್ತದೆ. ಭೋಜನಯಜ್ಞವೆಂಬ ಆತ್ಮಯಜ್ಞಕ್ಕೆ ಜೀವಾತ್ಮನೇ ಯಜ್ಞಪತಿ. ಯಜ್ಞಸಾಧನವಾದ ಆಹಾರರೂಪಿ ಹವಿಸ್ಸನ್ನು ನಿರ್ಮಿಸುವವನು, ಭುಂಜಿಸುವವನು ಪರಮಾತ್ಮಾಂತರ್ಗತನಾದ ಜೀವಾತ್ಮನಾದುದರಿಂದ ಅವನೇ ಯಜ್ಞೀ, ಯಜ್ಞಪತಿ, ಯಜ್ಞಾಂಗ, ಯಜ್ಞವಾಹನ, ಯಜ್ಞಸಾಧನ. ಈ ಕಾರಣಕ್ಕಾಗಿಯೇ ಭೋಜನ ಪ್ರಾರಂಭದ ಮೊದಲು ‘ಬ್ರಹ್ಮಾರ್ಪಣ’ವೆಂಬ ಪರಿಕಲ್ಪನೆ. ಪಚಾಮ್ಯನ್ನಂ ಚತುರ್ವಿಧಮ್ : ನಾವು ಸೇವಿಸುವ ಆಹಾರವನ್ನು ಭಕ್ಷ (ಕರಿದ ಅಥವಾ ವಿಶೇಷವಾದ ತಿಂಡಿ ತಿನಸು), ಭೋಜ್ಯ (ಕೈತುತ್ತಿಗೊದಗುವ ಖಾದ್ಯ), ಲೇಹ್ಯ ( ನಾಲಿಗೆಯಲ್ಲಿ ನೆಕ್ಕಿ ಸವಿಯುವ ಪದಾರ್ಥ), ಚೋಷ್ಯ (ಒಳರಸವನ್ನು ಹೀರಿ ಸವಿಯುವ ಖಾದ್ಯ)ಗಳೆಂದು ನಾಲ್ಕು ವಿಧವಾಗಿ ವಿಂಗಡಿಸಲಾಗಿದೆ. ಇದರೊಂದಿಗೆ ನಾವು ಸೇವಿಸುವ ದ್ರವರೂಪದ ಪಾನೀಯಗಳೂ ಸೇರಿದರೆ ಅದು ಪಂಚಭಕ್ಷವಾಗುತ್ತದೆ. ಈ ಭೋಜನ ಸಾಮಗ್ರಿಗಳೇ ಪಾಚಕಾಗ್ನಿಗೆ ನೀಡುವ ಹವಿಸ್ಸುಗಳು ಮತ್ತು ಇವುಗಳ ಸೇವನೆಯ ವ್ಯವಸ್ಥಿತ ರೂಪವೇ ಭೋಜನ ವಿಧಿಯೆಂಬ ಯಜ್ಞ.
*ಶುಚಿತ್ವ :*
ಈ ಪ್ರಾಣಾಗ್ನಿಹೋತ್ರಕ್ಕೆ ಜಠರವೆಂಬ ಯಜ್ಞಕುಂಡದಲ್ಲಿ ಕಾಲಕಾಲಕ್ಕೆ ಪಾಚಕಾಗ್ನಿಯನ್ನು ಸ್ಥಾಪಿಸಿಕೊಳ್ಳುವ ನಮ್ಮ ದೇಹವೇ ಯಜ್ಞಶಾಲೆ. ಸ್ನಾನಾದಿ ನಿತ್ಯಕರ್ಮಗಳ ಮೂಲಕ ದೇಹದ ಬಹಿರಂಗಶುದ್ಧಿ ಮತ್ತು ಭಗವನ್ನಾಮ ಸ್ಮರಣೆಯ ಮೂಲಕ ಅಂತರಂಗ ಶುದ್ಧಿ ಮತ್ತು ಪ್ರಸನ್ನವಾದ ಮನೋಸ್ಥಿತಿ, ಪ್ರಶಾಂತ ನಿರ್ಮಲ ಪರಿಸರ ಭೋಜನವಿಧಿಗೆ ಅವಶ್ಯ. ಶುದ್ಧವಾದ ಬೋಜನಥಾಲಿ, ಬಾಳೆಎಲೆ, ಪತ್ರಾವಳಿಗಳಲ್ಲಿ ನೆಲದ ಮೇಲೆ ಕುಳಿತು ಮನೆಮಂದಿಯೊಂದಿಗೆ ಭೋಜನವೆಂಬ ಯಜ್ಞವನ್ನು ಕೈಗೊಳ್ಳಬೇಕು.
*ಪ್ರೋಕ್ಷಣೆ :*
ಯಜ್ಞಾರಂಭದಲ್ಲಿ ಯಜ್ಞಸಾಮಗ್ರಿಗಳನ್ನು ಪವಿತ್ರೀಕರಿಸುವಂತೆ ಇಲ್ಲಿಯೂ ಭೋಜನಥಾಲಿಯಲ್ಲಿ ಬಡಿಸಿದ ಅನ್ನಾದಿ ಖಾದ್ಯಗಳನ್ನು ಪವಿತ್ರೀಕರಿಸುವುದಕ್ಕಾಗಿ ಅನ್ನಬ್ರಹ್ಮನಿಗೆ ನಮಸ್ಕರಿಸಿ ಪ್ರಣವ (ಓಂ) ಮತ್ತು ವ್ಯಾಹೃತಿಪೂರ್ವಕವಾದ ಗಾಯತ್ರಿಮಂತ್ರದಿಂದ ಮತ್ತು ಸ್ವಾದೋಪಿತೋ ಮಧುಪಿತೋ ಮಯಂತ್ವಾವವ್ಯಮಹೇ ಅಸ್ಮಾಕಮವಿತಾಭವ’ ಎಂಬ ಮಂತ್ರದಿಂದಲೂ ಅನ್ನದ ಮೇಲೆ ಜಲಪ್ರೋಕ್ಷಣೆ ಮಾಡಬೇಕು.
*ಪರಿಸಿಂಚನ :*
ನಮ್ಮ ಆಡುನುಡಿಯಲ್ಲಿ ಬಹಳ ಸರಳವಾಗಿ ನಾವಿದನ್ನು ಸುತ್ತುಗಟ್ಟುವುದು ಎನ್ನುತ್ತೇವೆ. ಏನನ್ನು ಸುತ್ತುಗಟ್ಟುವುದು ಮತ್ತು ಯಾಕಾಗಿ ಸುತ್ತುಗಟ್ಟುವುದು ಎಂಬ ಅರಿವಿಲ್ಲದೆ ನಡೆಸುವ ಈ ಕ್ರಿಯೆ ಬ್ರಾಹ್ಮಣರು ಸುತ್ತುಗಟ್ಟದೆ ಉಣ್ಣುವುದಿಲ್ಲ ಎಂಬಷ್ಟರ ಮಟ್ಟಿಗೆ ಯಾಂತ್ರಿಕವಾಗಿಯೇ ಉಳಿದಿದೆ. ಸೇಚನ, ಸಿಂಚನ ಎಂಬ ಶಬ್ದಗಳು ನೀರನ್ನು ಚಿಮುಕಿಸುವ ಕ್ರಿಯೆಯನ್ನು ಸೂಚಿಸುವಂತಹವುಗಳು. ಈ ಮೊದಲೇ ಜಲಪ್ರೋಕ್ಷಣೆಗೊಂಡು ಶುದ್ಧೀಕರಿಸಿದ ಭೋಜನಥಾಲಿ ಅಥವಾ ಪತ್ರಾವಳಿಯೋ, ಬಾಳೆ ಎಲೆಯ ಮೇಲೊ ಬಡಿಸಿದ ಅನ್ನದ ಸುತ್ತ ಎಡದಿಂದ ಬಲಕ್ಕೆ ಪ್ರದಕ್ಷಿಣಾಕಾರದಲ್ಲಿ ಅಭಿಮಂತ್ರಿತ ಜಲವನ್ನು ‘ಸತ್ಯಂತ್ವರ್ತೇನ ಪರಿಷಿಂಚಾಮಿ’ ಎಂದು ಉಚ್ಚರಿಸುತ್ತ ಪರಿಸಿಂಚನ ಮಾಡಬೇಕು. ಇದರರ್ಥ ‘ಸತ್ಯ’ (ಭಗವಂತ) ಮತ್ತು ‘ಋತ’ (ಧರ್ಮ ಮತ್ತು ನ್ಯಾಯ)ವನ್ನು ಸ್ಮರಿಸಿ ಈ ಅನ್ನವನ್ನು ಪರಿಷೇಚನ ಮಾಡುತ್ತೇನೆ. ನಾನು ತಿನ್ನುವ ಈ ಅನ್ನಕ್ಕೆ ಪರಮಾತ್ಮನ ಮತ್ತು ಸತ್ಯಧರ್ಮಗಳ ರಕ್ಷೆಯಿದೆ. ಈ ಪರಿಸಿಂಚನವೆಂಬ ಕ್ರಿಯೆ ನಾನು ಈ ಅನ್ನವನ್ನು ಸತ್ಯ ಮತ್ತು ಧರ್ಮಗಳ ನೆಲೆಯಲ್ಲಿ ಭಗವಂತನ ಕೃಪೆಯಿಂದ ಗಳಿಸಿದ್ದೇನೆ ಎಂಬ ಘೋಷಣೆಯೂ ಹೌದು.
*ಚಿತ್ರಾಹುತಿ :*
ಎಲೆಯ ಬಲತುದಿಯಲ್ಲಿ ನೀರಿನಿಂದ ಗೆರೆಯೆಳೆದು ಮೂರು ಅಥವಾ ಐದು ಅನ್ನದ ಸಣ್ಣ ತುತ್ತುಗಳನ್ನಿರಿಸುವುದೇ ಚಿತ್ರಾಹುತಿ. ಈ ಚಿತ್ರಾಹುತಿಯನ್ನು ನೀಡುವಾಗ ‘ಅಂತಶ್ಚರತಿ ಭೂತೇಷು ಗುಹಾಯಾಂ ವಿಶ್ವತೋಮುಖಃ | ತ್ವಂ ಯಜ್ಞಂ ತ್ವಂ ವಷಟ್ಕಾರಃ ತ್ವಂ ವಿಷ್ಣುಃ ಪುರುಷಃಪರಃ ||ಎಂದು ಹೇಳಬೇಕು. ಈ ವಿಶ್ವವನ್ನು ಎಲ್ಲಕಡೆಯಿಂದಲೂ ಅವಲೋಕಿಸಬಲ್ಲ ನೀನು ಈ ಯಜ್ಞದ ಮಂತ್ರಸ್ವರೂಪ ಮತ್ತು ಯಜ್ಞವೂ ಹೌದು. ಇಲ್ಲಿ ಭೂಪತಿ, ಭುವನಪತಿ ಮತ್ತು ಭೂತಪತಿಗಳೆಂದು ಮೂರು ಆಹುತಿಗಳನ್ನು ನೀಡುವ ಕ್ರಮಕ್ಕೆ ಬಲಿತ್ರಯವೆಂದೂ, ಚಿತ್ರ, ಚಿತ್ರಗುಪ್ತ, ಯಮ, ಧರ್ಮರಾಜ (ಯಮದೂತ) ಮತ್ತು ಸರ್ವಭೂತಗಳಿಗಾಗಿ ಐದು ಆಹುತಿಗಳನ್ನು ಇಡುವ ಕ್ರಮಕ್ಕೆ ಚಿತ್ರಾಹುತಿ ಅಥವಾ ಬಲಿಪಂಚಕವೆಂದು ಕರೆಯಲಾಗುತ್ತದೆ. ಈ ಮೊದಲೇ ತಿಳಿಸಿದಂತೆ ಭೋಜನವೂ ಒಂದು ಯಜ್ಞವಿಧಿಯಂತೆ ಇದ್ದು, ಯಜ್ಞಕರ್ಮದಲ್ಲಿ ಪ್ರಧಾನಹೋಮ ಅಥವಾ ಪೂರ್ಣಾಹುತಿಗೆ ಮೊದಲು ಉಪದೇವತೆಗಳಿಗೆ ನೀಡುವ ಬಲಿಯ ಪ್ರತೀಕದಂತೆ ಈ ಚಿತ್ರಾಹುತಿ ಅಥವಾ ಬಲಿತ್ರಯಗಳು. ಈ ಆಹುತಿಗಳನ್ನು ನೀಡಿದ ನಂತರ ಬೆರಳನ್ನು ತೊಳೆಯುವ ಪದ್ಧತಿಯಿದೆ. ಈ ರೀತಿ ಚಿತ್ರಾಹುತಿಗಳನ್ನು ನೀಡಿದ ಬಳಿಕ ಎಡಗೈನ ಹೆಬ್ಬೆರಳು, ಮಧ್ಯಮ ಮತ್ತು ತೋರುಬೆರಳುಗಳಿಂದ ಭೋಜನ ಪಾತ್ರವನ್ನು ಸ್ಪರ್ಶಿಸಿ ‘ಅನ್ನಂ ಬ್ರಹ್ಮಾ ರಸೋವಿಷ್ಣುಃ ಭುಂಕ್ತಾದೇವೊ ಮಹೇಶ್ವರಃ | ಪ್ರಿಯತಾಂ ಭಗವಾನೀಶಃ ಪರಮಾತ್ಮಾ ಸದಾಶಿವಃ || ( ಈ ಅನ್ನವೇ ಬ್ರಹ್ಮ, ಇದರ ರಸವೇ ವಿಷ್ಣು, ಇದನ್ನು ಸ್ವೀಕರಿಸುವವನೇ ಪರಮೇಶ್ವರ. ನಮಗೆ ಮಂಗಳವನ್ನು ನೀಡುವ ಪರಮದೇವನಿಗೆ ಈ ಪ್ರಾಣಾಗ್ನಿಹೋತ್ರ (ಭೋಜನ) ಪ್ರಿಯವಾಗಲಿಎಂದರ್ಥ.
*ಆಪೋಷನ :*
‘ಆಪೋಷನ’ವೆಂದರೆ ನೀರನ್ನು ಗುಟುಕಿಸುವುದು ಎಂದರ್ಥ. ನೀರು ನಮಗೆ ಬದುಕನ್ನು ನೀಡುವಂತಹದು. ಅದು ಅಮೃತ ಸಮಾನ. ಹಾಗಾಗಿ ನಾವು ತಿನ್ನುವ ಈ ಅನ್ನಕ್ಕೆ ಅಮೃತದ ಸವಿಯಿರಲಿ ಎಂಬ ಸಂಕಲ್ಪದೊಂದಿಗೆ ‘ಅಮೃತೋಸ್ತು, ಅಮೃತೋಪರಣಮಸೀ ಸ್ವಾಹಾಃ’ ಎಂದು ಆಪೋಷನಗೈಯ್ಯಬೇಕು.
*ಅಭಿಘಾರ :*
ಅಭಿಘಾರವೆಂದರೆ ನೈವೇದ್ಯಕ್ಕಾಗಿ ಹಾಕುವ ತುಪ್ಪ. ಇದು ಆಹಾರವನ್ನು ಸ್ವಾದಿಷ್ಠವಾಗಿ ಮಾಡುತ್ತದೆ. ಯಜ್ಞದಲ್ಲಿ ಹವಿಸ್ಸಿನ ಮೇಲೆ ತುಪ್ಪವನ್ನು ಹನಿಸುವಂತೆ ಈ ಭೋಜನ ಯಜ್ಞದಲ್ಲಿ ಈ ಅಭಿಘಾರ. ಸ್ವಾಹಾಕಾರ : ಯಜ್ಞಯಾಗಾದಿಗಳಲ್ಲಿ ಪೂರ್ಣಾಹುತಿಗೆ ಮೊದಲು ಅಗ್ನಿಗೆ ಚರುವನ್ನು ಸಮರ್ಪಿಸಿದಂತೆ ಪ್ರಾಣ, ಅಪಾನ,ವ್ಯಾನ, ಉದಾನ, ಸಮಾನ ಮತ್ತು ಬ್ರಹ್ಮನಿಗೂ ಎಲೆಯಲ್ಲಿ ಬಡಿಸಿದ ಖಾರ, ಉಪ್ಪು, ಹುಳಿಗಳನ್ನು ಸೇರಿಸದ ಅನ್ನದ ಸಣ್ಣ ಕಬಳ (ಸಣ್ಣ ತುತ್ತು) ಗಳನ್ನು ಸ್ವಾಹಾಕಾರಕ್ಕಾಗಿ ಭುಂಜಿಸಬೇಕು.ಈ ಸ್ವಾಹಾಕಾರವೆಂದರೆ ಜಗಿಯದೆ ನುಂಗುವ ಪ್ರಕ್ರಿಯೆ. ಈ ಪ್ರಾಣಾದಿ ಸ್ವಾಹಾಕಾರ ಪ್ರಕ್ರಿಯೆಯಲ್ಲಿ ಪ್ರಾಣಾಯ ಸ್ವಾಹಾಕ್ಕೆ ತೊರು ಬೆರಳು ಮತ್ತು ಮಧ್ಯದ ಬೆರಳು ಮತ್ತು ಹೆಬ್ಬೆರಳು, ಅಪಾನಾಯ ಸ್ವಾಹಾಗೆ ಮಧ್ಯದ ಬೆರಳು, ಉಂಗುರ ಬೆರಳು ಮತ್ತು ಹೆಬ್ಬೆರಳು, ವ್ಯಾನಾಯ ಸ್ವಾಹಾಗೆ ಉಂಗುರದ ಬೆರಳು, ಕಿರು ಬೆರಳು ಮತ್ತು ಹೆಬ್ಬೆರಳು, ಉದಾನಾಯ ಸ್ವಾಹಾಗೆ ಮಧ್ಯದ ಬೆರಳು, ಉಂಗುರದ ಬೆರಳು ಮತ್ತು ಹೆಬ್ಬೆರಳು, ಸಮಾನ ಮತ್ತು ಬ್ರಹ್ಮಕ್ಕೆ ಐದೂ ಬೆರಳುಗಳನ್ನು ಬಳಸಬೇಕೆಂಬ ನಿಯಮವಿದೆ. ಈ ಎಲ್ಲ ಪೂರ್ವ ಪೀಠಿಕೆಯ ನಂತರ ಭೋಜನವನ್ನು ಆತುರ, ಅಸಹನೆ, ಸಿಟ್ಟು ಸೆಡವುಗಳಿಲ್ಲದೆ ಶಾಂತಮನಸ್ಸಿನಿಂದ ತನಗೆ ಬೇಕಾದಷ್ಟು ಸ್ವೀಕರಿಸಬೇಕು. ಅತಿ ಭುಂಜನವು ದೈಹಿಕ ಆರೋಗ್ಯದ ಮೇಲೆ ವಿಕೃತ ಪರಿಣಾಮವನ್ನು ಬಿರಬಲ್ಲದೆಂಬ ಎಚ್ಚರವಿರಬೇಕು. ಈ ರೀತಿಯ ಭೋಜನವೇ ಪ್ರಾಣಾಗ್ನಿಹೋತ್ರದ ಪೂರ್ಣಾಹುತಿ.
*ಉತ್ತರಾಪೋಶನ :*
ಉತ್ತರಾಪೋಶನವೆಂದರೆ ಭೋಜನದ ಅಂತ್ಯದಲ್ಲಿ ನೀರು ಕುಡಿಯುವುದು. ಯಜ್ಞದಲ್ಲಿ ಪೂರ್ಣಾಹುತಿ ನಂತರ ವಸೋರ್ಧಾರೆ ಎಂಬ ಹೆಸರಿನಲ್ಲಿ ಹವಿಸ್ಸಿನ ಮೇಲೆ ಆವರಣವಾಗುವ ಹಾಗೆ ತುಪ್ಪದ ಧಾರೆಯನ್ನು ಹರಿಸುತ್ತಾರೆ. ಅದೇ ರೀತಿ ಈ ಭೋಜನ ಯಜ್ಞದ ನಂತರ ಈ ಉತ್ತರಾಪೋಶನವು ನಾವು ಭುಂಜಿಸಿದ ಭೋಜನವನ್ನು ಅಮೃತವನ್ನಾಗಿಸಲಿ ಎಂಬ ಆಶಯದೊಂದಿಗೆ ‘ಅಮೃತಾ ಪಿಧಾನಮಸಿ ಸ್ವಾಹಾ’ ಎನ್ನುತ್ತ ಆಪೋಷನವನ್ನು ಮಾಡಬೇಕು. ಪಿಧಾನವೆಂದರೆ ಮುಚ್ಚಳವೆಂತಲೂ ಅಮೃತ ಪಿಧಾನವೆಂದರೆ ಅಮೃತದ ಆವರಣವೆಂತಲೂ ಅರ್ಥ. ಈ ಆಪೋಶನದಲ್ಲಿ ಭೋಜನದ ಮೇಲೆ ಅಮೃತದ ಅವರಣವಾಗಲಿ ಎಂಬ ಆಶಯವಿದೆ. ಪೂರ್ವಾಪೋಶನವು ಭೋಜನಕ್ಕೆ ಅಮೃತದ ವೇದಿಕೆಯಾದರೆ ಉತ್ತರಾಪೋಶನವು ಭೋಜನಕ್ಕೆ ಇರಿಸುವ ಅಮೃತದ ಮುಚ್ಚಳವಾಗಿದೆ. ಹೀಗೆ ಪೂರ್ವಾಪೋಶನ ಮತ್ತು ಉತ್ತರಾಪೋಶನವೆಂಬ ಎರಡು ಅಮೃತಸ್ತರಗಳ ನಡುವೆ ನಾವು ಭುಂಜಿಸಿದ ಭೋಜನ ಅಮೃತಮಯವಾಗಲಿ ಎಂಬ ಹಾರೈಕೆ ಇಲ್ಲಿಯದು. ವಸೋರ್ಧಾರೆಯು ಹವಿಸ್ಸನ್ನು ಪೂರ್ಣವಾಗಿ ಪಚನ ಮಾಡಲು ಯಜ್ಞಾಗ್ನಿಗೆ ಸಹಾಯಕವಾಗುವಂತೆ ಉತ್ತರಾಪೋಶನವು ನಾವು ಸೇವಿಸಿದ ಭೋಜನವನ್ನು ಪಚನ ಮಾಡಲು ಜಠರಾಗ್ನಿಗೆ ನೆರವಾಗುತ್ತದೆ
*ಉದಕದಾನ :*
ಉತ್ತರಾಪೋಶನದಲ್ಲಿ ಸ್ವಲ್ಪ ನೀರನ್ನು ಕುಡಿದು ಉಳಿದುದನ್ನು ಉಂಡ ಎಲೆಯ ಎಡತುದಿಗೆ ಬಿಡುತ್ತಾ ‘ರೌರವೇ ಪೂಯನಿಲಯೇ ಪದ್ಮಾರ್ಬುದ ನಿವಾಸಿನಾಂ | ಅರ್ಥಿನಾಂ ಉದಕಂ ದತ್ತಂ ಅಕ್ಷಯ್ಯಮುಪತಿಷ್ಠತು|| ಅಂದರೆ ರೌರವಾದಿ ನರಕದ ಕೋಟ್ಯಾನುಕೋಟಿ ನಿವಾಸಿಗಳು ನೀರಿಗಾಗಿ ಪರಿತಪಿಸುತ್ತಿರುವಾಗ ಈ ನೀರನ್ನು ಕೊಡುತ್ತಿದ್ದೇನೆ. ಇದು ಅಕ್ಷಯವಾಗಲಿ. (ಪೂಯ=ಕೀವು ಪೂಯನಿಲಯ = ನರಕ ) ಈ ಉದಕದಾನವೆಂಬುದು ಮಾನಸಿಕ ಸಂಸ್ಕಾರ. ದಾನ ಮತ್ತು ಪ್ರತಿಗೃಹದ ಮೂಲ ಛಾಯೆಯನ್ನು ಇಲ್ಲಿ ಕಾಣಬಹುದು. ನಮ್ಮ ಹಿರಿಯರು ಭೋಜನ ವಿಧಿಯನ್ನೂ ಕೂಡ ಒಂದು ಯಜ್ಞವೆಂದು ಪರಿಗಣಿಸುವುದರ ಜತೆಗೆ ನಮ್ಮೀ ದೇಹಕ್ಕೆ ವೈಜ್ಞಾನಿಕ ಕ್ರಮದಲ್ಲಿ ಆಹಾರವನ್ನು ಪೂರಣಗೊಳಿಸಿ ಪಂಚಪ್ರಾಣಗಳ ಊರ್ಜೆಯನ್ನು ವೃದ್ಧಿಗೊಳಿಸಿ ತನ್ಮೂಲಕ ಆತ್ಮಶಕ್ತಿಯನ್ನು ಸದಾ ಜಾಗೃತಗೊಳಿಸುವ ಯಾಜ್ಞಿಕ ಪ್ರಕ್ರಿಯೆಯಾಗಿ ರೂಪಿಸಿದ್ದಾರೆ. ಭೋಜನವೆಂಬುದು ಹಸಿವಾದೊಡನೆ ಬರಿಯ ಉಣ್ಣುವ ಕ್ರಿಯೆಯಲ್ಲ. ಅದು ಯಾಜ್ಞಿಕ, ಯೋಗಿಕಗಳನ್ನೊಳಗೊಂಡ ಒಂದು ಸಂಸ್ಕಾರಯುತ ಪ್ರಕ್ರಿಯೆ. ನಮ್ಮ ದುಡಿಮೆಯ ಫಲವಾದ ಭೋಜನವನ್ನು ಯಜ್ಞಕರ್ಮಗಳಿಗೆ ಹೋಲಿಸಿ ಭೋಜನವಿಧಿಯನ್ನು ಇಷ್ಟೊಂದು ಕ್ಲಿಷ್ಠಗೋಸಬೇಕಿತ್ತೆ ಎಂಬ ಪ್ರಶ್ನೆಯೊಂದು ಉದ್ಭವಿಸುವುದು ಸಹಜವೆ. ನಮ್ಮ ಬದುಕಿನ ಎಲ್ಲ ಸಂಗತಿಗಳಲ್ಲೂ ನಮ್ಮ ಪೂರ್ವಜರು ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಿದ್ದರು. ಹಾಗಾಗಿ ಜೀವಧಾರಣ, ಶರೀರದ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಗಳನ್ನು ಕಾಪಾಡುವಲ್ಲಿ ಅವರು ಭೋಜನ ವಿಧಿಗೂ ಒಂದು ವೈಜ್ಞಾನಿಕ ಸೂತ್ರವನ್ನು ಅಳವಡಿಸಿದರು.
*ಭೋಜನ ವಿಧಿಯಲ್ಲಿನ ವೈಜ್ಞಾನಿಕ ತಥ್ಯಗಳು :*
ಮೊದಲಿಗೆ ಬಾಳೆಎಲೆಯ ಮೇಲೆ ಬಡಿಸುವ ಪದ್ಧತಿಯನ್ನು ಅವಲೋಕಿಸೋಣ. ಸಾಂಪ್ರದಾಯಿಕ ಭೋಜನವನ್ನು ಕುಡಿ ಬಾಳೆಲೆಯ ಮೇಲೆ ಬಡಿಸುವ ಪದ್ಧತಿ ರೂಢಿಯಲ್ಲಿದೆ. ಬಡಿಸಿರುವ ಖಾದ್ಯಗಳಲ್ಲಿ ಪ್ರಧಾನ ವ್ಯಂಜನಗಳು ಎಲೆಯ ಬಲಭಾಗದಲ್ಲೂ, ಚಟ್ನಿ, ಉಪ್ಪು, ಉಪ್ಪಿನಕಾಯಿ, ಕೋಸಂಬರಿ, ಹಪ್ಪಳ ಸಂಡಿಗೆಗಳನ್ನು ಎಲೆಯ ಎಡಭಾಗದಲ್ಲಿ ಬಳಸಲಾಗುತ್ತದೆ. ಬಾಳೆಎಲೆಯ ಅಗ್ರ(ಕುಡಿ)ಭಾಗವು ಊಟಮಾಡುವವನ ಎಡಬದಿಗಿರುವಂತೆ ಹಾಕುವ ಪದ್ಧತಿಯಲ್ಲಿ ಊಟ ಮಾಡುವವನ ಅನುಕೂಲವನ್ನು ಪರಿಗಣಿಸಲಾಗಿದೆ. ಬಾಳೆಲೆಯ ಬಲಮೇಲ್ಭಾಗದಲ್ಲಿ ಪ್ರಧಾನ ಖಾದ್ಯಗಳು, ಮಧ್ಯದಲ್ಲಿ ಸಾರು, ಹುಳಿ, ತೊವ್ವೆ ಮುಂತಾದುವುಗಳನ್ನು ಕಲಸಿ ಊಟ ಮಾಡಲು ಅನುಕೂಲವಾಗುವಂತೆ ಅನ್ನಬಡಿಸಲು ಸ್ಥಳಾವಕಾಶ, ಬಲತುದಿಯಲ್ಲಿ ಎಲೆಯ ಸೌಂದರ್ಯವನ್ನು ಹೆಚ್ಚಿಸುವ ಪಾಯಸ, ಎಡ ಬದಿಯಲ್ಲಿ ಪ್ರಧಾನ ಸಿಹಿ ಖಾದ್ಯಗಳನ್ನು ಭೋಜನ ಪ್ರಾರಂಭದಲ್ಲೇ ಬಡಿಸಲಾಗುತ್ತದೆ. ಇದರಿಂದಾಗಿ ಭೋಜನ ಯಾವ್ಯಾವ ಖಾದ್ಯಪದಾರ್ಥಗಳನ್ನು ಒಳಗೊಂಡಿದೆ, ಅದರಲ್ಲಿ ತನಗೆ ಯಾವುದು ಪ್ರಿಯ, ಯಾವುದು ವರ್ಜ ಎಂಬ ಚಿಂತನೆಯೇರ್ಪಟ್ಟು ತನಗೆ ಯಾವುದು ಇಷ್ಟವೋ ಅಷ್ಟನ್ನು ಮಾತ್ರ ಬಡಿಸುವಂತಾಗಿ ಬಡಿಸುವಿಕೆಯಲ್ಲಾಗುವ ಪೋಲನ್ನು ತಡೆಗಟ್ಟುವ ವ್ಯವಸ್ಥೆಯಿದೆ. ಭೋಜನವನ್ನು ಆತುರಪಡದೆ ಪ್ರೀತಿಯಿಂದ ಏಕಮನಸ್ಕನಾಗಿ ತಿನ್ನಬೇಕು. ಭೋಜನ ಕ್ರಿಯೆ ಯಜ್ಞವೆಂದು ಪರಿಗಣಿಸಲ್ಪಟ್ಟದ್ದರಿಂದ ಇಲ್ಲಿ ಮೌನಕ್ಕೆ ಹೆಚ್ಚಿನ ಮಹತ್ವವಿದೆ. ಮಾತಿನಮೂಲಕ ಅಭಿವ್ಯಕ್ತಗೊಳ್ಳಬಹುದಾದ ಸಿಟ್ಟು, ಅಸಹನೆ, ಅಸೂಯೆ, ಪರನಿಂದೆ, ಆತ್ಮರತಿಗಳನ್ನು ಬದಿಗಿಟ್ಟು ಅನ್ನವು ಭಗವಂತನ ಕೃಪೆಯೆಂದು ತಿಳಿದು ಅದನ್ನು ಸ್ವೀಕರಿಸಬೇಕು. ಬುದ್ಧಿಬಲವನ್ನು ಅಪೇಕ್ಷಿಸುವವನು ಸಾತ್ವಿಕ ಆಹಾರವನ್ನು, ದೇಹಬಲವನ್ನು ಹೊಂದಬೇಕಾದವನು ರಾಜಸ ಆಹಾರವನ್ನು ಭುಂಜಿಸಬೇಕು. ಹಳಸಿದ ತಂಗಳು ಮತ್ತು ಜೀರ್ಣಗೊಳ್ಳಲು ಕಷ್ಟವಾದ ಆಹಾರವು ತಾಮಸ ಪ್ರವೃತ್ತಿಯನ್ನು ಬೆಳೆಸುತ್ತದೆ. ಪಾಕಶಾಸ್ತ್ರದ ನಿಯಮಗಳಂತೆ ತಯಾರಿಸಲ್ಪಟ್ಟ ಆಹಾರವನ್ನು ಎಲೆಯ ಮೇಲೆ ವ್ಯವಸ್ಥಿತವಾಗಿ ಬಡಿಸುವುದು ಒಂದು ಕಲೆ. ಅಂತೆಯೇ ಭೋಜನವನ್ನು ಸುಂದರವಾಗಿ ಉಣ್ಣುವುದು ಒಂದು ಕಲೆ. ಭೋಜನಾನಂತರ ತಾಂಬೂಲ ಚರ್ವಣವೂ ಪಚನ ಮತ್ತು ರಸಗ್ರಹಣಕ್ಕೆ ಪೂರಕವಾಗಿ ಧಾತುಪುಷ್ಟಿ ಮತ್ತು ಮೂಳೆಗಳಿಗೆ ಶಕ್ತಿಯನ್ನು ಒದಗಿಸಿ ಬಾಯಿಗೆ ಸುವಾಸನೆಯನ್ನು ನೀಡುತ್ತದೆ. ಭುಜಿಸುವವನ ಅಪೇಕ್ಷೆಯನ್ನು ಗಮನದಲ್ಲಿರಿಸಿಕೊಂಡು ಬಡಿಸುವುದು ಮತ್ತು ತನ್ನ ಅಪೇಕ್ಷೆಯಂತೆ ಬಡಿಸಿದುದೆಲ್ಲವನ್ನು ಸ್ವೀಕರಿಸಿ ಎಲೆಯ ಮೇಲೆ ಬಡಿಸಿದ ಅಡುಗೆಯನ್ನು ಪೋಲು ಮಾಡದಿರುವುದು ಅನ್ನಕ್ಕೆ ನಾವು ನೀಡುವ ಗೌರವವಾಗಿದೆ. ಮನೆಮಂದಿಯೊಂದಿಗೆ ಕುಳಿತು ಉಣ್ಣುವುದು, ಸ್ವಾದಿಷ್ಟವಾದ ಭೋಜವನ್ನು ತಯಾರಿಸಿದ ಗೃಹಿಣಿ (ಅನ್ನಪೂರ್ಣೆ)ಯನ್ನು ಅಭಿನಂದಿಸುವುದನ್ನು ನಾವು ಮರೆಯಬಾರದು. ಹೀಗೆ ಬ್ರಾಹ್ಮಣ ಭೋಜನ ವಿಧಿಯಲ್ಲಿ ಶಾಸ್ತ್ರ, ವಿಜ್ಞಾನಗಳು ಮೇಳೈಸಿ ಅದಕ್ಕೊಂದು ಸುಂದರ ವ್ಯವಸ್ಥಿತ ರೂಪವನ್ನು ಒದಗಿಸಿವೆ.
(ವಿಷಯ ಸಂಗ್ರಹ : ವಿವಿಧ ಮೂಲಗಳಿಂದ)
Click here to Reply or Forward
|
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ