*ಪ್ರ*ಕಾಶ್ ರೈ ಎಂಬ ಮಹಾನ್ ನಟನೊಬ್ಬ ಹೇಳಿಕೆ ಕೊಟ್ಟಿದ್ದಾರೆ. ನಾನು ಉತ್ತರ ಪ್ರದೇಶ ಮುಖ್ಯಮಂತ್ರಿಗಳ ಒಂದು ವಿಡಿಯೋ ನೋಡಿದೆ. ಅದರಲ್ಲಿದ್ದದ್ದು ಚೀಫ್ ಮಿನಿಸ್ಟರೋ ಅಥವಾ ಯಾವುದಾದರೂ ದೇವಸ್ಥಾನದ ಪೂಜಾರಿಯೋ ಎಂದು ಗೊತ್ತಾಗದಷ್ಟು ಮಟ್ಟಿಗೆ ಅವರ ನಟನೆಯಿತ್ತು. ನನಗೆ 5 ರಾಷ್ಟ್ರಪ್ರಶಸ್ತಿಗಳು ಸಂದಿವೆ. ಅವರ ನಟನೆ ನೋಡಿ ಅವನ್ನು ಅವರಿಗೆ ಕೊಟ್ಟುಬಿಡೋಣ ಅನ್ನಿಸಿತು! ನಾನೊಬ್ಬ ದೊಡ್ಡ ನಟ. ರಾಜಕಾರಣಿಗಳು ನನಗಿಂತ ದೊಡ್ಡ ನಟನಾಗಲು ಯತ್ನಿಸುತ್ತಿದ್ದಾರೆ ಎಂಬುದು ಅವರ ಹೇಳಿಕೆ, ಅಲ್ಲ ಹಳಹಳಿಕೆ! ಪ್ರಕಾಶ್ ರೈ ನೋಡಿದ ಆ ವಿಡಿಯೋದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿಗಳು ಮಾಡಿದ್ದೇನು? ವಿಜಯದಶಮಿಯ ಪ್ರಯುಕ್ತ ಕನ್ಯಾಪೂಜೆ ಮಾಡಿದ್ದರು; ಒಂದು ಪುಟ್ಟ ಹುಡುಗಿಯ ಕಾಲು ತೊಳೆದು ಆಕೆಯನ್ನು ಗೊಂಬೆಯಂತೆ ಕೂರಿಸಿ ಆರತಿ ಎತ್ತಿದ್ದರು, ಅಷ್ಟೆ!
ಹಿಂದೂ ಸಂಪ್ರದಾಯಗಳ ಬಗ್ಗೆ ಸ್ವಲ್ಪವಾದರೂ ತಿಳಿದುಕೊಂಡಿದ್ದರೆ ಈ ಮಹಾನ್ ನಟನಿಗೆ ಕನ್ನಿಕೆಪೂಜೆ ಅಥವಾ ಕನ್ಯಾಪೂಜೆ ಎಂಬುದು ವಿಚಿತ್ರ ಸಂಪ್ರದಾಯವೇನೂ ಅಲ್ಲ; ನಮ್ಮ ಮನೆಮನೆಗಳಲ್ಲಿ ಮಾಡುವ ಒಂದು ಆಚರಣೆ ಎಂದು ತಿಳಿದುಹೋಗುತ್ತಿತ್ತು. ಆದರೆ ಮನ್ನಣೆಯ ದಾಹ ಉಳಿದೆಲ್ಲ ದಾಹಕ್ಕಿಂತ ತೀಕ್ಷ್ಣವಾಗಿ ಎದೆ ಸುಡಲು ಹತ್ತುತ್ತದೆ ನೋಡಿ, ಆಗ ಇಂಥ ಎಡಬಿಡಂಗಿ ಹೇಳಿಕೆಗಳನ್ನು ಕೊಟ್ಟಾದರೂ ನಾಲ್ಕು ಜನರ ಕಣ್ಣಿಗೆ ಬೀಳಬೇಕು, ನಾಲ್ಕು ದಿನದ ಪ್ರಚಾರ ಗಿಟ್ಟಿಸಬೇಕು, ಆ ಮೂಲಕ ಗಂಜಿಕೇಂದ್ರದಿಂದ ನಾಲ್ಕು ದಿನದ ಗಂಜಿ ಸಂಪಾದಿಸಿ ಹೊಟ್ಟೆ ಹೊರೆಯಬೇಕೆಂಬ ಹಪಹಪಿ ಹುಟ್ಟುತ್ತದೆ. ತಾನೊಬ್ಬ ದೊಡ್ಡ ನಟ, ಇಡೀ ದೇಶವೇ ತನ್ನ ಪಾದದ ಧೂಳಿಯನ್ನು ತಲೆಗೆ ಸಿಂಧೂರದಂತೆ ಮೆತ್ತಿಕೊಳ್ಳುತ್ತದೆ ಎಂಬ ಅಹಮಿಕೆಯ ಅಮಲು ತಲೆಗೇರಿಸಿಕೊಂಡಿರುವ ಪ್ರಕಾಶ್ ರೈ ಅರ್ಥ ಮಾಡಿಕೊಳ್ಳಬೇಕಾದ್ದು ಏನೆಂದರೆ – ಇವರೊಬ್ಬ ಕೇವಲ ನಟ ಅಷ್ಟೆ! ನಿರ್ದೇಶಕ ಹೇಳಿಸಿದ ಡೈಲಾಗ್ಗಳನ್ನು ತುಟಿಗಳಿಂದ ಉದುರಿಸಿ, ಕ್ಯಾಮೆರಾ ಎದುರು ತನ್ನ ನಟನಾ ಪ್ರದರ್ಶನ ಮಾಡಿ ಹೊಟ್ಟೆ ಹೊರೆಯುವ ಕೇವಲ ನಟ. ಆನೆಯಂತೆ ಹೊಟ್ಟೆ ಉಬ್ಬರಿಸಿಕೊಳ್ಳಲು ಹೋದರೆ ಹೇಗೆ ಕಪ್ಪೆಯ ಪೃಷ್ಟ ಇಬ್ಭಾಗವಾದೀತೋ ಹಾಗೆ ಕ್ಯಾಮೆರಾ ಎದುರು ಹುಲಿಯಾದ ಮಾತ್ರಕ್ಕೆ ತಾನು ನಿಜವಾದ ಹುಲಿ, ಹಿಂದೂ ಸಂಪ್ರದಾಯಗಳನ್ನು ಹಿಗ್ಗಾಮುಗ್ಗಾ ಹೀಯಾಳಿಸಲು ಅರ್ಹತೆ ಪಡೆದಿದ್ದೇನೆಂದು ಪ್ರಕಾಶ್ ರೈ ಭಾವಿಸಿದರೆ ಹಾಸ್ಯಾಸ್ಪದರಾಗುತ್ತಾರೆ.
ಇದು ಪ್ರಕಾಶ್ ರೈಯಂಥ ಒಬ್ಬ ಎಡಬಿಡಂಗಿಯ ಕತೆಯಲ್ಲ. ಕನ್ನಡದ ಹೆಸರಾಂತ ವಿಜ್ಞಾನ ಲೇಖಕ ನಾಗೇಶ್ ಹೆಗಡೆಯವರು ಇತ್ತೀಚೆಗೆ ಹಲವು ವಿಷಯಗಳಿಗಾಗಿ ಸುದ್ದಿಯಲ್ಲಿದ್ದರು. ಆಯುಧಪೂಜೆಗೆ ಕುಂಬಳಕಾಯಿ ಒಡೆಯಬಾರದು, ಅದರಿಂದ ಪರಿಸರನಾಶ ಆಗುತ್ತದೆ ಎಂಬುದು ಅವರ ಇತ್ತೀಚಿನ ಕಾಳಜಿ. ನಾಗೇಶ್ ಹೆಗಡೆ ಮತ್ತು ಅವರಂಥ ಕೆಲವು ಕಮ್ಯುನಿಸ್ಟ್ ಚಿಂತಕರು ವರ್ಷದಲ್ಲಿ ಒಂದಷ್ಟು ಸಲ ಪತ್ರಿಕೆ, ಜಾಲತಾಣದಂಥ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ನಾಗರಪಂಚಮಿಗೆ ಹಾಲೆರೆಯಬೇಡಿ, ಅದೇ ಹಾಲನ್ನು ಬಡಮಕ್ಕಳಿಗೆ ಕುಡಿಸಿ; ದೀಪಾವಳಿಗೆ ಪಟಾಕಿ ಹೊಡೆಯಬೇಡಿ; ತುಳಸೀಪೂಜೆಗೆ ಬಾಳೆದಿಂಡು ಕಟ್ಟಬೇಡಿ; ಆಯುಧಪೂಜೆಗೆ ಸ್ಕೂಟರಿಗೆ ಹಾರ ಹಾಕಬೇಡಿ.. ಹೀಗೆ ಹಿಂದೂ ಹಬ್ಬಗಳು ಯಾವಾಗೆಲ್ಲ ನಡೆಯುತ್ತವೋ ಆವಾಗ ತಪ್ಪದೆ ಕಾಣಿಸಿಕೊಂಡು ಪುಂಖಾನುಪುಂಖವಾಗಿ ಆಣಿಮುತ್ತುಗಳನ್ನು ಉದುರಿಸುತ್ತಾರೆ.
ಹಬ್ಬದ ದಿನ ಮನೆಬಾಗಿಲಿಗೆ ತೋರಣ ಕಟ್ಟಬೇಡಿ, ಅದರಿಂದ ನಮ್ಮ ದೇಶದಲ್ಲಿ ಅರಣ್ಯನಾಶವಾಗುತ್ತಿದೆ ಎಂದು ಈ ವಿಜ್ಞಾನ ಚಿಂತಕರು ಹೇಳುವ ದಿನವೂ ಹತ್ತಿರವೇ ಇರಬಹುದು! ದೀಪಾವಳಿಗಷ್ಟೇ ವಾಯುಮಾಲಿನ್ಯ, ಶಬ್ದಮಾಲಿನ್ಯ ನೆನಪಾಗುವ ಇವರಿಗೆ ಹೊಸ ವರ್ಷದ ಸಂದರ್ಭದಲ್ಲಿ ಅನ್ಯಮತೀಯರು ಹೊಡೆಯುವ ಪಟಾಕಿ ಬಹುಶಃ ಕರ್ಣಾನಂದ ಮಾಡುತ್ತದೇನೋ! ನವರಾತ್ರಿಗೆ ಕುಂಬಳಕಾಯಿ ಒಡೆಯಬೇಡಿ ಎನ್ನುವ ಜೀವಪರ ಬುದ್ಧಿಜೀವಿಗಳು ಬಕ್ರೀದ್ ಹಬ್ಬಕ್ಕೆ ಕುರಿ-ಆಡು ಕಡಿಯಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದನ್ನು ಯಾರಾದರೂ ನೋಡಿದ್ದೀರಾ? ಈ ಬುದ್ಧಿಜೀವಿಗಳ ಎಲ್ಲ ಟೀಕೆಗಳೂ ಹಿಂದೂ ಆಚರಣೆ, ಸಂಪ್ರದಾಯ, ಹಬ್ಬ, ಸಂಸ್ಕೃತಿಯ ಸುತ್ತವೇ. ಯಾಕೆ ಹೀಗೆ? ಕಾರಣವಿದೆ!
ನೀವು ಯಾವುದೇ ದೇಶಕ್ಕೆ ಹೋಗಿ; ಆಯಾ ದೇಶದ ನಾಗರಿಕರು ತಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಎತ್ತಿತೋರಿಸುವ ಕೆಲಸ ಮಾಡುತ್ತಾರೆ. ಆ ಮೂಲಕ, ತಾವೂ ಬಹಳ ಶ್ರೀಮಂತ ಸಂಸ್ಕೃತಿಯ ವಾರಸುದಾರರು ಎಂಬುದನ್ನು ಪ್ರವಾಸಿಗಳೆದುರು ಸಾರಿ ಸಾರಿ ಹೇಳುತ್ತಾರೆ. ಯುರೋಪ್ನ ಕೆಲವು ದೇಶಗಳಿಗೆ, ಅಮೆರಿಕಾ ಖಂಡದ ಕೆಲವು ಪ್ರಾಂತ್ಯಗಳಿಗೆ ಹಾಗೆ ಹೇಳಿಕೊಳ್ಳಲು ಯಾವ ಪುರಾತನ ಇತಿಹಾಸವೂ ಇಲ್ಲ. ಹಾಗಿದ್ದರೂ ಅವರು ತಮ್ಮಲ್ಲಿ ಏನೇನು ಪ್ರಾಚೀನವಾದದ್ದು ಸಿಕ್ಕಿದೆಯೋ ಅವನ್ನು ಕಾಪಿಟ್ಟಿದ್ದಾರೆ. ಮ್ಯೂಸಿಯಂಗಳಲ್ಲಿಟ್ಟು ಜಗತ್ತಿಗೆ ತೋರಿಸುವ ಕೆಲಸ ಮಾಡಿದ್ದಾರೆ. ಲ್ಯಾಟಿನ್ ಅಮೆರಿಕಾದಲ್ಲಿ ಇಂಕಾ, ಅಜೆಟಿಕ್ ಮುಂತಾದ ನಾಗರಿಕತೆಗಳ ಸಂಬಂಧವಿರುವ ಜನರನ್ನು ಹುಡುಕಿ ಬೆಳಕಿಗೆ ತರುತ್ತಾರೆ. ತಮ್ಮ ಪೂರ್ವಜರು ಹೇಗೆ ಪೋಷಾಕು ತೊಡುತ್ತಿದ್ದರು, ಹೇಗೆ ವ್ಯವಹರಿಸುತ್ತಿದ್ದರು ಎಂಬುದನ್ನೆಲ್ಲ ಆ ಜನರಿಗೆ ದುಡ್ಡುಕೊಟ್ಟು ಮಾಡಿಸಿ ನೋಡಿ ಖುಷಿಪಡುತ್ತಾರೆ.
ನೀರಿನ ಪಸೆ ಇಲ್ಲದ ಮರುಭೂಮಿಯಲ್ಲಿ ಸನಿಕೆ-ಗುದ್ದಲಿ ಹಿಡಿದು ಬೆವರು ಸುರಿಸುತ್ತ ಅಗೆಯುತ್ತಿರುವಂತೆ ಅವರು ಕಂಡರೆ, ನನಗೆ, ನಮ್ಮವರು ಅಗಾಧ ಅಂತರ್ಜಲ ರಾಶಿಯ ಮೇಲೆ ನಿಂತರೂ ಬಾವಿ ಅಗೆಯಲು ಸಲಕರಣೆಗಳಿಲ್ಲದೆ ಅಸಹಾಯರಾಗಿ ನಿಂತವರಂತೆ ಕಾಣುತ್ತಾರೆ. ದುರಂತವೆಂದರೆ ನಮಗೆ ಬಾವಿ ಅಗೆಯುವ ಹತ್ಯಾರಗಳಿಲ್ಲದ ಬಗ್ಗೆ ದುಃಖವೂ ಇದ್ದಂತಿಲ್ಲ; ನಮ್ಮ ಕಾಲ ಕೆಳಗಿರುವ ಜಲರಾಶಿಯ ಅಗಾಧತೆಯ ಕಲ್ಪನೆಯೂ ಇದ್ದಂತಿಲ್ಲ. ಬನ್ನಂಜೆ ಗೋವಿಂದಾಚಾರ್ಯರು ಹೇಳುವಂತೆ ಇರವು ಸಂಪತ್ತಲ್ಲ, ಇರವಿನ ಅರಿವು ಸಂಪತ್ತು. ನಮ್ಮವರಿಗೆ ಇರುವುದೂ ತಿಳಿದಿಲ್ಲ; ಇರುವುದು ತಿಳಿದಿಲ್ಲವೆಂಬ ದುಃಖವೂ ಇಲ್ಲ! ಇಂಥ ಸ್ಥಿತಿಯಲ್ಲಿರುವ ನಮಗೆ ಭವಿಷ್ಯ ಇದೆಯೇ? ಆತಂಕವಾಗುತ್ತದೆ.
ಜಗತ್ತಿನಲ್ಲಿರುವ ಎಲ್ಲ ನಾಗರಿಕತೆಗಳ ಪೈಕಿ ಕನಿಷ್ಠ ಎರಡು ಸಾವಿರ ವರ್ಷಗಳಿಂದ ಯಾವುದೇ ಕಡಿತ/ಡಿಸ್ಕನೆಕ್ಟ್ ಇಲ್ಲದೆ ನಿರಂತರವಾಗಿ ಅಸ್ತಿತ್ವದಲ್ಲಿದ್ದು ಉಳಿದುಬಂದಿರುವ ಏಕೈಕ ನಾಗರಿಕತೆ ಎಂದರೆ ಅದು ಭಾರತದ ನಾಗರಿಕತೆ. 1922ರಲ್ಲಿ ಬ್ರಿಟಿಷ್ ಅಧಿಕಾರಿಗಳು ಹರಪ್ಪಾ, ಮೊಹೆಂಜೋದಾರೋಗಳಲ್ಲಿ ನೆಲ ಅಗೆದು, ಉತ್ಖನನ ಮಾಡಿ, ಇಲ್ಲೊಂದು ಪ್ರಾಚೀನ ನಗರ ವ್ಯವಸ್ಥೆ ಇತ್ತು ಎಂದರು. ಅದನ್ನು ಉಳಿದವರು ಸಿಂಧೂ ನದಿಯ ನಾಗರಿಕತೆ ಎಂದು ಗುರುತಿಸಿದರು. ಆದರೆ ನಿಜಕ್ಕೂ ಅಂಥದೊಂದು ನಾಗರಿಕತೆ ಸಾವಿರ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದು ಆಮೇಲೆ ಅಳಿದುಹೋಯಿತೇ? ಹಾಗೇನೂ ಆಗಲಿಲ್ಲ. ಸಿಂಧೂ ನದಿ ಮತ್ತದರ ಉಪನದಿಗಳ ಅಕ್ಕಪಕ್ಕದಲ್ಲಿ ವಾಸ್ತವ್ಯವಿದ್ದ ಜನ ಕಾಲಕ್ರಮೇಣ ಹಲವು ಪ್ರದೇಶಗಳಿಗೆ ಚದುರಿಹೋದರು. ಇಡೀ ದೇಶ ಆಗ ಸಂಸ್ಕೃತ ಮತ್ತು ಅದರ ಅಪಭ್ರಂಶಗಳನ್ನು ಮಾತಾಡುತ್ತಿತ್ತು. ರಾಮಾಯಣ, ಮಹಾಭಾರತಗಳಂಥ ಕಾವ್ಯಗಳ ರಚನೆಯಾಯಿತು. ಆ ಕಾವ್ಯಗಳೇ ಮುಂದೆ ನೂರಾರು ಇತರ ಸಾಹಿತ್ಯಕೃತಿಗಳ ಹುಟ್ಟಿಗೆ ಕಾರಣವಾದವು. ಭಾರತೀಯರು ಪ್ರಕೃತಿಯ ಆರಾಧಕರಾದರು. ಮನೆಮುಂದಿನ ಗಿಡಬಳ್ಳಿಗಳಿಂದ ಹಿಡಿದು ಬೆಟ್ಟ, ನದಿ, ಭೂಮಿ, ಸೂರ್ಯ, ನಕ್ಷತ್ರಗಳವರೆಗೆ ಎಲ್ಲವನ್ನೂ ಆರಾಧಿಸಿದರು, ಪ್ರೀತಿಸಿದರು, ಇದು ನಮ್ಮದು ಎಂದರು.
ನಾನು ಪ್ರಪಂಚದ ಒಂದು ಭಾಗ; ಹೇಗೆ ನಾನು ಪ್ರಪಂಚಕ್ಕೆ ಸೇರಿದ್ದೇನೆಯೋ ಹಾಗೆಯೇ ಪ್ರಪಂಚದ ಸಮಸ್ತವೂ ನನಗೆ ಸೇರಿದೆ ಎಂಬ ಸಮಷ್ಟಿ ಪ್ರಜ್ಞೆಯನ್ನು ಪ್ರತಿ ಭಾರತೀಯ ಬೆಳೆಸಿಕೊಂಡ. ಭಾರತದ ಈ ನೆಲ ಯಾವತ್ತೂ ಓರ್ವ ಸರ್ವಾಧಿಕಾರಿಯಂಥ ದೇವರನ್ನು ಆತುಕೊಳ್ಳಲಿಲ್ಲ. ಯಾರೋ ಒಬ್ಬ ಬೆಟ್ಟದ ಮೇಲೆ ಹೋಗಿ ಕಟ್ಟಳೆಗಳ ಕಟ್ಟನ್ನು ಹೊತ್ತು ತರುತ್ತಾನೆ, ಅವನು ಹೇಳಿದಂತೆ ಉಳಿದೆಲ್ಲ ಜನ ಬದುಕಬೇಕು ಎಂಬ ಪಾರತಂತ್ರ್ಯವನ್ನು ಭಾರತ ಎಂದೂ ಒಪ್ಪಿಕೊಳ್ಳಲಿಲ್ಲ. ಕತ್ತಿಯ ಮೊನೆಯನ್ನು ಗಂಟಲಿನ ನಾಳಕ್ಕೆ ಒತ್ತಿಟ್ಟು ಮತಪ್ರಚಾರ ಮಾಡುವ ಕ್ರಮ ಈ ನೆಲದಲ್ಲಿ ಹುಟ್ಟಲೇ ಇಲ್ಲ. ಭಾರತದ ಸಂಸ್ಕೃತಿ ರೂಪುಪಡೆದದ್ದು ಇಲ್ಲಿನ ಜನರ ಆರಾಧನಾ ಮನೋಭಾವದ ಮೂಲಕ. ಜಗತ್ತಿನಲ್ಲಿರುವುದನ್ನೆಲ್ಲ ಪ್ರೀತಿಸುವುದರ ಮೂಲಕ. ನಮ್ಮ ಎಲ್ಲ ಹಬ್ಬಗಳ ಆಳದಲ್ಲಿರುವುದು ಆನಂದದ ಪ್ರಸಾರ, ಅಷ್ಟೆ. ಭಾರತದ ಸಂಸ್ಕೃತಿ ಎಂದರೆ ಹಬ್ಬಗಳ ಸಂಸ್ಕೃತಿ.
ಬೀಜ ಬಿತ್ತಿದ್ದಕ್ಕೊಂದು ಹಬ್ಬ, ಮಳೆ ಬಂದದ್ದಕ್ಕೊಂದು ಹಬ್ಬ, ಕೊಯ್ಲಾದದ್ದಕ್ಕೊಂದು ಹಬ್ಬ, ಇಡೀ ವರ್ಷದ ಬೇಸಾಯದ ಕೆಲಸಗಳೆಲ್ಲ ಮುಗಿದ ಮೇಲಂತೂ ಹಬ್ಬಗಳ ಮೆರವಣಿಗೆಯೇ! ಹೀಗೆ ಖುಷಿಯಾಗಿದ್ದ ಸಮಾಜಕ್ಕೆ ಒಂದು ಗಾಡ್, ಒಂದು ರಿಲಿಜನ್ ಬೇಕಾಗಲಿಲ್ಲ. ರಿಲಿಜನ್ ಇಲ್ಲದೇ ಇದ್ದಮೇಲೆ ಮತಪ್ರಚಾರ, ಮತಾಂತರ, ರಾಜ್ಯವಿಸ್ತರಣೆ ಕೂಡ ಇಲ್ಲ ತಾನೇ? ಮನುಷ್ಯನ ಜೀವಿತದ ಮೂಲಭೂತ ಉದ್ದೇಶವೇ ಆನಂದವಾಗಿರುವುದು, ಆನಂದವನ್ನು ಪಡೆಯುವುದು, ಇರುವುದರಲ್ಲಿ ತೃಪ್ತಿಯಿಂದಿದ್ದು ಪ್ರಕೃತಿಯ ಜತೆ ಸಹಜೀವನ ನಡೆಸುವುದು. ಪ್ರಕೃತಿ ನಮಗೆ ಕೊಟ್ಟದ್ದಕ್ಕೆ ಪ್ರತಿಯಾಗಿ ನಾವೂ ಪ್ರಕೃತಿಗೆ ಸಾಧ್ಯವಾದಷ್ಟನ್ನು ಮರಳಿಕೊಟ್ಟು ಈ ಭೂಮಿಯ ಋಣ ತೀರಿಸುವುದು. ಬಹುಶಃ ಪ್ರಪಂಚದ ಜೊತೆ ಇಷ್ಟೊಂದು ತಾದಾತ್ಮ್ಯ ಸಾಧಿಸಿದ ಬೇರೆ ಧರ್ಮವಾಗಲೀ ಜನಾಂಗವಾಗಲೀ ಜಗತ್ತಿನ ಎಲ್ಲೂ ಇಲ್ಲ.
ಪ್ರಪಂಚದ ಎಲ್ಲ ನಾಗರಿಕತೆಗಳೂ ನಿರ್ನಾಮವಾಗಿ ರಿಲಿಜನ್ಗಳು ಹಬ್ಬಿ ಬೆಳೆದರೂ ಭಾರತದಲ್ಲಿ ಅವುಗಳಿಗೆ ತಕ್ಕಷ್ಟು ಪ್ರಮಾಣದಲ್ಲಿ ಹಬ್ಬಲು ಆಗಲಿಲ್ಲ. ಭಾರತದ ಸಂಸ್ಕೃತಿಯನ್ನು ಒಡೆಯಲು ಈ ರಿಲಿಜನ್ನುಗಳು ಮಾಡಿದ ಪ್ರಯತ್ನಗಳಾದರೂ ಎಷ್ಟು! ಒಂದು ರಿಲಿಜನ್ ಕತ್ತಿ ಇರಿದು ಇಲ್ಲಿನ ದೇವಸ್ಥಾನಗಳನ್ನೆಲ್ಲ ನೆಲಸಮ ಮಾಡಲು ಹೊರಟರೆ ಇನ್ನೊಂದು ತನ್ನ ಪ್ರವಾದಿಗೇ ಪಟ್ಟೆಪೀತಾಂಬರ ಉಡಿಸಿ ಅರ್ಜುನನ ಬೆನ್ನ ಹಿಂದೆ ನಿಲ್ಲಿಸಿ ಗೀತೋಪದೇಶ ಹೇಳಿಸಿತು! ಆದರೆ ಏನೇನು ಸರ್ಕಸ್ಸು ಮಾಡಿದರೂ ಭಾರತದಲ್ಲಿ ಆಳವಾಗಿ ಬೇರೂರಿದ್ದ ಹಬ್ಬಗಳ, ಬಹುಸಂಖ್ಯಾತ ದೈವದೇವರುಗಳ ಸಂಸ್ಕೃತಿಯನ್ನು ಮಾತ್ರ ಅಳಿಸಲು ಆಗಲಿಲ್ಲ. ಆಗ ಅವುಗಳ ನೆರವಿಗೆ ಬಂದದ್ದು ಕಮ್ಯುನಿಸಂ ಎಂಬ ಮೂರನೆಯ ವಿಷಬೀಜ. ತಮಾಷೆ ನೋಡಿ, ಯುರೋಪಿನಲ್ಲಿ ಹಾವು-ಮುಂಗುಸಿಗಳಂತೆ ಕಚ್ಚಾಡುವ ರಿಲಿಜನ್ನುಗಳು ಮತ್ತು ಕಮ್ಯುನಿಸಂ ಪಕ್ಷಗಳಿಗೆ ಭಾರತದಲ್ಲಿ ಗಳಸ್ಯ ಕಂಠಸ್ಯ! ಹೊರದೇಶಗಳಲ್ಲಿ ಚರ್ಚಿನ ವಿರುದ್ಧ ಸೆಟೆದು ನಿಂತವನು ಸೆಕ್ಯುಲರ್ ಎಂದು ಕರೆಸಿಕೊಂಡರೆ ಭಾರತದಲ್ಲಿ ಕ್ರಿಶ್ಚಿಯಾನಿಟಿಯ ಪರವಾಗಿ ಮಾತಾಡುವವನು ಸೆಕ್ಯುಲರ್!
ನಾನು ಮಾನಸಿಕವಾಗಿ ಮುಸಲ್ಮಾನ. ಆದರೆ ಹಿಂದೂ
ಕುಟುಂಬದಲ್ಲಿ ಆಕಸ್ಮಿಕವಾಗಿ ಹುಟ್ಟಿದ ಏಕೈಕ ಕಾರಣಕ್ಕೆ ನಾನೊಬ್ಬ ಹಿಂದೂ ಎಂದು ಹೇಳಿಕೊಂಡಿದ್ದ ನೆಹರೂ ಮನಃಪೂರ್ವಕವಾಗಿ ಇಸ್ಲಾಂ ಅನ್ನು ಬೆಳೆಸಿದರು; ಸೆಕ್ಯುಲರ್ ಆಗಿ ಕ್ರಿಶ್ಚಿಯಾನಿಟಿಯ ಮರಕ್ಕೆ ನೀರೆರೆದರು ಮತ್ತು ಸೋವಿಯೆಟ್ ರಷ್ಯದ ಗುಲಾಮನಂಥ ಸ್ನೇಹಿತನಾಗಿ ಈ ದೇಶದಲ್ಲಿ ಕಮ್ಯುನಿಸಂನ ಕಳೆ ಹುಲುಸಾಗಿ ಹಬ್ಬಲು ಬೇಕಾದ ಗೊಬ್ಬರ ಒದಗಿಸಿದರು. ಹೀಗಾಗಿ ನೆಹರೂ ಕಾಲದಲ್ಲಿ ಭಾರತದಲ್ಲಿ ಇಸ್ಲಾಂ, ಕ್ರಿಶ್ಚಿಯಾನಿಟಿ ಮತ್ತು ಕಮ್ಯುನಿಸಂ ಎಂಬ ಮೂರು ರಿಲಿಜನ್ಗಳು ತಡೆಯಿಲ್ಲದಂತೆ ಹಬ್ಬಿದವು. ಹಿಂದೂಗಳನ್ನು ಅವರ ದೇವರುಗಳ ಅಪ್ಪುಗೆಯಿಂದ ಬಿಡಿಸಿ ಹೊರತರುವ ಕೆಲಸವನ್ನು ಕಮ್ಯುನಿಸಂ ಮಾಡಿದರೆ, ಹಾಗೆ ಹಿಂದೂ ಆಗಿದ್ದಕ್ಕೆ ಕೀಳರಿಮೆ ಬೆಳೆಸಿಕೊಂಡವರನ್ನು ತಮ್ಮತ್ತ ಸೆಳೆದು ತಮ್ಮ ಜನಸಂಖ್ಯೆ ಹೆಚ್ಚಿಸಿಕೊಳ್ಳುವ ಹಂಚಿಕೆಯನ್ನು ಉಳಿದೆರಡು ರಿಲಿಜನ್ನುಗಳು ಹಾಕಿದವು.
ಭಾರತದ 130 ಕೋಟಿ ಜನಸಂಖ್ಯೆಯಲ್ಲಿ 100 ಕೋಟಿ ಜನ ಹಿಂದೂಗಳೇ ಇದ್ದಾರೆ. ಹಾಗಿದ್ದಾಗ್ಯೂ ಈ ದೇಶದಲ್ಲಿ ಪ್ರತಿದಿನ ದಿನಪತ್ರಿಕೆ ತೆರೆದು ನೋಡಿದರೂ ನಮಗೆ ಕಾಣುವುದು ಹಿಂದೂ ದೇವತೆಗಳ ಹೀಯಾಳಿಕೆ, ಹಿಂದೂ ಆಚರಣೆಗಳ ಅಪಹಾಸ್ಯ, ಹಿಂದೂ ಹಬ್ಬಗಳ ದೂಷಣೆ. ಜರ್ಮನಿಯಲ್ಲಿ ಕ್ಯಾಥೊಲಿಕರು ಅಲ್ಪಸಂಖ್ಯಾತರು; ಆದರೂ ಅದೊಂದು ಕ್ಯಾಥೊಲಿಕ್ ದೇಶ. ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಆ ದೇಶದ ಮುಸಲ್ಮಾನರೇ ಅಲ್ಪಸಂಖ್ಯಾತರು; ಆದರೂ ಅದೊಂದು ಇಸ್ಲಾಮೀ ರಾಷ್ಟ್ರ. ನೂರು ಕೋಟಿ ಹಿಂದೂಗಳಿರುವುದರಿಂದ ಭಾರತವನ್ನು ಹಿಂದೂ ರಾಷ್ಟ್ರ ಎಂದು ಸರಕಾರ ಘೋಷಿಸಲಿ – ಎನ್ನಿ; ಈ ದೇಶದ ಬುದ್ಧಿಜೀವಿಗಳು, ಪ್ರಗತಿಪರರು, ಸೆಕ್ಯುಲರುಗಳು ನಿಮ್ಮನ್ನು ಬರ್ಬರವಾಗಿ ಹತ್ಯೆ ಮಾಡಿದರೂ ಮಾಡಿಯಾರೇ! ವಿಚಿತ್ರ ಎಂದರೆ ಈ ದೇಶದ ಬಹುಸಂಖ್ಯಾತನಾಗಿಯೂ ಹಿಂದೂ ತನ್ನ ಮೇಲಾಗುತ್ತಿರುವ ಎಲ್ಲ ದಬ್ಬಾಳಿಕೆಯನ್ನೂ ಸಹಿಸಿಕೊಳ್ಳುತ್ತಿದ್ದಾನೆ.
ತನ್ನ ದೇವರನ್ನು ಅನ್ಯರು ದೂಷಿಸಿದರೆ ಇರಬಹುದೋ ಏನೋ ಎನ್ನುತ್ತಾನಾತ. ತನ್ನ ಹಬ್ಬಗಳು ಅವೈಜ್ಞಾನಿಕ ಎಂದು ಪ್ರಗತಿಪರರು ವಾದಿಸಿದರೆ ಅದೂ ನಿಜವಿದ್ದೀತು ಎಂಬ ಸಂಶಯ ಅವನಿಗೆ ಮೂಡುತ್ತದೆ. ಯಾಕೆ ಹಾಗೆ ತಲೆಯಿಲ್ಲದ ಕೋಳಿಯ ಸ್ಥಿತಿಗೆ ಆತ ಬಂದಿದ್ದಾನೆಂದರೆ ಕಳೆದ ಎಪ್ಪತ್ತು ವರ್ಷಗಳಿಂದ ಆತನಿಗೆ ಕೂತಲ್ಲಿ ನಿಂತಲ್ಲಿ ಆತನ ಧರ್ಮದ ಬಗ್ಗೆ ಕೆಟ್ಟದನ್ನೇ ಹೇಳಿಕೊಂಡು ಬರಲಾಗಿದೆ. ಹಿಂದೂ ಎಂಬುದು ಅನಾಗರಿಕ ಸಮಾಜ, ಅಲ್ಲಿರುವುದೆಲ್ಲ ಮೂಢನಂಬಿಕೆಗಳು, ಅವರ ಆಚರಣೆಗಳು ಅರ್ಥಹೀನ, ಅವರ ದೇವತೆಗಳು ನಿಜವಾಗಿಯೂ ದೈವಿಕರಲ್ಲ ರಾಕ್ಷಸರು, ಮೂರ್ತಿಪೂಜೆಯೆಂಬುದು ಬೌದ್ಧಿಕ ದಿವಾಳಿತನದ ಸಂಕೇತ, ಹಿಂದೂ ಹಬ್ಬಗಳಿಗೆ ಅರ್ಥವಿಲ್ಲ ಎಂದು ಸಾಲುಸಾಲು ಋಣಚಿಂತನೆಗಳನ್ನು ನಿರಂತರವಾಗಿ ಹೇಳಿ ಹಿಂದೂ ತನ್ನ ಹುಟ್ಟಿನ ಬಗ್ಗೆ, ತನ್ನ ಸಮಾಜದ ಬಗ್ಗೆಯೇ ಅಸಹ್ಯ ಪಡುವಂತೆ ಮಾಡಲಾಗಿದೆ. ಹೀಗೆ ಹೇಳಿಕೊಂಡು ಬಂದವರು ಕೆಲವೇ ಕೆಲವು ಮಂದಿ. ಆದರೆ ಅವರೆಲ್ಲ ಈ ದೇಶದ ಪಾಲಿಸಿ ಮೇಕಿಂಗ್ ಸ್ತರದಲ್ಲಿರುವವರು, ಪ್ರಭಾವಶಾಲಿಗಳು, ಈ ದೇಶದ ಕೋಟ್ಯಂತರ ವಿದ್ಯಾರ್ಥಿಗಳ ತಲೆಗೆ ವಿಷ ತುಂಬಿಸುವ ಸಾಮರ್ಥ್ಯವಿರುವ ಅಕಾಡೆಮಿಕ್ ಮಂದಿ ಎಂಬುದೇ ದುರಂತ.
ಹೀಗೆ ಈ ದೇಶದಲ್ಲಿ ಬೆರಳೆಣಿಕೆಯಷ್ಟು ಮಂದಿ ತಮ್ಮ ಹುದ್ದೆ, ಪ್ರಭಾವ ಬಳಸಿ ಹಿಂದೂಗಳ ಆತ್ಮಾಭಿಮಾನ ಕುಂದಿಸುವಂಥ ಪಠ್ಯಗಳನ್ನು ಬರೆದು ಬಲವಂತವಾಗಿ ಓದಿಸಿದರು. ಹಿಂದೂಗಳು ಅವನ್ನು ಓದಿ ತಮ್ಮ ಹುಟ್ಟಿನ ಬಗ್ಗೆಯೇ ಅಸಹ್ಯಪಡುವ ಹಂತಕ್ಕೆ ಇಳಿಯತೊಡಗಿದರು. ಇಂದಿನ ಹಿಂದೂ ಯುವಕನಿಗೆ ಪೂಜೆ ಯಾಕೆ ಮಾಡಬೇಕು ಗೊತ್ತಿಲ್ಲ. ದೇವಸ್ಥಾನಗಳ ಜಾತ್ರೆಯಲ್ಲಿ ಆಸಕ್ತಿ ಇಲ್ಲ. ಭಾರತೀಯವಾದ ಶಿಲ್ಪ, ಸಂಗೀತ, ಸಾಹಿತ್ಯದ ಬಗ್ಗೆ ಒಲವಿಲ್ಲ. ಯಾಕೆಂದರೆ ಅಂಥ ಆಸಕ್ತಿ ಮೂಡಿಸಬಹುದಾಗಿದ್ದ ಸಂಸ್ಕೃತವನ್ನು ಅವನಿಂದ ಮಾರುದೂರ ಇಡಲಾಯಿತು. ಸಂಸ್ಕೃತ ಕಲಿವವರು ಪುರೋಹಿತಶಾಹಿಗಳು, ವೈದಿಕ ಮನಸ್ಥಿತಿಯ ಕೋಮುವಾದಿಗಳು ಎಂದು ಹೇಳಲಾಯಿತು. ಒಟ್ಟಲ್ಲಿ ಹಿಂದೂ ಆದವನಿಗೆ ತನ್ನ ಭವ್ಯ ಇತಿಹಾಸದ ಯಾವೊಂದು ಅಂಶದ ಬಗ್ಗೆಯೂ ಆಸಕ್ತಿಯಾಗಲೀ ಅಭಿಮಾನವಾಗಲೀ ಮೂಡಬಾರದು ಎಂಬ ಏಕೈಕ ಹಿಡನ್ ಅಜೆಂಡಾ ಇಟ್ಟುಕೊಂಡು ಈ ದೇಶದ ಬುದ್ಧಿಜೀವಿಗಳು ಕೆಲಸ ಮಾಡಿದರು. ಅದರ ಮುಂದುವರಿದ ಭಾಗವಾಗಿ ಇಂದು ನಮ್ಮಲ್ಲಿ ಬರ್ಖಾ ದತ್, ಪ್ರಕಾಶ್ ರೈ, ನಾಗೇಶ ಹೆಗಡೆ, ಶಬಾನಾ ಅಜ್ಮಿ, ದೇವದತ್ತ ಪಟ್ನಾಯಕ್, ಜಿ.ಎನ್. ನಾಗರಾಜ್ ಮೊದಲಾದವರು ಇದ್ದಾರೆ. ಭಾರತೀಯ ಹಿಂದೂವನ್ನು ಆದಷ್ಟು ದಿಕ್ಕೆಡಿಸಬೇಕು, ಆತನಿಗೆ ತನ್ನ ಮೂಲದ ಬಗ್ಗೆ ಸಂಶಯ ಹುಟ್ಟುವಂತೆ ಮಾಡಬೇಕು ಎಂಬುದೊಂದೇ ಇಲ್ಲಿನ ಅಜೆಂಡಾ. ಹಿಂದೂ ಸಂಸ್ಕೃತಿಯ ತಾಯಿಬೇರು ಆಚರಣೆಗಳು ಎಂಬುದು ಈ ಬುದ್ಧಿಜೀವಿಗಳಿಗೆ ಅರ್ಥವಾದಂತಿದೆ. ಹಾಗಾಗಿ ಆಚರಣೆಗಳೇ ಇವರ ಟಾರ್ಗೆಟ್.
ದೀಪ ಬೆಳಗುತ್ತೀರಾ? ಓಹ್, ಅದು ಮೌಢ್ಯ! ಅಜ್ಜಮ್ಮನ ಕಾಲದ ಅಂಧಾಚರಣೆ! ಏನು ಕ್ಯಾಂಡಲ್ ಬೆಳಗುತ್ತೀರಾ? ಈಗ ನೋಡಿ, ನೀವು ಸೆಕ್ಯುಲರ್ ಆದಿರಿ! ಕ್ಯಾಂಡಲ್ ಬೆಳಗುವುದು ಆಧುನಿಕತೆ, ಪ್ರಗತಿಪರತೆಯ ಲಕ್ಷಣ! ಆಯುಧಪೂಜೆಗೆ ಕುಂಬಳಕಾಯಿ ಒಡೆಯುವುದು ಮೌಢ್ಯ, ಆದರೆ ಥ್ಯಾಂಕ್ಸ್ ಗಿವಿಂಗ್ ಡೇಗೆ ಟರ್ಕಿ ಕೋಳಿಗಳನ್ನು ಕಡಿಯುವುದು – ಓಹ್ ಇಟ್ ಈಸ್ ಸೋ ಕ್ಯೂಟ್! ಹಣೆಗೆ ತಿಲಕ, ಸಿಂಧೂರ ಇಡುವುದು ಕಂದಾಚಾರ. ಆದರೆ ಹಬ್ಬದ ಹೆಸರಲ್ಲಿ ಎದೆ ಬಡಿದುಕೊಂಡು ರಕ್ತಕಾರಿಕೊಳ್ಳುವುದು ತ್ಯಾಾಗದ ಪ್ರತೀಕ. ಇದು ಸದ್ಯದ ಬುದ್ಧಿಜೀವಿಗಳ ಎಡಬಿಡಂಗಿತನಗಳ ಒಂದು ಸ್ಯಾಂಪಲ್. ಎಲ್ಲರೂ ಬಟ್ಟೆ ತೊಟ್ಟಿರುವಾಗ ನೀವೂ ತೊಟ್ಟರೆ ಅದರಲ್ಲಿ ವಿಶೇಷ ಏನಿಲ್ಲ ನೋಡಿ. ಆದರೆ ನೀವೊಬ್ಬರೇ ಗುಂಪಿನಲ್ಲಿ ನಗ್ನರಾಗಿ ನಿಂತರೆ ಜನ ನೋಡುತ್ತಾರೆ. ಕ್ಷಣಮಾತ್ರದಲ್ಲಿ ನೀವು ಪಾಪ್ಯುಲರ್ ಆಗುತ್ತೀರಿ. ಹಾಗೆ, ಹಿಂದೂವಿರೋಧಿಯಾಗಿ ಮಾತಾಡುವುದು ಕೂಡ ಪಾಪ್ಯುಲಾರಿಟಿಗೆ ಹತ್ತಿರದ ದಾರಿ. ಮೋದಿಯ ವಿರುದ್ಧ, ಸಂಘ ಪರಿವಾರದ ವಿರುದ್ಧ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಹಿಂದೂ ಸಂಸ್ಕೃತಿಯ ವಿರುದ್ಧ ಮಾತಾಡಿದರೆ ಕೂಡಲೇ ಜನಪ್ರಿಯರಾಗಬಹುದು.
ತಮಗೊಂದು ನಾಯಕನಿಲ್ಲದೆ ತಲೆಕೆಟ್ಟು ಕೂತಿರುವ ಬುದ್ಧಿಜೀವಿಗಳ ಬಳಗ ಅಂಥವರನ್ನು ಕೂಡಲೇ ತಲೆ ಮೇಲಿಟ್ಟು ಮೆರೆಸುತ್ತದೆ; ಹಾರತುರಾಯಿ ಹಾಕಿ ಪ್ರಶಸ್ತಿ ಕೊಟ್ಟು ಸಂಭ್ರಮಿಸುತ್ತದೆ. ಹಾಗಾಗಿ ಯೇನಕೇನ ಪ್ರಕಾರೇಣ ತತ್ಕ್ಷಣದ ಪ್ರಸಿದ್ಧಿ ಪಡೆಯಬೇಕಾದರೆ ಹಿಂದೂಗಳ ಆಚರಣೆಗಳನ್ನು, ಹಬ್ಬಗಳನ್ನು ವಾಚಾಮಗೋಚರ ಟೀಕಿಸಬೇಕು. ಹಿಂದೂ ಸಂಪ್ರದಾಯಗಳನ್ನು ಆಚರಿಸುವವರಾದರೆ ನೂರು ಕೋಟಿ ಜನಸಂಖ್ಯೆಯಲ್ಲಿ ನೀವೂ ಒಬ್ಬರಾಗುತ್ತೀರಿ. ಆದರೆ ಅವೇ ಆಚರಣೆಗಳನ್ನು ಛೀ ಥೂ ಎಂದು ದೂಷಿಸಿದರೆ ನೀವೊಬ್ಬ ಅನನ್ಯ ವ್ಯಕ್ತಿ! ಗುಂಪಿನಲ್ಲಿ ಗೋವಿಂದ ಎನ್ನದೆ ಬೇರೆಯದ್ದನ್ನು ಕೂಗುವ, ಆ ಮೂಲಕ ಎಲ್ಲರ ಗಮನ ಸೆಳೆಯಬಲ್ಲ ಆಕರ್ಷಕ ವ್ಯಕ್ತಿತ್ವ! ಹಾಗೆ ಹಿಂದೂಗಳ ವಿರುದ್ಧ ಮಾತಾಡಿದರೆ ಭಾರತದಲ್ಲಿ ಇನ್ವೆಸ್ಟ್ ಮಾಡಲು ಕಾಯುತ್ತಿರುವ ಎವಾಂಜಲಿಸ್ಟುಗಳ ಕಣ್ಣಿಗೆ ಬೀಳಬಹುದು. ವಿದೇಶದ ಡಾಲರುಗಳನ್ನು ತಮ್ಮ ಅಕೌಂಟುಗಳಲ್ಲಿ ರುಪಾಯಿಗಳಾಗಿ ಪರಿವರ್ತಿಸಿಕೊಳ್ಳಬಹುದು. ಈ ದುಡ್ಡು, ಪ್ರಶಸ್ತಿ ಮತ್ತು ಪ್ರಚಾರದ ಆಸೆಗಾಗಿ ಬಲಿಬೀಳುವ ಪ್ರಗತಿಪರರೇ ಎವಾಂಜಲಿಸ್ಟುಗಳ ಮೊದಲ ಬೇಟೆ.
ಒಂದು ಸಂತೋಷದ ಸಂಗತಿ ಏನೆಂದರೆ ಹಿಂದೂಗಳನ್ನು ಈ ಪ್ರಗತಿಪರರು ತುಚ್ಛೀಕರಿಸಿದಷ್ಟೂ ಹೆಚ್ಚು ಯುವಕರು ಹಿಂದೂ ಸಂಸ್ಕೃತಿಯ ಆಳ-ಅಗಲಗಳನ್ನು ಅಧ್ಯಯನ ಮಾಡಲು ಕೂರುತ್ತಿದ್ದಾರೆ. ಧರ್ಮ ಎಂದರೇನು? ಧರ್ಮಕ್ಕೂ ರಿಲಿಜನ್ನಿಗೂ ದೇವರಿಗೂ ಗಾಡ್ಗೂ ಇರುವ ವ್ಯತ್ಯಾಸಗಳೇನು? ಹಿಂದೂ ಹಬ್ಬಗಳ ಮಹತ್ವ ಏನು? ಈ ನೆಲದ ಸಂಸ್ಕೃತಿಯ ವಿಶೇಷಗಳೇನು? ಎಂಬ ಎಲ್ಲ ಪ್ರಶ್ನೆಗಳನ್ನು ಹರವಿಕೂತು ಇತ್ತೀಚಿನ ಯುವಕರು ತಮ್ಮ ತಾಯಿಬೇರುಗಳನ್ನು ಪರಿಚಯಿಸಿಕೊಳ್ಳುವ ಕೆಲಸಕ್ಕೆ ತೊಡಗುತ್ತಿದ್ದಾರೆ. ಪ್ರಗತಿಪರರ ಕಂಠಶೋಷಣೆ ಹೆಚ್ಚಾದಷ್ಟೂ ಹಿಂದೂ ಸಂಸ್ಕೃತಿಯತ್ತ ವಾಲುತ್ತಿರುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಜನಿವಾರದಿಂದೇನು ಎಂದು ಅದನ್ನೆತ್ತಿ ಮೊಳೆಗೆ ನೇತುಹಾಕಿದ್ದ ನನ್ನ ಗೆಳೆಯನೊಬ್ಬ ಇತ್ತೀಚೆಗೆ ಅದನ್ನು ಮತ್ತೆ ಯಜ್ಞೋಪವೀತಂ ಪರಮಂ ಪವಿತ್ರಂ ಎಂದು ಹೇಳಿಕೊಂಡು ಧರಿಸಿ ತನ್ನ ಧರ್ಮದ ಪರಿಚಯ ಮಾಡಿಕೊಳ್ಳುವ ಕೆಲಸಕ್ಕೆ ಇಳಿದಿದ್ದಾನೆ. ಸ್ವಧರ್ಮೇ ನಿಧನಂ ಶ್ರೇಯಃ. ತನ್ನ ಒಳಗನ್ನು ಮೊದಲು ಅರಿತ ಮೇಲಷ್ಟೇ ಅದನ್ನು ಒಪ್ಪಿಕೊಳ್ಳುವ ಇಲ್ಲವೇ ತಿರಸ್ಕರಿಸುವ ಪ್ರಶ್ನೆ, ಅಲ್ಲವೆ? ನಿಂದಕರಿರಬೇಕು ಇರಬೇಕು; ಹಂದಿ ಇದ್ದರೆ ಕೇರಿ ಹ್ಯಾಂಗ ಶುದ್ಧಿಯೋ ಹಾಂಗ ಎಂಬ ದಾಸವಾಣಿ ಸತ್ಯಸ್ಯಸತ್ಯ. ಪ್ರಕಾಶ್ ರೈ ಅವರಂಥ ಎಡಬಿಡಂಗಿಗಳು ಮತ್ತು ಅವರ ಹೇಳಿಕೆಗಳು, ಇನ್ನು ಮುಂದಿನ ಆರು ತಿಂಗಳ ಹಬ್ಬಗಳ ಸೀಸನ್ನಲ್ಲಿ ಮತ್ತಷ್ಟು ಹೆಚ್ಚಲಿ ಎಂದೇ ಆಶಿಸೋಣ!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ