ಸೋಮವಾರ, ಅಕ್ಟೋಬರ್ 16, 2017

ನಮ್ಮ ಸನಾತನ ಸಂಸ್ಕೃತಿಯ ಅಡಿಪಾಯ ಇರುವುದು ಯಜ್ಞ, ಯಾಗಗಳಲ್ಲಿ

sangraha:   agnihothra
ನಮ್ಮ ಸನಾತನ ಸಂಸ್ಕೃತಿಯ ಅಡಿಪಾಯ ಇರುವುದು ಯಜ್ಞ, ಯಾಗಗಳಲ್ಲಿ. ಯಜ್ಞಯಾಗಗಳೆಂದರೆ ಕೇವಲ ಒಂದು ಹೋಮವನ್ನು ಆಚರಿಸುವುದು, ಮನಸ್ಸಿನ ಆಕಾಂಕ್ಷೆಗಳನ್ನು ದೇವರ ಮುಂದಿಟ್ಟು ಅದನ್ನು ಫಲಿಸಿಕೊಳ್ಳುವುದು ಎಂಬಷ್ಟು ಸುಲಭವಾಗಿ ವ್ಯಾಖ್ಯಾನಿಸುವ ಸಂಗತಿಯಲ್ಲ. ಅದರಲ್ಲಿ ಅಡಕವಾದದ್ದು ಮುಖ್ಯವಾಗಿ ತ್ಯಾಗ ಮನೋಭಾವ. ನನ್ನದಲ್ಲ, ಇದು ಸಂಪೂರ್ಣವಾಗಿ ನಿನಗೆ ಅರ್ಪಿತ ಎಂಬ ಭಾವನೆಯಿಂದ ನಡೆದ ಅನೇಕಾನೇಕ ಹೋಮಗಳ ಫಲವೇ ನಮ್ಮೆಲ್ಲರ ಅಸ್ತಿತ್ವ, ಈ ಪುಣ್ಯಭೂಮಿಯಲ್ಲಿ ಜನನ ಎಂಬ ಮಾತು ಆಗಿಂದಾಗ್ಗೆ ಕೇಳಿಬರುತ್ತದೆ. ದಿನಗಟ್ಟಲೆ ನಡೆಯುವ ಹೋಮಗಳನ್ನು ಹೆಸರಿಸಬಹುದಾದರೂ ಹೋಮಗಳೆಲ್ಲವೂ ಹಿಂದೂಗಳ ಒಂದು ವರ್ಗಕ್ಕಷ್ಟೇ ಸೀಮಿತ ಎಂದು ಅವನ್ನು ಅನುಸರಿಸಲು ಕಟ್ಟುಪಾಡುಗಳಿವೆಯೆಂದು ಕೆಲವರು ಅನಾಸಕ್ತಿ ತೋರಬಹುದು. ಆದರೆ ನಮ್ಮಲ್ಲೊಂದು ಹೋಮವಿದೆ. ಈ ಹೋಮ ಮಾಡಲು ಹೆಚ್ಚು ಸಮಯವೂ ತಗಲುವುದಿಲ್ಲ. ಯಾರಾದರೂ ಮಾಡಬಹುದು. ಹಾಗೂ ಅಂತಹ ಹೋಮದಿಂದ ಕ್ರಮೇಣ ಉತ್ತಮ ಪರಿಣಾಮಗಳನ್ನು ಕಂಡುಕೊಳ್ಳಬಹುದು ಎಂದು ಸಾಕಷ್ಟು ಚರ್ಚೆ, ಪರೀಕ್ಷೆಗಳ ನಂತರ ವಿಜ್ಞಾನಿಗಳೂ ಒಪ್ಪಿಕೊಳ್ಳುತ್ತಿದ್ದಾರೆ. 64 ವಿದ್ಯೆಗಳಲ್ಲಿ ಒಂದಾದ ಈ ಹೋಮದ ಹೆಸರೇ ಅಗ್ನಿಹೋತ್ರ.
ನಮ್ಮ ವೈದಿಕ ಪರಂಪರೆಯಲ್ಲಿ ಋಷಿಮುನಿಗಳು ಅನುಸರಿಸುತ್ತಿದ್ದ, ಪ್ರತಿಯೊಬ್ಬರೂ ನಡೆಸಬಹುದಾದ, ಅದರಿಂದಾಗುವ ಸತ್ಪರಿಣಾಮಗಳು ಹೆಚ್ಚು ಎಂದು ಹೇಳಲ್ಪಡುತ್ತಿದ್ದುದು ಈ ಅಗ್ನಿಹೋತ್ರದ ಬಗ್ಗೆಯೇ. ಮುಂಚೆಲ್ಲ ಹಲವಾರು ಜನರು ನಡೆಸುತ್ತಿದ್ದ ಅಗ್ನಿಹೋತ್ರಕ್ಕೆ ಕ್ರಮೇಣ ಜನರ ಭಾಗವಹಿಸುವಿಕೆ ಇಳಿಮುಖವಾಗಿತ್ತು. ಅಗ್ನಿಹೋತ್ರವು ಚರ್ಚೆಗೆ ಗ್ರಾಸವಾದದ್ದು ಭೋಪಾಲ್ ಅನಿಲ ದುರಂತದ ನಂತರ. ಡಿಸೆಂಬರ್ 1984ರಲ್ಲಿ ಯೂನಿಯನ್ಕಾರ್ಬೈಡ್ ಇಂಡಿಯಾ ಲಿಮಿಟೆಡ್‌ನಿಂದ ಹೊರಬಂದ ಮಿಥೈಲ್ ಐಸೊಸಯನೈಡ್ ಸುಖ ನಿದ್ರೆಯಲ್ಲಿದ್ದ ಭೋಪಾಲದ ಜನರನ್ನು ಸಹಸ್ರ ಸಂಖ್ಯೆಯಲ್ಲಿ ಕೊಂದಿತು. ಮಡಿದವರು, ಅಂಗಾಗಗಳು ಊನವಾದವರು, ನಾನಾ ರೋಗಗಳಿಗೆ ತುತ್ತಾದವರು ಅಸಂಖ್ಯ. ಆದ್ದರಿಂದಲೇ ಈ ಅನಿಲ ದುರಂತವನ್ನು ಮನುಕುಲದ ಮೇಲೆ ನಡೆದ ಅತಿದೊಡ್ಡ ದುರಂತಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಆದರೆ ವಿಚಿತ್ರವೆಂದರೆ ಈ ದುರ್ಘಟನೆ ನಡೆದಾಗ್ಯೂ, ಕಾರ್ಖಾನೆಯ ಒಂದು ಮೈಲಿ ದೂರದಲ್ಲಿದ್ದ ಎರಡು ಮನೆಗಳನ್ನು ಕಿಂಚಿತ್ತೂ ಹಾಳುಗೆಡವಲು ಆಗಲೇ ಇಲ್ಲ. ಅದಕ್ಕೆ ಕಾರಣ ದಿನನಿತ್ಯ ಆ ಮನೆಗಳಲ್ಲಿ ನಡೆಯುತ್ತಿದ್ದ ಅಗ್ನಿಹೋತ್ರ ಹೋಮ ಎಂಬ ಮಾತು ಪ್ರಚಲಿತವಾಗತೊಡಗಿತು. ಆ ಮನೆಯಲ್ಲಿ ವಾಸಿಸುವವರು ವಿಜ್ಞಾನಿಗಳಿಗೆ ಸವಾಲೆಸೆದಿದ್ದರು.
1986ರಲ್ಲಿ ಅಂದಿನ ಯುಎಸ್‌ಎಸ್‌ಆರ್‌ನ ಚರ್ನೋಬಿಲ್ (Chernobyl) ಎಂಬಲ್ಲಿ ಪರಮಾಣು ವಿಸ್ಫೋಟದ ನಂತರದ ವಿಕಿರಣದಿಂದ ಯೂರೋಪ್ ಖಂಡದ ದೇಶಗಳಲ್ಲಿಯೂ ದುಷ್ಪರಿಣಾಮಗಳು ಕಂಡುಬಂತು. ಇತ್ತೀಚೆಗಿನ ವಿಶ್ವ ಆರೋಗ್ಯ ಸಂಸ್ಥೆಯ ವರದಿಯನುಸಾರ ಈ ವಿಕಿರಣದಿಂದ ಸುಮಾರು 60,000 ಜನರು ಕ್ಯಾನ್ಸರ್ ಖಾಯಿಲೆಯಿಂದ ಬಳಲಿಸತ್ತಿದ್ದಾರೆ. ಚರ್ನೋಬಿಲ್‌ನ 30 ಕಿಮೀ ಸುತ್ತಲಿನ ಜಾಗವನ್ನು ಈಗ ವಾಸಿಸಲು ಯೋಗ್ಯವಲ್ಲವೆಂದು ಅಲ್ಲಿಂದ ಜನರನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಚರ್ನೋಬಿಲ್ ದುರಂತದ ನಂತರ ಆಸ್ಟ್ರಿಯಾ ಸರ್ಕಾರವು ಅಲ್ಲಿನ ರೈತರುಗಳಿಗೆ ತಮ್ಮ ಹಸುಗಳ ಹಾಲನ್ನು ವಿಕಿರಣಶೀಲಕ್ಕಾಗಿ ಪರೀಕ್ಷಿಸಬೇಕೆಂದು ಆದೇಶಿಸಿತ್ತು. ಎಲ್ಲರೂ ಪರೀಕ್ಷೆಗೆ ಒಳಪಡಿಸಿದಾಗ ಕೇವಲ ಕರಿನ್ಹರ್ಷಲ್ ಎಂಬ ರೈತರ ಆವರಣದಲ್ಲಿ ಬೆಳೆದ ಹುಲ್ಲು, ಆ ಹುಲ್ಲನ್ನು ಸೇವಿಸಿದ್ದ ಹಸುಗಳ ಹಾಲಲ್ಲಿ ವಿಕಿರಣಶೀಲದ ಅಂಶಗಳು ತೋರಿಬರಲಿಲ್ಲ. ಉಳಿದೆಲ್ಲ ಹಾಲಿನ ಮಾದರಿಗಳು (ಗೋವುಗಳು ವಿಕಿರಣಭರಿತ ಲಭ್ಯ ಹುಲ್ಲನ್ನು ಸೇವಿಸಿದ್ದರಿಂದ) ವಿಕಿರಣಶೀಲವಾಗಿತ್ತು.
ಭೋಪಾಲದ ಅನಿಲ ದುರಂತದಿಂದ ಯಾವುದೇ ದುಷ್ಪರಿಣಾಮ ಕಾಣದ ಆ ಎರಡು ಮನೆಗಳು ಹಾಗೂ ಆಸ್ಟ್ರಿಯಾದ ಕರಿನ್ಹರ್ಷಲ್ ರಾಸು ಸಾಕಣೆ ಪ್ರದೇಶಗಳಲ್ಲಿ ಸಾಮ್ಯವಿದ್ದುದು ಅಗ್ನಿಹೋತ್ರದ ಪದ್ಧತಿ ನಡೆಸುತ್ತಿದ್ದುದು. 
ÖÝWݨÜÃæ D AX°ÖæãàñÜÅÊæí¨ÜÃæà®Üá? 
ಅಗ್ನಿಯ ಮೂಲಕ ವಾತಾವರಣವನ್ನು ಶುದ್ಧೀಕರಿಸುವ ಪ್ರಕ್ರಿಯೆಯೇ ಅಗ್ನಿಹೋತ್ರದ ಮೂಲತತ್ತ್ವವಾಗಿರುತ್ತದೆ. ಸೂರ್ಯ ಉದಯವಾಗುವ ಸಮಯಕ್ಕೆ, ಸೂರ್ಯ ಮುಳುಗುವ ಸಮಯಕ್ಕೆ ನಮ್ಮ ದೇಹದಲ್ಲಿ, ಪ್ರಾಣಿ, ವೃಕ್ಷಗಳಲ್ಲಿ ಹೊಸಕೋಶಗಳು ಹೆಚ್ಚಿನ ಪ್ರಮಾಣದಲ್ಲಿ ಹುಟ್ಟುತ್ತವೆ ಎಂದು ಜೀವವಿಜ್ಞಾನಿಗಳು ನಿರೂಪಿಸಿದ್ದಾರೆ. ಅದೇ ಸಮಯದಲ್ಲಿ ಸೂರ್ಯನ ಕಿರಣಗಳಿಗೆ ಅತಿ ಹೆಚ್ಚು ಶಕ್ತಿಯಿರುತ್ತದೆಂಬುದು ನಾವೆಲ್ಲರೂ ತಿಳಿದುಕೊಂಡಿರುವ ಸತ್ಯ. ಸೂರ್ಯೋದಯ, ಗೋಧೂಳಿ (ಸೂರ್ಯಾಸ್ತ) ಸಮಯಗಳಲ್ಲಿ ಕೆಲ ಮಂತ್ರಗಳನ್ನು ಪಠಿಸಿ, ಅಗ್ನಿಗೆ ಆಹುತಿ ನೀಡಬೇಕು. ಅದರಿಂದ ಧನಾತ್ಮಕ ತರಂಗಗಳು ಸೃಷ್ಟಿಗೊಂಡು, ಮನುಷ್ಯನ ಮನಸ್ಸುಗಳು ಧನಾತ್ಮಕ ಚಿಂತನೆ ನಡೆಸುತ್ತವೆ ಎಂಬುದನ್ನು ಸಾವಿರಾರು ವರ್ಷಗಳ ಹಿಂದಿನ ನಮ್ಮ ಪೂರ್ವಜರು ಅರಿತುಕೊಂಡಿದ್ದರು ಮತ್ತು ಅವರಿಗೆ ಸತ್ಯದ ಸಾಕ್ಷಾತ್ಕಾರವೂ ಆಗಿತ್ತು. Heal the atmosphere and the atmosphere will heal you (ವಾತಾವರಣವನ್ನು ಶುದ್ಧಗೊಳಿಸಿದರೆ, ವಾತಾವರಣವು ನಿಮ್ಮನ್ನು ಗುಣಪಡಿಸುತ್ತದೆ)ಎಂಬ ಮೂಲತತ್ತ್ವವನ್ನು ವೇದಗಳಲ್ಲಿ ಹೇಳಲಾಗಿದೆ ಎಂಬುದನ್ನು ಭಾರತದ ವಸಂತ ಪರಾಂಜಪೆಯವರು ದೇಶವಿದೇಶಗಳಲ್ಲಿ ಹರಡಲು ಮುಂದಾದರು. ಅವರ ಅನುಯಾಯಿಗಳು ವಿಶ್ವದೆಲ್ಲೆಡೆ ಈಗ ಅಗ್ನಿಹೋತ್ರವನ್ನು ನಿತ್ಯ ಯಜ್ಞವಾಗಿ ನಿರ್ವಹಿಸುತ್ತಿದ್ದಾರೆ. ಹಸುವಿನ ಸಗಣಿಯಿಂದ ಮಾಡಿದ ಬೆರಣಿ, ತುಪ್ಪ, ಅಕ್ಕಿಯನ್ನು ಸೂರ್ಯೋದಯ, ಸೂರ್ಯಾಸ್ತವಾಗುವ ಸಮಯಕ್ಕೆ ಸರಿಯಾಗಿ ತಾಮ್ರ/ಕುಂಡದಲ್ಲಿ ತಯಾರಿಸಿದ ಅಗ್ನಿಗೆ ಆಹುತಿ ನೀಡಬೇಕು. ಜೊತೆಗೆ ಈ ಆಹುತಿಗೆ ಸರಿಯಾಗಿ ಕೆಲ ಮಂತ್ರ ಪಠನವನ್ನೂ ಮಾಡಬೇಕು. ಅಗ್ನಿಹೋತ್ರವನ್ನು ಮಾಡಿದಾಗ, ಅದರಿಂದ ಬರುವ ಹೊಗೆ, ವಿಕಿರಣ ಹೊರಚೆಲ್ಲುವ ವಸ್ತುವನ್ನು ಆಕರ್ಷಿಸಿ ಅದರ ಮೂಲ ಪ್ರವೃತ್ತಿಯಾದ ವಿಕಿರಣಶೀಲತೆಯನ್ನು ತಟಸ್ಥಗೊಳಿಸುತ್ತದೆ ಎಂಬುದು ಅಗ್ನಿಹೋತ್ರಕ್ಕೆ ಇರುವ ಸೈದ್ಧಾಂತಿಕ ಹಾಗೂ ವೈಜ್ಞಾನಿಕ ಹಿನ್ನೆಲೆ. (ಚರ್ನೊಬಿಲ್‌ನಲ್ಲಿ ವಿಕಿರಣ ಉಂಟಾದಾಗ ವಿಚಿತ್ರವೆಂದರೆ ಕೆಲ ಕೀಟಗಳು ಸಾಯದೇ ತಾವೂ ವಿಕಿರಣಶೀಲವಾದದ್ದು. ಇದರ ಪರಿಣಾಮವನ್ನು ಜಗತ್ತು ನೋಡುತ್ತಿದೆ, ಬಹುಶಃ ಇನ್ನೂ ನೋಡಬಹುದು) ಇನ್ನು ವೈಜ್ಞಾನಿಕವಾಗಿ ಇಂಗಾಲದ ಡೈ ಆಕ್ಸೈಡ್ ಹೊರಸೂಸುವ ಅಗ್ನಿಹೋತ್ರ ತಪ್ಪಲ್ಲವೇ? ಪರಿಸರಕ್ಕೆ ವ್ಯತಿರಿಕ್ತವಲ್ಲವೇ? ಎಂಬ ಪ್ರಶ್ನೆಗಳಿಗೆ ಉತ್ತರ – ಅಗ್ನಿಹೋತ್ರದಿಂದ ಸೃಷ್ಟಿಯಾಗುವ ತರಂಗಗಳು ಕೇವಲ ಮನೆಯಲ್ಲದೇ ಸುತ್ತಲಿನ ಗಿಡ ಮರಗಳಿಗೆ ಆ ತರಂಗಗಳು ದ್ಯುತಿ ಸಂಶ್ಲೇಷಣೆಯನ್ನು (photosynthesis) ಹೆಚ್ಚಿಸಿ ಇಂಗಾಲದ ಡೈ ಆಕ್ಸೈಡ್ ಹೀರಿ ಆಮ್ಲಜನಕವನ್ನು ಹೊರಹಾಕುತ್ತವೆ. ರಷ್ಯಾ, ಜರ್ಮನಿ, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವಾರು ದೇಶಗಳಲ್ಲಿ ಅಗ್ನಿಹೋತ್ರವು ಸಾಮೂಹಿಕವಾಗಿ ಇಲ್ಲವೇ, ಆಸಕ್ತಿಯುಳ್ಳವರ ಸ್ಥಳಗಳಲ್ಲಿ ನಡೆಯುತ್ತಿವೆ. ಅದರಿಂದ ಬರುವ ಭಸ್ಮವನ್ನು ದೈಹಿಕ, ಶಾರೀರಿಕ ಸಮಸ್ಯೆಗಳಿಗೆ ಮದ್ದಾಗಿ ಕೆಲ ವೈದ್ಯರು ಸೂಚಿಸುತ್ತಿದ್ದಾರೆ. ಅಗ್ನಿಹೋತ್ರದ ಭಸ್ಮವನ್ನು ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಬೇಕು ಎಂದು ವಿಶ್ವದ ಹಲವಾರು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಆ ಭಸ್ಮವನ್ನು ಮುಂದೆ ಆಮದು ಮಾಡಿಕೊಳ್ಳುವ ಕೆಲಸವೂ ನಡೆಯಬಹುದು ಎಂದು ಅಂದಾಜಿಸಲಾಗಿದೆ. ಆ ದೃಷ್ಟಿಯಿಂದಲೂ ಭಾರತದ ಕಡೆಗೆ ಮುಖ ಮಾಡುವ ಸಾಧ್ಯತೆಗಳು ಸಧ್ಯಕ್ಕೆ ಹೆಚ್ಚಿವೆ ಎಂದು ತೋರಿಸಲಾಗಿದೆ.
ಇನ್ನು ಅಗ್ನಿಹೋತ್ರಕ್ಕೆ ಬಳಸುವ ಕುಂಡವು ತಾಮ್ರದ್ದೋ, ಚಿನ್ನದ್ದೋ ಆದರೆ ಉತ್ತಮವೆಂದು ವಾದಿಸುವ ಹಾಗೂ ಹಿಂದೆಲ್ಲಾ ಬಳಸುತ್ತಿದ್ದುದು ತಾಮ್ರ/ಕುಂಡಗಳೇ ಎಂದು ಹೇಳುವವರಿದ್ದಾರೆ. ಜೊತೆಗೆ ಇಟ್ಟಿಗೆಯ ಕಲ್ಲುಗಳನ್ನು ಚಿಕ್ಕ ಹೋಮಕುಂಡದ ರೀತ್ಯ ಕಟ್ಟಿಕೊಂಡು ಮರಳಲ್ಲಿ ಅಗ್ನಿಹೋತ್ರ ಮಾಡುವುದು (ಕಾರಣ ಚಿನ್ನ, ತಾಮ್ರ ಏಕಧಾತು ಪದಾರ್ಥವಾದರೆ ಮರಳು ಬಹುಧಾತುಗಳನ್ನು ಹೊಂದಿದೆ) ಮತ್ತೂ ಉತ್ತಮವೆಂದು ನಿರೂಪಿಸುವವರು ಇದ್ದಾರೆ.
ಅಗ್ನಿಹೋತ್ರದ ಪರಿಣಾಮಗಳು ಅಧ್ಯಾತ್ಮಿಕವಾಗಿ, ಪರಿಸರದ ಶುಚಿತ್ವಕ್ಕಾಗಿ, ದೈಹಿಕ, ಮಾನಸಿಕ ರೋಗಗಳಿಗೆ ಮದ್ದಾಗಿ ಕಾರ್ಯನಿರ್ವಹಿಸುತ್ತವೆ ಎಂಬುದು ಅಗ್ನಿಹೋತ್ರವನ್ನು ಮಾಡುತ್ತಿರುವವರ ಸಮರ್ಥನೆ. ಕೆಲ ಸಂಘಟನೆಗಳು ತಮ್ಮ ಸೇವಾ ಕಾರ್ಯಗಳನ್ನು ಅಗ್ನಿಹೋತ್ರದಿಂದಲೇ ಮಾಡುತ್ತಿವೆ. ಉದಾಹರಣೆಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ಹಿಂದೂ ಆಧ್ಯಾತ್ಮ ಮತ್ತು ಸೇವಾ ಮೇಳದಲ್ಲಿನ ತಮ್ಮ ಮಳಿಗೆಯಲ್ಲಿ ಅನಂತ ಭಾರತ ಚಾರಿಟಬಲ್ ಟ್ರಸ್ಟ್ ಹೇಳಿಕೆಯ ಪ್ರಕಾರ, ಎಚ್‌ಐವಿ ಪೀಡಿತರು ತಮ್ಮ ಸಂಸ್ಥೆಯ ಮೂಲಕ ಮಾಡಿದ ನಿತ್ಯ ಅಗ್ನಿಹೋತ್ರದ ವಿಧಿಯಿಂದಾಗಿ ದೇಹದಲ್ಲಿದ್ದ ಏಡ್ಸ್ ವೈರಾಣುಗಳು ಇಳಿಮುಖಗೊಂಡಿವೆ. ಅಲ್ಲದೇ ಬೆಂಗಳೂರಿನಲ್ಲಿ ನಡೆದ ಒಂದು ಅಗ್ನಿಹೋತ್ರದ ದೀಕ್ಷೆಯ ಕಾರ್ಯಕ್ರಮದಲ್ಲಿ ನೆರೆದಿದ್ದ ನಿತ್ಯ ಅಗ್ನಿಹೋತ್ರಿಗಳು ತಮ್ಮ ಧನಾತ್ಮಕ ಚಿಂತನೆಗಳು ಹೆಚ್ಚಿದ್ದ ಪ್ರಸಂಗಗಳನ್ನು ನಮ್ಮ ಮುಂದೆ ಹೇಳಿಕೊಂಡರು. ಕೆಲವರು ಅಗ್ನಿಹೋತ್ರದ ವಿಧಿಯಿಂದ ಬಂದ ಭಸ್ಮವನ್ನು ತಮ್ಮ ಚರ್ಮರೋಗಗಳ ನಿವಾರಣೆಗೆ ಬಳಸಿದ್ದರು (ಗೋಮಯಕ್ಕೆ ವೈದ್ಯಕೀಯ ಉಪಯುಕ್ತತೆ ಹಲವಷ್ಟು ಎಂಬುದು ವಿವಾದಾತೀತ). ಊಟಿಯಲ್ಲಿ ಚಹಾ ತೋಟವನ್ನು ನಿರ್ವಹಿಸುತ್ತಿರುವ ಸುರೇನ್ ಕುಮಾರ ದಂಪತಿಗಳು ತಮ್ಮ ತೋಟದ ಮಣ್ಣಿನಲ್ಲಿ ನೀರು ಹೀರಿಕೊಳ್ಳುವ ಪ್ರಮಾಣ ಹೆಚ್ಚಾದುದು ತಾವು ಮಾಡುವ ಅಗ್ನಿಹೋತ್ರದ ಭಸ್ಮವನ್ನು ಗಿಡದ ಬುಡಗಳಿಗೆ ಹಾಕುತ್ತಿರುವುದರಿಂದಲೇ ಎಂದು ಖಡಾಖಂಡಿತವಾಗಿ ನುಡಿಯುತ್ತಾರೆ. ಅಲ್ಲದೇ ಮಣ್ಣಿನ ಸವಕಳಿ, ಮಳೆ ನೀರು ಇಂಗದೇ ಹರಿದುಹೋಗುವ ಸಮಸ್ಯೆಗಳಿಗೆ ಅಗ್ನಿಹೋತ್ರದ ಭಸ್ಮವೇ ಪರಿಹಾರವೆನ್ನುತ್ತಾರೆ. ಕೆಲ ರೈತರುಗಳು ತಮ್ಮ ಹೊಲಗಳಲ್ಲಿ ಈಗಾಗಲೇ ಕೆಲ ವರ್ಷಗಳಿಂದಲೇ ಅಗ್ನಿಹೋತ್ರವನ್ನು ಮಾಡುತ್ತಿದ್ದು, ಭಸ್ಮವನ್ನು ಹೊಲದಲ್ಲಿ ಹರಡುವುದರಿಂದ, ಬೆಳೆಗಳ ಮೇಲೆ ಸಿಂಪಡಿಸಿದ್ದರಿಂದ, ಕ್ರಿಮಿಕೀಟಗಳು ಬೆಳೆ ನಾಶ ಮಾಡುತ್ತಿದ್ದ ದಿನಗಳು ಇನ್ನಿಲ್ಲವೆಂಬ ನಿಟ್ಟುಸಿರುಬಿಡುತ್ತಾರೆ. ಅಲ್ಲದೇ ಹೊಲದಲ್ಲಿನ ಇಳುವರಿಯೂ ಹೆಚ್ಚಾಗಿದೆ ಎಂದು ವಾದಿಸುತ್ತಾರೆ.
ಇಂದಿನ ದಿನಗಳಲ್ಲಿ ಯಾವುದೇ ಭಾರತದ ಪುರಾತನ ಕ್ರಿಯೆಯನ್ನೂ ವಿಜ್ಞಾನದ ಚೌಕಟ್ಟಿನಲ್ಲಿರಿಸಿ ನಂಬಿಕೆಯನ್ನೇ ಬುಡಮೇಲು ಮಾಡುತ್ತಿರುವ ಸಂದರ್ಭದಲ್ಲಿ ಅಗ್ನಿಹೋತ್ರವೂ ವೈಜ್ಞಾನಿಕವಾಗಿ ಹಲವರಿಂದ ದೃಢಪಟ್ಟಿದೆ. ವೈಜ್ಞಾನಿಕ, ಆಧ್ಯಾತ್ಮಿಕ ಕಾರಣಗಳಿಗಾಗಿಯೇ ಅದನ್ನು ಅಭ್ಯಸಿಸುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಲ್ಲದೇ ಅಗ್ನಿಹೋತ್ರ ಮಾಡಲು ಬೇಕಿರುವ ಮಂತ್ರಗಳೂ ಕ್ಲಿಷ್ಟಕರವಲ್ಲ.
ಸೂರ್ಯೋದಯದ ಹೊತ್ತಿಗೆ,
ಸೂರ್ಯಾಯ ಸ್ವಾಹಾ ಸೂರ್ಯಾಯ ಇದಂ ನ ಮಮ ॥
ಪ್ರಜಾಪತಯೇ ಸ್ವಾಹಾ ಪ್ರಜಾಪತಯ ಇದಂ ನ ಮಮ ॥
ಎಂದೂ, ಸೂರ್ಯಾಸ್ತದ ಹೊತ್ತಿಗೆ,
ಅಗ್ನಯೇ ಸ್ವಾಹಾ ಅಗ್ನಯ ಇದಂ ನ ಮಮ ॥
ಪ್ರಜಾಪತಯೇ ಸ್ವಾಹಾ ಪ್ರಜಾಪತಯ ಇದಂ ನ ಮಮ ॥
ಎಂದೂ ಕುಂಡದಲ್ಲಿ ಪ್ರದೀಪನಗೊಳಿಸಿದ ಬೆರಣಿಗೆ ಎರಡು ಚಿಮಟಿಗೆಯಷ್ಟು ಅಕ್ಕಿ, ಗೋವಿನ ತುಪ್ಪವನ್ನು ಆಹುತಿಯನ್ನು ಅರ್ಪಿಸಬೇಕಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ