#ನೀನಾರಿಗಾದೆಯೋ_ಎಲೆ_ಬ್ರಾಹ್ಮಣ
ವಿಪ್ರರೇ ನಿಮಿಷ ಬಿಡುವು ಮಾಡಕೋಂಡು ಓದಿ...
ವಿಪ್ರರೇ ನಿಮಿಷ ಬಿಡುವು ಮಾಡಕೋಂಡು ಓದಿ...
ಅಚಾನಕ್ಕಾಗಿಯೋ ಉದ್ದೇಶಪೂರ್ವಕವೋ ಅಂತೂ ರಾಜ್ಯದ ಜಾತಿಗಣತಿಯ ಅಂಕಿಅಂಶಗಳು ಮಾಧ್ಯಮಕ್ಕೆ ಬಿಡುಗಡೆಯಾಗಿವೆ. ಜಾತಿಗಳ ಸಂಖ್ಯಾಬಲದ ಪಟ್ಟಿಯಲ್ಲಿ ಕಟ್ಟಕಡೆಗಿರುವವರು ಬ್ರಾಹ್ಮಣರು. ಇಡೀ ರಾಜ್ಯದಲ್ಲಿ ಅವರ ಸಂಖ್ಯೆ 13 ಲಕ್ಷವಷ್ಟೇ ಇದೆ. ಪಟ್ಟಿಯ ತುದಿಯಲ್ಲಿರುವ ಮುಸ್ಲಿಮರು ಮತ್ತು ದಲಿತರನ್ನು ಓಲೈಸಿದರೆ ಸಾಕು, ಮೂರು ಕೋಟಿ ವೋಟುಗಳಿಗೆ ಮೋಸವಿಲ್ಲ ಎಂಬುದನ್ನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕಮ್ಯುನಿಸ್ಟ್ ಪಾರ್ಟಿ ಎಲ್ಲವೂ ಕಂಡುಕೊಂಡಿವೆ.
ಹಾಗಾಗಿ ಅದರೆದುರಲ್ಲಿ ಸೇಕಡಾ 2ಕ್ಕಿಂತಲೂ ಕೆಳಗಿಳಿರುವ ಬ್ರಾಹ್ಮಣರನ್ನು ಓಲೈಸಿ, ಅಥವಾ ಅವರನ್ನು ಮನುಷ್ಯರೆಂದು ಪರಿಗಣಿಸಿ ಯಾವ ಪಾರ್ಟಿಗೂ ಏನೂ ಆಗಬೇಕಾಗಿದ್ದಿಲ್ಲ. ನನ್ನ ಮಾತುಗಳನ್ನು ಶುರುಮಾಡುವ ಮೊದಲು ಹಿಂದೂ ಧರ್ಮದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಪ್ರಾಜ್ಞ ಫ್ರಾನ್ಸಿಸ್ ಗೋತಿಯೇರ್ 2013ರಲ್ಲಿ ಪ್ರಕಟಿಸಿದ ಒಂದು ಲೇಖನದ ಕೆಲವು ಅಂಶಗಳನ್ನು ನಿಮ್ಮ ಮುಂದೆ ಇಡುತ್ತೇನೆ: (1) ದೆಹಲಿಯ 50 ಸುಲಭ್ ಶೌಚಾಲಯಗಳಲ್ಲಿ ಕೆಲಸ ಮಾಡುವವರೆಲ್ಲ ಬ್ರಾಹ್ಮಣರು. ದೆಹಲಿಯ ರೈಲುನಿಲ್ದಾಣಗಳಲ್ಲಿ ಕೂಲಿಗಳಾಗಿ, ನಗರದೊಳಗೆ ರಿಕ್ಷಾ ಚಾಲಕರಾಗಿ ಕೂಡ ಬ್ರಾಹ್ಮಣರು ದುಡಿಯುತ್ತಿದ್ದಾರೆ. (2) ಭಾರತದ ಯಾವುದೇ ರಾಜ್ಯದಲ್ಲೂ ಬ್ರಾಹ್ಮಣರಿಗೆ ಮೀಸಲು ಇಲ್ಲ; ವಿಶೇಷ ಪ್ಯಾಕೇಜ್ ಘೋಷಣೆಯಾಗುವುದಿಲ್ಲ. 2006ರಲ್ಲಿ ಕರ್ನಾಟಕದ ಅರ್ಥಸಚಿವರು ರಾಜ್ಯದ ಜಾತಿವಾರು ಸರಾಸರಿ ಸಂಪಾದನೆಯ ವಿವರ ಕೊಟ್ಟರು.
ಅದು ಹೀಗಿತ್ತು: ಕ್ರೈಸ್ತರು ರೂ.1562, ಒಕ್ಕಲಿಗರು ರೂ.914, ಮುಸ್ಲಿಮರು ರೂ.794, ಪರಿಶಿಷ್ಟ ಜಾತಿ ರೂ.680, ಪರಿಶಿಷ್ಟ ಪಂಗಡ ರೂ.577, ಬ್ರಾಹ್ಮಣರು ರೂ.537 (3) ಪೋಷಕರ ಆರ್ಥಿಕ ಪರಿಸ್ಥಿತಿ ಚಿಂತಾಜನಕ ವಾಗಿರುವುದರಿಂದ ಮತ್ತು ಶಿಕ್ಷಣಕ್ಕೆ ಸರಕಾರದ ಕಡೆಯಿಂದ ಯಾವ ಸೌಲಭ್ಯವೂ ಸಿಗದ ಕಾರಣ, ಬ್ರಾಹ್ಮಣರ 44% ಮಕ್ಕಳು ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಶಾಲೆ ತೊರೆಯುತ್ತಾರೆ. 36% ಮಕ್ಕಳು ಹೈಸ್ಕೂಲಿಗೇ ತಮ್ಮ ಶಿಕ್ಷಣವನ್ನು ಕೊನೆಗೊಳಿಸುತ್ತಾರೆ. (4) ತಮಿಳುನಾಡಿನ ಪ್ರಸಿದ್ಧ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಬ್ರಾಹ್ಮಣ ಅರ್ಚಕರಿಗೆ ಅಲ್ಲಿನ ಧಾರ್ಮಿಕ ದತ್ತಿ ಇಲಾಖೆ ನಿಗದಿಪಡಿಸಿರುವ ಸಂಬಳ ಮಾಸಿಕ ಮುನ್ನೂರು ರುಪಾಯಿ. ಸರಕಾರ ನೇಮಿಸಿದ ಚಪ್ಪಲಿ ಸ್ಟ್ಯಾಂಡ್ನ ನೌಕರನಿಗೆ ರೂ.2500 ಸಂಬಳ ಇದೆ. (5) ಭಾರತ ಸರಕಾರ ಪ್ರತಿವರ್ಷ ದೇಶಾದ್ಯಂತ ಇರುವ ಮಸೀದಿಗಳ ಇಮಾಮ್ಗಳಿಗೆ ಸಂಬಳ ಕೊಡಲು ಖರ್ಚು ಮಾಡುವ ದುಡ್ಡು 1,000 ಕೋಟಿ ರುಪಾಯಿ. ಹಜ್ ಸಬ್ಸಿಡಿ ಹೆಸರಲ್ಲಿ ಸುರಿಯುತ್ತಿರುವ ಹಣ 200 ಕೋಟಿ ರುಪಾಯಿ.
ಬ್ರಾಹ್ಮಣರಿಗೆ (ಅಥವಾ ಒಟ್ಟಾರೆ ಹಿಂದೂಗಳಿಗೆ) ಈ ಸರಕಾರ ಖರ್ಚು ಮಾಡುವ ದುಡ್ಡೆಷ್ಟು, ಭೂತಗನ್ನಡಿಯಲ್ಲಿ ಹುಡುಕಬೇಕು. (6) ಬ್ರಾಹ್ಮಣ್ಯದ ವಿರುದ್ಧ ದನಿ ಎತ್ತುವವರು ಯಾರು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ. ಮಾರ್ಕ್ಸಿಸ್ಗಳು, ಮಿಷನರಿಗಳು, ಮುಸ್ಲಿಮರು, ಕ್ರಿಶ್ಚಿಯನ್ ಬೆಂಬಲಿತ ದಲಿತ ವರ್ಗದ ಜನರು. ಇವರು ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ವಿರುದ್ಧ ಮಾತಾಡುವ ನೆಪದಲ್ಲಿ ಹಿಂದೂ ಧರ್ಮವನ್ನೇ ಒಡೆಯಲು ಯತ್ನಿಸುತ್ತಿದ್ದಾರೆನ್ನುವುದು ನಿಮಗೆ ತಿಳಿಯಬಹುದು. ಬ್ರಾಹ್ಮಣರನ್ನು ಒಡೆದರೆ ಬಹಳ ಸುಲಭವಾಗಿ ಹಿಂದೂ ಧರ್ಮದ ನಡು ಮುರಿಯಬಹುದೆಂದು ಅವರಿಗೆ ಮನವರಿಕೆಯಾಗಿದೆ.ಭಾರತೀಯರು ಎಂದೆಂದಿಗೂ ಬ್ರಿಟಿಷ್ ಸಾಮ್ರಾಜ್ಯದ ಗುಲಾಮರಾಗಿಯೇ ಉಳಿಯಬೇಕಾದರೆ ಅವರ ಬುದ್ಧಿಯನ್ನು ಆಳಬೇಕು ಎಂದು ಮೆಕಾಲೆ ಹೇಳಿದ ಮಾತು (ಕು)ಪ್ರಸಿದ್ಧ. ನೀವು ಯಾರನ್ನೇ ಆಗಲಿ ತುಳಿಯಬೇಕಾದರೆ ಅವರನ್ನುತುಚ್ಛೀಕರಿಸಬೇಕು.
ಜಗತ್ತಿನಲ್ಲಿ ಆಗಿಹೋಗಿರುವ ಪಾಪಗಳಿಗೆಲ್ಲ ಅವರೇ ಕಾರಣರೆಂದು ದೂರಬೇಕು. ಭಾರತದಲ್ಲಿ ಇಂಥದೊಂದು ಯುದ್ಧವನ್ನು ಬ್ರಾಹ್ಮಣರ ಮೇಲೆ ಸಾರಲು ನಮ್ಮ ಬುದ್ಧಿಜೀವಿಗಳಿಗೆ ತುಂಬ ಅನುಕೂಲಕರವಾಗಿ ಒದಗಿ ಬಂದದ್ದು ಮನುಸ್ಮೃತಿ. ಆ ಕೃತಿಯನ್ನು ಅದೆಷ್ಟು ಜನ ಓದಿದ್ದಾರೋ ಬಿಟ್ಟಿದ್ದಾರೋ ಅಂಬೇಡ್ಕರ್ ಅದರ ಬಗ್ಗೆ ತನ್ನ ರಿಡಲ್ಸ್ ಇನ್ ಹಿಂದೂಯಿಸಂ ಪುಸ್ತಕದಲ್ಲಿ ಬರೆದರೆಂಬ ಏಕೈಕ ಕಾರಣಕ್ಕಾಗಿ ಇವರೆಲ್ಲ ಅದರ ಬಗ್ಗೆ ವಿಷ ಕಾರಿದರು. ಭಾರತದ ಎಲ್ಲ ಅನಿಷ್ಟಗಳಿಗೂ ಅದೊಂದೇ ಏಕೈಕ ಕಾರಣವೆಂದು ಹಾರಾಡಿ, ಬ್ರಾಹ್ಮಣರು ತಮ್ಮ ಪರಂಪರೆಯಲ್ಲಿ ಮಾಡದ ಪಾಪಕಾರ್ಯಗಳಿಗೂ ಪಶ್ಚಾತ್ತಾಪ ಪಡುವಂತೆ ಒತ್ತಾಯಿಸಿದರು. ಬುದ್ಧಿಜೀವಿಗಳ ವಾದದ ಬಡಕಲುತನ ನೋಡಿ: ಇವರ ಪ್ರಕಾರ ಈ ದೇಶದಲ್ಲಿ ಶತಶತಮಾನಗಳಿಂದ ಅಸ್ತಿತ್ವದಲ್ಲಿರುವುದು ಎರಡೇ ವರ್ಣಗಳು. ಒಂದು ಶೋಷಕ ಬ್ರಾಹ್ಮಣರು, ಇನ್ನೊಂದು ಶೋಷಿತ ಶೂದ್ರರು! ಉಳಿದೆರಡು ವರ್ಣಗಳ ಮಾತನ್ನೇ ಇವರ್ಯಾರೂ ಆಡುವುದಿಲ್ಲ. ಯಾಕೆಂದರೆ ವೈಶ್ಯ ಮತ್ತು ಕ್ಷತ್ರಿಯ ವರ್ಣದಲ್ಲಿ ಒಕ್ಕಲಿಗರಂಥ ಪ್ರಬಲ ಜಾತಿಗಳು ಬರುವುದರಿಂದ, ಅವರೂ ಶೂದ್ರರ ಶೋಷಣೆ ಮಾಡಿದ ಕತೆಯೇನಾದರೂ ಹೇಳಿದರೆ, ಬುದ್ಧಿಜೀವಿಗಳಿಗೆ ತಮ್ಮ ಬೆನ್ನುಮೂಳೆ ತುಂಡಾಗದೆ ಉಳಿಯುವುದರ ಬಗ್ಗೆಯೇ ಅನುಮಾನವಿದೆ! ಹಾಗಾಗಿ, ಈ ದೇಶದ ಜನಸಂಖ್ಯೆಯಲ್ಲಿ ಎಂದೆಂದೂ 2% ದಾಟದ ಬ್ರಾಹ್ಮಣರು 50%ರಷ್ಟಿರುವ ದಲಿತರನ್ನು ತುಳಿದರು, ಕಿವಿಗೆ ಸೀಸ ಸುರಿದರು, ಬೆಂಕಿಗೆ ಹಾಕಿದರು ಎಂಬೆಲ್ಲ ಕತೆಗಳನ್ನು ಕಟ್ಟಿಕೊಂಡು ಬರಲಾಯಿತು. ಭಾರತದ 3,000 ವರ್ಷಗಳ ಇತಿಹಾಸದಲ್ಲಿ ಕಾದ ಸೀಸ ಸುರಿದ ಒಂದೇ ಒಂದು ಘಟನೆಯೂ ದಾಖಲಾಗಿಲ್ಲವೆಂಬುದನ್ನು ಖೊಟ್ಟಿ ಕಮ್ಯುನಿಸ್ಟ್ ಇತಿಹಾಸಜ್ಞರು ಮರೆತೇಬಿಟ್ಟರು!ಗೋತಿಯೇರ್ ಅವರು ಹೇಳುವಂತೆ ಈ ದೇಶದ ಬ್ರಾಹ್ಮಣರ ಸ್ಥಿತಿ ನಿಜಕ್ಕೂ ಚಿಂತಾಜನಕವಾಗಿದೆ. ಹೇಗೆ ಎಸೆದರೂ ಕಾಲ ಮೇಲೆ ನಿಲ್ಲಬಲ್ಲ ಬೆಕ್ಕಿನಂತೆ ಈತ ಎಂದು ಅವನನ್ನು ಮತ್ತೆಮತ್ತೆ ಎತ್ತರದಿಂದ ಎಸೆಯುವ ಆಟವನ್ನು ನಮ್ಮ ಸರಕಾರಗಳು ಮಾಡುತ್ತಲೇ ಬಂದಿವೆ.
ಹಾಗಿದ್ದರೂ ಮೀಸಲು ಇಲ್ಲದೆ ಸಮಾಜದಲ್ಲಿ ಎತ್ತರಕ್ಕೇರಬಹುದೆಂಬುದಕ್ಕೆ ಅತಿದೊಡ್ಡ ಉದಾಹರಣೆ ಬ್ರಾಹ್ಮಣನೇ ಎಂದೂ ಹೇಳಬಹುದು. ಸಮಾಜದಿಂದ ಎಲ್ಲ ಬಗೆಯ ಗೌರವ ಗಳಿಸಿದ್ದ ಆತ ಎಲ್ಲ ಸೌಲಭ್ಯಗಳಿಂದ ವಂಚಿತನಾದ ಮೇಲೂ ಆತ್ಮಗೌರವವೆಂಬ ಒಂದೇ ಶಕ್ತಿಯನ್ನು ಹೊಟ್ಟೆಯೊಳಗಿಟ್ಟುಕೊಂಡು ಛಲದಿಂದ ಬದುಕುತ್ತಿದ್ದಾನೆ. ಇಂದು ಬ್ರಾಹ್ಮಣನೆಂದು ಹೇಳಿಕೊಳ್ಳುವುದೇ ಅನಾಹುತಗಳಿಗೆ ಆಹ್ವಾನ ಕೊಟ್ಟಂತೆ. ತಾನು ಬ್ರಾಹ್ಮಣನೆಂದು ಹೇಳಿಕೊಂಡರೆ ಸಾಕು, ಅವನಿಗೆ ಕೋಮುವಾದಿ, ಮೂಲಭೂತವಾದಿ, ಚೆಡ್ಡಿ ಎಂಬೆಲ್ಲ ಉಪಾಧಿಗಳನ್ನು ಸಿಕ್ಕಿಸಲಾಗುತ್ತದೆ. ಅವನ ಜುಟ್ಟು, ಹರಕು ಪಂಚೆ, ವೇದಾಧ್ಯಯನ ನಿಷಲತೆ, ಲೋಕಜ್ಞಾನದ ಕೊರತೆ, ಸರಕಾರದ ಅವಜ್ಞಾಗಳ ಬಗ್ಗೆ ಆಡಿಕೊಂಡು ನಗಲಾಗುತ್ತದೆ. ದಲಿತನೊಬ್ಬ ತಾನು ದಲಿತನೆಂದು ಹೆಮ್ಮೆ ಪಡುವಂತೆ, ಗೌಡ ತಾನೊಬ್ಬ ಗೌಡನೆಂದು ಗತ್ತಿನಿಂದ ಹೇಳಿಕೊಳ್ಳುವಂತೆ, ಮುಸ್ಲಿಂ ತನ್ನ ರಿಲಿಜನ್ನಿನ ಗುರುತುಗಳನ್ನು ಅಭಿಮಾನದಿಂದ ಧರಿಸುವಂತೆ ಒಬ್ಬ ಬ್ರಾಹ್ಮಣ ಸಾರ್ವಜನಿಕವಾಗಿ ತನ್ನತನವನ್ನು ಘೋಷಿಸಿಕೊಳ್ಳಲಾರ. ಅವನ ಅಭಿಮಾನ, ಹೆಮ್ಮೆಗಳೇನಿದ್ದರೂ ನಾಲ್ಕು ಜನ ಬ್ರಾಹ್ಮಣರ ನಡುವಿನ ಉತ್ತರಕುಮಾರ ಪೌರುಷಗಳಷ್ಟೆ. ಯಾವುದೇ ರಾಜಕೀಯ ವ್ಯಕ್ತಿಗಳನ್ನು ಬೇಕಾದರೂ ನೋಡಿ. ಅವರು ಇದುವರೆಗೆ ಮುಸ್ಲಿಂ, ದಲಿತ, ಒಕ್ಕಲಿಗ, ಅಹಿಂದ ಎಂಬೆಲ್ಲ ಹೆಸರುಗಳನ್ನು ನೇರವಾಗಿ ಉಲ್ಲೇಖಿಸಿದಷ್ಟು ಬ್ರಾಹ್ಮಣರ ಬಗ್ಗೆ ಆಡಿಯೇ ಇಲ್ಲ. ಎಂಟುನೂರು ವರ್ಷಗಳ ಕಾಲ ಭಾರತವನ್ನು ಜುಟ್ಟು ಹಿಡಿದು ಅಲ್ಲಾಡಿಸಿದ ಮುಸ್ಲಿಮರು ಇಂದು ಅದರ ಯಾವ ಪಾಪಗಳಿಗೂ ಹೊಣೆಗಾರರಲ್ಲವಾದರೆ ಅದ್ಯಾವಾಗಲೋ ಮಾಡಿದರೆನ್ನಲಾದ ಶೋಷಣೆಗೆ ಇಂದಿನ ಬ್ರಾಹ್ಮಣರು ಯಾಕೆ ತಲೆಯೊಡ್ಡಬೇಕು? ಅವರು ಮನುಷ್ಯರಲ್ಲವೇ? ಬ್ರಾಹ್ಮಣರನ್ನು ಎಲ್ಲ ಸೌಲಭ್ಯಗಳಿಂದ ವಂಚಿತರನ್ನಾಗಿಸುವುದೇ ಸಂವಿಧಾನದಲ್ಲಿರುವ ಸಮಾನತೆ ಆಶಯವೇ? ಎಂದು ಇದುವರೆಗೆ ಯಾರೊಬ್ಬ ರಾಜಕಾರಣಿಯಾದರೂ ಕೇಳಿದ್ದಾನಾ? ಜೆಡಿಎಸ್ ಪಕ್ಷದ ಮಿದುಳಿನಂತಿರುವ ವೈ.ಎಸ್.ವಿ. ದತ್ತಾ, ಕಾಂಗ್ರೆಸ್ ಸರಕಾರದ ಮಾನವನ್ನು ಅಷ್ಟಿಷ್ಟಾದರೂ ಕಾಪಾಡುತ್ತಿರುವ ಆರ್.ವಿ. ದೇಶಪಾಂಡೆ ಇವರೆಲ್ಲ, ಬ್ರಾಹ್ಮಣರಿಗಾಗಿ ಒಂದೇ ಒಂದು ಸಲವಾದರೂ, ನೆಪಮಾತ್ರಕ್ಕಾದರೂ ದನಿಯೆತ್ತಿದ್ದನ್ನು ನಾವು ಕೇಳಿದ್ದೇವೆಯೇ? ಚುನಾವಣೆಯ ಸಮಯದಲ್ಲಿ ಮಾತ್ರ ವಿಪ್ರಕೂಟಗಳಲ್ಲಿ ಗುಪ್ತವಾಗಿ ಪ್ರಚಾರ ಮಾಡಿಕೊಂಡು ಬ್ರಾಹ್ಮಣಮತಗಳನ್ನು ಯಾಚಿಸುವ, ನಂತರ ಕುಲಬಾಂಧವರನ್ನು ಕಡೆಗಣ್ಣಲ್ಲೂ ನೋಡದ ಆಷಾಢಭೂತಿಗಳಿಗೆ ಉದಾಹರಣೆ ಬೇಕಾದಷ್ಟಿದೆ.
ರಾಜಕಾರಣಿಗಳ ಮಾತು ಬಿಡಿ; ನಮ್ಮ ರಾಜ್ಯದ ಬುದ್ಧಿಜೀವಿ ಕಂಟಕರ ಪೈಕಿ ನೂರಕ್ಕೆ ತೊಂಬತ್ತು ಜನ ಬ್ರಾಹ್ಮಣರೇ! ಮಾತೆತ್ತಿದರೆ ಸಮಾನತೆ, ಸಾಮಾಜಿಕ ನ್ಯಾಯ, ಶೋಷಣೆಯ ವಿರುದ್ಧ ಹೋರಾಟ ಎಂದು ಬಡಬಡಿಸುವ ಬುದ್ಧಿಜೀವಿಗಳು ಇಂದು ಎಲ್ಲ ಬಗೆಯ ಶೋಷಣೆಗೆ ಗುರಿಯಾಗಿರುವ ಬ್ರಾಹ್ಮಣರ ಪರವಾಗಿ ಯಾವಾಗ ಮಾತಾಡಿದ್ದಾರೆ? ಬ್ರಾಹ್ಮಣರ ಬಗ್ಗೆ ಚರ್ಚಿಸುತ್ತಿದ್ದಾಗ ಒಬ್ಬ ಪ್ರಾಜ್ಞರು, ಅವರು ಬುದ್ಧಿವಂತರು; ಬದುಕಿಕೊಳ್ತಾರೆ ಬಿಡಿ ಎಂದರು! ಇಂಥ ಸರಳೀಕರಣಗಳು ಅಪಾಯಕಾರಿ. ಬ್ರಾಹ್ಮಣಜಾತಿಯಲ್ಲಿ ಹುಟ್ಟಿ ಆರ್ಥಿಕ ಮುಗ್ಗಟ್ಟಿನಿಂದಲೋ ಬೌದ್ಧಿಕ ಅಸಾಮರ್ಥ್ಯದಿಂದಲೋ ಓದನ್ನು ಅರ್ಧಕ್ಕೆ ನಿಲ್ಲಿಸಿದ ಲಕ್ಷಾಂತರ ಬಡಪಾಯಿಗಳ ಜೀವಂತ ಉದಾಹರಣೆಗಳು ಕಣ್ಣಮುಂದಿರುವಾಗ ಇಂಥ ಉದ್ಧಟತನದ ಹೇಳಿಕೆಗಳನ್ನು ಯಾವ ಪಂಡಿತನೂ ಕೊಡಬಾರದು. ಈ ದೇಶದಲ್ಲಿ ಬ್ರಾಹ್ಮಣರ ಸ್ಥಿತಿ ಯಾವ ಕಾಲದಲ್ಲಿಯೂ ಉತ್ತಮವಾಗಿರಲಿಲ್ಲ ಎಂದು ಸರಿಯಾದ ಇತಿಹಾಸ ಓದಿದರೇನೇ ತಿಳಿಯುತ್ತದೆ.
ಬಡಬ್ರಾಹ್ಮಣ ಎಂಬುದು ದ್ವಿರುಕ್ತಿಯಾಗಿದ್ದ ದೇಶ ಇದು. ರಾಜಮಹಾರಾಜರ ಕೈಕೆಳಗೆ ಕೆಲಸ ಮಾಡುವ ಪಂಡಿತವರ್ಗಕ್ಕೆ ಸೇರಿಯೂ ಕುಚೇಲರಾಗಿ ಬದುಕುತ್ತ, ವೇದೋಪನಿಷತ್ತು ಕಾವ್ಯಪುರಾಣಗಳನ್ನು ಸಹಸ್ರವರ್ಷಗಳಿಂದ ಕಾಪಿಟ್ಟುಕೊಂಡು ಬಂದ ಸಂಸ್ಕೃತಿಯ ವಕ್ತಾರರು ಬ್ರಾಹ್ಮಣರು. ಶೋಷಣೆ, ಅಸ್ಪೃಶ್ಯತೆಯಂಥ ಅನಾಚಾರಗಳನ್ನು ಸಮಾಜದ ಉಳಿದ ವರ್ಗಗಳೂ ಅನುಸರಿಸುತ್ತಿದ್ದರು, ಬ್ರಾಹ್ಮಣರು ಅದರ ಒಂದು ಭಾಗವಾಗಿದ್ದರು ಎಂಬುದನ್ನು ನಾವು ಗಮನಿಸಬೇಕು. ಭೀಮರಾಯರಿಗೆ ಸಹಾಯಹಸ್ತ ಚಾಚಿದ ಮಹಾದೇವ ಅಂಬೇಡ್ಕರ್, ಸಮಾಜದ ಎಲ್ಲ ಜಾತಿಗಳಲ್ಲೂ ಅಸ್ತಿತ್ವದಲ್ಲಿದ್ದ ಸತಿಪದ್ಧತಿಯನ್ನು ನಿಷೇಧಿಸಬೇಕೆಂದು ಹೋರಾಡಿದ ರಾಜಾರಾಂ ಮೋಹನರಾಯರು ಬ್ರಾಹ್ಮಣರಾಗಿದ್ದರು. ಸಮಾಜದ ಅನಿಷ್ಟಗಳನ್ನೆಲ್ಲ ಬ್ರಾಹ್ಮಣರ ತಲೆಗೆ ಕಟ್ಟಿ ಅವರನ್ನು ಮಹಾಪಾಪಿಗಳೆಂದು ಬಿಂಬಿಸುವ ಕೆಲಸ ಅದೆಷ್ಟು ಯಶಸ್ವಿಯಾಗಿದೆಯೆಂದರೆ, ಬ್ರಾಹ್ಮಣರು ತಮ್ಮ ಪಾಪಕ್ಕಾಗಿ ಇಂದಿಗೂ ಪಶ್ಚಾತ್ತಾಪ ಪಡಬೇಕೆಂಬ ವಿತಂಡವಾದವನ್ನು ನಾನೇ ಹಲವಾರು ಸಲ ಕೇಳಿದ್ದೇನೆ.
ನೆನಪಿಡಿ: ಭಾರತದಲ್ಲಿ ತಾವು ಮಾಡಿದ ಪಾಪಗಳಿಗಾಗಿ ಪ್ರಾಯಶ್ಚಿತ್ತ ಅನುಭವಿಸಿದ ಯಾವ ಜಾತಿ, ಪಕ್ಷ, ವ್ಯಕ್ತಿಯೂ ಇಲ್ಲ; ಮಾಡದ ಪಾಪಕ್ಕೆ ರೋದಿಸುವ ಬ್ರಾಹ್ಮಣರನ್ನು ಹೊರತುಪಡಿಸಿ. ಹಿಂದೂ ದೇವಸ್ಥಾನಗಳನ್ನು ಹೊಡೆದುರುಳಿಸಿದ ಮುಸ್ಲಿಮರಾಗಲೀ ಮತಾಂತರಕ್ಕಾಗಿ ಹಿಂಸಾತ್ಮಕ ಮಾರ್ಗ ಹಿಡಿದ ಕ್ರೈಸ್ತರಾಗಲೀ ಈ ದೇಶದ ಇತಿಹಾಸವನ್ನು ತಿರುಚಿ ಆರ್ಯ-ದ್ರಾವಿಡವೆಂಬ ಖೊಟ್ಟಿ ವಾದ ಮುಂದಿಟ್ಟು ಹೊಡೆದಾಟ ಸೃಷ್ಟಿಸಿದ ಕಮ್ಮಿನಿಷ್ಠ ಬುದ್ಧಿಜೀವಿಗಳಾಗಲೀ ತುರ್ತುಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ನೇಣಿಗೆ ಹಾಕಿದ ಕಾಂಗ್ರೆಸ್ ಆಗಲೀ ಇದುವರೆಗೆ ತಮ್ಮ ಪಾಪಕಾರ್ಯಗಳಿಗೆ ಪ್ರಾಯಶ್ಚಿತ್ತ ಅನುಭವಿಸಿದ್ದನ್ನು ನಾವ್ಯಾರೂ ಕಂಡಿಲ್ಲ, ಕೇಳಿಲ್ಲ. ಇವರಿಗೆ ಅನ್ವಯವಾಗದ ನಿಯಮ ಬ್ರಾಹ್ಮಣನಿಗೆ, ಅದೂ ಶೋಷಣೆಯ ಭಾಗವಲ್ಲದ ಇಂದಿನ ಬ್ರಾಹ್ಮಣನಿಗೆ ಲಗಾವಾಗುತ್ತದೆಂಬುದು ಹಾಸ್ಯಾಸ್ಪದ ಮಾತ್ರವಲ್ಲ ಅಸಾಂವಿಧಾನಿಕ.ಬ್ರಾಹ್ಮಣ ಈಗೇನು ಮಾಡಬೇಕು? ಎಲ್ಲರಂತೆ ತನಗೂ ಮೀಸಲು ಬೇಕೆಂದು ಆತ ಕೇಳುವುದರಲ್ಲಿ ಅರ್ಥವಿಲ್ಲ. ಹಾಗೇನಾದರೂ ಆದರೆ ಜಾರುಬಂಡಿಯಲ್ಲಿ ಕೆಳಕೆಳಗೆ ಕುಸಿಯುತ್ತಿರುವ ಉಳಿದೆಲ್ಲ ವರ್ಗಗಳಂತೆ ಆತನೂ ತನ್ನ ಸಾಮರ್ಥ್ಯ ಮರೆತ ಪರಾವಲಂಬಿಯಾಗುತ್ತಾನೆ. ಬ್ರಾಹ್ಮಣ ತನ್ನ ಹುಸಿ ಅಹಂಕಾರವನ್ನು ಬದಿಗಿಟ್ಟು, ಇಲ್ಲಸಲ್ಲದ ಸುಳ್ಳು ಇತಿಹಾಸದ ಕ್ರೌರ್ಯಗಳಿಗೆ ಪ್ರಾಯಶ್ಚಿತ್ತ ಅನುಭವಿಸುವುದನ್ನು ಮೊದಲು ನಿಲ್ಲಿಸಬೇಕು. ಎರಡು ಜಡೆಗಳನ್ನು ಹೇಗೋ ಹಾಗೆಯೇ ಎರಡು ಜನಿವಾರಗಳನ್ನೂ ಒಟ್ಟುಗೂಡಿಸಲು ಸಾಧ್ಯವಿಲ್ಲ ಎಂಬ ವ್ಯಂಗ್ಯಮಾತೊಂದಿದೆ. ತಮ್ಮೊಳಗೇ ಹವ್ಯಕ, ಸ್ಮಾರ್ತ, ಮಾಧ್ವ, ಸಂಕೇತಿ, ಹೊಯ್ಸಳ, ಚಿತ್ರಾಪುರ, ಗೌಡ ಸಾರಸ್ವತ ಎಂದು ನೂರೆಂಟು ದ್ವೀಪಗಳಾಗಿ ಹೊಡೆದಾಡಿಕೊಂಡಿರುವ ಬದಲು ಕೈಜೋಡಿಸಿ ಸೇತುವೆಗಳನ್ನು ನಿರ್ಮಿಸಿಕೊಂಡರಷ್ಟೇ ಈ ಸಮುದಾಯ ಮುಂದಿನ ಶತಮಾನಕ್ಕೆ ಉಳಿದುಕೊಳ್ಳಬಹುದು. ಇಲ್ಲವಾದರೆ, ಕಾಶ್ಮೀರದ ನಿರಾಶ್ರಿತ ಪಂಡಿತರಂತೆ ಉಳಿದ ಬ್ರಾಹ್ಮಣರೂ ತಮ್ಮ ತಾಯ್ನೆಲದಲ್ಲಿಯೇ ನಿರ್ವಸಿತರಾಗಿ ನಿರ್ಗತಿಕರಾಗಿ ಅಳಿದುಹೋಗುವ ದಿನವನ್ನು ನೋಡಬೇಕಾಗುತ್ತದೆ. ಬ್ರಾಹ್ಮಣರು ಅಳಿದರೆ ಭಾರತವೂ ಅಳಿದಂತೆ ಎನ್ನುವುದನ್ನು ಮರೆಯಬೇಡಿ.
ಕೃಪೆ : ವಿಶ್ವ ವಾಣಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ