*ರಾಜಕೀಯದಲ್ಲಿ ಯುವಕರ ಪಾತ್ರ*
*ಅತ್ತ ಆಗಸದಲ್ಲಿ ಬೆಂಕಿಯುಂಡೆಯಾಗಿ ರವಿ ತಪಿಸುತ್ತಿದ್ದರೆ, ಇತ್ತ ಅವನಿಗೆ ಪೈಪೋಟಿಯೋ ಎಂಬಂತೆ ದೇಶಕ್ಕೆ ದೇಶವನ್ನೇ ಚುನಾವಣೆಯೆಂಬ ಮಹಾಗ್ನಿ ವ್ಯಾಪಿಸಿ ದಹಿಸುತ್ತಿದೆ. ಅಂತೂ ವಸಂತಕ್ಕೂ ಮೊದಲೇ ವೈಶಾಖ ಬಂದಿದೆಯೋ ಎಂಬಂತೆ ಭಾಸವಾಗುತ್ತಿರುವುದಂತೂ ಸುಳ್ಳಲ್ಲ.*
*ಎಲ್ಲ ಚರ್ಚೆಗಳೂ ರಾಜಕೀಯವೆಂಬ ಸಂಗತಿಯಲ್ಲೇ ಕೂಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ರಾಜಕಾರಣವೆಂಬ ಕ್ಷೇತ್ರ ಪ್ರಜ್ಞಾವಂತರಿಂದ ದೂರವೇ ಇರಲು ಕಾರಣವಾದರೂ ಏನು ಎಂಬ ಪ್ರಶ್ನೆ ಪ್ರಸ್ತುತ. ವೈದ್ಯ, ಎಂಜಿನಿಯರಿಂಗ್ ಮೊದಲಾದ ಬಹುಬೇಡಿಕೆಯುಳ್ಳ ವೃತ್ತಿಗಳಂತೆ ಯಾಕೆ ರಾಜಕಾರಣವೂ ಯುವಮಾನಸವನ್ನು ಸೆಳೆಯುವ ಕೆಲಸ ಮಾಡುತ್ತಿಲ್ಲ ಎಂಬುದು ರಾಜಕೀಯರಂಗದ ಭವಿಷ್ಯದ ದೃಷ್ಟಿಯಲ್ಲಿ ಬಹಳ ಮುಖ್ಯವಾದ ಪ್ರಶ್ನೆ. ಈ ಪ್ರಶ್ನೆಯನ್ನಿಟ್ಟುಕೊಂಡು ಹೊರಟರೆ ನಿಮಗೆ ಹಲವಾರು ರೀತಿಯ ಉತ್ತರಗಳು ಸಿಗುತ್ತವೆ.*
*ರಾಜಕೀಯ ಕ್ಷೇತ್ರದಿಂದ ಜನಸಾಮಾನ್ಯರು ಅದರಲ್ಲೂ ಯುವಕರು ಅಂತರ ಕಾಪಾಡಿಕೊಳ್ಳುವಂಥ ಸಂದರ್ಭ ಸೃಷ್ಟಿಯಾಗಲು ಮೊದಲ ಕಾರಣ ಅದು ಉಳಿದ ಕ್ಷೇತ್ರಗಳಂತೆ ಆಕರ್ಷಕವಾಗಿಲ್ಲ ಎಂಬುದು. ಅದು ಯಾವತ್ತೂ ಒತ್ತಡಗಳ ಮೊತ್ತ. ಸೋಲು ಗೆಲುವಿನ ಆಟ. ಗೆದ್ದವ ಸೋತ, ಸೋತವ ಸತ್ತ ಎಂಬ ಮಾತು ಈ ಕ್ಷೇತ್ರಕ್ಕೆ ಅಕ್ಷರಶಃ ಅನ್ವಯಿಸುತ್ತದೆ. ಆ ಮಾತೇ ಇನ್ನಷ್ಟು ನಮ್ಮನ್ನು ಭಯ ಮತ್ತು ಆತಂಕಕ್ಕೆ ನೂಕುತ್ತದೆ. ಮತ್ತೊಬ್ಬರ ಸೋಲಿನ ಸಮಾಧಿಯ ಮೇಲೆ ಇಲ್ಲಿ ಕಟ್ಟಿಕೊಳ್ಳುವ ಸೌಧ ಹೆಚ್ಚು ದಿನ ಅರಮನೆಯಾಗುಳಿಯದೇ ಬಹು ಬೇಗ ಭೂತ ಬಂಗಲೆಯಾಗಿ ಕಾಡಲಾರಂಭಿಸುತ್ತದೆ. ರಾಜಕೀಯವೆಂಬುದು ಒಂದು ಅನಿಶ್ಚಿತತೆಯ ಗೂಡು. ಜಪಾನಿನ ನೆಲದಂತೆ ಎಲ್ಲಿ ಯಾವಾಗ ಭೂಕಂಪವಾಗುತ್ತದೆಂದು ಹೇಳಲು ಬಾರದು.*
*ಅಷ್ಟಕ್ಕೂ ರಾಜಕೀಯ ಕ್ಷೇತ್ರಕ್ಕೆ ತನ್ನದೇ ಆದ ಅರ್ಹತೆಗಳ ನಿರ್ಬಂಧವೇ ಇಲ್ಲ. ಇಲ್ಲಿ ಯಾರು ಬೇಕಾದರೂ ನುಗ್ಗಬಹುದು ಅಥವಾ ಧುಮುಕಬಹುದು. ರಾಜಕೀಯಕ್ಕೆ ಇಳಿಯುವುದೆಂದರೆ ಅದು ನಿಜಕ್ಕೂ ಇರುವ ಗೌರವವನ್ನು ಕಡಿಮೆಗೊಳಿಸಿಕೊಂಡಂತಲೇ ಲೆಕ್ಕ ಎಂಬ ಭಾವ ಇಂದು ಜನರಲ್ಲಿ ಮನೆ ಮಾಡಿದೆ. ಹೀಗಿರುವಾಗ ಎಲ್ಲ ಒಳ್ಳೆಯತನಗಳನ್ನೂ ಜೊತೆಗಿಟ್ಟು ಹೋರಾಡುತ್ತೀರೆಂದು ಹೊರಡುವಿರಾದರೆ ಯುದ್ಧಕ್ಕೆ ಮೊದಲೇ ನೀವು ಸೋಲನ್ನು ಒಪ್ಪಿಕೊಂಡಂತೆ. ಲಾಗಾಯ್ತಿನಿಂದಲೂ ರಾಜಕೀಯ ಕ್ಷೇತ್ರ ನಡೆದು ಬಂದ ದಾರಿಯೇ ಅಂಥಾದ್ದು. ಇಲ್ಲಿ ಲೋಭಿಗಳಿಗೇ ಜಾಗ. ಮಹಾಭಾರತವನ್ನೇ ತೆಗೆದುಕೊಂಡರೆ ಅಲ್ಲಿ ದುರ್ಯೋಧನನಂಥ ಅಧಿಕಾರ ವ್ಯಾಮೋಹಿ ಮಾಡಿದ ಅನ್ಯಾಯಗಳ್ಯಾವುದೂ ಇಂದಿನ ರಾಜಕಾರಣಿಗಳಿಗೆ ಹೊಸದಲ್ಲ. ಧೃತರಾಷ್ಟ್ರರಂಥ ಪುತ್ರವ್ಯಾಮೋಹಿ ತಂದೆಯಂದಿರು, ಶಕುನಿಯಂಥ ವಿವೇಕವನ್ನೇ ಮರೆಸುವ ಆಪ್ತ ಸಮೂಹ, ಸ್ವತಃ ವೀರರಾಗಿದ್ದರೂ ಋಣಕ್ಕೆ ಬಿದ್ದು ಅನ್ಯಾಯವನ್ನು ಬೆಂಬಲಿಸುವ ಕರ್ಣರಂಥವರು ಇಲ್ಲಿಯೂ ಬೇಕಾದಷ್ಟಿದ್ದಾರೆ. ವ್ಯವಸ್ಥೆಯನ್ನು ಬದಲಿಸುವ ಹೊಸ ಹುಮ್ಮಸ್ಸಿನ ಯುವಕರೇನಾದರೂ ರಾಜಕೀಯ ಪ್ರವೇಶಿಸಿದರೆ ಕೆಲವೇ ದಿನಗಳಲ್ಲಿ ಇದ್ದ ಎಲ್ಲ ಕನಸುಗಳೂ ಮುರುಟಿಹೋಗುವಂಥ ಅಸಹಾಯಕ ಸ್ಥಿತಿ ಅವರಿಗೆ ಎದುರಾಗುತ್ತವೆ. ಗುಂಪುಗಾರಿಕೆ, ಜಾತೀಯತೆ, ಹಣಬಲ ಮುಂತಾದ ಅರ್ಹತೆಗಳಲ್ಲದ ಅರ್ಹತೆಗಳಿರುವವರು ಮಾತ್ರ ಇಲ್ಲಿ ಆಳಬಲ್ಲರು. ಚುನಾವಣೆಯೆಂಬುದು ಇಂದು ಕೊಡುಕೊಳ್ಳುವ ವ್ಯಾಪಾರವಾಗಿದೆ. ಪಕ್ಷಗಳೂ ಕೂಡ ಕೋಟಿಗಟ್ಟಲೆ ಸುರಿಯಬಲ್ಲ ಅಭ್ಯರ್ಥಿಗಳನ್ನೇ ಹುಡುಕುತ್ತವೆ.*
*ಅಷ್ಟರ ಮೇಲೂ ಯಾವುದೋ ಒಬ್ಬ ಉತ್ಸಾಹೀ ತರುಣ ರಾಜಕೀಯ ಪ್ರವೇಶಿಸುತ್ತಾನೆಂದೇ ಭಾವಿಸೋಣ. ರಾಜಕೀಯರಂಗ ಪ್ರವೇಶದ ನಂತರ ಅವನ ದೈನಿಕ ಕಾರ್ಯಗಳೇನಿರಬಹುದೆಂದು ಊಹಿಸುವುದು ಕಷ್ಟವಲ್ಲ. ಇಂದಿನ ರಾಜಕಾರಣಿಗಳು ಮಾಡುತ್ತಿರುವುದನ್ನೇ ಆತನೂ ಅನುಸರಿಸಬೇಕಾಗುತ್ತದೆ. ಎದುರಾ ಎದುರೇ ಸುಳ್ಳು ಹೇಳುವ ಗಟ್ಟಿತನ ಬೆಳೆಸಿಕೊಳ್ಳದಿದ್ದವನು ಇಲ್ಲಿ ಯಶಸ್ವಿಯಾಗಲಾರ. ಈ ಸುಳ್ಳಿನ ಕಂತೆ ಪ್ರಾರಂಭವಾಗುವುದು ಭರವಸೆಯೆಂಬ ವರಸೆಯಿಂದ. ತನ್ನ ವಿರುದ್ಧ ಪಕ್ಷದಲ್ಲೇ ಭುಗಿಲೇಳುವ ಅಸಮಾಧಾನವನ್ನು ಹತ್ತಿಕ್ಕಬೇಕು. ಒಂದೊಂದು ಮಾತಿನ ಮೇಲೂ ನಿಗಾ ಇಡಬೇಕು. ಆಡಿದ ಮಾತು ವಿವಾದಕ್ಕೀಡಾಯಿತೆಂದರೆ ನಾನು ಹಾಗೆ ಹೇಳಿಯೇ ಇಲ್ಲ ಎಂದು ವಾದಿಸಬೇಕು. ಜನ ಸೇವೆಯೇ ಜನಾರ್ದನ ಸೇವೆ, ತನ್ನ ಅವತಾರವಾಗಿದ್ದೇ ಸಮಾಜೋದ್ಧಾರಕ್ಕಾಗಿ ಎಂಬಂತೆ ಪೋಸು ಕೊಟ್ಟು ಅಧಿಕಾರ ಗಿಟ್ಟಿಸಿಕೊಳ್ಳಬೇಕು.*
*ಜಾತಿಯನ್ನು ಹೋಗಲಾಡಿಸುತ್ತೇನೆ ಎನ್ನುತ್ತಾ ಜಾತಿ ಸಮಾವೇಶಗಳನ್ನು ನಡೆಸಬೇಕು. ನಾವು ಬಂದರೆ ಒಳಗೊಳಗೇ ಒಳ ಮೀಸಲಾತಿಯನ್ನು ಕೊಡುವುದಾಗಿಯೂ ಹೇಳುತ್ತಾ, ಬೇರೆ ಧರ್ಮದವರ ಸಮಾವೇಶಕ್ಕೆ ಹೋಗಿ ಅವರ ವೇಷ ಭೂಷಣಗಳನ್ನು ಧರಿಸಿ ಅನ್ಯ ಧರ್ಮದವರ ಮೇಲೆ ಎತ್ತಿಕಟ್ಟುತ್ತಾ ಅವರನ್ನು ಸೆಳೆಯಲು ನೋಡಬೇಕು.*
*ಬೇರೆ ಯಾವ ಕ್ಷೇತ್ರಕ್ಕಾದರೂ ಒಂದು ನಿಗದಿತ ಕೆಲಸದ ವೇಳೆ ಎಂಬುದಿರುತ್ತದೆ. ಆದರೆ ರಾಜಕೀಯಕ್ಕೆ ಮಾತ್ರ ಹೊತ್ತು ಗೊತ್ತು ಎಂಬುದೇ ಇಲ್ಲ. ಚುನಾವಣೆ ಬಂದರಂತೂ ದಿನಕ್ಕೊಂದು ಕಡೆ ವಾಸ, ಎಷ್ಟೆಷ್ಟೋ ಹೊತ್ತಿಗೆ ಊಟ. ಮನೆ- ಮಕ್ಕಳು ಸಂಸಾರವೆಲ್ಲ ಮತ್ತೆಲ್ಲೋ. ದಿನವಿಡೀ ಸಂಚಾರ, ರಾತ್ರಿ ಲೆಕ್ಕಾಚಾರ. ಇಂಥ ಎಲ್ಲ ಒತ್ತಡಗಳ ನಡುವೆ ಸಮಾಜೋದ್ಧಾರದ ನಿಜ ಉದ್ದೇಶ ಮರೆತೇ ಹೋಗಿ ಅಸ್ತಿತ್ತ್ವದ ಹೋರಾಟವಾಗಿ ಮಾರ್ಪಾಡಾಗುವುದು ಆಶ್ಚರ್ಯವೇನಲ್ಲ. ಶಿಸ್ತೇ ಇಲ್ಲದ, ಒಂದು ಚೌಕಟ್ಟೇ ಇಲ್ಲದ ಇಂಥ ಜೀವನವನ್ನು ರಾಜಕಾರಣಿಗಳ ಮಕ್ಕಳು ಬಿಟ್ಟರೆ ಮತ್ತಿನ್ಯಾರು ತಾನೇ ಬಯಸಲು ಸಾಧ್ಯ? ಅಷ್ಟಕ್ಕೂ ರಾಜಕೀಯದಲ್ಲಿ ಅಸ್ತಿತ್ವ ಕಾಣಬೇಕೆಂದರೆ ಸಜ್ಜನಿಕೆ ಕೆಲಸಕ್ಕೆ ಬರುವುದಿಲ್ಲ. ಹೀಗಿರುವಾಗ ಯಾವ ಸಜ್ಜನ ತಾನೇ ರಾಜಕೀಯವನ್ನು ಪ್ರವೇಶಿಸಲು ಮನಸು ಮಾಡಿಯಾನು? ಸಜ್ಜನರ ಪ್ರವೇಶವಾಗದೇ ಕಲುಷಿತ ವ್ಯವಸ್ಥೆಯ ಮಲಾಪಕರ್ಷಣ ಕಾರ್ಯ ನಡೆಯುವುದಾದರೂ ಹೇಗೆ? ಹೀಗೆಲ್ಲ ಯೋಚಿಸುವಾಗ ಭವಿಷ್ಯದ ರಾಜಕೀಯ ಸ್ಥಿತಿಯನ್ನು ನೆನೆಸಿ ಆತಂಕವಾಗುತ್ತದೆ. ಮುಂದೇನು ಎಂಬ ಪ್ರಶ್ನೆ ಮನಸ್ಸನ್ನು ಕುಟುಕುವಾಗಲೇ ಅಲ್ಲೊಂದು ಇಲ್ಲೊಂದು ಭರವಸೆಯ ಮಿಂಚು ಮಿನುಗುತ್ತದೆ ಮತ್ತು ಮನಸನ್ನು ತಂಪುಗೊಳಿಸುತ್ತದೆ.*
*ರಾಜಕೀಯಕ್ಕೆ ಯುವಕರು ಸೇರಿ ಹೊಸ ನೀರು ಹರಿಯಬೇಕೆಂಬ ಆಶಯಕ್ಕೆ ಪೂರಕವಾಗಿ ಅಲ್ಲಲ್ಲಿ ಯುವಪಡೆಗಳು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಸುದ್ದಿಯನ್ನು ಇತ್ತೀಚೆಗೆ ಹೆಚ್ಚಾಗಿ ಕೇಳುತ್ತಿದ್ದೇವೆ. ಅದರಲ್ಲೂ ಈ ಸಲವಂತೂ ಯುವಕರ ಪಾತ್ರ ನಿರ್ಣಾಯಕ. ಹಿಂದೆಂದೂ ಇರದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮತದಾರರು ಮತಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಇದನ್ನು ಅರಿತೇ ಎಲ್ಲ ಪಕ್ಷಗಳೂ ಯುವಕರನ್ನು ಸೆಳೆಯುವ ಕಾರ್ಯತಂತ್ರ ರೂಪಿಸಿವೆ. ಇದು ಆಶಾದಾಯಕ ಬೆಳವಣಿಗೆ ಎಂತಲೇ ಹೇಳಬಹುದಾದರೂ ಸ್ವತಃ ಯುವಕರ ರಾಜಕೀಯ ಪ್ರವೇಶವಾಗದೇ ಇದು ಪರಿಪೂರ್ಣವಾಗುವುದಿಲ್ಲ. ಯುವಮತಗಳನ್ನು ಸೆಳೆಯುವ ಸಲುವಾಗಿಯೇ ಎಲ್ಲ ಪಕ್ಷಗಳಲ್ಲೂ ಯುವಕರಿಗೆ ಮಣೆ ಹಾಕಲಾಗುತ್ತಿದೆ. ದೇಶದ ಮುಂದಾಳತ್ವ ವಹಿಸುವ ನಾಯಕತ್ವದ ಸ್ಥಾನದಲ್ಲೂ ಕೂಡ ಯುವಕರನ್ನೇ ಬಿಂಬಿಸಲಾಗುತ್ತಿದೆ. ವೃದ್ಧರು ಮಾತ್ರ ಅನುಭವಿಗಳು ಮತ್ತು ಅವರು ಮಾತ್ರ ದೇಶವಾಳಲು ಸಮರ್ಥರೆಂಬ ನಂಬಿಕೆಗಳು ಬಿದ್ದು ಹೋಗಿ ಹಳೆ ಬೇರು, ಹೊಸ ಚಿಗುರು ಎಂಬ ಮಾತು ಕಾರ್ಯಾನ್ವಯಿಯಾಗುತ್ತಿದೆ.*
*ಈ ಸಲದ ಚುನಾವಣೆ ಹಿಂದಿನ ಎಲ್ಲ ಚುನಾವಣೆಗಳ ಸಾಂಪ್ರದಾಯಿಕ ನಡೆಗಳನ್ನು, ನಂಬಿಕೆಗಳನ್ನು ಬದಲಿಸಿ ತನ್ನದೇ ಆದ ಹೊಸ ದಾರಿಯನ್ನು ಕಂಡುಕೊಂಡು ಚರಿತ್ರೆಯ ಪುಟಗಳಲ್ಲಿ ದಾಖಲಾಗುವ ನಿಟ್ಟಿನ ಎಲ್ಲ ಪರಿಕರಗಳನ್ನೂ ಒಳಗೊಳ್ಳುತ್ತಾ ಸಾಗುತ್ತಿದೆ. ಈ ಸರ್ತಿ ರಾಜಕೀಯದ ಸ್ಥಿತ್ಯಂತರಗಳನ್ನು ನಿರ್ಣಯಿಸುವವರು ಯುವಕರೇ ಎಂಬುದು ದೇಶದ ಭವಿತವ್ಯದ ದೃಷ್ಟಿಯಿಂದ ನೆಮ್ಮದಿ ತರುವ ವಿಷಯ. ಹಿಂದಿನ ಚುನಾವಣೆಗಳಂತೆ ಇದು ಪಕ್ಷ-ಪಕ್ಷಗಳ ನಡುವೆ, ಬದಲಾಗದ ಸಿದ್ಧಾಂತಗಳ ನಡುವೆಯಷ್ಟೇ ನಡೆಯದೇ ವ್ಯಕ್ತಿ-ವ್ಯಕ್ತಿಗಳ ನಡುವೆ, ಪೊಳ್ಳು - ಗಟ್ಟಿಗಳ ನಡುವೆ, ಸತ್ಯ-ಸುಳ್ಳುಗಳ ನಡುವೆ, ಪ್ರಾಮಾಣಿಕತೆ-ಅಪ್ರಾಮಾಣಿಕತೆಗಳ ನಡುವಿನ ಯುದ್ಧವೆಂದೇ ಭಾವಿಸಲಾಗುತ್ತಿದೆ. ಇಲ್ಲೀಗ ಮೊದಲಿನಂತೆ ಕಣ್ಣುಮುಚ್ಚಿ ಏನು ಕೊಟ್ಟರೂ ಅಂಗೀಕರಿಸುವ ರೂಢಿ ಬಿಟ್ಟುಹೋಗಿ, ಸತ್ಯಾಸತ್ಯತೆಯನ್ನು ಸ್ವತಃ ವಿವೇಚಿಸಬಲ್ಲ ಮತದಾರರ ಸಂಖ್ಯೆ ಹೆಚ್ಚಿದೆ. ದೇಶದ ಜನತೆ ಯಾವುದೋ ಒಂದು ಮಹಾಸಂಕ್ರಮಣಕ್ಕೆ ತುಡಿಯುತ್ತಿದ್ದಾರೋ ಎಂದು ಅನಿಸುವಂತೆ, ಜಿಡ್ಡುಗಟ್ಟಿದ ವ್ಯವಸ್ಥೆಗೊಂದು ಚುರುಕು ಮೂಡಿಸುವ ಬದಲಾವಣೆಗೆ ಮನಸು ಮಾಡಿದ್ದಾರೋ ಎಂಬಂತೆ ಒಕ್ಕೊರಲ ಘೋಷವೊಂದು ಕಿವಿಯ ಪರದೆಯ ಮೇಲೆ ಬೀಳುತ್ತಿದೆ. ಎಲ್ಲ ಕಟ್ಟು ಕಟ್ಟಳೆಗಳನ್ನು ಮೀರಿ ಏಕತ್ವದ ಪರ ಉದ್ಘೋಷವೊಂದು ಮೊಳಗುತ್ತಿದೆ. ಬದಲಾವಣೆಯ ಆರಂಭಕ್ಕೆ ಶ್ರೀಕಾರ ಹಾಕುವ ಅದಮ್ಯ ಉತ್ಸಾಹ ಯುವ ಸಮೂಹಗಳಲ್ಲಿ, ಅವರ ಕಂಗಳಲ್ಲಿ ಸ್ಫುರಿಸುತ್ತಿದೆ. ದಿಟಕ್ಕೂ ಸ್ವಾತಂತ್ರ್ಯ ಸಂಗ್ರಾಮದ ನಂತರ ದೇಶದ ಯುವ ಜನತೆ ಮತ್ತೊಮ್ಮೆ ಈ ಪ್ರಮಾಣದಲ್ಲಿ ಒಟ್ಟಾಗುತ್ತಿರುವುದು ಇದೇ ಮೊದಲಾಗಿರಬಹುದು. ಅಂತೂ ಒಳಗೊಳಗೇ ವ್ಯಾಧಿಪೀಡಿತವಾಗಿ ಸೊರಗುತ್ತಿದ್ದ ದೇಶದ ನರನಾಡಿಗಳಲ್ಲಿ ಹೊಸತನದ ಉತ್ಸಾಹವನ್ನು ತುಂಬುವ, ರಾಷ್ಟ್ರದ ಆರೋಗ್ಯವನ್ನು ಕಾಪಾಡುವ ಹೊಸ ವೈದ್ಯನ ಹುಡುಕಾಟವೀಗ ನಿರ್ಣಾಯಕ ಹಂತ ತಲುಪಿದೆ.*
*ಮಹಾವಿಜಯವನ್ನಲ್ಲದಿದ್ದರೂ ಕಂಗೆಟ್ಟ ದೇಶದ ಜನತೆಯ ಭರವಸೆಯನ್ನು ಜೀವಂತವಾಗಿಡುವ ಜಯವನ್ನಾದರೂ ದೇಶಕ್ಕೆ ಜಯ ಸಂವತ್ಸರವೆಂಬ ಹೆಸರಿನ ಹೊಸವರ್ಷ ಕಟ್ಟಿಕೊಡಲಿ ಎಂಬುದೇ ಈ ಹೊತ್ತಿನ ಆಶಯ.*
Supar
ಪ್ರತ್ಯುತ್ತರಅಳಿಸಿ