ಸೋಮವಾರ, ಮಾರ್ಚ್ 19, 2018

*ದಿನಕ್ಕೊಂದು ಕಗ್ಗ*

*ದಿನಕ್ಕೊಂದು ಕಗ್ಗ* 
ಸರ್ವಾರ್ಥ ಸಹಭಾಗಿತೆಗೆ ರಾಷ್ಟ್ರ ಕುಲ ವರ್ಗ ।
ಸರ್ವದಣು ತಾನೆನುತ್ತೋರೊರ್ವ ಮನುಜನ್ ।।
ಸರ್ವಜೀವ ಸಂವೃದ್ಧಿಗನುಗೂಡಿ ದುಡಿಯುತಿರೆ ।
ಪರ್ವವಂದಿಳೆಗೆಲವೊ – ಮಂಕುತಿಮ್ಮ ।।
ಸರ್ವದಣು=ಸರ್ವದ+ಅಣು, ತಾನೆನುತ್ತೋರೊರ್ವ=ತಾನು+ಎನುತ್ತ+ಓರೋರ್ವ, ಸಂವೃದ್ಧಿಗನುಗೂಡಿ=ಸಂವೃದ್ಧಿಗೆ+ಅನುಗೂಡಿ, ಪರ್ವವಂದಿಳೆಗೆಲವೊ=ಪರ್ವದಿನವು+ಅಂದು+ಇಳೆಗೆ+ಎಲವೊ
ಸರ್ವಾರ್ಥ=ಸಕಲರ ಉಪಯೋಗ, ಓರೋರ್ವ=ಒಬ್ಬಬ್ಬನೂ, ಅನುಗೂಡಿ=ಆನುಕೂಲಿಕವಾಗಿ, ಪರ್ವ=ಬದಲಾವಣೆ,

ರಾಷ್ಟ್ರ, ಕುಲ,ವರ್ಗ ಇತ್ಯಾದಿ ವಿಭಾಗಗಳು, ಮಾನವರು ಸಹಜೀವನವನ್ನು ಮಾಡಲು ಅನುಕೂಲವಾಗುವಂತೆ ಇವೆ. ಪ್ರತಿಯೊಬ್ಬ ಮನುಷ್ಯನೂ, ತಾನು ಸರ್ವದಲ್ಲಿ ‘ಅಣು’ಮಾತ್ರ ಎಂದು ಬಗೆದು, ಸರ್ವರ ಜೀವನದ ಸಂವೃದ್ಧಿಗೆ ಕೃಷಿಮಾಡಿದ ದಿನ, ಈ ಜಗತ್ತಿಗೆ ‘ಪರ್ವ’ದಿನ ಅಥವಾ ಸಂಭ್ರಮದ ದಿನ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ನಾವು ಮಾಡುವ ಕೆಲಸ ಮತ್ತು ಅದರ ಫಲ, ಕೇವಲ ನಮಗಾಗಿಯೇ, ಎನ್ನುವ ‘ಸ್ವಾರ್ಥ’ ಭಾವನೆಯನ್ನು ತೊರೆದು, ಸಕಲರ ಒಳಿತಿಗಾಗಿ ಕೃಷಿ ಮಾಡುವುದು ಒಳ್ಳೆಯದು, ಎನ್ನವುದೇ ಈ ಮುಕ್ತಕದ ಹೂರಣ. ನಮ್ಮ ಆರ್ಷ್ಯ ಸಂಸ್ಕೃತಿಯಾದ ಸನಾತನದ ‘ ಸಹನಾವವತು ಸಹನೌಭುನಕ್ತು ‘ ಮತ್ತು ‘ ಸರ್ವೇ ಸುಖಿನಃ ಸಂತು, ಸರ್ವೇ ಸಂತು ನಿರಾಮಯಾಃ, ಸರ್ವೇ ಭಧ್ರಾಣಿ ಪಶ್ಯಂತು, ಮಾ ಕಶ್ಚಿತ್ ದುಃಖಮಾಗ್ಭವೇತ್ ‘ ಎಂಬಂತಹ ನೂರಾರು ಸೂಕ್ತಗಳು ಇಂತಹ ಭಾವವನ್ನೇ ವ್ಯಕ್ತಪಡಿಸುತ್ತದೆ. ಈ ಜಗತ್ತು ಆ ಪರಮಾತ್ಮನಿಂದ ಸೃಷ್ಟಿಸಲ್ಪಟ್ಟಿದೆ. ‘ ಈ ಸೃಷ್ಟಿಯಲ್ಲಿರುವ ಕೋಟ್ಯಾಂತರ ಜೀವರಾಶಿಗಳಲ್ಲಿ ‘ ನಾನೂ’ ಸಹ ಒಂದು. ಇಡೀ ಬ್ರಹ್ಮಾಂಡದಲ್ಲಿ ನಾನು ಕೇವಲ ಒಂದು ಅಣು’ ಎನ್ನುವ ಸತ್ಯವನ್ನರಿತು, ಆ ಸತ್ಯವನ್ನು ನಮ್ಮ ಅಂತರಂಗದೊಳಕ್ಕೆ ಬಟ್ಟಿ ಇಳಿಸಿಕೊಂಡು, ನಮ್ಮ ಸ್ವಭಾವವನ್ನು ಮಾರ್ಪಾಡುಮಾಡಿಕೊಂಡು, ಸ್ವಾರ್ಥ ಸಾಧನೆಯನ್ನು ಬಿಟ್ಟು, ಸಕಲರ ಒಳಿತಿಗಾಗಿ, ಸಕಲರ ಸಂತೋಷ ಅಥವಾ ಹಿತಕ್ಕಾಗಿ, ನಾವು, ಎಂದರೆ ಈ ಜಗತ್ತಿನ ಎಲ್ಲರೂ ಕೃಷಿ ಮಾಡಿದರೆ, ಅಂದು ಇಡೀ ಜಗತ್ತೇ,ಸಕಲ ಜೀವರಾಶಿಗಳಿಗೂ ಜೀವಿಸಲು ಒಂದು ಸುಂದರ ತಾಣವಾಗುತ್ತದೆ ಅಲ್ಲವೇ?
ಹಾಗಲ್ಲದೆ ಸದಾ ಕಾಲ, ‘ನಾನು, ನನ್ನದು, ನನಗೆ’ ಎನ್ನುವ ‘ನಾನತ್ವ’ದ ಭಾವಗಳನ್ನು ವ್ಯಕ್ತಪಡಿಸುತ್ತಾ, ಅಗಾಧವಾದ ಸೃಷ್ಟಿಯಲ್ಲಿ ತಾನೂ ಒಂದು ಎನ್ನುವುದನ್ನು ಮರೆತು, "ಈ ಜಗತ್ತಿನಲ್ಲಿ ಸೃಷ್ಟಿಯಾಗಿರುವುದೆಲ್ಲಾ ನನ್ನ ಸುಖ ಮತ್ತು ಆನಂದಕ್ಕೆ, ಆ ಪರಮಾತ್ಮ ಕೊಟ್ಟ ಕೊಡುಗೆ" ಎನ್ನುವಂತಹ ದುರ್ಭಾವವನ್ನು ಬೆಳೆಸಿಕೊಂಡು ಬದುಕುತ್ತಿರುವ ಇಂದಿನ ಮನುಷ್ಯರನ್ನು ನೋಡಿದರೆ ಮಾನ್ಯ ಗುಂಡಪ್ಪನವರ ಆಶಯ ಸಾಕಾರವಾಗುವುದು ದೂರದ ಮಾತು ಎನ್ನಿಸುತ್ತದೆ. ಸಕಲರ ಒಳಿತನ್ನು ಬಯಸಿ ಅದಕ್ಕಾಗಿ ಶ್ರಮಿಸುವ ಜನರಿಲ್ಲ ಎಂದಲ್ಲ, ಇದ್ದಾರೆ. ಆದರೆ ತೀರ ಕಡಿಮೆ. ಬಹುಶಃ ಇಂದು ನಾವು ನಮ್ಮ ಸಮಾಜದಲ್ಲಿ ಅಲ್ಪಸ್ವಲ್ಪ ಸಾರ್ವಜನಿಕ ಹಿತವನ್ನು ಕಾಣುತ್ತಿದ್ದೇವೆ ಎಂದರೆ, ಅಂಥವರ ನಿಸ್ವಾರ್ಥ ಪರಿಶ್ರಮದಿಂದಲೇ, ಅಲ್ಲವೇ? ಅಂತಹವರ ಸಂಖ್ಯೆ ಅಧಿಕವಾಗಿ, ಜಗವೆಲ್ಲ ಅಂತಹವರೇ ತುಂಬಿದರೆ ಈ ಜಗತ್ತು ಮತ್ತು ಇಲ್ಲಿನ ಜೀವನ
‘ಮಾ ಕಶ್ಚಿತ್ ದುಃಖಮಾಗ್ಭವೇತ್ ‘ ಎನ್ನುವ ಉಕ್ತಿಯ ಆಶಯದಂತೆ, ಎಲ್ಲಿಯೂ ದುಃಖವಿಲ್ಲದ ಸ್ಥಿತಿ ಏರ್ಪಟ್ಟು ‘ ಪರ್ವವಂದಿಳೆಗೆ’ ಎಂದು ಗುಂಡಪ್ಪನವರು ಹೇಳುವಂತೆ ಈ ಭುವಿಗೆ ಸ್ವರ್ಗವೇ ಇಳಿದುಬಂದು ಪ್ರತಿನಿತ್ಯವೂ ಹಬ್ಬದ ವಾತಾವರಣವು ಉಂಟಾಗಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ