ಸೋಮವಾರ, ಮಾರ್ಚ್ 19, 2018

ಶ್ರೀ ರಾಯರ ಪಾದಧೂಳು

" ಶ್ರೀ ರಾಯರ ಪಾದಧೂಳು ಅತ್ಯಂತ ಮಹತ್ವವಾದದ್ದು "
( ಶ್ರೀ ರಾಯರ ಪಟ್ಟಾಭಿಷೇಕ - ವರ್ಧಂತಿ ವಿಶೇಷ )
ಶ್ರೀ ಆಹ್ಲಾದಾಂಶ ಶ್ರೀ ಅಪ್ಪಣ್ಣಾಚಾರ್ಯರ ಮಾತಲ್ಲಿ....
ಯತ್ಪಾದಕಂಜರಜಸಾ ಪರಿಭೂಷಿತಾಂಗ
ಯತ್ಪಾದಪದ್ಮಮಧುಪಾಯಿತಮಾನಸಾ ಯೇ ।
ಯತ್ಪಾದಪದ್ಮಪರಿಕೀರ್ತನಜೀರ್ಣವಾಚ-
ಸ್ತದ್ದರ್ಶನಂ ದುರಿತಕಾನನದಾವಭೂತಮ್ ।। ೯ ।।
ಯೇ = ಯಾವ ಭಕ್ತರು
ಯತ್ಪಾದಕಂಜರಜಸಾ = ಯಾರ ಕಮಲಗಳಂತೆ ಸುಂದರವಾದ ಪಾದಗಳ ಧೂಳಿನಿಂದ
ಪರಿಭೂಷಿತಾಂಗಾ: = ಸುತ್ತಲೂ ಅಲಂಕೃತವಾದ ಅವಯವಗಳುಳ್ಳವರೋ
ಯತ್ಪಾದಪದ್ಮಮಧುಪಾಯಿತ ಮಾನಸಾ: = ಯಾರ ಕಮಲಗಳಲ್ಲಿ ದುಂಬಿಗೆ ಸಮವಾದ
ಮನಸ್ಸುಳ್ಳವರೋ
ಯತ್ಪಾದಪದ್ಮಪರಿಕೀರ್ತನಜೀರ್ಣವಾಚ: = ಯಾರ ಪಾದ  ನಿರಂತರ ಸಂಕೀರ್ತನೆಯಿಂದ ಜೀರ್ಣವಾದ ಮಾತುಗಳುಳ್ಳವರೋ
ತದ್ದರ್ಶನಮ್ = ಅವರ ದರ್ಶನವು
ದುರಿತಕಾನನದಾವಭೂತಂ = ಪಾಪಗಳೆಂಬ ಕಾಡುಗಳಿಗೆ ಕಾಡ್ಗಿಚ್ಚಿನಂತೆ ಆಗಿರುತ್ತದೆ.
ಅಥವಾ
ಯೇ = ಯಾವ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು
ಯತ್ = " ಯತ್ " ಶಬ್ದವಾಚ್ಯನಾದ ಭಗವಂತನ
ಪಾದಕಂಜರಜಸಾ = ಪಾದ ಪದುಮಗಳ ಧೂಳಿನಿಂದ
ಪರಿಭೂಷಿತಾಂಗ = ಸುತ್ತಲೂ ಅಲಂಕೃತವಾದ ಅವಯವಗಳುಳ್ಳವರೋ
ಯತ್ಪಾದಪದ್ಮಮಧುಪಾಯಿತ ಮಾನಸಾ: = ಭಗವಂತನ ಪಾದ ಪದ್ಮಗಳಲ್ಲಿ ದುಂಬಿಗೆ ಸಮಾನವಾದ ಮನಸ್ಸುಳ್ಳವರಾಗಿರುವರೋ
ಯತ್ಪಾದಪದ್ಮಪರಿಕೀರ್ತನಜೀರ್ಣವಾಚ: = ಭಗವಂತನ ಪಾದ ಕಮಲಗಳ ನಿರಂತರ ಸಂಕೀರ್ತನದಿಂದ ಜೀರ್ಣವಾದ ಮಾತುಗಳುಳ್ಳವರೋ
ತದ್ದರ್ಶನಮ್ = ಅಂಥಹ ಶ್ರೀ ರಾಘವೇಂದ್ರತೀರ್ಥ ಗುರುಗಳ ದರ್ಶನವು
ದುರಿತಕಾನನದಾವಭೂತಮ್ = ಪಾಪಗಳೆಂಬ ಕಾಡುಗಳಿಗೆ ಕಾಡ್ಗಿಚ್ಚಿನಂತೆ ಆಗಿರುತ್ತದೆ.
ಶ್ರೀಮದ್ಭಾಗವತದಲ್ಲಿ...
ನೈಷಾ೦ ಮತಿಸ್ಥಾನದುರುಕ್ರಮಾಂಘ್ರಿ೦ ಸ್ಪೃಶತ್ಯನರ್ಥಾಪಗಮೋಯದುತ್ಥ: ।
ಮಹೀಯಸಾಂ ಪಾದರಜೋಭಿಷೇಕಂ ನಿಷ್ಕಿಂಚನಾನಾಂ ನ ವೃಣೀತ ಯಾವತ್ ।। ೭-೫-೩೨ ।।
ಎಂಬ ಶ್ಲೋಕದಲ್ಲಿ ಶ್ರೀ ಪ್ರಹ್ಲಾದರಾಯರು ಜ್ಞಾನಿಗಳ ಪಾದಧೂಳಿಯನ್ನು ಸರ್ವಾಂಗಗಳಲ್ಲಿ ಅಭಿಷೇಕವನ್ನು ಮಾಡಿಕೊಳ್ಳಬೇಕೆಂತಲೂ, ಅದರಿಂದಲೇ ಗುರೂಪದೇಶ ಕ್ರಮದಿಂದ ಜ್ಞಾನ, ಭಕ್ತಿ, ಮುಕ್ತಿಗಳು ಸಿಗುತ್ತದೆಂದೂ ಹೇಳಿದ್ದಾರೆ.
ಶ್ರೀ ಕೃಷ್ಣಾವಧೂತರು " ಶ್ರೀ ರಾಘವೇಂದ್ರ ತಂತ್ರ " ದಲ್ಲಿ....
" ಮಹಾಪದ್ವಿನಾಶಾಯ ತೇ ಪಾದರೇಣು: "
ಮಹತ್ತರ ಆಪತ್ತುಗಳನ್ನು ನಾಶ ಮಾಡುವ ಪಾದ ಧೂಳು ಶ್ರೀ ರಾಯರದ್ದು ಎಂದು ವರ್ಣಿಸಿದ್ದಾರೆ.
ಶ್ರೀ ಪ್ರಹ್ಲಾದಾಂಶ ಸಂಭೂತರಾದ ಶ್ರೀ ರಾಘವೇಂದ್ರ ಗುರುಗಳ ಪಾದ ಧೂಳಿಯನ್ನೂ ಅಥವಾ ಬೃಂದಾವನ ಮೃತ್ತಿಕೆಯನ್ನು ದೇಹದಲ್ಲಿ ಅಭಿಷೇಕ ಮಾಡಿಕೊಂಡು ಅದರಿಂದ ದೇಹವನ್ನು ಅಲಂಕರಿಸಿಕೊಳ್ಳಬೇಕು.
ಸುವರ್ಣಾದಿಗಳಿಂದ ನಿರ್ಮಿತವಾದ ಆಭರಣಗಳನ್ನು ದೇಹದಲ್ಲಿ ಆಸೆಯಿಂದ ಧರಿಸುತ್ತಿರುವಂತೆ ಶ್ರೀ ರಾಘವೇಂದ್ರ ಗುರುಗಳ ಪಾದ ಧೂಳಿಯನ್ನು ದೇಹದಲ್ಲಿ ಆಸೆಯಿಂದ ಲೇಪನ ಮಾಡಿಕೊಳ್ಳಬೇಕು. ಆ ಧೂಳಿಯೇ ದೇಹಕ್ಕೆ ಅಲಂಕಾರವೆಂದು ತಿಳಿಯಬೇಕು. ಅದನ್ನು ಒರೆಸಿಕೊಳ್ಳಬಾರದು.
ದುಂಬಿಯು ಜೇನಿಗಾಗಿ ಕಮಲದಲ್ಲಿ ಆಸಕ್ತವಾದಂತೆ  ಶ್ರೀ ಗುರುಸಾರ್ವಭೌಮರ ಕಮಲದಂತೆ ಸುಂದರವೂ, ಮಧುರವೂ ಆದ ಎರಡು ಪಾದಗಳಲ್ಲಿ ಮನಸ್ಸು ಸ್ಥಿರವಾಗಿ ನಿಲ್ಲಬೇಕು. ಶ್ರೀ ರಾಘವೇಂದ್ರ ಗುರುಗಳ ಪಾದಗಳನ್ನು ಎಡಬಿಡದೇ ಸ್ಮರಿಸುತ್ತಿರಬೇಕು.
ಶ್ರೀ ರಾಘವೇಂದ್ರ ಗುರುಗಳ ಪಾದಗಳನ್ನು ಹೊಗಳಿ ಹೊಗಳಿ ಮಾತುಗಳು ಜೀರ್ಣವಾಗಬೇಕು. ಅಂದರೆ ಶ್ರೀ ಗುರುರಾಘವೇಂದ್ರತೀರ್ಥರ ಪಾದಗಳನ್ನು ಎಡಬಿಡದೇ ಹೊಗಳುತ್ತಿರಬೇಕು. ಅವುಗಳ ಹೊಗಳಿಕೆಯಲ್ಲಿಯೇ ಸರ್ವ ಕಾಲವನ್ನೂ ಕಳೆಯಬೇಕು.
ಹೀಗೆ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಸೇವೆಯಿಂದ ತಮ್ಮ ಆಯುಷ್ಯವನ್ನು ಕಳೆಯುತ್ತಿತುವ ಶ್ರೀ ಗುರುರಾಯರ ಭಕ್ತರನ್ನು ನೋಡಿದ ಜನರ ಸಕಲ ಪಾಪಗಳೂ ಕಾಡ್ಗಿಚ್ಚಿನಿಂದ ಕಾಡು ಭಸ್ಮವಾದಂತೆ ಶ್ರೀ ರಾಯರ ಭಕ್ತರ ದರ್ಶನಕ್ಕೆ ಇಷ್ಟು ಮಹಿಮೆಯಿದ್ದರೆ ಆ ಭಕ್ತರಿಗೂ ಅವರಿಂದ ಸೇವ್ಯರಾದ ಶ್ರೀ ಗುರುಸಾರ್ವಭೌಮರಿಗೂ, ಅವರಿಂದ ಸೇವಿಸಲ್ಪಡುತ್ತಿರುವ ಶ್ರೀ ನರಹರಿಗೂ ಎಷ್ಟು ಮಹಿಮೆಯಿದೆ ಇದೆಯೆಂದು ಊಹಿಸಲೂ ಸಾಧ್ಯವಿಲ್ಲ!!
ಯತ್ = ಭಗವಂತ
ಏತಿ ಜಾನಾತೀತಿ ಯತ್ ಜಾತೃ ಸ್ವರೂಪಿ.
ಭಗವಂತನನ್ನು ಹೇಗೆ ಉಪಾಸನೆ ಮಾಡಬೇಕೆಂದು ಪ್ರಶ್ನಿಸಿದ ಶ್ರೀ ರಮಾದೇವಿಯರಿಗೆ ಶ್ರೀ ಮಹೀದಾಸ ರೂಪಿ ಭಗವಂತನು ಉತ್ತರ ರೂಪವಾಗಿ ತನ್ನ ಬೇರೆ ಬೇರೆ ನಾಮವನ್ನು ಸೂಚಿಸುತ್ತಾ ತಾನು ಜಾತೃ ಸ್ವರೂಪಿಯಾದುದರಿಂದ " ಯತ್ " ಶಬ್ದ ವಾಚ್ಯವೆಂದು ಸಂದೇಶಿಸಿರುವನು.
" ಬೃಹದಾರಣ್ಯಕೋಪನಿಷತ್ " ನಲ್ಲಿ....
ಭಗವಂತನು ಹೊರಗೆ ಇರುವಂತೆ ಒಳಗೂ ಇರುವ ಪ್ರಯುಕ್ತ ಅವನನ್ನು " ಯತ್ " ಎಂದು...
" .... ತದ್ ಯದೇತದಿದಂ ಮಯಃ "
" ಏತಿ ಗಚ್ಛತಿ ಸರ್ವತ್ರೇತಿ ಯತ್ " ಎಲ್ಲೆಡೆ ಇರುವವನು ಎಂಬರ್ಥದಲ್ಲಿ " ಯತ್ " ಶಬ್ದ ವಾಚ್ಯನಾಗಿರುವನು.
ಹೀಗೆ " ಯತ್ " ಶಬ್ದ ವಾಚನಾದ ಭಗವಂತನ ಪಾದ ಧೂಳಿಯನ್ನು ಧರಿಸಿರುವವರು ಶ್ರೀ ರಾಯರು. ಶ್ರೀ ಹರಿಯ ಪಾದ ಪದುಮಗಳಲ್ಲಿ ದುಂಬಿಯಂತೆ ಆಸಕ್ತರಾದವರು ಶ್ರೀ ರಾಯರು.
ಶ್ರೀ ರಾಯರ ಪಾದವೇ ಗತಿಯು ಸಜ್ಜನರಿಗೆಲ್ಲಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ