#ತುಳುನಾಡಿನ_ಸಂಪ್ರದಾಯದಲ್ಲಿ_ನೇ ಪತ್ಯಕ್ಕೆ_ಸರಿಯುತ್ತಿರುವ_ಮಡಿವಾಳ_ ಸಮುದಾಯದ_ಆಚಾರ_ವಿಧಿಗಳು*
ಲೇಖನ: #ಶೈಲು_ಬಿರ್ವ_ಅಗತ್ತಾಡಿ_ದೋಲ_ಬಾರಿ ಕೆ
ಲೇಖನ: #ಶೈಲು_ಬಿರ್ವ_ಅಗತ್ತಾಡಿ_ದೋಲ_ಬಾರಿ
ತುಳುನಾಡಿನ ಸಂಪ್ರದಾಯ ಅನನ್ಯ ಮತ್ತು ಅದ್ವಿತೀಯ. ಸಂಪ್ರದಾಯಗಳ ಮಹಾ ಪೂರವೇ ಈ ತುಳುನಾಡ ಧರ್ಮ.
ಇಲ್ಲಿ ಎಲ್ಲಾ ಜಾತಿಗಳು ತನ್ನದೇ ಆದ ಜಾತಿ ಚೌಕಟ್ಟಿನಲ್ಲಿ ಹಾದಿ ಸವೆಸಿದವರು. ಎಲ್ಲರು ಕೂಡ ನಿಶ್ಚಿತ ಮಾನದಂಡದೊಂದಿಗೆ ಬದುಕು ಕಟ್ಟಿಕೊಂಡವರು. ಎಲ್ಲಾ ಜಾತಿಗಳ ಸಂಪ್ರದಾಯಗಳಿಗೆ ರೀತಿ ರಿವಾಜುಗಳಿಗೆ ಕೊಂಡಿಯಾಗಿದ್ದವರು ದೈವಗಳಿಂದ ಹರಸಲ್ಪಟ್ಟ ಇದೇ ಮಡಿವಾಳ ಸಮುದಾಯ. ಅರ್ತಥ್ ನಮ ತುಳುವೆರ್ ನಲ್ಲಿ ಒಂದು ಸಮೂದಾಯ.
ದೈವಗಳ ಪ್ರತಿಷ್ಟೆಗಳಿಗೆ ಶುದ್ಧದ ಮಡಿವಾಳರಾಗಿ, ನೇಮ ಕೋಲಗಳಿಗೆ ದೀವಟಿಗೆ ಹಿಡಿಯುವವರಾಗಿ, ಅಳಿಯ ಕಟ್ಟಿನ ಸಂಪ್ರದಾಯದ ಮದುವೆಗಳ ಭಟ್ರು ಗಳಾಗಿ, ಎಲ್ಲಾ ವರ್ಗದ ಮನೆಗಳ ಅಮೆ ಸೂತಿಕ ಕಳೆಯುವ ಶುದ್ಧದ ಮಡಿವಾಳರಾಗಿ ಇಡೀ ತುಳುನಾಡಿನಲ್ಲಿ ಇವರಷ್ಟು ಸಮಾಜವನ್ನು ವ್ಯಾಪಿಸಿಕೊಂಡವರು ಯಾರು ಇಲ್ಲ ಅದೇ ರೀತಿ ಮೇಲು ಕೀಳೆಂಬ ಭಾವನೆ ಇವರನ್ನು ಆವರಿಸಿಕೊಂಡಿದ್ದು ತೀರಾ ಕಡಿಮೆ.
ಯಾಕೆಂದರೆ ಇವರ ಇರುವಿಕೆ ಮತ್ತು ಸೇವೆ ಕಡ್ಡಾಯವಾಗಿ ಆಗಿರುವುದರಿಂದ ಬಹುಷ ಇವರಿಗೆ ವಿನಾಯಿತಿ ಸಿಕ್ಕಿರಬಹುದು. ಯಾಕೆಂದರೆ ಕ್ರಮಗಳನ್ನು ಮಾಡಿದ್ದು ಮನುಷ್ಯನೆ ಆಗಿರುವುದರಿಂದ ಈ ರೀತಿಯ ವಿನಾಯಿತಿ.
ಯಾವುದೇ ದೈವಗಳ ಪ್ರತಿಷ್ಟೆ ಇರಬಹುದು ಅದರಲ್ಲಿ ಮಡಿವಾಳರ ಉಪಸ್ಥಿತಿ ಹೆಚ್ಚಿನದ್ದು. ಅವರು ಕಟ್ಟುವ ಕೊಡಿನಾಡುಗಳಾಗಿರಲಿ, ಬಾಳೋಲಿಗಳಾಗಿರಲಿ, ತಯಾರು ಮಾಡುವ ಸಿಂಗಸ್ಥಾನಗಳಾಗಿರಲಿ, ಅವರು ಹಾಕುವ ಮಡಿಯ ದಲ್ಯಗಳಾಗಲಿ( ಬಟ್ಟೆ), ಬಿಡಿಸುವ ಮಂಡಳಗಳಾಗಲಿ ಅತೀ ಹೆಚ್ಚಿನ ಪ್ರಾಶಸ್ತ್ಯ ಪಡೆದಿರುವಂತಹುದು. ಭೂತಾಲಯದ ಕಟ್ಟಿನಲ್ಲಿ ಮಡಿವಾಳರ ಉಪಸ್ಥಿತಿ ಅತೀ ಹೆಚ್ಚಿನದ್ದು. ಇವರನ್ನು ದೈವವು ತನ್ನ ಭಾಷೆಯಲ್ಲಿ ದಲ್ಯಂತ ಮಾನಿಯೆರ್ ಎಂದು ಕರೆಯುವುದು ವಾಡಿಕೆ.
ಕೆಲವೊಮ್ಮೆ ದೈವಗಳ ಕೈ ಸನ್ನೆ ಬಾಯಿ ಸನ್ನೆ ಯಾರಿಗು ಅರ್ಥವಾಗದಾಗ ಅದನ್ನು ತಿಳಿಸುವವರು ಇದೇ ಮಡಿವಾಳರು. ಪುತ್ತೂರು ಸುಳ್ಯ ಬೆಳ್ತಂಗಡಿ ಕಡೆಗಳಲ್ಲಿ ಬೆರ್ಮೆರ ಗುಂಡದ ಪ್ರವೇಶದ ಅಧಿಕಾರ ಮಡಿವಾಳರಿಗೆ ಮಾತ್ರ ಇತ್ತು. ಯಾವುದೇ ಮನೆಯಲ್ಲಿ ಸಾವುಗಳಾದರು ಕೂಡ ಮನೆ ಶುದ್ಧಿ ಮಾಡುವ ಅಧಿಕಾರವನ್ನು ಪಡೆದವರು ಇದೇ ಮಡಿವಾಳರು.
ಹಿಂದಿನ ಕಾಲದಲ್ಲಿ ತುಳು ಸಂಪ್ರದಾಯದ ಪ್ರಕಾರ ಅಳಿಯ ಕಟ್ಟಿನಲ್ಲಿ( ಅಪ್ಪೆ ಕಟ್ಟ್) ಮೃತ ದೇಹಕ್ಕೆ ಬೆಂಕಿ ನೀಡುವ ಕ್ರಮ ಇರಲಿಲ್ಲ ಬದಲಾಗಿ ದಫನ ಮಾಡಿ ವಿಧಿಗಳನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ದಫನ ಮಾಡಿದ ಜಾಗದಲ್ಲಿ ನೀರ್ನೆರಲು ಮಾಡಿ ವಿಧಿಗಳನ್ನು ಮಾಡುವವರು ಇದೇ ಮಡಿವಾಳರು.
ತುಳುನಾಡಿನ ಮದುವೆಗಳಲ್ಲಿ ಪೌರೋಹಿತ್ಯ ವಹಿಸುತ್ತಿದ್ದವರು ಇದೇ ಮಡಿವಾಳರು. ಮುಹೂರ್ತ ಕಂಬಗಳಿರಲಿ, ಮದುವೆ ಮಂಟಪಗಳಿರಲಿ, ಹೆಣ್ಣು ಋತುಮತಿಯಾದಗ ಮಾಡುವ ಶಾಸ್ರ್ತಗಳಿರಲಿ, ಸೀಮಂತಗಳಿರಲಿ, ಮೋನೆ ಕಲಿ ( ಪ್ರಥಮ ಬಾರಿಗೆ ಮುಖ ಮತ್ತು ತಲೆ ಕೂದಲಿಗೆ ಬಾಳು ತಾಗಿಸುವ ಕ್ರಮ)ತೆಗೆಯುವ ಕ್ರಮಗಳಿರಲಿ ಎಲ್ಲವು ಇವರ ಮುಖಾಂತರ ನಡೆಯುತ್ತಿತ್ತು.
ಅಂದರೆ ತುಳುನಾಡಿನ ಎಲ್ಲಾ ಸಂಪ್ರದಾಯಗಳಿಗೆ ಒಂದು ರೀತಿಯಲ್ಲಿ ಇವರದ್ದೇ ಪೌರೋಹಿತ್ಯ ಆದರೆ ಅದನ್ನು ಇಂದಿನ ಕಾಲಮಾನದಲ್ಲಿ ನಾವು ಉಳಿಸಿಕೊಂಡಿದ್ದು ಶೂನ್ಯ. ವೈದಿಕ ಸಂಪ್ರದಾಯಗಳಿಗೆ ಮಾರು ಹೋದ ನಾವು ಇವರ ಇರುವಿಕೆ, ಉಪಸ್ಥಿತಿ ಮತ್ತು ಕ್ರಮಗಳು ನಮಗೆ ಬೇಡವಾಯಿತು. ಹೊಸತೊಂದು ಹಿತವಾದಾಗ ಹಳತೊಂದರ ಬಗ್ಗೆ ಉದಾಸೀನ ಭಾವ ಬೆಳೆಯಿತು. ತುಳುನಾಡಿನಲ್ಲಿ ಯಾವುದೇ ವರ್ಗದ ಹೆಣ್ಣು ಋತುಮತಿಯಾದಾಗ ಮಡಿವಾಳ ಸಮುದಾಯದ ಹೆಂಗಸರ ಉಪಸ್ಥಿತಿ ಕಡ್ಡಾಯ. ಹೆಣ್ಣು ಕುಳಿತುಕೊಳ್ಳಲು ಮೆತ್ತೆಯನ್ನು ಮತ್ತು ಕಳಶದ ನೀರನ್ನು ಇದೇ ಹೆಂಗಸರು ಸಿದ್ಧ ಮಾಡಬೇಕಿತ್ತು. ಅಂದರೆ ಮಡಿವಾಳ ಸಮುದಾಯದ ಹೆಂಗಸರ ಉಪಸ್ಥಿತಿ ಕಡ್ಡಾಯ ಎನ್ನುವುದು ಇವೆಲ್ಲವುಗಳಿಂದ ತೀರ್ಮಾನವಾಗುತ್ತದೆ. ಇವರಲ್ಲಿ ಎರಡು ಪಂಗಡವಿದೆ ಶುದ್ದದ ಮಡಿವಾಳ ಮತ್ತು ಪರೇಲ ಮಡಿವಾಳ ಎಂಬುದಾಗಿ. ಕೆಲವು ಕಡೆಗಳಲ್ಲಿ ಮಹಿಷಂದಾಯ ದೈವದ ಮುಗ ಇವರೇ ಹಿಡಿಯಬೇಕೆನ್ನುವ ಕ್ರಮವು ಇದೆ. ಒಟ್ಟಿನಲ್ಲಿ ಮಡಿವಾಳ ಸಮುದಾಯದ ಉಪಸ್ಥಿತಿ ತುಳುನಾಡಲ್ಲಿ ಎಷ್ಟರ ಮಟ್ಟಿಗೆ ವ್ಯಾಪಿಸಿದೆಯೆಂದರೆ ನೀರು ಮತ್ತು ರಕ್ತ ಬೆರೆತ ರೀತಿಯಲ್ಲಿ, ಆದರೆ ಕಾಲಕ್ರಮೇಣ ಹೊಸ ಹೊಸ ಕ್ರಮಗಳ ಮನ್ವಂತರ ಪ್ರಾರಂಭವಾಯಿತು ಹಳತರ ಬಗ್ಗೆ ತಾತ್ಸಾರ ಬೆಳೆಯಿತು ಹಿರಿಯರ ನಂಬಿಕೆಗಳ ಬೇರು ಗೆದ್ದಲು ಹಿಡಿಯಿತು ಮಡಿವಾಳ ಸಮುದಾಯದ ಸೇವೆ ನೇಪಥ್ಯಕ್ಕೆ ಸರಿಯಿತು. ಆ ಜಾಗವನ್ನು ಹೊಸ ಕ್ರಮಗಳು ಆವರಿಸಿಕೊಂಡಿತು ಕ್ಷಣ ಮಾತ್ರದಲ್ಲಿ ಕಮ್ಮಿ ಖರ್ಚಿನಲ್ಲಿ ಆಗುತ್ತಿದ್ದ ಎಲ್ಲಾ ಕ್ರಮಗಳಿಗೆ ಲಕ್ಷ ಲಕ್ಷ ಸುರಿಯುವಂತಾಯಿತು, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ ಎನ್ನುವಂತೆ ನಾವು ಹೊಸತರ ಕಡೆಗೆ ಮುಖ ಮಾಡಿ ತುಳುನಾಡಿನ ಒಂದು ಜನಾಂಗದ ಸೇವೆಗೆ ನಾವಿಂದು ತಿಲಾಂಜಲಿ ಇಟ್ಟಿದ್ದೇವೆ. ಇವತ್ತಿಗೂ ತುಳುನಾಡು ಕಾಯುತ್ತಿದೆ ಶಬರಿ ರಾಮನಿಗೆ ಕಾದ ರೀತಿಯಲ್ಲಿ ಯಾರಾದರು ತನ್ನ ಹಳೆಯ ನೆನಪಿನ ಬುತ್ತಿಯನ್ನು ತೆಗೆಯುತ್ತಾರೆ ಎಂದು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ