ಸೋಮವಾರ, ಮಾರ್ಚ್ 19, 2018

ಕರ್ತವ್ಯ:

ಕರ್ತವ್ಯ:
————
ಒಬ್ಬ ತಂದೆ ಬಹಳ ದಿನಗಳ ನಂತರ ದೂರದೂರಿನ ತನ್ನ ಮಗನಿಗೆ ಪತ್ರ ಬರೆದ. 'ನಾನು ಇಂತಹ ದಿನ, ಇಂತಹ ರೈಲಿನಲ್ಲಿ, ಇಂತಹ ಪ್ಲಾಟ್ ಫಾರಂಗೆ ಇಷ್ಟು ಗಂಟೆಗೆ ತಲುಪುತ್ತೇನೆ ನನ್ನನ್ನು ಕರೆದೊಯ್ಯಲು ಬಾ' ಎಂದು ಬರೆದು ಪೋಸ್ಟ್ ಮಾಡಿದ. ಸುಪುತ್ರನಿಗೆ ತಂದೆಯ ಪತ್ರ ನೋಡಿ ಅವರನ್ನೇ ನೋಡಿದಷ್ಟು ಖುಷಿ, ಗೌರವ. ಅದನ್ನು ದೇವರ ಪಟದ ಮುಂದಿಟ್ಟು ಹೂ ಗಂಧ ಏರಿಸಿ ಪೂಜಿಸಿದ. ಅದರಲ್ಲಿದ್ದುದು ಓದಲಿಲ್ಲ! ಆ ದಿನ ಟ್ರೈನೂ ಬಂತು ಅಪ್ಪನೂ ಬಂದ. ಕರೆದೊಯ್ಯಲು ಯಾವ ಬೆಪ್ಪನೂ ಬರಲಿಲ್ಲ!
ಇದರಂತೆ ಜಗತ್ತಿಗೇ ತಂದೆಯಾದ ಭಗವಂತನೂ ನಮಗೆಲ್ಲ ಪತ್ರ ಬರೆದಿದ್ದಾನೆ. ಏನು ಮಾಡಬೇಕು ಏನು ಕೂಡದು ಎಂದು ವಿವರಿಸಿದ್ದಾನೆ. ಅಪೌರುಷೇಯವಾದ ಶೃತಿ ಸ್ಮೃತಿಗಳು ಭಗವಂತ ನಮಗೆ ಬರೆದ ಪತ್ರ. ನಾವು ಪತ್ರದಲ್ಲಿನ ವಿವರಗಳ ಓದಿ ತಿಳಿಯದೇ ಬರೀ ಪೂಜಿಸುತ್ತಿದ್ದರೆ ಉಪಯೋಗವಿಲ್ಲ. ವರುಷಕೊಮ್ಮೆ ನವರಾತ್ರಿಯ ಸರಸ್ವತೀಪೂಜೆಗೆ ಪುಸ್ತಕಗಳನ್ನು ಇಡುತ್ತೇವೆ. ಷೋಡಶೋಪಚಾರ ಪೂಜೆ ಮಾಡುತ್ತೇವೆ. ಅದರ ಒಳಗಿನ ತತ್ತ್ವಚಿಂತನೆ ಕರ್ತವ್ಯಗಳ ಬಗ್ಗೆ ಗಮನ ಹರಿಸುವುದಿಲ್ಲ. ಈ ಸುಂದರ ಜಗತ್ತನ್ನು ಸೃಷ್ಟಿಸಿ ನಮ್ಮ ಅಭಿವೃದ್ಧಿಗೆ ಏನು ಕರ್ತವ್ಯ ಮಾಡಬೇಕೆಂದು ಬೋಧಿಸಿದ್ದಾನೋ ಅವುಗಳನ್ನು ಶ್ರದ್ಧೆಯಿಂದ ಮಾಡುವುದೇ ಅವನ ನಿಜವಾದ ಪೂಜೆ. ಈ ಎಚ್ಚರವನ್ನು ವೇದವ್ಯಾಸದೇವರು, ಸರಸ್ವತಿದೇವಿ ನಮ್ಮಲ್ಲಿ ಮೂಡಿಸಲಿ. ಗೀತೆಯಲ್ಲಿ ಅವನೇ ಹೇಳಿದಂತೆ
"ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ"
🙏 ಕಾಗದ ಬಂದಿದೆ ನಮ್ಮ ಕಮಲನಾಭನದು ಈ ಕಾಗದವನ್ನು ಓದಿಕೊಂಡು ಕಾಲ ಕಳೆಯಿರೋ ॥
ಕಾಮಕ್ರೋಧವ ಬಿಡಿರೆಂಬೋ ಕಾಗದ ಬಂದಿದೆ ।
ನೇಮ ನಿಷ್ಠೆಯೋಳ್ ಇರಿರೆಂಬೋಕಾಗದ ಬಂದಿದೆ ।
ತಾಮಸ ಜನರ ಕೂಡದಿರೆಂಬೋಕಾಗದ ಬಂದಿದೆ ।
ನಮ್ಮ ಕಾಮನಯ್ಯನು ತಾನೆ ಬರೆದ ಕಾಗದ ಬಂದಿದೆ ॥
ಹೆಣ್ಣಿನಾಶೆಯ ಬಿಡಿರೆಂಬೋಕಾಗದ ಬಂದಿದೆ ।
ಹೊನ್ನಿನಾಶೆಯ ಬಿಡಿರೆಂಬೋಕಾಗದ ಬಂದಿದೆ ।
ಮಣ್ಣಿನಾಶೆಯ ಬಿಡಿರೆಂಬೋಕಾಗದ ಬಂದಿದೆ ।
ನಮ್ಮ ಕಮಲನಾಭನು ತಾನೇ ಕಾಗದ ಬಂದಿದೆ ॥
ಗೆಜ್ಜೆಕಾಲಿಗೆ ಕಟ್ಟಿರೆಂಬೋ ಕಾಗದ ಬಂದಿದೆ ।
ಹೆಜ್ಜೆ ಹೆಜ್ಜೆಗೆ ಹರಿ ಎನ್ನಿರೆಂಬೋಕಾಗದ ಬಂದಿದೆ ।
ಲಜ್ಜೆಯ ಬಿಟ್ಟು ಕುಣಿಯಿರಿ ಎಂಬೋಕಾಗದ ಬಂದಿದೆ ।
ನಮ್ಮ ಪುರಂದರವಿಠಲ ತಾನೇ ಬರೆದ ಕಾಗದ ಬಂದಿದೆ ॥

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ