ಶ್ರೀವ್ಯಾಸರಾಜರು ಹಾಗೂ ಇಂದಿನ ಹಂಪಿ; ಇತಿಹಾಸದ ಜಾಡು ಹಿಡಿದ ಒಂದು ಅಧ್ಯಯನ
- an article by Sri KM Sheshagiri
ಶ್ರೀವ್ಯಾಸರಾಜಮಠಾಧೀಶರಾದ ಶ್ರೀ ಶ್ರೀ ವಿದ್ಯಾಶ್ರೀಶತೀರ್ಥಶ್ರೀಪಾದರ ಆಜ್ಞಾನುಸಾರವಾಗಿ ತತ್ವಚಂದ್ರಿಕಾ ಮಾಸಪತ್ರಿಕೆಗಾಗಿ ಬರೆದ ಲೇಖನ.
ಈಗಿನ ಹಂಪಿಯಲ್ಲಿ ಶ್ರೀವ್ಯಾಸರಾಜರ ಕುರಿತಾದ ಅನೇಕ ಕುರುಹುಗಳು ನಮ್ಮಲ್ಲೆರ ಗಮನಕ್ಕೆ ಬಾರದೇ : ನಶಿಸಿಹೋಗುವ ಹಂತದಲ್ಲಿವೆ. ಬಹಮನಿ ಸುಲ್ತಾನನ ಆಕ್ರಮಣದಿಂದ ಅಲ್ಲಿದ್ದ ಅಗ್ರಹಾರಗಳು, ದೇಗುಲಗಳು ನಾಶಗೊಂಡು ಅಲ್ಲಿಯ ಎಷ್ಟೋ ಮಹತ್ವಗಳು ಮುಂದಿನ ತಲೆಮಾರಿಗೆ ಸಿಗದಂತಾಯಿತು. ಆಗ ಅಲ್ಲಿದ್ದ ಅನೇಕ ವಿದ್ವಾಂಸರು ಹಾಗೂ ಇತಿಹಾಸವನ್ನು ಅರಿತವರು ದಕ್ಷಿಣಕ್ಕೆ ವಲಸೆ ಬಂದರು. ನಂತರ ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿಯೂ ಐತಿಹಾಸಿಕ ವಿಷಯಗಳನ್ನು ಸರಿಯಾದ ರೀತಿಯಲ್ಲಿ ತಿಳಿದಿದ್ದವರ ಕೊರತೆ ಕಾಡಿತು. ಹಾಗಾಗಿ ಅಲ್ಲಿಯ ಕೆಲವರ, ವಿಶೇಷವಾಗಿ ದೇವಾಲಯದ ಪೂಜೆಯ ಸಾರಥ್ಯವಹಿಸಿಕೊಂಡವರು ತಮಗೆ ತಿಳಿದಿದ್ದ ವಿಷಯಗಳನ್ನು ಏನು ಹೇಳಿದರೋ ಅದನ್ನು ಮಾತ್ರ ದಾಖಲಿಸಿಕೊಳ್ಳಲಾಯಿತು. ಹೀಗಾಗಿ ವಿಜಯನಗರದ ಸ್ಥಾಪನೆಯ ಕಾಲವನ್ನೂ ಸೇರಿದಂತೆ ಏಷ್ಟೋ ವಿಷಯಗಳಲ್ಲ ಬಗ್ಗೆ ಸರಿಯಾದ ಐತಿಹಾಸಿಕ ಸತ್ಯಗಳು ಹೊರಬೀಳಲಿಲ್ಲ. ಕೆಲವನ್ನು ಮರೆಮಾಚಲಾಗಿದೆ. ಅಂತಹ ಕೆಲವು ಸಂಗತಿಗಳ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ.
ಶ್ರೀವ್ಯಾಸತೀರ್ಥರು ನೀಡಿರುವ ಒಂದೊಂದು ಕೊಡುಗೆಗಳೂ ಅನ್ಯಾದೃಶ. ಅವರ ಶಾಸ್ತ್ರಚಿಂತನೆಗಳು ಹೇಗೆ ಆಳವೂ, ಗಂಭೀರವೂ ಆದ ಸಾಗರದಂತೆ ಇವೆಯೋ, ಅದರಂತೆ ಅವರ ಸಾಮಾಜಿಕ ಚಿಂತನೆಗಳು, ಕಲೆ-ಸಂಸ್ಕೃತಿಗಳ ಕುರಿತಾದ ಅವರ ದೃಷ್ಟಿಕೋನ, ಅಷ್ಟೇ ಗಂಭೀರ ಸ್ವರೂಪದ್ದಾಗಿದೆ. ತಮ್ಮ ಗುರುಗಳಾದ ಶ್ರೀ ಶ್ರೀಪಾದರಾಜರ ಹಾದಿಯಲ್ಲಿ ಮುಂದುವರೆದು, ಭಕ್ತಿಸಾಹಿತ್ಯಕ್ಕೆ ಅವರು ಒತ್ತುಕೊಟ್ಟ ಹಿನ್ನೆಲೆಯಿಂದಾಗಿಯೇ ದಾಸಸಾಹಿತ್ಯ ಬೆಳೆದುಬಂದಿದೆ. ಅಳಿದು ಹೋಗುತ್ತಿದ್ದ ಭಾರತೀಯ ಸಂಗೀತ ಪರಂಪರೆಗೆ ಪಲ್ಲವಿ, ಅನುಪಲ್ಲವಿ ಹಾಗೂ ಚರಣಗಳೆಂಬ ಶಾಸ್ತ್ರೀಯ ಚೌಕಟ್ಟಿನಲ್ಲಿ, ಅನೇಕ ರಾಗಗಳಿಗೆ ಹೊಂದುವ ಪದವಿನ್ಯಾಸಗಳ ಸಾಹಿತ್ಯಸೃಷ್ಟಿಗೆ ಸಾಕ್ಷಿಯಾದದ್ದು ಇವರ ಕಾಲ. ಶ್ರೀವ್ಯಾಸರಾಜರು ಸ್ವತಃ ಅನೇಕ ಪದ್ಯಗಳನ್ನು ರಚಿಸಿದ್ದಲ್ಲದೇ, ಆ ಕಾಲದ ಪ್ರಮುಖ ಕೃತಿಕಾರರಾದ ಶ್ರೀವಾದಿರಾಜರು, ಶ್ರೀಪುರಂದರದಾಸರು ಹಾಗೂ ಶ್ರೀಕನಕದಾಸರೇ ಮುಂತಾದವರು ಈ ದಿಸೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಸ್ಫೂರ್ತಿಯಾದವರು. ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ನೆಲೆ ದೊರಕಿದ್ದು ಈ ಕಾಲದಿಂದಲೇ.
ಸಂಗೀತ-ಸಾಹಿತ್ಯಗಳಂತೆ ಕಲೆಯ ಕುರಿತಾಗಿ ಶ್ರೀವ್ಯಾಸರಾಜರಿಗೆ ಇದ್ದ ದೂರದೃಷ್ಟಿ ಮತ್ತು ಅವರು ನೀಡಿರುವ ಕೊಡುಗೆಗಳು ಅನುಪಮವಾದದ್ದು. ವಿಜಯನಗರ ಶಿಲ್ಪಗಳಿಗೆ ಅದರದ್ದೇ ಆದ ಸ್ವಂತಿಕೆ ಇದೆ. ಆದರೂ ಕೆಲ ದಾಕ್ಷಿಣಾತ್ಯ ಶಿಲ್ಪಗಳ ಸ್ಫೂರ್ತಿಯ ಹಿನ್ನೆಲೆಯಲ್ಲಿ ವಿಕಸಿತಗೊಂಡಿದೆ. ಬಹುಪಾಲು ಶಿಲ್ಪಗಳು ನಿರ್ಮಾಣಗೊಂಡದ್ದು ಶ್ರೀಕೃಷ್ಣದೇವರಾಯನ ಕಾಲದಲ್ಲಿಯೇ. ಹಕ್ಕ-ಬುಕ್ಕರು ಸ್ಥಾಪಿಸಿದ ಈ ಸಾಮ್ರಾಜ್ಯ ಶ್ರೀವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಬೆಳೆಯಿತು ಎಂಬ ಇತಿಹಾಸವಷ್ಟೇ ಪ್ರಸಿದ್ಧಿ ಪಡೆದಿದೆ. ಆದರೆ, ಅದು ಇತಿಹಾಸದ ಒಂದು ಭಾಗವಷ್ಟೇ; ಅದೇ ಕಾಲದವರಾದ ಶ್ರೀಪದ್ಮನಾಭತೀರ್ಥರ ಪ್ರಭಾವವನ್ನು ಇತಿಹಾಸಕಾರರು ಸಂಪೂರ್ಣವಾಗಿ ಮರೆಮಾಚಿದ್ದಾರೆ. ಶ್ರೀಪದ್ಮನಾಭತೀರ್ಥರು ಹಾಗೂ ಶ್ರೀನರಹರಿತೀರ್ಥರು ಇಲ್ಲಿನ ಆಡಳಿತದ ಮೇಲೆ ತಮ್ಮ ಪ್ರಭಾವವನ್ನು ಬೀರಿದ್ದರು ಎಂಬುದಕ್ಕೆ ಇಲ್ಲಿರುವ ಅನೇಕ ವೈಷ್ಣವ ದೇವಾಲಯಗಳೇ ಸಾಕ್ಷಿ ಹಾಗೂ ಅವರೀರ್ವರ ವೃಂದಾವನಗಳು ಆ ಪ್ರದೇಶದಲ್ಲಿ ಇರುವುದೇ ಅದನ್ನು ಸಾರಿ ಹೇಳುತ್ತದೆ. ಶ್ರೀವಿದ್ಯಾರಣ್ಯರ ಪಾತ್ರ ರಾಜ್ಯಸ್ಥಾಪನೆಯ ವಿಷಯದಲ್ಲಿ ಇರಬಹುದು. ಅದನ್ನು ಅಲ್ಲಗೆಳೆಯುತ್ತಿಲ್ಲ. ಆದರೆ, ಕೇವಲ ಶ್ರೀವಿದ್ಯಾರಣ್ಯರ ಮಾರ್ಗದರ್ಶನಕ್ಕೆ ಮಾತ್ರವೇ ಸೀಮಿತವಾಗಿರಲಿಲ್ಲ. ಶ್ರೀವ್ಯಾಸರಾಜರ ವಿಜಯನಗರ ಪ್ರವೇಶಕ್ಕೂ ಮುನ್ನವೇ ಮಾಧ್ವಯತಿಗಳ ಪಾರಮ್ಯ ಈ ಪ್ರದೇಶದಲ್ಲಿ ಮೆರೆದಿದೆ. ಅದನ್ನು ಶತಮಾನಗಳ ಹಿಂದೆಯೇ ಮುಚ್ಚಿಹಾಕಲಾಗಿದೆ. ಇದಕ್ಕೆ ಕಾರಣಗಳೂ ಇವೆ.
ಶ್ರೀವ್ಯಾಸರಾಜರು ಈ ಪ್ರದೇಶಕ್ಕೆ ಬಂದು ನೆಲಿಸಿದ ನಂತರ ಇಲ್ಲಿನ ತುಂಗಭದ್ರಾತಟದ ಸ್ವರೂಪವೇ ಬದಲಾಗಿ ಹೋಯಿತು. ಶ್ರೀರಾಮದೇವಾಲಯ, ಸುಗ್ರೀವನ ಗುಹೆ, ಸೀತಾಸೆರಗು ಎಂಬಿತ್ಯಾದಿಯಾಗಿ ಖ್ಯಾತವಾಗಿದ್ದ ಪ್ರದೇಶದಲ್ಲಿ ಅನೇಕ ವೈಷ್ಣವ ದೇವಾಲಯಗಳು ನೆಲೆಗೊಂಡವು. ಶ್ರೀವರಾಹ ದೇವಸ್ಥಾನ, ಶ್ರೀರಂಗನಾಥ ದೇವಸ್ಥಾನ, ಶ್ರೀವಿಜಯವಿಠ್ಠಲ ದೇವಸ್ಥಾನ, ಶ್ರೀಯಂತ್ರೋದ್ಧಾರಕ ಮುಖ್ಯಪ್ರಾಣದೇವಸ್ಥಾನ ಇವುಗಳಲ್ಲಿ ಪ್ರಮುಖವಾದವು. ಅಚ್ಯುತದೇವರಾಯನ ಗುಡಿ ನಂತರದ ಕಾಲದ್ದು. ಇದಲ್ಲದೇ, ಸುಗ್ರೀವನ ಗುಹೆಯ ಎದುರು ಮತ್ತೊಂದು ಭವ್ಯವಾದ ಕಟ್ಟಡವಿದೆ. ಅದು ಶ್ರೀವ್ಯಾಸರಾಜರ ಮಠ. ಶ್ರೀವ್ಯಾಸರಾಜರು ತಮ್ಮ ಸಂಸ್ಥಾನ ಪೂಜೆಯನ್ನು ನಡೆಸುತ್ತಿದ್ದ ಸ್ಥಳ ಹಾಗೂ ಸಭೆ / ದರ್ಬಾರ್ ನಡೆಸುತ್ತಿದ್ದ ಸ್ಥಳವೆಂದು ಕರೆಯಲಾಗುವ ಈ ಜಾಗವು ಈಗಲೂ ಹಂಪಿಯಲ್ಲಿದೆ. ಅದಕ್ಕೆ ಯಾವುದೇ ಬೋರ್ಡ್ಗಳನ್ನು ಇದುವರೆಗೂ ಪುರಾತತ್ವ ಇಲಾಖೆಯವರು ಹಾಕಿಲ್ಲ. ಅದನ್ನು ಗುರುತಿಸುವ ಕೆಲಸ ಹಾಗೂ ದಾಖಲೆಗಳಲ್ಲಿ ಸೇರಿಸುವ ಕೆಲಸ ಆಗಬೇಕಾಗಿದೆ. ಇಲ್ಲಿನ ವಿಶೇಷವೆಂದರೆ, ನವಗ್ರಹ ಕಿಂಡಿಯುಳ್ಳ ಪೂಜಾಗೃಹ. ಅನೇಕರು ಅದನ್ನು ಉಡುಪಿಗೆ ಸೀಮಿತವಾದ “ವಾಸ್ತುಶೈಲಿ ಎಂದು ತಿಳಿದಿದ್ದಾರೆ. ಆದರೆ ಅದು ಆ ಕಾಲದಲ್ಲಿ ಮಠ ಮಂದಿರಗಳಲ್ಲಿ ಬಳಕೆಯಲ್ಲಿದ್ದ ವಾಸ್ತುಶೈಲಿ ಎಂಬ ಐತಿಹಾಸಿಕ ಅಂಶವನ್ನೇ ಮರೆತುಬಿಟ್ಟಿದ್ದೇವೆ. ಕೇವಲ ಹಂಪಿಯಲ್ಲಿ ಮಾತ್ರವೇ ಅಲ್ಲ; ಮುಳಬಾಗಿಲಿನ ಮೂಲಮಠದಲ್ಲಿಯೂ ಕಿಂಡಿಯಲ್ಲಿ ದೇವರನ್ನು ಕಾಣುವ ವಾಸ್ತುವಿದೆ. ಶ್ರೀಪಾದರಾಜರ ಕಾಲಕ್ಕೂ ಪೂಜಾಕಾಲದಲ್ಲಿ ನೋಡುವ ಹಾಗೆ ವ್ಯವಸ್ಥೆಯಿದ್ದ ಕಿಂಡಿಯಿದು. ಹಾಗಾಗಿ ಶ್ರೀಕೃಷ್ಣಮಠದಂತೆ ಇರುವ ಕಿಂಡಿಯ ವಿನ್ಯಾಸ ಶ್ರೀಕನಕದಾಸರು ಹುಟ್ಟುವ ಮೊದಲೇ ಅನೇಕ ಮಠಗಳಲ್ಲಿದ್ದವು. ಶ್ರೀವ್ಯಾಸರಾಜರೂ ಕೂಡ ತಮಗೆ ನಿರ್ಮಿಸಿಕೊಟ್ಟ ಮಠದಲ್ಲಿ ಈ ವಾಸ್ತುವನ್ನು ಬಳಸಿ ಅದರ ಮಹತ್ವವನ್ನು ಸಾರಿದ್ದಾರೆ.
ಮತ್ತೋಂದು ಮಹತ್ವದ ಸಂಗತಿಯೆಂದರೆ, ಶ್ರೀವ್ಯಾಸರಾಜರ ಜಪದಕಟ್ಟೆ. ಇದು ಅನೇಕರಿಗೆ ಗಮನಕ್ಕೆ ಬಾರದೇ ಹೋದಂತಹ ಸ್ಥಳ. ಇದು ಸುಗ್ರೀವನ ಗುಹೆಯ ಬೆಟ್ಟದ ಬದಿಯಲ್ಲಿ ತುಂಗಭದ್ರೆಗೆ ಸನಿಹದಲ್ಲಿ ಎತ್ತರದಲ್ಲಿ ಸ್ಥಿತವಾದ ಕಟ್ಟೆ. ಇಲ್ಲಿ ಶ್ರೀವ್ಯಾಸರಾಜರು ಕೇಶವಾದಿ ಚತುರ್ವಿಂಶತಿ ರೂಪಗಳನ್ನು ಬಂಡೆಯ ಮೇಲೆ ಸಾಲಾಗಿ ಕೆತ್ತಿಸಿದ್ದಾರೆ. ಪ್ರತಿ ಮೂರ್ತಿಗಳು ಸುಮಾರು ಒಂದು ಅಡಿ ಎತ್ತರವಾಗಿದ್ದು ಒಂದಾದ ನಂತರ ಒಂದರಂತೆ ಸಾಲಾಗಿವೆ ಮತ್ತು ಕೆಳಗೆ ಆ ಕಾಲದ ಕನ್ನಡಲಿಪಿಯಲ್ಲಿ ‘ಕೇಶವ, ‘ನಾರಾಯಣ ಎಂದು 24 ರೂಪಗಳಿಗೂ ಹೆಸರುಗಳನ್ನು ಬರೆಸಿದ್ದಾರೆ. 24 ರೂಪಗಳ ನಂತರ, ಶ್ರೀವ್ಯಾಸರಾಜರಿಗೆ ಪ್ರಿಯವಾದ ಶ್ರೀನಿವಾಸ ಹಾಗೂ ನರಸಿಂಹ ರೂಪಗಳನ್ನು ಕೆತ್ತಿಸಲಾಗಿದೆ. ಶ್ರೀನಿವಾಸ, ನರಸಿಂಹ, ಅಂಬೆಗಾಲು ಕೃಷ್ಣ, ವಿಠ್ಠಲ ಇವು ಶ್ರೀವ್ಯಾಸರಾಜರಿಗೆ ಅತ್ಯಂತ ಪ್ರಿಯವಾದ ರೂಪಗಳು. ಇದನ್ನು ಅವರು ಓಡಾಡಿದ ಸ್ಥಳಗಳಲ್ಲಿ ಕಾಣಬಹುದಾಗಿದೆ. ಅವರ ವೃಂದಾವನದ ಸುತ್ತಲೂ ಸಹ ಇದೇ ರೂಪಗಳೇ ತುಂಬಿವೆ. ೨೪ ರೂಪಗಳುಳ್ಳ ಜಪದ ಕಟ್ಟೆಯಲ್ಲಿ ಪೂರ್ವಾಭಿಮುಖವಾಗಿ ಕುಳಿತರೆ ಸುತ್ತಲಿನ ವಿಹಂಗಮ ನೋಟ ಕಾಣುತ್ತದೆ. ಕುಳಿತುಕೊಳ್ಳುವ ಸ್ಥಳ ಸಮತಟ್ಟಾಗಿದ್ದು, ಹತ್ತಲು ಕಲ್ಲಿನಲ್ಲಿಯೇ ಪುಟ್ಟ ಅಟ್ಟಣಿಗೆಯನ್ನು ಮಾಡಿದ್ದಾರೆ. ಆದರೂ ಈಗಿನ ಪರಿಸ್ಥಿತಿಯಲ್ಲಿ ಏರಿಹೋಗುವುದು ಕಷ್ಟದ ಕೆಲಸ.
ಈ ಜಪದ ಕಟ್ಟೆಗೆ ಹತ್ತಿರವಾಗಿ ಕೂಗಳತೆಯ ದೂರದಲ್ಲಿ ಮತ್ತೊಂದು ಮಂಟಪವಿದೆ. ಇಲ್ಲಿನ ಬೃಹತ್ ಮಂಟಪದಲ್ಲಿ ಶ್ರೀಪಟ್ಟಾಭಿರಾಮದೇವರನ್ನು ಆಕರ್ಷಕವಾಗಿ ಕೆತ್ತಲಾಗಿದೆ. ಸೀತಾದೇವಿಯನ್ನು ಪ್ರತ್ಯೇಕ ಸಿಂಹಾಸನದಲ್ಲಿ ಚಿತ್ರಿಸಲಾಗಿದೆ. ಶ್ರೀವ್ಯಾಸರಾಜ ಮಠದ ಶ್ರೀಪಟ್ಟಾಭಿರಾಮದೇವರನ್ನು ಸಂಕೇತಿಸುವಂತಿದೆ. ಇದರ ಬಗ್ಗೆಯೂ ಐತಿಹಾಸಿಕವಾಗಿ ಬೆಳಕು ಚೆಲ್ಲುವ ಕೆಲಸ ಆಗಬೇಕಾಗಿದೆ. ಇದರ ಪಕ್ಕದಲ್ಲಿಯೇ ಕಿರಿದಾದ ಒಂದು ಸಣ್ಣ ಸಂದಿಯಿದೆ. ಇಲ್ಲಿ ತೂರಿಕೊಂಡು ಒಳ ಹೋದರೆ, ಅಲ್ಲಿ ದೊಡ್ಡ ದೊಡ್ಡ ಬಂಡೆಯ ನಡುವಿನ ಕಿರಿದಾದ ಖಾಲಿ ಜಾಗಗಳನ್ನು ತಲುಪಬಹುದು. ಬಹಮನಿಸುಲ್ತಾನ ದಂಡೆತ್ತಿ ಬಂದು ಇಲ್ಲಿನ ನಾಗರೀಕರನ್ನು ಕೊಂದುಹಾಕುತ್ತಿದ್ದ ಸಂದರ್ಭದಲ್ಲಿ ಅನೇಕರನ್ನು ರಕ್ಷಿಸಿದ ಸ್ಥಳವಾಗಿತ್ತಂತೆ ಈ ಕಲ್ಲಿನ ಸಂದಿಗಳು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ