ನಮಗಿರುವುದು ನಾಲ್ಕು ವೇದಗಳು. ಒಂದೊಂದು ವೇದಕ್ಕೂ ನೂರಾರು ಉಪನಿಷತ್ತುಗಳು. ಅವುಗಳಲ್ಲಿ ಪ್ರಧಾನವಾದವು ೧೧, ಅದು ಬೇರೆ ಮಾತು. ಇನ್ನು ಉಪನಿಷತ್ತುಗಳನ್ನು ತಿಳಿದುಕೊಳ್ಳಲು ಅನೇಕ ಭಾಷ್ಯಗಳನ್ನು ಬರೆಯಲಾಯಿತು. ಅವನ್ನು ತಿಳಿದುಕೊಳ್ಳಲು ಉಪಭಾಷ್ಯಗಳು, ಟೀಕೆಗಳು.... ಹೀಗೆ ಹಲವಾರು ಗ್ರಂಥಗಳಿವೆ. ಮೇಲ್ನೋಟಕ್ಕೆ ಪರಸ್ಪರ ವಿರೋಧಾಭಾಸದಿಂದ ಕಂಡುಬರುವ ಉಪನಿಷತ್ತುಗಳ ಹೇಳಿಕಗಳನ್ನೆಲ್ಲಾ ಕ್ರೋಢೀಕರಿಸಿ ಅವನ್ನು ಕ್ರಮಬದ್ಧವಾಗಿ ಅರಿಯಲು ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಪೂರ್ವ ಮೀಮಾಂಸ, ಉತ್ತರ ಮೀಮಾಂಸ ಮೊದಲಾದ ಸಿದ್ಧಾಂತಗಳು ರೂಪುಗೊಂಡವು. ಕಡೆಯದಾಗಿ ಆಗಿನ ಕಾಲಕ್ಕೆ ಎಲ್ಲರೂ ಒಪ್ಪಿಕೊಂಡದ್ದು ಉತ್ತರ ಮೀಮಾಂಸ ಅಥವಾ ಬ್ರಹ್ಮಸೂತ್ರಗಳು. ಅದನ್ನು ಬರೆದವನು ಬಾದರಾಯಣ ಅಥವಾ ವ್ಯಾಸ. ಇರಲಿ, ಅಲ್ಲಿ ಬಳಸಿರುವ ಭಾಷೆ ಸೂತ್ರ ರೂಪದಲ್ಲಿದೆ ಅಂದರೆ ಅದು ಬಹಳ ಬಿಗುವಾಗಿದೆ (ಕಠಿಣವಾಗಿದೆ). ಮತ್ತೆ ಅದನ್ನು ವಿವರಿಸಲು ಪುನಃ ಭಾಷ್ಯಗಳು, ಟೀಕೆಗಳು, ವಾರ್ತಿಕಗಳು ಮೊದಲಾದವು ಹುಟ್ಟಿಕೊಂಡವು. ಇವನ್ನೆಲ್ಲಾ ಕ್ರೋಢೀಕರಿಸಿ ಒಂದು ಸರಳ ರೂಪದಲ್ಲಿ ಶ್ರೀ ಕೃಷ್ಣನು ಭಗವದ್ಗೀತೆಯನ್ನು ನಮಗೆ ಕೊಟ್ಟ.
ಆಮೇಲೆ ಉಪನಿಷತ್ತುಗಳು, ಉತ್ತರ ಮೀಮಾಂಸ (ಬ್ರಹ್ಮಸೂತ್ರಗಳು) ಮತ್ತು ಗೀತೆಗಳನ್ನು ಆಧರಿಸಿ ಹಲವಾರು ಭಾಷ್ಯಗಳನ್ನು ಬರೆಯಲಾಯಿತು. ಅದರಲ್ಲಿ ಪ್ರಸಿದ್ಧವಾಗಿರುವುದು ಶಂಕರ, ರಾಮಾನುಜ ಹಾಗು ಮಾಧ್ವರದು. ಇವು ಕೂಡಾ ಜನರಿಗೆ ಅರ್ಥ ಮಾಡಿಕೊಳ್ಳಲು ಕಷ್ಟವೆನಿಸಿದಾಗ ಪುರಾಣಗಳನ್ನು ರಚಿಸಲಾಯಿತು. ಅವುಗಳಲ್ಲಿ ಹದಿನೆಂಟು ಪುರಾಣಗಳು ಪ್ರಸಿದ್ಧವಾಗಿವೆ. ಆಮೇಲೆ ಕಾಲಾನಂತರದಲ್ಲಿ ಸಾವಿರಾರು ಪುರಾಣಗಳ ರಚನೆಯಾಯಿತು. ಅವುಗಳ ಉದ್ದೇಶವೂ ವೈವಿಧ್ಯಮಯ. ಅವನ್ನು ಈ ಕೆಳಗಿನ ಶ್ಲೋಕಗಳಲ್ಲಿ ಕೊಡಬಹುದು.
ಸರ್ಗಶ್ಚ ಪ್ರತಿಸರ್ಗಶ್ಚ ವಂಶೋ ಮನ್ವಂತರಾಣಿ ಚ l
ವಂಶಾನುಚರಿತಂ ಚೇತಿ ಪುರಾಣಂ ಪಂಚ ಲಕ್ಷಣಂ ll
"ಸೃಷ್ಟಿಯನ್ನು ಕುರಿತು ಮತ್ತೆ ಮತ್ತೆ ಮರುಕಳಿಸುವ ಸೃಷ್ಟಿಯನ್ನು ಕುರಿತು, ಮುನಿಗಳ ವಂಶಗಳ ಕುರಿತು, ಮನ್ವಂತರಗಳ ಕುರಿತು, ರಾಜವಂಶಗಳ ಕುರಿತು ಹೇಳುವುದೇ ಪುರಾಣಗಳ ಐದು ಲಕ್ಷಣಗಳು". ಅದೇ ವಿಧವಾಗಿ,
ಧರ್ಮಾರ್ಥ ಕಾಮಮೋಕ್ಷಾಣಾಂ ಉಪದೇಶ ಸಮನ್ವಿತಂ l
ಪೂರ್ವವೃತ್ತಂ ಕಥಾರೂಪಂ ಇತಿಹಾಸಂ ಪ್ರಚಕ್ಷತೇ ll
"ಚರಿತ್ರೆ, ಇತಿಹಾಸಗಳೊಂದಿಗೆ, ಪುರಷಾರ್ಥ ಸಿದ್ಧಿ ಸಾಧನೆಗೆ ಪೂರಕವಾದ ಉಪದೇಶಗಳನ್ನು ಮತ್ತು ಪೂರ್ವದಲ್ಲಿ ನಡೆದ ಸಂಗತಿಗಳನ್ನು ಕಥಾರೂಪದಲ್ಲಿ ಹೇಳುವುದು...." ಪುರಾಣಗಳ ಲಕ್ಷಣ.
ಮನ್ವಂತರಗಳ ಕಾಲದಲ್ಲಿ ಹುಟ್ಟಿ ಪರಿಪಾಲಸಿದ ರಾಜರ ಹಾಗು ಇತರರ ವಿಷಯಗಳನ್ನೊಂಡ ಚರಿತ್ರೆಯನ್ನು ದಿನಾಂಕಗಳೊಂದಿಗೆ ಬರೆಯುತ್ತಾ ಸಾಗಿದರೆ ಅದು ಭೂಮಿಯಿಂದ ಸೂರ್ಯನವರೆಗೆ ತಾಳೆಗರಿಯ ಗ್ರಂಥಗಳ ಪರ್ವತದಷ್ಟಾಗಿ ಬಿಡುತ್ತಿತ್ತೆಂದು ಶ್ರೀ ವಿಶ್ವನಾಥ ಸತ್ಯನಾರಾಯಣ ಎನ್ನುವ ವಿದ್ವಾಂಸರೊಬ್ಬರು ವ್ಯಾಖ್ಯಾನಿಸಿದ್ದಾರೆ. ಆದ್ದರಿಂದ ಕೇವಲ ಶುಭ ಸಂಸ್ಕಾರಗಳ ಕುರಿತು ಮತ್ತು ಆ ಒಳ್ಳೆಯ ಸಂಸ್ಕಾರಗಳ ಪ್ರದಾತರ ಕುರಿತಷ್ಟೆ ನಮ್ಮ ಇತಿಹಾಸಕಾರರು ಬರೆದಿದ್ದಾರೆ. ಅವರು ಬರೆದ ತಾರೀಖುಗಳನ್ನು ಬ್ರಿಟಿಷರು ಅದಲು-ಬದಲು ಮಾಡಿದರು, ಅದು ಬೇರೆ ವಿಷಯ! "ಚರಿತ್ರೆ ಎನ್ನುವುದು ಕೇವಲ ಹಲವು ಶತಮಾನಗಳ ಒಳಗೆ ಅಥವಾ ಬಹಳವೆಂದರೆ ಕೆಲವು ಸಾವಿರ ವರ್ಷಗಳೊಳಗೆ ಇರಬೇಕು ಎನ್ನುವ ಪಾಠವನ್ನು ಮೆಕಾಲೆ ವಿದ್ಯಾವಿಧಾನವು ನಮಗೆ ಕಲಿಸಿಕೊಟ್ಟಿತು. ಆದ್ದರಿಂದ ಐದು ಸಾವಿರ ವರ್ಷಗಳ ಹಿಂದೆ ನಡೆದ ವಿಷಯಗಳನ್ನು ಕುರಿತು ಹೇಳಲು "ಇತಿಹಾಸ ಪೂರ್ವಯುಗ"ವೆನ್ನುವ ಶಬ್ದವನ್ನು ಹುಟ್ಟುಹಾಕಲಾಯಿತು! ಈ ಇತಿಹಾಸಪೂರ್ವ ಯುಗದಲ್ಲಿ ಚರಿತ್ರೆಯಿದ್ದಿಲ್ಲವೇ? ಮನುಷ್ಯರು ಇರಲಿಲ್ಲವೇ? ಈ ಹಿನ್ನಲೆಯಲ್ಲಿಯೇ ರಾಮಾಯಣ, ಮಹಾಭಾರತಗ ಐದು ಸಾವಿರ ವರ್ಷಗಳ ಒಳಗೆ ನಡೆದಿರಬೇಕೆಂದು ವಾದಿಸುತ್ತಿದ್ದೀರ. ಮಹಾಭಾರತ ನಡೆದದ್ದು ಕ್ರಿ.ಪೂ. ೩೧೦೨ ವರ್ಷಗಳಷ್ಟು ಹಿಂದೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ. ಬಾದಾಮಿಯ ಬಳಿಯಿರುವ ಐಹೊಳೆಯ ಜೈನ ದೇವಸ್ಥಾನದಲ್ಲಿನ ಶಿಲಾಶಾಸನದಲ್ಲಿರುವ ಕೆಲವು ಬರಹಗಳು ಇದಕ್ಕೆ ಪುರಾವೆಯನ್ನೊದಗಿಸುತ್ತವೆ.
ರಾಮಾಯಣ ಮಹಾಭಾರತಗಳನ್ನು ಇತಿಹಾಸವೆಂದು ನಮ್ಮವರು ಭಾವಿಸುತ್ತಾರೆ. ಇತಿಹಾಸ ಎಂದರೆ ನಡೆದ ಘಟನೆ. ಹಾಗಾದರೆ ರಾಮಾಯಣ ಮಹಾಭಾರತಗಳು ನಿಜವಾಗಿ ನಡೆದ ಘಟನೆಯೆ? ಎಂದರೆ, ಅಲ್ಲಿ ಬರುವ ಎಲ್ಲವೂ ನಿಜವಾಗಿ ನಡೆದದ್ದು ಎಂದು ಭಾವಿಸಬೇಕಾಗಿಲ್ಲ. ಆದರೆ ಅದಕ್ಕೆ ಒಂದು ಚಾರಿತ್ರಿಕ ಘಟನೆಗಳ ಅಸ್ಥಿ ಪಂಜರವಿದೆ. ಅದರ ಮೇಲೆ ಕವಿ ತನ್ನ ಕಲ್ಪನೆಯಿಂದ ರಕ್ತ ಮಾಂಸಗಳನ್ನು ಕೊಟ್ಟು, ಇರುವುದು, ಇಲ್ಲದಿರುವುದು, ಎಲ್ಲವನ್ನೂ ಸೇರಿಸಿ ಉತ್ಪ್ರೇಕ್ಷೆಗಳ ಮೂಲಕ ಅದನ್ನು ಒಂದು ಸುಂದರವಾದ ಕಾವ್ಯವನ್ನಾಗಿ ಮಾಡುತ್ತಾನೆ.
ಇತಿಹಾಸಕಾರರ ಉದ್ದೇಶ ಬೇರೆ, ಕವಿಯ ಉದ್ದೇಶ ಬೇರೆ. ಇತಿಹಾಸ ಬರೆಯುವವನು ಆದ ಘಟನೆಗಳನ್ನು ಹೇಳುತ್ತಾನೆ. ಅವನು ಹೇಳುವ ಪ್ರತಿಯೊಂದನ್ನೂ ಸಮರ್ಥಿಸುವುದಕ್ಕೆ ಅವನಿಗೆ ಆಧಾರಗಳು ಬೇಕು. ಅಲ್ಲಿ ಕಲ್ಪನೆಯ ಲಂಗುಲಗಾಮಿಲ್ಲದ ಸಂಚಾರಕ್ಕೆ ಅವಕಾಶವಿಲ್ಲ. ಆದರೆ ವ್ಯಾಸ ವಾಲ್ಮೀಕಿಗಳಂತಹ ಕವಿಗಳು ಋಷಿಗಳಾಗಿದ್ದರು, ದ್ರಷ್ಟಾರರಾಗಿದ್ದರು. ಅವರ ಉದ್ದೇಶವೇ ಬೇರೆ. ಜನಾಂಗದ ಮುಂದೆ ಒಂದು ದೊಡ್ಡ ಆದರ್ಶವನ್ನಿಡಬೇಕು, ಅದರಂತೆ ಬಾಳಿದ ವ್ಯಕ್ತಿ ಎಂತೆಂತಹ ಕಷ್ಟಗಳನ್ನು ಅನುಭವಿಸಿದರೂ ಕೊನೆಗೆ ಅವನು ಜಯಶೀಲನಾಗುವನು ಎಂಬುದನ್ನು ತೋರಿಸಬೇಕು. ಯಾರು ಧರ್ಮ, ಸತ್ಯ, ದೇವರು ಎಂಬುದನ್ನು ಬಿಟ್ಟು ತತ್ಕಾಲದಲ್ಲಿ ಎಷ್ಟೇ ಉನ್ನತಿಯ ಶಿಖರದಲ್ಲಿರಲಿ ಕೊನೆಗೆ ಗೋಳಿನ ಬಾಯಿಗೆ ಅವರು ಧಾವಿಸುತ್ತಾನೆ ಎಂಬುದನ್ನು ಚಿತ್ರಿಸುವರು. ಜನಾಂಗದ ಮುಂದೆ ಎಂದಿಗೂ ಅಚ್ಚಳಿಯದ ಆದರ್ಶವನ್ನು ಇಡುತ್ತಾರೆ. ಇದು ನಮ್ಮ ಜನಾಂಗದ ಆಳಕ್ಕೆ ಪ್ರವಹಿಸಿದೆ. ನಮ್ಮ ಇಡೀ ಜೀವನವನ್ನೇ ರೂಪಿಸುತ್ತಿದೆ. ಇದು ಎಂದೆಂದಿಗೂ ಬದುಕಿರುವ ಚರಿತ್ರೆ, ಸದಾ ಜೀವಂತವಾಗಿದೆ. ರಾಮಾಯಣ ಮಹಾಭಾರತ ಇವು ಗಂಗಾ ಯಮುನಾ ನದಿಗಳಂತೆ ಜೀವಂತ ಪ್ರವಾಹಗಳು. ಎಷ್ಟೋ ಜೀವಿಗಳು ಅದರಿಂದ ಸಾರವನ್ನು ಹೀರಿ ತಮ್ಮ ಬಾಳನ್ನು ಪೋಷಿಸಿಕೊಂಡಿರುವರು. ಅಲ್ಲಿ ಬರುವ ಖ್ಯಾತನಾಮರ ಹೆಸರನ್ನು ನಮ್ಮ ಮಕ್ಕಳಿಗೆ ಇಡುತ್ತೇವೆ. ಭರತಖಂಡದ ಮೂಲೆಮೂಲೆಯಲ್ಲಿ ಇಲ್ಲಿಗೆ ರಾಮ ಬಂದಿದ್ದ, ಸೀತೆ ಬಂದಿದ್ದಳು ಎನ್ನುತ್ತೇವೆ. ಹನುಮಂತನ ಪಾದವಿಲ್ಲದ ಹಳ್ಳಿಯೇ ಇಲ್ಲ ಎನ್ನಬಹುದು. ಹಾಗೆಯೇ ಬಕಾಸುರನನ್ನು ಕೊಂದ ಗುಡ್ಡಗಳು ನಮ್ಮ ಭರತಖಂಡದಲ್ಲಿ ಎಷ್ಟೋ ಇವೆ. ಭೀಮ ಎತ್ತಿದ ಬಂಡೆಗಳು ಎಷ್ಟೋ ಇವೆ. ಚಾರಿತ್ರಿಕ ದೃಷ್ಟಿಯಿಂದ ನೋಡಿದರೆ ಇವು ಹಾಸ್ಯಾಸ್ಪದವಾದರೂ ಸಾಂಸ್ಕೃತಿಕ ದೃಷ್ಟಿಯಿಂದ ಅಸಾಧ್ಯವನ್ನು ಸಾಧಿಸಿವೆ.
ಸುಮಾರು ೧೦೨೮ ವಿವಿಧ ಮತ ಗ್ರಂಥಗಳು ಹಾಗು ಅವುಗಳಿಗೆ ಸಂಬಂಧಿಸಿದ ವ್ಯಾಖ್ಯಾನಗಳಿವೆ. ಇಷ್ಟೆಲ್ಲಾ ಇರುವಾಗ ಹಿಂದೂವಾದವನು ಅವೆಲ್ಲವನ್ನೂ ಓದುವುದಿರಲಿ ಅವರ ಹೆಸರುಗಳನ್ನೂ ಸಹ ಜ್ಞಾಪಕದಲ್ಲಿಟ್ಟುಕೊಳ್ಳಲಾರ. ನೀವೇನೋ ರಾಮಾಯಣ ಒಂದು ಕಥೆಯಷ್ಟೆ ಎಂದು ಸರಳವಾಗಿ ಹೇಳಿಬಿಟ್ಟಿರಿ. ಆದರೆ ಅದನ್ನು ಸಮರ್ಥಿಸುವುದು ಅಷ್ಟು ಸುಲಭವಲ್ಲ. ಈಗ ನಮ್ಮ ಕಣ್ಣ ಮುಂದೆ ನಡೆಯುವ ಘಟನೆಗಳನ್ನೇ ನಾವು ವಿವರಿಸಲಾಗದು ಇನ್ನು ಎಂದೋ ನಡೆದ ಸಂಗತಿಗಳ ಕುರಿತು ಸಾಕ್ಷ್ಯ ಹುಡುಕುವುದು ನಿಮ್ಮ ದೃಷ್ಟಿಯಲ್ಲಿ ಸಾಧ್ಯವಾಗದೇ ಹೋಗಬಹುದು. ಡೈನಾಸೊರ್ಗಳ ಬಗ್ಗೆ ಉಲ್ಲೇಖಿಸಬೇಕಿತ್ತೆಂದು ಹೇಳಿದ್ದೀರಿ. ಈಗಿನ ಪಕ್ಷಿಗಳು ವಿಕಾಸ ಹೊಂದಿದ ಡೈನಾಸೋರ್ಗಳು ಎನ್ನುವುದು ನಿಮಗೆ ತಿಳಿಯದ ವಿಷಯವಲ್ಲ ಎಂದುಕೊಳ್ಳುತ್ತೇನೆ.
ಹಿಂದೂಗಳು ಎಂದಿದ್ದರೂ ಹುಲಿಗಳು. ಅವಶ್ಯಕತೆಯಿದ್ದಾಗ ಮಾತ್ರ ಶತ್ರುಗಳ ಮೇಲೆ ಧಾಳಿ ಮಾಡುತ್ತಾರೆ. ಕೆಲವೊಂದು ಗುಳ್ಳೆ ನರಿಗಳು ಸಮಯಸಾಧಿಸಿ ಪಕ್ಷಾಂತರ ಮಾಡುತ್ತಾರೆ, ಅವರ ವಿಷಯ ಬೇರೆ. ಸದಸ್ಯರನ್ನು ಪ್ರಾಣಿಗಳೆಂದು ನಿರ್ವಾಹಕರೇ ಕರೆಯುವುದು ಇವೆಲ್ಲಾ ಅತಿರೇಕವಲ್ಲವೇ?
ಇದನ್ನೆಲ್ಲಾ ನೀವು ಓದುತ್ತೀರೋ ಇಲ್ಲವೋ ಗೊತ್ತಿಲ್ಲ. ಆದರೆ ಊದಬೇಕಾದ ಶಂಖವನ್ನಂತೂ ಊದಿದ್ದೇನೆ. ನಿಮ್ಮ ವಯಸ್ಸಿಗೆ ನಿಮ್ಮ ತಿಳುವಳಿಕೆ ಹೆಚ್ಚು, ಚೆನ್ನಾಗಿ ಆಲೋಚನೆ ಮಾಡಬಲ್ಲಿರಿ ಎಲ್ಲವೂ ನಿಜ. ಹಾಗೆಂದು ನೀವು ಹೇಳಿದ್ದೆಲ್ಲವೂ ಸತ್ಯ ಮತ್ತು ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎನ್ನುವುದು ಅಷ್ಟೇ ಮೂರ್ಖತನ. ದಯಮಾಡಿ ನಿಮ್ಮ ಎಕ್ಕಡ.... ಮುಂತಾದ ಶಬ್ದಗಳನ್ನು ಬಳಸುವುದು ಬಿಡಿ. ಆಮೇಲೆ ಸದಸ್ಯರನ್ನು ಹಂಗಿಸುವುದೂ ಬಿಡಿ. ನಾನು ನಿಮ್ಮ ಪ್ರತಿಕ್ರಿಯೆಗಳನ್ನು ಹಾಸ್ಯವಾಗಿ ತೆಗೆದುಕೊಳ್ಳುತ್ತೇನೆ. ಎಲ್ಲರೂ ಆ ಮನಸ್ಥಿತಿಯಲ್ಲಿ ಇರುವುದಿಲ್ಲ. ಆಮೇಲೆ ಅವರು ನಿಮ್ಮನ್ನು ನಿಂದಿಸಿದಾಗ ಗೋಳಾಡುವುದು ತಪ್ಪುತ್ತದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ