ಭಾನುವಾರ, ಸೆಪ್ಟೆಂಬರ್ 10, 2017

ಉಪನಯನ - ಏಕೆ?

ಉಪನಯನ - ಏಕೆ? 
ಮಾಡದಿದ್ದರೆ ಏನಾಗುತ್ತದೆ ?

ಉಪ = ಸಮೀಪಕ್ಕೆ, 
ನಯನ=ಕರೆದುಕೊಂಡು ಹೋಗುವುದು. ವೇದದ ಮತ್ತು ವೇದ ಪ್ರತಿ ಪಾದ್ಯನಾದ ಭಗವಂತನ ಸಮೀಪಕ್ಕೆ ನಮ್ಮ ಮಗುವನ್ನು  ಕರೆದುಕೊಂಡು ಹೋಗುವ ಕ್ರಿಯೆಯೇ ಉಪನಯನ.   ಇದನ್ನು ಮೌಂಜೀ ಬಂಧನ (ದರ್ಭೆಯ ಹುರಿಯನ್ನು ಮಂತ್ರ ಪೂರ್ವಕವಾಗಿ ಉಡುದಾರದಂತೆ ಕಟ್ಟುವ) ಸಂಸ್ಕಾರ ಅಥವಾ ಮುಂಜಿ / ಮುಂಜಿವಿ ಎಂಬ ಪದಗಳಿಂದ ಕರೆಯುವುದು ರೂಢಿಯಲ್ಲಿದೆ.  ಸಾಮಾನ್ಯವಾಗಿ ಬ್ರಾಹ್ಮಣ ವಟುವಿಗೆ ಗರ್ಭಾಷ್ಟಮದಲ್ಲಿ ಅಂದರೆ ಏಳನೆಯ ವರ್ಷ ಅಥವಾ ಎಂಟನೆಯ ವರ್ಷದಲ್ಲಿ ಈ ಉಪನಯನ ಮಹೋತ್ಸವನ್ನು ನಡೆಸಲಾಗುತ್ತದೆ .   ಆದರೆ ವಟುವಿಗೆ ಉಚ್ಚಾರಣಾಸಾಮರ್ಥ್ಯ ಚೆನ್ನಾಗಿದ್ದರೆ ಐದು ವರ್ಷದಲ್ಲೂ ಸಹ ಉಪನಯನ ಮಾಡಿದ ನಿದರ್ಶನಗಳಿವೆ.

ಶ್ರೀವ್ಯಾಸರಾಯರ ಚರಿತ್ರೆಯಲ್ಲಿ ಶ್ರೀವಿದ್ಯಾರತ್ನಾಕರ ತೀರ್ಥರು   "ಅಬ್ದೇ ಪಂಚಮರಾಯತೇ ವಟುರಭೂತ್" ಎಂದು ಹೇಳಿದ್ದಾರೆ. ಅಂದರೆ ಐದನೆಯ ವರ್ಷಕ್ಕೇ ಶ್ರೀ ವ್ಯಾಸರಾಯರಿಗೆ ಉಪನಯನ ಸಂಸ್ಕಾರ ನೆರವೇರಿತು ಎಂಬುದು ತಿಳಿದು ಬರುತ್ತದೆ. 

ಉಪನಯನದ ಮುಖ್ಯ ಅಂಗಗಳು: 

೧. ವೇದಾಧ್ಯಯನ ಅಧಿಕಾರ ಸಿದ್ಧಿಗಾಗಿ ಚೌಲ ಎಂದರೆ ಶಿಖೆಯನ್ನು ಬಿಡುವುದು. 
೨.ಮಾತ್ರಾ ಸಹ ಭೋಜನ ಎಂದರೆ ಕೊನೆಯದಾಗಿ ತಾಯಿಯ ಜೊತೆಗೆ 
 ಊಟ ಮಾಡುವುದು. ಅಲ್ಲಿಂದ ಮುಂದೆ ಆ ವಟು ತಾಯಿಯಿಂದ ದೂರ ಕುಳಿತು ಊಟ ಮಾಡಬೇಕು .  ಯಾರ ಎಂಜಲನ್ನೂ ತಿನ್ನುವಂತಿಲ್ಲ.
೩. ಯಜ್ಞೋಪವೀತ ಧಾರಣೆ: ಯಜ್ಞೋಪವೀತ ಅಂದರೆ ಜನಿವಾರ.  ಒಂಬತ್ತು ಎಳೆಗಳಲ್ಲಿ  ಅನುಕ್ರಮವಾಗಿ ಓಂಕಾರ ವಿಷ್ಣು ಬ್ರಹ್ಮ ರುದ್ರ ವಾಯು ಸೂರ್ಯ ಚಂದ್ರ ನಾಗರು ಹಾಗೂ ವಿಶ್ವೇದೇವತೆಗಳನ್ನು ವೇದ ಮಂತ್ರಗಳಿಂದ ಆವಾಹನೆ ಮಾಡಿ ,   ಮೂರು ದಾರಗಳಲ್ಲಿ ಕ್ರಮವಾಗಿ ಋಗ್ವೇದ ಯಜುರ್ವೇದ ಸಾಮವೇದ ಮತ್ತು  ಜನಿವಾರದ ಬ್ರಹ್ಮಗಂಟಿನಲ್ಲಿ ಅಥರ್ವಣ ವೇದವನ್ನು ಆವಾಹನೆ ಮಾಡಿ ಜೀವನ ಪರ್ಯಂತ ಮಂತ್ರ ಪೂರ್ವಕವಾಗಿ ಧರಿಸುವ ಕ್ರಿಯೆಯೇ ಯಜ್ಞೋಪವೀತ ಧಾರಣೆ. ಇದರಿಂದಲೇ ದೇಹ ಸದಾ ಶುಚಿ ಮತ್ತು ವೇದಾಧಿಕಾರ. ಇಂತಹ ಪರಮ ಪವಿತ್ರ ಯಜ್ಞೋಪವೀತ ವನ್ನು ಮೊದಲ ಬಾರಿಗೆ ಧರಿಸುವ ಸಮಾರಂಭವೇ ಉಪನಯನ.

೪. ಉಪದೇಶಿಸುವುದು ತಂದೆಯ ಹಕ್ಕು ಉಪದೇಶ ಪಡೆಯುವುದು ಮಗನ ಹಕ್ಕು :
ತನ್ನ ವಂಶ ಪಾರಂಪರ್ಯವಾಗಿ ಬಂದ ಗಾಯತ್ರಿ ಮಂತ್ರವನ್ನು ಉಪದೇಶಿಸುವ ಮೊದಲ ಅಧಿಕಾರ ಇರುವುದು (ಸನ್ಯಾಸಿಗಳಲ್ಲ ವಿದ್ವಾಂಸರಿಗಲ್ಲ. ಪುರೋಹಿತರಿಗಲ್ಲ)  ಜನ್ಮ ಕೊಟ್ಟ ತಂದೆಗೆ ಮಾತ್ರ ತನ್ನ ಮಗನಿಗೆ  ಗಾಯತ್ರಿ ಮಂತ್ರದ ಉಪದೇಶ ಮಾಡುವ ಅಧಿಕಾರವಿದೆ.   ತಂದೆಯು ದಡ್ಡನಾದರೂ ಅನಾಚಾರಿಯಾದರೂ ಮಗನಿಗೆ ತಂದೆಯೇ ಉಪದೇಶ ಮಾಡಬೇಕು.   ಅ ಕಾರಣಕ್ಕಾದರೂ ತಂದೆಯು  ಸದಾಚಾರವನ್ನು ಸಂಪಾದಿಸಿ ಉಪನಯನಕ್ಕೆ ಮೊದಲು ಒಂದು ಲಕ್ಷ ಅಥವಾ ಕನಿಷ್ಠ ಒಂದು ಸಾವಿರ ಸಲ ಗಾಯತ್ರಿ ಮಂತ್ರ ಜಪ ಮಾಡಿ ಅನಂತರ ಮಗನಿಗೆ ಉಪದೇಶ ಮಾಡಬೇಕು .

 ೫. ವಟುವು ತನ್ನ ಗುರುವಾದ  ತಂದೆಯ  ಪಾದಪೂಜೆಯನ್ನು ಮಾಡುವುದು.ಆಗ ತಂದೆಯು ತನ್ನ ಗೋತ್ರ ಪ್ರವರ್ತಕರಾದ  ಋಷಿಗಳ ಮೂಲಕ ವಂಶಪಾರಂಪರ್ಯವಾಗಿ ಬಂದ ಗಾಯತ್ರಿ ಮಂತ್ರವನ್ನು ತನ್ನ ಪ್ರೀತಿಯ ಮಗುವಿಗೆ ಉಪದೇಶ ಮಾಡುತ್ತಾನೆ.

೬.  ತಂದೆ - ಮಗುವಿನ ಅತೀಂದ್ರಿಯ ಸಂಬಂಧ ಸ್ಥಾಪನೆಯೇ ಉಪನಯನ: 
ತಂದೆಯು ಮಗನ ಹೃದಯದ ಮೇಲೆ ತನ್ನ ಕೈಯನ್ನಿಟ್ಟು    " ಮಮ ವ್ರತಂ ಹೃದಯಂ ತೇ ದಧಾಮಿ।  ಮಮ ಚಿತ್ತಂ ಅನುಚಿತ್ತಂ ತೇ ಅಸ್ತು॥
(ಮಗುವೇ! ನನ್ನ ಹೃದಯದಲ್ಲಿರುವ ವ್ರತಗಳನ್ನು ನಿನ್ನ ಹೃದಯಕ್ಕೆ ವರ್ಗಾಯಿ ಸುತ್ತಿದ್ದೇನೆ . ನನ್ನ ಮನಸ್ಸು ನಿನ್ನ ಮನಸ್ಸಿಗೆ ಹೊಂದಿ ನಡೆಯಲಿ : ನಿನ್ನ ಮನಸ್ಸು ನನ್ನ ಮನಸ್ಸಿಗೆ ಹೊಂದಿ ನಡೆಯಲಿ) ಎಂಬ ವೇದ ಮಂತ್ರವನ್ನು ಪಠಿಸುತ್ತಾನೆ.

ಹೀಗೆ ಉಪನಯನವು ತಂದೆ ಮಕ್ಕಳ ಮನಸ್ಸನ್ನು ಉತ್ತಮ ಉದ್ದೇಶಕ್ಕಾಗಿ ಒಂದಾಗಿ ಬೆಸೆಯುವ  ಪುಣ್ಯ ಕ್ರಿಯೆ.

೬. ಉಪನಯನ ವನ್ನು ಏಕೆ ಮಾಡಬೇಕು? ಗಾಯತ್ರೀ ಮಂತ್ರವು ಪ್ರತಿಭೆಯನ್ನು ಉದ್ದೀಪಿಸುವ  ಮೇಧಾ ಶಕ್ತಿಯನ್ನು ವೃದ್ಧಿಸುತ್ತದೆ ತಂದೆ ತಾಯಿಗಳು ಕೇವಲ ಮಗುವನ್ನು ಹಡೆದರೆ-ಹೊಡೆದರೆ ಅವರ ಜವಾಬ್ದಾರಿ ಮುಗಿಯುವುದಿಲ್ಲ. ಮಕ್ಕಳಿಗೆ ಸಕಾಲದಲ್ಲಿ ಉಪನಯನ ಸಂಸ್ಕಾರವನ್ನು ನೆರವೇರಿಸುವ ಮೂಲಕ ಮಕ್ಕಳನ್ನು ವಂಶದ ಉತ್ತಮ ವಿಚಾರಗಳಿಗೆ ಸದಾಚಾರಕ್ಕೆ ನಿಜವಾದ  ವಾರಸುದಾರರನ್ನಾಗಿ ಮಾಡಬೇಕು. ಕೇವಲ ಹಣ ಆಸ್ತಿಗಳನ್ನು ಕೊಟ್ಟರೆ ಸಾಲದು. ಉತ್ತಮ ಸಂಸ್ಕಾರವನ್ನು ಸಹ ನೀಡಬೇಕು. ಆಗ ಮಾತ್ರ ಆ ತಂದೆ ತಾಯಿಗಳು ಹಿರಿಯರು ತಮಗೆ ನೀಡಿದ ಶಕ್ತಿ ಸೌಕರ್ಯಗಳನ್ನು ಸದುಪಯೋಗ ಪಡಿಸಿದಂತೆ ಆಗುತ್ತದೆ . 
ದೇವಋಣ- ಋಷಿಋಣ- ಪಿತೃಋಣಗಳನ್ನು ತೀರಿಸಿದಂತೆ ಆಗುತ್ತದೆ.

೭. ಉಪನಯನ ವನ್ನು ಮಾಡದಿದ್ದರೆ ಏನಾಗುತ್ತದೆ ?
ಯಾವ ತಂದೆ ತಾಯಿಗಳು ತಮ್ಮ ಮಗುವಿಗೆ ಉಪನಯನ ವನ್ನು ಮಾಡುವುದಿಲ್ಲವೋ ಅವರು ಆ ಮಗುವನ್ನು ತಮ್ಮ ವಂಶದ ಸದಾಚಾರಗಳಿಂದ ದೂರ ಬಿಟ್ಟಂತೆ ಗಡಿಪಾರು ಮಾಡಿದಂತೆ. ತಮ್ಮ ವಂಶದಿಂದ ಹೊರ ಹಾಕಿದಂತೆ . ಮಾತ್ರವಲ್ಲ ಆ ಮಗುವನ್ನು ಶಾರೀರಿಕವಾಗಿ ಮಾತ್ರ ಉಳಿಸಿ ಆಧ್ಯಾತ್ಮಿಕವಾಗಿ ನಾಶ ಮಾಡಿದಂತೆ. ಅಲ್ಲವೇ?    ಸಕಾಲದಲ್ಲಿ ಉಪನಯನ ಮಾಡದಿದ್ದರೆ ಸಮಾಜವು ನಿಂದಿಸುತ್ತದೆ. ಬಂಧು ಬಳಗದವರು ಆಡಿಕೊಳ್ಳುತ್ತಾರೆ .  ಮಾತ್ರವಲ್ಲ ಆ ವಟುವು ಎಷ್ಟೇ ಬೆಳೆದರೂ, ಎಂತಹ ಉತ್ತಮ ಕೋರ್ಸ್ ಓದಿದರೂ,  ಒಳ್ಳೆಯ ಉದ್ಯೋಗ ಗಳಿಸಿದ್ದರೂ, ಎಷ್ಟೇ ಹಣ ಚಿನ್ನ ಆಸ್ತಿ ಸಂಪಾದಿಸಿದರೂ  ಧರ್ಮದ ದೃಷ್ಟಿಯಿಂದ ಅವನ ಸ್ಥಾನಮಾನವು  ಚಿಕ್ಕ ಮಗುವಿನಷ್ಟೇ ಉಳಿದು ಬಿಡುತ್ತದೆ .  ಮಂತ್ರ ಯಾಗ ವಿವಾಹ ಸಂತಾನ ಮಾತ್ರವಲ್ಲದೆ ಮುಂದಿನ ಅನೇಕ ಮುಖ್ಯ ಕೌಟುಂಬಿಕ ಕಾರ್ಯಗಳನ್ನು ನೆರವೇರಿಸಲು ಅವಕಾಶವನ್ನು ತಪ್ಪಿಸಿದಂತೆ ನಿರಾಕರಿಸಿದಂತೆ ಆಗುತ್ತದೆ. ಒಟ್ಟಾರೆ ಅವರನ್ನು ಸಮಾಜದಿಂದ ಹೊರ ಹಾಕಿದಂತೆಯೇ ಸರಿ .  ಯಾರಿಗೂ ಹೀಗಾಗುವುದು ಬೇಡ .

೮.ತನ್ನ ಮಗುವಿನ ರಕ್ಷಣೆಯ ಹೊಣೆಯನ್ನು ದೇವತೆಗಳಿಗೆ ಅರ್ಪಿಸುವ ಕ್ರಿಯೆ:
ತನ್ನ ಮಗುವನ್ನು ವೇದಾಧ್ಯಯನಕ್ಕಾಗಿ ಗುರುಗಳ ಬಳಿಗೆ ಕಳುಹಿಸುವ ಮೊದಲು ಸೂರ್ಯದೇವನಿಗೆ ಮತ್ತು ಚತುರ್ಮುಖ ಬ್ರಹ್ಮದೇವನಿಗೆ ತನ್ನ ಮಗನನ್ನು ಶಿಷ್ಯನನ್ನಾಗಿ ಸ್ವೀಕರಿಸುವಂತೆ ಪ್ರಾರ್ಥಿಸಿ ಸೂರ್ಯದೇವನಿಗೆ ಮತ್ತು ಚತುರ್ಮುಖ ಬ್ರಹ್ಮದೇವನಿಗೆ ತನ್ನ ಮಗನನ್ನು ಶಿಷ್ಯನನ್ನಾಗಿ ಅರ್ಪಿಸುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ.   ಅಂದಿನಿಂದ ಆ ವಟುವಿನ  ರಕ್ಷಣೆಯ ಜವಾಬ್ದಾರಿಯನ್ನು ಸೂರ್ಯದೇವ ಮತ್ತು ಚತುರ್ಮುಖ ಬ್ರಹ್ಮ ದೇವರು ವಹಿಸಿಕೊಳ್ಳುತ್ತಾರೆ. ಅಂದರೆ ಮಗುವಿಗೆ ಉತ್ತಮ ಆರೋಗ್ಯ ಹಾಗೂ ಮೇಧಾ ಶಕ್ತಿಗಳು ಲಭಿಸುತ್ತದೆ ಎಂಬುದು ಉಪನಯನ ಸಂಸ್ಕಾರದ ಬಹುಮುಖ್ಯ ಅಂಗ.   ಗಾಯತ್ರಿ ಮಂತ್ರದ ಉಪಾಸನೆ, ಪ್ರಾಣಾಯಾಮ, ಸೂರ್ಯ ನಮಸ್ಕಾರ ದಿಗ್ ದೇವತೆಗಳ ನಮಸ್ಕಾರ,  ಬ್ರಹ್ಮಚರ್ಯ, ವೇದಾಧ್ಯಯನ ಅಗ್ನಿಕಾರ್ಯ ಹಾಗೂ ವಿದ್ಯಾರ್ಜನೆ ಮುಂತಾದ ಕ್ರಿಯೆಗಳ ಮೂಲಕ ಮುಂದಿನ ಜೀವನಕ್ಕೆ ಬೇಕಾದ ಎಲ್ಲ ಶಿಸ್ತುಗಳನ್ನು ಅಳವಡಿಸಿ ಕೊಳ್ಳಲು ಆರಂಭಿಸುವ ಘಟ್ಟವೇ ಉಪನಯನ.   ಆದ್ದರಿಂದ ನಮ್ಮ ಮಕ್ಕಳಿಗೆ ಸಕಾಲಕ್ಕೆ ಉಪನಯನ ವನ್ನು ಮಾಡಲೇಬೇಕು . ಹಾಗೆ ಮಾಡದಿದ್ದರೆ ನಾವಾಗಿ ಅವರ ಶ್ರೇಯಸ್ಸಿಗೆ ತೊಡಕು ಹಾಗೂ ಅಡ್ಡಿಯಾಗದಂತೆ.  ನಾಲ್ಕು ವರ್ಷ ತುಂಬಿದ ತಕ್ಷಣ ಹೇಗೆ ಮಗುವನ್ನು ಎಲ್ ಕೆಜಿ ಕ್ಲಾಸ್ ಗೆ ಸೇರಿಸುತ್ತೇವೆಯೋ ಹಾಗೆಯೇ ಸಕಾಲಕ್ಕೆ ಉಪನಯನವನ್ನು ಮಾಡಬೇಕು.
ಲೌಕಿಕ ವಿದ್ಯೆಯನ್ನು ಕಲಿಸದೆ ಮಗುವನ್ನು ಬೀದಿಯಲ್ಲಿ ಬಿಟ್ಟರೆ ಸಮಾಜವು ತಂದೆಯನ್ನು ಹೇಗೆ ನಿಂದಿಸುತ್ತದೆಯೋ ಅದರಂತೆಯೇ ಉಪನಯನ ಮಾಡದಿದ್ದರೂ ನಿಂದಿಸುತ್ತದೆ.   

ತಂದೆ ತಾಯಿಗಳು ವಟುವಿಗೆ ಸಕಾಲದಲ್ಲಿ ಉಪನಯನ ಮಾಡದಿದ್ದರೆ ಏನಾಗುತ್ತದೆ ಎಂಬ ಬಗ್ಗೆ  ಇನ್ನೂ ಮುಖ್ಯವಾದ ತಿಳಿಯಲೇ ಬೇಕಾದ ಕೆಲವು ರಹಸ್ಯ ವಿಚಾರಗಳಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ