*ಶವ ಬಿದ್ದರೆ ಸಾಕು, ಎಡಬಿಡಂಗಿ ಎಡಪಂಥೀಯ ರಣಹದ್ದುಗಳು ಮೈ ಮುರಿದೆದ್ದು ಕೂಡುತ್ತವೆ ನೋಡಿ!*
By
Rohith Chakrathirtha
ಗೌರಿಯ ಜೊತೆಗೆ ಎರಡು ವರ್ಷದ ಹಿಂದೆ ನಾನು ಫೇಸ್ಬುಕ್ನಲ್ಲಿ ಜಗಳವಾಡುತ್ತಿದ್ದ ದಿನಗಳವು. ಆಕೆ ಬರೆದುಕೊಂಡ ವಿಷಯಗಳನ್ನೇ ಎತ್ತಿಕೊಂಡು ಅದರಲ್ಲಿದ್ದ ವಿಚಾರಶೂನ್ಯತೆಯನ್ನು, ತರ್ಕದ ಗೈರನ್ನು ಆಕೆಯ ಮುಖಕ್ಕೆ ಹಿಡಿದುತೋರುತ್ತಿದ್ದ ದಿನಗಳವು. ಆದರೆ ಯಾಕೋ ಬರಬರುತ್ತಾ ನಾನೊಂದು ಮಿದುಳಿಲ್ಲದ ಕೋಳಿಯ ಜೊತೆ ವಾದ ಮಾಡುತ್ತಿದ್ದೇನೆ ಅನ್ನಿಸಲಾರಂಭಿಸಿತು ನನಗೆ. ಯಾಕೆಂದರೆ ನಾನು ತರ್ಕಬದ್ಧವಾಗಿ ಎತ್ತಿದ ಯಾವೊಂದು ಪ್ರಶ್ನೆಗಳಿಗೂ ಆಕೆ ಉತ್ತರ ನೀಡುತ್ತಿರಲಿಲ್ಲ. ಒಮ್ಮೆಯಂತೂ ಗೌರಿಗೆ ದಿನಕ್ಕೊಂದು ಪ್ರಶ್ನೆ ಎಂದು ಹೇಳಿ, ಕೇಳಿದ ಅಷ್ಟೂ ಪ್ರಶ್ನೆಗಳಿಗೆ ಆಕೆ ಎಡಬಿಡಂಗಿ ಉತ್ತರ ಕೊಟ್ಟು ಪಲಾಯನ ಮಾಡಿದ್ದರು. ವಾದ-ಸಂವಾದ-ಚರ್ಚೆ-ಜಗಳಗಳು ಎಂದಿಗೂ ಸಮಾನ ಬೌದ್ಧಿಕ ಮಟ್ಟದವರ ನಡುವೆ ನಡೆದಾಗ ಮಾತ್ರ ಅರ್ಥವಂತಿಕೆ ಉಳಿಯುತ್ತದೆ ಎಂಬುದು ಅರಿವಾದ ದಿನ ನಾನು ಆಕೆಯನ್ನು ಪ್ರಶ್ನಿಸುವುದನ್ನು ಬಿಟ್ಟಿದ್ದೆ. ಆ ಬಳಿಕ ಆಕೆಗೂ ನನಗೂ ಯಾವ ಮಾತುಕತೆಯೂ ಇರಲಿಲ್ಲ. ಆಕೆ ನನ್ನನ್ನು ಜಾಲತಾಣದಲ್ಲಿ ಬ್ಲಾಕ್ ಮಾಡಿಕೊಂಡು ಹೋದಮೇಲಂತೂ ಆಕೆ ಬರೆದುಕೊಳ್ಳುವ ಯಾವ ಬರಹಗಳೂ ನನ್ನ ಕಣ್ಣಿಗೆ ಬೀಳದೆ ಒಂದು ರೀತಿಯ ಮನಃಶಾಂತಿ ಸಿಕ್ಕಿತ್ತು.
ಗೌರಿಯ ಹತ್ಯೆ ನಡೆದುಹೋಗಿದೆ. ಸೆಪ್ಟೆಂಬರ್ 5ರ ಇಳಿಸಂಜೆ ಏಳೂಮುಕ್ಕಾಲರ ಹೊತ್ತಿಗೆ ಆಕೆ ತನ್ನ ರಾಜರಾಜೇಶ್ವರಿ ನಗರದ ಮನೆಗೆ ಬಂದು ಇಳಿಯುವಷ್ಟರಲ್ಲಿ ಎರಡೋ ಮೂರೋ ದುಷ್ಕರ್ಮಿಗಳು ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ. ತಲೆ ಮತ್ತು ಎದೆಗೆ ಗುಂಡು ಹೊಕ್ಕಿದ್ದರಿಂದ ಆಕೆ ಆ ಕ್ಷಣದಲ್ಲೇ ಕುಸಿದು ಇಹಲೋಕದ ವ್ಯಾಪಾರ ಮುಗಿಸಿದ್ದಾರೆ. ಗೌರಿಯ ಕೊಲೆ ನಡೆದ ಕೇವಲ ಒಂದು ಗಂಟೆಯ ಅವಧಿಯಲ್ಲೇ ಪ್ರಗತಿಪರರ ಗುಂಪು ಅತ್ತ ಟೌನ್ಹಾಲ್ ಬಳಿ ಪೋಸ್ಟರ್ ಹಿಡಿದು ಪ್ರತಿಭಟನೆಗೆ ಕೂತಿದೆ. ಬಿಜೆಪಿ ಪಕ್ಷ ಮತ್ತು ಆರೆಸ್ಸೆಸ್ ಸಂಘಟನೆಯ ವಿರುದ್ಧ ಈ ಪ್ರಗತಿಪರರು ತಮ್ಮ ಗಂಟಲು ಹರಿಯುವಂತೆ ಘೋಷಣೆ ಕೂಗಿ ತೀಟೆ ತೀರಿಸಿಕೊಂಡಿದ್ದಾರೆ. ಎರಡು ವರ್ಷದ ಹಿಂದೆ ಡಾ. ಎಂ.ಎಂ. ಕಲ್ಬುರ್ಗಿ ತೀರಿಕೊಂಡಾಗ ಅವರ ಹತ್ಯೆಯಾದ ಅರ್ಧ ತಾಸಿನಲ್ಲೇ ಸಾಹಿತಿ ಬರಗೂರು ರಾಮಚಂದ್ರಪ್ಪ, ಇದು ಸಂಘ ಪರಿವಾರದವರೇ ಮಾಡಿದ ಹತ್ಯೆ ಎಂದು ಅತ್ಯಂತ ಖಚಿತ ಧ್ವನಿಯಲ್ಲಿ ಹೇಳಿದ್ದರು. ಈಗ ಗೌರಿ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಫೇಸ್ಬುಕ್ ಪೋಸ್ಟ್ ಬರೆದುಕೊಂಡಿರುವ ಇನ್ನೋರ್ವ ಪ್ರಗತಿಪರ ಸಾಹಿತಿ ಕುಂ. ವೀರಭದ್ರಪ್ಪ, ಪ್ರೊ. ಕಲಬುರ್ಗಿಯವರನ್ನು ಹತ್ಯೆ ಮಾಡಿದ ಸನಾತನ ಕ್ರೌರ್ಯವೇ ಸಹೋದರಿ ಗೌರಿಯವರನ್ನು ಭೌತಿಕವಾಗಿ ವ್ಯವಕಲನ ಮಾಡಿದೆ ಎಂದು ಬರೆದುಕೊಂಡು ತಮ್ಮೊಳಗಿನ ವಿಷವನ್ನು ಕಾರಿಕೊಂಡಿದ್ದಾರೆ. ಬಹುಶಃ ಇನ್ನೊಂದೆರಡು ದಿನಗಳಲ್ಲಿ ಈ ಹತ್ಯೆಯನ್ನು ಒಂದು ಅಂತಾರಾಷ್ಟ್ರೀಯ ಮಟ್ಟದ ದುರಂತ ಎಂದು ಬಿಂಬಿಸುವ ಎಲ್ಲ ಕೆಲಸಗಳೂ ಚಕಾಚಕ್ ನಡೆದುಹೋಗುತ್ತವೆ. ಬರಗೂರು ರಾಮಚಂದ್ರಪ್ಪ, ಮರುಳಸಿದ್ದಪ್ಪ, ಗಿರೀಶ್ ಕಾರ್ನಾಡ್ ಮುಂತಾದ ಪ್ರಭೃತಿಗಳ ಮುಂದೆ ಮೈಕ್ ಹಿಡಿದರೆ ಉದುರುವ ಆಣಿಮುತ್ತುಗಳೇನು ಎಂಬುದು ನಮಗೆ ತಿಳಿಯದ್ದೇನಲ್ಲ.
ಪತ್ರಿಕೆಗಳು, ಟಿವಿ ಚಾನೆಲ್ಗಳು ಗೌರಿಯ ಹೆಸರಿನ ಹಿಂದೆ ಚಿಂತಕಿ ಎಂಬ ವಿಶೇಷಣವನ್ನು ಹಚ್ಚುತ್ತಿರುವುದನ್ನು ನೋಡಿದರೆ ನಗುವುದೋ ಅಳುವುದೋ ಎನ್ನುವಂತಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಸತ್ತ ಮೇಲೆ ಮಹಾತ್ಮನಾಗುತ್ತಾನೆ ಎಂಬಂತೆ, ತನ್ನ ಜೀವಮಾನದುದ್ದಕ್ಕೂ ಒಂದು ನಿರ್ದಿಷ್ಟ ವೈಚಾರಿಕ ಸಮುದಾಯದ ಮೇಲೆ ವಿಷ ಕಾರುವುದನ್ನೇ ಉದ್ಯೋಗ ಮಾಡಿಕೊಂಡಿದ್ದ ವ್ಯಕ್ತಿ ಸತ್ತೊಡನೆ ಚಿಂತಕಿ ಆಗುವುದು ಆಶ್ಚರ್ಯಕರ ಮತ್ತು ವಿಪರ್ಯಾಸ. ಗೌರಿ ಇಂದು ಭೌತಿಕವಾಗಿ ಇಲ್ಲವಾದರೂ ಆಕೆಯ ಫೇಸ್ಬುಕ್ ಮತ್ತು ಟ್ವಿಟ್ಟರ್ ಜಾಲತಾಣದ ಬರಹಗಳು ಜೀವಂತ. ಅಲ್ಲಿನ ಒಂದೆರಡು ಪುಟಗಳನ್ನು ತಿರುವಿಹಾಕಿದರೂ ಸಾಕು, ಆಕೆ ಅದೆಷ್ಟು ವಿಷವನ್ನು ತನ್ನೊಳಗೆ ಹೊತ್ತುಕೊಂಡಿದ್ದರು ಎಂಬುದು ತಿಳಿಯಬಹುದು. ಮಾತುಮಾತಿಗೆ ಆರೆಸ್ಸೆಸ್ ಸಂಘಟನೆಯವರನ್ನು ಚೆಡ್ಡಿಗಳು ಎಂದು ಹೀಯಾಳಿಸುತ್ತಿದ್ದ, ಬೀಫ್ ಎಂದರೆ ಬಾಯಿ ಬಾಯಿ ಬಿಡುತ್ತಿದ್ದ, ಸಿದ್ದರಾಮಯ್ಯನವರ ಸಮರ್ಥನೆ ಮಾಡಲು ಅನಿವಾರ್ಯವಾದರೆ ಸೆಗಣಿ ತಿನ್ನುವುದಕ್ಕೂ ತಯಾರಿದ್ದ, ಸನಾತನ ಧರ್ಮವನ್ನು ವಾಚಾಮಗೋಚರ ಬಯ್ಯುತ್ತಿದ್ದ, ಲಿಂಗಾಯತ ಸಮುದಾಯದಲ್ಲಿ ಒಡಕು ಹುಟ್ಟಿಸಲು ಶತಾಯ ಗತಾಯ ಪ್ರಯತ್ನಿಸಿದ, ಲಿಂಗಾಯತ ಮತ್ತು ವೀರಶೈವ ಬೇರೆ ಎಂದು ಹೇಳಲು ತನ್ನೆಲ್ಲ ಬುದ್ಧಿಯನ್ನೂ ಖರ್ಚು ಮಾಡಿದ್ದ, ಡಿ.ಕೆ. ರವಿಯವರ ಸಾವಿನ ಸಂದರ್ಭದಲ್ಲಿ ಅವರ ವ್ಯಕ್ತಿತ್ವ ಹರಣಕ್ಕಾಗಿ ತನ್ನ ಪತ್ರಿಕೆಯ ಮೂರು ಸಂಚಿಕೆಗಳನ್ನು ಮೀಸಲಿಟ್ಟಿದ್ದ ಈಕೆ ಯಾವ ಆಂಗಲ್ನಲ್ಲಿ ಚಿಂತಕಿ, ವಿಚಾರವಾದಿ? ಮಂಗಳೂರಲ್ಲಿ ನಡೆದ ಒಂದು ಸಾರ್ವಜನಿಕ ಸಭೆಯಲ್ಲಿ, ಹಿಂದೂ ಧರ್ಮಕ್ಕೆ ಅಪ್ಪ ಅಮ್ಮ ಇಲ್ಲ. ಇದು ಹೆತ್ತವರು ಯಾರೆಂದೇ ಗೊತ್ತಿಲ್ಲದೆ ಹುಟ್ಟಿದ ಧರ್ಮ ಎಂದು ಇದೇ ಗೌರಿ ಹೇಳಿದ್ದರು. ಆರೆಸ್ಸೆಸ್ನ ಸರಸಂಘಚಾಲಕರಾಗಿದ್ದ ಸುದರ್ಶನ್ ಅವರು ಮೈಸೂರಿನಲ್ಲಿ ದಾರಿ ತಪ್ಪಿ ಕಳೆದುಹೋದಾಗ, “ಮುದುಕನಿಗೆ ತನ್ನ ಮನೆ ದಾರೀನೇ ಗೊತ್ತಾಗೋಲ್ಲ. ಇನ್ನು ದೇಶಕ್ಕೆ ಮಾರ್ಗದರ್ಶನ ಮಾಡ್ತಾನಂತೆ” ಎಂದು ಈಕೆ ಆಡಿಕೊಂಡು ನಕ್ಕಿದ್ದರು. ಸುದರ್ಶನ್ ಅವರು ಈಕೆಯ ಅದ್ಯಾವ ಆಸ್ತಿಯನ್ನು ಹೊಡೆಯಲು ಬಂದಿದ್ದರೋ ತಿಳಿಯದು; ಅವರ ಜೀವನದುದ್ದಕ್ಕೂ ಗೌರಿ ಅವರ ಮೇಲೆ ಬೆಂಕಿ ಉಗುಳುತ್ತಲೇ ಇದ್ದರು. ಸುದರ್ಶನ್ ಅವರು ತೀರಿಕೊಂಡಾಗ ಈಕೆ ಅದನ್ನೊಂದು ಸಂಭ್ರಮದ ಗಳಿಗೆ ಎಂದು ಬರೆದುಕೊಂಡು ಕೊನೆಗೆ “ನೋ ಚಿಯರ್ಸ್, ನೋ ಟಿಯರ್ಸ್” ಎಂದು ಹೇಳಿದ್ದರು. ಯೋಗಗುರು ಬಿ.ಕೆ.ಎಸ್. ಅಯ್ಯಂಗಾರ್ ಅವರು ತನ್ನ 96ನೇ ವಯಸ್ಸಿನಲ್ಲಿ ತೀರಿಕೊಂಡಾಗ ಇದೇ ಗೌರಿ, “ಖುಷ್ವಂತ್ ಸಿಂಗ್ ತನ್ನ ಜೀವನದುದ್ದಕ್ಕೂ ಕುಡಿಯುತ್ತಿದ್ದರೂ 99 ವರ್ಷ ಬದುಕಿದರು. ಯೋಗಗುರು ಅಯ್ಯಂಗಾರ್ ಯೋಗ ಮಾಡಿದರೂ ಮೂರು ವರ್ಷ ಮೊದಲೇ ಸತ್ತರು. ಹಾಗಾಗಿ ಕುಡಿದು ಆರಾಮಾಗಿರಿ” ಎಂದು ಬರೆದುಕೊಂಡಿದ್ದರು. ಈಕೆಯ ಕೊಳೆತ ಮನಸ್ಥಿತಿಗೆ ಇದಕ್ಕಿಂತ ಉದಾಹರಣೆ ಬೇಕೆ?
ಗೌರಿ ತನ್ನ ಜೀವನದಲ್ಲಿ ಮಾಡಿದ ಸಾಧನೆ ಏನು? ಸಾಹಿತಿ ತಂದೆಯ ಹೆಸರನ್ನು ಬಾಲಂಗೋಚಿಯಾಗಿ ತನ್ನ ಹೆಸರಿನ ಜೊತೆ ಅಂಟಿಸಿಕೊಳ್ಳದೆ ಹೋಗಿದ್ದರೆ ಆಕೆಯನ್ನು ಯಾರು ಗಂಭೀರವಾಗಿ ಪರಿಗಣಿಸುತ್ತಿದ್ದರು? ವಾರವಾರವೂ ಒಂದಿಲ್ಲೊಂದು ವ್ಯಕ್ತಿ/ಸಂಸ್ಥೆಗಳನ್ನು ಆಡಿಕೊಂಡು ತೀರಾ ಕೊಳಕು ಭಾಷೆಯಲ್ಲಿ ಲೇಖನ ಬರೆದು ತನ್ನ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದದ್ದು ಬಿಟ್ಟರೆ ಆಕೆಯ ಘನಂದಾರೀ ಸಾಧನೆಗಳು ಯಾವುದು ಎಂಬುದನ್ನು ನಾವು ಹುಡುಕಬೇಕಾಗುತ್ತದೆ. “ಗೌರಿ ಲಂಕೇಶ್ ಪತ್ರಿಕೆ” ಎಂಬ ಪತ್ರಿಕೆಯ ಹೆಸರಲ್ಲಿ ಆಕೆ ನಡೆಸುತ್ತಿದ್ದದ್ದು ಪೀತ ಪತ್ರಿಕೋದ್ಯಮ. ಹಾಗಾಗಿಯೇ ಒಂದು ಸಾವಿರದಷ್ಟೂ ಪ್ರಸಾರವಿಲ್ಲದಿದ್ದ ಪತ್ರಿಕೆಯ ಮೂಲಕವೂ ಆಕೆ ಅತ್ಯಂತ ಐಷಾರಾಮಿ ಬದುಕು ಬಾಳುವುದು ಸಾಧ್ಯವಾಗಿತ್ತು. ಡಿ.ಕೆ. ರವಿಯವರ ಸಾವಿನ ಸಂದರ್ಭದಲ್ಲಿ ಅದೊಂದು ಆತ್ಮಹತ್ಯೆ ಎಂದು ಬಿಂಬಿಸಲು ಗೌರಿ ತನ್ನ ಪತ್ರಿಕೆಯ ಮೂರು ಸಂಚಿಕೆಗಳನ್ನು ಮೀಸಲಿರಿಸಿದ್ದರು. ಜೊತೆಗೆ ಆತ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದರು ಎಂಬುದನ್ನು ಸಾಧಿಸಲು ಆಕೆ ಇನ್ನಿಲ್ಲದಂತೆ ಪ್ರಯತ್ನಿಸಿದ್ದರು. ಸಾಯುವ ಮೊದಲು ತನ್ನ ಸ್ನೇಹಿತೆಗೆ ರವಿ 44 ಸಲ ಫೋನ್ ಕರೆ ಮಾಡಿದ್ದರು ಎಂಬುದನ್ನು ಗೌರಿ ಒತ್ತಿ ಒತ್ತಿ ಹೇಳಿ ಅದೊಂದು ಸತ್ಯವಾಗಿ ರೂಪುಗೊಳ್ಳುವುದಕ್ಕೆ ತನ್ನ ಪಾಲಿನ ಕೊಡುಗೆ ಕೊಟ್ಟಿದ್ದರು. ಇದೆಲ್ಲ ಆಗಿ ಒಂದೆರಡು ವಾರದಲ್ಲಿ ಆಕೆ ಹೊಸ ಕಾರು ಖರೀದಿಸಿದ್ದು ಕಾಕತಾಳಿಯವೇನೂ ಅಲ್ಲ ಎನ್ನಬಹುದಲ್ಲವೆ? ಗೌರಿಯ ಇನ್ನೊಂದು ಸಾಧನೆ ಎಂದರೆ ಕಾಡಿನಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿ ಸ್ವರ್ಗವಾಸಿಗಳಾಗಬೇಕಿದ್ದ ನಕ್ಸಲರನ್ನು ನಾಡಿಗೆ ಕರೆತಂದು ಅವರ ಮೇಲಿನ ಕ್ರಿಮಿನಲ್ ಮೊಕದ್ದಮೆಗಳೆಲ್ಲವೂ ಬಿದ್ದುಹೋಗುವಂತೆ ನೋಡಿಕೊಂಡದ್ದು! ನಂಬಿದರೆ ನಂಬಿ, ಪ್ರಗತಿಪರರ ದೃಷ್ಟಿಯಲ್ಲಿ ಇದೂ ಒಂದು ಸಾಧನೆ! ಓರ್ವ ನಕ್ಸಲೈಟ್ ತನ್ನ ಬಂದೂಕು ಒಪ್ಪಿಸಿ ಪೊಲೀಸರಿಗೆ ಶರಣಾದರೆ ಅವನ ಮೇಲಿದ್ದ ಹಳೆ ಕ್ರಿಮಿನಲ್ ಕೇಸುಗಳೆಲ್ಲವನ್ನೂ ಕೈ ಬಿಡಬೇಕು ಮತ್ತು ಆತ ಗೌರವಯುತವಾಗಿ ಬದುಕಲು ಅನುವಾಗುವಂತೆ 5 ಲಕ್ಷ ರುಪಾಯಿಯನ್ನು ಆತನಿಗೆ ಕೊಡಬೇಕು ಎಂಬುದು ಸಿದ್ದರಾಮಯ್ಯನವರ ಸರಕಾರ ತಂದ ಹೊಸ ಯೋಜನೆ. ಹಾಗೆ ನಕ್ಸಲೈಟ್ಗಳನ್ನು ಕಾಡಿನಿಂದ ನಾಡಿಗೆ ತರುವ ಕೆಲಸದ ಉಸ್ತುವಾರಿ ಹೊತ್ತವರು ಸಿದ್ದರಾಮಯ್ಯನವರ ಪರಮಾಪ್ತೆ ಗೌರಿ. ನಾಡಿಗೆ ಬಂದ ನಕ್ಸಲರಿಗೆ ನಿಜವಾಗಿಯೂ ಎಷ್ಟು ದುಡ್ಡು ಕೊಡಲಾಗಿದೆ ಎಂಬುದನ್ನು ತನಿಖೆ ಮಾಡಿದರೆ ಈ ಯೋಜನೆಯಲ್ಲಿ ಒಟ್ಟು ಎಷ್ಟು ಭ್ರಷ್ಟಾಚಾರ ನಡೆದಿದೆ ಎಂಬುದು ಸಾಬೀತಾಗುತ್ತದೆ. ಪೊಲೀಸ್ ಇಲಾಖೆಯ ಗೌರವಕ್ಕೆ ಮಸಿ ಬಳಿಯುವಂಥ ಈ ಯೋಜನೆಯಿಂದ ರಾಜ್ಯ ಸರಕಾರ ಸಾಧಿಸಿದ್ದೇನು? ಊರಿಗೆ ಬಂದಿರುವ ನಕ್ಸಲರೆಲ್ಲ ಇಂದು ಬೀದಿಹೋರಾಟ ಮಾಡುತ್ತ, ಟಿವಿ ಡಿಬೇಟ್ಗಳಲ್ಲಿ ನಕ್ಸಲ್ ಚಿಂತನೆ ಹರಡುತ್ತ, ಪ್ರಗತಿಪರರ ಪತ್ರಿಕೆಗಳಲ್ಲಿ ನಕ್ಸಲ್ ಬರಹಗಳನ್ನು ಬರೆಯುತ್ತ ಆರಾಮಾಗಿದ್ದಾರೆ! ಅಂದ ಹಾಗೆ, ಗೌರಿ ನಕ್ಸಲ್ ಸಾಕೇತ್ ರಾಜನ ಅತ್ಯಂತ ಆಪ್ತ ಗೆಳತಿಯಾಗಿದ್ದರು ಎಂಬುದೊಂದೇ ಸಾಕು ಆಕೆಯ ವ್ಯಕ್ತಿತ್ವ ಎಂಥದ್ದು ಎಂದು ಹೇಳಲು.
ಗೌರಿಯ ಹತ್ಯೆ ನಡೆದೊಡನೆ ವಿಚಾರವಾದಿ ಕಾಗೆಗಳೆಲ್ಲ ಪಿಂಡ ತಿನ್ನಲು ರೆಡಿಯಾಗಿಬಿಟ್ಟಿವೆ. ಟೌನ್ಹಾಲ್ ಎದುರು ಬ್ಯಾನರ್ ಹಿಡಿದು ಜಮಾಯಿಸಿ ಘೋಷಣೆ ಕೂಗಿವೆ. ಬೆಂಗಳೂರು, ಮೈಸೂರು, ಧಾರವಾಡ ಎನ್ನುತ್ತ ರಾಜ್ಯದ ಎಲ್ಲ ಕಡೆಗಳಲ್ಲಿ ಸಮಾವೇಶ, ಹೋರಾಟ, ಬೀದಿ ಪ್ರತಿಭಟನೆ ಇತ್ಯಾದಿಯನ್ನು ಮಾಡುತ್ತಿವೆ. ಬಹುಶಃ ಇನ್ನೊಂದೆರಡು ತಿಂಗಳು ಇವುಗಳ ಹಾರಾಟ, ಹೋರಾಟದ ಗಲಾಟೆ ಮುಗಿಲುಮುಟ್ಟುತ್ತದೆ. ಕಲಬುರ್ಗಿ ಹತ್ಯೆಯಾಗಿ ಎರಡು ವರ್ಷವಾದರೂ ಕೊಲೆಗಾರರನ್ನು ಹಿಡಿಯಲಾಗದ ಕರ್ನಾಟಕ ಸರಕಾರದ ನಿರ್ಲಕ್ಷ್ಯ, ನಿರ್ಲಜ್ಜತನಗಳನ್ನು ಪ್ರಶ್ನಿಸಲು ನಾಲಗೆಯೇಳದ ಕಾಗೆಗಳಿಗೆ ಗೌರಿಯ ಹತ್ಯೆ ಮಾಡಿದ್ದು ಬಲಪಂಥೀಯರೇ ಎಂದು ಗಂಟಲೆತ್ತಿ ಅರಚಲು ಯಾವ ಮುಜುಗರವೂ ಇಲ್ಲ! ಗೌರಿಯ ಕೊಲೆಯನ್ನು ಬಲಪಂಥೀಯರೇ ಮಾಡಿದ್ದಾರೆ ಎಂಬುದನ್ನು ಸ್ಥಾಪಿಸಲು ತುದಿಗಾಲಲ್ಲಿ ನಿಂತಿರುವ ಸರಕಾರಕ್ಕೆ ಬಹುಶಃ ಚುನಾವಣೆ ಮುಗಿವವರೆಗೂ ಕೊಲೆಗಾರರನ್ನು ಹಿಡಿಯುವುದರಲ್ಲಿ ಯಾವ ಆಸಕ್ತಿಯೂ ಇರುವುದಿಲ್ಲ ಎಂಬುದಂತೂ ಸ್ಪಷ್ಟ. ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳಿಗೆ ಗೌರಿ ಕೊಲೆ ಕೂಡ ಒಂದು ಚುನಾವಣಾ ವಿಷಯ ಅಷ್ಟೇ. ಅದಕ್ಕಾಗಿ ಯಾವ ವಿಚಾರಪ್ರಬುದ್ಧತೆಯೂ ಇಲ್ಲದಿದ್ದ, ಕೇವಲ ಸಂಘ ಪರಿವಾರದ ಮೇಲೆ ಸೊಂಟದ ಕೆಳಗಿನ ಭಾಷೆಯಲ್ಲಿ ಅರಚಾಡಿಕೊಂಡಿದ್ದ ಗೌರಿ ಕೂಡ ಇನ್ನು ಮುಂದೆ “ಚಿಂತಕಿ” ಆಗುತ್ತಾರೆ. “ವಿಚಾರವಾದಿ” ಆಗುತ್ತಾರೆ. ಆಕೆಯನ್ನೂ ಪನ್ಸಾರೆ, ದಾಭೋಲ್ಕರ್, ಕಲಬುರ್ಗಿ ಸಾಲಿನಲ್ಲಿ ಕೂರಿಸಲಾಗುತ್ತದೆ. ಗೌರಿಯ ಫೋಟೋ ಹಿಡಿದುಕೊಂಡು ವಿಚಾರವಾದಿಗಳು ಅದೆಷ್ಟು ರಾಜಕೀಯ ಲಾಭ ಎತ್ತಲು ಸಾಧ್ಯವೋ ಅವೆಲ್ಲವನ್ನೂ ಎತ್ತಿಕೊಳ್ಳುತ್ತಾರೆ. ಇವರೆಲ್ಲ ಗೌರಿಯ ಹತ್ಯೆಯಾದ ಮರುಕ್ಷಣದಲ್ಲೇ ಬಲಪಂಥೀಯರನ್ನು, ಆರೆಸ್ಸೆಸ್ ಅನ್ನು, ಬಿಜೆಪಿಯನ್ನು ಗುರಿ ಮಾಡಿಕೊಂಡು ಘೋಷಣೆ ಕೂಗಲು ಪ್ರಾರಂಭಿಸಿದ್ದೇಕೆ? ಫೇಸ್ಬುಕ್ ಗೆಳೆಯರೊಬ್ಬರು ಬರೆದುಕೊಂಡಂತೆ, ಇದು ಆರೆಸ್ಸೆಸ್ ಅಥವಾ ಹಿಂದೂ ಸಂಘಟನೆಗಳ ಕೆಲಸ ಅಲ್ಲ ಅಂತಾಗಿಬಿಟ್ಟರೆ.. ಎಂಬ ಪ್ರಗತಿಪರ ಎಡಬಿಡಂಗಿಗಳ ಆತಂಕವೇ ಅರ್ಧರಾತ್ರಿಯಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯ ಮೇಲೆ ಧಿಕ್ಕಾರ ಕೂಗಿಸುತ್ತಿದೆ ಎನ್ನುವುದಂತೂ ಸ್ಪಷ್ಟ.
ಗೌರಿ ನಿಜಾರ್ಥದಲ್ಲಿ ಓರ್ವ ನಕ್ಸಲ್ ಆಗಿದ್ದರು. ಕಾಡಿನಲ್ಲಿ ಪೊಲೀಸರ ವಿರುದ್ಧ, ಸರಕಾರದ ವಿರುದ್ಧ ಹೋರಾಟ ಮಾಡುತ್ತಿದ್ದ ನಕ್ಸಲರ ಪ್ರತಿನಿಧಿಯಾಗಿ ಆಕೆ ನಾಡಿನಲ್ಲಿದ್ದುಕೊಂಡು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದರು. ನಕ್ಸಲರ ಹೋರಾಟ ಎಲ್ಲವೂ ಸ್ವಾತಂತ್ರ್ಯಕ್ಕಾಗಿ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಎಂದು ವಿಷಯ ತಿರುಚಿ ವಾದಿಸುವುದೇ ಆಕೆಯ ಹೆಚ್ಚುಗಾರಿಕೆಯಾಗಿತ್ತು. ಕಟ್ಟರ್ ನಕ್ಸಲರಂತೆ ಆಕೆ ಕೂಡ ಈ ನೆಲದ ಕಾನೂನಿಗೆ ಕವಡೆ ಕಿಮ್ಮತ್ತನ್ನೂ ಕೊಡುತ್ತಿರಲಿಲ್ಲ. ಗೌರಿಯ ಮೇಲೆ ಐವತ್ತಕ್ಕೂ ಹೆಚ್ಚು ಎಫ್ಐಆರ್ಗಳು ದಾಖಲಾಗಿದ್ದರೂ ಪೊಲೀಸರು ಆಕೆಯನ್ನು ಮುಟ್ಟುವಂತಿರಲಿಲ್ಲ. ಸಿದ್ದರಾಮಯ್ಯನವರ ಪರಮಾಪ್ತೆ ಎಂಬ ಒಂದೇ ಕಾರಣಕ್ಕೆ ಆಕೆ ಅಷ್ಟೊಂದು ಪೊಲೀಸ್ ಪ್ರಕರಣಗಳು ತನ್ನ ವಿರುದ್ಧ ದಾಖಲಾಗಿದ್ದರೂ ಆರಾಮಾಗಿ ಓಡಾಡಿಕೊಂಡಿದ್ದರು. ಪೊಲೀಸರ ವಿರುದ್ಧವೇ ನೇರಾನೇರ ಆರೋಪ ಮಾಡಿ ಲೇಖನಗಳನ್ನು ಬರೆಯುತ್ತಿದ್ದರು. ಪೊಲೀಸರ ವಿರುದ್ಧ ಅತ್ಯಂತ ತುಚ್ಛ ಭಾಷೆಯಲ್ಲಿ ತನ್ನ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದರು. ಇಪ್ಪತ್ತೊಂದನೇ ಶತಮಾನದ ಅತ್ಯಂತ ದೊಡ್ಡ ಫೈಲ್ಯೂರ್ ಆದ ಕನ್ಹಯ್ಯ ಗೌರಿಗೆ ಆಪ್ತನಾಗಿದ್ದ. ಪೊಲೀಸರ ವಿರುದ್ಧ, ಸರಕಾರದ ವಿರುದ್ಧ ಹಲವು ಪಿತೂರಿಗಳಲ್ಲಿ ನೇರ ಭಾಗಿಯಾಗಿ ಹಲವು ವಿಧ್ವಂಸಕ ಕೃತ್ಯಗಳನ್ನು ಎಸಗಿದ್ದ ಸಾಕೇತ್ ರಾಜನ್ ಈಕೆಯ ಸ್ನೇಹಿತನಾಗಿದ್ದ. ಈಕೆಯನ್ನು ಚಿಂತಕಿ ಎಂದು ಕರೆಯುವುದಕ್ಕಿಂತ “ದೇಶದ್ರೋಹಿ”, “ವಿಧ್ವಂಸಕಿ”, “ರಾಷ್ಟ್ರದ ಕಾನೂನಿಗೆ ಬೆಲೆ ಕೊಡದಾಕೆ” ಎಂಬ ವಿಶೇಷಣಗಳಿಂದ ಕರೆಯುವುದೇ ಅತ್ಯಂತ ಸೂಕ್ತವಾದದ್ದು.
“ಕರ್ನಾಟಕದಲ್ಲಿ ಏನು ನಡೆಯುತ್ತಿದೆ? ಸೈದ್ಧಾಂತಿಕ ದ್ವೇಷಕ್ಕಾಗಿ ಬಲಪಂಥೀಯ ಉದ್ದಟರು ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದಾರೆ. ಪ್ರಪಂಚವೇ ತನ್ನ ಜತೆಗಿದೆ ಎಂದು ಭಾವಿಸಿಕೊಂಡು ಒಬ್ಬಂಟಿಯಾಗಿ ಬದುಕುತ್ತಿದ್ದ ಹೆಣ್ಣು ಮಗಳ ಮೇಲೆ ನಡೆದ ಹಲ್ಲೆ ಇದಲ್ಲ, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ. ಡಾ. ಎಂ.ಎಂ. ಕಲ್ಬುರ್ಗಿಯವರ ಹತ್ಯೆ ನಡೆಸಿದ ಆರೋಪಿಗಳನ್ನು ಬಂಧಿಸುವುದಕ್ಕೆ ಮುನ್ನವೇ ಗೌರಿ ಹತ್ಯೆಯಾಗಿದೆ. ಬಲಪಂಥೀಯರ ಈ ದ್ವೇಷಪ್ರವೃತ್ತಿಯನ್ನು ನಾವೆಲ್ಲರೂ ಖಂಡಿಸಬೇಕು” ಎಂದು ನಮ್ಮ ನಡುವಿನ ಹೊಸ ಸಾಕ್ಷಿಪ್ರಜ್ಞೆ, ಹೊಸ ಎಡಬಿಡಂಗಿ ಚಿಂತಕನಾಗಿ ರೂಪುಗೊಳ್ಳುತ್ತಿರುವ ಪ್ರಕಾಶ್ ರೈ ಹೇಳಿದ್ದಾರೆ. ಇವರು ನಟಿಸಿರುವ ಯಾವ ಸಿನೆಮಾವನ್ನೂ ನಾವು ಯಾರೂ ನೋಡುವುದಿಲ್ಲ ಎಂದು ನಾವೆಲ್ಲರೂ ಅತ್ಯಂತ ಉಗ್ರವಾದ ಪ್ರತಿಜ್ಞೆ ಮಾಡಿಕೊಂಡರೆ ಬಹುಶಃ ಈ ನಟನ ಚಿಂತನೆಯ ಪಿತ್ಥ ಇಳಿಯಬಹುದೇನೋ. ಕೊಲೆ ನಡೆದು ಅರ್ಧ ದಿನವೂ ಆಗಿಲ್ಲ; ಕೊಲೆ ನಡೆಸಿರುವವರು ಇಂಥವರೇ ಎಂದು ಹೇಳಲು ಪ್ರಕಾಶ್ ರೈಗೇನು ದಿವ್ಯಚಕ್ಷುಗಳಿವೆಯೇ? ಇಂಥವರೇ ಕೊಲೆ ಮಾಡಿದ್ದಾರೆ ಎಂದು ಗೊತ್ತಿದ್ದರೆ ಅವರೇ ಯಾಕೆ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ವಿವರಗಳನ್ನು ಹಂಚಿಕೊಳ್ಳಬಾರದು? ಬಲಪಂಥೀಯರ ಮೇಲೆ ಗೂಬೆ ಕೂರಿಸುವುದಕ್ಕೆ ಇವರು ಸರಕಾರದ ಕಡೆಯಿಂದ ಎಷ್ಟು ಲಕ್ಷ ದೇಣಿಗೆ ಪಡೆದಿದ್ದಾರೆ? ಒಂದು ಹಂತಕ್ಕೆ ಜನಪ್ರಿಯರಾದೆವೆಂಬ ಹಮ್ಮು ಅಡರಿದ ಮೇಲೆ ಮಿದುಳು ಹೆಗಲ ಮೇಲೆ ನಿಲ್ಲದೆ ಕುಣಿದಾಡುವ ಇಂಥ ಅರೆಬೆಂದ ಚಿಂತಕರಿಗೆಲ್ಲ ಅವರ ಸ್ಥಾನ ಏನು ಎಂದು ತೋರಿಸಿಕೊಡಬೇಕಾದರೆ ಅವರಿಗೆಲ್ಲಿ ಹೆಚ್ಚು ನೋವಾಗುತ್ತದೋ ಅಲ್ಲೇ ಹೊಡೆಯಬೇಕು. “ನೀವು ನಟಿಸಿರುವ ಅಥವಾ ನಿರ್ದೇಶಿಸಿರುವ ಸಿನೆಮಾಗಳನ್ನು ಅಪ್ಪನಾಣೆ ನೋಡುವುದಿಲ್ಲ. ಅದೇನು ಮಾಡುತ್ತೀರೋ ಮಾಡಿ ನೋಡುವಾ” ಎಂದು ರಾಜ್ಯದಲ್ಲಿರುವ ಎಡಬಿಡಂಗಿಗಳಲ್ಲದ ಎಡಪಂಥೀಯರಲ್ಲದ ವ್ಯಕ್ತಿಗಳೆಲ್ಲರೂ ಒಟ್ಟಾಗಿ ನಿಂತರೆ ಪ್ರಕಾಶ್ ರೈ ಅವರಿಗೆ ತನ್ನ ಮಾತಿನ ವಿಚಾರಶೂನ್ಯತೆ ಅರ್ಥವಾಗಬಹುದು. ದೇಶವಿರೋಧಿ ಹೇಳಿಕೆ ಕೊಟ್ಟಿದ್ದ ಅಮೀರ್ ಖಾನ್, ಅದರಿಂದ ತನ್ನ ಸಿನೆಮಾದ ಕಲೆಕ್ಷನ್ಗೆ ಹೊಡೆತ ಬೀಳುತ್ತದೆಂದು ಗೊತ್ತಾದೊಡನೆ ಮೆತ್ತಗಾಗಿ “ಮೇರಾ ಭಾರತ್ ಮಹಾನ್” ಅಂದಿದ್ದನಲ್ಲ, ಹಾಗೆ
ಗೌರಿಯ ವಿಷಯಕ್ಕೆ ಮರಳುವುದಾದರೆ, ಯಾಕೆ ಆಕೆಯನ್ನು ಮಾವೋವಾದಿ ಉಗ್ರಗಾಮಿಗಳು ಕೊಲೆ ಮಾಡಿರಬಾರದು? ಯಾಕೆ ಆಕೆಯನ್ನು, ಆಕೆಯೇ ತನ್ನ ಪತ್ರಿಕೆಯ ಮೂಲಕ ತೇಜೋವಧೆ ಮಾಡಿದ ನೂರಾರು ಜನರಲ್ಲಿ ಒಬ್ಬರು ಗುಂಡಿಕ್ಕಿ ಹತ್ಯೆಗೈದಿರಬಾರದು? ಯಾಕೆ ಆಕೆಯನ್ನು ನಕ್ಸಲರೇ ಹೆಣವಾಗಿ ಮಲಗಿಸಿರಬಾರದು? ಡಿವೈಎಸ್ಪಿ ಗಣಪತಿಯವರ ಸಾವಿನ ತನಿಖೆಯನ್ನು ಸಿಬಿಐ ವಹಿಸಿಕೊಂಡದ್ದರಿಂದ ಜನ ಸರಕಾರದ ಕೆಲವೊಂದು ಪ್ರಭಾವೀ ಸಚಿವರ ರಾಜೀನಾಮೆ ಕೇಳುತ್ತಾರೆಂದು ಗೊತ್ತಿದ್ದೇ ಜನರ ಗಮನವನ್ನು ಬೇರೆಡೆ ಸೆಳೆವ ಉದ್ದೇಶದಿಂದ ಈ ಕೊಲೆ ನಡೆದಿರಬಾರದೇಕೆ? ಯಾಕೆ ಆಕೆಯನ್ನು ಆಕೆಯ ಕುಟುಂಬದೊಳಗಿನ ಜಗಳವೇ ಮುಗಿಸಿರಬಾರದು? ಬಲಪಂಥೀಯರನ್ನು ಕೊಲೆಗೆ ಪ್ರಚೋದಿಸುವಷ್ಟು ಆಕೆಯ ವಿಚಾರಗಳು ದೊಡ್ಡದಾಗಿದ್ದವೇ? ನೆನಪಿಡಿ: ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಮ್ಮ ಎಡಬಿಡಂಗಿ ಎಡಪಂಥೀಯರು ಅದೆಷ್ಟು ಸಲ ಕೊಲೆಗಳಿಗೆ ಬಲಪಂಥೀಯರು ಕಾರಣ ಎಂದು ಬೊಬ್ಬೆ ಹೊಡೆದಿದ್ದಾರೋ ಲೆಕ್ಕವೇ ಇಲ್ಲ. ಆದರೆ, ಇದುವರೆಗೆ ಕರ್ನಾಟಕದಲ್ಲಿ ನಡೆದ ಒಂದೇ ಒಂದು ಕೊಲೆಯೂ ಬಲಪಂಥೀಯರಿಂದ ನಡೆದಿದೆ ಎಂಬುದಕ್ಕೆ ಆಧಾರಗಳಿಲ್ಲ. ಆದರೂ ಎಡಬಿಡಂಗಿಗಳ ಬೊಬ್ಬೆ ಮಾತ್ರ ನಿಂತಿಲ್ಲ. ಬಲಪಂಥೀಯರ ನೆರಳಿಲ್ಲ ಎಂಬ ಕಾರಣಕ್ಕೇ ಕಲಬುರ್ಗಿಯವರ ಕೊಲೆ ತನಿಖೆಯನ್ನು ಹೇಗೆ ನಿಲ್ಲಿಸಲಾಗಿದೆಯೋ ಹಾಗೆಯೇ ಬಲಪಂಥೀಯರು ಮಾಡಿದ ಕೊಲೆ ಅಲ್ಲ ಎಂಬುದು ತಿಳಿದ ದಿನವೇ ಕರ್ನಾಟಕ ಸರಕಾರ ಗೌರಿಯ ಮೇಲಿನ ಕೊಲೆ ತನಿಖೆಯನ್ನು ಕೂಡ ಬದಿಗಿಟ್ಟು ನಿದ್ದೆ ಹೊಡೆಯಬಹುದು. ಫೇಸ್ಬುಕ್ ಸ್ನೇಹಿತರೊಬ್ಬರು ಹೇಳಿಕೊಂಡಂತೆ, “ಗೌರಿಯ ವಿಚಾರಗಳಲ್ಲಿ ಯಾವ ಹುರುಳೂ ಇರಲಿಲ್ಲ. ಪ್ರಖರತೆಯಂತೂ ಮೊದಲೇ ಇರಲಿಲ್ಲ. ಕೇವಲ ನಕ್ಸಲ್ ಮತ್ತು ಪೊಳ್ಳು ಸಮಾಜವಾದದ ಹುಚ್ಚಾಟಗಳಷ್ಟೇ ಆಕೆಯ ವಿಚಾರವಾಗಿತ್ತು. ಆಕೆಯ ಯಾವುದೇ ವಿಚಾರಗಳಿಂದ ಬೇರೆ ಯಾವ ಸಿದ್ಧಾಂತಕ್ಕೂ ಎಳ್ಳಷ್ಟೂ ಭಯವಿರಲಿಲ್ಲ. ಆಕೆಯ ವಿಚಾರಗಳನ್ನು ಸಾಮಾನ್ಯರಲ್ಲಿ ಸಾಮಾನ್ಯರು ಕೂಡ ಕೇವಲ ಸಣ್ಣ ವಾದದಲ್ಲೇ ಸೋಲಿಸಿಬಿಡಬಹುದಾಗಿತ್ತು. ಅಷ್ಟೊಂದು ಟೊಳ್ಳು ಮತ್ತು ಮೂರ್ಖತನದ ವಾದಗಳನ್ನು ಆಕೆ ಹೂಡುತ್ತಿದ್ದರು. ಎಷ್ಟೋ ಬಾರಿ, ಆಕೆ ಒಡ್ಡುತ್ತಿದ್ದ ವಿಚಾರಸರಣಿಗೆ ನಿಜವಾಗಿಯೂ ಪ್ರತಿವಾದ ಮಂಡಿಸುವ ಅಗತ್ಯವೂ ಇರುತ್ತಿರಲಿಲ್ಲ. ಕೇವಲ ನಕ್ಕು ಪಕ್ಕಕ್ಕೆ ಸರಿಸಿಬಿಡಬಹುದಾದಷ್ಟು ಬಾಲಿಶ ವಾದಗಳಾಗಿರುತ್ತಿದ್ದವು ಅವು”. ಅಂಥ ಒಬ್ಬ ಟೊಳ್ಳು, ಪೊಳ್ಳು, ಮೂರನೇ ದರ್ಜೆಯ ವಿಚಾರವ್ಯಾಧಿಯ ಚಿಂತನೆಗಳನ್ನು ಸಹಿಸಿಕೊಳ್ಳಲಾಗದೆ ಬಲಪಂಥೀಯರು ಆಕೆಯ ಕೊಲೆಗೆ ಮುಂದಾದರೆನ್ನುವುದು ಸತ್ಯಕ್ಕೆ ದೂರವಾದ ಮಾತು. ಒಂದು ವೇಳೆ ಅದು ನಿಜವಾಗಿಯೂ ಬಲಪಂಥೀಯರೇ ಮಾಡಿದ್ದರು ಎಂದು ಸಾಬೀತಾದರೆ, ಅವರು ಕೇವಲ ಮೌಖಿಕವಾದ ವಾದ-ವಾಗ್ವಾದಗಳಿಗಷ್ಟೇ ಬೆಲೆ ಕೊಟ್ಟಿದ್ದ, ಕತ್ತಿಯೇಟಿನ ವಿಚಾರವಾದಕ್ಕೆ ಕವಡೆ ಕಾಸಿನ ಬೆಲೆ ಕೊಡದ ಭಾರತೀಯ ಪರಂಪರೆಗೇ ಒಂದು ಅವಮಾನ. ಅದೆಂಥ ಚಾರ್ವಾಕರನ್ನು ಕೂಡ ಬೌದ್ಧಿಕವಾಗಿ ಸೋಲಿಸುವುದಷ್ಟೇ ಮುಖ್ಯ ಎಂದು ಭಾವಿಸಿದ್ದ ಸಮಾಜ ಇದು. ಹಾಗಿರುವಾಗ ಗೌರಿಯಂಥ ಯಕಶ್ಚಿತ್ ಬುದ್ಧಿದರಿದ್ರರನ್ನು ಕೊಲೆಯ ಮೂಲಕ ಪರಿಹರಿಸಹೋಗುವುದು ಮೂರ್ಖತನದ ಪರಮಾವಧಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ