ಅಮ್ಮ ನಾನು ಬೇರೆ ಧರ್ಮಕ್ಕೆ ಮತಾಂತರವಾಗಬೇಕಂತ್ತಿದ್ದೇನೆ ನಿನ್ನ ಅಭಿಪ್ರಾಯವೇನು?
ಗೌರಿ ಲಂಕೇಶ್ ಹತ್ಯೆಯಾದ ನಂತರ ಹಿಂದುತ್ವದ ಬಗ್ಗೆ ಎರಡು ಲೇಖನ ಬರೆದ ನನಗೆ ಮೂರನೆ ಲೇಖನ ಬರೆಯಲು ಆಳವಾದ ಅಧ್ಯಯನ ಮಾಡದೇ ಇರುವುದರಿಂದ ಅಲ್ಲಿಗೆ ನಿಲ್ಲಿಸಿದ್ದೆ. ಅರಳಿಮರದಿಂದ ಬಿದ್ದ ಎರಡು ಎಲೆಗಳನ್ನು ನೋಡಿಕೊಂಡು ನನಗೆ ಇಡೀ ಮರವೇ ಗೊತ್ತು ಎನ್ನುವ ಮೂರ್ಖತನ ಒಳ್ಳೇದಲ್ಲ ಎನ್ನುವುದು ನನ್ನ ಅಭಿಪ್ರಾಯವಾಗಿತ್ತು. ಹಾಗಾಗಿ ಹಿಂದುತ್ವದ ಬಗ್ಗೆ ಬರೆಯುವುದನ್ನು ನಿಲ್ಲಿಸಿದೆ. ಆದರೆ ಮೊನ್ನೆ ಫೇಸ್ಬುಕ್ ನಲ್ಲಿ ಒಂದು ವಿಡಿಯೋ ಫೂಟೇಜ್ ನೋಡಿ ಇನ್ನೊಮ್ಮೆ ಹಿಂದುತ್ವದ ಬಗ್ಗೆ ಬರೆಯಲೇ ಬೇಕೆಂದು ನಿರ್ಧರಿಸಿದೆ.
ಆ ವಿಡಿಯೋದಲ್ಲಿ ಹಿಂದೂ ಧರ್ಮದಿಂದ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡ ಒಬ್ಬ ಹುಡುಗಿ ಬುರ್ಖಾ ತೊಟ್ಟು ಸ್ಟುಡಿಯೋದಲ್ಲಿ ಕುಳಿತುಕೊಂಡು ಟಿವಿ ಆಂಕರ್ ನ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಳು, ಅವಳ ಮತಾಂತರದ ಸಮರ್ಥನೆಗಳು ಎಷ್ಟು ಬಾಲಿಶವಾಗಿದ್ದವೆಂದರೆ ಅವಳ ಮಾತುಗಳನ್ನು ಕೇಳಿದ ಅರವತ್ತರ ಆಸುಪಾಸಿನಲ್ಲಿರುವ ನನ್ನ ಅಮ್ಮ ಹೇಳಿದ್ದು "ಇಂತವಳು ಹಿಂದೂ ಧರ್ಮ ಬಿಟ್ಟು ಹೋಗಿದ್ದು ಒಳ್ಳೆದೇ ಆಯಿತು"! ಆಕೆ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡಿದ್ದಕ್ಕೆ ನನಗೇನೂ ಬೇಜಾರಿಲ್ಲ. ಆದರೆ ಹಿಂದೂ ಧರ್ಮ ಬಿಟ್ಟು ಹೋಗಿ ಬೇರೆ ಧರ್ಮಗಳಲ್ಲಿ ಸಾಧಿಸುವಂತದ್ದು ಏನೂ ಇರಲಿಲ್ಲ. ಎಲ್ಲಾ ಧರ್ಮಗಳೂ ಒಂದೇ, ಆಚರಣೆಗಳು ಮಾತ್ರ ಬೇರೆ ಬೇರೆ, ಅದರಲ್ಲೂ ಹಿಂದೂಗಳು "ವಸುದೈವ ಕುಟುಂಬಕಂ" ಅರ್ಥಾತ್ "the world is one family" ಎನ್ನುವ ಪರಿಕಲ್ಪನೆಯವರು, ನಮ್ಮ ಮನೆ ಹುಡುಗಿ ಪಕ್ಕದ ಮನೆಗೆ ಹೋಗಿ, ಅಲ್ಲಿ ಏನೋ ಸಾಧಿಸುತ್ತೇನೆ ಅಂತ ಹೋಗಿದ್ದಾಳೆ ಸರಿ ಏನನ್ನು ಸಾಧಿಸುತ್ತಾಳೆ ನೋಡೋಣ ಅಂತ ಸುಮ್ಮನಾಗಿಬಿಡುತ್ತಾರೆಯೇ ಹೊರತು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.
ಆಕೆ ಹೇಳುವ ಪ್ರಕಾರ ಮತಾಂತರವಾಗಲಿಕ್ಕೆ ಮುಖ್ಯವಾದ ಕಾರಣ- ಹಿಂದುಗಳಲ್ಲಿರುವ ದೇವರುಗಳ ಸಂಖ್ಯೆಯಂತೆ! ಯಾವ ದೇವರನ್ನು ಪೂಜಿಸಬೇಕು ಅಂತ ಅರ್ಥವಾಗದೆ ಗೊಂದಲಕ್ಕೆ ಬಿದ್ದು ಮತಾಂತರವಾದಳಂತೆ, (ಒಂದು ಸಮಯದಲ್ಲಿ ಈ ಪ್ರಶ್ನೆ ನಾನೂ ಕೇಳಿದ್ದೆ) ಮುಂದುವರಿದು ಹೇಳುತ್ತಾಳೆ ರಿಸರ್ಚ್ ಮಾಡಿ ಬೈಬಲ್ ಬಗ್ಗೆ ತಿಳಿದುಕೊಂಡೆ, ಕುರಾನ್ ಬಗ್ಗೆ ತಿಳಿದುಕೊಂಡೆ, ಆದರೆ ಎಲ್ಲೂ ಅಪ್ಪಿತಪ್ಪಿಯೂ ಹೇಳಲಿಲ್ಲ ಭಗವದ್ಗೀತೆಯನ್ನ ಓದಿನೋಡಿದೆ, ವೇದೋಪನಿಷತ್ಗಳನ್ನು ಓದಿಕೊಂಡೆ, ಪುರಾಣಗಳನ್ನೂ ಓದಿ ನೋಡಿದೆ ಎಲ್ಲೂ ನನ್ನ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗಲಿಲ್ಲ ಹಾಗಾಗಿ ಮತಾಂತರವಾದೆ ಅಂತ, ಒಂದು ವೇಳೆ ಹಾಗೆ ಅಧ್ಯಯನ ಮಾಡಿ ಉತ್ತರ ಸಿಗದೆ ಮತಾಂತರವಾದೆ ಅಂತ ಹೇಳಿರುತ್ತಿದ್ದರೆ ನಾನು ಆಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದೆ, ಏನೇ ಆಗಲಿ ಎಲ್ಲ ಪ್ರಯತ್ನವನ್ನು ಮಾಡಿದ್ದಾಳೆ ಉತ್ತರ ಸಿಗದೇ ಇರುವುದರಿಂದ ಇನ್ನೊಂದು ಧರ್ಮದಲ್ಲಿ ಹುಡುಕಲು ಪ್ರಯತ್ನಿಸಿದ್ದಾಳೆ ತಪ್ಪೇನು? ಮಾಡಿದ್ದು ಸರಿ ಅಂತ ನಾನೇ ವಾದಿಸುತ್ತಿದ್ದೆ. ಆದರೆ ಅದಕ್ಕೆ ಆಕೆ ಅವಕಾಶವನ್ನೇ ಕೊಡಲಿಲ್ಲ! ಆಂಕರ್ ಮುಂದುವರಿದು ಇನ್ನೊಂದು ಪ್ರಶ್ನೆಯಲ್ಲಿ ಕೇಳುತ್ತಾರೆ ಇಷ್ಟು ಮಹತ್ತರವಾದ ನಿರ್ಣಯ ತೆಗೆದುಕೊಳ್ಳುವ ಮೊದಲು ಕೆಲವರ ಜೊತೆ ಚರ್ಚೆ ಮಾಡಿದ್ದೀರಲ್ಲವೇ ಅಂತ, ಆಕೆ ನೀಡಿದ ಉತ್ತರ ಅಂತರ್ಜಾಲದಲ್ಲಿ ಚರ್ಚೆ ಮಾಡಿ ಉತ್ತರ ಕಂಡುಕೊಂಡಿದ್ದೇನೆ! ಇದಕ್ಕಿಂತ ಬಾಲಿಶವಾದ ಉತ್ತರ ಇನ್ನೊಂದು ಇರಲಿಕ್ಕಿಲಿಕ್ಕಿಲ್ಲ ಸರ್ಚ್ ಎಂಜಿನ್ ಗಳಲ್ಲಿ ಉತ್ತಮವಾದದ್ದು ಗೂಗಲ್, ಅದರಲ್ಲೇ ಸರ್ಚ್ ಮಾಡಿದ್ದಾಳೆ ಅಂತಾನೆ ಇಟ್ಟುಕೊಳ್ಳೋಣ, ಅದಕ್ಕೆ ಏನು ಗೊತ್ತು? ಧರ್ಮಗಳ ಸೂಕ್ಷ್ಮತೆಯ ಬಗ್ಗೆ, ಉದಾಹರಣೆಗೆ 'ಅಳು'ವಿನ ಬಗ್ಗೆ ಸರ್ಚ್ ಮಾಡಿದರೆ ಅದು ಕಣ್ಣೀರು, ಆ ಕಣ್ಣೀರಿನಲ್ಲಿರುವ ಲವಣ, ಕಣ್ಣಿನಲ್ಲಿ ನೀರು ಉತ್ಪತ್ತಿಯಾಗುವ ವೈಜ್ಞಾನಿಕ ಸತ್ಯಗಳನ್ನು ಹೇಳಬಹುದೇ ಹೊರತು ಅಳುವಿನ ಮುಂಚೆ ಮನಸ್ಸಿನ ಉಂಟಾಗುವ ಭಾವನೆಗಳನ್ನು ವಿವರಿಸಲು ಗೂಗಲ್ ಗೆ ಸಾಧ್ಯವೇ? ಮನಸ್ಸಿನಲ್ಲಿ ಉಂಟಾದ ನೋವಿನ ತೀವ್ರತೆಯನ್ನು ಲೆಕ್ಕ ಹಾಕಿ ಹೇಳಲು ಸಾಧ್ಯವೇ? ಇಲ್ಲ.... ನಾವು ಮನಸ್ಸಿನಲ್ಲಿ ಏನನ್ನು ಇಟ್ಟುಕೊಂಡು ಪ್ರಶ್ನೆ ಕೇಳುತ್ತೇವೋ ಅದೇ ರೀತಿಯ ಉತ್ತರ ನೀಡುತ್ತದೆ ಅದಕ್ಕೆ ಹೇಳೋದು "search engines are Algorism" ಅಂತಹ ಇಂಜಿನ್ ನಲ್ಲಿ ಆಕೆ ಏನನ್ನು ಕೇಳಿರಬಹುದು ಅದು ಏನನ್ನು ಉತ್ತರಿಸಿರಬಹುದು? ಅವಳಿಗೇ ಗೊತ್ತು. ಜಾಕಿರ್ ನಾಯ್ಕ್ ರ ಭಾಷಣಗಳನ್ನು ಕೇಳಿ ಪ್ರಭಾವಿತಳಾದೆ ಅಂದವಳು ಮತಾಂತರಕ್ಕೆ ಮುಂಚೆ ಹಿಂದೂ ಧರ್ಮ ಪ್ರಚಾರಕರು ಅಥವಾ ಗುರುಗಳಲ್ಲಿ ಒಮ್ಮೆ ಸಮಾಲೋಚಿಸಬಹುದಿತ್ತಲ್ಲ? ಅವರಲ್ಲಿ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಬಹುದಿತ್ತಲ್ಲ? ಯಾಕೆ ಮಾಡಲಿಲ್ಲ? ಅವಳ ಪೂರ್ತಿ ವಿಡಿಯೋ ನೋಡಿದ ನನಗೆ ಅನಿಸಿದ್ದು ಏನೆಂದರೆ ಯಾರೋ ಹೇಳಿಕೊಟ್ಟ ಮಾತುಗಳನ್ನು ಟಿವಿ ಮುಂದೆ ಕುಳಿತು ಹೇಳಲು ಪ್ರಯತ್ನಿಸುತ್ತಿದ್ದಾಳೆ! ಏನೇ ಇರಲಿ ಅದು ಅವಳ ಅಭಿವ್ಯಕ್ತಿ ಸ್ವಾತಂತ್ರ್ಯ, ಕೇಳಲಿಕ್ಕೆ ನಾನು ಯಾರು?
ಕೆಲವು ವರ್ಷಗಳ ಹಿಂದೆ ಅಂದರೆ ನಾನು ದ್ವಿತೀಯ ಪಿಯುಸಿ ಓದುತ್ತಿರುವಾಗ ನನ್ನ ಜೀವನದಲ್ಲಿ ನಡೆದ ಒಂದು ಘಟನೆಯನ್ನು ಆದರಿಸಿ ನನ್ನ ಅಮ್ಮನಲ್ಲಿ ಸುಮ್ಮನೆ ಕೇಳಿದ್ದೆ "ಅಮ್ಮ ನಾನು ಬೇರೆ ಧರ್ಮಕ್ಕೆ ಮತಾಂತರವಾಗಬೇಕಂತ್ತಿದ್ದೇನೆ ನಿನ್ನ ಅಭಿಪ್ರಾಯವೇನು?" ಕೇಳುವಾಗ ಅಂದುಕೊಂಡಿದ್ದೆ, ಅಮ್ಮ ತುಂಬಾ ಓದಿಕೊಂಡ ಹೆಣ್ಣು ಮಗಳಲ್ಲ, ಹಾಗಾಗಿ ವಿಷಯ ಕೇಳಿ ಗಾಬರಿಗೊಂಡು ಯಾಕೆ? ಏನು? ಹೇಗೆ? ಅಂತ ಕೇಳಬಹುದು ಇಲ್ಲಾ ಉದ್ವೇಗಕ್ಕೆ ಒಳಗಾಗಬಹುದು... ಆದರೆ ಅಮ್ಮ ಶಾಂತಚಿತ್ತದಿಂದ ಕೇಳಿದ ಪ್ರಥಮ ಪ್ರಶ್ನೆ ಏನು ಗೊತ್ತಾ?.... ಆ ಪ್ರಶ್ನೆ 'ಯಾವಾಗ?' ನನಗೆ ಆಶ್ಚರ್ಯ ಏಕೆ ಹೀಗಾಯಿತು? ಆದರೂ ತೋರಗೊಡದೆ ಹೇಳಿದೆ ಇನ್ನೂ ನಿರ್ಧರಿಸಿಲ್ಲ, ಎರಡನೇ ಪ್ರಶ್ನೆ ಯಾವ ಧರ್ಮಕ್ಕೆ? ಮನಸ್ಸಿನಲ್ಲೇ ಅಂದುಕೊಂಡೆ ಎಲಾ ಇವಳಾ?! ಆದರೂ ಹೇಳಿದೆ ಅದೂ ನಿರ್ಧರಿಸಿಲ್ಲ... ಮೂರನೇ ಪ್ರಶ್ನೆ ಈಗಿರುವ ಧರ್ಮದಲ್ಲಿ ನಿನಗಾದ ತೊಂದರೆ ಏನು? ನಿಜವಾಗಿ ಏನೂ ಇಲ್ಲಾ, ನಾನು ಹೇಳಿದ್ದು ಸುಮ್ಮನೆ, ನೀನು ಏನು ಹೇಳುತ್ತಿಯೋ ನೋಡೋಣ ಅಂತ ಕೇಳಿದೆ ಅಂತಾ ಹೇಳುವ ಹಾಗಿಲ್ಲ, ಏನೋ ಒಂದು ಹೇಳಲೇ ಬೇಕಾದ ಪರಿಸ್ಥಿತಿಯಲ್ಲಿ ಹೇಳಿದೆ ಈ ಕೋಟ್ಯಂತರ ದೇವರುಗಳಿಂದ ಗೊಂದಲ ಉಂಟಾಗುತ್ತಿದೆ, ಯಾರನ್ನು ಪೂಜಿಸಲಿ, ಯಾರನ್ನು ಬಿಡಲಿ ಅಂತ ಅರ್ಥವಾಗುತ್ತಿಲ್ಲ ಅಂದೆ. ಅದಕ್ಕೆ ಅಮ್ಮ ಕೊಟ್ಟ ಉತ್ತರ ಸಾಧಾರಣವಾದರೂ ಇನ್ನೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ, ಅಮ್ಮ ಹೇಳಿದಳು ನಿನ್ನ ಕಾಲೇಜಿನ ಗ್ರಂಥಾಲಯದಲ್ಲಿ ಲಕ್ಷಾಂತರ ಪುಸ್ತಕಗಳಿವೆ, ಅಷ್ಟನ್ನೂ ಓದಿಕೊಂಡಿದ್ದೀಯ? ನಾನಂದೆ ಇಲ್ಲ... ಬರಲಿರುವ ಪರೀಕ್ಷೆಗಳಿಗೆ ಬೇಕಾದ ಪುಸ್ತಕಗಳನಷ್ಟೇ ಓದುತ್ತಿದ್ದೇನೆ, ಅದಕ್ಕೆ ಅಮ್ಮ ಹೇಳಿದಳು ಅದು ನಿನ್ನ ಈ ಕ್ಷಣದ ಅವಶ್ಯಕತೆ ಅಷ್ಟಕ್ಕೇ ಸೀಮಿತವಾಗಿದ್ದಿ, ಅಷ್ಟೂ ಪುಸ್ತಕಗಳನ್ನು ಓದದೆ ನಿನಗಾದ ತೊಂದರೆ ಏನೂ ಇಲ್ಲ, ಇದ್ದುದರಲ್ಲೇ ಕುಶಿಯಾಗಿದ್ದಿ, ಪ್ರಪಂಚ ಜ್ಞಾನ ಸಿಕ್ಕಿದೆ, ನಾಲ್ಕು ಜನರ ಮದ್ಯೆ ಬದುಕುವ ಕಲೆ ಸಿದ್ದಿಸಿದೆ. ಮತ್ತಿನೇನು ಬೇಕು? ಹಾಗೆ ಕೋಟ್ಯಂತರ ದೇವರುಗಳಿದ್ದಾರೆ ಅಂತ ಎಲ್ಲರನ್ನೂ ಪೂಜಿಸುವ ಅಗತ್ಯ ನಿನಗಿಲ್ಲ, ಮನಸ್ಸಿನ ಶಾಂತಿಗಾಗಿ ಯಾವುದಾದರೂ ಒಂದು ದೇವರನ್ನು ಪ್ರಾರ್ಥಿಸು ಸಾಕು ಅಂದಳು. ಉಳಿದ ದೇವರುಗಳಿಗೆ ಸಿಟ್ಟು ಬಂದರೆ ಅಂದೆ, ಅದು ನೀನು ಪೂಜಿಸುತ್ತಿರುವ ದೇವರ ಜವಾಬ್ದಾರಿ, ನಿನ್ನದಲ್ಲ ಅಂದು ಹೇಳಿ ಎದ್ದು ಹೋದಳು. ಒಂದು ಕ್ಷಣ ಅವಾಕ್ಕಾದೆ. ಇಷ್ಟು ದಿನ ನನ್ನ ಜೊತೆ ಇದ್ದ ಅಮ್ಮ ಇವಳೇನಾ ಅಂತ ಮನಸ್ಸಿನಲ್ಲೇ ಕೇಳಿಕೊಂಡೆ. ಮತ್ತೆ ಬಾಯಿಯಿಂದ ಮಾತೆ ಹೊರಡಲಿಲ್ಲ.
ಈಗ ನೀವೇ ಹೇಳಿ ವಿಶ್ವದ ಬೇರೆ ಯಾವ ಧರ್ಮದ ತಾಯಿಯಿಂದ ಇಂತ ಮಾತುಗಳು ಬಂದಾವು? ಅದಕ್ಕೆ ಹೇಳುವುದು ಹಿಂದೂ ವಿಶ್ವದ ಅತ್ಯಂತ ಪ್ರಾಚೀನ ಧರ್ಮ, ಅತ್ಯಂತ ಪ್ರಾಚೀನ ಸಭ್ಯತೆ. ಹಳಮೆಯಲ್ಲಿ ಮತ್ತು ಹಿರಿಮೆಯಲ್ಲಿ ಹಿಂದೂ ಧರ್ಮಕ್ಕೆ ಸರಿಸಾಟಿಯಾದ ಧರ್ಮ ಜಗತ್ತಿನಲ್ಲೇ ಇಲ್ಲ. ವಿಜ್ಞಾನದ ಪ್ರಕಾರ ಮನುಷ್ಯ ಭೂಮಿ ಮೇಲೆ ಬಂದು ಸುಮಾರು ಒಂಬತ್ತು ಲಕ್ಷ ವರ್ಷಗಳಾಗಿವೆ, ಐವತ್ತು ಸಾವಿರ ತಲೆಮಾರುಗಳು ಜೀವಿಸಿವೆ, ನಾಗರಿಕತೆಯ ಅರುಣೋದಯದ ಹೊಂಬೆಳಕಿನಲ್ಲಿ ಹಿಂದೂ ಧರ್ಮ ಈಗಿನ ಮಾನವ ಸಮುದಾಯಗಳ ಮುಂಚೂಣಿಯಲ್ಲಿ ಕಂಗೊಳಿಸುತ್ತಿದೆ. ಅದು ಸನಾತನವೂ ಹೌದು ನೂತನವೂ ಹೌದು. ಇಂಥ ಧರ್ಮ ಇಂದು ಪರಕೀಯರ ಮತ್ತು ಆಂತರಿಕ ಧರ್ಮೀಯರ ಧಾಳಿಗೆ ಒಳಗಾಗುತ್ತಿದೆ, ಈಗಲೇ ನಾವು ಎಚ್ಚೆತ್ತುಕೊಳ್ಳದೆ ಹೀಗೆ ಸುಮ್ಮನಿದ್ದರೆ ಹಿಂದೂ ಧರ್ಮ ಮತ್ತು ಹಿಂದೂಸ್ಥಾನ ಎರಡನ್ನೂ ಕಳೆದುಕೊಳ್ಳುವ ದಿನ ದೂರವಿಲ್ಲ. ನನ್ನ ಪರಮ ಗುರು ಬಿ. ವಿ. ವಿದ್ಯಾನಂದ ಶೆಣೈಯವರು ಭಾರತ ದರ್ಶನದಲ್ಲಿ ಪಟ್ಟಿಮಾಡಿರುವ ಕೆಲವೊಂದು ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ, ಅವರು ಹೇಳುತ್ತಾರೆ, ಇತಿಹಾಸದ ಪುಟಗಳಲ್ಲಿ ಇಂತಹ ಅದೆಷ್ಟೋ ಜನಾಂಗಗಳು ನಾಗರಿಕತೆಗಳು, ಧರ್ಮಗಳು ಸಂಸ್ಕೃತಿಗಳು ಇಂದು ಕಣ್ಮರೆಯಾಗಿವೆ, ಉದಾಹರಣೆಗೆ ಹೇಳುವುದಾದರೆ ಯುಫ್ರಿಟೀಸ್, ಮತ್ತು ಡೈಗ್ರೀಸ್ ನದಿಗಳ ನಡುವೆ ಬೆಳೆದ ಮೆಸಪಟೋಮಿಯನ್, ಬೆಬಲೋನಿಯನ್ ಸಂಸ್ಕ್ರತಿ ಇವತ್ತಿಲ್ಲ, ಆ ಪ್ರದೇಶ ಇದೆ, ಆ ನದಿಗಳು ಇವತ್ತಿಗೂ ಹರಿಯುತ್ತಿವೆ. ಆದರೆ ಆ ಪ್ರಾಚೀನ ಸಭ್ಯತೆ ಇಲ್ಲ ಅದನ್ನು ಇಂದು ಇರಾಕ್ ಅಂತ ಕರೆಯುತ್ತಿದ್ದೇವೆ. ಅದೀಗ ಇಸ್ಲಾಂ ರಾಷ್ಟವಾಗಿದೆ.
ಈಜಿಪ್ಟಿನ ಬಗ್ಗೆ ಏಳನೇ ತರಗತಿಯಲ್ಲಿ ಓದಿದ ನೆನಪು ಮೆಡಿಟರೇನಿಯನ್ ಮತ್ತು ಅಮೆಜಾನ್ ಗಳ ನಡುವೆ ಹರಿಯುವ ಪ್ರಪಂಚದ ಅತೀ ಉದ್ದದ (6695 KM) ನೈಲ್ ನದಿಯ ಈಜಿಪ್ಟ್ ಸಂಸ್ಕ್ರತಿ ಇಂದಿಲ್ಲ. ನಾಲ್ಕು ಸಾವಿರ ವರ್ಷಗಳ ಹಿಂದೆ ನೈಲ್ ನದಿಕಣಿವೆಯಲ್ಲಿ ಹುಟ್ಟಿದ ಈಜಿಪ್ಟಿನ ನಾಗರಿಕತೆ ಇಂದು ಸಾವಿಗೀಡಾಗಿದೆ. ಕೇವಲ ಅವರು ನಿರ್ಮಿಸಿರುವ ಪಿರಮಿಡ್ ಗಳನ್ನು ಮಾತ್ರ ಇಂದು ನೋಡಬಹುದಾಗಿದೆ ಅಷ್ಟೇ ಹೊರತು ಅಂದಿನ ಸಂಸ್ಕ್ರತಿಯನ್ನಲ್ಲ, ಈಗ ಅಲ್ಲಿ ಸತ್ತ ಯಾರನ್ನೂ ಮಮ್ಮಿಗಳನ್ನಾಗಿ ಮಾಡಿ ಪಿರಮಿಡ್ಗಳನ್ನು ಕಟ್ಟುತ್ತಿಲ್ಲ. ಅದೊಂದು ಮುಗಿದ ಅದ್ಯಾಯ.
ಸಾವಿರದ ಮುನ್ನೂರು ವರ್ಷಗಳ ಹಿಂದೆ ಇಸ್ಲಾಮಿನ ಆಕ್ರಮಣದಿಂದಾಗಿ ಪಾರ್ಸಿ ರಾಷ್ಟ್ರ ಸತ್ತು ಅದೀಗ ಇರಾನ್ ಆಗಿದೆ, ಆಕ್ರಮಣಕ್ಕೆ ಮುನ್ನ ಕೋಟ್ಯಂತರ ಸಂಖ್ಯೆಯಲ್ಲಿದ್ದ ಪಾರ್ಸಿಗಳ ಸಂಖ್ಯೆ ಇವತ್ತು ಇಡೀ ಜಗತ್ತಿನಲ್ಲಿ ಕೇವಲ ಒಂದು ಲಕ್ಷದ ಹದಿನೈದು ಸಾವಿರ ಅದರಲ್ಲೂ ಎಪ್ಪತ್ತು ಸಾವಿರ ಪಾರ್ಸಿಗಳು ಭಾರತದಲ್ಲಿ ಇದ್ದರೆ, ಅವರ ಮೂಲನೆಲೆ ಇರಾನ್ ನಲ್ಲಿ ಕೇವಲ ಇಪ್ಪತೈದು ಸಾವಿರ. ಆಕ್ರಮಣದ ಸಮಯದಲ್ಲಿ ಭಾರತಕ್ಕೆ ಓಡಿ ಬಂದಿದ್ದಕ್ಕೆ ಇಂದು ಅಷ್ಟಾದರೂ ಜನಸಂಖ್ಯೆ ಉಳಿದುಕೊಂಡಿದೆ ಅಂದರೆ ತಪ್ಪಾಗಲಾರದು. ಅವರಲ್ಲಿ ಒಬ್ಬರು ನಮ್ಮ ದೇಶದ ಹೆಮ್ಮೆಯ ಬಿಸಿನೆಸ್ ಟೈಕೂನ್ ರತನ್ ಟಾಟಾ!
ಯುರೋಪ್ ಮತ್ತು ಮೆಡಿಟರೇನಿಯನ್ ಪ್ರದೇಶಗಳಲ್ಲಿ ಅತಿ ದೊಡ್ಡ ಸಾಮ್ರಾಜ್ಯವನ್ನು ಹೊಂದಿ, ಇಡೀ ಯುರೋಪಿಗೆ ಸ್ವಾಭಿಮಾನವನ್ನು ಏಕ ಶಾಸನದ ಪ್ರಜ್ಞೆಯನ್ನು ನೀಡಿದ ಜೂಲಿಯಸ್ ಸೀಜರ್ ನ ರೋಮನ್ ಸಾಮ್ರಾಜ್ಯ ಇಂದು ಎಲ್ಲಿದೆ? ಸ್ವಾಮಿ ವಿವೇಕಾನಂದರು ಹೇಳಿದ್ದರು ಸೀಜರ್ ಆಳುತ್ತಿದ್ದ ಕಡೆ ಇವತ್ತು ಜೇಡರ ಬಲೆಗಳು ತುಂಬಿವೆ ಅಂತ.
ಸಾವಿರದ ನಾಲ್ಕುನೂರ ತೊಂಬತ್ತೆರಡರಲ್ಲಿ ಕೊಲಂಬಸ್ ಅಮೇರಿಕಾದಲ್ಲಿ ಕಾಲಿರಿಸಿದ ಆಗ ಅಲ್ಲಿ ಮಾಯಾ ಸಂಸ್ಕ್ರತಿಯ ಹತ್ತು ಕೋಟಿ ಜನ ವಾಸವಾಗಿದ್ದರು ಈಗ ಅವರ ಜನಸಂಖ್ಯೆ ಹತ್ತಿರ ಹತ್ತಿರ ಅರವತ್ತು ಸಾವಿರ, ಹತ್ತು ಕೋಟಿಯಷ್ಟಿದ್ದ ಜನಸಂಖ್ಯೆ ಐನೂರು ವರ್ಷಗಳ ಬಳಿಕ ಅರವತ್ತು ಸಾವಿರಕ್ಕೆ ಇಳಿದದ್ದು ಹೇಗೆ? ಕೊಲಂಬಸ್ ಅಮೇರಿಕಾವನ್ನು ಲೂಟಿ ಮಾಡಿದ ನಂತರ ಅವನ ಸೇನೆ ಬಂತು, ಮುಗ್ದ ಮಾಯಾ ಸಂಸ್ಕ್ರತಿಯ ಮಕ್ಕಳನ್ನು ಕಂಡ ಕಂಡಲ್ಲಿ ಕೊಚ್ಚಿ ಹಾಕಿದರು, ಅವರ ಸರ್ವ ನಾಶ ಮಾಡಿಬಿಟ್ಟರು ಇಂದು ಅವರ ಜನಸಂಖ್ಯೆಯೂ ಇಲ್ಲ ಅವರ ಮಾತೃ ಭಾಷೆ ಮಾಯನ್ ಕೂಡ ನಾಶವಾಗಿ ಹೋಗಿದೆ. ಅದೀಗ ಇಂಗ್ಲಿಷ್ ಮಯ.
ಹೀಗೆ ಇದ್ದು ನಶಿಸಿ ಹೋದ ಜನಾಂಗಗಳು, ನಾಗರೀಕತೆಗಳ ಸಾಲಿನಲ್ಲಿ ಇಂಕಾ ಕೂಡ ಒಂದು, ಪ್ರಾಚೀನ ಕಾಲದಲ್ಲಿ ದಕ್ಷಿಣ ಅಮೆರಿಕದ ಪೆರು ಪ್ರಾಂತಯವನ್ನೊಳಗೊಂಡು ಬೆಳೆದು ಬಾಳಿದ ಸಾಮ್ರಾಜ್ಯ ಇಂಕಾ. ಇವರು ಕೆಚ್ವಾಭಾಷೆಯನ್ನಾಡುತ್ತಿದ್ದ ಒಂದು ಬುಡಕಟ್ಟಿಗೆ ಸೇರಿದವರು. ಕೊಲಂಬಸ್ ಅಮೆರಿಕವನ್ನು ನಾಶ ಮಾಡುವುದಕ್ಕೆ ಬಹಳ ಹಿಂದೆಯೇ ಇಂಕಾದಲ್ಲಿ ಅನೇಕ ಸಾಮ್ರಾಜ್ಯಗಳು ಹುಟ್ಟಿ ಬೆಳೆದು ಲಯಹೊಂದಿದುವು. ಇಂದಿನವರೆಗೆ ತಿಳಿದು ಬಂದಿರುವಂತೆ ಈ ಸಂಸ್ಕೃತಿಗಳಲ್ಲಿ ಸಂಪತ್ತು, ಕಲಾಪ್ರೌಢಿಮೆ ಮತ್ತು ನಾಗರಿಕತೆಯ ದೃಷ್ಟಿಯಿಂದ ಅತ್ಯಂತ ಭವ್ಯವಾದವುಗಳು. ಆದರೆ ಇಂಕಾ ಸಂಸ್ಕ್ರತಿ ಇಂದಿಲ್ಲ. ಹದಿನಾರನೆಯ ಶತಮಾನದಲ್ಲಿ ಇವರ ಮೇಲೆ ಸ್ಪೇನಿನ ಯೋಧರ ಧಾಳಿ ನಡೆಯಿತು ಇಂಕಾ ಸಂಸ್ಕ್ರತಿ ನಾಶವಾಯಿತು.
ಗ್ರೀಕ್, ಮೆಸಪೊಟೋಮಿಯಾನ್, ಈಜಿಪ್ತಿಯನ್, ಪಾರ್ಸಿ, ರೋಮನ್, ಮಾಯಾ, ಇಂಕಾ, ಸಿಥಿಯನ್, ಪಾರ್ಥಿಯನ್, ಆಜ್ಟೆಕ್, ಐಗುಪ್ತಾ, ಚಾಂಡಿಯನ್ ಹೀಗೆ ಅದೆಷ್ಟೋ ಧರ್ಮಗಳು, ಜನಾಂಗಗಳು ಕೆಲವು ನೈಸರ್ಗಿಕ ವಿಕೋಪಕ್ಕೆ ತುತ್ತಾದರೆ ಬಹಳಷ್ಟು ಅಸಹಿಷ್ಣು ಮತಾಂಧರಿಗೆ ಬಲಿಯಾದವು, ಆ ಆಕ್ರಮಣ ಹಲವಾರು ರೂಪದಲ್ಲಿ ಇಂದೂ ಜಾರಿಯಲ್ಲಿದೆ. ಅದನ್ನು ಅರ್ಥ ಮಾಡಿಕೊಳ್ಳಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಕಳೆದ ಎರಡೂವರೆ ಸಾವಿರ ವರ್ಷಗಳಲ್ಲಿ ಅದೆಷ್ಟು ಆಕ್ರಮಣಗಳನ್ನು ಎದುರಿಸಿದ್ದೇವೆ, ಗ್ರೀಕರು, ಹೂಣರು, ಕುಶಾನರು, ಶಕರು, ಮಂಗೋಲಿಯರು, ಮೊಘಲರು, ಪಠಾಣರು, ಹಫಿಗಳು, ತುರ್ಕಿಗಳು, ಅಫ್ಘಾನಿಗಳು, ಇರಾನಿಗಳು, ಫ್ರೆಂಚರು, ಡಚ್ಚರು, ಪೋರ್ಚುಗೀಸರು, ಬ್ರಿಟಿಷರು, ಪಾಕಿಸ್ತಾನಿಗಳು, ಚೀನಿಯರು ಈಗ ಹೊಸದಾಗಿ ರೋಹಿಂಗ್ಯಗಳು ಪ್ರಾರಂಭಿಸಿದ್ದಾರೆ. ಆದರೆ ಹಿಂದೂಗಳು ಎಂದೂ ಪರಕೀಯರ ಮೇಲೆ ಆಕ್ರಮಣ ಮಾಡಿದವರಲ್ಲ. ನೀವು ಕೇಳಿರಬಹುದು, ಅಲೆಗ್ಸಾಂಡರ್ ದಂಡಯಾತ್ರೆ, ತಾಯಿಮುರ್ಲಾನ್ ದಂಡಯಾತ್ರೆ, ಚಂಗೇಸ್ ಖಾನ್ ದಂಡಯಾತ್ರೆ, ಘಜನಿ ದಂಡಯಾತ್ರೆ, ಘೋರಿ ದಂಡಯಾತ್ರೆ, ಬಾಬರ್ ದಂಡಯಾತ್ರೆ, ನೆಪೋಲಿಯನ್ ದಂಡಯಾತ್ರೆ, ಡ್ಯೂಪ್ಲೆ ದಂಡಯಾತ್ರೆ, ಕ್ಲಾವ್ ದಂಡಯಾತ್ರೆ ಮತ್ತು ಹಿಟ್ಲರ್ ದಂಡಯಾತ್ರೆ ಇಷ್ಟೆಲ್ಲ ದಂಡಯಾತ್ರೆಗಳ ಮದ್ಯೆ ಹಿಂದೂ ಹೆಸರಿನ ಯಾವುದೇ ದಂಡಯಾತ್ರೆ ನಿಮಗೆ ಕಾಣಸಿಕ್ಕಿದೆಯಾ? ಇಲ್ಲಾ ತಾನೆ.... ಅದೇ ಹಿಂದೂವಿನ ಹೆಗ್ಗಳಿಕೆ, ಇಂತಹ ದಂಡಯಾತ್ರೆಗಳು ದಂಡ ಎಂದುಕೊಂಡಿರುವ ಹಿಂದೂ ಧರ್ಮವನ್ನು ಬಿಟ್ಟು ಹೋಗುವ ಮನಸ್ಸಾದರೂ ಹೇಗೆ ಬರುತ್ತದೋ ಅದೇ ಈ ಹೊತ್ತಿನ ಅರ್ಥವಾಗದ ಪ್ರಶ್ನೆ!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ