ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೂರ್ಯ ಉದಯಿಸುವಾಗ ಮತ್ತು ಮುಳುಗುವಾಗ ಪ್ರಪಂಚಕ್ಕೆಲ್ಲ ಬೆಳಕನ್ನು ಕೊಡುವ ಸೂರ್ಯನಿಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಮಾಡುವ ಕಾರ್ಯವೇ "ಸಂಧ್ಯಾವಂದನೆ". ಸಂಧ್ಯಾವಂದನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ,ಶಾಂತಿ ದೊರಕುತ್ತದೆ. ಆರೋಗ್ಯ ದೃಷ್ಟಿಯಿಂದ ಪ್ರಾಣಾಯಾಮ ಮಾಡಿದರೆ ಮನಸ್ಸು ಶುದ್ಧವಾಗಿ ಬುದ್ಧಿ ಚುರುಕಾಗುತ್ತದೆ, ಆಯಸ್ಸು ಹೆಚ್ಚುತ್ತದೆ. ಋಷಿವರೇಣ್ಯರ ದೀರ್ಘಾಯುಷ್ಯದ ಗುಟ್ಟು ಈ "ಪ್ರಾಣಾಯಾಮ". ಹಾಗೆ ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಎಲ್ಲ ಅಂಗಾಂಗಗಳಿಗೂ ವ್ಯಾಯಾಮ ಆಗುತ್ತದೆ. ಸೂರ್ಯನ ಕಿರಣಗಳಲ್ಲಿನ "ಡಿ" ಅನ್ನಾಂಗಗಳು ನಮ್ಮ ದೇಹವನ್ನು ಸೇರುತ್ತವೆ. ಅಷ್ಟೆ ಅಲ್ಲದೆ ನಮ್ಮ ಜೀವನದಲ್ಲಿ ಶಿಸ್ತು ಮೂಡಲು ಪ್ರಥಮ ಮೆಟ್ಟಿಲು ಸಂಧ್ಯಾವಂದನೆ ಆಗಿದೆ.
ಧ್ಯಾನ ಎಂದರೆ ಏಕಾಗ್ರತೆ. ನಮ್ಮ ಮನಸ್ಸು ಚಂಚಲವಾಗಿರುತ್ತದೆ. ಈ ಚಂಚಲತೆಯನ್ನು ಹೋಗಲಾಡಿಸಿ ಮನಸ್ಸನ್ನು ಧೃಡವಾಗಿರಿಸುವ ಪ್ರಕ್ರಿಯೆಯೇ "ಧ್ಯಾನ". ದೃಢವಾದ ಮನಸ್ಸಿನಿಂದ ಸರಿಯಾದ ನಿರ್ಣಯಗಳನ್ನು ತೆಗೆದು ಕೊಳ್ಳ ಬಹುದು. ಹಾಗೆ ಸರಿಯಾದ ನಿರ್ಣಯಗಳಿಂದ ತೆಗೆದು ಕೊಂಡ ನಿರ್ಧಾರವು ತಪ್ಪಾಗಲಿಕ್ಕೆ ಸಾಧ್ಯವಿಲ್ಲ.ಯಾವುದೇ ಕಾರ್ಯಗಳನ್ನು ಏಕಾಗ್ರತೆಯಿಂದ ಮಾಡುವವನಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಧ್ಯಾನದಿಂದ ಏಕಾಗ್ರತೆ ಹೆಚ್ಚುತ್ತದೆ. ಮನಸ್ಸಿನ ಸಂಕಟಗಳು ದೂರವಾಗುತ್ತದೆ. ಮನಸ್ಸನ್ನು ಉಲ್ಲಾಸದಾಯಕವಾಗಿ ಇಡುವ ಈ ಧ್ಯಾನವನ್ನು ಮೂಢ ನಂಬಿಕೆಯೆಂದು ದೂರ ಮಾಡಿದರೆ, ಬಹಳ ದೊಡ್ಡ ಪ್ರಮಾಣದ ನಷ್ಟವೆಂದರೆ ಅತಿಶಯೋಕ್ತಿಯಲ್ಲ.
ಭಗವಂತನು ಜ್ಯೋತಿ ಸ್ವರೂಪನಾಗಿದ್ದಾನೆ. ಆತನಿಗೆ ಜ್ಯೋತಿಗಳಿಂದ ಉಪಯೊಗವೇನು? ಅಂದರೆ ನಾವು ಬೆಳಗುವ ದೀಪಗಳು ಪರಮಾತ್ಮನಿಗಲ್ಲ. ಆತನಿಂದ ಜ್ಞಾನವೆಂಬ ಬೆಳಕು ಅಂಧಕಾರದ ನಮ್ಮ ಬಾಳಿನಲ್ಲಿ ಹರಡಲಿ ಎಂಬ ಭಾವನೆಯನ್ನಿಟ್ಟು ಕೊಂಡು ದೀಪವನ್ನು ಬೆಳಗುತ್ತೇವೆ. ಹಾಗೆಂದು ವಿದ್ಯುದ್ದೀಪಗಳನ್ನು ಹಚ್ಚುತ್ತೇವೆಂದರೆ ನಿಮ್ಮ ಅಂದಾಜು ತಪ್ಪು ಎನ್ನುತ್ತೇನೆ. ಏಕೆಂದರೆ, ದೀಪಗಳನ್ನು ತುಪ್ಪ ಅಥವ ಎಣ್ಣೆ ಮತ್ತು ಬತ್ತಿಗಳಿಂದ ಹಚ್ಚುತ್ತೇವೆ. ತುಪ್ಪದ ದೀಪದ ಬೆಳಕು ಕಣ್ಣಿನ ಆರೋಗ್ಯವನ್ನು ವೃಧ್ದಿಸುತ್ತದೆ. ವಿದ್ಯುದ್ದೀಪದ ಬೆಳಕು ದೃಷ್ಠಿಯನ್ನು ಮಂದವಾಗಿಸುತ್ತದೆ. ಎಣ್ಣೆಯ ದೀಪಕ್ಕಿಂತ ತುಪ್ಪದ ದೀಪವು ಅಧಿಕ ಆಮ್ಲಜನಕ ಬಿಡುಗಡೆ ಮಾಡುವುದರಿಂದ ಶ್ರೇಷ್ಟ ಎಂದಿದ್ದಾರೆ. ಅಂತೆಯೇ ನಂದಾ ದೀಪವನ್ನು ಹಚ್ಚುವುದೇಕೆಂದರೆ, ಹಿಂದಿನ ಕಾಲದಲ್ಲಿ ಅಂದರೆ ರಂಜಕದಿಂದ ಬೆಂಕಿಯ ಉಪಯೋಗವು ತಿಳಿಯುವುದಕ್ಕೆ ಮುಂಚೆ ಎರಡು ಬೆಣಚು ಕಲ್ಲುಗಳ ಘರ್ಷಣೆಯಿಂದ ಅಥವಾ ಅರುಣಿಗಳಿಂದ ಬೆಂಕಿಯನ್ನು ಉತ್ಪಾದಿಸುತ್ತಿದ್ದರು. ಇವುಗಳಿಂದ ಬೆಂಕಿಯನ್ನು ಉತ್ಪಾದಿಸುವುದು ಬಹಳ ಕಷ್ಟಕರವಾದ ಮತ್ತು ರೇಜಿಗೆಯ ಕೆಲಸವಾಗಿತ್ತು. ಒಮ್ಮೆ ಹೊತ್ತಿಸಿದ ಬೆಂಕಿಯನ್ನು ದೀರ್ಘ ಕಾಲದವರೆಗೆ ಉಪಯೋಗಿಸುವ ಉದ್ದೇಶವಿಟ್ಟು ಕೊಂಡು ನಂದಾದೀಪವನ್ನು ಹಚ್ಚುವ ಪರಿಪಾಠವನ್ನು ರೂಢಿಸಿ ಕೊಂಡು ಬಂದಿರ ಬೇಕು.
ಲೋಭಾನ, ಶ್ರೀಗಂಧ, ಚಂಗಲ ಕೋಷ್ಠ, ಗುಗ್ಗುಳ, ಯಾಲಕ್ಕಿ, ಕೃಷ್ಣಾಗರು, ದೇವದಾರು, ಹಾಲುಮಡ್ಡಿ, ಜಟಾಮಾಂಸಿ ಮತ್ತು ಕಚೋರಗಳೆಂಬ ಹತ್ತು ವಿಧವಾದ ಮೂಲಿಕೆಗಳಿಂದ ಸಿದ್ಧ ಮಾಡಿ ಬೆಂಕಿಯಲ್ಲಿ ಸುಟ್ಟು ಅದರ ಹೊಗೆಯನ್ನು ಸೇವಿಸಿದರೆ ಶ್ವಾಸಕೋಶಗಳ ತೊಂದರೆಗಳು ನಿವಾರಣೆಯಾಗುತ್ತದೆ. ಈ ಹತ್ತು ವಿಧವಾದ ಮೂಲಿಕೆಗಳನ್ನು "ದಶಾಂಗ ಧೂಪ" ಎನ್ನುತ್ತಾರೆ. ಸುವಾಸನೆಗಾಗಿ ಹಚ್ಚುವ ಗಂಧದ ಕಡ್ಡಿಗಳು ಹೆಚ್ಚು ಉಪಯೋಗಕಾರಿ ಆಗುವುದಿಲ್ಲ. ಧೂಪವನ್ನು ಹಚ್ಚುವುದರಿಂದ ಅದರ ಸುವಾಸನೆಯು ನಮ್ಮ ಮನಸ್ಸನ್ನು ಹಗುರ ಮಾಡುತ್ತದೆ. ಭಕ್ತಿಯಿಂದ ಪ್ರಾರ್ಥನೆ ಮಾಡುವುದಕ್ಕೆ ಅನುಕೂಲವಾದ ಈ ಧೂಪವನ್ನು ಹಚ್ಚುವುದರಲ್ಲಿ ಹುಚ್ಚು ಕೆಲಸ ಅಲ್ಲವೆಂಬುದು ಸತ್ಯವಷ್ಟೇ.
ಎರಡು ಲೋಹಗಳು ಪರಸ್ಪರ ಢಿಕ್ಕಿ ಹೊಡೆದಾಗ ಶಬ್ದ ತರಂಗಗಳು ಉಂಟಾಗುತ್ತವೆ. ಈ ಶಬ್ಧ ತರಂಗಗಳು ಕಿವಿಯನ್ನು ಹೊಕ್ಕು ಮೆದುಳನ್ನು ಸೇರುತ್ತದೆ.
ಸಾಮಾನ್ಯವಾಗಿ ಘಂಟೆಗಳನ್ನು ಕಂಚು, ಪಂಚಲೋಹ, ಬೆಳ್ಳಿ ಅಥವ ಹಿತ್ತಾಳೆಯಿಂದ ಮಾಡುತ್ತಾರೆ. ಪೂಜೆ ಮಾಡುವಾಗ ಹೊರಗಿನ ಎಲ್ಲ ವಿಚಾರಗಳನ್ನು ಪಕ್ಕಕ್ಕಿಟ್ಟು ಶುದ್ಧವಾದ ಮನಸ್ಸಿನಿಂದ ಪೂಜಿಸ ಬೇಕು. ಕಂಚಿನ ಘಂಟೆಯ ಸದ್ದು ಕಿವಿಯಲ್ಲಿ ಗುಂಯಿಗುಡುತ್ತಾ ಹೊರಗಿನ ಪ್ರಪಂಚವನ್ನು ಕ್ಷಣ ಕಾಲ ಮರೆಸಿ ಬಿಡುತ್ತದೆ ಗಮನಿಸಿದ್ದೀರಾ? ಅಂತಹ ಸ್ಥಿತಿಯಲ್ಲಿ ನಮ್ಮ ಮನಸ್ಸು ಪರಿಪೂರ್ಣ ಶುದ್ಧವಾಗಿರುತ್ತದೆ. ಆ ಸಮಯದಲ್ಲಿ ಮಾಡುವ ಆಲೋಚನೆ ಸಫ಼ಲವಾಗುತ್ತದೆ. ಹಾಗೆಯೇ ಘಂಟೆ ಭಾರಿಸುವ ಕೈಗಳ ನಾಡಿಗಳು ಗಂಟೆಯಿಂದ ಹೊರ ಬರುವ ತರಂಗಗಳಿಂದ ಶುದ್ಧವಾಗುತ್ತದೆ. ಪೂಜೆಗೆ ಕಂಚಿನ ಘಂಟೆ ಶ್ರೇಷ್ಠವೆಂದು ಹೇಳಿದ್ದಾರೆ.
ಆಚಮನ ಮಾಡುವ ನೀರು ಗಾಳಿಯೊಂದಿಗೆ ಒಳಗೆ ಹೋಗಿ ಅನ್ನನಾಳ ಮತ್ತು ಶ್ವಾಸಕೋಶಗಳು ಸೇರುವ ಸಂಧಿಯಲ್ಲಿ ಸೇರಿರುವ ಕಫ಼ ಮತ್ತು ಕಸದೊಂದಿಗೆ ಹೊಟ್ಟೆಯನ್ನು ಸೇರಿ ಅಲ್ಲಿಂದ ಬಹಿರ್ದೆಸೆಯಲ್ಲಿ ಹೊರ ಬೀಳುತ್ತದೆ. ಗಂಟಲಿನಲ್ಲಿರುವ ಕಫ಼ವು ಶಬ್ಧವನ್ನು ಸ್ವಚ್ಛವಾಗಿ ಉಚ್ಛಾರ ಮಾಡಲು ಬಿಡುವುದಿಲ್ಲ ಎಂಬುದು ಗೊತ್ತಿರುವ ಸಂಗತಿಯಾಗಿದೆ. ಸ್ವಚ್ಛವಾಗಿ ಉಚ್ಛಾರ ಮಾಡದ ಮಂತ್ರಗಳ ಅರ್ಥಗಳು ಬೇರೆಯೇ ಆಗುತ್ತದೆ. ಇದಕ್ಕೆ ಹಲವು ಉದಾಹರಣೆಗಳಿವೆ. ಈ ರೀತಿಯ ತಪ್ಪುಗಳು ಆಗದಿರಲಿ ಎಂದು ಋಷಿ ಮುನಿಗಳು ಕಂಡು ಕೊಂಡ ಉಪಾಯವೇ ಈ "ಆಚಮನ" ಆಗಿದೆ. ಆಚಮನ ಮಾಡುವಾಗ ವೇದಗಳ, ದೇವರ ಸ್ಮರಿಸಿ ನೀರು ಕುಡಿಯುವುದರಿಂದ ವಿಶೇಷ ಶಕ್ತಿ ಸಿಕ್ಕ ಅನುಭವ ಆಗುವುದು.
ನಾವು ಯಾವುದೇ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡ ಬೇಕಾದರೆ ಪೂರ್ವ ಯೋಜನೆ ಅಗತ್ಯ. ಪೂರ್ವ ಯೋಜನೆ ಹಾಕಿ ಕೊಂಡು ಮಾಡುವ ಎಲ್ಲ ಕಾರ್ಯಗಳು ಉತ್ತಮ ಫಲದಾಯಕವಾಗಿದ್ದು ಅದೇ ರೀತಿ ಯಾವುದೇ ಪೂಜಾ ಕೈಂಕರ್ಯಗಳಲ್ಲಿ ಮೊದಲು ಪೂರ್ವ ಯೋಜನೆ ಮಾಡಿ ಕೊಳ್ಳುವ ಸಲುವಾಗಿ ಸಂಕಲ್ಪವನ್ನು ಮಾಡಿ ಕೊಳ್ಳುತ್ತೇವೆ. ಸಂಕಲ್ಪದಲ್ಲಿ ನಾವು ವಾಸಿಸುತ್ತಿರುವ ಸ್ಥಳದ ಪರಿಚಯ, ಈಗಿನ ಕಾಲಮಾನ, ಯಾವ ಉದ್ದೇಶದಿಂದ ಏನು ಮಾಡುತ್ತಿದ್ದೇವೆ? ಯಾರನ್ನು ಉದ್ದೇಶಿಸಿ ಮಾಡುತ್ತಿದ್ದೇವೆ? ಇವೆಲ್ಲದರ ಸಂಕ್ಷಿಪ್ತವಾದ ವಿವರಣೆ ಇರುತ್ತದೆ. ಇದರಿಂದ ಕಾರ್ಯಕ್ರಮದ ಯಾವ ಘಟ್ಟವನ್ನೂ ಮರೆಯುವ ಸಾದ್ಯತೆಯಿರುವುದಿಲ್ಲ. ಆದ್ದರಿಂದ ಸಂಕಲ್ಪ ಮಾಡುವುದರಲ್ಲಿ ಯಾವುದೇ ಕಂದಾಚಾರ ಇಲ್ಲವೆಂಬುದು ಸಾಭೀತಾಗುತ್ತದೆ.
"ಪವಿತ್ರ"ವೆಂದರೆ ಹೆಸರೇ ಹೇಳುವಂತೆ ಬಹಳ ಪವಿತ್ರವಾದದ್ದು. ಧರ್ಭೆಗಳನ್ನು ಸೇರಿಸಿ ಕಟ್ಟಿ ಉಂಗುರದಂತೆ ಮಾಡಿ ಉಂಗುರದ ಬೆರಳಿಗೆ ಹಾಕಿ ಕೊಳ್ಳುವ ಸಾಧನವೇ ಪವಿತ್ರ. ಧರ್ಭೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಅದರ ರಚನೆ ಹಲವಾರು ಮುಳ್ಳುಗಳಿಂದ ಆಗಿದೆ. ಈ ಮುಳ್ಳುಗಳು ಎಷ್ಟೋ ಬ್ಯಾಕ್ಟೀರಿಯಾಗಳನ್ನು ತಡೆದು ತನ್ನಲ್ಲೆ ಉಳಿಸಿ ಕೊಳ್ಳುತ್ತದೆ. ಈ ಪವಿತ್ರವನ್ನು ಹಾಕಿ ಕೊಂಡು ಪ್ರಾಣಾಯಾಮ ಮಾಡುವುದರಿಂದ ವಾತಾವರಣದಲ್ಲಿನ ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಸೇರುವ ಪ್ರಮಾಣ ಸಾಕಷ್ಟು ಕಡಿಮೆಯಾಗುತ್ತದೆ. ಇದರಿಂದ ಅನೇಕ ರೋಗಾಣುಗಳು ನಮ್ಮ ದೇಹವನ್ನು ಸೇರುವುದು ತಪ್ಪುತ್ತದೆ ಮತ್ತು ಆರೋಗ್ಯವಾಗಿ ಇರುವುದಕ್ಕೆ ಸಹಕಾರಿಯಾಗಿರುತ್ತದೆ.
ಅಕ್ಕಿಯು ಶಾಂತಿಯ ಸಂಕೇತ. ಏಕದಳ ಧಾನ್ಯವಾಗಿರುವ ಅಕ್ಕಿಯನ್ನು ಪೂಜೆ ಮಾಡುವ ಕಲಶಗಳ ಕೆಳಗೆ ಹಾಕುವುದು, ಪ್ರತಿದಿನ ನಮ್ಮ ಹಸಿವನ್ನು ನೀಗಿಸುವ ಧಾನ್ಯಕ್ಕೆ ಕೃತಜ್ಞತೆ ತೋರಿಸುವ ಉದ್ದೇಶಕ್ಕಾಗಿ, ಮನುಷ್ಯನಿಗೆ ಉಪಕಾರಿಯಾಗುವ ಎಲ್ಲ ವಸ್ತುಗಳು ದೈವ ರೂಪವೇ ಎಂದು ಅವುಗಳೆಲ್ಲವಕ್ಕೂ ದೇವರ ಸನ್ನಿಧಿಯಲ್ಲಿ ಸ್ಥಾನ ಕಲ್ಪಿಸಿದೆ ನಮ್ಮ ಧರ್ಮ.
ತಾಮ್ರವು ಲೋಹಗಳಲ್ಲೆಲ್ಲಾ ಅತುತ್ತಮವಾದದ್ದು. ಇದಕ್ಕೆ ವಿಶೇಷವಾದ ಗುಣಗಳು ಇರುವುದರಿಂದಲೇ ಇದಕ್ಕೆ ವಿಶೇಷವಾದ ಸ್ಥಾನವನ್ನು ಕೊಟ್ಟಿದ್ದಾರೆ. ತಾಮ್ರದೊಂದಿಗೆ ನೀರು ಬೆರೆತಾಗ ಅಲ್ಲಿ ರಾಸಾಯನಿಕ ಕ್ರಿಯೆ ಉಂಟಾಗಿ ವಿಶಿಷ್ಟವಾದ ದ್ರಾವಣ ಉತ್ಪತ್ತಿಯಾಗಿ ಅನೇಕ ತರಹದ ಚರ್ಮ ರೋಗಗಳು ಗುಣವಾಗುತ್ತವೆಂದು ವೈಜ್ಞಾನಿಕವಾಗಿ ಸಾಭೀತಾಗಿದೆ.
ನಾವು ಮಂತ್ರವನ್ನು ಉಚ್ಛಾರ ಮಾಡುವಾಗ ಕೆಲವು ಏರುಪೇರುಗಳಾಗುವ ಸ್ವರಗಳನ್ನು ಛಂದೋಬದ್ಧವಾಗಿ ಹೇಳುವ ಮಂತ್ರಗಳು ಪ್ರಕೃತಿಯಲ್ಲಿನ ವಿದ್ಯುತ್ಕಾಂತೀಯ ಶಕ್ತಿಯನ್ನು ಸಂಯೋಜಿಸಲ್ಪಟ್ಟು ಶಕ್ತಿಯು ಕಲಶದೊಳಗೆ ಇಟ್ಟಿರುವ ಧರ್ಭೆಯಿಂದ ಆಕರ್ಷಿತಗೊಂಡು ಕಲಶದೊಳಗೆ ಸೇರುತ್ತದೆ. ಇದನ್ನೇ ಹಿಂದಿನ ಕಾಲದವರು ದೈವ ಸಾನ್ನಿಧ್ಯವೆನ್ನುತ್ತಿದ್ದರು ಎಂದು ಕಾಣುತ್ತದೆ. ಇಂತಹ ದೈವ ಸಾನ್ನಿಧ್ಯಕ್ಕಾಗಿ ಧರ್ಬೆಯ ಕೂರ್ಚನ್ನು ಕಲಶದೊಳಗೆ ಹಾಕುತ್ತೇವೆ.
ಮಾವಿನ ಎಲೆಗಳಲ್ಲಿ ಪತ್ರ ಹರಿತ್ತಿನ ಪ್ರಮಾಣ ಹೆಚ್ಚಾಗಿದ್ದು, ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಇದು ತಿಳಿದಿರುವ ಸಂಗತಿಯಾಗಿದೆ. ಶುಭ ಕಾರ್ಯಗಳು ಮನೆಯಲ್ಲಿ ಜರುಗುವಾಗ ಬಹಳ ಜನ ಸೇರುವುದು ಸಾಮಾನ್ಯವಾಗಿದ್ದು ಹಾಗೆ ಬಹಳ ಜನ ಸೇರಿದಾಗ ಅಷ್ಟೂ ಜನಕ್ಕೆ ಸರಿ ಹೊಂದುವ ಆಮ್ಲಜನಕ ವಾತಾವರಣದಲ್ಲಿ ಸೇರಿಸುವ ಸಲುವಾಗಿ ಮಾವಿನ ಸೊಪ್ಪು ಮತ್ತು ಬಾಳೆ ಎಲೆಗಳನ್ನು ಉಪಯೋಗಿಸುತ್ತಾರೆ . ಮಾವಿನ ಎಲೆಗಳು ಮತ್ತು ಬಾಳೆ ಎಲೆಗಳು ದೀರ್ಘ ಕಾಲದವರೆಗೆ ಆಮ್ಲಜನಕವನ್ನು ಉತ್ಪಾದಿಸುತ್ತವೆ. ಅಲ್ಲದೆ ಮಾವಿನ ಎಲೆಗಳಲ್ಲಿ ಔಷಧೀಯ ಗುಣಗಳು ಹೇರಳವಾಗಿದ್ದು ಚರ್ಮ ರೋಗಗಳಿಗೆ ರಾಮಬಾಣವಾಗಿದೆ.
ಪರಮಾತ್ಮನು ಜ್ಯೋತಿ ಸ್ವರೂಪನಾಗಿದ್ದಾನೆ. ಜ್ಯೋತಿ ಸ್ವರೂಪನಾದ ಭಗವಂತನನ್ನು ಕಲಶದಲ್ಲಿ ಆವಾಹನೆ ಮಾಡುತ್ತೇವೆ. ಕಲಶವೂ ಜ್ಯೋತಿ ಸ್ವರೂಪದಂತೆ ಕಾಣುತ್ತದೆ. ತೆಂಗಿನ ಬಗ್ಗೆ ಹೇಳ ಬೇಕಾದದ್ದೇನೂ ಇಲ್ಲ. ತೆಂಗಿನ ಮರದ ಯಾವುದೇ ಭಾಗವೂ ಕೆಲಸಕ್ಕೆ ಬಾರದೇ ಇಲ್ಲ. ತೆಂಗು ಯಾವುದೇ ಪ್ರಾಣಿ - ಪಕ್ಷಿಗಳ ಎಂಜಲಿನಿಂದ ಬೆಳೆದಿರುವುದಿಲ್ಲ. ಆದ್ದರಿಂದಲೇ ಅದಕ್ಕೂ ದೈವ ಸ್ಥಾನವನ್ನು ಕೊಟ್ಟು ಕಲ್ಪವೃಕ್ಷ ಎಂದಿದ್ದೇವೆ. ಅಂತಹ ಪವಿತ್ರವಾದ ಮರದಲ್ಲಿ ಹುಟ್ಟಿದ ತೆಂಗಿನ ಕಾಯಿಯನ್ನು ಪರಮಾತ್ಮನಿಗೆ ಅರ್ಪಣೆ ಮಾಡುವುದರಿಂದ ಧನ್ಯತೆಯನ್ನು ಪಡೆಯುವುದರ ಉದ್ದೇಶವನ್ನಿಟ್ಟು ಕೊಂಡು ತೆಂಗಿನ ಕಾಯಿಯನ್ನು ಪೂಜೆಯಲ್ಲಿ ಬಳಸುತ್ತೇವೆ.
ಗೋಮಯ, ಗೋಮೂತ್ರ, ಹಾಲು, ಮೊಸರು ಮತ್ತು ತುಪ್ಪ ಇವುಗಳನ್ನು ಪಂಚಗವ್ಯ ಎನ್ನುತ್ತೇವೆ. ಇವೆಲ್ಲವೂ ಆಕಳದ್ದಾಗಿರುತ್ತದೆ. ಇವುಗಳಲ್ಲಿ ಪ್ರತಿಯೊಂದಕ್ಕೂ ಅದರದೇ ಆದ ವಿಶೇಷ ಗುಣಗಳಿರುತ್ತವೆ. ವಿಶೇಷವಾಗಿ ಗೋಮಯದಲ್ಲಿ ಸೂಕ್ಷ್ಮಾತಿ ಸೂಕ್ಷ್ಮವಾದ ಬ್ಯಾಕ್ಟೀರಿಯಾಗಳನ್ನು ತಡೆಯುವ ಶಕ್ತಿ ಹೆಚ್ಚಾಗಿರುತ್ತದೆ. ಗೋಮಯದಿಂದ ಮನೆಯ ಮುಂದೆ ಸಾರಿಸಿದರೆ ವಾತಾವರಣದಲ್ಲಿನ ರೋಗಕಾರಕ ಬ್ಯಾಕ್ಟೀರಿಯಾಗಳು ಮನೆಯೊಳಗೆ ಬರದಂತೆ ತಡೆಯುತ್ತದೆ. ಇದರಿಂದ ಅನೇಕ ರೋಗಗಳನ್ನು ಹತ್ತಿರ ಸುಳಿಯದಂತೆ ಮಾಡ ಬಹುದಾಗಿದೆ. ಹಾಗೆಯೇ ರಂಗವಲ್ಲಿ ಹಾಕುವುದು ನಮ್ಮ ಧರ್ಮದ ವಿಶೇಷ ಸಂಪ್ರದಾಯವಾಗಿದೆ. ಚಿತ್ತಾಕರ್ಷಕ ಬಗೆಬಗೆಯ ರಂಗೋಲಿಗಳನ್ನು ಸುಣ್ಣದ ಉಂಡೆ ಮತ್ತು ಕೆಂಪು ಮಣ್ಣಿನಿಂದ ಹಾಕುತ್ತಾರೆ. ಸುಣ್ಣದ ಉಂಡೆ ಮತ್ತು ಕೆಂಪು ಮಣ್ಣುಗಳೂ ಸಹ ಜೀವ ನಿರೋಧಕ ಎಂಬುದನ್ನು ಮರೆಯ ಬಾರದು. ಈಗೀಗ ನಗರ ಪ್ರದೇಶಗಳಲ್ಲಿ ಸಮಯದ ಮತ್ತು ಸ್ಥಳದ ಅಭಾವದಿಂದ ಮನೆಯ ಮುಂದೆ ಸಾರಿಸುವುದು ಮತ್ತು ರಂಗವಲ್ಲಿ ಹಾಕುವುದು ದೂರವೇ ಉಳಿದಿದೆ. ಅಲ್ಲಲ್ಲಿ ನಡೆಯುವ ರಂಗವಲ್ಲಿ ಸ್ಪರ್ಧೆಗಳಲ್ಲಿ ಮಾತ್ರ ರಂಗವಲ್ಲಿಗಳನ್ನು ನೋಡುವುದು ಅನಿವಾರ್ಯವಾಗಿದೆ.
ತುಳಸಿಯ ಎಲೆಗಳಲ್ಲಿ ವಿಶೇಷ ಗುಣಗಳಿವೆ. ತುಳಸಿಯು ಔಷಧೀಯ ಸಸ್ಯವಾಗಿದೆ. ಇದರಿಂದ ಅನೇಕ ಕಾಯಿಲೆಗಳನ್ನು ಗುಣ ಪಡಿಸ ಬಹುದು. ಆಯುರ್ವೇದದಲ್ಲಿ ತುಳಸಿಗೆ ಬಹಳ ಪವಿತ್ರ ಸ್ಥಾನವನ್ನು ಕೊಟ್ಟಿದ್ದಾರೆ. ಕೆಮ್ಮು, ಕಫ಼ ಮುಂತಾದ ಸಣ್ಣ ಸಣ್ಣ ಕಾಯಿಲೆಗಳಿಂದ ಹಿಡಿದು ಕ್ಷಯದ ವರೆಗೆ ನಿವಾರಿಸುವ ಶಕ್ತಿ ಈ ತುಳಸಿಗಿದೆ. ಅಂತಹ ತುಳಸಿ ಪ್ರತಿಯೊಂದು ಮನೆಯಲ್ಲೂ ಇಲ್ಲದೆ ಇದ್ದರೆ ಮುಂದಿನ ಪೀಳಿಗೆಯವರಿಗೆ ಕನ್ನಡಿಯೊಳಗಿನ ಗಂಟು ಆಗುವುದರಲ್ಲಿ ಸಂದೇಹವಿಲ್ಲ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ