ಭಾನುವಾರ, ಸೆಪ್ಟೆಂಬರ್ 10, 2017

ಶ್ರಾದ್ಧಕರ್ಮ

*ಶ್ರಾದ್ಧಕರ್ಮದಲ್ಲಿ ಪಿತೃಗಳಿಗೆ ಪಿಂಡಮಾಧ್ಯಮದಲ್ಲಿ ಆರಾಧನೆ ಏಕೆ?* 
ಶ್ರಾದ್ಧಕರ್ಮದಲ್ಲಿ *ಪಿತೃ*ಗಳಿಗೆ ಅಂದರೆ, *ಪಿತೃ,ಪಿತಾಮಹ,ಪ್ರಪಿತಾಮಹ*ರನ್ನು ಕರಿತು ಮೂರು ಪಿಂಡಗಳನ್ನು ಇಟ್ಟು ಪೂಜಿಸುವುದು ರೂಢಿಯಲ್ಲಿ ಬಂದಿದೆ.ಇದರ ಹಿನ್ನಲೆಯನ್ನು *ಶ್ರೀಮನ್‍ಮಹಾಭಾರತ ಶಾಂತಿಪರ್ವ*ದಲ್ಲಿ ತಿಳಿಸಿದ್ದಾರೆ.  ಹಿಂದೆ ನಾರದರು ದೇವಕಾರ್ಯವನ್ನು ಪೊರೈಸಿ ಪಿತೃಕಾರ್ಯದಲ್ಲಿ ತೊಡಗಿದ್ದರು ಆ ಸಮಯದಲ್ಲಿ ಅವರು *ನರನಾರಾಯಣ*ರನ್ನು ಕುರಿತು ಶ್ರಾದ್ಧದಲ್ಲಿ ಪಿಂಡಾರಾಧನೆಯ ಬಗ್ಗೆ ಪ್ರಶ್ನೆ ಕೇಳುವರು.   ದೇವತೆಗಳು ಮೊದಲು ನೆಲದ ಮೇಲೆ ದರ್ಭೆಗಳನ್ನು ಹಾಸಿ ನಂತರ ಅವುಗಳ ಮೇಲೆ ಮೂರು ಪಿಂಡಗಳನ್ನು ಇಟ್ಟು ಪೂಜಿಸುತ್ತಿದ್ದುದರ ಕಾರಣವೇನು? ಪಿತೃಸಂಜ್ಞೆ ಯನ್ನು ಹೇಗೆ ಪಡೆದರು?

*ಇದಕ್ಕೆ ಉತ್ತರವಾಗಿ ನರನಾರಾಯಣರು ಹೇಳುತ್ತಾರೆ -* 
ನಾರದನೇ ಕೇಳು ! ಹಿಂದೆ ಗೋವಿಂದನು ನಷ್ಟವಾಗಿ ಹೋಗಿದ್ದ ಸಾಗರಗಳಿಂದ ಸುತ್ತುವರಿಯಲ್ಪಟ್ಟಿರುವ ಈ ಭೂಮಿಯನ್ನು ವರಹರೂಪ ಧರಿಸಿ ಬೇಗನೆ ಮೇಲಕ್ಕೆತ್ತಿದ್ದನು.ಲೋಕಹಿತದ ಕಾರ್ಯವನ್ನು ಆರಂಭಿಸಿದ ಆ ಭಗವಂತನು ಭೂಮಿಯನ್ನು ಉದ್ಧಾರಮಾಡಿ ಸ್ವಸ್ಥಾನವನ್ನು ಸ್ಥಾಪಿಸಿದನು.ಆಗ ಸೂರ್ಯನು ಹಗಲಿನ ಮಧ್ಯ ಭಾಗಕ್ಕೆ ಬಂದು ಮಾಧ್ಯಾಹಿಕ ಕಾಲವು ಪ್ರಾಪ್ತವಾಗಲು,ವರಾಹ ರೂಪೀ ಭಗವಂತನು ತನ್ನ ಕೋರೆ ಹಲ್ಲುಗಳಿಗೆ ಮತ್ತಿಕೊಂಡಿದ್ದ ಮಣ್ಣಿನಿಂದ ಮೂರು ಪಿಂಡಗಳನ್ನು ಮಾಡಿ ನೆಲದ ಮೇಲೆ ದರ್ಭೆ ಹಾಸಿ ಅದರ ಮೇಲೆ ಮೂರು ಪಿಂಡಗಳನ್ನು ಸ್ಥಾಪಿಸಿ ತನ್ನನ್ನೇ ಉದ್ದೇಶಿಸಿ ಆ ಪಿಂಡಗಳಲ್ಲಿ ಪಿತೃಗಳನ್ನು ಆವಾಹಿಸಿ ಮಾಡಿ ಯಥಾ ವಿಧಿಯಾಗಿ ಪೂಜಿಸಿದನು.

*ತ್ರೀನ್ ಪಿಂಡಾನ್ ನ್ಯಸ್ಯವೈ ಪೃಥ್ವ್ಯಾಂ ಪೂರ್ವಂ ದತ್ವಾ ಕುಶಾನಿತಿ |* 
*ಕಥಂ ತು ಪಿಂಡಸಂಜ್ಞಾಂ ತೇ ಪಿತರೋ ಲೇಭಿರೇ ಪುರಾ ||* 
*(ಶ್ರೀಮನ್‍ಮಹಾಭಾರತ ಶಾಂತಿ ಪರ್ವ 345  ಅಧ್ಯಾಯ)* 

*ಪ್ರಾಪ್ತೇ ಚಾಹ್ನಿಕಕಾಲೇ ತು ಮಧ್ಯದೇಶಗತೇ ರವೌ |* 
*ದಂಷ್ಟ್ರಾವಿಲಗ್ನಾತ್ ತ್ರೀನ್ ಪಿಂಡಾತ್ ವಿಧಾಯ ಸಹಸಾ ಪ್ರಭು ||* 
*ಸ್ನಾಪಯಾಮಾಸ ವೈಪೃಥ್ವ್ಯಾಂ ಕುಶಾನಾಸ್ತೀರ್ಯ ನಾರದ |* 
*ಸ ತೇಷು ಆತ್ಮಾನಮುದ್ದಿಶ್ಯ ಪಿತ್ರ್ಯಂ ಚಕ್ರೇ ಯಥಾವಿಧಿ ||* 
*(ಶ್ರೀಮನ್‍ಮಹಾಭಾರತ ಶಾಂತಿ ಪರ್ವ 345  ಅಧ್ಯಾಯ)*

*ಈ ಮೂರು ಪಿಂಡಗಳ ಮೇಲೆ ಅಪಸವ್ಯದಿಂದ ತನ್ನ ದೇಹದಿಂದಲೇ ಹುಟ್ಟಿದ ಎಳ್ಳುಗಳಿಂದ ಪ್ರೋಕ್ಷಿಸಿ ಪಿಂಡ ಪೂಜೆಯ* ವಿಷಯದಲ್ಲಿ ಒಂದು ನಿಯಮವನ್ನು ಸ್ಥಾಪಿಸುವ ಸಲುವಾಗಿ ವರಾಹ ರೂಪಿಯು ಹೀಗೆ ಹೇಳಿದನು. 

ನಾನೇ ಎಲ್ಲ ಲೋಕಗಳ ಸೃಷ್ಟಿಕರ್ತನಾಗಿದ್ದೇನೆ.ನಾನು ಯಾವಾಗ *ಪಿತೃದೇವತೆ*ಗಳನ್ನು ಸೃಷ್ಟಿಸಲು ಆರಂಭಿಸಿದೆನೋ ಮತ್ತು ಇತರ ಪಿತೃಕಾರ್ಯ ವಿಧಿಗಳನ್ನು ಯೋಚಿಸುತ್ತಿದ್ದೆನೋ ಆ ಕ್ಷಣದಲ್ಲಿ *ನನ್ನ ಕೋರೆಹಲ್ಲುಗಳಿಂದ ಮೂರು ಪಿಂಡಗಳು ದಕ್ಷಿಣ ದಿಕ್ಕಿಗೆ ಭೂಮಿಯ ಮೇಲೆ ಬಿದ್ದವು*.ಆದ್ದರಿಂದ *ಈ ಮೂರು ಪಿಂಡಗಳು ಪಿತೃಸ್ವರೂಪಗಳೇ* ಆಗಿದೆ.

*ಅಹಂ ಹಿ ಪಿತರಃ ಸ್ರಷ್ಟುಮುದ್ಯತೋ ಲೋಕಕೃತ್ ಸ್ವಯಮ್ |* 
*ಯಸ್ಯ ಚಿಂತಯತಃ ಸದ್ಯಃ ಪಿತೃಕಾರ್ಯ ವಿಧೀನ್ ಪರಾನ್ ||* 
*ದಂಷ್ಟ್ರಾ ಧರಣೀಂ ಪಿಂಡಾಸ್ತಸ್ಮಾತ್ ಪಿತರ ಏವ ತೇ ||* 
*(ಶ್ರೀಮನ್‍ಮಹಾಭಾರತ ಶಾಂತಿ ಪರ್ವ 345  ಅಧ್ಯಾಯ)* 
ದೇಹರಹಿತರಾದ ಪಿತೃಗಳು ಪಿಂಡಾಕಾರವನ್ನು ಧರಿಸುತ್ತಾರೆ.ನನ್ನಿಂದ ಸೃಷ್ಟರಾದ ಪಿಂಡರೂಪದಲ್ಲಿರುವ ಈ ಮೂವರು ಸನಾತನ ಪಿತೃಗಳಾಗಲಿ.

*ತ್ರಯೋ ಮೂರ್ತಿ ವಿಹೀನಾ ವೈ ಪಿಂಡಮೂರ್ತಿಧರಾಸ್ತ್ವಿಮೇ |* 
*ಭವಂತು ಪಿತರೋ ಲೋಕೇ ಮಯಾ ಸೃಷ್ಟಾಃ ಸನಾತನಾಃ ||* 
*(ಶಾಂತಿ ಪರ್ವ)* 

ಈ ವಿಶ್ವದಲ್ಲಿ ನನ್ನಿಂದ ಅಧಿಕನಾದವನು ಯಾರೂ ಇಲ್ಲ. ಸಾಕ್ಷಾತ್ ನನ್ನಿಂದ ಪೂಜೆ ಮಾಡಲ್ಪಡುವವನು ಯಾವನಿದ್ದಾನೆ? ಈ ಪ್ರಪಂಚದಲ್ಲಿ ನನಗೆ ತಂದೆ ಯಾರು? ಎಲ್ಲರಿಗೂ ಪಿತಾಮಹನಾಗಿರುತ್ತೇನೆ.ಪಿತಾಮಹನಿಗೂ ನಾನೇ ತಂದೆಯಾಗಿದ್ದೇನೆ.ಈ ಜಗತ್ತಿಗೆ ನಾನೇ ಕಾರಣನಾಗಿದ್ದೇನೆ.
*ಕೋ ವಾ ಮಮ ಪಿತಾ ಲೋಕೇ ಅಹಮೇವ ಪಿತಾಮಹ |* 
*ಪಿತಾಮಹ ಪಿತಾ ಚೈವ ಅಹಮೇವಾತ್ರಕಾರಣಮ್ ||* 
*(ಶಾಂತಿ ಪರ್ವ)* 
ಹೀಗೆ ಸಂದೇಶ ನೀಡಿದೆ.*ವರಾಹರೂಪೀ ಭಗವಂತ*ನ ಸಂದೇಶಕ್ಕನುಸಾರವಾಗಿ *ಪಿತೃಗಳು ಪಿಂಡದಲ್ಲಿದ್ದು ಕೊಂಡು ಪೂಜೆ*ಯನ್ನು ಸ್ವೀಕರಿಸುವರು. 

*ಏಷಾ ತಸ್ಯ ಸ್ಥಿತಿರ್ವಿಪ್ರ ಪಿತರಃ ಪಿಂಡ ಸಂಸ್ಥಿತಾಃ |* 
*ಲಭಂತೇ ಸತತಂ ಪೂಜಾಂ ವೃಷಾಕಪಿವಚೋ ಯಥಾ ||*

*ಪಿತೃ ಪಿತಾಮಹಶ್ಚೈವ ತಥೈವ ಪ್ರಪಿತಾಮಹ |* 
*ಅಹಮೇವಾತ್ರ ವಿಜ್ಞೇಯಸ್ತ್ರಿಷು ಪಿಂಡೇಷು ಸಂಸ್ಥಿತಃ ||* 
*(ಶಾಂತಿ ಪರ್ವ)* 

ಶ್ರಾದ್ಧಕರ್ಮದಲ್ಲಿ ವರಾಹರೂಪೀ ಭಗವಂತನು ಪಿಂಡಪ್ರದಾನ ಕ್ರಿಯೆಯ ಮೂಲಕ ಪಿತೃಗಳ ಆರಾಧನೆಯನ್ನು ನಡೆಸಲು ಸಂದೇಶ ನೀಡಿದ ಪ್ರಯುಕ್ತ ಅವನನ್ನು ಕೂಡ ಅವಶ್ಯವಾಗಿ ಶ್ರಾದ್ಧ ದಿನದಂದು ಪೂಜಿಸಬೇಕು.ಇದರಿಂದ ಅವನ ಪ್ರೀತಿ ಉಂಟಾಗುವುದು ನಿಶ್ಚಿತ.

*|| ನಾಹಂ ಕರ್ತಾ ಹರಿಃ ಕರ್ತಾ ||* 
*|| ಶ್ರೀಮನ್ಮಧ್ವವಲ್ಲಭ ಜನಾರ್ದನ ವಾಸುದೇವಾರ್ಪಣಮಸ್ತು ||*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ