ಶನಿವಾರ, ಸೆಪ್ಟೆಂಬರ್ 30, 2017

ವೇದಗಳು

ವೇದಗಳು ~ ಭಾರತೀಯ ಸನಾತನ ಸಂಸ್ಕೃತಿಯ ಮೂಲಸ್ರೋತಸ್ಸು ವೇದಗಳಾಗಿವೆ. ಧರ್ಮ-ಬ್ರಹ್ಮಗಳ ಕುರಿತಾದ ಪರಮ ಪ್ರಾಮಾಣಿಕ ವಿಚಾರವೇ ವೇದ. ಬ್ರಹ್ಮಾಂಡದಲ್ಲಿ ಅಂತರ್ಗತವಾದ ಮೂಲಭೂತ ತತ್ವವೇ ಬ್ರಹ್ಮವಾದರೆ, ಬ್ರಹ್ಮಾಂಡದ ಆಧಾರಭೂತವಾದ ಕ್ರಿಯಾಮಯ ಚೇತನವೇ ಧರ್ಮವಾಗಿದೆ. ಇಂತಹ ಧರ್ಮ-ಬ್ರಹ್ಮಗಳನ್ನು ಪ್ರಾಮಾಣಿಕವಾಗಿ ಬೋಧಿಸುವ ಜ್ಞಾನರಾಶಿಯೇ ವೇದ. ಗೌಣಾರ್ಥದಲ್ಲಿ ಪರಿಚಾಯಕ ಗ್ರಂಥರಾಶಿಯೇ ವೇದ.

ಧರ್ಮಬ್ರಹ್ಮಣೀ ವೇದೈಕವೇದ್ಯೇ |
ಧರ್ಮಂ ಜಿಜ್ಞಾಸಮಾನಾನಾಂ ಪ್ರಮಾಣಂ ಪರಮಂ ಶ್ರುತಿಃ ||

ಇತ್ಯಾದಿ ಶತಶಃ ವಚನಗಳು ಇದನ್ನು ಪ್ರಮಾಣೀಕರಿಸುತ್ತವೆ.

ಇಂತಹ ವೇದಗಳಿಂದ ನಾವು ಇಷ್ಟಪ್ರಾಪ್ತಿ ಮತ್ತು ಅನಿಷ್ಟಪರಿಹಾರಗಳೆಂಬ ಪ್ರಯೋಜನವನ್ನು ಹೊಂದಬಹುದಾಗಿದೆ. ಇದನ್ನು ಸಾಯಣಾಚಾರ್ಯರು ಹೀಗೆ ಸ್ಪಷ್ಟಪಡಿಸಿದ್ದಾರೆ.

ಇಷ್ಟಪ್ರಾಪ್ತ್ಯನಿಷ್ಟಪರಿಹಾರಯೋಃ ಅಲೌಕಿಕಮುಪಾಯಂ ಯೋ ಗ್ರಂಥೋ ವೇದಯತಿ ಸ ವೇದಃ||

 ಅಂದರೆ ವೇದವಿಹಿತವಾದ ಅಲೌಕಿಕ ಉಪಾಯರೂಪ ಕರ್ಮಗಳಿಂದ ನಮಗೆ ಇಷ್ಟವಾದುದು ಪ್ರಾಪ್ತವಾಗುತ್ತದೆ ಮತ್ತು ಅನಿಷ್ಟವಾದುದು ದೂರವಾಗುತ್ತದೆ.

ಅಗ್ನಿಹೋತ್ರಂ ಜುಹುಯಾತ್ ಸ್ವರ್ಗಕಾಮಃ ||

ಇಲ್ಲಿ ಸ್ವರ್ಗರೂಪ ಇಷ್ಟಪ್ರಾಪ್ತಿಗೆ ಅಗ್ನಿಹೋತ್ರಾನುಷ್ಠಾನ ರೂಪ ಅಲೌಕಿಕ ಉಪಾಯವು ವಿಹಿತವಾಗಿದೆ.

ಸರ್ವಂ ಪಾಪ್ಮಾನಂ ತರತಿ ತರತಿ ಬ್ರಹ್ಮಹತ್ಯಾಂ, ಯೋsಶ್ವಮೇಧೇನ ಯಜತೇ | ಯು ಉ ಚೈನಮೇವಂ ವೇದ||

ಇಲ್ಲಿ ಪಾಪ ಮತ್ತು ಬ್ರಹ್ಮಹತ್ಯಾದೋಷ ರೂಪ ಅನಿಷ್ಟಗಳಿಗೆ ಪರಿಹಾರವಾಗಿ ಅಶ್ವಮೇಧಯಾಗಾನುಷ್ಠಾನರೂಪದಲ್ಲಿ ಅಲೌಕಿಕ ಉಪಾಯವು ವಿಹಿತವಾಗಿದೆ. ಕರ್ಮಕಾಂಡದಲ್ಲಿ ಈ ಪ್ರಕಾರವಾದರೆ, ಜ್ಞಾನಕಾಂಡದಲ್ಲಿ ಬ್ರಹ್ಮರೂಪ ಇಷ್ಟಪ್ರಾಪ್ತಿಯನ್ನೂ, ಅಹಂತಾ, ಮಮತಾ ಇತ್ಯಾದಿ ಅನಿಷ್ಟ ಪರಿಹಾರಕ್ಕೆ ಸಾಧನ ಚತುಷ್ಟಯಾದಿ ಅಲೌಕಿಕ ಉಪಾಯವನ್ನೂ ವೇದವು ತಿಳಿಸಿಕೊಡುತ್ತದೆ. ಈ ಪ್ರಕಾರ ಪ್ರತ್ಯಕ್ಷಾನುಮಾನ- ಉಪಮಾನ ಪ್ರಮಾಣಗಳಿಂದ ಲೌಕಿಕವಾಗಿ ತಿಳಿಯಲಸಾಧ್ಯವಾದ, ಇಷ್ಟಪ್ರಾಪ್ತಿ ಮತ್ತು ಅನಿಷ್ಟ ಪರಿಹಾರಗಳಿಗೆ ಅಲೌಕಿಕವಾದ ಉಪಾಯವನ್ನು ತಿಳಿಸುವುದೇ ವೇದದ ಪರಮ ಪ್ರಯೋಜನವಾಗಿದೆ.

ಈ ಅಲೌಕಿಕ ಉಪಾಯವು ಅನುಷ್ಠಾನರೂಪವಾಗಿದೆ. ಇದನ್ನು ಮಂತ್ರಗಳೂ, ಬ್ರಾಹ್ಮಣಗಳೂ ನಮಗೆ ಬೋಧಿಸುತ್ತವೆ. ಮಂತ್ರಾಶ್ಚ ಕರ್ಮಕರಣಾಃ || ಎಂಬಂತೆ ಅನುಷ್ಠಾನದಲ್ಲಿ ಕರಣತ್ವೇನ ಪರಿಗೃಹೀತವಾಗಿ ಯಾಜ್ಞಿಕ ಪ್ರಸಿದ್ಧಿಯಿಂದ ಮಂತ್ರತ್ವೇನ ಗೃಹೀತವಾದ ವೇದಭಾಗವು ಮಂತ್ರವೆನಿಸುವುದು. ಇದನ್ನು ಹೊರತುಪಡಿಸಿ ಉಳಿದೆಲ್ಲ ಭಾಗವು “ಶೇಷೇ ಬ್ರಾಹ್ಮಣಶಬ್ಧಃ” ಎಂಬಂತೆ ಬ್ರಾಹ್ಮಣ ಎನಿಸಿಕೊಳ್ಳುತ್ತದೆ. ಇದರಲ್ಲಿ ಬ್ರಾಹ್ಮಣಾನೀತಿಹಾಸಾನ್ ಪುರಾಣಾನಿ ಕಲ್ಪಾನ್ಗಾಥಾ ನಾರಾಶಾಗ್ ಂಸೀಃ -ಎಂಬಂತೆ ಪುರಾಣ, ಇತಿಹಾಸ, ಕಲ್ಪ, ಗಾಥಾ, ನಾರಾಶಂಸೀ ಎಲ್ಲವೂ ಅಂತರ್ಗತವಾಗಿವೆ. ಸಂಹಿತಾ-ಬ್ರಾಹ್ಮಣ- ಆರಣ್ಯಕ ಎಂಬುದಾಗಿ ಸ್ವತೋವಿಭಕ್ತವಾಗಿ ತನ್ನನ್ನು ತೋರಿಸಿಕೊಳ್ಳುವ ವೇದವು ಆರಣ್ಯಕವನ್ನು ಬ್ರಾಹ್ಮಣಭಾಗದಲ್ಲಿ ಆಂತರ್ಗತವಾಗಿಸಿದೆ. ಇದರಿಂದ “ಮಂತ್ರಬ್ರಾಹ್ಮಣಯೋಃ ವೇದನಾಮಧೇಯಮ್” ಎಂಬುದಾಗಿ ವೇದಲಕ್ಷಣವು ಸಂಪನ್ನವಾಗಿದೆ.

ಸಂಹಿತಾ ಮಂತ್ರಾತ್ಮಕವಾಗಿದ್ದರೆ ಬ್ರಾಹ್ಮಣ ವಿಧ್ಯರ್ಥವಾದಾತ್ಮಕವಾಗಿದೆ. ಆರಣ್ಯಕವು ಜ್ಞಾನಕಾಂಡವೆಂಬುದಾಗಿ ಪ್ರಸಿದ್ಧವಾಗಿದೆ. ತಥಾಪಿ ಕ್ವಚಿತ್ ತತ್ಪ್ರತಿಷ್ಠೇತ್ಯುಪಾಸೀತ, ತನ್ನಮ ಇತ್ಯುಪಾಸೀತ – ಇತ್ಯಾದಿ ಉಪಾಸನಾ ಭಾಗವನ್ನು, ಪ್ರವರ್ಗ್ಯ ವಿಧಿಬೋಧಕವಾಗಿ ಕರ್ಮಕಾಂಡವನ್ನು ವಿವರಿಸುತ್ತಿದೆ. ಆರಣ್ಯಕದ ಕೊನೆಯಲ್ಲಿ ಉಪನಿಷತ್ತು ಸೇರಿಕೊಂಡಿದೆ. ಆದುದರಿಂದಲೇ ಆರಣ್ಯಕೋಪನಿಷತ್ ಎಂಬ ನಾಮಧೇಯವಿದೆ. ಅರಣ್ಯಾಧ್ಯಯನಾದೇತದಾರಣ್ಯಕಮೀತೀರ್ಯತೇ | ಅರಣ್ಯಾಧ್ಯಾಯಯೋಗ್ಯತ್ವಾದಪ್ಯಾರಣ್ಯಕಮಿಷ್ಯತೇ|| ಎಂಬ ಸಾಯಣ ಭಾಷ್ಯ ವಚನದಂತೆ ಅರಣ್ಯದಲ್ಲಿ ಕುಳಿತು ಅಧ್ಯಯವ ಮಾಡಬೇಕಾಗಿರುವ ಮತ್ತು ಆರಣ್ಯರು-ಸನ್ಯಾಸಿಗಳು ಕೂಡಾ ಅಧ್ಯಯನ ಮಾಡುವುದಕ್ಕೆ ಯೋಗ್ಯವಾದ ಪವಿತ್ರವೂ, ರಹಸ್ಯವೂ ಆದ ವಿದ್ಯೆ ಆರಣ್ಯಕವಾಗಿದೆ. ಒಟ್ಟಿನಲ್ಲಿ ಸಂಹಿತಾ-ಬ್ರಾಹ್ಮಣ-ಆರಣ್ಯಕಗಳಿಂದ ಕರ್ಮ-ಜ್ಞಾನ-ಉಪಾಸನಾ ಇವು ಮೂರೂ ಬೋಧಿತವಾಗುತ್ತವೆ.

ಅನಂತಾ ವೈ ವೇದಾಃ | ಎಂಬಂತೆ ವೇದಗಳು ಅನಂಯವಾಗಿವೆ. ಈಗ ಉಪಲಬ್ಧವಿರುವುದು ಮಾತ್ರ ಸಾಂತವಾಗಿದೆ. ಏಕಶತಮಧ್ವರ್ಯುಶಾಖಾಃ, ಸಹಸ್ರವರ್ತ್ಮಾ ಸಾಮವೇದಃ, ಏಕವಿಂಶತಿಧಾ ಬಾಹ್ವೃಚ್ಯಂ, ನವಧಾsಥರ್ವಣೋ ವೇದಃ|| ಎಂಬುದಾಗಿ ಮಹಾಭಾಷ್ಯಕಾರ ಪತಂಜಲಿಗಳು ಗಣಿಸಿದ್ದಾರೆ, ಅಂದರೆ ಯಜುರ್ವೇದ ನೂರ ಒಂದು ಶಾಖೆ, ಸಾಮವೇದ ಸಹಸ್ರಶಾಖೆ, ಋಗ್ವೇದ ಇಪ್ಪತ್ತೊಂದು ಶಾಖೆ, ಅಥರ್ವಣ ಒಂಭತ್ತು ಶಾಖೆ. ಈ ಸಂಖ್ಯೆಯು ಆ ಕಾಲದಲ್ಲಿ ಪ್ರಚಲಿತವಾಗಿದ್ದ ಶಾಖಾವಿಷಯಕವಾಗಿದೆ.  ಈ ಸಂಖ್ಯಾಭಿಪ್ರಾಯವನ್ನು ಚರಣವ್ಯೂಹ ಗ್ರಂಥವೂ ತಿಳಿಸುತ್ತದೆ.ಇವುಗಳಲ್ಲಿ ಅನೇಕ ಶಾಖೆಗಳು ಲುಪ್ತವಾಗಿದ್ದು, ಬೆರಳೆಣಿಕೆಯಷ್ಟು ಮಾತ್ರ ಉಪಲಬ್ಧ ಇವೆ. ಶಾಖೆಗಳು ಉಪಲಬ್ಧವೆಂದರೆ ಗ್ರಂಥರೂಪದಲ್ಲಿ ಇದ್ದರೆ ಸಾರ್ಥಕವಾಗುವುದಿಲ್ಲ.  ಆಯಾ ಶಾಖೆಯ ಅಧ್ಯೇತೃಗಳೇ ಜೀವಂತ ಉಪಲಬ್ಧಿಯೆನಿಸುತ್ತಾರೆ.

ತ್ರಯೀ ಶಬ್ಧವು ಸಂಹಿತಾ-ಬ್ರಾಹ್ಮಣ-ಉಪನಿಷತ್- ಈ ಮೂರು ಅವಯವಗಳಿಂದ ಅರ್ಥವತ್ತಾಗಿದೆ. ಇವು ಮೂರು ಋಗ್ಯಜುಸ್ಸಾಮಾಥರ್ವ ರೂಪ ಚತುರ್ವೇದಗಳಲ್ಲಿಯೂ ಸಮಾನವಾಗಿವೆ. ಕ್ವಚಿತ್ ಋಗ್ಯಜುಸ್ಸಾಮ ಎಂಬುದಾಗಿ ವೇದತ್ರಯಗಳು ತ್ರಯೀ ಎನಿಸುತ್ತವೆ. ಪ್ರಸಂಗವಶಾತ್ ಈ ಅರ್ಥವು ಸಾಧುವೇ. ಆದರೂ ಋಗ್ ಲಕ್ಷಣಬಾಹುಲ್ಯವಿರುವ ಅಥರ್ವ ವೇದವನ್ನು ತ್ರಯೀಬಹಿರ್ಭೂತವೆಂದು ಕಲ್ಪಿಸುವುದು ಅನುಚಿತ.

ಛಂದೋನೀಯತತ್ವ, ಗೀತಿರೂಪತ್ವ, ವೃತ್ತಗೀತಿವರ್ಜಿತತ್ವೇನ ಪ್ರಶ್ಲಿಷ್ಟ ಪಠಿತತ್ವ- ಈ ಪ್ರಕಾರ ಲಕ್ಷಣೋಪೇತವಾಗಿರುವ ಋಕ್  ಸಾಮಯಜುರ್ವೇದಗಳು ಲಕ್ಷಣಾವಶಾತ್ ಭಿನ್ನವಾಗಿಯೇ ಹೊರತು ತಾತ್ವಿಕವಾಗಿ ಒಂದೇ ಆಗಿವೆ. ಕೃಷ್ಣದ್ವೈಪಾಯನರು ಜಗದುಪಕಾರಾರ್ಥವಾಗಿ ಏಕೀಭೂಯಾಸ್ಥಿತವಾದ ವೇದವನ್ನು ಚತುರ್ಧಾ ವಿಭಾಗಿಸಿದರು. “ಸಕಲವೇದಪರಿಪಾಲನಂ ತು ಅಶಕ್ಯಮೇಕೇನ ಪುರುಷೇಣ ಇತಿ ಶಾಖಾಬೇಧ ಪ್ರವೃತ್ತಿಃ” ಎಂಬುದಾಗಿ ಭಟ್ಟಭಾಸ್ಕರರು ಶಾಖಾಬೇಧಕ್ಕೆ ಯುಕ್ತಿಯನ್ನು ನೀಡಿರುತ್ತಾರೆ.

ಈ ಪ್ರಕಾರ ಶಾಖಾಬೇಧದಿಂದ ವೇದಪರಿಪಾಲನೆಯು ಸುಲಭವಾಗಿವೆ. ಸ್ವಶಾಖೆಯ ಅಧ್ಯಯನದಿಂದಲೇ ‘ಸ್ವಾಧ್ಯಾಯೋsಧ್ಯೇತವ್ಯಃ’ – ಎಂಬ ಅಧ್ಯಯನ ವಿಧಿಯು ನಿರಾಕಾಂಕ್ಷವಾಗುವುದು. ಅಧ್ಯಯನ ವಿಧಿಯು ಅರ್ಥಜ್ಞಾನ ಪರ್ಯಾವಸಾಯಿಯೇ ಹೊರತು ಕೇವಲ ಅಕ್ಷರಗ್ರಹಣಕ್ಕೆ ಸೀಮಿತವಾಗಿಲ್ಲ.

 

ಆದುದರಿಂದಲೇ “ಬ್ರಾಹ್ಮಣೇನ ನಿಷ್ಕಾರಣೋ ಧರ್ಮಃ ಷಡಂಗೋ ವೇದೋsಧ್ಯೇಯೋ ಜ್ಞೇಯಶ್ಚ|ಎಂಬುದಾಗಿ ಪತಂಜಲಿ ಮಹರ್ಷಿಗಳ ಮಹಾಭಾಷ್ಯ ವಚನದಂತೆ ಪ್ರತಿಯೊಬ್ಬ ಬ್ರಾಹ್ಮಣನು ಫಲಾಪೇಕ್ಷೆ ಇಲ್ಲದೆ ಮಹಿಮಾತಿಶಯಯುತವಾದ ಸಾಂಗವೇದವನ್ನು ಅಧ್ಯಯನ ಮಾಡಬೇಕು. ಇದು ಅನುಲ್ಲಂಘನೀಯ ಶಾಸ್ತ್ರನಿಯಮವಾಗಿದೆ.

ಕೃಷ್ಣ ಯಜುರ್ವೇದ

“ಏಕಶತಮಧ್ವರ್ಯುಶಾಖಾಃ” – ಎಂಬುದಾಗಿ ನೂರ ಒಂದು ಶಾಖಾತ್ಮಕವಾಗಿರುವ ಅಧ್ವರ್ಯುವೇದವೇ ಯಜುರ್ವೇದ. ಹಿಂದೆ ಹೇಳಿದಂತೆ ಋಕ್ ಮತ್ತು ಸಾಮಗಳಿಂದ ಭಿನ್ನವಾಗಿ ಅನಿಯತಾಕ್ಷರಾವಸಾನವಾಗಿ, ಪ್ರಶ್ಲಿಷ್ಟಪಠಿತವಾಗಿರುವ ಮಂತ್ರಸಮೂಹವೇ ಯಜುಸ್ಸು ಎನಿಸಿಕೊಳ್ಳುತ್ತದೆ. ಈ ಪ್ರಕಾರ ಯಜುರ್ಮಂತ್ರಗಳ ಬಾಹುಲ್ಯವಿರುವ ಶಾಖೆಯೇ ಯಜುರ್ವೇದ. ಇಲ್ಲಿ ಋಕ್ಕುಗಳೂ, ಸಾಮಗಳೂ ಸೇರಿಕೊಂಡಿವೆ. ಯಜುರ್ವೇದವು ಶುಕ್ಲ-ಕೃಷ್ಣ ಎಂಬುದಾಗಿ ದ್ವಿಧಾ ವಿಭಕ್ತವಾಗಿದ್ದು, ಶುಕ್ಲಯಜುರ್ವೇದದಲ್ಲಿ ಮಂತ್ರ- ಬ್ರಾಹ್ಮಣಗಳು ವ್ಯವಸ್ಥಿತವಾಗಿ ಕಂಡುಬರುತ್ತಿವೆ. ಇದರಲ್ಲಿ ಕಾಣ್ವ- ಮಾಧ್ಯಂದಿನ ಎಂದು ಎರಡು ಶಾಖೆಗಳಿವೆ.

ಕೃಷ್ಣ ಯಜುರ್ವೇದದಲ್ಲಿ ತೈತ್ತಿರೀಯ, ಮೈತ್ರಾಯಣೀಯ, ಕಾಠಕ ಎಂದು ಮೂರು ಶಾಖೆಗಳು ಉಪಲಬ್ಧಿಯಿವೆ. ಇದರಲ್ಲಿ ತೈತ್ತಿರೀಯ ಶಾಖಾಧ್ಯಾಯಿಗಳು ಭಾರತದಾದ್ಯಂತ- ತತ್ರಾಪಿ ದಕ್ಷಿಣ ಭಾರತದಲ್ಲಿ ಬಹಳ ಮಂದಿ ಇದ್ದಾರೆ. ಚರಣವ್ಯೂಹ ಗ್ರಂಥವು ತೈತ್ತಿರೀಯ ಶಾಖೆಯ ಬಗ್ಗೆ ಈ ಮುಂದಿನಂತೆ ತಿಳಿಸಿದೆ.

“ತೈತ್ತಿರೀಯಕಾ ನಾಮ ದ್ವಿಭೇದಾ ಭವಂತಿ | ಔಖ್ಯಾಃ, ಖಾಂಡಿಕೇಯಾಶ್ಚೇತಿ|ತತ್ರ ಖಾಂಡಿಕೇಯಾ ನಾಮ ಪಂಚಭೇದಾ ಭವಂತಿ| ಆಪಸ್ತಂಭಾಃ, ಬೋಧಾಯನಾಃ, ಸತ್ಯಾಷಾಢಾಃ,

ಹೈರಣ್ಯಕೇಶಾಃ, ಕಾಣ್ವಾಯಾನಾಶ್ಚೇತಿ|”

ತೈತ್ತಿರೀಯ ಈ ಭೇದವು ಸೂತ್ರಾನುಸಾರಿಯೇ ಹೊರತು, ಎಲ್ಲಾ ಸೂತ್ರದವರಿಗೂ ಸಂಹಿತಾ-ಬ್ರಾಹ್ಮಣ-ಆರಣ್ಯಕಗಳು ಒಂದೇ ಆಗಿದೆ.

ಯಜುರ್ವೇದದ ಕೃಷ್ಣತ್ವದ ಬಗ್ಗೆ ಕೆಲವು ಮತಗಳಿವೆ.

ವೇದೋಪಕ್ರಮಣೇ ಚತುರ್ದಶೀಯುಕ್ತಪೂರ್ಣಿಮಾಗ್ರಹಣಾತ್ ಶುಕ್ಲ ಯಜುಃ ಪ್ರತಿಪದ್ಯುಕ್ತಪೂರ್ಣಿಮಾಗ್ರಹಣಾತ್, ಕೃಷ್ಣಯಜುರಿತಿ| ತೈತ್ತಿರೀಯರಿಗೆ ಉಪಾಕರ್ಮವು ಶ್ರಾವಣಪೂರ್ಣಿಮೆಯಂದು ವಿಹಿತವಾಗಿದೆ. ಚತುರ್ದಶೀ ಸಹಿತವಾದ ಪೂರ್ಣಿಮೆಯಂದು ಕೆಲವರು ವೇದಾರಂಭಮಾಡಿದರೆ, ಕೆಲವರು ಮುಂದಿನ ದಿನ ಅಂದರೆ ಪ್ರತಿಪತ್ಸಹಿತವಾದ ಹುಣ್ಣಿಮೆಯಂದು ವೇದಾರಂಭವನ್ನಾಚರಿಸುತ್ತಾರೆ. ಚತುರ್ದಶೀಯುಕ್ತವಾದರೆ ಶುಕ್ಲಪಕ್ಷದಲ್ಲಿ ವೇದಾರಂಭ ಮಾಡಿದಂತಾಗುವುದು. ಪ್ರತಿಪತ್ಸಹಿತವಾದ ಹುಣ್ಣಿಮೆಯಂದು ಮಾಡಿದ ವೇದಾರಂಭ ಕೃಷ್ಣಪಕ್ಷದಲ್ಲಿ ಆಚರಿಸಿದಂತಾಗುವುದು. ಈ ಪ್ರಕಾರ ಕೃಷ್ಣಪಕ್ಷದ ಸ್ಪರ್ಶದಿಂದ ಅಂದರೆ ಪ್ರತಿಪದ್ಯುಕ್ತ ಪೂರ್ಣಿಮೆಯಂದು ವೇದಾರಂಭವನ್ನಾಚರಿಸುವವರು ಕೃಷ್ಣಯಜುರ್ವೇದೀಯರು, ಅವರು ಅಧ್ಯಯನ ಮಾಡುವ ವೇದ ಕೃಷ್ಣಯಜುರ್ವೇದ ಎನಿಸಿದೆ.

 

ಅಗ್ನ್ಯಾಧಾನಾನಂತರದಲ್ಲಿ ದರ್ಶ-ಪೂರ್ಣಾಮಾಸೇಷ್ಟಿಗಳನ್ನು ಮಾಡುವಾಗ ಕೃಷ್ಣಯಜುಃಶಾಖೆಯವರು ಪೂರ್ಣಮಾಸೇಷ್ಟಿಯಿಂದ ಇಷ್ಟಾರಂಭ ಮಾಡುತ್ತಾರೆ.  ಪೂರ್ಣಿಮೆಯ ನಂತರದಲ್ಲಿ ಕೃಷ್ಣಪಕ್ಷ ಬರುವುದರಿಂದ ಚಂದ್ರನ ಕ್ಷಯದಂತೆ ಯಜಮಾನನಿಗೆ ಬರುವ ದೋಷದ ನಿವೃತ್ತಿಗಾಗಿ ಸಾರಸ್ವತ ಹೋಮವನ್ನು ಮಾಡುತ್ತಾರೆ. ಈ ಪ್ರಕಾರ ಪೂರ್ಣಮಾಸೇಷ್ಟಿಯ ನಂತರದಲ್ಲಿ, ಕೃಷ್ಣಪಕ್ಷಾರಂಭವಾಗುವುದರಿಂದ, ಈ ಕ್ರಮದಲ್ಲಿ ಅನುಷ್ಠಿಸುವವರ ಸಂಬಂಧೀ ಶಾಖೆಯು ಕೃಷ್ಣಯಜುರ್ವೇದ ಎನಿಸಿದೆ.

ಬುದ್ಧಿಮಾಲಿನ್ಯಹೇತುತ್ವಾನ್ ತದ್ಯಜುಃ ಕೃಷ್ಣಮೀರ್ಯತೇ|
ವ್ಯವಸ್ಥಿತಪ್ರಕರಣಂ ತದ್ಯಜುಃ ಶುಕ್ಲಮೀರ್ಯತೇ |

ಮಂತ್ರ- ಬ್ರಾಹ್ಮಣಗಳು ವ್ಯವಸ್ಥಿತವಾಗಿರದೆ, ಮಿಶ್ರವಾಗಿದ್ದು, ತಿಳಿದುಕೊಳ್ಳಲು ಕಷ್ಟಸಾಧ್ಯವಾಗಿರುವುದರಿಂದ – ಈ ಪ್ರಕಾರದ ಯಜುಸ್ಸಮೂಹವು ಕೃಷ್ಣಯಜುರ್ವೇದ ಎನಿಸಿದೆ.

ಕೃಷ್ಣಯಜುರ್ವೇದದ ತೈತ್ತಿರೀಯ ಶಾಖಾಧ್ಯಯನದಲ್ಲಿ ಸಾರಸ್ವತಪಾಠವು ವಿಹಿತವಾಗಿದೆ, ಸಾಂಪ್ರದಾಯಿಕವಾಗಿದೆ. ಇಲ್ಲಿ ಮಂತ್ರ-ಬ್ರಾಹ್ಮಣಗಳ ಸಾಂಕರ್ಯವಿದೆ. “ಅಪಿ ಸಾರಸ್ವತೇ ಪಾಠೇ ಜ್ಞಾನಮಾತ್ರಮಿಹೇಷ್ಯತೇ” – ಎಂಬಂತೆ ಮಂತ್ರ-ಬ್ರಾಹ್ಮಣ ವಿವೇಕಾರ್ಥವಾಗಿ ಕಾಂಡಾನುಕ್ರಮಣಿಕಾ ಪಾಠವನ್ನು ತಿಳಿಯಬೇಕು. ಇದಕ್ಕೆ ಬೋಧಾಯನ-ಆಪಸ್ತಂಬ ಹಿರಣ್ಯಕೇಶೀಯ ಗೃಹ್ಯಸೂತ್ರಗಳು ಆಧಾರವಾಗಿವೆ.

ತಿತ್ತಿರಿಣಾ ಪ್ರೋಕ್ತಂ – ತೈತ್ತಿರೀಯಂ |
ತೇನ ಪ್ರೋಕ್ತಂ (ಪಾಣಿನಿ ಸೂತ್ರ – 4-3-101)
ತಿತ್ತಿರಿ-ವರತಂತು-ಛಣ್ (ಪಾಣಿನಿ ಸೂತ್ರ 4-3-102)

ಈ ಸೂತ್ರಗಳಂತೆ ಆಚಾರ್ಯ ತಿತ್ತಿರಿಯು ವಿಶೇಷವಾಗಿ ಈ ಶಾಖೆಯನ್ನು ಪ್ರವಚನ ಮಾಡಿದ್ದರಿಂದ ತೈತ್ತಿರೀಯ ಎಂಬ ಹೆಸರು ಬಂದಿತು.

ಅಧ್ವರ್ಯು ರ್ವಾ ಋತ್ವಿಜಾಂ ಪ್ರಥಮೋ ಯುಜ್ಯತೇ, ತೇನ ಸ್ತೋಮೋ ಯೋಕ್ತವ್ಯ ಇತ್ಯಾಹುಃ ||

ಎಂಬಂತೆ ಯಜ್ಞದಲ್ಲಿ ಪ್ರಥಮವಾಗಿ ಅಧ್ವರ್ಯುವರಣವನ್ನು ಮಾಡುತ್ತಾರೆ. ಅವನು ಋತ್ವಿಗ್ಗಣವನ್ನು ಮುಂದೆ ಒಯ್ಯುವವನಾಗಿರುತ್ತಾನೆ. ಈ ಪ್ರಕಾರ ಅಧ್ವರ್ಯುವು ವಿಷಯಕ ಯಜ್ಞಪ್ರಕ್ರಿಯೆಯು ಈ ಶಾಖೆಯಲ್ಲಿ ಪ್ರಧಾನವಾಗಿಯೂ, ವಿಸ್ತಾರವಾಗಿಯೂ ಬಂದಿರುವುದರಿಂದ ಕೃಷ್ಣಯಜುರ್ವೇದವು ಅಧ್ವರ್ಯುವೇದ ಎಂದು ಪ್ರಸಿದ್ಧವಾಗಿದೆ.

ಯುಗಾಂತೇsನ್ತರ್ಹಿತಾನ್ ವೇದಾನ್ ಸೇತಿಹಾಸಾನ್ ಮಹರ್ಷಯಃ |
ಲೇಭಿರೇ ತಪಸಾ ಪೂರ್ವಮನುಜ್ಞಾತಾಃ ಸ್ವಯಂಭುವಾ||

ಮಹರ್ಷಿಗಳು ಕಲ್ಪಾದಿಯಲ್ಲಿ ಬ್ರಹ್ಮನಿಂದ ಅನುಜ್ಞಾತರಾಗಿ, ಯುಗಾಂತದಲ್ಲಿ ನಿಗೂಹಿತವಾಗಿದ್ದ ಇತಿಹಾಸ ಸಹಿತವಾದ ವೇದಗಳನ್ನು ತಪೋಬಲದಿಂದ ದರ್ಶನ ಮಾಡಿಕೊಂಡರು. ಇಂತಹ ಸತ್ವಯುತವಾದ ವೇದಗಳು ನಮಗೆಲ್ಲಾ ದಾರಿದೀಪಗಳಾಗಲಿ.

||ಸ್ವಸ್ತಿ ನೋ ಬೃಹಸ್ಪತಿರ್ದಧಾತು||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ