🔺ಸಮರ್ಥ ಸದ್ಗುರು ಶ್ರೀ ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರ ಸಚ್ಛಿಷ್ಯ ಪರಂಪರೆಯಲ್ಲಿ ಅಗ್ರಗಣ್ಯರು *ಶ್ರೀ ಬ್ರಹ್ಮಾನಂದ ಮಹಾರಾಜರು*.
🔺ಬಿಜಾಪುರ ಜಿಲ್ಲೆ ಜಾಲಿಹಾಳ ಎಂಬ ಗ್ರಾಮದಲ್ಲಿ ರಾಮಭಟ್ಟ ಗಾಡಗೋಳಿ ದಂಪತಿಗಳಿಗೆ ಮೂರು ಜನ ಮಕ್ಕಳು. ಅವರಲ್ಲಿ ಎರಡನೇಯವರು ಶ್ರೀ ಬಾಳಂಭಟ್ಟರು .
🔺ಬಾಳಂಭಟ್ಟರಿಗೆ ಅನುರೂಪಳಾದ ಪತಿ ಭಕ್ತಿ ಪರಾಯಣರಾದ ಜೀವೂಬಾಯಿ ಎಂಬ ಧರ್ಮಪತ್ನಿ. ಭಾಗ್ಯವಂತರಾದ ಈ ದಂಪತಿಗಳಿಗೆ ನಾಲ್ಕು ಜನ ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು ಜನಿಸಿದರು. ಅವರಲ್ಲಿ ಮೂರನೇಯವರಾದ 'ಅನಂತ' ಎಂಬುವವರೇ 'ಬ್ರಹ್ಮಾನಂದ ' ಎಂಬ ಹೆಸರಿನಲ್ಲಿ ಶ್ರೀ ಮಹಾರಾಜರ ಪಟ್ಟಶಿಷ್ಯನೆಂದು ಪ್ರಸಿದ್ಧರಾದರು .
🔺ಇವರ ಜನ್ಮವು ಶ್ರೀ ಶಾಲಿವಾಹನ ಶಕೆ(೧೭೮೦) ಕಾಲಯುಕ್ತಾಕ್ಷಿ ಸಂವತ್ಸರ ಮಾಘ ವದ್ಯ ದಶಮಿ ಗುರುವಾರ (ದಿ!!27/02/1859) ರಂದು ಆಯಿತು .
🔺ಬಾಲ್ಯದಲ್ಲಿಯೇ ತರ್ಕ, ಸಾಹಿತ್ಯ, ವ್ಯಾಕರಣ, ಅಭ್ಯಾಸ ಮಾಡಿದ್ದರು. ಜಗನ್ಮಾತೆಯಾದ ಶ್ರೀ ಬನಶಂಕರಿ ದೇವಿಯ ಸಾಕ್ಷಾತ್ ದರ್ಶನ ಪಡೆದು ಮಾತೆಯ ಅಪ್ಪಣೆಯಂತೆ ಹೆಚ್ಚಿನ ವೇದಾಂತ ಶಾಸ್ತ್ರಗಳ ಅಭ್ಯಾಸಕ್ಕಾಗಿ ಗದುಗಿನ ಹತ್ತಿರವಿರುವ ಮುಳುಗುಂದವೆಂಬ ಗ್ರಾಮಕ್ಕೆ ಬಂದರು.
🔺ಈ ಮುಳುಗುಂದ ಗ್ರಾಮಕ್ಕೆ ಭೂಷಣ ಪ್ರಾಯರು, ಪಂಡಿತಾಗ್ರಣ್ಯರೂ, ನ್ಯಾಯ, ವ್ಯಾಕರಣ ವೇದಾಂತಾದಿ ಶಾಸ್ರ್ತಗಳಲ್ಲಿ ಘನವಿದ್ವಾಂಸರೆಂದು ಪ್ರಸಿದ್ದರಾದ ಜಂತ್ಲಿ ಗುರುನಾಥ ಶಾಸ್ರ್ತಿಗಳೆಂಬ ಮಹನೀಯರ ಶಿಷ್ಯ ವೃತ್ತಿಯನ್ನು ವಹಿಸಿ ಶಾಸ್ರ್ತಾಭ್ಯಾಸಗಳನ್ನು ಮಾಡಿ *'ಅನಂತಶಾಸ್ರ್ತಿ'* ಗಳೆಂದು ಹೆಸರುವಾಸಿಯಾದರು.
🔺ಅನಂತಶಾಸ್ರ್ತಿಗಳು ಕೇವಲ ವೇದಾಂತದ ಅಭ್ಯಾಸಕ್ಕಿಂತಲೂ ಭಕ್ತಿಯುತ ಆಚಾರ ವಿಚಾರದ ಕಡೆಗೂ, ಭಗವತ್ಸೇವೆಯ ಕಡೆಗೂ, ತತ್ವ ವಿಚಾರದ ಕಡೆಗೂ ಇವರ ಮನಸ್ಸು ವಿಶೇಷವಾಗಿ ಹರಿಯುತ್ತಿದ್ದುದರಿಂದ ಇವರು ಗದಗ, ಬೆಟಗೇರಿ, ಬೆಳಧಡಿ ಇತ್ಯಾದಿ ಸ್ಥಳಗಳಲ್ಲಿ ಪುರಾಣ - ಶ್ರೀ ಮದ್ಭಾಗವತವನ್ನು ಹೇಳುತ್ತಿದ್ದರು.
🔺ಈ ಸಮಯದಲ್ಲಿ ಇವರ ತಂದೆಯವರಾದ ಬಾಳಂಭಟ್ಟರು ದೈವಾಧೀನರಾಗಿ ಎರಡು ವರುಷ ಗತಿಸಿರಲು ಮಾತೋಶ್ರೀ ಜೀವೂಬಾಯಿಯವರು ಅನಂತಶಾಸ್ರ್ತಿಗಳಿಗೆ ವಿವಾಹ ನಿಶ್ಚಯಿಸಲು ಅದಕ್ಕೆ ಇವರು ಸಮರ್ಥ ರಾಮದಾಸರಂತೆ ಬ್ರಹ್ಮಚರ್ಯದಿಂದಿದ್ದು ಆದಷ್ಟು ಆತ್ಮಹಿತವನ್ನು ಲೋಕಸೇವೆಯನ್ನು ಸಾಧಿಸಬೇಕೆಂದು ಸಂಕಲ್ಪ ಮಾಡಿದ್ದೇನೆಂದು ಸ್ಪಷ್ಟವಾಗಿ ಹೇಳಿ ಬೆಳಧಡಿಯ ಸಮೀಪವಿರುವ ಕಪ್ಪತ್ತಗುಡ್ಡದಲ್ಲಿಯ ಒಂದು ಗುಹೆಯಲ್ಲಿ ಭಗವಧ್ಯಾನ ಮಾಡುತ್ತಾ ಏಕಾಂತದಲ್ಲಿ ವಾಸಮಾಡಹತ್ತಿದರು.
🔺ಈ ಸಮಯದಲ್ಲಿ ಇವರಿಗೆ ಬೆರಳುಗಳ ಮೇಲೆ ಬಿಳುಪು ಕಾಣತೊಡಗಿತು, ಇದಕ್ಕೆ ಎಷ್ಟು ಉಪಚಾರ ಮಾಡಿದರೂ ಕಡಿಮೆ ಯಾಗದಿದ್ದಾಗ ಕಷ್ಟದಿಂದ ಸಂಪಾದನೆ ಮಾಡಿದ ವಿದ್ಯೆಯು ವ್ಯರ್ಥ ಹೋಗುವದಲ್ಲ ಎಂದು ಭಯವೆನಿಸತೊಡಗಿತು. ಆಗ ಅವರಿಗೆ ಕೇವಲ ಶಾಸ್ತ್ರಾಧ್ಯಯನ ಮಾಡುವದರ ನಿರರ್ಥಕತೆ ತಿಳಿದು ಬರತೊಡಗಿತು. ಆಗ ಅವರಿಗೆ ಇಪ್ಪತ್ತು ವರ್ಷ ವಯಸ್ಸು. "ಜೀವನದ ಅರ್ಥವೇನು?" ಎಂಬ ಪ್ರಶ್ನೆಯು ಅವರನ್ನು ಕಾಡತೊಡಗಿತು. ಆಗ ಅನಂತಶಾಸ್ರ್ತಿಗಳು ಅರಣ್ಯದಲ್ಲಿ ಕುಳಿತು ಗಂಟೆಗಟ್ಟಲೆ ಜಪ ಮಾಡುತ್ತಿದ್ದರು. ಆಗ ಅವರಿಗೆ "ವೆಂಕಟಾಪುರ" ಕ್ಕೆ ಹೋಗು. ಅಲ್ಲಿ ಸದ್ಗುರುಗಳ ಭೆಟ್ಟಿಯಾಗುತ್ತದೆ ಎಂಬ ದೃಷ್ಟಾಂತವಾಯಿತು. ಅದರಂತೆ ಅವರು ವೆಂಕಟಾಪುರಕ್ಕೆ ಬಂದು ಭಜನೆ, ಪೂಜೆ ಮಾಡುತ್ತಾ *'ನನಗೆ ಸದ್ಗುರುಗಳನ್ನು ತೋರಿಸು'* ಎಂದು ಪ್ರಾರ್ಥನೆಯನ್ನು ಮಾಡುತ್ತಿದ್ದರು. ಅಲ್ಲಿ ಅವರಿಗೆ ವೆಂಕಟಪತಿಯ ದರ್ಶನವಾಗಿ ಸದ್ಗುರುಗಳ ಭೆಟ್ಟಿಗಾಗಿ ಉತ್ತರ ಹಿಂದುಸ್ಥಾನಕ್ಕೆ ಹೋಗಲು ಆದೇಶವಾಯಿತು.
🔺ಅಲ್ಲಿಂದ ಅವರು ನಾಶಿಕದಲ್ಲಿ ಶ್ರೀರಾಮನ ದರ್ಶನ ತೆಗೆದುಕೊಂಡು ಇಂದೂರಿಗೆ ಬಂದರು. ಅಲ್ಲಿ ಶ್ರೀಮಹಾರಾಜರ ಭೆಟ್ಟಿಯಾಯಿತು. ಮೊದಲನೇ ಭೇಟಿಯಲ್ಲಿ ಅವರಿಗೆ ಸದ್ಗುರುಗಳ ಬಗ್ಗೆ ಮನವರಿಕೆ ಯಾಗಲಿಲ್ಲ. ಅವರು ಹಿಂತಿರುಗಿ ನರಸೋಬನವಾಡಿಗೆ ಬಂದರು, ಅಲ್ಲಿ ಅವರಿಗೆ ಮತ್ತೆ ಶ್ರೀದತ್ತನ ಆದೇಶವಾಯಿತು, ಅದರಂತೆ ತಿರುಗಿ ಇಂದೂರಿಗೆ ಬಂದು ಶ್ರೀಮಹಾರಾಜರಿಂದ ಅನುಗ್ರಹ ಪಡೆದರು.
🔺ಅವರ ಅಂತಃಕರಣದ ತಳಮಳವು ಶಾಂತವಾಯಿತು. ಶ್ರೀ ಮಹಾರಾಜರು ಅವರಿಗೆ *"ಬ್ರಹ್ಮಾನಂದ"* ಎಂಬ ಹೆಸರಿಟ್ಟು ನರ್ಮದಾ ದಂಡೆಯಲ್ಲಿರುವ 'ಸರ್ಪೇಶ್ವರ' ಕ್ಕೆ ಹೋಗಲು ಆಜ್ಞೆ ಮಾಡಿದರು, ಅಲ್ಲಿ ಅವರು ಎರಡೂವರೆ ವರ್ಷ ತಪಶ್ಚರ್ಯ ಮಾಡಿದ ಮೇಲೆ ಗ್ರಂಥಿಭೇದವಾಯಿತು, ಅವರಿಗೆ ಅಷ್ಟಸಾತ್ವಿಕ ಭಾವಗಳು ಪ್ರಾಪ್ತವಾದವು.
ತಮ್ಮ ಗುರುವರರ ಸೇವೆಯನ್ನು ಇನ್ನೂ ಮಾಡಬೇಕೆಂಬ ಸದಿಚ್ಛೆಯಿಂದ ಗೋಂದಾವಲೆಗೆ ಬಂದರು. ತಮ್ಮ ಗುರುದೇವನ ದರ್ಶನ ಪಡೆದು ಆನಂದ ಪುಲಕಿತರಾಗಿ ಪ್ರೇಮಾಶೃಗಳನ್ನು ಸುರಿಸುತ್ತಾ ಭಾವಪೂರಿತರಾಗಿ ಸ್ತೋತ್ರಮಾಡ ಹತ್ತಿದರು.
🔺ಸಾಷ್ಟಾಂಗ ವಂಧೂನಿ ಸದ್ಗುರುರಾಯಾಚೀ ! ಚಿಂತಾವೆ ಮಾನಸಿ ಗುರುಮೂರ್ತಿ .....ಈ ಪ್ರಕಾರ ಸ್ತೋತ್ರ ಮಾಡಿ ಗುರುವಾಜ್ಞೆಯಂತೆ ಆತ್ಮಾನುಭಾವವನ್ನು ಹೊಂದಿ ೨೪ ತಾಸು ಗುರುಸೇವೆಯಲ್ಲಿಯೇ ತತ್ಪರರಾದರು. ಸದ್ಗುರುನಾಥನಿಂದ ಅನುಗ್ರಹಿತವಾದ ಶ್ರೀ ರಾಮತಾರಕ ಮಂತ್ರವನ್ನು ಮನಸ್ಸಿನಿಂದ ಹಗಲೂ ರಾತ್ರಿ ಜಪಿಸುತ್ತಿದ್ದರು.
🔺ಕೆಲವು ದಿನಗಳು ಗತಿಸಿದ ಮೇಲೆ
ಒಂದು ದಿವಸ ಶ್ರೀ ಮಹಾರಾಜರು ತಮ್ಮ ಪ್ರಿಯ ಶಿಷ್ಯನಿಗೆ ಲೋಕಸಂಗ್ರಹದ ಶಿಕ್ಷಣವನ್ನು ಸಂಪೂರ್ಣವಾಗಿ ಕೊಟ್ಟು ಪ್ರೇಮದಿಂದ ವಂದನೆ ಮಾಡುವ ಇವರ ಮಸ್ತಕದಲ್ಲಿ ವರದ ಹಸ್ತವನ್ನಿಟ್ಟು ಮಂದಸ್ಮಿತರಾಗಿ ಹೇಳಿದರು. *ಬ್ರಹ್ಮಾನಂದ ಬುವಾ ಕರ್ನಾಟಕಕ್ಕೆ ಹೋಗಿ ರಾಮನಾಮದ ಪ್ರಸಾರ ಮಾಡಿರಿ ಎಂದರು*.
🔺ಶ್ರೀ ಗುರುಗಳ ಆಜ್ಞೆಯ ಮೇರೆಗೆ ಗೋಂದಾವಲಿಯಿಂದ ಹೊರಟ ಇವರು ತಮ್ಮ ಜನ್ಮಭೂಮಿಯಾದ ಜಾಲೀಹಾಳಕ್ಕೆ ಬಂದರು. ಕೆಲವು ದಿನ ಕಳೆದ ಮೇಲೆ ಶ್ರೀಕ್ಷೇತ್ರ ವೆಂಕಟಾಪುರಕ್ಕೆ ಬಂದರು. ಅಲ್ಲಿ ರಾಮನಾಮದಲ್ಲಿ ಮಗ್ನರಾಗಿ ಕಾಲಕಳೆಯ ಹತ್ತಿದಾಗ ಶ್ರೀ ಮಹಾರಾಜರು ದರ್ಶನವಿತ್ತು ಬೆಳಧಡಿಗೆ ಹೋಗಿ ಅಲ್ಲಿಯೇ ಶ್ರೀ ರಾಮಸೇವೆ ಮತ್ತು ಲೋಕಸಂಗ್ರಹವನ್ನು ಪ್ರಾರಂಭಿಸು ಎಂದು ಅಪ್ಪಣೆಯನ್ನು ಮಾಡಿ ಅದೃಶ್ಯರಾದರು.
🔺*ಶ್ರೀ ಕ್ಷೇತ್ರ ಬೆಳಧಡಿಯಲ್ಲಿ ಶ್ರೀ ರಾಮರಾಯನ ಮಂದಿರ ಕಟ್ಟಿಸಿ ಸುಂದರ ವಿಗ್ರಹಗಳ ಪ್ರತಿಷ್ಠಾ ಮಹೋತ್ಸವ ಮಾಡಿದರು.*
🔺*ಅವರು ಪುರತ್ರಯಗಳಲ್ಲಿ ಅಂದರೆ ನರಗುಂದ, ಬಿದರಹಳ್ಳಿ ಮತ್ತು ತೇರದಾಳ ಗ್ರಾಮದಲ್ಲಿ (ನರಪುರ-ರಥಪುರ-ವೇಣುಪುರ) ಮಾಡಿಸಿದ ತೇರಾಕೋಟಿ ಜಪಯಜ್ಞ ಸಮಾರಂಭಗಳು ಬಹು ದೊಡ್ಡ ಪ್ರಮಾಣದಲ್ಲಿ ನೆರವೇರಿದವು.*
🔺*ಶ್ರೀ ಕ್ಷೇತ್ರ ಗೋಂದಾವಲಿಯಲ್ಲಿ ಸಮಾಧಿ ಕಟ್ಟಡ, ಪಾದುಕಾಸ್ಥಾಪನಾ, ಉತ್ಸವಾದಿಗಳು ಹಾಗೂ ವೆಂಕಟಾಪುರದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರನ ಭವ್ಯವಾದ ಮಂದಿರವನ್ನು ಕಟ್ಟಿಸಿದರು.*
🔺ಗೋಂದಾವಲಿ-ಬೆಳಧಡಿ-ವೆಂಕಟಾಪುರ- ಅಶ್ವತ್ಥಪುರಗಳಲ್ಲಿ ನಡೆಸಿದ ವಿಶಿಷ್ಟ ಪದ್ದತಿಯ ಮಹೋತ್ಸವಗಳಲ್ಲಿ ಮತ್ತು ಸಾಕ್ಷಾತ್ ತ್ರಿಮೂರ್ತಿ ಸ್ವರೂಪರಾದ ತಮ್ಮ ಗುರುಗಳವರ ಶ್ರೀ ಪಂಢರಾಪುರ, ಗೋಂದಾವಳಿ, ಹರ್ದಾ ಮುಂತಾದ ಸ್ಥಳಗಳಲ್ಲಿಯ ಶ್ರೀ ಗುರು ಪೌರ್ಣಿಮಾದ್ಯುತ್ವರೂಪ ಪರಿಚರ್ಯಾ ಪದ್ಧತಿಗಳನ್ನು ಸಾಧಕರು ಹೇಗೆ ವರ್ತಿಸಬೇಕೆಂದು ಸ್ಪಷ್ಟವಾಗಿ ತಿಳಿಸಿಕೊಟ್ಟರು.
🔺ಶ್ರೀ ಬ್ರಹ್ಮಾನಂದ ಮಹಾರಾಜರು ತಮ್ಮ ಜೀವನದಲ್ಲಿ ಉಪಾಸನಾ ಮಾರ್ಗದ ಪ್ರಚಾರವನ್ನು ಬಹಳ ಪ್ರಮಾಣದಲ್ಲಿ ಮಾಡಿದರು. ಸಂಪೂರ್ಣ ಕರ್ನಾಟಕವು ಅವರ ಕಾರ್ಯಕ್ಷೇತ್ರವಾಗಿತ್ತು.
🔺ಶ್ರೀ ಮಹಾರಾಜರು ಪ್ರತ್ಯಕ್ಷ ದೇವರಾಗಿರುತ್ತಾರೆ ಎಂಬುದು ಅವರ ಶ್ರದ್ದೆಯಾಗಿತ್ತು.
🔺ಬ್ರಹ್ಮಾನಂದ ಮಹಾರಾಜರು ಶ್ರೀ ಮಹಾರಾಜರ ದರ್ಶನವಾಗುವದಕ್ಕಿಂತ ಮೊದಲು ಕೇವಲ ಸಂಸ್ಕೃತದಲ್ಲಿಯೇ ಭಾಷಣ ಮಾಡುತ್ತಿದ್ದರು. ಮುಂದೆ ಶ್ರೀ ಮಹಾರಾಜರಿಗೆ ಶರಣು ಹೋಗಿ ಇವರ ತನುಮನಧನಗಳನ್ನು ಅವರಿಗೆ ಅರ್ಪಿಸಿದಂತೆ ತಮ್ಮಲ್ಲಿದ್ದ ಆ ಪಾಂಡಿತ್ಯವನ್ನು ಸಹ ಶ್ರೀ ಮಹಾರಾಜರ ಚರಣಗಳಿಗೆ ಅರ್ಪಿಸಿಬಿಟ್ಟರು.
ಇವರು ಸ್ವಹಸ್ತದಿಂದ ಬರೆದಿಟ್ಟದ್ದೆಂದರೆ *"ಮೋಕ್ಷ ಪ್ರಾಪ್ತಿಯ ಗುಟ್ಟು.*' ಎಂಬ ಚಿಕ್ಕದೊಂದು ಲೇಖನ ಮಾತ್ರ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ